Advertisement

ಭಾರತೀಯ ಸಂಸ್ಕೃತಿಯೆಂದರೆ ಆರ್ಯಸಂಸ್ಕೃತಿಯೇ?

Advertisement

- ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು, ಸಾಮಾಜಿಕ ಹೋರಾಟಗಾರರು) ಭಾರತವೆಂದರೆ ಆರ್ಯಾವರ್ತ ಎಂದು ಸಾಧಿಸುವ ಆರೆಸ್ಸೆಸ್ ನ ಯೋಜನೆಯ ಭಾಗವಾಗಿ ಕಳೆದ 12000 ವರ್ಷಗಳಿಂದ ಭಾರತ ಸಂಸ್ಕೃತಿ ವಿಕಸನಗೊಂಡ ಬಗೆಯನ್ನು ಅಧ್ಯಯನ ಮಾಡಲು ಮೋದಿ ಸರ್ಕಾರ 16 ಜನರ ಪರಿಣಿತರ ಸಮಿತಿಯನ್ನು ನೇಮಕ ಮಾಡಿದೆ. ಈ ಅಂಕಣವು ಅದರ ಹಿಂದು-ಮುಂದಿರುವ ಇಂಡಿಕ್ ಪುನರುತ್ಥಾನ ಹುನ್ನಾರಗಳನ್ನು ಪರಿಚಯಿಸುತ್ತದೆ. ಭಾರತದ ವರ್ತಮಾನ ಹಾಗು ಭವಿಷ್ಯವನ್ನು ರಿಪೇರಿ ಮಾಡಲಾಗದಷ್ಟು ಕೆಡಿಸಿಟ್ಟಿರುವ ಮೋದಿ ಸರ್ಕಾರ ಇದೀಗ ಕಾಲಯಂತ್ರದಲ್ಲಿ ಹಿಂಪಯಣ ಮಾಡಿ ಭಾರತದ ಪುರಾತನ ಇತಿಹಾಸಕ್ಕೂ ಕರಸೇವೆ ಮಾಡುವ ಇರಾದೆಯನ್ನು ಪ್ರಕಟಿಸಿದೆ. ರೈತ ವಿರೋಧಿ ಮಸೂದೆಗಳನ್ನು ಮಂಡಿಸಿದ ದಿನವೇ ಮೋದಿ ಸರ್ಕಾರವು ಭಾರತ ಸಂಸ್ಕೃತಿಯ ಉಗಮ ಮತ್ತು ಕಳೆದ 12000 ವರ್ಷಗಳಲ್ಲಿ ಅದು ವಿಕಾಸಗೊಂಡ ಪರಿಯ ಕುರಿತು ಅಧ್ಯಯನ ಮಾಡಲು ಒಂದು ಪರಿಣಿತರ ಸಮಿತಿಯನ್ನು ನೇಮಿಸಿದೆ. ಅದರಲ್ಲಿ ಕೇವಲ ಉತ್ತರ ಭಾರತದವರು ಮಾತ್ರ ಇದ್ದಾರೆಂದು ಕರ್ನಾಟಕದ ಕುಮಾರಸ್ವಾಮಿಯವರನ್ನೂ ಒಳಗೊಂಡಂತೆ, ದಕ್ಷಿಣದ ಹಲವು ರಾಜಕಾರಣಿಗಳು ಸಕಾರಣವಾಗಿ ಪ್ರಶ್ನೆ ಎತ್ತಿದ್ದಾರೆ. ಹಾಗೆಯೇ ಇನ್ನೂ ಕೆಲವು ಬಹುಜನ ಚಿಂತಕರು ಈ ಪರಿಣಿತರಲ್ಲಿ ಕೇವಲ ದೀಕ್ಷಿತರು, ಶುಕ್ಲಾಗಳು, ಪಾಂಡೆಗಳೂ, ಮಿಶ್ರಾಗಳು, ಶರ್ಮಾಗಳು ಹಾಗು ಶಾಸ್ತ್ರಿಗಳು ಮಾತ್ರ ಇರುವುದೇಕೆ ಎಂದೂ ಸಕಾರಣವಾಗಿ ಮತ್ತು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಆರೆಸ್ಸೆಸ್ಸಿನ ದೀರ್ಘಾವಧಿ ಅಜೆಂಡಾಗಳ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ಈ ಪರಿಣಿತರ ಪಟ್ಟಿಯನ್ನು ಇನ್ನಷ್ಟು ಹತ್ತಿರದಿಂದ ನೋಡಿದಾಗ ಇದರ ಹಿಂದಿರುವ ಫ್ಯಾಸಿಸ್ಟ್ ಹುನ್ನಾರಗಳು ಇನ್ನಷ್ಟು ಸ್ಪಷ್ಟಗೊಳ್ಳುತ್ತವೆ. ಭಾರತದಲ್ಲಿದ್ದ ನಾಗರಿಕತೆ ಒಂದೋ? ಹಲವೋ? ಸರ್ಕಾರದ ಪ್ರಕಾರ ಈ ಪರಿಣಿತರು ಭಾರತೀಯ ಸಂಸ್ಕೃತಿಯ ಸನಾತನತೆಯನ್ನು ಅಧ್ಯಯನ ಮಾಡಬೇಕು. ಮೋದಿ ಸರ್ಕಾರದ ಪ್ರಕಾರ 12,000 ವರ್ಷಗಳಷ್ಟು ಹಿಂದೆಯೇ ಭಾರತವೆಂಬ ದೇಶ ವಿತ್ತು. ಮತ್ತು ಅದರ ತಳಹದಿಯಾಗಿ ಒಂದು ನಾಗರಿಕತೆ ಹಾಗೂ ಸಂಸ್ಕೃತಿಯಿತ್ತು. ಹಾಗಿದ್ದಲ್ಲಿ ಆ ನಾಗರಿಕತೆ ಮತ್ತು ಸಂಸ್ಕೃತಿಗಳ ಚಹರೆಯೇನಿತ್ತು? ಈವರೆಗೆ ಈ ಬಗ್ಗೆ ನಡೆದಿರುವ ಪ್ರಾಗೈತಿಹಾಸಿಕ ಸಂಶೋಧನೆಗಳ ಪ್ರಕಾರ ಸಿಂಧೂ ನದಿಯ ತಟದಲ್ಲಿ ವೇದಪೂರ್ವ ಅಂದರೆ ಆರ್ಯಪೂರ್ವ ನಾಗರೀಕತೆಯು ಅಸ್ಥಿತ್ವದಲ್ಲಿತ್ತು. ಹಾಗೂ ಅದು ವೇದಕಾಲೀನ ನಾಗರಿಕತೆಗಿಂದಲೂ ಅಭಿವೃದ್ಧಿ ಹೊಂದಿದ್ದ ನಾಗರಿಕತೆ ಮತ್ತು ಸಂಸ್ಕೃತಿಯಾಗಿದ್ದರ ಬಗ್ಗೆ ಕುರುಹುಗಳಿವೆ. ಆರ್ಯರು ವಲಸೆ ಬಂದರೋ ಅಥವಾ ದಾಳಿ ಮಾಡಿದರೋ ಒಟ್ಟಿನಲ್ಲಿ ಈ ಉಪಖಂಡದ ಉತ್ತರ ಭಾಗದಲ್ಲಿ ಒಂದು ಬಹು ಅಮೂಲ್ಯವಾದ ಆರ್ಯಪೂರ್ವ, ವೇದಪೂರ್ವ ಇತಿಹಾಸವಿದೆ. ಆದರೆ ಈವರೆಗಿನ ಪ್ರಾಗೈತಿಹಾಸಿಕ ವಿದ್ವತ್ತು ದಕ್ಷಿಣ ಭಾರತದ ಇತಿಹಾಸವನ್ನು ಉತ್ತರ ಭಾರತದ ವಿಸ್ತರಣೆಯಾಗಿ ಮಾತ್ರ ಗ್ರಹಿಸಿದೆ. ಹಾಗೂ ಅದರ ಬಗ್ಗೆ ಕಳೆದ ನಾಲ್ಕೈದು ದಶಕಗಳ ಹಿಂದಿನ ಸಂಶೋಧನೆಗಳು ಗಂಭೀರವಾದ ಪ್ರಶ್ನೆಗಳನ್ನು ಹುಟ್ಟಿಸಿದೆ. ಏಕೆಂದರೆ ಕರ್ನಾಟಕದ ಮಸ್ಕೀ ಹಾಗೂ ದಕ್ಷಿಣ ಭಾರತದ ಇನ್ನಿತರ ಹಲವಾರು ಪ್ರದೇಶಗಳಲ್ಲಿ ಆರ್ಯರಷ್ಟೇ ಹಾಗೂ ಅದಕ್ಕಿಂತ ಹಿಂದಿನ ಸ್ಥಿರ ಸಮಾಜ ಸಂಸ್ಕೃತಿಯ ಅವಶೇಷಗಳು ದೊರತಿವೆ. ಹಾಗೆಯೇ ಶ್ರೀಲಂಕಾ ಮತ್ತು ಈಳಂ ಪ್ರದೇಶಗಳಲ್ಲಿ ನಡೆದಿರುವ ಉತ್ಖನನಗಳು ಹತ್ತಾರು ಸಾವಿರ ವರ್ಷಗಳ ಹಿಂದೆ ಮಾನವರು ಆಫ್ರಿಕಾ ಮೂಲದಿಂದ ಭಾರತ ಉಪಖಂಡದ ದಕ್ಷಿಣ ಭಾಗ, ಶ್ರೀಲಂಕಾ, ಆಸ್ಟ್ರೇಲಿಯಾಗಳಿಗೆ ವಲಸೆ ಹೋಗಿರುವ ಸಾಧ್ಯತೆಯನ್ನೂ ಸೂಚಿಸುತ್ತಿದೆ. ಹೀಗಾಗಿ ದಕ್ಷಿಣ ಭಾರತದ ಸಂಸ್ಕೃತಿಯ ವಿಕಸನವನ್ನು ಉತ್ತರ ಭಾರತದ ಆರ್ಯ ಸಮಾಜದ ವಿಸ್ತರಣೆಯಾಗಿ ನೋಡಲು ಸಾಧ್ಯವೇ ಇಲ್ಲ. ಇನ್ನು ಆರ್ಯ ಸಂಸ್ಕೃತಿಯ ಪರಿಚಯಗಳು ಸಂಸ್ಕೃತ ಭಾಷೆಯಲ್ಲಿರುವ ವೇದೋಪನಿಷತ್ತು ಇತ್ಯಾದಿಗಳಲ್ಲಿ ದೊರಕಬಹುದು. ಆದರೆ ಆರ್ಯಪೂರ್ವ ದ್ರಾವಿಡ, ಇತ್ಯಾದಿ ನಾಗರಿಕತೆಗಳ ಹಾಗೂ ಸಂಸ್ಕೃತಿಗಳ ಅರಿವಿಗೆ ಸಂಸ್ಕೃತ ಜ್ನಾನ ಅಥವಾ ಆರ್ಯಜ್ನಾನ ಯಾವ ರೀತಿಯಿಂದಲೂ ಸಹಾಯ ಮಾಡುವುದಿಲ್ಲ. ಹಾಗೆಯೇ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಈ ಯಾವ ನಾಗರಿಕತೆಗಳ ಜಪ್ತಿಗೂ ಸಿಗದೆ ಸ್ವತಂತ್ರವಾಗಿ ವಿಕಸನಗೊಂಡ ಆದಿವಾಸಿ ಸಂಸ್ಕೃತಿಗಳ ಪ್ರತ್ಯೇಕ ಧಾರೆಗಳೂ ಇದ್ದಾವೆ. ಹೀಗಾಗಿ ಒಟ್ಟಾರೆ ಭಾರತದ ಪ್ರಾಚೀನ ಸಂಸ್ಕೃತಿಯನ್ನು ಕೇವಲ ವೇದಕಾಲಕೂ ಸೀಮಿತಗೊಳಿಸಲು ಸಾಧ್ಯವಿಲ್ಲ. ಹಾಗೆಯೇ ವೇದಕಾಲೀನ ಸಮಾಜವನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುವ ಭಾಷೆ ಮತ್ತು ಸಾಧನಗಳನ್ನು ವೇದಪೂರ್ವ ಕಾಲಕ್ಕೆ ಅನ್ವಯಿಸಲೂ ಸಾಧ್ಯವಿಲ್ಲ. ಹಾಗೆಯೇ ದಕ್ಷಿಣ ಭಾರತದ ಸಂಸ್ಕೃತಿ ವಿಕಸನವನ್ನು ಅರ್ಥಮಾಡಿಕೊಳ್ಳಲು ಈವರೆಗಿನ ನಮ್ಮ ಉತ್ತರಭಾರತದ ವಿಸ್ತರಣೆಯೆಂಬ ತಿಳವಳಿಕೆಯನ್ನೇ ಕಳೆದುಕೊಂಡು ಪ್ರಾಕೃತ, ದ್ರಮಿಳ ಹಾಗೂ ದ್ರಾವಿಡಗಳನ್ನು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಮೋದಿ ಸರ್ಕಾರಕ್ಕೆ ನಿಜಕ್ಕೂ ಭಾರತದ ಸಂಸ್ಕೃತಿಯ ಒಟ್ಟಾರೆ ಇತಿಹಾಸಪಯಣವನ್ನು ಅಧ್ಯಯನ ಮಾಡುವ ಉದ್ದೇಶವಿದ್ದರೆ ಪರಿಣಿತರ ಸಮಿತಿಯಲ್ಲಿ ಈ ವೈವಿಧ್ಯವನ್ನು ಪ್ರತಿಫಲಿಸುವ ವಿದ್ವಾಂಸರನ್ನು ನೇಮಿಸಬೇಕಿತ್ತು. ಭಾರತ ಸಂಸ್ಕೃತಿ ಅಧ್ಯಯನವೋ? ಆರ್ಯೇತರ ಸಂಸ್ಕೃತಿಯ ನಿರಾಕರಣೆಯೋ? ಆದರೆ ಪರಿಣಿತರ ಸಮಿತಿಯ ರಚನೆಯನ್ನು ನೋಡಿದರೆ ಸರ್ಕಾರದ ಉದ್ದೇಶ ಭಾರತದ ನಾಗರಿಕ ವಿಕಸನದ ವೈವಿಧ್ಯವನ್ನು ಅಧ್ಯಯನ ಮಾಡುವ ಬದಲಿಗೆ ಇಡೀ ಭಾರತದ ವೈವಿಧ್ಯತೆಯನ್ನು ವೈದಿಕ ನಾಗರಿಕತೆಯ ಪರಿಧಿಯೊಳಗೆ ಕೂಡಿಟ್ಟು ಆರ್ಯ ಯಾಜಮಾನ್ಯವನ್ನು ಸ್ಥಾಪಿಸುವ ಉದ್ದೇಶವಿರುವುದು ಸ್ಪಷ್ಟವಾಗುತ್ತದೆ. ಈಗಾಗಲೇ ಗಮನಿಸಿರುವಂತೆ ಈ ಪರಿಣಿತರ ಸಮಿತಿಯಲ್ಲಿ ದಕ್ಷಿಣವಿಲ್ಲ. ಹಾಗೂ ಬ್ರಾಹ್ಮಣರೇ ಹೆಚ್ಚಿರುವುದು ಅಕಸ್ಮಿಕವಲ್ಲ ಎಂಬುದು ಇನ್ನಿತರ ಅಂಶಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ಒಟ್ಟು 16 ಜನರ ಆ ಸಮಿತಿಯಲ್ಲಿ ಇಬ್ಬರು ಸರ್ಕಾರದ ಸಂಸ್ಕೃತಿ ಹಾಗೂ ಪುರಾತತ್ವ ಇಲಾಖೆಯ ಪ್ರತಿನಿಧಿಗಳು. ಉಳಿದ 14 ಜನರಲ್ಲಿ ನಾಲ್ವರು ಮಾತ್ರ ಪುರಾತತ್ವ ಹಾಗೂ ಸಂಬಂಧೀ ಇಲಾಖೆಗಳ ಹಿನ್ನೆಲೆಯುಳ್ಳವರು. ಅದರಲ್ಲಿ ಮಣಿ ಎಂಬುವರು 2003ರಲ್ಲಿ ಪುರಾತತ್ವ ಇಲಾಖೆಯ ಮುಖ್ಯಸ್ಥರಾಗಿದ್ದಾಗ ಯಾವುದೇ ಪುರಾತತ್ವ ಪುರಾವೆಯಿಲ್ಲದೆ ಬಾಬ್ರಿ ಮಸೀದಿಯ ಕೆಳಗಡೆ ಮಂದಿರವಿದ್ದ ಬಗ್ಗೆ ಅಲಹಾಬಾದ್ ಹೈಕೋರ್ಟಿಗೆ ತಪ್ಪು ಮಾಹಿತಿಕೊಟ್ಟು ಕೋರ್ಟಿನಿಂದಲೇ ಛೀಮಾರಿಗೊಳಗಾಗಿದ್ದ ವ್ಯಕ್ತಿ. ಉಳಿದ 10 ಜನರಲ್ಲಿ ಆರು ಜನ ಸಂಸ್ಕೃತ ವಿದ್ವಾಂಸರು! ಇನ್ನೊಬ್ಬರು ಸನ್ಮಾರ್ಗ ಎಂಬ ಹೆಸರಿನ ವರ್ಲ್ಡ್ ಬ್ರಾಹ್ಮಿನ್ ಫೆಡರೇಷನ್-ವಿಶ್ವ ಬ್ರಾಹ್ಮಣ ಒಕ್ಕೂಟದ- ಅಧ್ಯಕ್ಷರು ಇಷ್ಟು ಸಾಕಲ್ಲವೇಈ ಅಧ್ಯಯನದ ಉದ್ದೇಶ ಹಾಗೂ ಫಲಿತಾಂಶಗಳನ್ನು ಅರ್ಥಮಾಡಿಕೊಳ್ಳಲು? ಪರಿಣಿತರ ಸಮಿತಿಯಲ್ಲಿ ಬ್ರಾಹ್ಮಣರು ಇದ್ದರೆ ತಪ್ಪಲ್ಲ. ಬ್ರಾಹ್ಮಿನ್ ಫೆಡರೇಷನ್ ಏಕೆ? ಉಳಿದ ಜಾತಿ ಒಕ್ಕೂಟಗಳೇಕಿಲ್ಲ? ಭಾರತದ ಸಂಸ್ಕೃತಿಯೆಂದರೆ ಕೇವಲ ಬ್ರಾಹ್ಮಣ ಸಂಸ್ಕೃತಿಯೇ? ಇದರ ಹಿಂದೆ ಭಾರತದ ಸಂಸ್ಕೃತಿಯ ಸನಾತನತೆಯ ಪರಿಶುದ್ಧತೆಯನ್ನು ಕೇವಲ ಬ್ರಾಹ್ಮಣರು ಮಾತ್ರ ಹಿಡಿದಿಟ್ಟುಕೊಂಡಿದ್ದಾರೆ ಎಂಬ ಜನಾಂಗೀಯ ಪರಿಶುದ್ಧತೆಯ ತಿಳವಳಿಕೆಯಿಲ್ಲವೇ? ಸಂಸ್ಕೃತ ವಿದ್ವಾಂಸರಿದ್ದರೆ ತಪ್ಪಿಲ್ಲ. ಆದರೆ ಭಾರತದ ನಾಗರಿಕತೆಯ ಸನಾತನೆತೆಯನ್ನು ಹಿಡಿದಿಟ್ಟುಕೊಂಡಿರುವ ಇತರ ಶಾಸ್ತ್ರೀಯ ಭಾಷೆಗಳಾದ ತಮಿಳು, ಕನ್ನಡ, ಪ್ರಾಕೃತ, ಪಾಳಿಗಳೇಕಿಲ್ಲ? ಉಳಿದವು ಭಾರತೀಯ ಸಂಸ್ಕೃತಿಯ ಅಪಭ್ರಂಶಗಳೇ? ವಿಷಯ ಸ್ಪಷ್ಟ. ಭಾರತದ ನಾಗರಿಕತೆಯೆಂದರೆ ಆರ್ಯ ನಾಗರಿಕತೆ ಎಂದು ಆರೆಸ್ಸೆಸ್ ಮಾಡುತ್ತಿರುವ ಅಪಪ್ರಚಾರಕ್ಕೆ ಮೋದಿ ಸರ್ಕಾರ ಅಧಿಕೃತ ಅಕೆಡೆಮಿಕ್ ಮುದ್ರೆಯನ್ನೋತ್ತುವ ಭಾಗವಾಗಿ ಈ ಸಮಿತಿ ರಚನೆಯಾಗಿದೆ. ಹಾಗೆಯೇ ಆ ಮೂಲಕ ಆರ್ಯನ್ ಪರಿಶುದ್ಧತೆ ಮತ್ತು ಬ್ರಾಹ್ಮಣ ಶ್ರೇಷ್ಟತೆಯ ಒಂದು ಪರಿಶುದ್ಧ ಇಂಡಿಕ್ ನಾಗರಿಕತೆ ಭಾರತದಲ್ಲಿ ಇತ್ತೆಂದು ಸಾಧಿಸುವ ಫ್ಯಾಸಿಸ್ಟ್ ಅಜೆಂಡಾ ಕೂಡಾ ಇದರ ಹಿಂದಿದೆ. ಇಂಡಿಕ್ ಪುನರುತ್ಥಾನವೆಂಬ ಆರ್ಯ ಯಾಜಮಾನ್ಯ! ಈ ಪ್ರಯತ್ನಗಳ ಹಿಂದೆ ಭಾರತದ ರಾಷ್ಟ್ರೀಯತೆಗೆ ಇಂಡಿಕ್- ಆರ್ಯನ್ ನಾಗರಿಕತೆಯ ತಳಹದಿಯನ್ನು ಕಟ್ಟಿ ಉಳಿದವನ್ನು ಅನ್ಯ ಅಥವಾ ಅಧೀನಗೊಳಿಸುವ ಇಂಡಿಕ್ ರಿನೈಸ್ಸಾನ್ಸ್ ಎಂಬ ಅಭಿಯಾನವಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಇಂಡಿಕ್ ಅಭಿಯಾನಕ್ಕೆ ಎಲ್ಲಾ ಬಗೆಯ ಸಂಪನ್ಮೂಲ, ಮನ್ನಣೆ, ಹಾಗೂ ಪ್ರಾತಿನಿಧ್ಯಗಳು ಸಿಗುತ್ತಿವೆ. ಪರಿಶುದ್ಧ ವೈದಿಕ ಬ್ರಾಹ್ಮಣ ಶ್ರೇಷ್ಟತೆಯ ಅರ್ಯಯುಗದ ಪುನರುತ್ಥಾನ ಇದರ ಅಂತಿಮ ಉದ್ದೇಶವಾಗಿದೆ. ಆದ್ದರಿಂದ ಈ ಅಧ್ಯಯನ ವರದಿಯ ಮುಖ್ಯಾಂಶಗಳನ್ನು ಈಗಲೇ ಸ್ಪಷ್ಟವಾಗಿ ಊಹಿಸಿಬಿಡಬಹುದು: - ಭಾರತದಲ್ಲಿ ಕಳೆದ 12,000 ವರ್ಷಗಳಿಂದ ಆರ್ಷೇಯವಾದ ಸನಾತನ ಸಂಸ್ಕೃತಿಯೊಂದು ಅಖಂಡ ಭಾರತದಾದ್ಯಂತ ಏಕರೂಪಿಯಾಗಿ ಹರಿದುಬಂದಿದೆ. - ಆರ್ಯರು ಬೇರೆ ದೇಶಗಳಿಂದ ವಲಸೆ ಬಂದವರಲ್ಲ. ಈ ದೇಶದ ಮಂಗಗಳೇ ವಿಕಸನಗೊಂಡು ಕಾಲಾನುಕ್ರಮದಲ್ಲಿ ಮನುಷ್ಯರಾಗಿದ್ದಾರೆ. - ಆರ್ಯ-ದ್ರಾವಿಡ ಸಂಘರ್ಷಗಳೆಲ್ಲಾ ವಸಾಹತುಶಾಹಿ ಕಣ್ಣೋಟದ ಕಟ್ಟುಕತೆಗಳು. - ಮುಸ್ಲಿಮರು ಈ ದೇಶದ ಮೇಲೆ ದಾಳಿ ಮಾಡುವ ತನಕ ಭಾರತೀಯ ಸಮಾಜ ಸೌಹಾರ್ದ, ಸಹಕಾರ ಭ್ರಾತೃತ್ವಗಳೆಂಬ ಆರ್ಷೇಯ ಮೌಲ್ಯಗಳಿಂದ ಸಮರಸವಾಗಿತ್ತು. ಭಾರತ ವಿಶ್ವಗುರುವಾಗಿತ್ತು. -ಇಸ್ಲಾಮಿಕ್ ದಾಳಿ ಭಾರತವನ್ನು ಹಾಳುಗೆಡವಿತು. - ಈಗ ಭಾರತ ತನ್ನ ಇಂಡಿಕ್ ಸಿವಿಲೈಸೇಶನ್" ಮೂಲಗಳನ್ನು ಪುನರುತ್ಥಾನಗೊಳಿಸಿಕೊಂಡು ವಿಶ್ವಗುರುವಾಗುವ ಹೊಸ್ತಿಲಲ್ಲಿದೆ... ಇತ್ಯಾದಿ ಇತ್ಯಾದಿ. ಆದರೆ ಈ ಇಂಡಿಕರು ಒಂದು ವಾಸ್ತವನ್ನು ಮರೆತುಬಿಟ್ಟಿದ್ದಾರೆ. ಆರ್ಯಜನರು ಹೊಟ್ಟೆಗೇನು ತಿನ್ನುತ್ತಿದ್ದರು? ಭಾರತದ ಸಂಸ್ಕೃತಿ 12,000 ವರ್ಷಗಳಷ್ಟು ಹಿಂದಿನದ್ದು ಎಂದಾದಲ್ಲಿ ಆಗ ಆ ನಾಗರಿಕ ಮಹಾಶಯರು ಹೊಟ್ಟೆಗೆ ಏನು ತಿನ್ನುತ್ತಿದ್ದರು? ಎಂಬ ಪ್ರಶ್ನೆ ಸಹಜ... ಏಕೆಂದರೆ ನಾಗರಿಕತೆ ಎಂದರೆ ಒಂದು ಮನುಷ್ಯ ಸಮುದಾಯ ಸ್ಥಿರವಾಗಿ ನೆಲೆಯೂರಿ ಒಂದು ಸಮಾಜವಾಗಿ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ವಿಕಸನಗೊಳ್ಳುವ ಸಮಾಜ ಹಾಗು ಜೀವನ ವಿಧಾನ . ಅದರ ಆಧಾರದಲ್ಲೇ ಅದರ ನಿರ್ದಿಷ್ಟ ಸಂಸ್ಕೃತಿಗಳು ಸಹ ರೂಪುಗೊಳ್ಳುತ್ತವೆ. ಒಂದು ಸ್ಥಿರ ಸಮಾಜ ರೂಪುಗೊಳ್ಳಲು ಆಹಾರವು ಸ್ಥಿರವಾಗಿ ಹಾಗು ನಿರಂತರವಾಗಿ ದೊರೆಯುವ ವ್ಯವಸ್ಥೆ ಇರಬೇಕಾದ್ದು ಪೂರ್ವ ಷರತ್ತು. ಬೇಟೆ ಅಥವಾ ಆಹಾರ ಸಂಗ್ರಹಣೆಯ ಹಂತದಲ್ಲಿ ಮನುಷ್ಯ ಸಮಾಜ ಆಹಾರಕ್ಕಾಗಿ ನಿರಂತರ ವಲಸೆಯಲ್ಲಿತ್ತು. ಮನುಷ್ಯ ಕುಲದ ಮಾತೆಯರು ಕೃಷಿಯನ್ನು ಅನ್ವೇಷಿಸಿದ ನಂತರವೇ ಸಮುದಾಯಗಳು ಒಂದು ಕಡೆ ನೆಲೆ ನಿಂತು ಸಮಾಜಗಳಾದವು. ಭಿನ್ನಭಿನ್ನ ನಾಗರಿಕತೆ ಮತ್ತು ಸಂಸ್ಕೃತಿಗಳನ್ನು ಸೃಷ್ಟಿಸಿದವು. ಆದರೆ ಮನುಕುಲ ಕೃಷಿಯನ್ನು ಕಂಡುಹಿಡಿದದ್ದು ಯಾವಾಗ ? ನಾವು ವಾಸಿಸುತ್ತಿರುವ ಈ ಭೂಗ್ರಹಕ್ಕೆ ಅಂದಾಜು 454 ಕೋಟಿ ವರ್ಷಗಳಾಗಿವೆಎಂದು ಅಂದಾಜು ಮಾಡಲಾಗುತ್ತದೆ. ಆ ಜಿಯಾಲಾಜಿಕಲ್ ಕಾಲಮಾನವನ್ನು ಎವಾನ್, ಎರಾ, ಪಿರಿಯಡ್, ಎಪೋಕ್ ಗಳೆಂದು ವರ್ಗಿಕರಿಸುತ್ತಾರೆ. ಅಂತಿಪ್ಪ ಈ ಭೂಗ್ರಹದಲ್ಲಿ ಜೀವಿಗಳ ಉಗಮವಾಗಿ 300 ಕೋಟಿ ವರ್ಷಗಳಾಗಿದ್ದರೆ ಸಸ್ತನಿಗಳ ಇತಿಹಾಸಕ್ಕೆ ಒಂದು ಕೋಟಿ ವರ್ಷಗಳ ಇತಿಹಾಸವೂ ಇಲ್ಲ. ಅದರಲ್ಲಿ ಮನುಷ್ಯ ಜನಾಂಗವು ಸೇರಿದ "ಹೋಮೋ ಸೇಪಿಯನ್" ಕಾಣಿಸಿಕೊಂಡು ಕೇವಲ 3 ಲಕ್ಷ ವರ್ಷಗಳಾಗಿವೆ. ಹಾಗು ಮನುಕುಲದ ಮಾತೆಯರು ಕೃಷಿ ಕಂಡುಹಿಡಿದು ಕೇವಲ 11000 ವರ್ಷಗಳು ಮಾತ್ರ ಆಗಿವೆ. ಇದಕ್ಕೆಲ್ಲಾ ಜಿಯಾಲಾಜಿಕಲ್ ಕಾರಣಗಳಿವೆ. ಏಕೆಂದರೆ ಆಹಾರವನ್ನು ಬಿತ್ತಿ ಬೆಳೆಯಲು ಸೂಕ್ತವಾದ ಹಾಗು ನಿರಂತರವಾದ ಏಕಪ್ರಕಾರ ತಾಪಮಾನದ ಅಗತ್ಯವಿದೆ. ಭೂಮಿಯ ಇತಿಹಾಸದಲ್ಲಿ ಅತ್ಯಂತ ಶೀತಲವಾದ ಕಾಲಮಾನವೇ ಅತ್ಯಧಿಕ. ಹಾಗು ಕಳೆದ 11,000 ವರ್ಷಗಳವರೆಗೆ ಭೂಮಿಯ ತಾಪಮಾನ ತೀರಾ ಏರುಪೇರಿನಿಂದ ಕೂಡಿತ್ತು. ಹೀಗಾಗಿ ಆ ಕಾಲಘಟ್ಟದವರೆಗೆ ಜಗತ್ತಿನಲ್ಲೆಲ್ಲೂ ಒಂದೆಡೆ ಬಿತ್ತಿ ಬೆಳವ ಕೃಷಿ ಇರಲಿಲ್ಲ. ಭೂಮಿಯ ತಾಪಮಾನವು 11,000 ವರ್ಷಗಳ ಕೆಳಗೆ ಅನಾಮತ್ತು ಹೆಚ್ಚಿತು. ಮತ್ತು ಈವರೆಗೆ ಅತ್ಯಂತ ಕಡಿಮೆ ಏರುಪೇರುಗಳೊಂದಿಗೆ ತಾಪಮಾನ ಸ್ಥಿರತೆಯನ್ನು ಕಾದುಕೊಂಡು ಬಂದಿದೆ. ಈ ಭೌಗೋಳಿಕ ಸಂದರ್ಭವೇ ಜಗತ್ತಿನ ಬಹುಪಾಲು ನದಿ ಬಯಲು ಪ್ರದೇಶಗಳಲ್ಲಿ ಸ್ಥಿರ ಕೃಷಿ ಸಮುದಾಯಗಳನ್ನು ಸೃಷ್ಟಿಸಿದವು. ಆ ಬಗೆಯ ಸ್ಥಿರ ನೆಲೆಯೂರಿಕೆಗಳು ಸಾವಿರಾರು ವರ್ಷಗಳ ಕಾಲ ನಡೆದ ನಂತರವೇ ಭಾರತೀಯ ಉಪಖಂಡದ ಸಿಂಧು ಬಯಲಿನ ನಾಗರಿಕತೆ ಯನ್ನು ಒಳಗೊಂಡಂತೆ, ಸುಮೇರು- ಮೆಸಪಟೋಮಿಯಾ, ನೈಲ್ ನದಿ ನಾಗರಿಕತೆ, ಚೀನಾದ ಯಾಂಗ್ ಸಿಕಿಯಾಂಗ್ ನಾಗರಿಕತೆ ಗಳಂತ ಪ್ರಮುಖ ಐದು ನಾಗರಿಕತೆಗಳು ಹೆಚ್ಚು ಕಡಿಮೆ 6- 8000ವರ್ಷಗಳಷ್ಟು ಹಿಂದೆ ಏಕಕಾಲದಲ್ಲಿ ವಿಕಸನಗೊಂಡವು. ಆದರೆ ಕಳೆದ 300ವರ್ಷಗಳಲ್ಲಿ, ಅದರಲ್ಲೂ ಕಳೆದ 50 ವರ್ಷಗಳಲ್ಲಿ ಭೂಮಿಯ ತಾಪಮಾನ ದಲ್ಲಿ ಮತ್ತೆ ಅಪಾರ ಏರುಪೇರುಗಳು ಕಾಣುತ್ತಿದ್ದು ಇಡೀ ಜಗತ್ತಿನ ಜೀವಸಂಕುಲವೇ ಅಳಿವನಂಚಿಗೆ ಬಂದಿದೆ ಎಂಬುದು ಮತ್ತೊಂದು ಅಪಾಯಕಾರಿ ಬೆಳವಣಿಗೆ . ಅದಕ್ಕೆ ಮೋದಿ,ಟ್ರಂಪ್ ಮಾದರಿ ಆಡಳಿತಗಳ ಕಾರ್ಪೊರೇಟ್ ಪರ ಪರಿಸರ ನೀತಿಗಳು ಹಾಗು ಅವರ ಸಾಕುಯಜಮಾನರಾದ ಅಂಬಾನಿ, ಹಾಗು ಇನ್ನಿತರ ಫೋರ್ಬ್ಸ್ ಪಟ್ಟಿಯಲ್ಲಿನ ದೊಡ್ಡದೊಡ್ಡ ಕಾರ್ಪೊರೇಟ್ ಕಂಪನಿಗಳೇ ಕಾರಣ ಎಂಬುದು ಮತ್ತೊಂದು ವಿಷಯ. ಅದೇನೇ ಇರಲಿ. ಜಗತ್ತಿನಲ್ಲಿ ನಾಗರಿಕತೆ ವಿಕಸನಗೊಳ್ಳಲು ಬೇಕಾದ ಸ್ಥಿರ ಕೃಷಿ ಸಮಾಜ ರೂಪುಗೊಂಡಿದ್ದೆ ಕಳೆದ 11,000 ವರ್ಷಗಳಲ್ಲಿ. ಏಕೆಂದರೆ ಅದಕ್ಕೆ ಮುಂಚೆ ಕೃಷಿಗೆ ಬೇಕಾದ ಸ್ಥಿರ ತಾಪಮಾನವೇ ಭೂಗ್ರಹದಲ್ಲಿ ಇರಲಿಲ್ಲ. ಹೀಗಿರುವಾಗ ಮೋದಿ ಸರ್ಕಾರ ಭಾರತದ ನಾಗರಿಕತೆ 12,000 ವರ್ಷಗಳಷ್ಟು ಹಿಂದಿನದು ಎಂದಿದ್ದಾರೆ. ಹಾಗಿದ್ದಲ್ಲಿ ಭಾರತವು 12,000 ವರ್ಷಗಳ ಕೆಳಗೆ ಭೂಗ್ರಹದಲ್ಲಿ ಇರಲಿಲ್ಲವೇ? ಭೂಮಿಯಲ್ಲೇ ಇದ್ದಿದ್ದು ನಿಜವಾದಲ್ಲಿ ಅವರು ಹೊಟ್ಟೆಗೆ ಏನು ತಿನ್ನುತ್ತಿದ್ದರು?????? ಸಾಮಾನ್ಯವಾಗಿ ಪ್ರತಿಯೊಂದು ಸಮುದಾಯವು ತನ್ನಹಿರಿಮೆ ಹಾಗು ಸನಾತನೆಯನ್ನು ಸಾಧಿಸುವಾಗ ಕೆಲವು ಉತ್ಪ್ರೇಕ್ಷೆಗಳನ್ನು ಮಾಡುತ್ತವೆ. ಉದಾಹರಣೆಗೆ ತಮಿಳು ಸಮುದಾಯವು ತನ್ನ ಭಾಷೆ ಎಷ್ಟು ಹಳೆಯದೆಂದು ಹೇಳುವಾಗ ಕಲ್ಲು-ಮಣ್ಣು ಹುಟ್ಟುವ ಮುಂಚೆಯೇ ತಮಿಳು ಭಾಷೆ ಹುಟ್ಟಿತ್ತು ಎಂದು ಆಡುನುಡಿಯಲ್ಲಿ ಹೇಳುತ್ತಾರೆ. ಅದು ವಾಸ್ತವಿಕವಾಗಿಯೂ ನಿಜ ಎಂದೇನೂ ಅವರು ವಾದಿಸುವುದಿಲ್ಲ. ಆದರೆ ಈ ನಮ್ಮ ಇಂಡಿಕರು ಕೃಷಿ ಹಾಗೂ ಸ್ಥಿರ ಸಮಾಜಗಳು ಏರ್ಪಡುವ ಮುಂಚೆಯೇ ಆರ್ಯ ನಾಗರಿಕತೆ ಭಾರತದಲ್ಲಿತ್ತು ಎಂದು ವೈಜ್ನಾನಿಕವಾಗಿ ಸಾಬೀತುಪಡಿಸಲು ಮುಂದಾಗಿದ್ದಾರೆ. ಭಾರತೀಯ ಪ್ರಜ್ನೆ ನಿರ್ವಸಾಹತೀಕರಣಗೊಳ್ಳಬೇಕು ಎಂದರೆ ವೈದಿಕ ವಸಾಹತಿಗೆ ಒಳಗಾಗಬೇಕೆಂದಲ್ಲ. ಇಂಡಿಕ್ ಪುನರುತ್ಥಾನ ಅಭಿಯಾನ ಭಾರತೀಯ ಫ್ಯಾಸಿಸಂನ ಸೈದ್ಧಾಂತಿಕ ಸ್ವರೂಪವಾಗಿದೆ. ಹೀಗಾಗಿ ಇದನ್ನು ವಿಫಲಗೊಳಿಸುವ ನೈಜ ವೈಜ್ನಾನಿಕ ಹಾಗೂ ರಾಜಕೀಯ ಅಭಿಯಾನವನ್ನು ನಡೆಸಬೇಕಾದ ಅಗತ್ಯವಿದೆ. ಕೃಪೆ: ವಾರ್ತಾ ಭಾರತಿ ⚫ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ⚫ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ. ⚫ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement