Advertisement

ಭಾರತ ದೇಶ, ರಾಜ್ಯಗಳ ಒಕ್ಕೂಟವೋ ಅಥವಾ ಮೋದಿ ಸರ್ಕಾರದ ಸರ್ವಾಧಿಕಾರವೋ?

Advertisement

ಲೇಖನ : ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಪ್ರಗತಿಪರ ಚಿಂತಕರು ಹಾಗೂ ಜನಪರ ಹೋರಾಟಗಾರರು. ) ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಭಾರತವು ಫೆಡರಲ್-ಒಕ್ಕೂಟ ಸ್ವರೂಪವನ್ನು ಹೊಂದಿರಬೇಕೋ ಅಥವಾ ಏಕಪ್ರಭುತ್ವ ರಚನೆಯನ್ನು-ಯೂನಿಟರಿ- ಸ್ವರೂಪವನ್ನು ಹೊಂದಿರಬೇಕೋ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಸತತ ನಾಲ್ಕು ದಿನಗಳ ಕಾಲನಡೆದ ಬಿರುಸಿನ ಚರ್ಚೆಗಳ ನಂತರ ಅಂತಿಮವಾಗಿ 1949ರ ಸೆಪ್ಟೆಂಬರ್ 18ರಂದು ಭಾರತವನ್ನು ರಾಜ್ಯಗಳ ಒಕ್ಕೂಟವೆಂದು ಅಂಗೀಕರಿಸಲಾಯಿತು. ಅದೇ ಭಾರತದ ಸಂವಿಧಾನದ ಅರ್ಟಿಕಲ್ 1 ಕೂಡಾ ಆಯಿತು. ಮುಂದೆ 1973 ರಲ್ಲಿ ಪ್ರಖ್ಯಾತ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ 13 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವೂ ಸಹ ಭಾರತದ ಫ಼ೆಡರಲ್ ಸ್ವರೂಪವನ್ನು ಸಂಸತ್ತೂ ಕೂಡಾ ಬದಲಿಸಲಾಗದ ಭಾರತದ ಸಂವಿಧಾನದ ಮೂಲರಚನೆಯಾಗಿದೆ ಎಂದು ತೀರ್ಪನ್ನಿತ್ತಿತು. ಆ ನಂತರ 1989ರ ಬೊಮ್ಮಾಯಿ ಪ್ರಕರಣವನ್ನೂ ಒಳಗೊಂಡಂತೆ ಹಲವಾರು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟು ಭಾರತದ ಫೆಡರಲ್ ಸ್ವರೂಪವು ಭಾರತದ ಸಂವಿಧಾನದ ಮೂಲರಚನೆಯೆಂದು ಹಲವರು ಬಾರಿ ಪುನುರುಚ್ಚರಿಸಿದೆ. ಸಾರ್ವಭೌಮತ್ವದ ಸಮಾನ ಹಂಚಿಕೆ ಫೆಡರಲ್ ಎಂದರೆ ಏನು ಮತ್ತು ಹೇಗೆ ಎಂಬುದನ್ನೂ ಸಹ ಭಾರತದ ಸಂವಿಧಾನದ ಏಳನೇ ಶೆಡ್ಯೂಲ್ ಸ್ಪಷ್ಟಪಡಿಸುತ್ತದೆ. ಅದರ ಪ್ರಕಾರ ಭಾರತದ ಸಾರ್ವಭೌಮತೆಯು ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಂಚಿಕೊಂಡಿರುವ ಸಾರ್ವಭೌಮತೆಯಾಗಿದೆ. ಸಾರ್ವಭೌಮತೆಯು ಪ್ರಧಾನವಾಗಿ ಇರುವುದು ಶಾಸನಗಳನ್ನು ಮಾಡುವ ಹಾಗೂ ತೆರಿಗೆಗಳನ್ನು ಹಾಕುವ ಪರಮಾಧಿಕಾರದಲ್ಲಿ. ಈ ಪರಮಾಧಿಕಾರವನ್ನು ಏಳನೇ ಶೆಡ್ಯೂಲಿನಲ್ಲಿ ಮೂರು ಬಗೆಯಲ್ಲಿ ವರ್ಗೀಕರಿಸಲಾಗಿದೆ. ಮೊದಲನೆ ಪಟ್ಟಿಯಲ್ಲಿ ಭಾರತ ಸಂಸತ್ತು ಮಾತ್ರ ಶಾಸನಗಳನ್ನು ಮಾಡಿ ಕೇಂದ್ರ ಸರ್ಕಾರ ಜಾರಿ ಮಾಡುವ ಪಟ್ಟಿ. ಇದರಲ್ಲಿ ರಕ್ಷಣೆ, ಅಂತರಿಕ ಭದ್ರತೆ, ಹಣಕಾಸು, ವಿದೇಶ ವ್ಯವಹಾರಗಳಂಥ 97 ಬಾಬತ್ತುಗಳಿವೆ. ಎರಡನೆಯ ಪಟ್ಟಿಯಲ್ಲಿ ರಾಜ್ಯಗಳ ಶಾನಸಭೆಗಳು ಮಾತ್ರ ಶಾಸನ ಮಾಡಬಲ್ಲ ಹಾಗೂ ರಾಜ್ಯ ಸರ್ಕಾರಗಳು ಮಾತ್ರ ಜಾರಿ ಮಾಡುವ ಅಧಿಕಾರವುಳ್ಳ ಸಾರ್ವಜನಿಕ ಆರೋಗ್ಯ, ರಾಜ್ಯದೊಳಗಿನ ಕಾನೂನು ಸುವ್ಯವಸ್ಥೆ, ಕೃಷಿ, ಕೈಗಾರಿಕೆ ಗಳಂಥ 66 ಬಾಬತ್ತುಗಳಿವೆ. ಇವಲ್ಲದೆ ಕೇಂದ್ರ ಹಾಗೂ ರಾಜ್ಯಗಳೆರಡೂ ಪರಸ್ಪರ ಸಮಾಲೋಚನೆ ಮಾಡಿ ಶಾಸನ ಮಾಡಬಲ್ಲ ಹಾಗೂ ದೇಶಾದ್ಯಂತ ಏಕರೂಪಿಯಾದ ರೂಪ-ರಚನೆಗಳು ಬೇಕಾದಂಥ ಕ್ರಿಮಿನಲ್ ಪ್ರೊಸೀಜರ್ ಕೋಡ್, ಸಿವಿಲ್ ಪ್ರೊಸೀಜರ್ ಕೋಡ್, ಅಂತರರಾಜ್ಯ ಸಾಗಾಟದಂಥ ವಿಷಯಗಳನ್ನುಳ್ಳ 47 ಬಾಬತ್ತುಗಳನ್ನು ಮೂರನೇಯ- ಸಮವರ್ತಿ ಪಟ್ಟಿ ಯಲ್ಲಿ ಇರಿಸಲಾಗಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಶಿಕ್ಷಣವನ್ನೂ ರಾಜ್ಯಗಳ ಪಟ್ಟಿಯಿಂದ ತೆಗೆದು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು ಈ ಹಂಚಿಕೊಂಡ ಸಾರ್ವಭೌಮಿ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳೆರದೂ ಜನರ ಮೇಲೆ ತೆರಿಗೆ ವಿಧಿಸುತ್ತವೆ. ಜಿಎಸ್‌ಟಿ ಪದ್ಧತಿ ಜಾರಿಯಾದ ಮೇಲೆ ಸ್ವತಂತ್ರವಾಗಿ ರಾಜ್ಯಗಳು ತೆರಿಗೆ ವಿಧಿಸಬಹುದಾದ ಅಧಿಕಾರ ಬಹುಮಟ್ಟಿಗೆ ಮೊಟಕಾಗಿದೆ. ಆದರೆ ಕೇಂದ್ರವು ರಾಜ್ಯಗಳ ಜನರ ಮೇಲೆ ವಿಧಿಸುವ ತೆರಿಗೆಯಲ್ಲಿ ರಾಜ್ಯಗಳ ಪಾಲು ಇರುತ್ತದೆಯಾದ್ದರಿಂದ ಅದನ್ನು ಯಾವ ಪ್ರಮಾಣದಲ್ಲಿ ಹಂಚಬೇಕೆಂಬ ಸೂತ್ರವನ್ನು ನಿರ್ಧರಿಸಲು ಸಾಂವಿಧಾನಾತ್ಮಕವಾದ ಹಣಕಾಸು ಅಯೋಗವು ಕಾಲಕಾಲಕ್ಕೆ ನೇಮಕವಾಗುತ್ತದೆ. ಅದರ ಜೊತೆಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ರಾಜ್ಯಗಳ ಯೋಜನಾ ಸಮಾಲೋಚನೆಯನ್ನೂ ಹಾಗೂ ರಾಜ್ಯಗಳ ಅನುದಾನಗಳನ್ನು ನಿರ್ಧರಿಸುವ ಸಲುವಾಗಿ ಯೋಜನಾ ಅಯೋಗ ಎಂಬುದೊಂದಿತ್ತು. ಅಶಕ್ತ ಫೆಡರಲಿಸಂ- ಬಡಕಲು ರಾಜ್ಯಗಳು ಅವೆಲ್ಲಾ ಏನೇ ಇದ್ದರೂ, ಪ್ರಾರಂಭದಿಂದಲೂ ರಾಜ್ಯಗಳಿಗೆ ಹೆಚ್ಚಿನ ಸ್ಥಾನಮಾನವನ್ನು ಹಾಗೂ ಸ್ವಾಯತ್ತತೆಯನ್ನು ಕೊಡುವುದರ ಬಗ್ಗೆ ಕೇಂದ್ರದಲ್ಲಿ ಈವರೆಗೆ ಆಳ್ವಿಕೆ ಮಾಡಿರುವ ಯಾವುದೇ ಸರ್ಕಾರಗಳಿಗೂ, ವಿಶೇಷವಾಗಿ ಕಾಂಗ್ರೆಸ್ಸಿಗೂ ಹೃತ್ಪೂರ್ವಕವಾದ ಸಮ್ಮತಿಯೇನೂ ಇರಲಿಲ್ಲ. ವಾಸ್ತವವಾಗಿ ಭಾಷಾವಾರು ರಾಜ್ಯಗಳ ರಚನೆಯ ಬಗ್ಗೆ ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಭರವಸೆಯನ್ನು ನೀಡಿದ್ದರೂ ಸ್ವಾತಂತ್ರ್ಯಾ ನಂತರ ಕರ್ನಾಟವನ್ನೂ ಒಳಗೊಂಡಂತೆ ಆಂಧ್ರ, ಮಹಾರಾಷ್ಟ್ರ, ಗುಜರಾತ್, ಒರಿಸ್ಸಾ ಗಳಲ್ಲಿ ಒಂದು ದಶಕಗಳ ಕಾಲ ಜನಚಳವಳಿಗಳು ನಡೆದು ನೂರಾರು ಹೋರಾಟಗಾರರು ಹುತಾತ್ಮರಾದ ನಂತರವೇ ಭಾಷಾವಾರು ಪ್ರಾಂತ್ಯಗಳು ರಚನೆಯಾದವು. ವಾಸ್ತವದಲ್ಲಿ ಈಗ ಅಧಿಕಾರದಲ್ಲಿರುವ ಬಿಜೆಪಿಯ ಗುರುಪೀಠವಾದ ಆರೆಸ್ಸೆಸ್ ಭಾಷಾವಾರು ಪ್ರಾಂತ್ಯ ರಚನೆಗೂ ಹಾಗೂ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಕೊಡುವುದಕ್ಕು ಸದಾ ವಿರೋಧ ವ್ಯಕ್ತಪಡಿಸುತ್ತಲೇ ಇದ್ದವು. ಅವರ ಮುಖವಾಣಿಯಾದ ಆರ್ಗನೈಸರ್ ಪತ್ರಿಕೆಯಂತೂ 1949ರ ನವಂಬರ್ 30ರ ಸಂಚಿಕೆಯಲ್ಲೇ ಭಾರತದ ಸಂವಿಧಾನಕ್ಕೆ ಮತ್ತು ಅದರ ಫ಼ೆಡರಲ್ ಸ್ವರೂಪಕ್ಕೆ ಸಂಪೂರ್ಣ ವಿರೋಧವನ್ನು ವ್ಯಕ್ತಪಡಿಸಿತ್ತು. ಆ ನಂತರವೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರಗಳು ಸಾಂವಿಧಾನಿಕವಾದ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಹುದ್ದೆಗಳನ್ನು ರಾಜ್ಯಗಳನ್ನು ರಾಜಕೀಯವಾಗಿ ಹತೋಟಿಯಲ್ಲಿಟ್ಟುಕೊಳ್ಳುವ ಕೇಂದ್ರ ಸರ್ಕಾರದ ಕಚೇರಿಯನ್ನಾಗಿ ಬಳಸಿಕೊಳ್ಳುತ್ತಾ ಬಂದಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಭಾರತದ ಫೆಡರಲಿಸಮ್ಮಿನ ಕಾರ್ಪೊರೇಟೀಕರಣ! ಆದರೆ 1991ರ ನಂತರದಲ್ಲಿ ಭಾರತದ ಆರ್ಥಿಕತೆಯ ನಾಯಕತ್ವವನ್ನು ಸರ್ಕಾರದ ಬದಲಿಗೆ ದೇಶೀ ಹಾಗೂ ವಿದೇಶೀ ದೈತ್ಯ ಕಾರ್ಪೊರೇಟ್ ಬಂಡವಾಳಿಗರಿಗೆ ವಹಿಸಿಕೊಡಲಾಯಿತಷ್ಟೇ. ಕಾರ್ಪೊರೇಟ್ ಲಾಭಾಸಕ್ತಿಗಳಿಗೆ ಭಾರತವು ಆವರೆಗೂ ಆರ್ಥಿಕತೆ ಮಾತು ರಾಜಕೀಯದಲ್ಲಿ ಅನುಸರಿಸಿಕೊಂಡು ಬಂದಿದ್ದ ಅರೆಮನಸ್ಸಿನ ರಾಷ್ಟ್ರೀಕರಣ ಹಾಗೂ ಫೆಡರಲ್ ಪದ್ಧತಿಗಳು ಅಡ್ಡಿಯಾಗಲಾರಂಭಿಸಿದವು. ಕಾರ್ಪೊರೇಟುಗಳಿಗೆ ಇಡೀ ಭಾರತವೇ ಒಂದು ದೇಶ -ಒಂದು ಮಾರುಕಟ್ಟೆ ಯಾದರೆ ಮಾತ್ರ ಲಾಭದಾಯಕ. ಪ್ರತಿ ರಾಜ್ಯಗಳೂ ಭಿನ್ನಭಿನ್ನವಾದ ತೆರಿಗೆ ನೀತಿ, ಕಾರ್ಮಿಕ, ಬಂಡವಾಳ ಹೂಡಿಕೆ, ಪರಿಸರ, ಭೂ-ಹಿಡುವಳಿ, ಖನಿಜ ಹಾಗೂ ಜಲ ನೀತಿಗಳನ್ನು ಹೊಂದಿದ್ದರೆ ಒಂದು ಕಾರ್ಪೊರೇಟ್ ಉದ್ದಿಮೆಗೆ ಲಾಭದ ಸುಲಿಗೆ ಸುಲಭವಲ್ಲ. ಹೀಗಾಗಿ ಅವುಗಳು ಈ ಎಲ್ಲಾ ವಲಯಗಳಲ್ಲಿ ಒಂದೇ ಬಗೆಯ ಮಾತ್ರವಲ್ಲ ಕಾರ್ಪೂರೇಟ್ ಪರವಾದ ನೀತಿಗಳನ್ನು ತರುವ ಒತ್ತಡವನ್ನು ಹಾಕುತ್ತಿದ್ದವು. ಆದರೆ 90ರ ದಶಕದಲ್ಲಿ ಭಾರತದ ರಾಜಕೀಯದಲ್ಲಿ ಅಸ್ಥಿರತೆ ತಲೆದೋರಿತ್ತು. ಆ ಕಾರಣದಿಂದಾಗಿ 1991- 2014ರ ವರೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿಗಾಗಲೀ, ಬಿಜೆಪಿ ನೇತೃತ್ವದ ಸರ್ಕಾರಗಳಿಗಾಲೀ, ಎರಡನ್ನೂ ಹೊರತುಪಡಿಸಿದ ಖಿಚಡಿ ಸರ್ಕಾರಗಳಿಗಾಗಲೀ ಫೆಡರಲ್ ಸ್ವರೂಪಕ್ಕೇ ಧಕ್ಕೆ ತರುವ ಮೂಲಭೂತ ತಿದ್ದುಪಡಿ ತರುವ ಆಶಯವಿದ್ದರೂ, ಅನುಷ್ಠಾನಗೊಳಿಸಲು ಬೇಕಾದಷ್ಟು ಶಾಸಕರ ಬಲ ದಕ್ಕಿಸಿಕೊಳ್ಳಲಾಗಿರಲಿಲ್ಲ. ಭಾರತದಲ್ಲಿ ಜಾಗತೀಕರಣ ನೀತಿಗಳು ಅಧಿಕೃತವಾಗಿ ಅನುಷ್ಠಾನಗೊಳ್ಳಲು ಪ್ರಾರಂಭಿಸಿದ 25ವರ್ಷಗಳ ನಂತರ ಪ್ರಥಮಬಾರಿಗೆ 2014ರಲ್ಲಿ ಲೋಕಸಭೆಯಲ್ಲಿ ಬಿಜೆಪಿಗೆ ತನ್ನಂತೇ ತಾನೇ ಬಹುಮತವಿರುವಷ್ಟು ಸದಸ್ಯ ಬಲ ದಕ್ಕಿತು. ಹಾಗೂ ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸನ್ನೂ ಒಳಗೊಂಡಂತೆ ಇತರ ಎಲ್ಲಾ ವಿರೋಧ ಪಕ್ಷಗಳು ಅತ್ಯಂತ ದುರ್ಬಲ ಪರಿಸ್ಥಿತಿ ತಲುಪಿದವು. 2019ರ ಚುನಾವಣೆಯಲ್ಲಿ ಬಿಜೆಪಿಯ ಸಂಖ್ಯಾ ಪರಿಸ್ಥಿತಿ ಇನ್ನಷ್ಟು ಹೆಚ್ಚಿತು. ಮತ್ತು ರಾಜ್ಯಸಭೆಯಲ್ಲೂ ಕೂಡ ಅದು ಬಹುಮತವಿಲ್ಲದಿದ್ದರೂ ಅತಿಹೆಚ್ಚು ಸಂಖ್ಯಾಬಲವಿರುವ ಪಕ್ಷವಾಗಿದೆ. ಮುಂದಿನ ಎರಡು-ಮೂರು ತಿಂಗಳಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಗಳಲ್ಲಿ ಅದು ರಾಜ್ಯಸಭೆಯಲ್ಲೂ ಬಹುಮತವನ್ನು ಪಡೆಯುವ ಹೊಸ್ತಿಲಲ್ಲಿದೆ. ಮೋದಿ ಸರ್ಕಾರ- ಕಾರ್ಪೊರೇಟ್ ಮತ್ತು ಮನುವಾದಿ ಸರ್ವಾಧಿಕಾರ ಬಿಜೆಪಿ ಪಕ್ಷದ ಆರ್ಥಿಕ ನೀತಿ ಎಗ್ಗುಸಿಗ್ಗಿಲ್ಲದ ದೇಶಿ-ವಿದೇಶೀ ಕಾರ್ಪೊರೇಟ್ ದೈತ್ಯರ ಪರವಾದ ನೀತಿಗಳಾಗಿವೆ. ಅದಕ್ಕೆ ಅಡ್ಡಿಯಾಗುತ್ತಿರುವ ಈ ಫೆಡರಲ್ ಸ್ವರೂಪದ ಸಂವಿಧಾನವನ್ನು ಅವರು ಅಸಹ್ಯಿಸಿಕೊಳ್ಳುತ್ತಾರೆ. ಬಿಜೆಪಿಯ ಗುರುಪೀಠವಾದ ಆರೆಸ್ಸೆಸ್ಸಂತೂ ಅಸ್ಥಿತ್ವಕ್ಕೆ ಬಂದಿರುವುದೇ ಭಾರತದ ಬಹುಭಾಷಿಕ, ಬಹುಧಾರ್ಮಿಕ ಅನನ್ಯತೆಗಳನ್ನು ನಾಶಮಾಡಿ ಒಂದೇ ಧರ್ಮ, ಒಂದೇ ಭಾಷೆ ಮತ್ತು ಒಂದು ಸಂಸ್ಕೃತಿಯನ್ನು ಜಾರಿ ಮಾಡಲು. ಹೀಗೆ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಹುತ್ವ ಮತ್ತು ಪೆಡರಲ್ ತತ್ವಗಳನ್ನು ನಾಶಮಾಡಿ ಆರ್ಥಿಕ ಹಾಗೂ ಸಾಂಸ್ಕೃತಿಕ ಏಕರೂಪತೆಯನ್ನು ಹೇರುವ ಸಿದ್ಧಾಂತ ಹಾಗೂ ಉದ್ದೇಶವುಳ್ಳ ಬಿಜೆಪಿ ಸರ್ಕಾರಕ್ಕೆ ಅಗತ್ಯ ಸಂಖ್ಯಾಬಲದ ರಾಜಕೀಯ ಅಧಿಕಾರವೂ ಸಿಕ್ಕ ಮೇಲೆ ಮೋದಿ ಸರ್ಕಾರದ ಭಾರತದ ಫೆಡರಲ್ ರಚನೆಗಳ ಮೇಲೆ ಬಹಿರಂಗ ಯುದ್ಧವನ್ನು ಸಾರಿದೆ. ಕಾರ್ಪೊರೇಟ್ ಮತ್ತು ಹಿಂದೂತ್ವವಾದಿ ಸರ್ವಾಧಿಕಾರವನ್ನು ಹೇರುತ್ತಿದೆ. ರಾಜ್ಯಗಳನ್ನು ಗುಲಾಮರನ್ನಾಗಿ ನಡೆಸಿಕೊಳ್ಳುತ್ತಿದೆ. ರಾಜ್ಯಗಳ ಗುಲಾಮಗಿರಿಯ ಆಯಾಮಗಳು ಈಗಾಗಲೇ ಚರ್ಚಿಸಿದಂತೆ ಕೇಂದ್ರವು ಸಂಗ್ರಹಿಸುವ ತೆರಿಗೆಗಳಲ್ಲಿ ರಾಜ್ಯಗಳ ಅಧಿಕೃತ ಪಾಲೂ ಇರುತ್ತದೆ. ಅದರ ಪ್ರಮಾಣವನ್ನು ತೀರ್ಮಾನಿಸುವ ಸಾಂವಿಧಾನಿಕ ಅಧಿಕಾರವನ್ನು ಹಣಕಾಸು ಅಯೋಗಕ್ಕೆ ಕೊಡಲಾಗಿದೆ. ಮೋದಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗ ರಾಜ್ಯಗಳ ತೆರಿಗೆಯೆ ಪಾಲನ್ನು ಶೇ. 32 ರಿಂದ ಶೇ.42ಕ್ಕೆ ಏರಿಸಲಾಗುವುದೆಂದು ಹಾಗೂ ತಮ್ಮ ಸರ್ಕಾರ ಸಹಕಾರಿ ಒಕ್ಕೂಟ ತತ್ವದಲ್ಲಿ ನಂಬಿಕೆ ಹೊಂದಿರುವುದಾಗಿಯೂ ಹೇಳಿತ್ತು. ಆದರೆ ವಾಸ್ತವದಲ್ಲಿ ರಾಜ್ಯಗಳ ಪಾಲೂ ಹೆಚ್ಚಲಿಲ್ಲ. ಮೋದಿ ಸರ್ಕಾರ ಸಹಕಾರಿ ತತ್ವವನ್ನೂ ಪಾಲಿಸಲಿಲ್ಲ. ಈಗಾಗಲೇ ಸಾಕಷ್ಟು ಚರ್ಚೆಯಾಗಿರುವಂತೆ ಕೇಂದ್ರ ಸರ್ಕಾರವು ಸೆಸ್-ಮೇಲ್ತೆರಿಗೆ ಗಳಮೂಲಕ ಕಳೆದ ವರ್ಷವೊಂದರಲ್ಲೇ 3 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಂಪನ್ಮೂಲವನ್ನು ಸಂಗ್ರಹ ಮಾಡಿದೆ. ಶಾಸನಾತ್ಮಕವಾಗಿ ಈ ಹೆಚ್ಚುವರಿ ಹಾಗು ಮೇಲ್ತೆರಿಗೆಗಳು ರಾಜ್ಯಗಳೊಡನೆ ಹಂಚಿಕೊಳ್ಳಬೇಕಾದ ಡಿವಿಸಬಲ್ ಪೂಲ್ ನ ಭಾಗವಾಗುವುದಿಲ್ಲ. ಅದು ಇಡಿಯಾಗಿ ಕೇಂದ್ರಕ್ಕೆ ಸೇರುತ್ತದೆ. ಇದು ಕಾಂಗ್ರೆಸ್ ಕಾಲದಲ್ಲೂ ಆಗಾಗ ಆಗುತ್ತಿತ್ತು. ಆದರೆ, ರಾಜ್ಯಗಳೊಂದಿಗೆ ಹಣಕಾಸನ್ನು ಹಂಚಿಕೊಳ್ಳುವ ವಿಷಯದಲ್ಲಿ ಅದಕ್ಕಿಂತ ಮೋದಿ ಸರ್ಕಾರವು ಅತ್ಯಂತ ಅಪಾಯಕಾರಿಯಾದ ಅಸಾಂವಿಧಾನಿಕ ತಿದ್ದುಪಡಿಯನ್ನು ಮೋದಿ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರದ ತೆರಿಗೆಗಳಲ್ಲಿ ಕೇಂದ್ರವು ತನ್ನ ಖರ್ಚಿನ ಬಾಬತ್ತುಗಳಿಗೆ ಬೇಕಾದ ಸಂಪನ್ಮೂಲವನ್ನು ಎತ್ತಿಟ್ಟುಕೊಂಡು ಉಳಿದ ಮೊತ್ತವನ್ನು ರಾಜ್ಯಗಳಿಗೆ ಹಂಚಲು ತೆಗೆದಿರಿಸುತ್ತದೆಯಷ್ಟೇ.. ಅದನ್ನು ಡಿವಿಸಬಲ್ ಪೂಲ್ ಎಂದು ಕರೆಯಲಾಗುತ್ತದೆ. ಅದರೆ 2019ರಲ್ಲಿ ಮೋದಿ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರ ಸರ್ಕಾರದ ಬಾಬತ್ತಿಗೆ ಒಳಪಡುವ ರಕ್ಷಣೆ ಮತ್ತು ಅಂತರಿಕ ಭದ್ರತೆಯ ಹಣವನ್ನೂ ಸಹ ರಾಜ್ಯಗಳಿಗೆ ಸಲ್ಲಬೇಕಾದ ಡಿವಿಸಬಲ್ ಪೂಲ್ ನಿಂದ ಕಿತ್ತುಕೊಳ್ಳಲು ರಾಷ್ಟ್ರೀಯ ಸುರಕ್ಷಾ ನಿಧಿ ಯೊಂದನ್ನು ರಚಿಸಲು ಪೂರಕವಾಗುವಂತೆ ಹಣಕಾಸು ಅಯೋಗದ ಕಾಯಿದೆಗೆ ತಿದ್ದುಪಡಿ ತಂದಿದೆ. ಇದರಿಂದಾಗಿ ಇನ್ನು ಮುಂದೆ ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲು ಇನ್ನೂ ಕಡಿಮೆಯಾಗುತ್ತದೆ. ಆದರೆ ಅದರ ಬದಲಾಗಿ ರಕ್ಷಣೆ ಹಾಗೂ ಅಂತರಿಕ ಭದ್ರತೆಗಳ ವಿಷಯದಲ್ಲಿ ಶಾಸನ ಮಾಡುವ ವಿಷಯದಲ್ಲಿ ಮಾತ್ರ ರಾಜ್ಯಗಳ ಪಾತ್ರ ಏನೇನೂ ಇರುವುದಿಲ್ಲ. ಅಂದರೆ ರಾಜ್ಯಗಳು ಮೋದಿ ಸಾಮ್ರಾಟರಿಗೆ ಕಪ್ಪ ಕೊಡುವ ಸಾಮಂತರಷ್ಟೇ. ಅದೇರೀತಿ ಕೇಂದ್ರದಿಂದ ರಾಜ್ಯಗಳಿಗೆ ಸಂಪನ್ಮೂಲಗಳು ಹರಿದು ಬರಬೇಕಾದ ಇತರ ಎರಡು ಮೂಲಗಳಾದ ಕೇಂದ್ರೀಯ ಯೋಜನೆಗಳು ಹಾಗೂ ಅನುದಾನಗಳ ಮೊತ್ತದಲ್ಲೂ ಮೋದಿ ಸರ್ಕಾರ ದೊಡ್ಡ ಕಡಿತವನ್ನು ಮಾಡಿದೆ. ಹೀಗಾಗಿ ಸಾರಾಂಶದಲ್ಲಿ ಮಾಧ್ಯಮಗಳ ಮುಂದೆ ಮೋದಿ ಸರ್ಕಾರ ದೊಡ್ಡದಾಗಿ ರಾಜ್ಯಗಳ ಪಾಲನ್ನು ಶೇ. 10 ರಷ್ಟು ಹೆಚ್ಚಿಸಿರುವುದಾಗಿ ಪುಕ್ಕಟೆ ಪ್ರಚಾರ ತೆಗೆದುಕೊಂಡಿದ್ದರೂ ವಾಸ್ತವದಲ್ಲಿ ಮೊದಲಿನಿನಷ್ಟೆ ಅಥವಾ ಮೊದಲಿಗಿಂತಲೂ ಕಡಿಮೆ ಪಾಲನ್ನಷ್ಟೇ ರಾಜ್ಯಗಳು ಪಡೆದುಕೊಳ್ಳುತ್ತಿವೆ. ಆದರೆ ಮೋದಿ ಸರ್ಕಾರದ ಸರ್ವಾಧಿಕಾರ ಇರುವುದು ಇಂಥಾ ವಂಚನೆಯಲ್ಲಿ ಮಾತ್ರವಲ್ಲ.. ಬದಲಿಗೆ ರಾಜ್ಯಗಳನ್ನು ಶಾಸನಾತ್ಮಕವಾಗಿ ಗುಲಾಮಗಿರಿಗೆ ತಳ್ಳುತ್ತಿರುವುದರಲ್ಲಿ. ಮೋದಿ ಸರ್ಕಾರದಲ್ಲಿ ರಾಜ್ಯಗಳ ಪಾಲು ಮಾತ್ರ ಕಡಿಮೆಯಾಗುತ್ತಿರುವುದಲ್ಲ.. ಬದಲಿಗೆ ತಮ್ಮ ಪಾಲನ್ನು ಪಡೆದುಕೊಳ್ಳಲು ರಾಜ್ಯಗಳು ಮೋದಿ ಸರ್ಕಾರ ವಿಧಿಸುವ ಶರತ್ತುಗಳನ್ನೆಲಾ ಪಾಲಿಸಲೇ ಬೇಕಾಗಿದೆ. ಮೋದಿ ಸರ್ಕಾರ 15 ನೇ ಹಣಕಾಸು ಅಯೋಗಕ್ಕೆ ರಾಜ್ಯಗಳನ್ನು ಆರ್ಥಿಕ ಗುಲಾಮಗಿರಿಗೆ ತಳ್ಳುವಂತೆ ಮಾಡುವ ಹೊಸ ಸೂಚನೆಯೊಂದನ್ನು ನೀಡಿದೆ. ಅಯೋಗಕ್ಕೆ ಮಾರ್ಗದರ್ಶನ ಮಾಡುವ ಟರ್ಮ್ಸ್ ಆಫ್ ರೆಫರೆನ್ಸ್- TOR ನ 7(viii) ನೇ ಸೆಕ್ಷನ್ನಿನಲ್ಲಿ ಯಾವುದಾದರೂ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸೂಚನೆಗಳಿಗೆ ಭಿನ್ನವಾಗಿ ಜನಪ್ರಿಯ (ಪಾಪ್ಯುಲಿಸ್ಟ್) ಯೋಜನೆಗಳನ್ನು ಅನುಸರಿಸುತ್ತಿದ್ದರೆ ಆ ರಾಜ್ಯಗಳಿಗೆ ಅನುದಾನ ಕಡಿತ ಮಾಡುವ ಬಗೆಯನ್ನು ಸೂಚಿಸಲು ಕೋರಿದೆ. ಹಾಗೆಯೇ ಕೇಂದ್ರ ಅನುದಾನವನ್ನು ಪಡೆಯಲು ರಾಜ್ಯ ಸರ್ಕಾರಗಳು ಎಷ್ಟರಮಟ್ಟಿಗೆ ತಮ್ಮ ಬಂಡವಾಳ ವೆಚ್ಚವನ್ನು ಹೆಚ್ಚಿಸಿಕೊಂಡಿವೆ, ವಿದ್ಯುತ್ ಕ್ಷೇತ್ರದ ನಷ್ಟಗಳನ್ನು ಕಡಿತಗೊಳಿಸಿವೆ, ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವಂಥ ಕ್ರಮಗಳ ಮೂಲಕ ಎಷ್ಟರ ಮಟ್ಟಿಗೆ ಊಳಿತಾಯವನ್ನು ಸಾಧಿಸಿವೆ, ಎಷ್ಟರ ಮಟ್ಟಿಗೆ ಡಿಜಿಟಲ್ ಆರ್ಥಿಕತೆಯನ್ನು ಸಾಧಿಸಿವೆ ಎಂಬುವುಗಳನ್ನು ಮಾನದಂಡಗಳಾಗಿ ಇಟ್ಟುಕೊಳ್ಳಲು ಕೂಡಾ ಆದೇಶಿಸಿದೆ. ಅದೇ ರೀತಿ ಕೋವಿಡ್ ಸಂದರ್ಭದಲ್ಲಿ ರಾಜ್ಯಗಳ ಕೇಂದ್ರದಿಂದ ಬಿಕ್ಕಟ್ಟಿನ ಹೆಚ್ಚುವರಿ ಅನುದಾನವನ್ನು ಪಡೆದುಕೊಳ್ಳಲು ಹಾಗೂ ಬ್ಯಾಂಕುಗಳಿಂದ ಸಾರ್ವಭೌಮಿ ಗ್ಯಾರಂಟಿಯ ಸಾಲಗಳನ್ನು ಪಡೆದುಕೊಳ್ಳಲೂ ಸಹ ವಿದ್ಯುತ್ ವಿತರಣಾ ನಷ್ಟ ತಡೆ, ಎಪಿಎಂಸಿ ಕಾಯಿದೆ ತಿದ್ದುಪಡಿಗಳನ್ನು ಮಾಡುವುದು ಹಾಗೂ ಒಂದು ದೇಶ ಒಂದು ರೇಷನ್ ಕಾರ್ಡ್ ಪದ್ಧತಿಯನ್ನು ಜಾರಿ ಮಾಡಿರುವುದನ್ನು ಕಡ್ಡಾಯಗೊಳಿಸಿದೆ ಈ ಶರತ್ತುಗಳೆಲ್ಲವೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರ್ಪೊರೇಟ್ ವಲಯದ ಲಾಭಗಳನ್ನು ಹೆಚ್ಚಿಸುವ ಶರತ್ತುಗಳೇ ಆಗಿದ್ದು ಮೋದಿ ಸರ್ಕಾರ ಮೇಲಿನ ರೀತಿ ಈವರೆಗೆ ಪಾಲಿಸಿಕೊಂಡುಬಂದಿದ್ದ ಫೆಡರಲ್ ತತ್ವಗಳನ್ನೆಲ್ಲಾ ಗಾಳಿಗೆ ತೂರಿ ರಾಜ್ಯಗಳನ್ನು ಕಾರ್ಪೊರೇಟ್ ಗುಲಾಮಗಿರಿಗೆ ತಳ್ಳುವ ಸರ್ವಾಧಿಕಾರವನ್ನು ಹೇರುತ್ತಿದೆ. ರಾಜ್ಯಗಳಿಗೆ ಸೀಮಿತವಾದ ವಲಯಗಳ ಆಕ್ರಮಣ ಕೋವಿಡ್ ಸಂದರ್ಭದಲ್ಲಿ ಮೊದಲು ಸುಗ್ರೀವಾಜ್ನೆಯ ಮೂಲಕ ಆ ನಂತರ ಸಾಮ ಬೇಧ ನೀತಿಗಳ ಮೂಲಕ ಸಂಸತ್ತಿನಲ್ಲಿ ಮೋದಿಸರ್ಕಾರ ಜಾರಿ ಮಾಡಿದ ಮೂರೂ ಕೃಷಿ ನೀತಿಗಳೂ ಕೂಡಾ ರಾಜ್ಯಗಳ ಹಕ್ಕುಗಳ ಹರಣವಾಗಿದೆ. ಕೃಷಿಯೆಂಬುದು ಸಂಪೂರ್ಣವಾಗಿ ರಾಜ್ಯಗಳ ಪಟ್ಟಿಯಲ್ಲಿದ್ದು ಕೃಷಿ ಮಾರಾಟದ ಒಂದೆರಡು ಅಂಶಗಳನ್ನು ಮಾತ್ರ ಸಮವರ್ತಿ ಪಟ್ಟಿಯ 33ನೇ ಅಂಶದಲ್ಲಿ ಹೆಸರಿಸಲಾಗಿದೆ. ಕೇಂದ್ರಕ್ಕಂತೂ ಕೃಷಿಗೆ ಸಂಬಂಧ ಪಟ್ಟ ಯಾವುದೇ ಅಂಶಗಳ ಬಗ್ಗೆ ಏಕಪಕ್ಷೀಯವಾಗಿ ನೀತಿ ಅಥವಾ ಕಾಯಿದೆ ಮಾಡುವ ಅಧಿಕಾರವಿಲ್ಲ. ಆದರೂ ಕೇಂದ್ರ ಸರ್ಕಾರ ಕೃಷಿಯ ಹಿಡುವಳಿ ಸ್ವರೂಪ ಹಾಗೂ ಮಾರಾಟಗಳಲ್ಲಿ ಕಾರ್ಪೊರೇಟ್ ಪರ ನೀತಿಗಳನ್ನು ಏಕಪಕ್ಷೀಯವಾಗಿ ಜಾರಿಗೆ ತಂದು ರಾಜ್ಯಗಳನ್ನು ಹಾಗೂ ರೈತಾಪಿಯನ್ನು ಕಾರ್ಪೊರೇಟ್ ಗುಲಾಮಗಿರಿಗೆ ದೂಡಿದೆ. ಹಾಗೆಯೇ ಕಾರ್ಮಿಕ ಕಾನೂನು ಮತ್ತು ಕಾರ್ಮಿಕ ಹಿತರಕ್ಷಣೆಗಳು ರಾಜ್ಯಗಳ ಹಾಗೂ ರಾಜ್ಯ -ಕೇಂದ್ರಗಳ ಸಮಾಲೋಚನೆಗಳಿಗೊಳಪಟ್ಟ ಸಮವರ್ತಿ ಪಟ್ಟಿಗೆ ಸೇರಿರುವ ಬಾಬತ್ತಾಗಿದೆ. ಜಾಗತೀಕರಣ ನೀತಿಗಳು ಜಾರಿಯಾದಾಗಲಿಂದಲೂ ಕಾರ್ಮಿಕ ನೀತಿಗಳನ್ನು ಕಾರ್ಪೊರೇಟ್ ಪರವಾಗಿ ಬದಲಿಸಬಹುದಾದ ಸಂಖ್ಯಾಬಲ ಯಾವುದೇ ಪಕ್ಷಗಳಿಗಿರಲಿಲ್ಲ. ಈಗ ಅಂಥ ಸಂಕ್ಯಾಬಲವನ್ನು ಪಡೆದುಕೊಂಡಿರುವ ಬಿಜೆಪಿ ಸರ್ಕಾರ, ರಾಜ್ಯ ಸರ್ಕಾರಗಳು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸುವ ಮುನ್ನವೇ ಕಾರ್ಪೊರೇಟ್ ಪರವಾದ ಹಾಗೂ ಅತ್ಯಂತ ಕಾರ್ಮಿಕ ವಿರೋಧಿಯಾದ ಕಾಯಿದೆಗಳನ್ನು ವಿರೋಧಪಕ್ಷಗಳ ಅನುಪಸ್ಥಿತಿಯಲ್ಲಿ ಜಾರಿ ಮಾಡಿದೆ. ಏಳನೇ ಶೆಡ್ಯೂಲಿನ ಪ್ರಕಾರ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದೆ. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕೇಂದ್ರವು ರಾಜ್ಯಗಳೊಂದಿಗೆ ಸಲಹೆ ಮತ್ತು ಸಮಾಲೊಚನೆಯ ಮಾರ್ಗಗಳನ್ನು ಅನುಸರಿಸಬೇಕು. ಈವರೆಗೆ ಭಾರತದಲ್ಲಿ ಜಾರಿಯಾದ ಶಿಕ್ಷಣ ನೀತಿಗಳಾದ 1967ರ ಕೊಠಾರಿ ಅಯೋಗದ ಸಲಹೆಯಾಧಾರಿತ ನೀತಿ ಹಾಗೂ 1986ರಲ್ಲಿ ಜಾರಿಯಾದ ಶಿಕ್ಷಣ ನೀತಿಗಳು ರಾಜ್ಯಗಳೊಂದಿಗೆ ವಿಸ್ತೃತವಾದ ಸಮಾಲೋಚನೆಯ ನಂತರವೇ ಜಾರಿಯಾಗಿದ್ದವು. ಅದರೆ ಮೋದಿ ಸರ್ಕಾರ ಜಾರಿ ಮಾಡಿದ 2020ರ ಕಾರ್ಪೊರೇಟ್ ಹಾಗೂ ಮನುವಾದಿ ಪರ ಶಿಕ್ಷಣ ನೀತಿಯು ರಾಜ್ಯ ಸರ್ಕಾರಗಳ ಜೊತೆ ಯಾವುದೇ ಸಮಾಲೋಚನೆಯಿಲ್ಲದೆ ಜಾರಿಯಾಗಿವೆ. ವಿದ್ಯುತ್ತಿಗೆ ಸಂಬಂಧಪಟ್ಟ ಎಲ್ಲಾ ಮೂಲಭೂತ ಅಂಶಗಳು ಅದರಲ್ಲೂ ಅದರ ಹಂಚಿಕೆ ಹಾಗೂ ದರ ನಿಗದಿಗಳಿಗೆ ಸಂಬಂಧಪಟ್ಟ ಅಂಶಗಳಂತೂ ಸಂಪೂರ್ಣವಾಗಿ ರಾಜ್ಯದ ಸುಪರ್ದಿಗೆ ಸಂಬಂಧಪಟ್ಟ ವಿಷಯ. ಆದರೆ ಮೋದಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಮುಂದಿಟ್ಟಿರುವ ಹೊಸ ವಿದ್ಯುತ್ ನೀತಿಯು ವಿದ್ಯುತ್ ವಿತರಣೆ ಹಾಗೂ ದರ ನಿಗದಿ ಅಧಿಕಾರವನ್ನು ರಾಜ್ಯಗಳಿಂದ ಕಸಿದಿರುವುದಲ್ಲದೆ ವಿದ್ಯುತ್ ಕ್ಷೇತ್ರದಲ್ಲಿರುವ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭವಾಗುವ ರೀತಿ ಪರಿಷ್ಕರಿಸಿದೆ. ಇದು ಕೇವಲ ಕೆಲವು ಉದಾಹರಣೆಗಳಷ್ಟೇ. ಹಾಗೆಯೇ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಹಿಂದಿ ಮತ್ತು ಸಂಸ್ಕೃತ ಹೇರುವ ಶಿಕ್ಷಣ ಹಾಗೂ ಇತರ ಸಾಂಸ್ಕೃತಿಕ ನೀತಿಗಳು, ಪರಂಪರೆಯ ಹೆಸರಲ್ಲಿ ಕೇವಲ ಮನುಸ್ಮೃತಿಯ ಬ್ರಾಹ್ಮಣೀಯ ಮೇಲರಿಮೆ ಬಿತ್ತುವ ಮತ್ತು ಉಳಿದ ಪರಂಪರೆಯನ್ನು ಅನ್ಯಗೊಳಿಸುವ ಅಥವ ಅಧೀನಗೊಳಿಸುವ ಆರ್ಯಭಾರತ ಯೋಜನೆಯೂ ಸಹ ಈ ಮೋದಿ ಸರ್ವಾಧಿಕಾರದ ಇತರ ಆಯಾಮಗಳಾಗಿವೆ. ಹೀಗಾಗಿ ಇದು ಕೇವಲ ಭಾರತದ ಫ಼ೆಡರಲ್ ಸ್ವರೂಪದ ಮೇಲಿನ ಅಮೂರ್ತ ಧಾಳಿಯಲ್ಲ. ಅಥವಾ ಒಂದು ಪಕ್ಷವು ಅಧಿಕಾರವನ್ನು ತನ್ನಡಿಯಲ್ಲಿ ಕೇಂದ್ರೀಕರಿಸಿಕೊಳ್ಳುವ ಕೇಂದ್ರೀಕರಣದ ಪ್ರಶ್ನೆಯಲ್ಲ. ಬದಲಿಗೆ ಇದು ಭಾರತದ ದಮನಿತ ಜನರ ಬದುಕು ಮತ್ತು ಭವಿಷ್ಯಗಳ ಮೇಲೆ ಸ್ವಾತಂತ್ರ್ಯ ಹೋರಾಟದ ಆಶಯಗಳ ಮೇಲೆ, ಭಾರತದ ನಾಗರಿಕತೆಯ ಬಹುತ್ವದ ಅಸ್ಮಿತೆಯ ಮೇಲೆ ನಡೆದಿರುವ ದಾಳಿಯಾಗಿದೆ. ಭಾರತವನ್ನು ಕಾರ್ಪೊರೇಟ್ ಸರ್ವಾಧಿಕಾರಕ್ಕೆ ಒಳಪಡಿಸುವ ಹಾಗೂ ಬ್ರಾಹ್ಮಣೀಯ ಅಧಿಪತ್ಯಕ್ಕೆ ಒಗ್ಗಿಸುವ ಬೃಹತ್ ಫ್ಯಾಸಿಸ್ಟ್ ಕಾರ್ಯತಂತ್ರದ ಭಾಗವಾಗಿದೆ. ( ಇದು ಭಾರತದ ಫೆಡರಲ್ ಸ್ವರೂಪದ ಮೇಲೆ ಮೋದಿ ಸರಕಾರ ಮಾಡುತ್ತಿರುವ ದಾಳಿಯ ಬಗ್ಗೆ ವಾರ್ತಾಭಾರತಿ ಯಲ್ಲಿ ಪ್ರಕಟವಾಗಿರುವ ಅಂಕಣ ಬರಹದ ಪಠ್ಯ: ಶಿವಸುಂದರ್) ______________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement