Advertisement

'ಕೋವಿಡ್ ಕೊಲೆಗಳು ಮತ್ತು ಕಾರ್ಪೊರೇಟ್ ರಣಹದ್ದುಗಳು'

Advertisement

ಲೇಖನ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಇಂದು ಜಗತ್ತಿನ ಬಹುಪಾಲು ಪ್ರಜಾತಾಂತ್ರಿಕ ದೇಶಗಳು-ಕೆಲವು ಭಾರತಕ್ಕಿಂತ ಮುಂದುವರೆದವು-ಕೆಲವು ಭಾರತದಷ್ಟು ಮುಂದುವರೆಯದವು- ಕೋವಿಡ್ ಲಸಿಕೆಯ ಮೂಲಕ ತಮ್ಮ ತಮ್ಮ ದೇಶಗಳನ್ನು ಕೊರೋನಾ ಮುಕ್ತಗೊಳಿಸಿಕೊಳ್ಳುತ್ತಿದ್ದರೆ ಭಾರತದಲ್ಲಿ ಮಾತ್ರ ಆಕ್ಸಿಜನ್ ಕೊರತೆ, ಐಸಿಯು ಕೊರತೆ, ಚಿತಾಗಾರದ ಕೊರತೆಗಳಿಂದಾಗಿ ಕೋವಿಡ್ ಸಾವುಗಳು ಹೆಚ್ಚಾಗುತ್ತಿವೆ. ಸ್ವಾತಂತ್ರ್ಯಾ ನಂತರದಲ್ಲೇ ಅತ್ಯಂತ ದೊಡ್ಡ ಸರ್ಕಾರಿ ಪ್ರಾಯೋಜಿತ ದುರಂತಕ್ಕೆ ಭಾರತ ಬಲಿಯಾಗುತ್ತಿದೆ. ಏಕೆಂದರೆ, ಇಡಿ ಜಗತ್ತು ಎರಡನೇ ಕೋವಿಡ್ ಅಲೆಗೆ ೨೦೨೦ರ ಸೆಪ್ಟೆಂಬರ್ ತಿಂಗಳಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದರೆ, ಭಾರತ ಸರ್ಕಾರವು ಮೋದಿ ಮಹಾಶಯರ ನೇತೃತ್ವದಲ್ಲಿ ತೆರೆದಿದ್ದ ಕೋವಿಡ್ ಆಸ್ಪತ್ರೆಗಳನ್ನೆಲ್ಲಾ ಮುಚ್ಚಲು ಶುರುಮಾಡಿತ್ತು! ಕೋವಿಡ್ ಲಸಿಕೆಯನ್ನು ಕಂಡುಹಿಡಿದ ಮೇಲೆ ಜಗತ್ತಿನ ಬಹುಪಾಲು ದೇಶಗಳು ತಮ್ಮ ತಮ್ಮ ದೇಶದ ಜನಸಂಖ್ಯೆಗೆ ಬೇಕಿರುವಷ್ಟು ಲಸಿಕೆಯನ್ನು ಪಡೆಯಲು ಬಂಡವಾಳ ಹೂಡಿಕೆ, ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರೆ ಮೋದಿ ಸರ್ಕಾರ ಮಾತ್ರ ಜನರಿಗೆ ದೀಪ ಹಚ್ಚುವ, ಜಾಗಟೆ ಬಡಿಯುವ, ಸಗಣಿ ತಿನ್ನುವ ದೀಕ್ಷೆಯನ್ನು ಕೊಡುತ್ತಾ, ಕೊರೋನಾವನ್ನು ಕೋಮುವಾದೀಕರಿಸುತ್ತಾ, ದೇವರ ಮುಂದೆ ಕೊರೋನಾ ಆಟ ನಡೆಯುವುದಿಲ್ಲವೆಂದು ಕುಂಭ ಮೇಳ ನಡೆಸುತ್ತಾ, ಲಕ್ಷಾಂತರ ಜನರನ್ನು ಒಟ್ಟು ಸೇರಿಸಿ ಚುನಾವಣಾ ಜಾತ್ರೆ ನಡೆಸುತ್ತಾ... ಇವೆಲ್ಲವನ್ನೂ ಆತ್ಮರತಿಯಲ್ಲಿ ಸಂಭ್ರಮಿಸುತ್ತಾ ಆತ್ಮಘಾತುಕ ರಾಜಕಾರಣದಲ್ಲಿ ತೊಡಗಿಕೊಂಡಿತ್ತು. ಹೀಗಾಗಿಯೇ ಎರಡನೇ ಅಲೆ ಅಪ್ಪಳಿಸಿದಾಗ ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಜನರ ಮೇಲೆ ಲಾಕ್‌ಡೌನ್, ಎನ್‌ಎಸ್‌ಎ, ಆರೋಗ್ಯ ಎಮರ್ಜ್ನೆನ್ಸಿ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ! ಒಂದೆಡೆ ಕೆನಡಾ, ಅಮೆರಿಕಗಳು ಮಾತ್ರವಲ್ಲ ನೇಪಾಳ ಮತ್ತು ಬ್ರೆಜಿಲ ಕೂಡಾ ದೂರದೃಷ್ಟಿಯಿಂದ ಯೋಜನೆಗಳನ್ನು ರೂಪಿಸಿಕೊಂಡು ತಮ್ಮ ಜನಸಂಖ್ಯೆಗೆ ಬೇಕಾದಷ್ಟು ಲಸಿಕೆಗಳನ್ನು ಸಂಗ್ರಹಿಸಿಟ್ಟುಕೊಂಡಿವೆ. ಇದರಲ್ಲಿ ಅಮೆರಿಕ, ಕೆನಡಾ ಹಾಗೂ ಯೂರೋಪಿನ ದೇಶಗಳು ವ್ಯಾಕ್ಸಿನ್ ವಸಾಹತುವಾದಿ ಧೋರಣೆಯಿಂದ ಕೂಡಿಟ್ಟುಕೊಳ್ಳುತ್ತಿರುವುದು ಕೂಡಾ ನಿಜ. ಆದರೆ ಭಾರತ ಸರ್ಕಾರ ಮೋದಿಯವರ ನೇತೃತ್ವದಲ್ಲೇ ಕೋವಿಡ್ ಅನ್ನು ಗೆದ್ದೆವೆಂಬ ಸ್ವಭ್ರಾಂತ ಉನ್ಮಾದ ಹಾಗೂ ದ್ವೇಷ ರಾಜಕಾರಣದಲ್ಲಿ ತೊಡಗಿದ್ದರಿಂದ ಇಂದು ಭಾರತದ ಶೇ. ೭ ರಷ್ಟು ಜನರಿಗೂ ವ್ಯಾಕ್ಸಿನ್ ದೊರೆತಿಲ್ಲ. ಮುಂದಿನ ೧೨ ತಿಂಗಳವರೆಗೂ ಸಿಗುವ ಸಾಧ್ಯತೆಯೂ ಇಲ್ಲವಾಗಿದೆ. ಜೊತೆಗೆ ಇಂದು ಭಾರತ ಜಗತ್ತಿನಲ್ಲೇ ಎರಡನೇ ಅತಿ ಹೆಚ್ಚು ಕೋವಿಡ್ ಸೋಂಕಿತರಿರುವ ದೇಶವಾಗಿದೆ. ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಹಾಗೂ ನಿತ್ಯ ಸಾವಿನ ಸಂಕ್ಯೆಯಲ್ಲಿ ವಿಶ್ವದಲ್ಲೇ ಮೊದಲಿನ ಸ್ಥಾನದಲ್ಲಿದೆ. ಎರಡನೇ ಅಲೆಯಲ್ಲಿ ಅತಿ ಹೆಚ್ಚು ಅನಾಹುತಕ್ಕೆ ಗುರಿಯಾಗಿರುವುದು ಭಾರತವೇ ಆಗಿದೆ. ಮತ್ತು ಅದಕ್ಕೆ ಪ್ರಧಾನ ಕಾರಣ ಕೋವಿಡ್ ನಿಭಾವಣೆಯ ಬಗ್ಗೆ ಉಡಾಫ಼ೆ, ಆತ್ಮರತಿ, ಮೌಢ್ಯ, ಜನರ ಬಗ್ಗೆ ನಿಷ್ಕಾಳಜಿ, ದೂರದೃಷ್ಟಿಯ ಕೊರತೆ ಹಾಗೂ ಕಾರ್ಪೊರೇಟ್ಪರತೆಗಳೆ ಕಾರಣವೆಂಬುದು ಸ್ಪಷ್ಟವಾಗಿದೆ. ಆದ್ದರಿಂದಲೇ ಇಂದು ವಿಶ್ವದ ಹಲವಾರು ಪ್ರತಿಷ್ಟಿತ ಪತ್ರಿಕೆಗಳು 'ಮೋದಿಯನ್ನು ವಿಶ್ವಕ್ಕೆ ಕೋವಿಡ್ ಅನ್ನು ಹರಡುತ್ತಿರುವ ಸೂಪರ್ ಸ್ಪ್ರೆಡರ್' ಎಂದು ಬಣ್ಣಿಸುತ್ತಿದೆ. ಹೀಗಾಗಿ ಭಾರತದಲ್ಲಿ ಇಂದು ನಾವು ಅನುಭವಿಸುತ್ತಿರುವ ಕೋವಿಡ್ ಸಂಕಷ್ಟಗಳನ್ನು - ಸಾವುಗಳನ್ನು ಮೋದಿ ಸರ್ಕಾರ ನಡೆಸುತ್ತಿರುವ ಕೋವಿಡ್ ಕೊಲೆಗಳೆಂದೇ ಪರಿಗಣಿಸಬೇಕು. ಮೋದಿ ಸರ್ಕಾರವು ಕೋವಿಡ್ ಸಂದರ್ಭದಲ್ಲಿ ತೋರುತ್ತಿರುವುದು ಕೇವಲ ಉಡಾಫೆ ಮಾತ್ರವಲ್ಲ. ಮೋದಿ ಸರ್ಕಾರ ಕೋವಿಡ್ ಸಾವಿನ ಜಾತ್ರೆಯಲ್ಲೂ ಕಾರ್ಪೊರೇಟ್ ಕಂಪನಿಗಳಿಗೆ ದುಪ್ಪಟು ಲಾಭ ಮಾಡಿಕೊಡುವ ಕಾರ್ಪೊರೇಟ್ ದಲ್ಲಾಳಿಯೂ ಆಗಿದೆ. ಹಾಗೆಯೇ ಅದರ ಬಗ್ಗೆ ಪ್ರಶ್ನಿಸುವವರನ್ನು ಹತ್ತಿಕ್ಕುವ ಫ್ಯಾಸಿಸ್ಟ್ ಪರೋಪಜೀವಿ ಧೋರಣೆಯ ಕ್ರೌರ್ಯವನ್ನೂ ಪ್ರದರ್ಶಿಸುತ್ತಿದೆ. ಕಾರ್ಪೊರೇಟ್ ರಣಹದ್ದುಗಳಿಗೆ ಮೋದಿಯ ರೆಕ್ಕೆಗಳು ಹಾಗೆ ನೋಡಿದರೆ ವ್ಯಾಕ್ಸಿನ್ ಉತ್ಪಾದನೆಯಲ್ಲಿ ಹಾಗೂ ಅದನ್ನು ಜನರಿಗೆ ನೀಡುವಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕೇಂದ್ರ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದೆ. ಮತ್ತು ಅದರ ಸಂಶೋಧನೆಗೆ ಸರ್ಕಾರಿ ವೈಜ್ನಾನಿಕ ಸಂಸ್ಥೆಗಳು, ಉತ್ಪಾದನೆಗೆ ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ವಿತರಣೆಗೆ ಆಡಳಿತ ಯಂತ್ರಾಂಗಗಳು ಎಲ್ಲವೂ ಕಳೆದ ೭೦ ವರ್ಷಗಳಿಂದ ತಮ್ಮ ಕ್ಷಮತೆಯನ್ನು ಸಾಬೀತುಪಡಿಸಿವೆ. ಆದರೂ ಮೋದಿ ಸರ್ಕಾರ ಆತ್ಮ ನಿರ್ಭರತೆ ಇತ್ಯಾದಿ ಬೊಗಳೆಗಳನ್ನು ಬಿಡುತ್ತ ಕೋವಿಡ್ ವ್ಯಾಕ್ಸಿನ್ ಉತ್ಪಾದನೆಯನ್ನು ಭಾರತದ ಮೂರನೇ ಅತಿ ದೊಡ್ಡ ಶ್ರೀಮಂತ ಕಂಪನಿಯಾದ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಮತ್ತು ಭಾರತ್ ಬಯೋಟೆಕ್ (BB) ಎಂಬ ಕಂಪನಿಗೆ ವಹಿಸಿತು. ಇದರ ಅರ್ಥ ಇವೆರಡೂ ಕಂಪನಿಗಳು ತಮ್ಮದೇ ಬಂಡವಳ ಹೂಡಿ ಕೋವಿಡ್ ವೈರಸ್ ಅನ್ನು ಭಾರತದಲ್ಲೇ ಸ್ವತಂತ್ರವಾಗಿ ಸಂಶೋಧನೆ ಮಾಡಿ. ಉತ್ಪಾದಿಸುತ್ತಿದ್ದವು ಎಂದಲ್ಲ. SII ಆಧರಿಸಿರುವುದು ಇಂಗ್ಲೆಂಡಿನ ಆಸ್ಟ್ರಾ-ಜೆನಿಕಾ ಸಂಸ್ಥೆ ಸಂಶೋಧಿಸಿದ ಲಸಿಕೆಯನ್ನು.BB ಆಧರಿಸಿರುವುದು ಅಮೆರಿಕದ ಮೆಲಿಂದಾ ಗೇಟ್ಸ್ ನೀಡಿರುವ ಜ್ನಾನವನ್ನು. ಇದರಲ್ಲಿ ಬುರುಡೆ ಬಿಟ್ಟರೆ ಯಾವ ಆತ್ಮನಿರ್ಭರತೆಯೋ ಇಲ್ಲ. ಬೇಡಿಕೆಯಿದ್ದರೂ ಉತ್ಪಾದನಾ ಸಾಮರ್ಥ್ಯವಿಲ್ಲದ ಕಂಪನಿಗಳು ಇನ್ನು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರಬೇಕೆಂದರೆ ಭಾರತದ ವಯಸ್ಕ ಜನಸಂಖ್ಯೆಯ ಶೇ. ೬೦ ರಷ್ಟಾದರೂ ಅಂದರೆ ಜನಿಷ್ಟ ೭೫ ಕೋಟಿ ಜನರಿಗಾದರೂ ಲಸಿಕೆಯನ್ನು ಕೊಡಬೇಕು. ಅಂದರೆ ಭಾರತಕ್ಕೆ ಕನಿಷ್ಟ ೧೫೦ ಕೋಟಿ ಲಸಿಕೆಗಳು ಬೇಕು. ಎಷ್ಟು ಬೇಗ ಇದನ್ನು ಜನರಿಗೆ ಒದಗಿಸಲು ಸಾಧ್ಯವೋ ಅಷ್ಟು ಬೇಗ ಭಾರತ ಕೋವಿಡ್ ಮುಕ್ತವಾಗುತ್ತದೆ. ಆದರೆ ಭಾರತವನ್ನು ವಿರೋಧಪಕ್ಷ ಮುಕ್ತವಾಗುವುದನ್ನು ಮಾತ್ರ ಧೇಯವಾಗಿಸಿಕೊಂಡಿರುವ ಬಿಜೆಪಿ ಸರ್ಕಾರಕ್ಕೆ ಈ ಭಾರತವನ್ನು ಕೋವಿಡ್ ಮುಕ್ತ ಮಾಡುವ ದೂರಾಲೋಚನೆಯೇ ಇರಲಿಲ್ಲ. ಏಕೆಂದರೆ ಹುಸಿ ಆತ್ಮ ನಿರ್ಭರತೆಯ ಘೋಷಣೆಯ ಮರೆಯಲ್ಲಿ ಜಗತ್ತಿನ ಬೇರೆ ಯಾವ ದೇಶಗಳಿಂದಲೂ ಕೋವಿಡ್ ಲಸಿಕೆಯನ್ನು ತರಿಸುವ ಆಲೋಚನೆಯನ್ನು ಮಾಡದ ಅಥವಾ ಸರ್ಕಾರದ್ದೇ ಸಂಸ್ಥೆಗಳ ಮೂಲಕ ಲಸಿಕೆಯನ್ನು ಉತ್ಪಾದಿಸುವ ಯೋಜನೆಯನ್ನೂ ಮಾಡದ ಮೋದಿ ಸರ್ಕಾರ ಇಡೀ ಲಸಿಕೋತ್ಪಾದನೆಯನ್ನೂ ಹಾಗೂ ಭಾರತದ ಭವಿಷ್ಯವನ್ನು SII ಮತ್ತು BB ಎಂಬ ಎರಡು ಖಾಸಗಿ ಕಂಪನಿಗಳ ಏಕಸ್ವಾಮ್ಯಕ್ಕೆ ಬಿಟ್ಟುಕೊಟ್ಟಿತು. ಆದರೆ ಈ ಕಂಪನಿಗಳ ಉತ್ಪಾದನಾ ಸಾಮರ್ಥ್ಯವಾದರೂ ಎಷ್ಟು? SII ಕಂಪನಿಗೆ ತಿಂಗಳಿಗೆ ೬ ಕೋಟಿ ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಮಾತ್ರವಿದೆ. BB ಗೆ ತಿಂಗಳಿಗೆ ಹೆಚ್ಚೆಂದರೆ ಒಂದು ಕೋಟಿ ಲಸಿಕೆಗಳು ಮಾತ್ರ ಉತ್ಪಾದಿಸಬಲ್ಲವು. ಅಂದರೆ ಇವುಗಳ ಜಂಟಿ ಉತ್ಪಾದಿಸುವ ಸಾಮರ್ಥ್ಯ ತಿಂಗಳಿಗೆ ೮ ಕೋಟಿ. ಈಗ ಅವು ಒಟ್ಟು ತಿಂಗಳಿಗೆ ೧೧ ಕೋಟಿ ಉತ್ಪಾದಿಸಬಲ್ಲವು ಎನ್ನುತ್ತಿವೆ. ಆಗಲೂ ಭಾರತದ ಶೇ. ೬೦ರಷ್ಟು ಜನರಿಗೆ ಬೇಕಾದ ಲಸಿಕೆ ಪೂರೈಸಲು ೧೫ ತಿಂಗಳು ಬೇಕಾಗುತ್ತದೆ. ನವಲಸಿಕೆ ನೀತಿ- ಭಾರತೀಯರ ಪ್ರಾಣಗಳ ಹರಾಜು ಗಾಯದ ಮೇಲೆ ಬರೆ ಹಾಕುವಂತೆ ಮೊನ್ನೆ ಮೋದಿ ಸರ್ಕಾರ ಕೋವಿಡ್ ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಿಕೊಳ್ಳಲು ಈ ಎರಡು ಕಂಪನಿಗಳಿಗೆ ಪರವಾನಗಿ ಕೊಟ್ಟಿರುವುದಲ್ಲದೆ, ರಾಜ್ಯ ಸರ್ಕಾರಗಳು ಕೂಡಾ ಈ ಎರಡು ಮೋದಿಯ ಕ್ರೋನಿ ಶಿಶು ಕಂಪನಿಗಳು ನಿಗದಿ ಮಾಡಿದ ದರಕ್ಕೆ ಲಸಿಕೆಯನ್ನು ಮುಕ್ತ ಮಾರುಕಟ್ಟೆಯಿಂದ ಕೊಂಡುಕೊಳಬೇಕೆಂಬ ಅತ್ಯಂತ ಜನದ್ರೋಹಿ, ಹಾಗೂ ಕಾರ್ಪೊರೇಟ್ ಗುಲಾಮಿ ನೀತಿಯನ್ನು ಘೋಷಿಸಿದೆ. ಅದರ ಪ್ರಕಾರ : -ಇನ್ನುಮುಂದೆ SII ತನ್ನ ಕೋವಿಶೀಲ್ಡ್ ಲಸಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಈ ಹಿಂದೆ ಕೊಡುತ್ತಿದ್ದಂತೆ ೧೫೦ ರೂಗಳ ಬದಲಿಗೆ ೪೦೦ ರೂ ಗಳಿಗೆ ಮಾರುತ್ತದೆ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ ೬೦೦ ರೂ ಗಳಿಗೆ ಮಾರುತ್ತದೆ. ಹಾಗೂ ಕ್ರಮೇಣ ಅದನ್ನು ೧೦೦೦ ರೂ ಗಳಿಗೆ ಏರಿಸುವ ಇರಾದೆಯನ್ನು ಹೊಂದಿದೆ. -BB ತನ್ನ ಕೋವ್ಯಾಕ್ಸಿನ್ ದರವನ್ನು ರಾಜ್ಯ ಸರ್ಕಾರಗಳಿಗೆ ೬೦೦ ರೂ, ಹಾಗೂ ಖಾಸಗಿ ಆಸ್ಪತ್ರೆಗಳಿಗೆ ೧೨೦೦ ರೂ ಗಳ ದರವನ್ನು ನಿಗದಿ ಮಾಡಿದೆ. -ಇದರ ಜೊತೆಗೆ ನಿನ್ನೆ ಕೇಂದ್ರ ಸರ್ಕಾರದ ಆರೋಗ್ಯ ಕಾರ್ಯದರ್ಶಿ ನೀಡಿರುವ ಮಾರ್ಗದರ್ಶಿ ಸೂತ್ರದ ಪ್ರಕಾರ ಮೇ ೧ ರಿಂದ ಲಸಿಕೆ ಪಡೆಯಬಲ್ಲ ೧೮ -೪೫ ರ ನಡುವಿನ ವಯೋಮಾನದವರು ಕಡ್ಡಾಯವಾಗಿ ಖಾಸಗಿ ಆಸ್ಪತ್ರೆಗಳಲ್ಲೇ ಲಸಿಕೆ ಪಡೆದುಕೊಳ್ಳಬೇಕು. ಹಾಗೂ ಭಾರತ ಸರ್ಕಾರ ೪೫ ವಯಸ್ಸಿನ ಮೇಲ್ಪಟ್ಟವರಿಗೆ ಮಾತ್ರ ಉಚಿತ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗಳ ಮೂಲಕ ದೊರಕಿಸುತ್ತದೆ. ಅಷ್ಟು ಮಾತ್ರವಲ್ಲ. - ಇನ್ನುಮುಂದೆ ರಾಜ್ಯ ಸರ್ಕಾರಗಳು ನೇರವಾಗಿ ಆ ಎರಡು ಕಂಪನಿಗಳೊಂದಿಗೆ ವ್ಯವಹಾರ ನಡೆಸಿ ತಮ್ಮ ಲಸಿಕೆಗಳನ್ನು ಪಡೆದುಕೊಳ್ಳಬೇಕು. ಆದರೆ, ಯಾವ ರಾಜ್ಯಗಳಿಗೆ ಎಷ್ಟು ಕೊಡಲು ಸಾಧ್ಯ ಎಂಬುದನ್ನು ಆ ಎರಡು ಕಂಪನಿಗಳು ತಮ್ಮ ಅದ್ಯತೆಯ ಮೇರೆಗೆ ನಿಗದಿ ಮಾಡುತ್ತವೆ! ಇದರ ಪರಿಣಾಮವೇನು? ಮೊದಲನೆಯದಾಗಿ ಯಾವ ರಾಜ್ಯಗಳು ಹೆಚ್ಚು ಹಣವನ್ನು ಹೆಚ್ಚು ಬೇಗ ಕಂಪನಿಗಳಿಗೆ ಒದಗಿಸುತ್ತವೋ ಮತ್ತು ಯಾವ ರಾಜ್ಯಗಳಿಗೆ ಲಸಿಕೆ ಸರಬರಜು ಮಾಡಲು ಸಾಗಟ ಕಷ್ಟವಿಲ್ಲವೋ ಆ ರಾಜ್ಯಗಳಿಗೆ ಕಂಪನಿಗಳು ಮೊದಲು ಲಸಿಕೆಯನ್ನು ಒದಗಿಸುತ್ತವೆ. ಈಗಾಗಲೇ ಎರಡು ಕಂಪನಿಗಳು ಲಸಿಕೆಗಳನ್ನು ಪೂರ್ವ ಭಾರತಕ್ಕಿಂತ ದಕ್ಷಿಣ ಭಾರತದ ರಾಜ್ಯಗಳಿಗೆ ತ್ವರಿತವಾಗಿ ಕಳಿಸಲು ಆಸಕ್ತಿ ತೋರಿವೆ! ಎರಡನೆಯದಾಗಿ ೧೮- ೪೫ ವಯೋಮಾನದವರೆಲ್ಲರೂ ಎರಡು ಲಸಿಕೆಯನ್ನು ಪಡೆಯಲು ಏನಿಲ್ಲವೆಂದರೂ ೧೨೦೦-೨೦೦೦ ರೂ ಪಾವತಿ ಮಾಡಬೇಕು. ಇದು ಈಗಾಗಲೇ ಲಾಕ್ ಡೌನ್ ಮತ್ತು ಆರ್ಥಿಕ ಕುಸಿತಗಳಿಂದ ಎಲ್ಲವನ್ನೂ ಕಳೆದುಕೊಂಡಿರುವ ಈ ದೇಶದ ಶೇ. ೭೦ ರಷ್ಟು ಬಡ-ಮಧ್ಯಮ ವರ್ಗಗಳಿಗೆ ಇನ್ನಷ್ಟು ಭಾರವಾಗುವುದಿಲ್ಲವೇ? ಲಸಿಕೆಯನ್ನು ಪಡೆದುಕೊಳ್ಳುವುದು ಪರೋಕ್ಷವಾಗಿ ಕಡ್ಡಾಯವಾದಾಗ ಬೇರೆ ಅಗತ್ಯ ವೆಚ್ಚಗಳಿಂದ ಕಿತ್ತು ಈ ಕಂಪನಿಗಳ ಲಾಭಕ್ಕೆ ತರಬೇಕಾಗುತ್ತದೆ. ಬಜೆಟ್ಟಿನಲ್ಲಿ ಘೋಷಿಸಿದ ೩೫,೦೦೦ ಕೋಟಿ ಏನಾಯಿತು? ಆದರೆ ಕೆಲವೆ ತಿಂಗಳ ಹಿಂದೆ ಮಂಡಿಸಿದ ಬಜೆಟ್ಟಿನಲ್ಲಿ ದೇಶದ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ಒದಗಿಸಲು ೩೫,೦೦೦ ಕೋಟಿಯನ್ನು ತೆಗೆದಿರಿಸಲಾಗಿತ್ತು. ಒಂದು ಲಸಿಕೆಗೆ ೧೫೦ ರೂ. ಎಂದಿಟ್ಟುಕೊಂಡರೂ ಈ ದೇಶದ ೭೦ ಕೋಟಿ ಜನಗಳಿಗಲ್ಲ. ೧೧೬ ಕೋಟಿ ಜನರಿಗೆ ಅದರಿಂದ ಲಸಿಕೆಯನ್ನು ಉಚಿತವಾಗಿ ಒದಗಿಸಬಹುದಿತ್ತು. ಈಗ ಸರ್ಕಾರ ೪೫ ವಯಸ್ಸಿನ ಮೇಲ್ಪಟ್ಟವರಿಗೆ ಮಾತ್ರ ಉಚಿತವಾಗಿ ಲಸಿಕೆ ಎನ್ನುತ್ತಿದೆ. ೨೦೧೯ ರ ಅದಾಜಿನ ಪ್ರಕಾರ ೪೫ ವಯಸ್ಸಿನ ಮೇಲ್ಪಟ್ಟವರ ಸಂಕ್ಯೆ ೨೬ ಕೋಟಿ. ಅಷ್ಟು ಜನರಿಗೆ ಉಚಿತವಾಗಿ ಲಸಿಕೆ ಹಂಚಿದರೂ ವೆಚ್ಚವಾಗುವುದು ಕೇವಲ ೧೦, ೦೦೦ ಕೋಟಿಗಳು ಮಾತ್ರ. ಆಗಲೂ ಬಕೆಟ್ಟಿನಲ್ಲಿ ಎತ್ತಿಟ್ಟ ಮೊತ್ತದಲ್ಲಿ ೨೫, ೦೦೦ ಕೋಟಿ ಬಾಕಿ ಉಳಿಯುತ್ತದೆ. ರಾಜ್ಯ ಸರ್ಕಾರಗಳು ೪೦೦ ಕೊಟ್ತು ಖರೀದಿಸಲು ಕೇಂದ್ರವು ಇದೇ ಮೊತ್ತವನ್ನು ಅನುದಾನ ನೀಡಿದರೂ ೧೮ ವಯಸ್ಸಿನ ಮೇಲ್ಪಟ್ಟ ಅಥವಾ ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಹಾಗೂ ಸೌಲಭ್ಯರಹಿತ ಎಲ್ಲಾ ಜನವರ್ಗಗಳಿಗೂ ಉಚಿತವಾಗಿ ಲಸಿಕೆ ಕೊಡಬಹುದು. ಆದರೂ ಕೇಂದ್ರ ಸರ್ಕಾರ ಏಕೆ ಬಜೆಟ್ಟಿನಲ್ಲಿ ಎತ್ತಿಟ್ಟ ಹಣದ ಬಗ್ಗೆ ಬಾಯಿ ಬಿಚ್ಚುತ್ತಿಲ್ಲ? ಉತ್ತರ ಸರಳ ಈ ಭಾಬತ್ತಿನಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ಸೂಪರ್ ಪ್ರಾಫಿಟ್ ಇಲ್ಲ. ಸೂಪರ್ ಪ್ರಾಫಿಟ್ಟಿನ ಎಮರ್ಜೆನ್ಸಿ ! ಹಾಗೆ ನೋಡಿದರೆ ಈ ಕೋವಿಷೀಲ್ಡ್ ಲಸಿಕೆಯ ಮೂಲ ಸಂಶೋಧಕರಾದ "ಅಸ್ಟ್ರಾ ಜೇನಿಕಾ" ಸಂಸ್ಥೆ ಯುರೋಪಿಗೆ ಹಾಗು ಇತರ ದೇಶಗಳಿಗೆ ವ್ಯಾಕ್ಸಿನ್ ಅನ್ನು ೨. ೫ ಡಾಲರ್- ೫ ಡಾಲರ್ ಅಂದರೆ ೨೦೦-೩೦೦ ರೂಗಳಿಗೆ ಸರಬರಾಜು ಮಾಡುತ್ತಿದೆ. ಅಷ್ಟು ಮಾತ್ರವಲ್ಲ ಇತರ ದೇಶಗಳಿಗೆ ರಪ್ತಾಗುತ್ತಿರುವ ಕೋವಿಷೀಲ್ಡ್ ದರವನ್ನು ಸಹ SII ೩೦0 ರು ಗಿಂತ ಹೆಚ್ಚು ನಿಗದಿ ಮಾಡಿಲ್ಲ. ಆದರೆ ಭಾರತದಲ್ಲಿ ಮಾತ್ರ ಮೋದಿ ಸರ್ಕಾರದ ಕೃಪಾ ಕಟಾಕ್ಷ ಇರುವುದರಿಂದ ೬೦೦ ರೂ. ನಿಗದಿ ಮಾಡುವ ಗೈರತ್ತು ತೋರುತ್ತಿದೆ. ಇದಕ್ಕೆ SII ಮಾಲೀಕ ಆದಾರ್ ಪೂನಾವಾಲ ನೀಡಿರುವ ಕಾರಣ ದೊಡ್ಡ ಪ್ರಮಾಣದ ಉತ್ಪಾದನೆ ಮಾಡಲು ಕಾರ್ಖಾನೆಯ ಉತ್ಪಾದಕ ಸಾಮರ್ಥ್ಯ ಹೆಚ್ಚಿಸಬೇಕು. ಅದಕ್ಕೆ ಬೇಕಿರುವಷ್ಟು ಬಂಡವಾಳ ಕ್ರೂಢೀಕರಿಸಬೇಕೆಂದರೆ ಇಷ್ಟು ದರವನ್ನು ಇಡಲೇ ಬೇಕು ಇತ್ಯಾದಿ.. ಆದರೆ ಆತ ಮುಚ್ಚಿಡುತ್ತಿರುವ ವಾಸ್ತವ ಸಂಗತಿಯೇನೆಂದರೆ ಭಾರತ ಸರ್ಕಾರವು ತಿಂಗಳ ಹಿಂದೆಯೇ SII ನ ಉತ್ಪಾದಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ೩೦೦೦ ಕೋಟಿ ಯನ್ನು ಮತ್ತು ಕೊವಾಕ್ಸಿನ್ ಉತ್ಪಾದಿಸುವ ಭಾರತ್ ಬಯೋಟೆಕ್ ಕಂಪನಿಗೆ ೧೫೦೦ ಕೋಟಿ ಯನ್ನು ಯಾವುದೇ ಬ್ಯಾಂಕ್ ಗ್ಯಾರಂಟಿಯಲ್ಲದೆ ಒದಗಿಸಿದೆ...! ಅದಕ್ಕೂ ಮುಂಚೆ ಅಂದರೆ ೨೦೨೦ರ ಸೆಪ್ಟೆಂಬರ್ ವೇಳೆಗಾಗಲೇ SII ತನ್ನ್ ಉತ್ಪಾದಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅಂತರರಾಷ್ಟೀಯ ವ್ಯಾಕ್ಸಿನೇಷನ್ ಮತ್ತು ಇಮ್ಯುನೈಸೇಷನ್ ಮೈತ್ರಿಕೂಟವಾದ GAVI (Global Alliance For Vaccination and Immunaisation- ಇದು ವಿಶ್ವ ಆರೋಗ್ಯ ಸಂಸ್ಥೆಯನ್ನು ಒಳಗೊಂಡಂತೆ ಪ್ರಪಂಚದ ಶ್ರೀಮಂತ ದೇಶಗಳ ಸರ್ಕಾರಗಳು ಹಾಗೂ ಕಾರ್ಪೊರೇಟ್ ಚಾರಿಟಿ ಸಂಸ್ಥೆಗಳು ಮಾಡಿಕೊಂಡಿರುವ ಒಕ್ಕೂಟ) ೩೦೦ ಮಿಲ್ಯನ್ ಡಾಲರ್ ಅಂದರೆ ೨೭೦೦ ಕೋಟಿ ರೂ. ಗಳನ್ನು ನೀಡಿತ್ತು. ಅಷ್ಟು ಮಾತ್ರವಲ್ಲ... ಆದಾರ್ ಪೂನಾವಾಲ್ NDTV ಗೆ ನೀಡಿದ ಸಂದರ್ಶನ ಒಂದರಲ್ಲಿ ಕೇಂದ್ರಕ್ಕೆ ೧೫೦ ರೂ.ಗಳಿಗೆ ಸರಬರಾಜು ಮಾಡಿದರೂ ತನಗೆ ಲಾಭವಿದೆಯೆಂದೂ... ಆದರೆ ತನಗೆ ಬೇಕಿರುವುದು ಕೇವಲ ಪ್ರಾಫಿಟ್ ಅಲ್ಲ "ಸೂಪರ್ ಪ್ರಾಫಿಟ್" ಎಂದು ಸ್ಪಷ್ಟ ಪಡಿಸಿದ್ದಾನೆ. ಆದ್ದರಿಂದಲೇ, ಕೆಲವು ತಿಂಗಳನಂತರ ವ್ಯಾಕ್ಸಿನ್ ದರವನ್ನು ೧೨೦೦ ರೂ. ಗೆ ಮಾರುವುದಾಗಿಯೂ ಘೋಷಿಸಿದ್ದಾನೆ. ( https://youtu.be/T6gSk0GsQE4- ಈ ವಿಡಿಯೋವನ್ನು ಪೂರ್ತಿ ನೋಡುವ ವ್ಯವಧಾನವಿಲ್ಲದಿದ್ದರೆ ೫.೦೧ನೇ ನಿಮಿಷದಿಂದ ೬.೨೮ ನಿಮಿಷದವರೆಗೆ ಕೇಳಿಸಿಕೊಳ್ಳಿ) ಒಂದು ವ್ಯಾಕ್ಸಿನ್ ಗೆ ಪೂನಾವಾಲನ ಲೆಕ್ಕಾಚಾರದಲ್ಲೇ ೧೫೦ ರೂ ಗೆ ಮಾರಿದರು ಲಾಭವಿದೆ ಎಂದಾದಾಗ ೧೦೦-೧೨೫ರೂ ಮಾತ್ರ ಅದರ ಉತ್ಪಾದನಾ ವೆಚ್ಚ ಎಂದು ಅಂದಾಜು ಮಾಡಬಹುದು. ಈಗ ಒಂದು ವ್ಯಾಕ್ಸಿನ್ ಅನ್ನು ೪೦೦-೬೦೦ ರು ಗಳಿಗೆ ಮಾರಿದರೆ ಸರಾಸರಿ ೫೦೦ ರು ಲಾಭ ಎಂದಿಟ್ಟುಕೊಂಡರೆ ವ್ಯಾಕ್ಸಿನ್ ವ್ಯವಹಾರದಲ್ಲಿ ಈ ಕಂಪನಿಗಳಿಗೆ ೭೫೦೦೦ ಕೋಟಿ ಲಾಭವಿದೆ... ಈ ಲಾಭದ ಉರಿಗೆ ಸಿಕ್ಕು ಈಗಾಗಲೇ ದಿನಕ್ಕೆ ಸಾವಿರಾರು ಜನರು ಸುಟ್ಟು ಬೂದಿಯಾಗುತ್ತಿದ್ದಾರೆ.. ನಮ್ಮ ಪ್ರಧಾನಿಗಳು ಸುಟ್ಟ ಹೆಣದ ಬೆಂಕಿಯ ಮುಂದೆ ಭವ್ಯ ಭಾರತದ ಬೆಳಕಿನ ಚಂದವನ್ನು ಬಣ್ಣಿಸುತ್ತಿದ್ದಾರೆ.. ಇದರ ಜೊತೆಗೆ ಆರೆಸ್ಸೆಸ್ ನ ದತ್ತಾತ್ರೇಯ ಹೊಸಬಾಳೆ ಸರ್ಕಾರದ ಮತ್ತು ಕಂಪನಿಗಳ ಲಾಭಕೋರತನವನ್ನು ಪ್ರಶ್ನಿಸುವುದು ಹಾಗು ಕೋವಿಡ್ ಸಾವುಗಳಿಗಾಗಿ ಅತ್ತು ದೇಶದ ಮಾನ ಹರಾಜು ಮಾಡುವುದು ಭಾರತ ವಿರೋಧಿ ಕುತಂತ್ರವೆಂದು ಬಣ್ಣಿಸಿದ್ದಾರೆ.. ಈ ನಡುವೆ ಆರೋಗ್ಯ ಎಮರ್ಜೆನ್ಸಿಯ ಮಾತು ಚಾಲ್ತಿಯಲ್ಲಿದೆ. ಸರ್ಕಾರ ತನ್ನ ಆ ಎಮರ್ಜೆನ್ಸಿ ಅಧಿಕಾರವನ್ನುಬಳಸಿಕೊಂಡು ಭಾರತ್ ಬಯೋಟೆಕ್ ಹಾಗು SII ಅನ್ನು ರಾಷ್ಟ್ರೀಕರಿಸಬಹುದು ..ಕನಿಷ್ಟ ಪಕ್ಷ ಸರಳ ಲಾಭವನ್ನು ಇಟ್ಟುಕೊಂಡು ೧೫೦ ರೂಗಳಿಗೇ ಮಾರಲು ಕಡ್ಡಾಯಮಾಡಬಹುದು... ಅಥವಾ ದತ್ತಾತ್ರೇಯ ಹೊಸಬಾಳೆ ಅವರ ಸೂಚನೆಯಂತೆ ಜನರ ಬಾಯಿಯನ್ನೂ, ಬದುಕನ್ನೂ ಲಾಕ್ ಡೌನ್ ಮಾಡಬಹುದು.. ಸಬ್ ಚಂಗಾಸಿ ಎಂದು ೮ ಗಂಟೆ ಭಾಷಣದಲ್ಲಿ ಘೋಷಿಸಬಹುದು ... - ಶಿವಸುಂದರ್ __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement