Advertisement

ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?

Advertisement

ಲೇಖನ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಕಳೆದ ವಾರ ಭಾರತದ ಬಹುದೊಡ್ಡ ಸಹಕಾರಿ ಗೊಬ್ಬರ ಉತ್ಪಾದಕ ಸಂಸ್ಥೆಯಾದ ಇಫ಼್ಕೋ (IFFCO), ಯೂರಿಯಾ ಹೊರತುಪಡಿಸಿ ಮಿಕ್ಕ ಗೊಬ್ಬರಗಳ MRP ಬೆಲೆಯನ್ನು ಶೇ.45-58ರಷ್ಟು ಏರಿಕೆ ಮಾಡಿತು. ಉದಾಹರಣೆಗೆ 50kg ಯ DPA ಗೊಬ್ಬರದ MRP ಬೆಲೆ 1200 ರೂ. ಇದ್ದದ್ದು 1900 ರೂ ಗೆ ಏರಿಸಲ್ಪಟ್ಟಿದ್ದರೆ ವಿವಿಧ ಬಗೆಯ N-P-K ಮಿಶ್ರಣದ ಗೊಬ್ಬರ ಬೆಲೆಗಳೂ ಕೊಡ್ಡಾ 50 ಕೆಜಿ ಬ್ಯಾಗಿಗೆ ಸರಸರಿ 690-800ರೂ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ಏನಿಲ್ಲವೆಂದರೂ ಒಂದು ಎಕರೆಗೆ ರೈತರು ಮಾಡಬೇಕಾಗಿರುವ ಸಾರಾಸರಿ ವೆಚ್ಚ 8-10,000ರೂ ಹೆಚ್ಚಾಗಲಿದೆ. ಆದರೆ, ಪ. ಬಂಗಾಳ, ತಮಿಳುನಾಡು, ಅಸ್ಸಾಮಿನಂಥ ಕೃಷಿ ಪ್ರಧಾನ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಘೋಷಿಸಲಾಗಿರುವ ಈ ಬೆಲೆ ಏರಿಕೆಯಿಂದಾಗಿ ಕಸಿವಿಸಿಗೊಂಡ ಮೋದಿ ಸರ್ಕಾರ ಕೂಡಲೇ ಗೊಬ್ಬರ ಉತ್ಪಾದಕ ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದರಿಂದ ಗೊಬ್ಬರ ಕಂಪನಿಗಳು ತಾತ್ಕಾಲಿಕವಾಗಿ ಬೆಲೆ ಏರಿಕೆಯನ್ನು ತಡೆಹಿಡಿದು ಹಳೆ ದಾಸ್ತಾನನ್ನು ಹಳೆ ದರದಲ್ಲೇ ಮಾರಾಟ ಮಾದುವುದಾಗಿ ಹೇಳಿವೆ. ಅರ್ಥಾತ್ ಮುಂದಿನ ವರ್ಷದಿಂದ ಹೊಸ ದಾಸ್ತಾನನನ್ನು ಹೊಸ ಬೆಲೆಗೇ ಮಾರುವ ಸೂಚನೆ ನೀಡಿವೆ! ಹೀಗಾಗಿ ಮೇ -2 ರಂದು ಚುನಾವಣ ಫಲಿತಾಂಶ ಬಂದಮೇಲೆ ಚುನಾವಣ ಕಾರಣಕ್ಕಾಗಿ ಕಳೆದ ಎರಡು ತಿಂಗಳಿಂದ ತಡೆಹಿಡಿಯಲಾಗಿರುವ ಪೆಟ್ರೋಲ್-ಡೀಸೆಲ್- ಗ್ಯಾಸ್ ಬೆಲೆ ಏರಿಕೆ, ಸಣ್ಣ ಉಳಿತಾಯದ ಮೇಲಿನ ಬಡ್ಡಿದರ ಕಡಿತದಂತೆ ಗೊಬ್ಬರ ಬೆಲೆ ಏರಿಕೆಯ ತಾತ್ಕಾಲಿಕ ತಡೆಯೂ ತೆರವಾಗಲಿದೆ. ಏಕೆಂದರೆ ಇದು ಗೊಬ್ಬರ ಕಂಪನಿಗಳು ದಿಢೀರನೆ ತೆಗೆದುಕೊಂಡ ತೀರ್ಮಾನವಲ್ಲ. ಬದಲಿಗೆ ಗೊಬ್ಬರ ಸಬ್ಸೀದಿಯನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ರೈತವಿರೋಧಿ ನೀತಿಗಳತಾರ್ಕಿಕ ಪರಿಣಾಮವೇ ಆಗಿದೆ. ಇದು ಗೊಬ್ಬರ ಸಬ್ಸಿಡಿ ಹಿಂತೆಗೆತ ಯೋಜನೆ 1992ರ ಭೋಸ್ಲೆ ಸಮಿತಿಯ ಪರಿಣಾಮವಾಗಿ ಪ್ರಾರಂಭವಾಗಿದ್ದು ಮೋದಿ ಸರ್ಕಾರದಲ್ಲಿ ತೀವ್ರ ಆಕ್ರಮಣಕಾರಿ ಸ್ವರೂಪವನ್ನು ಪಡೆಯುತ್ತಿದೆ. ಹಸಿರುಕ್ರಾಂತಿ-ಬೆಳೆಯೂ ಹೆಚ್ಚಿತು, ಗೊಬ್ಬರದ ಹೊರೆಯೂ ಹೆಚ್ಚಿತು.. 1960ರ ದಶಕದಲ್ಲಿ ಪ್ರಾರಂಭವಾದ ಹಸಿರುಕ್ರಾಂತಿಯ ಭಾಗವಾಗಿ ಭಾರತದಲ್ಲಿ ಉತ್ಪಾದನೆ ಹೆಚ್ಚಿದರೂ ಕೃಷಿಯ ಪದ್ಧತಿಗಳು ಮತ್ತು ವ್ಯವಸ್ಥೆಗಳು ಸಂಪೂರ್ಣ ಬದಲಾದವು ಹಾಗೂ ರೈತರ ಪರಾವಲಂಬನೆಗಳು ಹೆಚ್ಚಾದವು. ದೀರ್ಘಕಾಲೀನ ಪಾರಿಸರಿಕ ಪರಿಣಾಮಗಳ ಚಿಂತನೆಯೇ ಇಲ್ಲದೆ ಭಾರತದ ಕೃಷಿಯ ರಸಗೊಬ್ಬರದ ಅವಲಂಬನೆಯೂ ಹೆಚ್ಚಿತು. ಹೆಚ್ಚಿನ ಉತ್ಪಾದನೆ ಸಾಧ್ಯವಾಗಬೇಕೆಂದರೆ ಮಣ್ಣಿಗೆ ಕೃತಕ ರಾಸಾಯನಿಕ ಗೊಬ್ಬರಗಳಾದ ನೈಟ್ರೋಜನ್ (ಸಾರಜನಕ-N), ಫಾಸ್ಫೇಟ್ (P), ಪೊಟಾಷ್ (K), ಸಲ್ಫೇಟ್ (S) ಗಳನ್ನು ಸುರಿಯಲೇ ಬೇಕಾದ ಅನಿವಾರ್ಯತೆಯನ್ನು ಹಸಿರುಕ್ರಾಂತಿ ಮಾದರಿಯ ಕೃಷಿಯು ರೈತಾಪಿಗೆ ಅನಿವಾರ್ಯಗೊಳಿಸಿತು. ಈಗ ಪ್ರತಿವರ್ಷ ಭಾರತೀಯ ರೈತರು ಹೆಚ್ಚೂಕಡಿಮೆ 7 ಕೋಟಿ ಟನ್ನಿನಷ್ಟು ರಸಗೊಬ್ಬರವನ್ನು ಖರೀದಿಸಿ ಸುರಿಯುತ್ತಿದ್ದಾರೆ. ಅದರಲ್ಲಿ ಶೇ. 60 ರಷ್ಟು ಅಂದರೆ 4 ಕೋಟಿ ಟನ್ನಿನಷ್ಟು ಯೂರಿಯಾ ಗೊಬ್ಬರವಾದರೆ, ಇನ್ನು ಶೇ. 30 ರಷ್ಟು ಫಾಸ್ಫೇಟ್, ಶೇ. 10 ರಷ್ಟು ಪೊಟಾಷ್ ಮತ್ತು ಸಲ್ಫೇಟುಗಳಾಗಿವೆ. ಇದರಲ್ಲಿ ಯೂರಿಯಾ ಉತ್ಪಾದನೆಗೆ ಬೇಕಾಗಿರುವ ಕಚ್ಚಾ ವಸ್ತುಗಳಾದ ನೈಸರ್ಗಿಕ ಅನಿಲ, ಅಥವಾ ನಾಫ್ತಾ ಇತ್ಯಾದಿಗಳನ್ನು ಈಗಲೂ ಭಾರತದ ಶೇ. 80ರಷ್ಟು ಆಮದು ಮಾಡಿಕೊಳ್ಳಬೇಕಾಗಿದೆಯಾದರೂ, ಶೇ. 80 ರಷ್ಟು ಯೂರಿಯಾ ಉತ್ಪಾದನೆ ಭಾರತದಲ್ಲೇ ಆಗುತ್ತಿದೆ. ಆದರೆ ಶೇ. 90 ರಷ್ಟು ಸಲ್ಫೇಟ್ ಹಾಗೂ ಶೇ. 100 ರಷ್ಟು ಪೊಟಾಷನ್ನು ಭಾರತ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿಯೇ ಇದೆ. 1991ರ ತನಕ ಭಾರತ ಸರ್ಕಾರದ ಗೊಬ್ಬರ ನೀತಿಗಳು ಪ್ರಧಾನವಾಗಿ ಗೊಬ್ಬರ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ಅದನ್ನು ಅಗ್ಗದ ದರದಲ್ಲಿ ರೈತಾಪಿಗೆ ತಲುಪಿಸುವ ಬಗ್ಗೆ ಗಮನ ಕೇಂದ್ರೀಕರಿಸಿದ್ದವು. ಹೀಗಾಗಿಯೇ 1977ರಲ್ಲಿ ರಸಗೊಬ್ಬರ ಬೆಲೆ ನಿಯಂತ್ರಣ ಮತ್ತು ಸರಬರಾಜು ನಿಯಮಗಳು ಜಾರಿಗೆ ಬಂದವು. ಅದರಡಿಯಲ್ಲಿ ಸರ್ಕಾರವೇ ಮೊದಲು ಯೂರಿಯಾ ಮತ್ತು ಆ ನಂತರ ಎಲ್ಲಾ ಬಗೆಯ ರಸಗೊಬ್ಬರಗಳಿಗೂ ಮಾರಾಟ ಬೆಲೆಯನ್ನು ನಿಗದಿ ಮಾಡಿತು. ಅದಕ್ಕೇ ಮೀರಿ ಆಗುತ್ತಿದ್ದ ಉತ್ಪಾದನಾ ವಚ್ಚವನ್ನು ನೇರವಾಗಿ ಗೊಬ್ಬರ ಕಂಪನಿಗಳಿಗೆ ಪಾವತಿ ಮಾಡುತ್ತಿತ್ತು. ಹೀಗಾಗಿ 1990ರ ದಶಕದವರೆಗೂ ಎಲ್ಲಾ ಗೊಬ್ಬರಗಳೂ ಯೂರಿಯಾದಷ್ಟೇ ಬೆಲೆಗೆ ಮಾರಾಟವಾಗುತ್ತಿದ್ದವು. ಉದಾರೀಕರಣ- ಕಾರ್ಪೊರೇಟುಗಳಿಗೆ ಗೊಬ್ಬರವಾದ ರೈತ ಬದುಕು ಆದರೆ 1991ರಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳು ಜಾರಿಗೆ ಬಂದ ನಂತರ ಜನರ ಕಲ್ಯಾಣಕ್ಕಾಗಿ ಮಾಡುತ್ತಿದ್ದ ವೆಚ್ಚಗಳನ್ನು ಕಡಿಮೆ ಮಾಡಿ ಆ ಸಂಪನ್ಮೂಲವನ್ನು ಉದ್ದಿಮೆಗಳ ಲಾಭವನ್ನು ಹೆಚ್ಚಿಸಲು ಬೇಕಾದ ಮೂಲಭೂತ ಸೌಕರ್ಯವನ್ನು ಹೆಚ್ಚಿಸುವುದು ಆರ್ಥಿಕ ತತ್ವವಾಯಿತು. ಅದರ ಭಾಗವಾಗಿಯೇ ಗೊಬ್ಬರ ನೀತಿಯೂ ಬದಲಾಗಿ, ಗೊಬ್ಬರಕ್ಕೆ ಕೊಡುತ್ತಿದ್ದ ಸಬ್ಸಿಡಿ ಹೊರೆಯನ್ನು ಹಾಗೂ ಆಮದು ಮಾಡಿಕೊಳ್ಳುತ್ತಿರುವುದರಿಂದ ಹೆಚ್ಚುತ್ತಿರುವ ವಿದೇಶಿ ವಿನಿಮಯ ಹೊರೆಯನ್ನು ತಪ್ಪಿಸಿಕೊಳ್ಳುವುದು ಹೇಗೆ ಎಂಬುದೇ 1991ರ ನಂತರದ ಎಲ್ಲಾ ಸರ್ಕಾರಗಳ ಪ್ರಮುಖ ಲಕ್ಷ್ಯವಾಯಿತು. ಅದರ ಭಾಗವಾಗಿ 1992ರಲ್ಲಿ ಯೂರಿಯಾವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಗೊಬ್ಬರಗಳಿಗೆ ಕೊಡುತ್ತಿದ್ದ ಸಬ್ಸಿಡಿಯನ್ನು ಪಾಕ್ಷಿಕವಾಗಿ ಹಿಂತೆಗೆದುಕೊಳ್ಳಲಾಯಿತು. ಹೀಗಾಗಿ ಯೂರಿಯವನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಗೊಬ್ಬರಗಳ ಬೆಲೆ ಹಲವು ಪಟ್ಟು ಏರಿಕೆಯಾಯಿತು. ಸಹಜವಾಗಿಯೇ ಇದರಿಂದ ಯೂರಿಯೇತರ ಗೊಬ್ಬರಗಳ ಬಳಕೆ ಹಾಗೂ ಉತ್ಪಾದನೆಯೂ ಕುಂಠಿತವಾಯಿತು. ರೈತರು ಇತರ ಗೊಬ್ಬರಗಳನ್ನು ಬಿಟ್ಟಿ ಯೂರಿಯಾವನ್ನೇ ಹೆಚ್ಚು ಬಳಸುತ್ತಿದ್ದರಿಂದ ಮಣ್ಣಿನ ಗುಣಮಟ್ಟ ಹಾಗೂ ಉತ್ಪಾದಕೆಯೂ ಕುಸಿಯತೊಡಗಿತು. ಹೀಗಾಗಿ ಮತ್ತೊಮ್ಮೆ ಇತರ ಗೊಬ್ಬರಗಳಿಗೂ ಸಬ್ಸಿಡಿ ವಿಸ್ತರಿಸಲಾಯಿತು. ಆದರೆ 2007-8ರಲ್ಲಿ ಆಮದು ವೆಚ್ಚ ತೀರಾ ಹೆಚ್ಚಿದ್ದರಿಂದ 2010 ರಿಂದ ನ್ಯೂಟ್ರಿಯೆಂಟ್ ಬೇಸ್ಡ್ ಸಬ್ಸಿಡಿ ಸ್ಕೀಮ್- ಎನ್‌ಬಿಎಸ್- NBS ಯೋಜನೆ ಜಾರಿಗೆ ಬಂತು. ಈಗಲೂ ಅದೇ ಯೋಜನೆ ಚಾಲ್ತಿಯಲ್ಲಿದೆ. NBS -ಕಾರ್ಪೊರೇಟ್ ಲಾಭದ ಮುಲಾಜು ಈ NBS ಯೋಜನೆಯಡಿ ಯೂರಿಯಾದ MRP ಯನ್ನು ಮಾತ್ರ ಸರ್ಕಾರವೇ ನಿಗದಿ ಮಾಡುತ್ತದೆ. 2012 ರಿಂದ ಈವರೆಗೆ ಯೂರಿಯಾದ ಬೆಲೆ ಅಷ್ಟೊಂದು ಹೆಚ್ಚಾಗದಿರಲು ಅದೇ ಕಾರಣ. ಇಂದು 45 ಕೆಜಿ ಬ್ಯಾಗಿನ ಯೂರಿಯಾ ಗೊಬ್ಬರಕ್ಕೆ 250ರೂ. ಗಳನ್ನು ನಿಗದಿ ಮಾಡಲಾಗಿದೆಯಷ್ಟೆ. ಆದರೆ ಗೊಬ್ಬರ ಕಂಪನಿಗಳ ಪ್ರಕಾರ ಅದಕ್ಕಾಗುವ ವಚ್ಚ 900 ರೂ. ಹೀಗಾಗಿ ಸರ್ಕಾರ ಪ್ರತಿ 45 ಕೆಜ್ಜಿ ಬ್ಯಾಗಿಗೆ 650 ರೂ ಸಬ್ಸಿಡಿಯನ್ನು ನೇರವಾಗಿ ಗೊಬ್ಬರ ಕಂಪನಿಗಳಿಗೆ ಪಾವತಿ ಮಾಡುತ್ತದೆ. ಇನ್ನುNBS ಯೋಜನೆಯಡಿ DAP, NPK ಗೊಬ್ಬರಗಳಿಗೆ ಸರ್ಕಾರ MRP ಯನ್ನು ನಿಗದಿ ಮಾಡುವುದಿಲ್ಲ. ಬದಲಿಗೆ ಗೊಬ್ಬರ ಉತ್ಪಾದನೆಗೆ ಅವು ಬಳಸುವ ನ್ಯೂಟ್ರಿಯೆಂಟುಗಳಿಗೆ ಕೆಜಿಗಿಷ್ಟು ಎಂದು ಸಬ್ಸೀಡಿಯನ್ನು ನೀಡುತ್ತದೆ. ಉದಾಹರಣೆಗೆ 2010ರಲ್ಲಿ ನೈಟ್ರೋಜನ್ ಗೆ ಕೆಜಿಗೆ 23ರೂ, ಫಾಸ್ಫೇಟಿಗೆ ಕೆಜಿಗೆ 26.37ರೂ, ಪೊಟಾಷಿಗೆ 24ರೂ ಗಳನ್ನು ಸರ್ಕಾರ ಗೊಬ್ಬರ ಕಂಪನಿಗಳಿಗೆ ಪಾವತಿ ಮಾಡಲಾಗಿತ್ತು. ಈ ಸಬ್ಸೀಡಿಯನ್ನು ಪಡೆದುಕೊಂಡು ತಮ್ಮ ಅಂತಿಮ DAP, NPK ಗೊಬ್ಬರಗಳ ಬೆಲೆಯನ್ನು ಆಯಾ ಕಂಪನಿ ನಿಗದಿ ಮಾಡಿಕೊಳ್ಳಬೇಕು. ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನೈಟ್ರೋಜನ್ ಸಬ್ಸಿಡಿ 23 ರಿಂದ 18ರೂ ಗಳಿಗೂ, ಫಾಸ್ಫೇಟ್ ಸಬ್ಸಿಡಿ ಕೆಜಿಗೆ 26 ರಿಂದ 15 ರೂ ಗಳಿಗೂ ಮತ್ತು ಪೊಟಾಶ್ 24 ರಿಂದ 10 ರೂ ಗಳಿಗೆ ಇಳಿಸಿರುವುದೇ ಕಳೆದ ಐದು ವರ್ಷಗಳಲ್ಲಿ ಅವುಗಳ ಬೆಲೆ ಗಗನಕೇರಿರಲು ಕಾರಣ. ಈ ವರ್ಷ ಅದನ್ನು ಮತ್ತಷ್ಟು ಕಡಿಮೆ ಮಾಡಿದ್ದರಿಂದಲೇ ಇಫ್ಕೋ ಶೇ.50 ರಷ್ಟು ಹೆಚ್ಚುವರಿ ಬೆಲೆಯನ್ನು ಘೋಷಿಸಿದ್ದು. ಇದು 2010ರಿಂದ ಜಾರಿಯಲ್ಲಿರುವ ನೀತಿ. ಇದರಿಂದ ಸರ್ಕಾರದ ಮೇಲಿನ ಸಬ್ಸಿಡಿ ಹೊರೆ ತಗ್ಗಬಹುದು ಎಂದು ಸರ್ಕಾರ ಯೋಚಿಸಿತ್ತು. ಆದರೆ ಗೊಬ್ಬರ ಸಬ್ಸಿಡಿಯ ವೆಚ್ಚ ಹೆಚ್ಚಾಗುತ್ತಲೇ ಹೋಗಿ ಈಗ ವಾರ್ಷಿಕ 70,000 ಕೋಟಿ ಮುಟ್ಟಿದೆ. ಮತ್ತೊಂದು ಕಡೆ ಅದರ ಲಾಭವನ್ನೂ ಗೊಬ್ಬರ ಕಂಪನಿಗಳು ರೈತರಿಗೆ ತಲುಪಿಸುತ್ತಿಲ್ಲ. ಹೀಗಾಗಿ 2010ಕ್ಕೆ ಹೋಲಿಸಿದರೆ ಯೂರಿಯಾದ ಬೆಲೆ ಹೆಚಾಗದಿದ್ದರೂ MRP ಯ ದರ ಯೂರಿಯಾ ದರಕ್ಕಿಂತ ಐದು ಪಟ್ಟು ಹೆಚ್ಚಾಗಿದ್ದರೆ NPK ದರ ಮೂರು ಪಟ್ಟು ಹೆಚ್ಚಾಗಿದೆ. ಆದ್ದರಿಂದ ಸರ್ಕಾರ ರೈತರಿಗೆ ಸಹಾಯ ಮಾಡುವ ಉದ್ದೇಶವನ್ನೇ ಹೊಂದಿದ್ದರೆ ಇತರ ಗೊಬ್ಬರಗಳಿಗೂ ಯೂರಿಯಾದಂತೆ MRP ನಿಗದಿ ಮಾಡುವ ನೀತಿಗೆ ಮರಳಬೇಕಿತ್ತು. ಆದರೆ ಭಾರತೀಯ ಗೊಬ್ಬರ ಕ್ಷೇತ್ರದಲ್ಲಿ ನಿಧಾನವಾಗಿ ಹೆಚ್ಚುತ್ತಿರುವ ಖಾಸಗಿ ಕ್ಷೇತ್ರಕ್ಕೆ ಇದು ಪಥ್ಯವಿಲ್ಲ. ಮೇಲಾಗಿ ಸರ್ಕಾರವೂ ಸಹ ಗೊಬ್ಬರ ಕಂಪನಿಗಳಿಗೆ ಕೊಡಬೇಕಿದ್ದ ಸಬ್ಸಿಡಿಗಳನ್ನು ವರ್ಷಗಟ್ಟಲೇ ಬಾಕಿ ಇಟ್ಟುಕೊಳ್ಳುತ್ತಾ ಬಂದಿದೆ. ಇದು ಕಂಪನಿಗಳಿಗೆ ಲಾಭದಾಯಕವಲ್ಲ. ಬದಲಿಗೆ ರೈತರೇ ನೇರವಾಗಿ ಒಟ್ಟು ಮಾರುಕಟ್ಟೆ ಬೆಲೆ ಪಾವತಿಸಿ ಖರೀದಿಸುವುದು ಕಂಪನಿಗಳಿಗೆ ಲಾಭದಾಯಕ. ಸರ್ಕಾರ ಬೇಕಿದ್ದರೆ ನೇರವಾಗಿ ರೈತರಿಗೆ ಸಬ್ಸಿಡಿಯನ್ನು ಪಾವತಿಸಲಿ ಎಂಬುದು ಕಾರ್ಪೊರೇಟ್ ಕ್ಷೇತ್ರದ ಆಗ್ರಹವೂ ಆಗಿತ್ತು. ಆದರೆ ಇದರಿಂದ ರೈತಾಪಿಯ ಮೇಲೆ ಬೀಳುವ ಹೊರೆ ಹಾಗೂ ರಾಜಕೀಯ ಪರಿಣಾಮದಿಂದಾಗಿ ಈವರೆಗೆ ಯಾವ ಸರ್ಕಾರಗಳು ಇಂಥಾ ಕಾರ್ಪೊರೇಟ್ ಪರ- ರೈತದ್ರೋಹಿ ನೀತಿಗೆ ಮುಂದಾಗಿರಲಿಲ್ಲ. ಮೋದಿ ಸರ್ಕಾರ ಮತ್ತು ಕಾರ್ಪೊರೇಟ್ ಲಾಭಕ್ಕೆ ಗೊಬ್ಬರ ಆದರೆ 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಸಬ್ಸಿಡಿಗಳನ್ನೂ ನಿಧಾನವಾಗಿ ಕಡಿತಗೊಳಿಸುತ್ತಾ ಕಾರ್ಪೊರೇಟುಗಳ ಲಾಭಕ್ಕೆ ಮುಕ್ತ ಅವಕಾಶವನ್ನು ಒದಗಿಸುವ ಆಕ್ರಮಣಕಾರಿ ನೀತಿಯನ್ನು ಜಾರಿ ಮಾಡುತ್ತಿದೆ. ಅದರ ಭಾಗವಾಗಿಯೇ 2015ರಲ್ಲಿ ಹೊಸ ಯೂರಿಯಾ ನೀತಿಯನ್ನು ಜಾರಿ ಮಾಡಲಾಯಿತು. ಮೇಲ್ನೋಟಕ್ಕೆ ಇದು ಉತ್ಪಾದಕ ಘಟಕಗಳ ದಕ್ಷತೆಯನ್ನು ಹೆಚ್ಚಿಸುವ ಮುಖವಾಡವನ್ನು ಹೊಂದಿದ್ದರೂ ಅದರ ಪ್ರಧಾನ ಲಕ್ಷ ಗೊಬ್ಬರ ಸಬ್ಸಿಡಿಗೆ ಆಗುತ್ತಿರುವ ವೆಚ್ಚವನ್ನು ನಿಯಂತ್ರಿಸುವುದೇ ಆಗಿತ್ತು. ಅದರ ಭಾಗವಾಗಿ 2016ರಿಂದ ಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ಪಾವತಿ ಮಾಡುವ ಮುಂಚೆ ಎಷ್ಟು ಪ್ರಮಾಣದ ಗೊಬ್ಬರವನ್ನು ರೈತರಿಗೆ ವಾಸ್ತವದಲ್ಲಿ ತಲುಪಿಸಲಾಗಿದೆ ಎಂಬುದನ್ನು ಆಧರಿಸಿ ಪಾವತಿಸುವ ವ್ಯವಸ್ಥೆ ಜಾರಿಗೆ ಬಂತು. 2018ರಿಂದ ದೇಶಾದ್ಯಂತ ಈ ವ್ಯವಸ್ಥೆ ಜಾರಿಗೆ ಬಂದಿದ್ದು ರೈತರು ತಮ್ಮ ಆಧಾರ್ ಕಾರ್ಡ್ ನಮೂದಿಸಿ ಗೊಬ್ಬರ ಖರೀದಿಸಬೇಕಿದೆ. ಮಾರಾಟಕ್ಕೆ ತಕ್ಕಂತೆ ಕಂಪನಿಗಳಿಗೆ ಸಬ್ಸಿಡಿ ಪಾವತಿಯಾಗುತ್ತದೆ. ಮೇಲ್ನೋಟಕ್ಕೆ ಇದು ಸೋರಿಕೆಯನ್ನು ತಡೆಯುವ ಕ್ರಮದಂತೆ ಕಂದುಬಂದರೂ ನಿಧಾನಕ್ಕೆ ಗೊಬ್ಬರ ವಿತರಣೆಯನ್ನು ಮುಕ್ತ ಮಾರುಕಟ್ಟೆಗೊಳಿಸಿ ಸಬ್ಸಿಡಿಯನ್ನು ಫಲಾನುಭವಿಗಳಿಗೆ ನೇರೆ ವರ್ಗಾವಣೆ ಮಾಡುವ ವ್ಯವಸ್ಥೆಗೆ ತರುವ ತಂತ್ರ ಇದರ ಹಿಂದಿತ್ತು. ನೇರ ನಗದು ವರ್ಗಾವಣೆ- ಸಬ್ಸಿಡಿಗಳ ನಿಧಾನ ನಿರಾಕರಣೆ ಸೋರಿಕೆಯನ್ನು ತಡೆಗಟ್ಟುವ ಹೆಸರಲ್ಲಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಯೆಂಬ ಯೋಜನೆಯನ್ನು ಬಳಸಿಕೊಂಡು ಎಲ್ಲಾ ಸಬ್ಸಿಡಿಗಳನ್ನೂ ಹಂತ ಹಂತವಾಗಿ ತೆಗೆದುಹಾಕಲು ಮೋದಿ ಸರ್ಕಾರ ದೊಡ್ಡ ಕುತಂತ್ರವನ್ನೇ ಹೆಣೆದಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಗ್ಯಾಸ್ ಸಬ್ಸಿಡಿ. 2014ಕ್ಕೆ ಮುಂಚೆ ಒಂದು ಗ್ಯಾಸ್ ಸಿಲಿಂಡರ್ ಗೆ 750 ರೂ ವೆಚ್ಚವಾಗುತ್ತಿದ್ದರೂ ಗ್ರಾಹಕರು ಪಾವತಿಸುತ್ತಿದ್ದದ್ದು ಕೇವಲ 350ರೂ. ಉಳಿದದ್ದನ್ನು ಸರ್ಕಾರ ತನ್ನ ಬಜೆಟ್ಟಿನಿಂದ ನೇರವಾಗಿ ಗ್ಯಾಸ್ ಕಂಪನಿಗಳಿಗೆ ಪಾವತಿಸುತ್ತಿತ್ತು. ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಣ ಸೋರಿಕೆಯ ತಡೆ ಹೆಸರಿನಲ್ಲಿ ಗ್ಯಾಸ್ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳ ಅಕೌಂಟಿಗೆ ವರ್ಗಾಯಿಸುವ ಯೋಜನೆ ತಂದಿತು. ಅಂದರೆ ಗ್ರಾಹಕರು ಗ್ಯಾಸ್ ಖರೀದಿಸುವಾಗ ಮೊದಲಿನಂತೆ 250 ರೂ ಅಲ್ಲದೆ ಪೂರಾ 750ರೂ ಕಟ್ಟಬೇಕು. ಸರ್ಕಾರ ಆ ನಂತರ ಫಲಾನುಭವಿಗಳ ಅಕೌಂಟಿಗೆ 400 ರೂ ವರ್ಗಾಯಿಸುತ್ತಿತ್ತು. ಮೊದಲೆರೆಡು ವರ್ಷ ಸಬ್ಸಿಡಿ ವರ್ಗಾವಣೆಯಾಯಿತು. ಆದರೆ ಕ್ರಮೇಣ ಗ್ಯಾಸ್ ಸಿಲಿಂಡರಿನ ಮಾರುಕಟ್ಟೆ ಬೆಲೆಯೂ ಹೆಚ್ಚುತ್ತಾ ಬಂತು ಮತ್ತು ಜನರ ಅಕೌಂಟಿಗೆ ವರ್ಗಾವಣೆಯಾಗುತ್ತಿದ್ದ ನಗದೂ ಕಡಿಮೆಯಗುತ್ತಾ ಬಂತು. ಉದಾಹರಣೆಗೆ, 2013ರಲ್ಲಿ ಗ್ಯಾಸ್ ಸಬ್ಸಿಡಿಗೆಂದು ಎತ್ತಿಡಲಾಗಿದ್ದ ಬಜೆಟ್ 53,000 ಕೋಟಿ. 2021-22ರ ಸಾಲಿನಲ್ಲಿ ಎತ್ತಿಟ್ಟಿರುವ ಹಣ ಕೇವಲ 13,000 ಕೋಟಿ .ಅಂದರೆ ಶೇ. 80 ರಷ್ಟು ನೇರ ಕಡಿತ. ಇದರಿಂದಾಗಿ ಕಳೆದ ಒಂದು ವರ್ಷದಿಂದ ಯಾವ ಫಲಾನುಭವಿಗಳಿಗೂ ಸಬ್ಸೀಡಿ ಹಣ ಬಂದಿಲ್ಲ. ಜೊತೆಗೆ ಗ್ಯಾಸ್ ಸಿಲಿಂಡರಿನ ಬೆಲೆಯೂ ಶೇ. 20 ರಷ್ಟು ಹೆಚ್ಚುತ್ತಿದೆ. ಈಗ ಇತರೇ ಇಂಧನ ಮೂಲಗಳಾದ ಸೀಮೆ ಎಣ್ಣೆ, ಸೌದೆ ಇನ್ನಿತ್ಯಾದಿಗಳು ಸುಲಭವಾಗಿ ದೊರೆಯುತ್ತಿಲ್ಲವಾದ್ದರಿಂದ ಅನಿವಾರ್ಯವಾಗಿ ಸಾಮಾನ್ಯ ಜನರು ಹೆಚ್ಚಿನ ಹಣವನ್ನು ಕಂಪನಿಗಳಿಗೆ ತೆರಬೇಕಾಗಿ ಬಂದಿದೆ. ಇದೇ ನೀತಿಯನ್ನು ಪಡಿತರಕ್ಕೂ, ಕರೆಂಟಿಗೂ ಅನ್ವಯಿಸುವ ಯೋಜನೆಗಳನ್ನು ಮೋದಿ ಸರ್ಕಾರ ಹೊಂದಿದೆ. ಹೀಗೆ ನೇರ ನಗದು ವರ್ಗಾವಣೆ ಎನ್ನುವ ಮೋದಿ ನೀತಿಯು ಒಟ್ಟಾರೆ ಸಬ್ಸೀಡಿ ಕಡಿತದ ಮೊದಲ ಹೆಜ್ಜೆಯಾಗಿದೆ. ಗೊಬ್ಬರ ಸಬ್ಸಿಡಿಗಳಲ್ಲೂ ಮೋದಿ ಸರ್ಕಾರ ಇದೇ ನೀತಿ ಅನುಸರಿಸಲು ಮೋದಿ ಸರ್ಕಾರದ NITI ಅಯೋಗ ದೊಡ್ಡ ತಂತ್ರವನ್ನು ಹೆಣೆದಿದೆ. NITI ಅಯೋಗದ ಸ್ಟ್ರಾಟೆಜಿ 2017ರಲ್ಲಿ ನೀತಿ ಅಯೋಗ ಮುಂದಿಟ್ಟ Strategy For New India ಎಂಬ ದಸ್ತಾವೇಜಿನಲ್ಲಿ: "ರೈತರಿಗೆ ಗೊಬ್ಬರಗಳಿಗೆ, ವಿದುತ್ತಿಗೆ, ಬೆಳೆ ವಿಮಾ ಇತ್ಯಾದಿ ಬಾಬತ್ತುಗಳಿಗೆ ಪ್ರತ್ಯೇಕವಾಗಿ ಕೊಡುತ್ತಿರುವ ಸಬ್ಸಿಡಿಗಳ ಬದಲಿಗೆ ಪ್ರತಿ ಎಕರಗೆ ಇಂತಿಷ್ಟು ಎಂದು ಒಟ್ಟಾರೆಯಾಗಿ ಸಬ್ಸಿಡಿ ಮೊತ್ತವನ್ನು ಫಲಾನುಭವಿಗಳಿಗೆ ನೇರವಾಗಿ ಪಾವತಿಸುವುದು ಉತ್ತಮ" (ಪು. 64) ಎಂಬ ಸೂಚನೆಯನ್ನು ನೀಡಿತ್ತು. (For agriculture, an upfront subsidy per acre of land through Direct Benefit Transfer (DBT) may be considered instead of providing separate subsidies for fertilizers, electricity, crop insurance etc..(p.64).) ಆಸಕ್ತರು ಮೋದಿಯವರ ಈ ಕಾರ್ಪೊರೇಟ್ ನವಭಾರತಕ್ಕಾಗಿ ಇನ್ನೂ ಏನೇನು ಯೋಜನೆ ಹಾಕಿಕೊಂಡಿದ್ದಾರೆ ಎಂಬುದನ್ನು https://niti.gov.in/writereaddata/files/Strategy_for_New_India.pdf ವೆಬ್ ವಿಳಾಸದಲ್ಲಿ ತಿಳಿದುಕೊಳ್ಳಬಹುದು. ಅದೇ ಸಮಯದಲ್ಲಿ ಗೊಬ್ಬರ ಸಬ್ಸಿಡಿಗಳನ್ನು ರೈತರಿಗೆಷ್ಟು ಮಾರಾಟ ಮಾಡಿದ್ದಾರೆ ಎಂಬ ವಿವರಗಳನ್ನು ಆಧರಿಸಿ ನೇರವಾಗಿ ಫಲಾನುಭವಿ ಕಂಪನಿಗಳ ಖಾತೆಗಳಿಗೆ ಸಬ್ಸಿಡಿ ವರ್ಗಾವಣೆ (ಡಿಬಿಟಿ) ಮಾಡುವ ನೀತಿಯು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ಅಧ್ಯಯನ ಮಾಡಲು ಕೇಂದ್ರದ NITI ಅಯೋಗವು MICROSAVE ಎಂಬ ಕಂಪನಿಯನ್ನು ಅಧಿಕೃತವಾಗಿ ನೇಮಿಸಿತು. ಅದರ ಜೊತೆಗೆ ತನ್ನ ಅಸಲು ಯೋಜನೆಯಾದ ಫಲಾನುಭವಿ ರೈತರಿಗೆ ನೇರೆ ನಗದು ವರ್ಗಾವಣೆ ಮಾಡುವ ವಿಷಯದ ಬಗ್ಗೆಯೂ ಜನರ ಅಭಿಪ್ರಾಯವನ್ನು ಸಂಗ್ರಹಿಸಲು ಕೋರಿತ್ತು. MICROSAVE ವರದಿ ತಂದ ಮುಜುಗರ MICROSAVE ಕಂಪನಿಯು ದೇಶಾದ್ಯಂತ ರೈತರನ್ನು ಸಂದರ್ಶಿಸಿ ವಿಷಯವನ್ನು ಅಧ್ಯಯನ ಮಾಡಿ 2019ರಲ್ಲೇ ತನ್ನ ವರದಿಯನ್ನೂ ನೀಡಿತು. ಅದರ ಪ್ರಕಾರ: - ದೇಶದ ಶೇ. 70ರಷ್ಟು ರೈತರು ಗ್ಯಾಸ್ ಸಬ್ಸಿಡಿಯ ಅನುಭವದ ಹಿನ್ನೆಯಲ್ಲಿ ನೇರೆ ನಗದು ವರ್ಗಾವಣೆ ಎಂಬ ನೀತಿಯು ಸಂಪೂರ್ಣ ಸಬ್ಸಿಡಿ ರದ್ದಿಗೆ ಮೊದಲ ಹೆಜ್ಜೆಯಾಗಬಹುದೆಂಬ ಆತಂಕವನ್ನು ವ್ಯಕ್ತಪಡಿಸಿ ನೇರ ನಗದು ವರ್ಗಾವಣೆಯನ್ನು ಸಾರಾಸಗಟು ವಿರೋಧಿಸಿದ್ದರು. -ಅಷ್ಟು ಮಾತ್ರವಲ್ಲದೆ ನೇರ ನಗದು ವರ್ಗಾವಣೆ ನೀತಿ ಜಾರಿಗೆ ಬಂದರೆ ರೈತರು ಮೊದಲು ಮಾರುಕಟ್ಟೆ ಬೆಲೆ ತೆತ್ತು ಗೊಬ್ಬರವನ್ನು ಖರೀದಿಸಬೇಕಾಗುತ್ತದೆ. ಅಂದರೆ ಆಗ 45ಕೆಜಿ ಯೂರಿಯಾ ಬ್ಯಾಗಿಗೆ 250 ರೂ ತೆರುತ್ತಿರುವ ರೈತ 1000 ರೂ ತೆರಬೇಕಾಗುತ್ತದೆ. ಒಂದು ಎಕರೆಗೆ ಯೂರಿಯಾ ಹಾಗೂ ಇತರ ಗೊಬ್ಬರಗಳಿಗೆ ಏನಿಲ್ಲವೆಂದರೂ ವರ್ಷಕ್ಕೆ 15-20,000 ರೂ. ತತ್ತಬೇಕು. -ಸಬ್ಸಿಡಿಯು ಖರೀದಿಗೆ ಮುನ್ನ ಅಕೌಂಟಿಗೆ ಬೀಳುವುದಿಲ್ಲ. ಖರೀದಿಸಿದ ನಂತರ ಲೆಕ್ಕಾಚಾರಗಳ ಪರಿಶೀಲನೆಯಾಗಿ ನಂತರ ಅಕೌಂಟಿಗೆ ಪಾವತಿಯಾಗಬೇಕು. ಹೀಗಾಗಿ ಸಣ್ಣಪುಟ್ಟ ರೈತರು ಅದಕ್ಕಾಗಿ ಹೆಚ್ಚುವರಿ ಸಾಲ ಮಾಡಬೇಕು. ಅದಕ್ಕೆ ಬಡ್ಡಿ ತೆರಬೇಕು. ಇದು ರೈತರ ವೆಚ್ಚವನ್ನು ಹಾಗೂ ಕಷ್ಟಗಳನ್ನು ಹೆಚ್ಚಿಸುತ್ತದೆ ಎಂದೂ ಕೂಡಾ MICROSAVE ಕಂಪನಿಯು ವರದಿ ನೀಡಿತು. ಮೇಲಿನ ವಿಷಯಕ್ಕೆ ಸಂಬಂಧಪಟ್ಟ ವಿವರವನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ https://www.microsave.net/wp-content/uploads/2019/10/191010_DBT_fertilizer-report.pdf https://www.microsave.net/wp-content/uploads/2019/10/191010_DBT_fertilizer-report.pdf ಪುಟ 33 ರಲ್ಲಿ ಗಮನಿಸಬಹುದು. ಆದರೆ ಶತಾಯ ಗತಾಯ ಗೊಬ್ಬರ ಸಬ್ಸಿಡಿಯನ್ನು ನಿಧಾನವಾಗಿ ರದ್ದುಗೊಳಿಸಲು ಹಠ ತೊಟ್ಟಿರುವ ಮೋದಿ ಸರ್ಕಾರ ತನ್ನದೇ ಸರ್ಕಾರದ ಅಧ್ಯಯನ ವರದಿಯನ್ನು ಒಪ್ಪಿಕೊಳ್ಳದೆ ತಿರಸ್ಕರಿಸಿತು. ಈಬಗ್ಗೆ 2019ರಲ್ಲಿ ಸಂಸದರೊಬ್ಬರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಗೊಬ್ಬರ ಮಂತ್ರಿಗೆ ಸದಾನಂದಗೌಡರು: ಈವರದಿಯ ಬಗ್ಗೆ ತಮ್ಮ ಇಲಾಖೆಗೆ ಮಾಹಿತಿ ಇಲ್ಲವೆಂದೂ. ಮೇಲಾಗಿ ಆ ಸರ್ವೆಯ ಸ್ಯಾಂಪಲ್ ಗಾತ್ರ ಬಹಳ ಕಡಿಮೆ ಇತ್ತಾದ್ದರಿಂದ ಆ ವರದಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲವೆಂದು ಅಧಿಕೃತವಾಗಿ ಉತ್ತರಿಸಿದ್ದಾರೆ. (http://164.100.24.220/loksabhaquestions/annex/172/AU367.pdf) 2022 ರಿಂದ ದ್ವಿಗುಣವಾಗುವುದು ರೈತರ ಆದಾಯವಲ್ಲ- ವೆಚ್ಚಗಳು ಸಂಕಷ್ಟಗಳೂ.. 2021ರ ಜನವರಿಯಲ್ಲಿ ಮೋದಿ ಸರ್ಕಾರ ಹೇಳಿಕೆಯೊಂದನ್ನು ನೀಡಿ 2022ರ ಸಾಲಿನಿಂದ ಗೊಬ್ಬರ ಸಬ್ಸಿಡಿಯನ್ನು ರೈತರ ಅಕೌಟುಗಳಿಗೆ ನೇರ ನಗದು ವರ್ಗಾವಣೆ ಮಾಡುವ ಯೋಜನೆ ಜಾರಿಗೆ ಬರಲಿದೆಯೆಂದು ಘೋಷಿಸಿದೆ. ಆದರೆ ಮೂರು ಕೃಷಿ ಕಾಯಿದೆಗಳ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ರತ ಜನಾಂದೋಲನ ಹಾಗೂ ಐದು ರಾಜ್ಯಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲವೆಂದು ಕೂಡಾ ಹೇಳುತ್ತಿದ್ದಾರೆ. ಆದರೆ ಮೊನ್ನೆ ಇಫ್ಕೋ ಕಂಪನಿಯು ಘೋಶಿಸಿರುವ ಗೊಬ್ಬರ ಬೆಲೆ ಹೆಚ್ಚಳವು ಕೂಡಾ ನಿಧಾನವಾಗಿ ಗೊಬ್ಬರ ಸಬ್ಸಿಡಿಯನ್ನು ಕಡಿಮೆ ಮಾಡುತ್ತಿರುವ ನೇರೆ ಪರಿಣಾಮವೇ ಆಗಿದೆ. ಹಾಗೂ ಗೊಬ್ಬರ ಸಬ್ಸಿಡಿಗಳನ್ನು ಫಲಾನುಭವಿ ರೈತರಿಗೆ ನೇರ ನಗದು ವರ್ಗಾವಣೆ ಮಾಡುವ ನೀತಿಯು 2022 ರಿಂದ ಜಾರಿಗೆ ಬರಲಿದ್ದು ನಿಧಾನವಾಗಿ ಗೊಬ್ಬರ ಸಬ್ಸಿಡಿಯೂ ಕೂಡಾ ಗ್ಯಾಸ್ ಸಬ್ಸಿಡಿಯ ರೀತಿ ಸಂಪೂರ್ಣವಾಗಿ ರದ್ದಾಗಲಿದೆ. ರೈತರ ಆದಾಯ ದ್ವಿಗುಣ ಮಾಡುವ ಹೆಸರಲ್ಲಿ ಜಾರಿಯಾಗುತ್ತಿರುವ ಈ ನೀತಿ ರೈತರ ವೆಚ್ಚಗಳನ್ನೂ , ಸಂಕಷ್ಟಗಳನ್ನೂ ಮತ್ತು ಆತ್ಮಹತ್ಯೆಗಳನ್ನೂ ಹೆಚ್ಚಿಸಲಿವೆ. ಕಾರ್ಪೊರೇಟುಗಳ ಲಾಭವನ್ನು ದ್ವಿಗುಣಗೊಳಿಸಲಿದೆ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement