Advertisement

ಕೋವಿಡ್ ಕುರಿತಾದ ಸಂಚು ಸಿದ್ಧಾಂತಗಳು: ಮೋದಿ ವೈಫಲ್ಯವನ್ನೂ, ಕಾರ್ಪೊರೇಟ್ ವ್ಯವಸ್ಥೆಯನ್ನೂ ರಕ್ಷಿಸುವ ತಂತ್ರಗಳು

Advertisement

ಲೇಖನ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಮೋದಿ ವೈಫಲ್ಯವನ್ನೂ, ಕಾರ್ಪೊರೇಟ್ ವ್ಯವಸ್ಥೆಯನ್ನೂ ರಕ್ಷಿಸುವ ತಂತ್ರಗಳು ಕೋವಿಡ್ ನಿರ್ವಹಣೆಯಲ್ಲಿ ಕ್ರಿಮಿನಲ್ ಬೇಜವಾಬ್ದಾರಿ ತೋರಿದ ಮೋದಿ ಸರ್ಕಾರ ಇಂದು ಭಾರತವನ್ನು ದೊಡ್ಡ ದುರಂತಕ್ಕೀಡು ಮಾಡಿದೆ. ಇದು ಜನರ ಅರಿವಿಗೂ ಬರತೊಡಗಿರುವುದು ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಗಳ ಫಲಿತಾಂಶಗಳಲ್ಲಿ ಹಾಗೂ ಉತ್ತರಪ್ರದೇಶದ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಸ್ಪಷ್ಟವಾಗಿ ಕಂಡಿದೆ. ಹೀಗಾಗಿ ಜನರ ದುರ್ಭರ ಪರಿಸ್ಥಿತಿಗಿಂತ ಮೋದಿಯ, ಮೋದಿ ಸರ್ಕಾರದ ಹಾಗೂ ಬಿಜೆಪಿ ಪಕ್ಷದ ಇಮೇಜಿನ ಬಗ್ಗೆ ಗಾಬರಿಗೊಂಡಿರುವ ಆರೆಸ್ಸೆಸ್-ಬಿಜೆಪಿ ಕೂಟ ಈ ಪರಿಸ್ಥಿತಿಯಿಂದ ಹೊರಬರಲು ಹಲವಾರು ತಂತ್ರಗಳನ್ನು ಹೆಣೆಯುತ್ತಿದೆ. ಅದಕ್ಕಾಗಿ ಈಗಾಗಲೇ ಎರಡು ಮೂರು ಸುತ್ತು ಅಧಿಕಾರಿಗಳ ಸಭೆಯನ್ನು ನಡೆಸಿದೆ. ಆರೆಸ್ಸೆಸ್ ನ ಅಂಗಸಂಸ್ಥೆಗಳು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮೋದಿ ಸರ್ಕಾರವನ್ನು ದೂರುವ ನಕಾರಾತ್ಮಕ ಧೋರಣೆಯನ್ನು ಬೆಳೆಸಿಕೊಳ್ಳದೆ ಸಕಾರಾತ್ಮಕವಾಗಿ ಯೋಚಿಸಬೇಕೆಂದು Positivity Unlimited (ಅಪರಿಮಿತ ಸಕಾರಾತ್ಮಕತೆ) ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿವೆ. ಅದರ ಭಾಗವಾಗಿಯೇ ಮೊನ್ನೆ ಆರೆಸ್ಸೆಸ್ನ ಭಾಗವತರು ಕೋವಿಡ್ ನಿಂದ ಸತ್ತರೂ ಚಿಂತೆ ಮಾಡಬೇಡಿ, ಭಾರತೀಯರಿಗೆ ಪುನರ್ಜನ್ಮವಿದೆ ಎಂದು ಪಾಸಿಟೀವ್ ಆಲೋಚನೆಗಳನ್ನು ಹಂಚಿದ್ದರು. ಇದರ ಜೊತೆಗೆ ಮೊನ್ನೆ ಆರೆಸ್ಸೆಸ್ ಹಾಗೂ ಬಿಜೆಪಿ ವರಿಷ್ಟರು ಸಭೆ ಸೇರಿ ಕೋವಿಡ್ ನಿರ್ವಹನೆಯಲ್ಲಿ ಸರ್ಕಾರದ ವೈಫಲ್ಯದಿಂದ ಬಿಜೆಪಿಯ ಭವಿಷ್ಯಕ್ಕೆ ಉಂಟಾಗಿರುವ ಧಕ್ಕೆಯನ್ನು ನಿವಾರಿಸಿಕೊಳ್ಳಲು ಹಲವಾರು ಆಕ್ರಮಣಕಾರಿ ಸಾಫ್ತ್ ಹಾಗೂ ಹಾರ್ಡ್ ಯೋಜನೆಗಳನ್ನು ರೂಪಿಸಿದ್ದಾರೆ. ಅದರ ಭಾಗವಾಗಿಯೇ- ಕೋವಿಡ್ ಸಾಂಕ್ರಾಮಿಕದ ಬಗ್ಗೆ ಭಾರತದ ಮೇಲೆ ಪರದೇಶದ ಸಂಚೆಂಬ ಕಥನವನ್ನು ಬಿತ್ತುವ, ಹಾಗೂ ಮೋದಿ ಸರ್ಕಾರವನ್ನು ಈ ವಿದೇಶಿ ಸಂಚಿನ ಬಲಿಪಶುವೆಂದು ಚಿತ್ರಿಸುತ್ತಾ ಕೋವಿಡ್ ವೈಫಲ್ಯಕ್ಕೆ ಮೋದಿ ಸರ್ಕಾರವನ್ನು ಟೀಕಿಸುವವರನ್ನೆಲ್ಲಾ ಭಾರತದ ಮೇಲೆ ಕೋವಿಡ್ ದಾಳಿ ಮಾಡುತ್ತಿರುವ ವಿದೇಶಿ ಶಕ್ತಿಗಳ ಏಜೆಂಟೆರೆಂದು ಪಟ್ಟಕಟ್ಟು ವ್ಯವಸ್ಥಿಯ ಯೋಜನೆಯೊಂದು ರೂಪುಗೊಂಡಿದೆ. ಕೋವಿಡ್ ಮೊದಲನೆ ಅಲೆಯ ಕಾಲದಲ್ಲಿ ಮೋದಿ ನೇತೃತ್ವದಲ್ಲಿ ಭಾರತ ಯಶಸ್ವಿಯಾಗಿ ಕೋವಿಡ್ಡನ್ನು ಗೆದ್ದು ಜಗತ್ತನ್ನೇ ಬಚಾವು ಮಾಡಿದರು ಎಂಬ ಕಥಾನಕ ಹರಿಬಿಟ್ಟಿದ್ದರಿಂದ ಆಗ ಸಂಚು ಸಿದ್ಧಾಂತಗಳು ಹೆಚ್ಚು ಬಳಕೆಯಾಗಲಿಲ್ಲ. ಆಗ ಕೋವಿಡ್ ಸಂದರ್ಭವನ್ನು ತಬ್ಲೀಘಿಗಳ ಮೇಲೆ ಹೊರಿಸಿ ಹಿಂದೂತ್ವ ವೋಟ್ ಬ್ಯಾಂಕನ್ನು ಸಧೃಡೀಕರಿಸಿಕೊಳ್ಳಲು ಮತ್ತು ಕೋವಿಡ್ ವಿರುದ್ಧ ಗಂಜಲ, ಸಗಣಿ, ಜಾಗಟೆ, ದೀಪ ದಂಥ ಹಿಂದೂ ಜೀವನ ವಿಧಾನಗಳು ಹೇಗೆ ಪರಿಣಾಮಕಾರಿಯಾಗಿವೆ ಎಂದು ಪ್ರಚಾರ ಮಾಡಲು ಹೆಚ್ಚು ಬಳಸಿಕೊಂಡರು. ಎರಡನೇ ಅಲೆ: ಬೆತ್ತಲಾದ ಮೋದಿಗೆ ಸಂಚುಗಳ ಬಟ್ಟೆ ತೊಡಿಸುವ ಪ್ರಯತ್ನ ಆದರೆ ಎರಡನೇ ಅಲೆಯಲ್ಲಿ ಮೋದಿ ಸರ್ಕಾರದ ಕ್ರಿಮಿನಲ್ ಬೇಜವಾಬ್ದಾರಿಯ ಹಾಗೂ ಸರ್ಕಾರಿ ಕೃಪಾಪೋಷಿತ ಮೌಢ್ಯದ ಪರಿಣಾಮಗಳು ಕಣ್ಣಿಗೆ ರಾಚುವಂತೆ ಗೋಚರಾವಾಗತೊಡಗಿತು. ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಹಾಗೂ ಸಾವುಗಳು ಹುಟ್ಟಿಸುತ್ತಿರುವ ಆಕ್ರೋಶವನ್ನು ಯಾವ ಬಗೆಯ ಮೊಸಳೆ ಕಣ್ಣೀರಿಂದಲೂ ಸಮಾಧಾನಿಸಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗತೊಡಗಿತು. ಹಾಗೂ ಮೋದಿ ಸರ್ಕಾರದ ಅರಿವುಗೇಡಿತನದಿಂದಾಗಿಯೇ ಈ ಸದ್ಯಕ್ಕೆ ಕೋವಿಡ್ ಅನ್ನು ನಿಯಂತ್ರಿಸಲು ಬೇಕಾದ ವ್ಯಾಕ್ಸಿನ್ ದೊರೆಯುವ ಯಾವ ಸಾಧ್ಯತೆಗಳು ಇಲ್ಲ. ಹೀಗಾಗಿ ಇನ್ನೂ ಹೆಚ್ಚು ಸಾವು ಮತ್ತು ಸಂಕಷ್ಟಗಳು ಹೆಚ್ಚಾಗಲಿವೆ. ಮತ್ತದು ಮೋದಿ ಸರ್ಕಾರದ ಮೇಲೆ ಹಾಗೂ ಆರೆಸ್ಸೆಸ್-ಬಿಜೆಪಿ ಕೂಟದ ಮೇಲೆ ಇನ್ನೂ ಕೆಟ್ಟ ಪರಿಣಾಮ ಬೀರುತ್ತದೆ. ಈ ಭವಿಷ್ಯ ಅರ್ಥವಾಗುತ್ತಿದ್ದಂತೆ ಆಳುವ ದುಷ್ಟಕೂಟದ ಫ್ಯಾಕ್ಟರಿಯಲ್ಲಿ ಹಲವು ಸುಳ್ಳುಗಳು ಉತ್ಪಾದನೆಯಾಗುತ್ತಿವೆ. ಅದರಲ್ಲಿ ಬಹುಮುಖ್ಯವಾದದ್ದು ಕೋವಿಡ್ ಎರಡನೇ ಅಲೆಯು ವಿದೇಶಿ ಶಕ್ತಿಗಳು ಭಾರತದ ಮೇಲೆ ನಡೆಸುತ್ತಿರುವ ಜೈವಿಕ ಯುದ್ಧದ ಭಾಗ ಎಂಬ ಸಂಚು ಸಿದ್ಧಾಂತ. ಇದನ್ನು ಪ್ರಧಾನಿ ಹಾಗೂ ಹಣಕಾಸು ಮಂತ್ರಿ ಇಬ್ಬರೂ ಫಾಲೋ ಮಾಡುವ ಅಭಿ ಅಥಾವಳೆ ಎಂಬುವನ ಟ್ವೇಟ್ ನಲ್ಲಿ ಮೊದಲು ಪ್ರಚಾರವಾಯಿತು. ನಂತರ ದೇಶಾದ್ಯಂತ ಅದನ್ನು ಎಲ್ಲಾ ಬಿಜೆಪಿಗಳು ವಿಸ್ತೃತ ಪ್ರಚಾರ ಮಾಡಿದರು. ಆರೆಸ್ಸೆಸ್ ಪ್ರಾಯೋಜಿತ ಹಲವಾರು ಯೂಟ್ಯೂಬ್ ಚಾನೆಲ್‌ಗಳಲ್ಲಿ, ಜಿಡಿ ಭಕ್ಷಿ ಯಂಥ ಹಾಲಿ ಆರೆಸ್ಸೆಸ್ಸಿಗ ಮಾಜಿ ಸೇನಾಧಿಕಾರಿ ಮೋದಿಯನ್ನು ಕೆಳಗಿಳಿಸಲೆಂದೇ ಪಾಕಿಸ್ತಾನದಂಥ ದೇಶಗಳು ಭಾರತದಲ್ಲಿ ಕೋವಿಡ್ ಎರಡನೇ ಅಲೆ ಹಬ್ಬಲು ಕಾರಣವಾಗಿವೆ ಎಂದು ಅಧಿಕೃತ ಮಿಲಿಟರಿ ಧ್ವನಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ತಲೆತಿರುಕ ಪ್ರಚಾರಗಳು ಜನರ ಮುಂದೆ ತರ್ಕರಹಿತವಾಗಿ ಬೆತ್ತಲಾಗುತ್ತಿದ್ದಂತೆ ಮೊನ್ನೆ ಬಿಜೆಪಿ ಗಳು ಕಾಂಗ್ರೆಸ್ ನವರು ಮೋದಿಯನ್ನು ಬದ್ ನಾಮ್ ಮಾಡಲೆಂದೇ ಒಂದು ಟೂಲ್‌ಕಿಟ್ ತಯಾರಿಸಿದ್ದಾರೆ ಎಂಬ ಹುಯಿಲೆಬ್ಬಿಸಿದರು. ಆದರೆ ಅದು ಬಿಜೆಪಿಯ ಸುಳ್ಳು ಸೃಷ್ಟ್ಟಿ ಎಂದು ಟ್ವೀಟರ್ ಸಂಸ್ಥೆ ಲೇಬಲ ಮಾಡುತ್ತಿದ್ದಂತೆ ವರ ಕಚೇರಿಯ ಮೇಲೆ ದಾಳಿ ನಡೆಸಿ ಹೆದರಿಸಲು ನೋಡಿದರು. ಮೋದಿ ಸಂಚಿನಲ್ಲಿ ಕನ್ನಡ ಮೋದ್ಯಮಗಳು- ಹಳಸಲು ಸುಳ್ಳುಗಳ ’ಜೋಷ್’ಗಳು ಈ ಎಲ್ಲಾ ಅಂತೆಕಂತೆಗಳ ಜೊತೆಗೆ ಈಗ ಕನ್ನಡ ಮಾಧ್ಯಮ ಲೋಕದಲ್ಲೂ ಚಾಲ್ತಿಯಲ್ಲಿರುವ ಬಿಜೆಪಿಯ ಮತ್ತೊಂದು ಮುಖ ಉಳಿಸಿಕೊಳ್ಳುವ ಕಥನವೆಂದರೆ ಕೋವಿಡ್ ಎಂಬ ಸಾಂಕ್ರಾಮಿಕ ಜಗತ್ತಿನ ಮೇಲೆ ದಾಳಿ ಮಾಡುವ ಸೂಚನೆ 2015ರಲ್ಲೇ ಪಾಶ್ಚಿಮಾತ್ಯ ದೇಶಗಳಿಗೆ ಗೊತ್ತಿತ್ತು. ಬಿಲ್ ಗೇಟ್ಸ್ ನಂಥ ಕೆಲವು ಬಹುರಾಷ್ಟ್ಟ್ರೀಯ ಕಂಪನಿಗಳು ಅದರಿಂದ ಲಾಭ ಮಾಡಿಕೊಳ್ಳುವ ತಯಾರಿಯನ್ನು ಮಾಡಿಕೊಂಡಿದ್ದವು. ಹೀಗಾಗಿ ಭಾರತವೂ ಸಹ ಇಂಥಾ ಒಂದು ಬಹುರಾಷ್ಟೀಯ ಕಂಪನಿಗಳ ಶಡ್ಯಂತ್ರದ ಬಲಿಪಶುವೇ ಆಗಿದೆ. ಹೀಗಾಗಿ, ಪಾಪ, ಮೋದಿಯೇನು ಮಾಡಿಯಾರು ಎಂಬುದು ಈ ಹುಸಿ ಪ್ರಚಾರದ ಸಾರಾಂಶ. ಹಾಲಿ ಮೋದ್ಯಮದ ಭಾಗವಾಗಿರುವ ಕನ್ನಡದ ಸ್ವಘೋಷಿತ ಪತರ್ಕರ್ತರೊಬ್ಬರ ಆ ವಿಡಿಯೋ ಮುಸ್ಲಿಮರನ್ನೋ, ಇಸ್ಲಾಂ ರಾಷ್ಟ್ರಗಳನ್ನೋ ಗುರಿಮಾಡಿಕೊಳ್ಳದೆ ಒಂದೆರಡು ಬಹುರಾಷ್ಟ್ರೀಯ ಕಂಪನಿಗಳನ್ನು ಸಂಚುಕರ್ತರೆಂದು ದೂರುವುದರಿಂದ ಹಾಗೂ ಅದಕ್ಕೆ ಪೂರಕವಾಗಿ ಅದು ಹಲವು ಆಯ್ದ ದಾಖಲೆಗಳನ್ನು ಆಯ್ದ ರೀತಿಯಲ್ಲಿ ಪ್ರದರ್ಶಿಸುವುದರಿಂದ ಹಲವು ಜನಸಾಮಾನ್ಯರು ಕೂಡ ಈ ವಿಡಿಯೋದ ವಿಷಯಗಳ ಬಗ್ಗೆ ಗೊಂದಲಕ್ಕೆ ಬಿದ್ದಂತಿದೆ. ಹೀಗಾಗಿ ಮೊದಲು ಆ ವಿಡಿಯೋದ ಸಾರಾಂಶವೇನೆಂದು ನೋಡೋಣ: 2015ರಲ್ಲೇ ಕೋವಿಡ್ ಗೆ ಪೇಟೆಂಟ್ ಮಾಡಲಾಗಿತ್ತೇ? ಆ ವಿಡಿಯೋ ವಾದದ ಪ್ರಕಾರ ರಿಚರ್ಡ್ ರೋತ್ ಶೀಲ್ಡ್ ಎಂಬ ವ್ಯಕ್ತಿ 2015ರಲ್ಲೇ “ SYSTEM AND METHOD FOR TESTING COVID-19 ” ( ಕೋವಿಡ್ 19 ರ ಪರೀಕ್ಷೆಯನ್ನು ಮಾಡುವ ವ್ಯವಸ್ಥೆ ಮತ್ತು ವಿಧಾನಗಳು )ಎಂಬ ಸಂಶೋಧನೆಗೆ ಪೇಟೆಂಟ್ ನೀಡಲು ಡಚ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಹಾಗಿದ್ದಲ್ಲಿ ಅವರಿಗೆ 2019ಕ್ಕೆ ಕೋವಿಡ್ ಜಗತ್ತಿನ ಮೇಲೆ ದಾಳಿ ಮಾಡುತ್ತದೆ ಎಂಬುದು 2015 ರಲ್ಲೇ ಹೇಗೆ ಗೊತ್ತಾಗಿತ್ತು? ಆದ್ದರಿಂದ ಇದು ಪೂರ್ವ ನಿಯೋಜಿತ ಸಂಚೇ ಸರಿ.. ಎಂಬುದು ಆ ವಿಡಿಯೋ ಮಾಡುವ ಜೋಷಿನ ತೀರ್ಮಾನ...! ಅದಕ್ಕೆ ಪುರಾವೆಯಾಗಿ ಆ ವಿಡಿಯೋದಲ್ಲಿ ರೋತ್ ಶೀಲ್ಡ್ ಅವರ ’ಅರ್ಜಿ ಮೂಲ 2015 ಎಂದು ನಮೂದಿಸಿರುವ ದಾಖಲೆಯನ್ನು ತೋರಿಸಲಾಗುತ್ತದೆ. ಅದರಲ್ಲಿ ಅರ್ಜಿಯ ಹಾಲಿ ದಿನಾಂಕ 2020 ಎಂದೇ ಇದ್ದರೂ ಅರ್ಜಿಯ ಮೂಲ ಹಾಗೂ ನಂತರದ ಸರಣಿ ದಿನಾಂಕಗಳಲ್ಲಿ 2015 ಮತ್ತು 2017ರ ಉಲ್ಲೇಖಗಳಿವೆ. ವಾಸ್ತವದಲ್ಲಿ ಈ ಗುಮಾನಿಗಳೂ ಹಾಗು ಸಂಚು ಸಿದ್ದಾಂತವು 2020ರ ಪ್ರಾರಂಭದಲ್ಲೇ ಪಶ್ಚಿಮ ದೇಶಗಳಲ್ಲಿ ಹರಿದಾಡಿತ್ತು. ಹಾಗೂ ಅದರ ಬಗ್ಗೆ ಸಾಕಷ್ಟು ತನಿಖೆ ಹಾಗೂ ಸಂಶೋಧನೆ ನಡೆದು ಈ ರೋತ್ ಶೀಲ್ಡ್ ಕಹಾನಿ ಸುಳ್ಳೆಂದು ರುಜಾವಾತಾಗಿತ್ತು. ಮಾತ್ರವಲ್ಲ. ಹಿಂದಿಯಲ್ಲಿ ಯುಪಿಎಸ್‌ಸಿ ಯಲ್ಲಿ ಮುಸ್ಲಿಮರು ಹೆಚ್ಚು ಪಾಸಾಗುತ್ತಾ ಭಾರತದ ಮೇಲೆ ಯುಪಿಎಸ್‌ಸಿ ಜಿಹಾದ್ ನಡೆಸುತ್ತಿದ್ದಾರೆ ಎಂಬ ಕಾರ್ಯಕ್ರಮ ನಡೆಸಲು ಮುಂದಾಗಿದ ಹಿಂದೂತ್ವ ಭಯೋತ್ಪಾದಕ ಸುರೇಶ್ ಚವಾಂಕೆ ಯ ಸುದರ್ಶನ್ ಚಾನೆಲ್ ಏಪ್ರಿಲ್ ನಲ್ಲೇ ಈ ಕಥನವನ್ನು ಪ್ರಕಟಿಸಿ ಸುಳ್ಳೆಂದು ಸಾಬೀತಾದ ಮೇಲೆ ಸುಮ್ಮನಾಗಿತ್ತು. ವಾಸ್ತವದಲ್ಲಿ, ಇದರ ಬಗ್ಗೆ ಹತ್ತಾರು ಮಾಧ್ಯಮ ಸಂಸ್ಥೆಗಳು ದಾಖಲೆಗಳನ್ನೆಲ್ಲಾ ಜಾಲಾಡಿ ’ಫ್ಯಾಕ್ಟ್ ಚೆಕ್ ಮಾಡಿ ಈ ಸುದ್ದಿ ಅಪ್ಪಟ ಸುಳ್ಳೆಂದು ಸಾಬೀತು ಮಾಡಿವೆ. ಅದಾದ ಹಲವಾರು ತಿಂಗಳುಗಳ ನಂತರ ಈಗ ಹೊಸ ಸಂಶೋಧನೆ ಎಂಬಂತೆ ಕನ್ನಡದ ಈ ’ಮೋದ್ಯಮ’ ಕನ್ನಡಿಗರಿಗೆ ಸುಳ್ಳನ್ನು ಮಾತ್ರವಲ್ಲ ಹಳಸನ್ನು ಉಣಬಡಿಸುತ್ತಿವೆ...! ಅದರಲ್ಲಿ ಕೆಲವು ಪ್ರಮುಖ ತನಿಖಾ ವರದಿಗಳ ಲಿಂಕ್ ಕೆಳಗಿದೆ.: https://www.reuters.com/article/uk-factcheck-coronavirus-patent-idUSKBN22M0SW https://www.reuters.com/article/factcheck-gates-list-idUSL1N2LO230 https://www.newtral.es/bulo-paises-bajos-patente-datos-covid-19/20201005/

ಈ ತನಿಖೆಗಳು ಬಯಲು ಮಾಡಿರುವ ವಾಸ್ತವ ಇದು: 2015ರಲ್ಲಿ ಪೇಟೆಂಟ್ ಕೇಳಿದ್ದು ಕೋವಿಡ್-19ರ ಬಗ್ಗೆ ಅಲ್ಲ - 2015ರಲ್ಲಿ ಈ ರೋತ್ ಶೆಲ್ಡ್ ಮಹಾಶಯ ಪೇಟೆಂಟ್ ಒಂದಕ್ಕೆ ಅರ್ಜಿ ಸಲ್ಲಿಸಿದ್ದು ನಿಜ ಆದರೆ ಅದು SYSTEM AND METHOD FOR TESTING COVID-19 ( ಕೋವಿಡ್ 19ರ ಪರೀಕ್ಷೆಯನ್ನು ಮಾಡುವ ವ್ಯವಸ್ಥೆ ಮತ್ತು ವಿಧಾನಗಳು ) ಗಾಗಿ ಅಲ್ಲ ... ಬದಲಿಗೆ Acquiring and Transmitting Biometric Data ಕುರಿತಾಗಿತ್ತು....( ಬಯೋಮೆಟ್ರಿಕ್ ದತ್ತಾಂಶಗಳನ್ನು ಸಂಗ್ರಹಿಸುವ ಹಾಗು ಸಾಗಿಸುವ ವಿಧಾನಗಳ ಬಗ್ಗೆ ) - ಹೀಗಾಗಿ ಪೇಟೆಂಟ್ ರಿಜಿಸ್ಟ್ರೇಷನ್ ವಿಧಾನದ ಪ್ರಕಾರ ಅದೇ ವ್ಯಕ್ತಿ ತನ್ನ ಹಳೆಯ ಪೇಟೆಂಟ್ ವಿಷಯವನ್ನೇ ಪ್ರತಿವರ್ಷವೂ ಸುಧಾರಣೆ ಮಾಡುತ್ತಾ “Acquiring and Transmitting Biometric Data ವಿಷಯಕ್ಕೆ ಸಂಬಂಧಿಸಿದ ಮತ್ತು ಸುಧಾರಿಸಿದ -ಅಪಡೇಟೆಡ್ ಅರ್ಜಿಗಳನ್ನು 2016, 2017ರಲ್ಲೂ ಸಲ್ಲಿಸಿದ - ಆಗಲೂ ಅದಕ್ಕೂ ಕೋವಿಡ್ 19ಕ್ಕೂ ಯಾವ ಸಂಬಂಧವೂ ಇರಲಿಲ್ಲ. -ಈ ಅರ್ಜಿ ಸರಣಿಯ ಮುಂದುವರೆದ ಭಾಗವಾಗಿ ಪ್ರಪ್ರಥಮ ಬಾರಿಗೆ, ಕೋವಿಡ್ 19 ಜಗತ್ತಿನ ಮೇಲೆ ದಾಳಿ ನಡೆಸಿದ ತಿಂಗಳುಗಳ ನಂತರ, 2020ರಲ್ಲಿ ಆತ ತನ್ನ ಹಳೆಯ ವಿಷಯವನ್ನು ಬದಲಿಸಿ SYSTEM AND METHOD FOR TESTING COVID-19” ಗಾಗಿ ಪೇಟೆಂಟ್ ಅರ್ಜಿ ನವೀಕರಿಸಿದ. - ಆದರೆ ವಿಷಯ ಹೊಸದಾಗಿದ್ದರೂ ಅರ್ಜಿಯ ಮೂಲ ಪ್ರಾರಂಭವಾಗಿದ್ದು ಮಾತ್ರ ಆತ 2015ರಂದು ಸಲ್ಲಿಸಿದ Acquiring and Transmitting Biometric Data ಅರ್ಜಿಯಿಂದ...ಹೀಗಾಗಿ ಅರ್ಜಿಯ ಸರಣಿ ವಿವರಗಳನ್ನು ಗಮನಿಸದೆ ಕೇವಲ ಕೊನೆಯ ಕಾಲಂ ಅನ್ನು ಮಾತ್ರ ಪರಿಗಣಿಸಿದಾಗ, ಆತ ಕೋವಿಡ್ 19ಕ್ಕೆ ಸಂಬಂಧಪಟ್ಟಂತೆ 2020ರಲ್ಲಿ ದಾಖಲಿಸಿದ ಪೇಟೆಂಟನ್ನೇ 2015ರಿಂದಲೂ ಕೇಳಿಕೊಂಡು ಬಂದಿದ್ದ ಎಂಬ ತಪ್ಪುಅಭಿಪ್ರಾಯ ಮೂಡಿಸುತ್ತದೆ.ಈಗಲೂ ಆತನಿಗೆ ಈ ಕೋವಿಡ್ 19 ವಿಷಯಕ್ಕೂ ಪೇಟೆಂಟ್ ಸಿಕ್ಕಿಲ್ಲ. ಈಗಲೂ ಅದು PENDING ಎಂದು ವರ್ಗೀಕೃತವಾಗಿದೆ. ಆದ್ದರಿಂದ 2015ರಲ್ಲೇ ಕೋವಿಡ್ 19 ಪರೀಕ್ಷೆಯ ವಿಧಾನದ ಬಗ್ಗೆ ಪೇಟೆಂಟ್ ದಾಖಲಾಗಿತ್ತು ಎಂಬುದು ಸುಳ್ಳು. ಎಲ್ಲಾ ವೈರಸ್ಸುಗಳ ಮೂಲ- ಬಂಡವಾಳಶಾಹಿ ಅಗ್ರಿಬಿಸಿನೆಸ್ ಆದರೆ ಈ ಸಂಚು-ಸುಳ್ಳಾಟಗಳು ಕೇವಲ ಮೋದಿಯ ವೈಫಲ್ಯಗಳನ್ನು ಮಾತ್ರವಲ್ಲದೇ ಇಂಥಾ ಸಾಂಕ್ರಾಮಿಕಗಳಿಗೆ ಕಾರಣವಾಗುವ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯ ಸಾಂಸ್ಥಿಕ ಕ್ರೌರ್ಯವನ್ನೂ ಮುಚ್ಚಿಡುತ್ತವೆ. ಏಕೆಂದರೆ ಇಂಥಾ ಸಾಂಕ್ರಾಮಿಕಗಳು ಹೊಸತೂ ಅಲ್ಲ. ಕೋವಿಡ್ ನಂತರ ಮುಗಿಯುವುದೂ ಇಲ್ಲ. ಏಕೆಂದರೆ, ಈಬಗೆಯ ರೋಗ ಸೃಷ್ಟಿಸುವ ಹೊಸ Pathogen (ರೋಗಕಾರಕ ವೈರಸ್ ಮತ್ತು ಬ್ಯಾಕ್ಟೀರಿಯಾ)ಗಳು ಹುಟ್ಟಿಕೊಳ್ಳಲು ಪ್ರಧಾನ ಕಾರಣವೇನೆಂದರೆ: -ಜಗತ್ತಿನಾದ್ಯಂತ ಸಹಸ್ರಮಾನಗಳಿಂದ ಚಾಲ್ತಿಯಲ್ಲಿದ್ದ ಸ್ಥಳೀಯ ವಾಯುಮಾನ ಹಾಗು ಪರಿಸರ ಆಧರಿಸಿದ ಕೃಷಿ ಯನ್ನು ಹಾಗು ಸ್ಥಳೀಯ ಪರಿಸರಜನ್ಯ ಕಾಡುಗಳನ್ನು ನಾಶಮಾಡಿರುವ ಬೃಹತ್ ಕೃಷಿ ಬಹುರಾಷ್ತ್ರೀಯ ಕಂಪನಿಗಳು. ಈ ಬೃಹತ್ MNC ಗಳು ಅಲ್ಲೆಲ್ಲ ದೊಡ್ಡಮಟ್ಟದಲ್ಲಿ ಏಕಸ್ವರೂಪಿ ಹಾಗು ತಳಿಸಂಸ್ಕರಿತ ಕಾರ್ಪೊರೇಟ್ (ಧಾನ್ಯ ಹಾಗು ಮಾಂಸ ) ಕೃಷಿಯನ್ನು ವಿಸ್ತರಿಸುತ್ತಿವೆ. ಆ ಮೂಲಕ ಹೊಸ ವೈರಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಹುಟ್ಟಲು, ಉಳಿಯಲು ಮತ್ತು ವಿಪುಲವಾಗಿ ಬೆಳೆಯಲು ಬೇಕಾದ ಏಕರೂಪಿ ಆಶ್ರಯದಾಯಿ (host) ವಾತಾವರಣವನ್ನು ಈ ಹೊಸ Agribusiness ಒದಗಿಸಿಕೊಟ್ಟಿದೆ. ಹಾಗು ಜಾಗತೀಕರಣದ ಸಂದರ್ಭದಲ್ಲಿ ಆಹಾರಾಭ್ಯಾಸಗಳು ಸಹ ಏಕರೂಪಿಯಾಗುತ್ತಾ ಇಂಥಾ MNC ಗಳ ಆಹಾರ ಸರಕುಗಳನ್ನೇ ಆಧರಿಸಿವೆ. ಹೀಗಾಗಿ ಎಲ್ಲೋ ಮೂಲೆಯಲ್ಲಿ ಹುಟ್ಟಿದ ವೈರಾಣುಗಳು ಬಹುಬೇಗನೆ ಜಗ್ಗತ್ತಿನಾದ್ಯಂತ ಹರಡುತ್ತಿವೆ. ಇಂದು ನಾವು ಎದುರಿಸುತ್ತಿರುವ ಚೀನಾ ಮೂಲದ ಕೋವಿಡ್-19 ಸೃಷ್ಟಿಸಿರುವ ಅವಘಡಗಳನ್ನೇ ಈ ಹಿಂದೆ ಇದೆ ಗುಂಪಿಗೆ ಸೇರಿದ ಸಾರ್ಸ್, H5N2, H5Nx ಪಶ್ಚಿಮ ಆಫ್ರಿಕಾದ ಎಬೋಲಾ, ಬ್ರೆಜಿಲ್ ಮೂಲದ ಜೈಕಾ, ಹಾಗು ಉತ್ತರ ಅಮೆರಿಕ ಮೂಲದ H1N1 ಮತ್ತು H5N2ಎಂದು ಗುರುತಿಸಲಾದ ವೈರಸ್ ಗಳೂ ಸಹ ಸೃಷ್ಟಿಸಿದ್ದವು. ಇಂದು ಕೋವಿಡ್-19 ಮೂರನೆ ಅಲೆ ಅಥವಾ ನಾಲ್ಕನೆ ಅಲೆಯೊಂದಿಗೆ ಇದು ಮುಗಿದರೂ ಇಂಥಾ ಸಾಂಕ್ರಾಮಿಕಗಳಿಗೆ ಕಾರಣವಾಗಿರುವ ಕಾರ್ಪೊರೇಟ್ ಅಗ್ರಿಬಿಸಿನೆಸ್ ಮತ್ತು ಜಾಗತೀಕರಣ ಮುಂದುವರೆಯುವುದರಿಂದ ನಾಳೆ ಮತ್ತೊಂದು ಸಾಂಕ್ರಾಮಿಕಕ್ಕೆ ಮನುಕುಲ ತುತ್ತಾಗುತ್ತದೆ. ಇಂಥ ಗಂಡಾಂತರಕ್ಕೆ ಕಾರಣವಾದ ಬಂಡವಾಳಶಾಹಿಗಳೇ, ಅದರ ನಿವಾರಣಾ ವ್ಯವಹಾರದಲ್ಲೂ ಲಾಭ ಮಾಡಿಕೊಳ್ಳುತ್ತಾ ಬಂದಿದ್ದಾರೆ.... ಇದೇ ಬಿಲ್ ಗೇಟ್ಸ್, ಇದೆ ಫೈಜರ್, ಇದೆ ಜಾನ್ಸನ್ ಅಂಡ್ ಜಾನ್ಸನ್ ಇತ್ಯಾದಿಗಳೂ ಮತ್ತು ಭಾರತದ ಅವರ ತದ್ರೂಪಿಗಳೂ ವ್ಯಾಕ್ಸಿನ್ ಗಳನ್ನೂ ಪೂರೈಸುತ್ತಾ ಕೋಟಿಕೋಟಿ ಲಾಭ ಸೂರೆಗೈಯುತ್ತಾ ಬಂದಿವೆ... ಇದು ನಡೆಯುತ್ತಿರುವುದು ಯಾರದೋ ಸಂಚಿನಿಂದಲ್ಲ... ಈ ಸುಲಿಗೆ ಹಾಗೂ ದುರಂತಗಳು ಪ್ರಜಾತಂತ್ರ-ಸರ್ವಾಧಿಕಾರಿ ಎಲ್ಲಾ ಬಗೆಯ ದೇಶಗಳಲ್ಲಿ ಅಧಿಕೃತವಾಗಿ ಜಾರಿಯಲ್ಲಿರುವ ಕಾರ್ಪೊರೇಟ್ ಜಾಗತೀಕರಣದ ಪರವಾದ ಶಾಸನ-ಕಾನೂನುಗಳ ಭಾಗವಾಗಿ...ಹಾಡು ಹಗಲಲ್ಲಿ.. ರಾಜಾರೋಷವಾಗಿ....ನಡೆಯುತ್ತಾ ಬರುತ್ತಿದೆ.. ಏಕೆಂದರೆ, ಟ್ರಂಪ್, ಬಿಡೆನ್, ಪುಟಿನ್... ಭಾರತದ ಮೋದಿಯಾದಿಯಾಗಿ ಎಲ್ಲರೂ ಇದೇ ಬಂಡವಾಳಶಾಹಿ ವ್ಯವಸ್ಥೆಯ ಮೇನೇಜರುಗಳು.... ಎಲ್ಲಾ ರಾಜಕೀಯ ಪಕ್ಷಗಳು ಇದೆ ಸುಲಿಗೆಕೋರರರಿಂದಲೇ ಫಂಡುಗಳನ್ನು ಎಲೆಕ್ಟೋರಲ್ ಬಾಂಡುಗಳನ್ನು ಪಡೆದುಕೊಂಡು ಚುನಾವಣೆ ಗೆಲ್ಲುತ್ತಾರೆ. ಗೆದ್ದ ನಂತರ ಈ ಕಾರ್ಪೊರೇಟ್ ಲೂಟಿಯ ಪರವಾಗಿ ನೀತಿಗಳನ್ನು ಮಾಡಿ ಬಂಡವಾಳಶಾಹಿ ವ್ಯವಸ್ಥೆಯನ್ನು ರಕ್ಷಿಸುತ್ತಾರೆ. ಪೋಷಿಸುತ್ತಾರೆ. ಮತ್ತೊಂದು ಕಡೆ ಪ್ರಕೃತಿಯನ್ನು ಮತ್ತು ಜನರನ್ನು ದುರಂತಕೆ ದೂಡುತ್ತಾರೆ. ಆದರೆ ಪರಿಸ್ಥಿತಿ ಕೈಮೀರಿದಾಗ ಜಗತ್ತಿನಾದ್ಯಂತ ಆಯಾ ದೇಶಗಳ ಭಟ್ಟರು, ಜೋಷಿಗಳು... ಸಂಚು ಸಿದ್ಧಾಂತ ಹೊಸೆಯುತ್ತಾ ಆಳುವವರನ್ನು ರಕ್ಷಿಸುವ ತಂತ್ರದಲ್ಲಿ ತೊಡಗುತ್ತಾರೆ. ಆದರೆ ಇದು ಯಾರದೋ ಕೆಲವು ದುಷ್ಟರ ಸಂಚಲ್ಲ. ಬದಲಿಗೆ ದುಷ್ಟ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯ ಪರಿಣಾಮ. ಈ ಬಂಡವಾಳ ಶಾಹಿ ವ್ಯವಸ್ಥೆ ನಾಶವಾಗಿ ಸಮಾಜಮುಖಿ, ಪ್ರಕೃತಿ ಸ್ನೇಹಿ, ಪರಿಸರ- ಸಮಾಜವಾದಿ ವ್ಯವಸ್ಥೆ ರೂಪುಗೊಳ್ಳದಿದ್ದರೇ ಹೊಸ ಹೊಸ ಕೋವಿಡ್ ಗಳು ಮನುಕುಲದ ಮೇಲೆ ದಾಳಿ ನಡೆಸುತ್ತಲೇ ಇರುತ್ತವೆ. ಆದ್ದರಿಂದಲೇ ವಾಟ್ಸಾಪ್ ಯೂನಿವರ್ಸಿಟಿಯಿಂದ ಬರುವುದನ್ನೆಲ್ಲಾ ನಂಬಬಾರದು... ಅದರಲ್ಲೂ ರೋಚಕವಾದದ್ದನ್ನೆಲ್ಲಾ ಅನುಮಾನದಿಂದಲೇ ನೋಡಬೇಕು. ವಿಶೇಷವಾಗಿ ಆಳುವವರ್ಗದ ತುತ್ತೂರಿಗಳ ಬಿತ್ತರಗಳನ್ನು ... ಕೃಪೆ: ವಾರ್ತಾಭಾರತಿ __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement