Advertisement

ಅಧಿಕಾರದಲ್ಲಿದ್ದಾಗ ದೊರೆಸ್ವಾಮಿಯವರ ಸಾತ್ವಿಕ ಸಿಟ್ಟಿಗೆ ಎಷ್ಟೋ ಬಾರಿ ಬೆದರಿದ್ದೆ: ಸಿದ್ದರಾಮಯ್ಯ ಮನದಾಳದ ಮಾತು!

Advertisement

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸಾವಿನಿಂದ ಆವರಿಸಿರುವ ಕತ್ತಲನ್ನು ಸಾವಿರ ಸೂರ್ಯೋದಯಗಳಿಂದಲೂ ದೂರ ಮಾಡಲು ಸಾಧ್ಯವಾಗಲಾರದು, ಅವರು ಅಂತಹದ್ದೊಂದು ಬೆಳಕಿನಪುಂಜವಾಗಿದ್ದರು. ಕೊನೆ ಉಸಿರಿನ ವರೆಗೆ ಹೋರಾಟದ ಬದುಕಿನಿಂದ ನಿವೃತ್ತರಾಗದೆ ಸಕ್ರಿಯರಾಗಿದ್ದ ದೊರೆಸ್ವಾಮಿ ಅವರ ದೇಶಪ್ರೇಮದ ಬದ್ಧತೆ, ಪ್ರಾಮಾಣಿಕತೆ ಹೋರಾಟದ ಛಲ, ಶಿಸ್ತುಬದ್ಧ ಜೀವನ, ಆರೋಗ್ಯದ ಬಗೆಗಿನ ಕಾಳಜಿ ಎಲ್ಲವೂ ಎಲ್ಲರಿಗೂ ಆದರ್ಶವಾದುದು. ನನ್ನ ಮತ್ತು ಅವರ ಸಂಬಂಧ ಕೇವಲ ಒಬ್ಬ ರಾಜಕಾರಣಿ ಮತ್ತು ಹೋರಾಟಗಾರನದ್ದಾಗಿರಲಿಲ್ಲ.. ತಪ್ಪು ಕಂಡಾಗ ಮುಲಾಜಿಲ್ಲದೆ ಎಚ್ಚರಿಸುತ್ತಿದ್ದ, ಸರಿಕಂಡಾಗ ನನ್ನ ನಿಲುವಿನ ಪರವಾಗಿ ಬಂಡೆಗಲ್ಲಿನಂತೆ ನಿಂತು ಬೆಂಬಲಿಸುತ್ತಿದ್ದ ಅವರು ನನ್ನ ಪಾಲಿನ ಮನೆ ಹಿರಿಯನಾಗಿದ್ದರು. ವೈಯಕ್ತಿಕವಾಗಿ ನಾನು ಮನೆ ಹಿರಿಯನನ್ನುಕಳೆದುಕೊಂಡ ದು:ಖದಲ್ಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಅವರು ಬ್ರಿಟಿಷರ ವಿರುದ್ದ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಿದ ವೀರ ಸೇನಾನಿಯಾಗಿದ್ದರು. ದೇಶಕ್ಕೆ ಸ್ವಾಂತಂತ್ರ್ಯ ಸಿಕ್ಕ ನಂತರ ಆ ಹೋರಾಟವನ್ನೇ ಬಂಡವಾಳ ಮಾಡಿಕೊಂಡು ಬಹಳ ಸುಲಭದಲ್ಲಿ ಅವರು ರಾಜಕೀಯ ಪ್ರವೇಶ ಮಾಡಿ ಶಾಸಕ,ಸಂಸದ, ಸಚಿವರಾಗಿಬಿಡಬಹುದಿತ್ತು. ಚುನಾವಣಾ ರಾಜಕೀಯದಿಂದ ಬಹುಬೇಗ ದೂರ ಸರಿದ ದೊರೆಸ್ವಾಮಿಯವರು ಸ್ವತಂತ್ರ ಭಾರತದಲ್ಲಿ ವಿರಮಿಸದೆ ತನ್ನ ಹೋರಾಟವನ್ನು ಮುಂದುವರಿಸಿದ್ದರು. ದೇಶದ,ನಾಡಿನ ಯಾವುದೋ ಮೂಲೆಯಲ್ಲಿ ಅನ್ಯಾಯ-ಅಕ್ರಮ ನಡೆದರೂ ದೊರೆಸ್ವಾಮಿಯವರು ಅಂಜದೆ, ಜಗ್ಗದೆ ನಿರ್ಭೀತಿಯಿಂದ ಹೋರಾಟದ ಕಣಕ್ಕಿಳಿಯುತ್ತಿದ್ದರು. ಈ ಮೂಲಕ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದ್ದರು. ನಾನು ಸಚಿವನಾಗಿದ್ದಾಗ, ನಂತರ ಮುಖ್ಯಮಂತ್ರಿಯವರಿದ್ದಾಗ ಹಲವಾರು ಬಾರಿ ದೊರೆಸ್ವಾಮಿಯವರು ನನ್ನನ್ನು ಭೇಟಿಯಾಗಿದ್ದರು. ಅವೆಲ್ಲವೂ ಸಾರ್ವಜನಿಕ ಮಹತ್ವದ ವಿಷಯಕ್ಕೆ ಸಂಬಂಧಿಸಿದ ಭೇಟಿಯಾಗಿದ್ದವು. ಅವರೆಂದೂ ವೈಯಕ್ತಿಕವಾದ ಯಾವುದೇ ಬೇಡಿಕೆಯನ್ನು ಮಂಡಿಸಿಲ್ಲ. ಸ್ವಾರ್ಥದ ಲವಲೆಶವೂ ಇಲ್ಲದ ಅವರ ಕಠೋರ ನೈತಿಕತೆ ಎದುರು ರಾಜಕಾರಣದಲ್ಲಿರುವ ನಾವೆಲ್ಲರೂ ತಲೆತಗ್ಗಿಸಲೇಬೇಕಾಗುತ್ತಿತ್ತು. ನಕ್ಸಲೀಯ ಹೋರಾಟದಲ್ಲಿ ತೊಡಗಿದ್ದವರು ಹಿಂಸೆಯ ಮಾರ್ಗ ತ್ಯಜಿಸಿ ನೆಲದ ಕಾನೂನಿಗೆ ಬದ್ಧರಾಗುವಂತೆ ಮನಪರಿವರ್ತಿಸಿ ಜನಪರ ಹೋರಾಟದಲ್ಲಿ ತೊಡಗುವಂತೆ ಮಾಡಲು ಅವರು ಪಟ್ಟ ಪ್ರಯತ್ನ ಮಾದರಿಯಾದುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಜೊತೆ ಹಲವಾರು ಬಾರಿ ನನ್ನನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಅವರು ಕೇವಲ ಬೇಡಿಕೆಗಳನ್ನು ಮುಂದಿಟ್ಟು ಹೋರಾಡುತ್ತಿರಲಿಲ್ಲ, ಬೇಡಿಕೆಗಳ ಈಡೇರಿಕೆಗೆ ಕಾನೂನಿನಡಿಯಲ್ಲಿಯೇ ಇರುವ ಪರಿಹಾರದ ಮಾರ್ಗವನ್ನೂ ತೋರಿಸಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತಿದ್ದರು. ಇದರಿಂದಾಗಿಯೇ ಅವರ ಆ ಹೋರಾಟ ಕೂಡಾ ಫಲಪ್ರದವಾಗಿತ್ತು ಎಂದವರು ದೊರೆಸ್ವಾಮಿ ಅವರನ್ನು ವಿಶ್ಲೇಶಿಸಿದ್ದಾರೆ. ಕೊಡಗಿನಲ್ಲಿ ಭೂಮಾಲೀಕರು ಬಡ ಅದಿವಾಸಿಗಳ ಒಕ್ಕಲೆಬ್ಬಿಸಿದಾಗ ಕೆಂಡಾಮಂಡಲವಾಗಿದ್ದ ದೊರೆಸ್ವಾಮಿಗಳು ನನ್ನ ಜೊತೆ ಜಗಳಕ್ಕೆ ನಿಂತಿದ್ದನ್ನು ನಾನು ಮರೆಯಲಾರೆ. ಆ ಆದಿವಾಸಿಗಳಿಗೆ ಇಂದು ನ್ಯಾಯ ಸಿಕ್ಕಿದ್ದರೆ ಅದಕ್ಕೆ ದೊರೆಸ್ವಾಮಿಯವರು ಕಾರಣ. ಅವರ ಸಾತ್ವಿಕ, ಅಷ್ಟೇ ಪ್ರಾಮಾಣಿಕವಾದ ಸಿಟ್ಟಿಗೆ ಎಷ್ಟೋ ಬಾರಿ ನಾನು ಭಯಪಡುವಂತಾಗಿತ್ತು. ಅದೇ ರೀತಿ ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳ ವಿರುದ್ಧ ಟೀಕೆ-ಟಿಪ್ಪಣಿಗಳು ವ್ಯಕ್ತವಾದಾಗ ನಮ್ಮ ಪರವಾಗಿ ಗಟ್ಟಿಯಾಗಿ ನಿಂತು ಸಮರ್ಥಿಸಿ ಶಕ್ತಿತುಂಬಿದ್ದನ್ನು ಕೂಡಾ ನಾನು ಮರೆಯಲಾರೆ ಎಂದಿದ್ದಾರೆ. ಈ ದೇಶದ ಏಕತೆ, ಸೌಹಾರ್ದತೆ, ಜಾತ್ಯತೀತತೆಯ ರಕ್ಷಣೆಗಾಗಿ ಹಗಲಿರುಳು ಚಿಂತಿಸುತ್ತಿದ್ದ ದೊರೆಸ್ವಾಮಿಯವರು ಈ ಮೌಲ್ಯಗಳೂ ಇತ್ತೀಚಿನ ದಿನಗಳಲ್ಲಿ ಅಪಮೌಲ್ಯಗೊಳ್ಳುತ್ತಿರುವುದನ್ನು ಕಂಡು ಚಿಂತಿತರಾಗಿದ್ದರು. ಇದಕ್ಕೆ ಮುಖ್ಯ ಕಾರಣ ಭವಿಷ್ಯದ ದೇಶ ಮತ್ತು ಮುಂದಿನ ತಲೆಮಾರಿನ ಬಗ್ಗೆ ಅವರಿಗಿದ್ದ ಕಾಳಜಿ. ವೈಯಕ್ತಿಕವಾಗಿ ನನ್ನ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ ಇತ್ತು, ನನಗೆ ಅವರ ಬಗ್ಗೆ ಅಷ್ಟೇ ಗೌರವ ಇತ್ತು. ದೊರೆಸ್ವಾಮಿಯವರು ಭೇಟಿಯಾಗಲು ಬರುತ್ತಾರೆಂದ ಕೂಡಲೆ ನಾನು ಸ್ವಲ್ಪ ವಿಚಲಿತನಾಗುತ್ತಿದ್ದೆ. ರಾಜಕೀಯದ ಚಕ್ರವ್ಯೂಹದೊಳಗಿದ್ದು ನಮ್ಮದೇ ಇತಿಮಿತಿಯೊಳಗೆ ಕೆಲಸಮಾಡಬೇಕಾದ ನನ್ನಂತಹವರಿಗೆ ದೊರೆಸ್ವಾಮಿಯವರಂತಹ ಪ್ರಾಮಾಣಿಕ ಹೋರಾಟಗಾರರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದು ಕಷ್ಟವಾಗುತ್ತಿತ್ತು. ಮೇಲ್ನೋಟಕ್ಕೆ ಹಟಮಾರಿ ಹಿರಿಯನಂತೆ ಕಂಡರೂ ದೊರೆಸ್ವಾಮಿಯವರ ಮನಸ್ಸು ಮೃದು ಮಾತ್ರವಲ್ಲ ಅಷ್ಟೇ ಉದಾರವಾಗಿತ್ತು. ನಮ್ಮ ಇತಿಮಿತಿ-ಅಸಹಾಯಕತೆಯನ್ನು ಅರ್ಥಮಾಡಿಕೊಂಡು ಸಹಕರಿಸುತ್ತಿದ್ದ ಅವರ ಔದಾರ್ಯದ ಗುಣ ಹೋರಾಟಗಾರರೆಲ್ಲರಿಗೂ ಅನುಕರಣೀಯವಾದುದು. ಒಂದು ಸಾರ್ಥಕವಾದ ಬದುಕನ್ನು ಪೂರ್ಣವಾಗಿ ಬದುಕಿ ದೊರೆಸ್ವಾಮಿಯವರು ನಮ್ಮನ್ನಗಲಿ ಹೋಗಿದ್ದಾರೆ. ಇದರಿಂದ ಸಾರ್ವಜನಿಕ ಬದುಕಿನಲ್ಲಿ ಯಾರೂ ತುಂಬಲಾರದ ನಿರ್ವಾತವೊಂದು ನಿಸ್ಸಂಶಯವಾಗಿ ಸೃಷ್ಟಿಯಾಗಿದೆ. ಸಾರ್ವಜನಿಕ ಹೋರಾಟ ಮತ್ತು ಹೋರಾಟಗಾರ ಹೇಗಿರಬೇಕು ಎನ್ನುವುದಕ್ಕೆ ಅವರ ಬದುಕು ಒಂದು ಮಾದರಿ. ಈ ಮಾದರಿಯನ್ನು ಆದರ್ಶವಾಗಿಟ್ಟುಕೊಂಡು ಅವರು ಬಹುವಾಗಿ ನಂಬಿದ್ದ ಹೊಸತಲೆಮಾರು ದೊರೆಸ್ವಾಮಿಯವರ ಹೋರಾಟವನ್ನು ಮುಂದುವರಿಸಿಕೊಂಡು ಹೋದರೆ ಅದೇ ಈ ಹಿರಿಯನಿಗೆ ಸಲ್ಲಿಸುವ ನಿಜವಾದ ಗೌರವವಾಗಲಿದೆ ಎಂದು ಹೇಳಿದ್ದಾರೆ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement