Advertisement

ಶೂದ್ರರ ಮೂರ್ಖತನವೇ ಪುರೋಹಿತಶಾಹಿಗಳ ಗೆಲುವಿಗೆ ರಹದಾರಿ! ಬರಹ: ಡಾ. ಜೆ ಎಸ್ ಪಾಟೀಲ.

Advertisement

ಈ ನೆಲದ ನೈಜ ವಾರಸುದಾರರುˌ ವಚನ ಚಳುವಳಿಯ ಕಥಾ ನಾಯಕರಾದ ಮಾದಾರ ಚನ್ನಯ್ಯ ˌ ಡೋಹಾರ ಕಕ್ಕಯ್ಯ ˌ ವಕ್ಕಲಿಗ ಮುದ್ದಣ್ಣನಂತ ಅಸಂಖ್ಯಾತ ಕೃಷಿ ಕಾಯಕದ ಶರಣರ ವಚನಗಳನ್ನು ನಾವು ಒಮ್ಮೆ ಅವಲೋಕಿಸುವ ಅಗತ್ಯವಿದೆ. ತಲೆತಲಾಂತರಗಳಿಂದ ವೈದಿಕ ಕರ್ಮಠರು ಶೂದ್ರರು ಬೆವರು ಸುರಿಸಿ ದುಡಿದು ಗಳಿಸಿದ ಫಲವನ್ನು ಹೇಗೆಲ್ಲ ನಿರಾಯಾಸವಾಗಿ ತಿನ್ನುತ್ತ ಬದುಕುತ್ತಿದ್ದಾರೆನ್ನುವ ಸಂಗತಿ ನಿಮಗೆಲ್ಲ ತಿಳಿಯುತ್ತದೆ. ಇಲ್ಲಿ ನಾನು ಆ ಶ್ರಮಿಕ ವರ್ಗದ ಶರಣರ ವಚನಗಳನ್ನು ನಿಮ್ಮೆದುರಿಗೆ ಇಡುತ್ತಿದ್ದೇನೆ. ಬರಹ: ಡಾ. ಜೆ ಎಸ್ ಪಾಟೀಲ. ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ; ಇರಿದು ಮೆರೆಯುವುದಕ್ಕೆ ಕ್ಷತ್ರಿಯನಲ್ಲ; ವ್ಯವಹರಿಸುವುದಕ್ಕೆ ವೈಶ್ಯನಲ್ಲ; ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ ಕಾಮಭೀಮಜೀವಧನದೊಡೆಯ ನೀನೆ ಬಲ್ಲೆ. ~ ಒಕ್ಕಲಿಗ ಮುದ್ದಣ್ಣ ಪುರೋಹಿತಶಾಹಿಗಳ ಶೋಷಣೆಯನ್ನು ತಡೆದು ನಿಲ್ಲಿಸಲು ಅಂದು ಶರಣರು ಅದಕ್ಕೆ ಪರ್ಯಾಯವಾಗಿ ಹೊಸ ವೈಚಾರಿಕ ವಚನ ಚಿಂತನೆಗಳನ್ನು ಜನರ ಮುಂದಿಡುತ್ತಾರೆ. ವಕ್ಕಲಿಗ ಮುದ್ದಣ್ಣ ಶರಣನ ಮೇಲಿನ ವಚನವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಪುರೋಹಿತಶಾಹಿಗಳು ಶೂದ್ರರ ಶ್ರಮದ ಫಲ ಹೇಗೆಲ್ಲ ವ್ಯರ್ಥವಾಗುತ್ತದೆ ಎನ್ನುವ ಚಿಂತನೆಗೆ ನಮ್ಮನ್ನು ದೂಡುತ್ತದೆ ಭಾರತದಲ್ಲಿ ದೇವರನ್ನು ಪ್ರತಿಷ್ಠಾಪಿಸಲು ಮಂದಿರ ನಿರ್ಮಿಸುವವರು ಅನೇಕ ಜನ ಶ್ರಮಿಕ ವರ್ಗದ ಶೂದ್ರ ಜನ. ದೇವಸ್ಥಾನ ಕಟ್ಟಿದಾದ ಮೇಲೆ ಆ ದೇವರ ವಾರಸುದಾರ ಆಗುವವನು ಒಬ್ಬ ಪುರೋಹಿತ. ಶೂದ್ರರನ್ನು ಅಕ್ಷರ ಸಂಸ್ಕ್ರತಿಯಿಂದ ವಂಚಿಸಿ ಒಂದಷ್ಟು ವೇದ ಶಾಸ್ತ್ರಗಳನ್ನು ಓದಿಕೊಂಡಿರುವ ಪುರೋಹಿತಶಾಹಿಗಳು ಶ್ರಮಿಕ ವರ್ಗದ ಜನರು ಬೆವರು ಹರಿಸಿ ಕಟ್ಟಿದ ಮಂದಿರವನ್ನು ಅತಿಕ್ರಮಿಸಿ ದೇವರು ಮತ್ತು ಭಕ್ತರ ನಡುವೆ ಒಂದು ದೊಡ್ಡ ತಡೆಗೋಡೆಯಾಗಿ ನಿಂತುಬಿಡುತ್ತಾರೆ. ಆ ದೇವರನ್ನು ಮುಂದಿಟ್ಟುಕೊಂಡು ವ್ಯಾಪಾರಕ್ಕಿಳಿಯುತ್ತಾರೆ. ಭಾರತ ದೇಶದ ಬಹು ದೊಡ್ಡ ಸಮಸ್ಯೆ ಎಂದರೆ ಈ ನಿರುಪಯುಕ್ತ ಪುರೋಹಿತರು ಪುರೋಹಿತಶಾಹಿಗಳು ಶ್ರಮಿಕರು ನಿರ್ಮಿಸಿದ ಮಂದಿರಗಳನ್ನು ಅತಿಕ್ರಮಿಸಿ ಕುಳಿತುಕೊಳ್ಳುತ್ತಾರೆ. ಕರಕುಶಲ ಕಲೆಯಲ್ಲಿ ಚತುರರಾರ ಶೂದ್ರರು ತಯಾರಿಸಿದ ಯುದ್ಧ ಸಾಮಗ್ರಿಗಳನ್ನು ಕ್ಷತ್ರಿಯರು ರಣರಂಗದಲ್ಲಿ ಬಳಸಿ ಹೆಸರು ಪಡೆದು ಶೂರ ವೀರರೆನ್ನಿಸಿಕೊಳ್ಳುತ್ತಾರೆ. ಶ್ರಮಿಕ ವರ್ಗದ ರೈತ ಬೆಳೆದ ಅನ್ನವನ್ನು ಮರಳಿ ಶೂದ್ರರಿಗೆನೇ ಮಾರಿ ಲಾಭ ಗಳಿಸುವ ವೈಶ್ಯರು. ಅಂತಿಮವಾಗಿ ಬೆವರು ಹರಿಸಿ ದುಡಿದ ಶ್ರಮಿಕ ವರ್ಗದ ಜನಕ್ಕೆ ಸುಖ ಸಿಗುವುದೇ ಇಲ್ಲ. ಚುನಾವಣೆಗಳು ಹತ್ತಿರ ಬಂದಾಗೆಲ್ಲ ಭಾರತದಲ್ಲಿ ಪುರೋಹಿತಶಾಹಿಗಳು ಜಾಗ್ರತರಾಗುತ್ತಾರೆ. ಚುನಾವಣೆಗಳಲ್ಲಿ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸುತ್ತ ಮತಬೇಟೆಗಿಳಿಯುತ್ತಾರೆ. ಉದಾಹರಣೆಗೆˌ ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಚುನಾವಣೆಯ ಸಂದರ್ಭದಲ್ಲಿ ಸಾವರಕರ್ ಗೆ ಭಾರತರತ್ನ ಪ್ರಶಸ್ತಿ ಕೊಡುವ ಸಂಗತಿ ಚುನಾವಣೆಯ ವಿಷಯವಾಗುತ್ತದೆ. ಆದೇ ಶೂದ್ರ ವರ್ಗದ ಅನೇಕ ಸಾಧಕರ ಹೆಸರು ಪುರೋಹಿತಶಾಹಿಗಳಿಗೆ ನೆನಪಾಗುವುದಿಲ್ಲ. ಕರ್ನಾಟಕದ ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂಬ ಕೂಗನ್ನು ಕೇಳಿಸಿಕೊಳ್ಳದ ಪುರೋಹಿತಶಾಹಿಗಳು ಈಗಿನ ಫ್ರಭುತ್ವವನ್ನು ನಿಯಂತ್ರಿಸುತ್ತಾ ಶೂದ್ರರು ಎಷ್ಟೆ ಉದಾತ್ ಜನಸೇವೆ ಮಾಡಿದರೂ ಕೂಡ ಅವರನ್ನು ಪ್ರಶಸ್ತಿಗಳಿಗೆ ಅರ್ಹರು ಎಂದು ಪರಿಗಣಿಸುವುದಿಲ್ಲ. ಆರಂಭದಲ್ಲಿ ಬ್ರಿಟೀಷರ ವಿರುದ್ಧ ಬಂಡೆದ್ದಿದ್ದ ಸಾವರಕರ್ ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣ ಸಮುದಾಯದ ವ್ಯಕ್ತಿ. ಅಂಡಮಾನ್ ದ್ವೀಪದ ನೆಲಮಾಳಿಗೆಯ ಜೈಲಿನಲ್ಲಿ ಬ್ರಿಟೀಷರ ತೀವ್ರ ಚಿತ್ರಹಿಂಸೆಗೆ ಹೆದರಿ ಕ್ಷಮಾಪಣಾ ಪತ್ರ ಬರೆದು ಮತ್ತು ಮುಂದೆ ಬ್ರಿಟೀಷರಿಗೆ ವಿಧೇಯನಾಗಿರುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಜೈಲಿನಿಂದ ಹೊರಗೆ ಬಂದು ಬ್ರಿಟೀಷರಿಂದ ಪಿಂಚಣಿ ಪಡೆದು ಸುಖವಾಗಿ ಜೀವಿಸಿದ್ದ ಬಲಪಂಥೀಯ ಹಿಂದುತ್ವ ಪ್ರತಿಪಾದಕ. ಸಾವರಕರ್ ಗೆ ಭಾರತರತ್ನ ಪ್ರಶಸ್ತಿ ಕೊಡುವ ಬಗ್ಗೆ ಹೀಗೊಂದು ಚರ್ಚೆ ಹುಟ್ಟುಹಾಕುವ ಪುರೋಹಿತಶಾಹಿಗಳು ಮಹಾ ದಾಸೋಹಿ ಸಿದ್ದಗಂಗಾ ಶ್ರೀಗಳ ಮಹಾನ್ ಸೇವೆಯನ್ನು ಉಪೇಕ್ಷಿಸುತ್ತವೆ. ಶೂದ್ರರು ಎಷ್ಟೆ ಜನಸೇವೆ ಮಾಡಿದರೂ ಪುರೋಹಿತಶಾಹಿಗಳಿಗೆ ಅದು ನಗಣ್ಯ ಎನ್ನುವುದು ಇದರಿಂದ ವಿಧಿತ. ಶೂದ್ರ ಜನಾಂಗ ಎಚ್ಚರಗೊಳ್ಳದ ಹೊರತು ಪರಾವಲಂಬಿಗಳ ಈ ಬಗೆಯ ಪಾರುಪತ್ಯ ಮುಂದೆಯೂ ಮುಂದುವರೆಯುತ್ತದೆ. ಸಾವರಕರ್ ಗೆ ಭಾರತರತ್ನ ಪಶ್ರಸ್ತಿ ಕೊಡುವುದಕ್ಕೆ ದೇಶಭಕ್ತ ವೈಚಾರಿಕ ಮನಸ್ಸುಗಳು ಸಹಜವಾಗಿ ವಿರೋಧಿಸುತ್ತವೆ. ಆಗ ಪುರೋಹಿತಶಾಹಿಗಳ ಪ್ರತಿಕ್ರಿಯೆ ಗಳನ್ನು ನಾವು ಗಮನಿಸಲೇಬೇಕು. ನಾಡಿನಲ್ಲಿ ಭೀಕರ ಬರಗಾಲವಿರಲಿˌ ನೆರೆ ಹಾವಳಿ ಇರಲಿ ಆ ಕುರಿತು ಎಂದಿಗೂ ಕಳವಳ ಪಡದ ಧಾರವಾಡದ ಸಂಸದ ಮತ್ತು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿಗೆ ಸಾವರಕರ್ ಗೆ ಭಾರತ ರತ್ನ ಪ್ರಶಸ್ತಿ ಕೊಡುವುದನ್ನು ದೇಶಾಭಿಮಾನಿಗಳು ವಿರೋಧಿಸಿದಾಗ ಒಮ್ಮೆಲೆ ಎಚ್ಚರವಾಗುತ್ತದೆ. ಬರಗಾಲ ಬರಲಿˌ ನೆರೆ ಹಾವಳಿಯಾಗಲಿˌ ಉತ್ತರ ಕರ್ನಾಟಕ ಮುಳುಗಲಿˌ ಕಳಸಾ ಬಂಡೋರಿ ವಿವಾದ ಬಗೆಹರಿಯದಿರಲಿˌ ಏನಾದರೂ ಆಗಲಿ ಅದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲವೆನ್ನುವಂತಿರುವ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಸಾವರಕರ್ ಗೆ ಭಾರತರತ್ನ ಬೇಡ ಎಂದು ಯಾರಾದರೂ ಹೇಳಿದರೆ ಧಡಕ್ಕನೆ ಎಚ್ಚರಗೊಂಡು ಪ್ರತಿಕ್ರೀಯೆ ನೀಡುತ್ತಾರೆ. ಸಾವರಕರ್ ಬಗ್ಗೆ ಜೋಷಿಯವರಿಗೆ ಯಾವ ರೀತಿಯ ಗೌರವ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಆದೇ ಜೋಷಿಯವರು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿ ಎಂದು ಗಟ್ಟಿಧನಿಯಲ್ಲಿ ಹೇಳಿದ್ದನ್ನು ನಾನಂತೂ ಕೇಳಿಲ್ಲ. ಜೋಷಿಯವರಿಗಿರುವ ಸ್ವಾಭಿಮಾನವನ್ನು ಶೂದ್ರರು ನೋಡಿ ಕಲಿತುಕೊಳ್ಳಬೇಕು. ಜನರ ಮೂಲಭೂತ ಸಮಸ್ಸೆಗಳಾದ ಪ್ರಾದೇಶಿಕ ಅಸ್ಮಿತೆಯ ನಾಡಧ್ವಜˌ ನಾಡಭಾಷೆˌ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗಿಂತ ಜೋಷಿಯವರಿಗೆ ಸಾವರಕರ್ ಗೆ ಭಾರತರತ್ನ ಪ್ರಶಸ್ತಿ ಕೊಡಿಸುವುದು ಮತ್ತು ಅದನ್ನು ವಿರೋಧಿಸುವವರನ್ನು ಟೀಕಿಸುವುದು ಮಹತ್ವದ ಸಂಗತಿಯಾಗುತ್ತದೆ. ಜೋಷಿಯವರನ್ನು ನೋಡಿಯಾದರೂ ಶೂದ್ರರು ಸ್ವಾಭಿಮಾನ ಮತ್ತು ಶೂದ್ರ ಅಸ್ಮಿತೆ ಬೆಳೆಸಿಕೊಳ್ಳಬೇಕಿದೆ. ಇಲ್ಲದಿದ್ದರೆ ನಾಳೆ ಈ ದೇಶದಲ್ಲಿ ಶೂದ್ರರ ಅಸ್ಥಿತ್ವವೇ ಉಡುಗಿಹೋಗವುದರಲ್ಲಿ ಅನುಮಾನವೆ ಇಲ್ಲ.

Advertisement
Advertisement
Recent Posts
Advertisement