Advertisement

ಸರ್ಕಾರೀ ಸ್ವತ್ತುಗಳ ನಗದೀಕರಣ ಯೋಜನೆ; ಭಾರತದ ಸುಲಿಗೆ-ಕಾರ್ಪೊರೇಟ್ ಕಂಪನಿಗಳಿಗೆ ಗುತ್ತಿಗೆ! ಬಂಡವಾಳ ಜನರದ್ದು- ಲಾಭ ಕಾರ್ಪೊರೇಟ್‌ಗಳದ್ದು!

Advertisement

ಭಾರತವನ್ನು ಸ್ವದೇಶಿ ಮತ್ತು ವಿದೇಶಿ ಕಾರ್ಪೊರೇಟ್ ಕಂಪನಿಗಳಿಗೆ ಸಗಟಾಗಿ ಮಾರಿಬಿಡಲು ಹಠತೊಟ್ಟಿರುವ ದೇಶಭಕ್ತ ಮೋದಿ ಸರ್ಕಾರ, ಆ ನಿಟ್ಟಿನಲ್ಲಿ ಮೊನ್ನೆ ಮತ್ತೊಂದು ಮಹಾ ಯೋಜನೆಯನ್ನು ಘೋಷಿಸಿದೆ. National Monetisation Pipeline(NMP-ರಾಷ್ಟ್ರೀಯ ನಗದೀಕರಣ ಯೋಜನೆ) ಎಂಬ ಹೆಸರಿನ ಈ ಯೋಜನೆಯಡಿಯಲ್ಲಿ ದೇಶದ ಲಕ್ಷಾಂತರ ಕೋಟಿ ಮೌಲ್ಯದ ಸಾರ್ವಜನಿಕ ಸ್ವತ್ತಿನ ನಿರ್ವಹಣೆ- ಉತ್ಪಾದನೆ-ಸೇವಾ ಪ್ರಾಯೋಜನೆಗಳ ಅಧಿಕಾರವನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗುವುದು. ಮತ್ತು ಅದಕ್ಕೆ ಪ್ರತಿಯಾಗಿ ಖಾಸಗಿ ಕಂಪನಿಗಳು ನೀಡುವ ಶುಲ್ಕಗಳಿಂದ ಮುಂದಿನ ನಾಲ್ಕು ವರ್ಷಗಳಲ್ಲಿ ಅಂದಾಜು 6 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸುವ ಉದ್ದೇಶವನ್ನು ಮೋದಿ ಸರ್ಕಾರ ಪ್ರಕಟಿಸಿದೆ. ಅಂದರೆ ಇದೂ ಕೂಡಾ ಈಗಾಗಲೇ ದೊಡ್ಡ ಮಟ್ಟದಲ್ಲಿ ವಿಫ಼ಲವಾಗಿರುವ PPP (ಸಾರ್ವಜನಿಕ-ಖಾಸಗಿ ಸಹಯೋಗ) ಯೋಜನೆಯ ಮತ್ತೊಂದು ರೂಪವೇ ಅಗಿದೆ. ಗಳಿಸಿದ-ಉಳಿಸಿದ ಸ್ವತ್ತನ್ನು ಮಾರಿ ದೈನಂದಿನ ಖರ್ಚನ್ನು ತೂಗಿಸುವ ಹಿಂದಿನ ಸರ್ಕಾರಗಳ ಮನೆಮುರುಕ ಆರ್ಥಿಕ ನೀತಿಯ ಮುಂದುವರೆಕೆಯೇ ಆಗಿದೆ.. ಮನೆಮುರುಕ ನೀತಿಗಳು- ಆತ್ಮವಂಚಕ ಸಮರ್ಥನೆಗಳು ಆದರೆ ಮೋದಿ ಸರ್ಕಾರದ ದೊಡ್ಡ ಆಸ್ತಿಯಾಗಿರುವ ಬೆನ್ನುಮೂಳೆಯಿಲ್ಲದ ಪಂಡಿತ ಗಣ ಹಾಗೂ ಮಾರಿಕೊಂಡ ಮಾಧ್ಯಮ ಬಣ ಈ ಮನೆಮುರುಕ ಯೋಜನೆಯನ್ನೂ ಕೂಡಾ ಮಾಸ್ಟರ್‌ಸ್ಟ್ರೋಕ್ ಎಂಬಂತೆ ಬಣ್ಣಿಸುತ್ತಾ ಹಲವಾರು ಅತಿರಂಜಿತ ಸಮರ್ಥನೆಗಳನ್ನು ಮುಂದಿಡುತ್ತಿವೆ. ಅದರಲ್ಲಿ ಮೊದಲನೆಯದು ಈ ನಗದೀಕರಣ ಯೋಜನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳ ಒಡೆತನವನ್ನೇನೂ ಖಾಸಗಿಯವರಿಗೆ ಪರಭಾರೆ ಮಾಡುತ್ತಿಲ್ಲ. ಬದಲಿಗೆ ಅವುಗಳ ನಿರ್ವಹಣೆಯನ್ನು ಮಾತ್ರ ಗುತ್ತಿಗೆ ನೀಡಿ, ಅವಧಿ ಮುಗಿದ ನಂತರ ಒಡೆತನವನ್ನು ಸರ್ಕಾರವು ಹಿಂಪಡೆಯಲಿದೆ ಎಂಬ ಅರ್ಧ ಸತ್ಯ. ಎರಡನೆಯದು, ಸರ್ಕಾರದ ಸುಫರ್ದಿನಲ್ಲಿರುವ ಸಾಕಷ್ಟು ಅಸ್ತಿಪಾಸ್ತಿಗಳ ಸಂಪೂರ್ಣ ಉಪಯೋಗವಾಗುತ್ತಿಲ್ಲ. ಉದಾಹರಣೆಗೆ ಸರ್ಕಾರಿ ಉದ್ಯಮಗಳ ಒಡೆತನದಲ್ಲಿ ಖಾಲಿ ಬಿದ್ದಿರುವ ಭೂಮಿ ಇದೆ. ಹಾಗೆಯೇ ಪಾರಂಪರಿಕ ಕಟ್ಟಡಗಳಿವೆ. ಇವುಗಳು ಯಾವುದೇ ಉತ್ಪಾದಕತೆ ಇಲ್ಲದೆ ವ್ಯರ್ಥವಾಗಿದೆ. ಅವುಗಳನ್ನು ಖಾಸಗಿಯವರಿಗೆ ಗುತ್ತಿಗೆಗೆ ಬಿಟ್ಟುಕೊಟ್ಟು ಶುಲ್ಕ ವಿಧಿಸಿದರೆ ಸರ್ಕಾರಕ್ಕೆ ಆದಾಯ ಬರುತ್ತದೆ. ಆದ್ದರಿಂದ ಅದರಲ್ಲಿ ಅದರಲ್ಲಿ ತಪ್ಪೇನಿದೆ ಎಂಬ ಹಸಿ ಸುಳ್ಳು. ಒಡೆತನವಲ್ಲ ಗುತ್ತಿಗೆ- ಕಾಗದ ಸರ್ಕಾರದ್ದು, ಖಜಾನೆ ಖಾಸಗಿಗಳದ್ದು ಮೊದಲನೆಯದಾಗಿ, ಈ ಗುತ್ತಿಗೆ/ನಗದೀಕರಣ ಯೋಜನೆಯು ರೂಪುಗೊಂಡಿದ್ದೇ ಖಾಸಗೀಕರಣ ಯೋಜನೆಗೆ ಖಾಸಗಿಯವರಿಂದ ಸೂಕ್ತ ಪ್ರತಿಕ್ರಿಯೆ ಬರದಿದ್ದರಿಂದ. ಸರ್ಕಾರಿ ಕಂಪನಿಗಳು, ಅದಕ್ಷ, ನಷ್ಟ ಮಾಡುತ್ತಿವೆ ಎಂಬ ಅಪಪ್ರಚಾರವನ್ನು ಎಲ್ಲಾ ಸರ್ಕಾರಗಳು ಮಾಡುತ್ತಾ ಬಂದಿವೆ. ಆದರೆ ಅಸಲಿ ಸಂಗತಿಯೆಂದರೆ, ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಅಂದಾಜು 260 ಸಾರ್ವಜನಿಕ ಉದ್ಯಮಗಳಲ್ಲಿ 174 ಉದ್ಯಮಗಳು ಲಾಭ ಮಾಡುತ್ತಿವೆ. ಅವುಗಳಲ್ಲಿ ಬಿಪಿಸಿಎಲ್, ಒಎನ್‌ಜಿಸಿ ಯಂಥ ಹತ್ತು ಉದ್ಯಮಗಳು 2019ರಲ್ಲಿ 1 ಲಕ್ಷ ಕೋಟಿಗೂ ಹೆಚ್ಚು ಲಾಭ ಮಾಡಿದ್ದ ಮಹಾರತ್ನ ಕಂಪನಿಗಳು. ಒಟ್ಟಾರೆ ಈ ಉದ್ಯಮಗಳು 14 ಲಕ್ಷ ಜನರಿಗೆ ಉದ್ಯೋಗ ಕೊಟ್ಟಿರುವುದೂ ಅಲ್ಲದೆ ಪ್ರತಿವರ್ಷ ಸರ್ಕಾರಕ್ಕೆ ಅಂದಾಜು 5-7 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ತೆರಿಗೆ, ಡಿವಿಡೆಂಡ್ ರೂಪದಲ್ಲಿ ಸಲ್ಲಿಸುತ್ತಿವೆ. 2019ರಲ್ಲಿ ಈ ಲಾಭದಾಯಕ 174 ಸರ್ಕಾರಿ ಕಂಪನಿಗಳು 3 ಲಕ್ಷ ಕೋಟಿ ನಿವ್ವಳ ಲಾಭ ಮಾಡಿದ್ದರೆ, ಕೇವಲ 84 ಕಂಪನಿಗಳು ಮಾತ್ರ 35,000 ಕೋಟಿ ರೂ. ಗಳ ಸಾಲವನ್ನು ಅನುಭವಿಸುತ್ತಿದ್ದವು. ಅವುಗಳಲ್ಲೂ ಸರ್ಕಾರವೇ ಉದ್ದೇಶಪೂರ್ವಕವಾಗಿ ಕತ್ತುಹಿಸುಕಿ ನಷ್ಟಕ್ಕೆ ದೂಡಿದ್ದ ಬಿಎಸ್‌ಎನ್‌ಎಲ್ ನಂತಹ ಸರ್ಕಾರೀ ಕಂಪನಿಗಳು ಸೇರಿಕೊಂಡಿವೆ. ಅದೇನೇ ಇರಲಿ ಒಟ್ಟಾರೆಯಗಿ ಸರ್ಕಾರದ ಒಡೆತನದಲ್ಲಿರುವ ಬಹುಪಾಲು ಕಂಪನಿಗಳು ಲಾಭವನ್ನೇ ಮಾಡುತ್ತಿವೆ. ಸರ್ಕಾರಕ್ಕೆ ಲಾಭ ಹಾಗೂ ಆದಾಯಗಳನ್ನು ತರುತ್ತಿವೆ ಮತ್ತು ಉದ್ಯೋಗಗಳನ್ನು ನೀಡುತ್ತಿವೆ. ಸರ್ಕಾರೀ ಒಡೆತನದಲ್ಲಿರುವ ಸಂಸ್ಥೆಗಳಾದ್ದರಿಂದ ಕಡ್ಡಾಯವಾಗಿ ಮೀಸಲಾತಿ ಅನುಸರಿಸಬೇಕಿರುವುದರಿಂದ ಈ ದೇಶದ ದಲಿತ-ಹಿಂದುಳಿದ ಸಮುದಾಯಗಳಿಗೂ ಉದ್ಯೋಗ ದೊರಕುತ್ತಿದೆ. ಹಾಗೆ ನೋಡಿದರೆ ಸರ್ಕಾರೀ ಸಂಸ್ಥೆಗಳು ಲಾಭದಾಯಕವಾಗಿರುವುದಕ್ಕೆ ಇದೂ ಒಂದು ಕಾರಣ. ಒಟ್ಟಿನಲ್ಲಿ ಸರ್ಕರಗಳು, ಖಾಸಗಿ ಪಂಡಿತರು ಏನೇ ಅಪಪ್ರಚಾರ ಮಾಡುತ್ತಿದ್ದರೂ ಸರ್ಕಾರೀ ಸಂಸ್ಥೆಗಳು ದೇಶನಿರ್ಮಾಣಕ್ಕೆ ದೊಡ್ಡ ಕೊಡುಗೆಯನ್ನೇ ಕೊಡುತ್ತಾ ಬಂದಿವೆ. ಆದರೆ ಮೋದಿ ಸರ್ಕಾರ "ಕಡಿಮೆ ಸರ್ಕಾರ - ಹೆಚ್ಚಿನ ಆಡಳಿತ" ಎಂಬ ಕಾರ್ಪೊರೇಟ್ ಘೋಷಣೆಯ ಮುಸುಕಿನಲ್ಲಿ ಹಿಂದಿನ ಸರ್ಕಾರಗಳಿಗಿಂತ ವೇಗವಾಗಿ ಎಲ್ಲಾ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡಲು ಒಂದೇ ಸಮನೆ ಪ್ರಯತ್ನ ಮಾಡುತ್ತಲೇ ಇದೆ. 2021-22 ರ ಬಜೆಟ್ಟಿನಲ್ಲಂತೂ ಎಲ್ಲಾ ಸರ್ಕಾರೀ ಸಂಸ್ಥೆಗಳನ್ನು ಮುಚ್ಚುವ ಅಥವಾ ಖಾಸಗೀಕರಿಸುವ ಹಾಗೂ ಸರ್ಕಾರೀ ಅಸ್ತಿಪಾಸ್ತಿಗಳನ್ನು ಖಾಸಗಿಯವರಿಗೆ ಬಿಟ್ಟುಕೊಟ್ಟು ನಗದೀಕರಿಸುವ ದೇಶಮುರುಕ ಯೋಜನೆಗಳನ್ನು ಬಹಿರಂಗವಾಗಿಯೇ ಘೋಷಿಸಲಾಗಿದೆ. ಆದರೆ ಖಾಸಗಿ ಸಂಸ್ಥೆಗಳು ಉದ್ಯಮದಲ್ಲಿರುವುದೇ ಲಾಭ ಮಾಡಲು. ಹೀಗಾಗಿ ಅವು ನಷ್ಟದಲ್ಲಿರುವ ಕಂಪನಿಗಳನ್ನೇಕೆ ಕೊಂಡಾವು? (ಇಲ್ಲಿ ಸರ್ಕಾರೀ ಕ್ಷೇತ್ರದ ಅದಕ್ಷತೆ ಮತ್ತು ಖಾಸಗಿಯವರ ಸಾಮರ್ಥ್ಯ ಎಂದೆಲ್ಲಾ ಹೇಳಿಕೊಟ್ಟ ಪಾಠವನ್ನು ಒಪ್ಪಿಸುವ ಮೋದಿಭಕ್ತರು ಗಮನಿಸಲೇಬೇಕದ ಒಂದು ಮುಖ್ಯವಾದ ಅಂಶವಿದೆ. ಮೋದಿ ಸರ್ಕಾರ ಖಾಸಗೀಕರಿಸುತ್ತಿರುವುದು ನಷ್ಟ ಎದುರಿಸುತ್ತಿರುವ ಕಂಪನಿಗಳನ್ನಲ್ಲ. ಲಾಭ, ಉದ್ಯೋಗ ನೀಡುತ್ತಿರುವ ಸರ್ಕಾರೀ ಮಹಾರತ್ನಗಳನ್ನು.) ಆದ್ದರಿಂದ ಮೋದಿ ಸರ್ಕಾರ ವರ್ಷಕ್ಕೆ 5000 ಕೋಟಿ ಲಾಭ ಮಾಡುತ್ತಿರುವ ಮತ್ತು 1.5 ಲಕ್ಷ ಕೋಟಿ ಸಂಪತ್ತನ್ನು ಹೊಂದಿರುವ ಬಿಪಿಸಿಎಲ್ ನಂತಹ ಲಾಭದಾಯಕ ನವರತ್ನಗಳನ್ನೇ ಮಾರಲು ಮುಂದಾಯಿತು. ಆದರೂ ಭಾರತದ ಈ ಕಾರ್ಪೊರೇಟ್ ಉದ್ಯಮಪತಿಗಳು ಲಾಭದಾಯಕ ಕಂಪನಿಗಳನ್ನು ಕೊಳ್ಳಲು ಕೂಡಾ ಹಣಹೂಡಿಕೆ ಮಾಡಲು ಸಿದ್ಧರಿಲ್ಲ. ಅದಕ್ಕೆ ಬೇಕಾದ ಬಂಡವಾಳ ಸಾಲವನ್ನು ಕಡಿಮೆ ದರದಲ್ಲಿ ಬ್ಯಾಂಕುಗಳು ಕೊಡಲು ಮುಂದೆ ಬಂದರೂ ಸಾಲ ತೆಗೆದುಕೊಂಡು ಲಾಭ ಮಾಡಿ ತೀರಿಸುವ ಸಣ್ಣ ಉದ್ಯಮ ಸಹಜ ರಿಸ್ಕೂ ಭಾರತದ ದೊಡ್ಡ ಬಂಡವಾಳಿಗರಿಗೆ ಬೇಕಿಲ್ಲ. ಆದ್ದರಿಂದಲೇ ಸರ್ಕಾರವು ಖಾಸಗೀಕರಣದಿಂದ ಸಂಪನ್ಮೂಲ ಸಂಗ್ರಹಿಸಬೇಕೆಂದು ಪ್ರತಿವರ್ಷ ಹಾಕಿಕೊಳ್ಳುವ ಗುರಿಗಳ ಕಾಲು ಭಾಗವನ್ನೂ ಸಾಧಿಸಲಾಗಿಲ್ಲ. ಈ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದೇ ಈ NMP-ಸರ್ಕಾರೀ-ಆಸ್ತಿಪಾಸ್ತಿಗಳ ಗುತ್ತಿಗೆಯಾಧಾರಿತ ನಗದೀಕರಣ ಯೋಜನೆ. ಬಂಡವಾಳ ಜನರದ್ದು- ಲಾಭ ಮಾತ್ರ ಕಾರ್ಪೊರೇಟ್‌ಗಳದ್ದು! ಈ NMP ಯೋಜನೆಯಲ್ಲಿ ಸರ್ಕಾರವು ತಾನೇ ದೇಶದ ಜನರ ತೆರಿಗೆ ದುಡ್ಡನ್ನು ಬಳಸಿ ಯೋಜನೆಯನ್ನು ನಿರ್ಮಿಸಿರುತ್ತದೆ. ಅದು ಸಂಪೂರ್ಣವಾಗಿ ಚಾಲ್ತಿಯಲ್ಲೂ ಇರುತ್ತದೆ. ಆದರೆ ಅದರ ನಿರ್ವಹಣೆಯನ್ನು ಮಾಡಿ ಲಾಭ ಮಾಡುವ ಅವಕಾಶವನ್ನು ಮಾತ್ರ ಖಾಸಗಿಯವರಿಗೆ ಬಿಟ್ಟುಕೊಡಲಾಗುತ್ತದೆ. ನಿರ್ವಹಣೆಯ ಗುತ್ತಿಗೆ ಪಡೆದುಕೊಂಡ ಕಾರ್ಪೊರೇಟ್ ಗುತ್ತಿಗೆದಾರರು ಬಳಕೆದಾರರಿಂದ ಶುಲ್ಕ ವಸೂಲಿ ಮಾಡಿ ಸರ್ಕಾರಕ್ಕೆ ಒಕ್ಕಾಲು ಕೊಟ್ಟು ಮುಕ್ಕಾಲು ತಾವೇ ಉಳಿಸಿಕೊಳ್ಳುವ ಯೋಜನೆಯಿದು. ಅಂದರೆ ಸರ್ಕಾರವೇ ಅಡುಗೆ ಮಾಡಿ, ಎಲೆಯನ್ನೂ ಹಾಕಿರುತ್ತದೆ. ಖಾಸಗಿಯವರದ್ದು ಊಟಕ್ಕೆ ಬರುವ ಗ್ರಾಹಕರ ಹತ್ತಿರ ದುಡ್ಡು ವಸೂಲಿ ಮಾಡುವ ಕೆಲಸವಷ್ಟೆ. ಎಷ್ಟು ದುಡ್ಡು ವಸೂಲಿ ಮಾಡಬೇಕೆಂಬ ಅಧಿಕಾರವು ಖಾಸಗಿಯವರಿಗೆ ಬಿಟ್ಟುಕೊಡಲಾಗಿದೆ. ಖಜಾನೆ ಖಾಲಿಯಾದ ಮೇಲೆ ಒಡೆತನದ ವಾಪಸಾತಿ ಈ ಖಾಸಗಿ ಕಂಪನಿಗಳು ಮಾಡುವ ಈ ಸುಲಿಗೆಗೆ ನಿರ್ವಹಣಾ ಗುತ್ತಿಗೆ ಎಂದು ಹೆಸರಿಡಲಾಗಿದೆ. ಗುತ್ತಿಗೆಯ ಅವಧಿ ಹೆದ್ದಾರಿ ನಿರ್ವಹಣೆ ಕ್ಷೇತ್ರಗಳಲ್ಲಿ 4-5ವರ್ಷಗಳಿದ್ದರೆ, ಕಲ್ಲಿದ್ದಲು, ಟೆಲಿಕಾಂ, ರೈಲ್ವೆ ಆಸ್ತಿ ನಿರ್ವಹಣೆಯ ಗುತ್ತಿಗೆಗಳಲ್ಲಿ 30-60 ವರ್ಷಗಳಾಗಲಿವೆ. ಕಲ್ಲಿದ್ದಲು ಕ್ಷೇತ್ರದ ನಿರ್ವಹಣೆಯೆಂದರೆ ಸರ್ಕಾರಕ್ಕೆ ಇವತ್ತಿನ ದರದಲ್ಲಿ ಶುಲ್ಕವನ್ನು ಪಾವತಿ ಮಾಡಿ, ಮುಂದಿನ 60 ವರ್ಷಗಳ ಕಾಲ ಆ ಗಣಿಗಳಲ್ಲಿರುವ ಕಲ್ಲಿದ್ದಲನ್ನು ಹೊರತೆಗೆದು, ತಮಗಿಷ್ಟ ಬಂದ ಮಾರುಕಟ್ಟೆಗೆ ತಮಗಿಷ್ಟ ಬಂದ ಬೆಲೆಗೆ ಮಾರಿಕೊಳ್ಳುವ ಅಧಿಕಾರ. 30-60 ವರ್ಷಗಳ ನಂತರ ಆ ಗಣಿಗಳ ಒಡೆತನವನ್ನು ಸರ್ಕಾರಕ್ಕೆ ಮರಳಿಸಿದಾಗ ಆ ಗಣಿಗಳು ಖಾಲಿಯಾಗಿರುವುದಲ್ಲವೇ? ಆಗ ಒಡೆತನ ಸರ್ಕಾರದ್ದು ಎಂಬ ಹುಂಬ ವಾದಕ್ಕೆ ಏನಾದರೂ ಅರ್ಥವಿದೆಯೇ? ಟೆಲಿಕಾಂ ಕ್ಷೇತ್ರದಲ್ಲಿ ಸ್ಪೆಕ್ಟ್ರಂ ಮತ್ತು ಟವರುಗಳ ಒಡೆತನದಲ್ಲಿ ಯಾವ ಲಾಭವೂ ಇಲ್ಲ. ಲಾಭವಿರುವುದು ಅದರ ಬಳಕೆಯಲ್ಲಿ ಮಾತ್ರ. ಆದರೆ ಬಳಕೆಯ ಅಧಿಕಾರವನ್ನು ಖಾಸಗಿಯವರಿಗೆ ಕೊಟ್ಟು ಒಡೆತನವನ್ನು ಮಾತ್ರ ಉಳಿಸಿಕೊಳ್ಳುವುದೆಂದರೆ ಒಡವೆಗಳಿರುವ ಪೆಟ್ಟಿಗೆಯನ್ನು ಖಾಸಗಿಯರು ಹೊತ್ತೊಯ್ಯಲು ಬಿಟ್ಟು ಅದರ ಬೀಗದ ಕೀಯನ್ನು ಮಾತ್ರ ಇಟ್ಟುಕೊಂಡಂತಲ್ಲವೇ? ಹೆಚ್ಚೆಂದರೆ ಈ ಗುತ್ತಿಗೆದಾರ ಕಂಪನಿಗಳು ಒಂದೇ ಬಾರಿಗೆ ಅಷ್ಟೂ ಗುತ್ತಿಗೆ ಅವಧಿಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಟ್ಟು ಶುಲ್ಕ ಸಂಗ್ರಹದ ಮೂಲಕ ಮುಂದಿನ ನಾಲ್ಕು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಗಳನ್ನು ಸಂಗ್ರಹಿಸಬಹುದು ಎಂಬುದು ಸರ್ಕಾರದ ಇರಾದೆ. ಆದರೆ ಆ ರೀತಿ ಒಟ್ಟು ಮೊತ್ತದ ಶುಲ್ಕ ಕೊಡಲು ಬೇಕಾದ ಹಣವನ್ನು ಕೂಡಾ ಭಾರತದ ಬ್ಯಾಂಕು ಹಾಗೂ ಇತರ ಹಣಕಾಸು ಸಂಸ್ಥೆಗಳೇ ಅಗ್ಗದ ದರದಲ್ಲಿ ಸಾಲ ನೀಡಲಿವೆ. ಅಂದಮೇಲೆ ಈ ನಗದೀಕರಣ ಯೋಜನೆಯು ಕನಿಷ್ಟ ಬಂಡವಾಳ ಹೂಡಿಕೆಯನ್ನು ಮಾಡಲು ಸಿದ್ಧವಿಲ್ಲದ ಭಾರತದ ದೊಡ್ಡ ಕಾರ್ಪೊರೇಟು ಕಂಪನಿಗಳು ಜನರನ್ನು ಸುಲಿದು ಅಗಾಧ ಹಾಗು ಸುಲಭದ ಲಾಭ ಮಾಡಲು ಹಾದಿಯಾಗಿರುವ ಯೋಜನೆಯಲ್ಲವೇ? ಬಳಕೆಯಾಗದ ಆಸ್ತಿಗಳಲ್ಲ- ಸುಂಕಕ್ಕೆ ಬಲಿಯಾಗದ ಆಸ್ತಿಗಳು ಎರಡನೆಯದಾಗಿ, ಹಾಗೂ ಅತಿಮುಖ್ಯವಾಗಿ ಈ ನಗದೀಕರಣ ಯೋಜನೆಯು ವ್ಯರ್ಥವಾಗಿರುವ ಸರ್ಕಾರೀ ಆಸ್ತಿಪಾಸ್ತಿಗಳನ್ನು ಲಾಭದಾಯಕವಾಗಿ ಬಳಸಿಕೊಳ್ಳಲು ರೂಪಿಸಲಾಗಿರುವ ಯೋಜನೆ ಅಲ್ಲವೇ ಅಲ್ಲ. ಆ ರೀತಿಯ ರಿಸ್ಕುಗಳಿದ್ದರೆ ಭಾರತದ ಕಾರ್ಪೊರೇಟುಪತಿಗಳು ಈ ಯೋಜನೆಯ ಹತ್ತಿರಕ್ಕೂ ಬರುತ್ತಿರಲಿಲ್ಲ. ಈಗಾಗಲೇ ಗಮನಿಸಿದಂತೆ ಈ ಎಲ್ಲಾ ಯೋಜನೆಗಳು ಸರ್ಕಾರವೇ ನಿರ್ಮಿಸಿರುವ ಬಳಕೆಯಲ್ಲಿ ಇರುವ ಯೋಜನೆಗಳೇ. ಈ ನಿಟ್ಟಿನಲ್ಲಿ ಭಾರತದ ನೀತಿ ಅಯೋಗವು ಬಿಡುಗಡೆ ಮಾಡಿರುವ ಎರಡು ಸಂಪುಟಗಳ National Monetisation Pipeline -Asset pipeline ನೀಲನಕ್ಷೆಯ ಪ್ರಕಾರ: ನಾಲ್ಕು ಪಥಗಳಿಗಿಂತ ಹೆಚ್ಚಿರುವ ಈಗಾಗಲೇ ಟೋಲ್ ಶುಲ್ಕವನ್ನು ಸ್ಂಗ್ರಹಿಸುತ್ತಿರುವ 26,700 ಕಿಮೀ ದೂರದ ರಾಷ್ಟ್ರೀಯ ಹೆದ್ದಾರಿಗಳು, ಹಾಲಿಬಳಕೆಯಲ್ಲಿರುವ 400 ರೈಲ್ವೆ ಸ್ಟೆಶನ್ನು ಗಳು, 150 ಟ್ರೈನುಗಳು ಮತ್ತು ಕೆಲವು ವಲಯಗಳ ರೈಲ್ವೆ ಟ್ರಾಕುಗಳು, 42,300 ಕಿಮೀ ಉದ್ದದ ವಿದ್ಯುತ್ ಟ್ರಾನ್ಸ್ ಮಿಷನ್ ಲೈನುಗಳು, ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಒಡೆತನದಲ್ಲಿರುವ ಟವರ್‌ಗಳು, 160 ಕಲ್ಲಿದಲು ಗಣಿಗಳು.. ಸರ್ಕಾರವು ನಿರೀಕ್ಷಿಸುತ್ತಿರುವ 6 ಲಕ್ಷ ಕೋಟಿಗಳಲ್ಲಿ 4 ಲಕ್ಷ ಕೋಟಿಗಿಂತಲೂ ಹೆಚ್ಚಿನ ಆದಾಯ ಇವುಗಳಿಂದಲೇ ಬರಬೇಕು. ಇನ್ನುಳಿದಂತೆ 8000 ಕಿಮಿ ಉದ್ದದ ಗ್ಯಾಸ್ ಪೈಪ್ ಲೈನುಗಳು, 4000 ಕಿಮಿ ಉದ್ದದ ತೈಲ ಪೈಪ್ ಲೈನುಗಳು,21 ವಿಮಾನ ನಿಲ್ದಾಣಗಳು ಮತ್ತು 31 ಬಂದರುಗಳು ಹಾಗೂ ರೈಲ್ವೆ ಸ್ಟೆಡಿಯಂಗಳು. ►►ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಇವುಗಳಲ್ಲಿ ಯಾವೊಂದೂ ಬಳಕೆಯಾಗದ ಅಥವಾ ಸಂಪೂರ್ಣ ಬಳಕೆಯಾಗದ ಸಾರ್ವಜನಿಕ ಸ್ವತ್ತುಗಳಲ್ಲ. ಉದಾಹರಣೆಗೆ ಸರ್ಕಾರವು ನಿರೀಕ್ಷಿಸುತ್ತಿರುವ ಆದಾಯದ ಶೇ. 25ರಷ್ಟು ಆದಾಯವನ್ನು ತರಬೇಕಿರುವ 26,700 ಕಿಮೀ ಹೆದ್ದಾರಿಯನ್ನು ಈಗಾಗಲೇ ಜನರ ತೆರಿಗೆಯಿಂದ ಕಟ್ಟಲಾಗಿದೆ. ಈಗಾಗಲೇ ಅದರಲ್ಲಿ ಬಹುಪಾಲು ಸ್ಥಳಗಳಲ್ಲಿ ಶುಲ್ಕವನ್ನು ಕೂಡಾ ಸರ್ಕಾರ ಸಂಗ್ರಹಿಸುತ್ತಿದೆ. ಹಾಗೆಯೇ ವಿದ್ಯುತ್ ವಿತರಣಾ ಲೈನುಗಳು, ರೈಲ್ವೆ ಟ್ರಾಕುಗಳು..ಇತ್ಯಾದಿ.. ವಾಸ್ತವದಲ್ಲಿ ಖಾಸಗಿ ಕಂಪನಿಗಳು, ಅದರಲ್ಲು ಭಾರತದ ದೊಡ್ಡ ಕಾರ್ಪೊರೇಟಿಗರು ತಮ್ಮ ಹೂಡಿಕೆಗೆ ದುಪ್ಪಟ್ಟು ಲಾಭ ಕಂಡರೆ ಮಾತ್ರ ಹೂಡಿಕೆ ಮಾಡುತ್ತವೆ. ಈ ನಗದೀಕರಣ ಯೋಜನೆಯಲ್ಲೂ ಆ ರೀತಿ ಜನರನ್ನು ಬೇಕಬಿಟ್ಟಿ ಸುಲಿದು ದುಪ್ಪಟ್ಟು ಲಾಭವನ್ನು ಮಾಡುವ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ. ಲಂಗುಲಗಾಮಿಲ್ಲದೆ ಹೆಚ್ಚಾಗುವ ಜನರ ಸುಲಿಗೆ ಉದಾಹರಣೆಗೆ, ಸರ್ಕಾರವು ನಿರೀಕ್ಷಿಸುತ್ತಿರುವ 6 ಲಕ್ಷ ಕೋಟಿ ರೂ. ಆದಾಯದಲ್ಲಿ 1.6 ಲಕ್ಷ ಕೋಟಿ ರೂ.ಗಳು 26,700 ಕಿಮಿ ಹೆದ್ದಾರಿ ನಿರ್ವಹಣೆಯಿಂದ ಬರಲಿದೆ. ನೀತಿ ಅಯೋಗದ ನೀಲ ನಕ್ಷೆಯ ಪ್ರಕಾರ ಈ ನಿರ್ವಹಣಾ ಒಪ್ಪಂದವು TOT (Toll-Operate-Transfer- ಶುಲ್ಕ ವಿಧಿಸು-ನಿರ್ವಹಿಸು- ಹಿಂತಿರುಗಿಸು) ಆಧಾರದ ಒಪ್ಪಂದಗಳಾಗಿವೆ. ಅಂದರೆ ಈ ರಸ್ತೆಯಲ್ಲಿ ಶುಲ್ಕದ ಪ್ರಮಾಣವನ್ನು ನಿರ್ಧರಿಸುವ ಮತ್ತು ಶುಲ್ಕ ಸಂಗ್ರಹಿಸುವ ಸಂಪೂರ್ಣ ಪರಮಾಧಿಕಾರ ಗುತ್ತಿಗೆ ಪಡೆದುಕೊಂಡ ಖಾಸಗಿ ಕಂಪನಿಗಳದ್ದಾಗಲಿವೆ. ಇದರ ಪರಿಣಾಮವೇನಾಗಬಹುದು? ಇಂದು ದೇಶದ ಒಟ್ಟಾರೆ ಹೆದ್ದಾರಿಗಳಲ್ಲಿ 540 ಟೋಲ್ ಸಂಗ್ರಹ ಕೇಂದ್ರಗಳಿವೆ. ಟೋಲ್ ಸಂಗ್ರಹದಲ್ಲಿ ಈಗಲೂ ಖಾಸಗಿ ಉಪ ಗುತ್ತಿಗೆದಾರರಿದ್ದರೂ ಟೋಲ್ ಪ್ರಮಾಣವನ್ನು ನಿಗದಿ ಮಾಡುವುದು ಮಾತ್ರ ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ. ಸರ್ಕಾರದ ಅಂಕಿಅಂಶದ ಪ್ರಕಾರವೇ 2019-20 ಸಾಲಿನಲ್ಲಿ ಅಂದಾಜು 30 ಸಾವಿರ ಕಿಮೀ ಉದ್ದದ ಹೆದ್ದಾರಿಯು ಸುಂಕ ಸಂಗ್ರಹಕ್ಕೆ ಒಳಪಟ್ಟಿತ್ತು. ಮತ್ತು ಅದರಿಂದ ಸರ್ಕಾರಕ್ಕೆ 26,861 ಕೋಟಿ ರೂ. ಗಳಷ್ಟು ಸುಂಕ ಸಂಗ್ರಹವಾಗುತ್ತಿತ್ತು. ಇದರಲ್ಲಿ ಸರ್ಕಾರವೇ ನಿರ್ಮಿಸಿದ ರಸ್ತೆಯಾದರೆ ಒಂದು ಕಿಮೀಗೆ 1 ರೂಪಾಯಿ ಸುಂಕ ವಿಧಿಸುತ್ತಿದ್ದರೆ, ಖಾಸಗಿಯವರು ನಿರ್ಮಿಸಿದ ರಸ್ತೆಯಲ್ಲಿ ಒಂದು ಕಿಮಿಗೆ 1.29 ರೂ ಸುಂಕ ಸಂಗ್ರಹಿಸಲಾಗುತ್ತಿತ್ತು. ಒಟ್ಟಾರೆಯಾಗಿ ಒಂದು ಕಿಮೀಗೆ ಒಂದು ರೂ ಸುಂಕ ಎಂಬ ಸರಾಸರಿಯಿತ್ತು. ಅಂದರೆ ಹೆಚ್ಚೂ ಕಡಿಮೆ ಒಂದು ಕಿಮೀಗೆ ಸರಾಸರಿ ಒಂದು ಕೋಟಿ ರೂ ಸುಂಕ ಸಂಗ್ರಹಿಸಲಾಗುತ್ತಿತ್ತು. ಆದರೆ ನೀತಿ ಅಯೋಗದ ನಗದೀಕರಣ ನೀಲನಕ್ಷೆಯ ಪ್ರಕಾರ ಒಂದು ವರ್ಷದಲ್ಲಿ ಒಂದು ಕಿಮೀ ಗೆ 3-4 ವರ್ಷಗಳ ಅವಧಿಯಲ್ಲಿ 6 ಕೋಟಿ ರೂ. ಆದಾಯ ನಿರೀಕ್ಷಿಸಲಾಗುತ್ತಿದೆ. ಅಂದರೆ ಈಗಿರುವ ಸುಂಕಕ್ಕಿಂತ ಎರಡು ಪಟ್ಟು ಆದಾಯ. ಆದರೆ ಸುಂಕ ಸಂಗ್ರಹದ ಗುತ್ತಿಗೆ ಪಡೆದುಕೊಂಡ ಕಂಪನಿಯು ಕಿಮೀಗೆ 6 ಕೋಟಿ ಶುಲ್ಕವನ್ನು ಸರ್ಕಾರಕ್ಕೆ ಕಟ್ಟಿದ ನಂತರ ತನ್ನ ಆದಾಯವನ್ನು ಮಾಡಿಕೊಳ್ಳಬೇಕು. ಅಂದರೆ ಆ ಕಂಪನಿಯು ಸರ್ಕಾರಕ್ಕೆ ಕೊಡಬೇಕಿರುವ ಪಾಲು, ತನ್ನ ಆಡಳಿತ ವೆಚ್ಚ, ರಸ್ತೆ ಸುಸ್ಥಿತಿ ಬಾಬತ್ತು ಇತ್ಯಾದಿ ವೆಚ್ಚಗಳನ್ನು ಭರಿಸಿದ ನಂತರವೇ ಲಾಭ ಕಾಣಲು ಸಾಧ್ಯ. ಖಾಸಗಿ ಸುಂಕ ಕಂಪನಿಗಳಿಗೆ ಈ ಗುತ್ತಿಗೆಯಲ್ಲಿ ಲಾಭ ಮಾಡಿಕೊಳ್ಳಲು ಬೇರೆ ಯವುದೇ ಮಾರ್ಗವಿಲ್ಲವಾದ್ದರಿಂದ ಅವೆಲ್ಲವನ್ನೂ ಅದು ಬಳಕೆದಾರರ ಮೇಲೆ ವಿಧಿಸುವ ಸುಂಕದಿಂದಲೇ ಸಂಗ್ರಹಿಸಬೇಕು. ಹೀಗಾಗಿ ಈ ನಗದೀಕರಣ ಯೋಜನೆಯಡಿಯಲ್ಲಿ ಬರುವ ಹೆದ್ದಾರಿಗಳಲ್ಲಿ ಇನ್ನುಮುಂದೆ ಟೋಲ್ ದರ ಈಗಿರುವುದಕ್ಕಿಂತ ಕನಿಷ್ಟ ಎರಡರಿಂದ ಮೂರು ಪಟ್ಟು ಹೆಚ್ಚಾಗಲಿದೆ.ಅಷ್ಟು ಹೆಚ್ಚು ಮಾಡುವ ಅಧಿಕಾರವನ್ನು ಈ ಯೋಜನೆ ಖಾಸಗಿ ಕಂಪನಿಗಳಿಗೆ ನೀಡಿದೆ. ಸರ್ಕಾರವೇ ನೇರವಾಗಿ ಸುಲಿಯದೆ ಖಾಸಗಿ ಕಂಪನಿಗಳ ಮೂಲಕ ಜನರನ್ನು ದುಪ್ಪಟ್ಟು ಸುಲಿಯುವ ಈ ಯೋಜನೆ ಸುಲಿಗೆಯ ಖಾಸಗೀಕರಣವೋ? ಅಥವಾ ಜನರ ಸುಲಿಗೆಯನ್ನೇ ಮೋದಿ ಸರ್ಕಾರ ದೇಶದ ಅಭಿವೃದ್ಧಿ ಎಂದು ಬಣ್ಣಿಸುತ್ತದೆಯೇ? ರಾಷ್ಟ್ರ ನಿರ್ಮಾಣವೋ? ಅಂಬಾನಿ-ಆದಾನಿ ಸಂಸ್ಥಾನ ನಿರ್ಮಾಣವೋ? ಹಾಗೆಯೇ ಗುತ್ತಿಗೆ ಕೊಡಲಾಗುತ್ತಿರುವ 42,300 ಕಿಮೀ ಉದ್ದದ ವಿದ್ಯುತ್ ಲೈನ್ ಮತ್ತು ಕಂಬಗಳನ್ನು ಸರ್ಕಾರ ನಿರ್ಮಿಸಿ ಆಗಿದೆ. ಅದಕ್ಕೆ ತಗುಲಿರುವ ವೆಚವನ್ನು ಈಗಾಗಲೇ ವಿದ್ಯುತ್ ಶುಲ್ಕದ ಮೂಲಕ ನಾಗರಿಕರು ತೆರುತ್ತಿದ್ದಾರೆ. ಈಗ ಅದರ ನಿರ್ವಹಣೆಯ ಗುತ್ತಿಗೆ ಪಡೆದುಕೊಳ್ಳುವ ಕಂಪನಿ ತನಗಾಗುವ ವೆಚ್ಚವನ್ನು ಮತ್ತು ತನಗೆ ಬರಬೇಕಿರುವ ಲಾಭವನ್ನು ವಿದ್ಯುತ್ ಶುಲ್ಕವನ್ನು ಹೆಚ್ಚಿಸುವ ಮೂಲಕ ತಾನೇ ಭರಿಸಲು ಸಾಧ್ಯ? ಖಾಸಗಿ ಕಾರ್ಪೊರೇಟ್ ವಿದ್ಯುತ್ ನಿರ್ವಹಣಾ ಕಂಪನಿಗಳ ಲಾಭವನ್ನು ಹೆಚ್ಚಿಸಲು ನಮ್ಮ ಮನೆಗಳ ಬೆಳಕನ್ನು ನಂದಿಸುವುದು ಯಾರ ಅಭಿವೃದ್ಧಿ ಯೋಜನೆ? 150 ಖಾಸಗಿ ಟ್ರೈನುಗಳು ಮತ್ತು 400 ಸ್ಟೇಷನ್ನುಗಳ ಹಾಗೂ ಟ್ರಾಕುಗಳ ನಿರ್ವಹಣಾ ಯೋಜನೆಯ ನಗದೀಕರಣವಾಗುವುದು ಪ್ಲಾಟ್ ಫಾರಂ ಶುಲ್ಕ ಮತ್ತು ಸ್ತೇಷನ್ನಿನಲ್ಲಿ ಈಗಾಗಲೇ ಲಭ್ಯವಿರುವ ಸೌಕರ್ಯಗಳ ಮೇಲಿನ ಶುಲ್ಕ ಹೆಚ್ಚಳ, ಸ್ತೇಷನ್ನಿನಲ್ಲಿರುವ ಅಂಗಡಿಗಳ ಬಾಡಿಗೆ ಹೆಚ್ಚಳ ಇತ್ಯಾದಿಗಳ ಮೂಲಕವೇ ಎಂದು ಆ ನೀತಿ ಅಯೋಗ ಮುಚ್ಚುಮರೆಯಿಲ್ಲದೆ ಹೇಳಿದೆ. ಆದರೆ, ಅಷ್ಟು ಮಾತ್ರವಲ್ಲ ಖಾಸಗಿಯವರು ತಾವು ಓಡಿಸುವ ಟ್ರೈನುಗಳಲ್ಲಿ ನಿಗದಿಯಾದಷ್ಟು ಪ್ರಮಾಣದ ಪ್ರಯಾಣ ಸಂದಣಿ ಹಾಗೂ ತಾವು ನಿರ್ವಹಣೆ ಮಾಡುವ ಟ್ರಾಕುಗಳಲ್ಲಿ ಟ್ರೈನು ಸಂದಣಿಯನ್ನು ಸರ್ಕಾರ ಖಾತರಿ ಮಾಡಬೇಕಾದ ಒಪ್ಪಂದಗಳು ಈ ಯೋಜನೆಯ ಅಂತರ್ಗತ ಭಾಗವಾಗಿದೆ! ಆಗ ಖಾಸಗಿ ನಿರ್ವಹಣ ಕಂಪನಿಗೆ ಲಾಭವಾಗುವಷ್ಟು ಪ್ರಯಾಣ ದರ ಹೆಚ್ಚಿಸಬೇಕು. ಹಾಗೂ ಲಾಭಕ್ಕೆ ಪೈಪೋಟಿಯಾಗ ಬಲ್ಲ ಅಗ್ಗದ ರೂಟು ಮತ್ತು ಟ್ರೈನುಗಳನ್ನು ರದ್ದು ಮಾಡಬೇಕು. ಆಗ ರೈಲ್ವೆಯ ಉದ್ದೇಶ ಪ್ರಯಾಣಿಕರ ಹಾಗೂ ದೇಶದ ಆರ್ಥಿಕ ಅಗತ್ಯಗಳನ್ನು ಪೂರೈಸುವುದಕ್ಕಿಂತ ಗುತ್ತಿಗೆ ಪಡೆದ ಖಾಸಗಿಯವರ ಲಾಭವನ್ನು ಖಾತರಿ ಗೊಳಿಸುವುದೇ ಆಗುವುದಿಲ್ಲವೇ? ಇದನ್ನು ದೇಶ ನಿರ್ಮಾಣ ಎನ್ನಬಹುದೇ? ಇನ್ನು ಟೆಲಿಕಾಂ ನಗದೀಕರಣ ಯೋಜನೆಯಂತೂ ದಾರುಣ ದೆಶದ್ರೋಹ. ಈಗಾಗಲೇ ಅಂಬಾನಿಯ ರಿಲೈಯನ್ಸ್ ಕಂಪನಿಗೆ ಪೈಪೋಟಿಯಾಗದಂತೆ ಭಾರತ ಸರ್ಕಾರ ತನ್ನದೇ ಬಿಎಸ್‌ಎನ್‌ಎಲ್ ಅನ್ನು ಕತ್ತು ಹಿಸುಕಿ ಕೊಲ್ಲುತ್ತಿದೆ. ದೇಶಾದ್ಯಂತ 60,000 ಕ್ಕೂ ಹೆಚ್ಚು ಟವರ್‌ಗಳನ್ನು ಹಾಗೂ ಫೈಬರ್ ಸೌಕರ್ಯವನ್ನು ಹೊಂದಿರುವ ಏಕೈಕ ಸಂಸ್ಥೆ ಬಿಎಸ್‌ಎನ್‌ಎಲ್. ಅದನ್ನು ಕಟ್ಟಿರುವುದು ಭಾರತದ ತೆರಿಗೆದಾರರ ದುಡ್ಡಿನಲ್ಲಿ. ಹೀಗಾಗಿ ಬಿಎಸ್‌ಎನ್‌ಎಲ್ ಇತರ ಯಾವುದೇ ಖಾಸಗಿ ಕಂಪನಿಗಳಿಗಿಂತ ಅಗ್ಗದ ಹಾಗೂ ಗುಣಮಟದ ಸೇವೆ ನೀಡುತ್ತಲೂ ಲಾಭ ಮಾಡಬಹುದಾದ ಸಾಧ್ಯತೆ ಇತ್ತು. ಆದರೆ ಮೋದಿ ಸರ್ಕಾರ ಅಂಬಾನಿಯ ರಿಲೈಯನ್ಸ್ ಏಕಸ್ವಾಮ್ಯ ಗಳಿಸುವಂತೆ ಮಾಡಲು ಬಿಎಸ್‌ಎನ್‌ಎಲ್ ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಹಾಗೂ 4G ಮತ್ತು 5G ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಅವಕಾಶ ಕೊಡಲೇ ಇಲ್ಲ. ಬದಲಿಗೆ 60,000 ಬಿಎಸ್‌ಎನ್‌ಎಲ್ ಟವರ್‌ಗಳಲ್ಲಿ 13,000 ಟವರ್‌ಗಳಲ್ಲಿ ಇತರ ಟೆಲಿಕಾಂ ಕಂಪನಿಗಳ ಸಿಗ್ನಲ್ ಗೆ ಅವಕಾ ಮಾಡಿಕೊಟ್ಟಿದೆ. ಈಗ ಈ ನಗದೀಕರಣ ಯೋಜನೆಯಲ್ಲಿ ಬಿಎಸ್‌ಎನ್‌ಎಲ್ ನ ಇನ್ನೂ 17,000 ಟವರ್‌ಗಳನ್ನು ಖಾಸಗಿಯವರಿಗೆ ಬಿಟ್ಟುಕೊಡಲು ಯೋಜಿಸಲಾಗಿದೆ. ಸರ್ಕಾರಿ ಟವರ್ ನಲ್ಲಿ ಅಂಬಾನಿ ಸಿಗ್ನಲ್! ಥೇ॒ಟ್ ಮೋದಿ ಸರ್ಕಾರದ ಮೋಡಿಯಂತೆಯೇ ಇದೆಯಲ್ಲವೇ? ಇದು ಈ ರಾಷ್ಟ್ರೀಯ ನಗದೀಕರಣ ಯೋಜನೆಯ ಅಸಲೀ ಹುನ್ನಾರ. ಈಗಾಗಲೇ ಇದೇ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದ ಆಸ್ಟ್ರೇಲಿಯಾದಲ್ಲಿ ಎರಡೇ ವರ್ಷಗಳಲ್ಲಿ ವಿದ್ಯುತ್ ಶುಲ್ಕ ಎರಡು ಪಟ್ಟು ಹೆಚ್ಚಾಯಿತು. ಹೀಗಾಗಿ ಅಲ್ಲಿನ ಸರ್ಕಾರ ಬಡ-ಮಧ್ಯಮವರ್ಗಗಳ ವಿದ್ಯುತ್ ಶುಲ್ಕವನ್ನು ತಾನೇ ಹೊರುವ ಯೋಜನೆ ತರಬೇಕಾಯಿತು. ಹಾಗೆಯೇ ಸಿಂಗಪೂರ್ ನ ಮೆಟ್ರೋ ರೈಲಿನ ನಿರ್ವಹಣೆಯನ್ನು ಮತ್ತೆ ರಾಷ್ಟೀಕರಿಸಬೇಕಾಯಿತು. ಈ ಎಲ್ಲಾ ವೈಫಲ್ಯಗಳು ಕಣ್ಣೆದುರಿಗಿದ್ದರೂ ಸರ್ಕಾರ ಮುಂದುವರೆಯುತ್ತಿರುವುದೇಕೆ? ಈಗಾಗಲೇ ಟೆಲಿಕಾಂ ಕ್ಷೇತ್ರದಲ್ಲಿ ಅಂಬಾನಿಯ ಏಕಸ್ವಾಮ್ಯವಿದೆ. ಬಂದರು, ವಿಮಾನ ನಿಲ್ದಾಣ, ವಿದ್ಯುತ್ ವಿತರಣಾ ಕ್ಷೇತ್ರಗಳಲ್ಲಿ ನಿಧನವಾಗಿ ಆದಾನಿಯ ಪಾರಮ್ಯ ಹೆಚ್ಚುತ್ತಿದೆ. ಈ ಹೊಸ ಭಾರತ ಗುತ್ತಿಗೆ ಯೋಜನೆಯ ಲಾಭ ಈ ಕಂಪನಿಗಳ ಏಕಸ್ವಾಮ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ. ರಾಷ್ಟ್ರೀಯ ನಗದೀಕರಣ ಯೋಜನೆಯೆಂದರೆ ರಾಷ್ಟ್ರದ ಜನರ ಸುಲಿಗೆಯನ್ನು ಅಂಬಾನಿ-ಆದಾನಿಗಳಿಗೆ ಗುತ್ತಿಗೆ ಕೊಡುವ ಯೋಜನೆಯೇ ಆಗಿದೆ. ಪರಿಣಾಮವಾಗಿ ಬರಲಿರುವ ದಿನಗಳಲ್ಲಿ, ಹಿಂದೂಸ್ಥಾನವು ಭಾರತೀಯರ ಗಣರಾಜ್ಯವಾಗದೆ ಅಂಬಾನಿಗಳ ಹಾಗೂ ಅದಾನಿಗಳ ಸಂಸ್ಥಾನವಾಗಲಿದೆ. ರಾಮರಾಜ್ಯವೆಂದರೆ ಇದೇ ಇರಬಹುದೇ? ►►ಇದನ್ನೂ ಓದಿ: ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement