Advertisement

ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ನಡೆವಾಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದುದು ಬಿಜೆಪಿ ಬೆಂಬಲಿತ ಸರ್ಕಾರ!

Advertisement

ರಾಜೀವ್ ಗಾಂಧಿಯವರು ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ತಡೆಯುವಂತೆ ವಿಧವಿಧವಾಗಿ ಆಗ್ರಹಿಸಿದ್ದರೂ ಕೂಡ ಅಂದು, ಕೇಂದ್ರದ ಬಿಜೆಪಿ ಬೆಂಬಲಿತ ಸರ್ಕಾರ ಕಣ್ಮುಚ್ಚಿ ಕುಳಿತಿತ್ತು ಏಕೆ?

ದೇಶ ವಿಭಜನೆಯ ಕಾಲದಿಂದಲೂ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಹುನ್ನಾರ ಹೊಂದಿದ್ದ ಪಾಕಿಸ್ತಾನ ಕಾಶ್ಮೀರದಲ್ಲಿ ಭಯೋತ್ಪಾದನೆ ಹುಟ್ಟು ಹಾಕಿ ಪೋಷಿಸುತ್ತಿರುವುದು ಇಡೀ ವಿಶ್ವಕ್ಕೆ ತಿಳಿದಿರುವ ಸತ್ಯ. ಈ 75 ವರ್ಷಗಳಲ್ಲಿ ಭಾರತವನ್ನು ಆಳಿದ ಎಲ್ಲಾ ಸರ್ಕಾರಗಳು ಈ ಭಯೋತ್ಪಾದನೆಯ ವಿರುದ್ಧ ಸೆಣಸುತ್ತಲೇ ಬಂದಿದೆಯಾದರೂ ಆ "ಪಾಕ್ ಪ್ರಚೋದಿತ ಭಯೋತ್ಪಾದನೆ'' ನಿಗ್ರಹಿಸುವ ಕೆಲಸ ನೂರಕ್ಕೆ ನೂರರಷ್ಟು ಸಾಧ್ಯವಾಗದಿರುವುದರ ಹಿಂದೆ ಕೆಲವು ಸೂಕ್ಷ್ಮ, ಅತಿಸೂಕ್ಷ್ಮ(?) ರಾಜತಾಂತ್ರಿಕ ಕಾರಣಗಳು ಇದೆ ಎಂಬುದು ಸುಳ್ಳಲ್ಲ. ಗುಂಡುಸೂಜಿಯಲ್ಲಾಗುವ ಕೆಲಸಕ್ಕೆ ಹಾರೆ ಬಳಸುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ಈ ಹಿಂದಿನ ಕೇಂದ್ರ ಸರ್ಕಾರಗಳು ಕಾಶ್ಮೀರದ ವಿಚಾರದಲ್ಲಿ 'ತಣ್ಣೀರನ್ನೂ ತಣಿಸಿ ಕುಡಿಯುವ ತಂತ್ರಗಾರಿಕೆ' ಅಳವಡಿಸಿಕೊಂಡಿದ್ದವು.

1990ರ ಆರಂಭದಲ್ಲಿ ಕಾಶ್ಮೀರಿ ಪಂಡಿತರ ಮೇಲಿನ ಪಾಕ್ ಪ್ರೇರಿತ ಭಯೋತ್ಪಾದಕರ ದಾಳಿ, ಹತ್ಯೆ, ಮತ್ತದರ ಪರಿಣಾಮವಾಗಿ ಕಾಶ್ಮೀರಿ ಪಂಡಿತರ ಪಲಾಯನದ ಕಥೆಯನ್ನು ಭಯಾನಕವಾಗಿ ರೂಪಿಸಿರುವ ಚಿತ್ರವೇ ಇದೀಗ ಬಿಡುಗಡೆಗೊಂಡಿರುವ 'ದಿ ಕಾಶ್ಮೀರ್ ಫೈಲ್ಸ್' ಹಿಂದಿ ಚಲನಚಿತ್ರ! ಚಿತ್ರದ ನಿರ್ದೇಶಕರು ಇದು ಸತ್ಯ ಕಥೆ ಆದಾರಿತ ಸಿನೇಮಾ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಸಿನೇಮಾದ ಕಥೆ ಸಂಪೂರ್ಣ ಸತ್ಯವಲ್ಲ… ಸತ್ಯಗಳು ಏನೆಂಬುವುದನ್ನು ಅರಿಯಲು ಈ ಕೆಳಗಿನ ಮಾಹಿತಿಗಳನ್ನು ಅಗತ್ಯವಾಗಿ ಗಮನಿಸಿ:

ಹಲವು ವರದಿಗಳು ಹಾಗೂ ಆರ್‌ಟಿಐ ಮಾಹಿತಿ ಪ್ರಕಾರ 1990 ರಲ್ಲಿ ಪಾಕ್ ಉಗ್ರಗಾಮಿಗಳಿಂದ ಕಾಶ್ಮೀರದ 89ಪಂಡಿತರ ಹತ್ಯೆ , ಹಲವು ಪಂಡಿತ ಕುಟುಂಬಗಳ ವಲಸೆ ನಡೆದಿರುವುದು ಸತ್ಯವೇ ಆದರೂ ಲಕ್ಷಾಂತರ ಬ್ರಾಹ್ಮಣೇತರ ಹಿಂದೂಗಳ, ದಲಿತರ, ಮುಸ್ಲಿಮರ ಹತ್ಯೆ ಕೂಡ ಅದೇ ಭಯೋತ್ಪಾದಕರುಗಳಿಂದ ನಡೆದಿದೆ.

ಸಾಮಾನ್ಯವಾಗಿ ಭಯೋತ್ಪಾದಕರೆಸೆವ ಬಾಂಬಿಗೆ ತನ್ನಿಂದ ಸತ್ತವರು ಕಾಶ್ಮೀರಿ ಪಂಡಿತರೋ, ದಲಿತರೋ, ಮುಸ್ಲಿಮರೋ, ಬ್ರಾಹ್ಮಣೇತರರೋ, ಮಹಿಳೆಯರೋ, ವೃದ್ಧರೋ, ಅಂಗವಿಕಲರೋ ಅಥವಾ ಮಕ್ಕಳೋ ಎಂಬ ಭೇದ ಭಾವ ಇರುವುದಿಲ್ಲ. ಅವರದ್ದು ಕೇವಲ ಪಾಕ್ ಪ್ರಾಯೋಜಿತ ಭಾರತ ಸರ್ಕಾರದ ವಿರುದ್ಧದ ಹೋರಾಟವಾಗಿರುತ್ತದೆ. ಅದರ ಫಲವೇ ಈ ಹತ್ಯೆಗಳು! ಆದರೆ, ಬಿಜೆಪಿ ಪ್ರಾಯೋಜಿತ ಸಿನೇಮಾವಾದ ಈ 'ದಿ ಕಾಶ್ಮೀರ್ ಫೈಲ್ಸ್' ನಲ್ಲಿ ಕೇವಲ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಮಾತ್ರವೇ ವೈಭವೀಕರಿಸಲಾಗಿದೆ. ಅದರಲ್ಲಿ ಇತರರ ಹತ್ಯೆಗಳಿಗೆ ಯಾವುದೇ ಪ್ರಾಮುಖ್ಯತೆ ಕೊಡಲಾಗಿಲ್ಲ. ಹಾಗಾದರೆ ಇದರ ಹಿಂದಿನ ಗುಟ್ಟೇನು? ಸತ್ತ ಇತರರು ಭಾರತೀಯರಲ್ಲವೇ ಅಥವಾ ಕನಿಷ್ಠಪಕ್ಷ ಮನುಷ್ಯರೂ ಅಲ್ಲವೇ?

ಹಾಗೆಯೇ ಈ ನಡುವೆ, ಬಿಜೆಪಿಯ ಸರ್ಕಾರಗಳು ಇದೀಗ 'ದಿ ಕಾಶ್ಮೀರ್ ಫೈಲ್ಸ್' ಸಿನೇಮಾಗೆ ಭಾರತದಾದ್ಯಂತ ತೆರಿಗೆ ವಿನಾಯಿತಿ ಘೋಷಿಸಿದೆ. ಟಿಕೇಟುಗಳನ್ನು ಉಚಿತವಾಗಿ ಹಂಚುತ್ತಿದೆ. ಹಾಗೆಯೇ ಆ ಸಿನೇಮಾ ನೋಡದವರು ದೇಶದ್ರೋಹಿಗಳು ಎಂದು ಅದರ ಕೆಲವು ಸಂವಿಧಾನ ವಿರೋಧಿ ನಾಯಕರುಗಳು ಪರ್ವಾನು ಹೊರಡಿಸಿದ್ದಾರೆ‌.. ಅದಿರಲಿ!

ಈ ಮೇಲೆ ಹೇಳಿದಂತೆ 1990 ರಲ್ಲಿ ಮತ್ತದರ ಮೊದಲು ಹಾಗೂ ನಂತರದಲ್ಲಿ ಜಮ್ಮು-ಕಾಶ್ಮೀರದಿಂದ ಕೇವಲ ಕಾಶ್ಮೀರ ಪಂಡಿತರ ವಲಸೆಯಾಗಲಿ, ಹತ್ಯೆಯಾಗಲಿ ಮಾತ್ರವೇ ನಡೆದಿಲ್ಲ. ಅದೇ ಪಾಕಿಸ್ತಾನಿ ಭಯೋತ್ಪಾದಕರಿಂದ ಜಮ್ಮು ಕಾಶ್ಮೀರದ ಲಕ್ಷಾಂತರ ಬ್ರಾಹ್ಮಣೇತರ ಹಿಂದೂಗಳು, ದಲಿತರು, ಮುಸ್ಲಿಮರು ಹಾಗೂ ಸಿಖ್ಖರು ಹತ್ಯೆಗೀಡಾಗಿದ್ದಾರೆ. ಸಿಖ್ಖರು, ಮುಸ್ಲಿಮರು ಕೂಡಾ ಕಾಶ್ಮೀರದಿಂದ ವಲಸೆ ಹೋಗಿದ್ದು, ಈವರೆಗೂ ವಾಪಸ್ ಆಗಿಲ್ಲ. ಇಷ್ಟಾಗಿಯೂ, ಸಿನೇಮಾದಲ್ಲಿ ವೈಭವೀಕರಿಸಲಾದ ಪಂಡಿತರ ಹತ್ಯೆ/ ವಲಸೆಯ ಸಂಧರ್ಭದಲ್ಲಿ ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ, ವಿ.ಪಿ ಸಿಂಗ್ ಸರ್ಕಾರ ಅಧಿಕಾರದಲ್ಲಿತ್ತು. ಹಾಗೆಯೇ, ಇದೀಗ ಸಿನೇಮಾ ನೋಡಿ ಗಳಗಳನೆ ಅಳುವ ಬಿಜೆಪಿಗರು ಪ್ರಕರಣದ ನಂತರವೂ ಅಂದು ವಿ.ಪಿ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸು ಪಡೆದಿರಲಿಲ್ಲ.

ಹೌದು, ದಿ ಕಾಶ್ಮೀರಿ ಫೈಲ್ಸ್ ಸಿನೇಮಾದ ನಿರ್ದೇಶಕರ ದೃಷ್ಟಿಕೋನದಲ್ಲಿಯೇ ನೋಡುವುದಾದರೂ, ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಕಾಶ್ಮೀರದಿಂದ ಜಮ್ಮುವಿಗೆ ವಲಸೆ ನಡೆದ ಸಮಯವಾದ "19 ಜನವರಿ 1990 ರಿಂದ ಮಾರ್ಚ್" ತನಕ ಮತ್ತದರ ನಂತರವೂ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದುದು ಬಿಜೆಪಿಯ 89 ಸದಸ್ಯರ ಬೆಂಬಲಿತವಾದ ವಿ.ಪಿ ಸಿಂಗ್‌ರವರ 'ನ್ಯಾಶನಲ್ ಫ್ರಂಟ್‌' ಸರ್ಕಾರವೇ ಹೊರತೂ ಬೇರಾವುದೇ ಸರ್ಕಾರವಲ್ಲ.

ವಿ.ಪಿ ಸಿಂಗ್ ಸರ್ಕಾರ 1989ರ ಡಿಸೆಂಬರ್ 2ರಿಂದ 1990ರ ನವೆಂಬರ್ 10 ರ ತನಕ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ವಲಸೆಯ ನಂತರವೂ ಬಿಜೆಪಿ ಪಕ್ಷ, ವಿ.ಪಿ ಸಿಂಗ್ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಾಸ್ಸು ಪಡೆಯಲಿಲ್ಲ ಮತ್ತು ಆ ದುರ್ಘಟನೆಯ ನಂತರವೂ ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷ ನಿರಾಶ್ರಿತರ ಪುನರ್ವಸತಿಗೆ ಯಾವುದೇ ಯೋಜನೆಗಳನ್ನು ರೂಪಿಸಿರಲಿಲ್ಲ. ಆದರೆ, ವಿ.ಪಿ ಸಿಂಗ್ ಸರ್ಕಾರ ಹಿಂದುಳಿದ ವರ್ಗಕ್ಕೆ ಮೀಸಲಾತಿ ಹೆಚ್ಚಿಸುವ ಮಂಡಲ್ ಆಯೋಗದ ವರದಿಯ ಜಾರಿಗೆ ಆಗಸ್ಟ್ 7 1990ರಂದು ಮುಂದಾದಾಗ ಅದನ್ನು ವಿರೋಧಿಸಿ 10 ನವೆಂಬರ್ 1990ರಲ್ಲಿ ಬಿಜೆಪಿಯು, ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸು ಪಡೆದಿತ್ತು.

ಇನ್ನು ಪಂಡಿತರ ಹತ್ಯೆ, ವಲಸೆಯ ಸಂಧರ್ಭದಲ್ಲಿ ಜಮ್ಮು ಕಾಶ್ಮೀರದಲ್ಲಿ ಅಧಿಕಾರದಲ್ಲಿ ಇದ್ದವರ‌್ಯಾರು ಗೊತ್ತೇ?

ಹತ್ಯೆ ಮತ್ತು ವಲಸೆಯ ಆ ಸಮಯದಲ್ಲಿ, ಮತ್ತದರ ನಂತರದ 6ವರ್ಷಗಳ ಕಾಲ ಅಂದರೆ 19 ಜನವರಿ 1990 ರಿಂದ 1996ರ ತನಕ ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲ್ಪಟ್ಟಿತ್ತು. ಆಗ ಅಲ್ಲಿನ ರಾಜ್ಯಪಾಲರಾಗಿ ಅಧಿಕಾರ ನಡೆಸಿದ್ದವರು ಆರೆಸ್ಸೆಸ್, ಬಿಜೆಪಿಯ ಕಟ್ಟಾ ಅನುಯಾಯಿ ಹಾಗೂ ಮೋದಿ ಸರ್ಕಾರದಿಂದ 2016ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದ ಜಗ್ಮೋಹನ್ ರವರಾಗಿದ್ದಾರೆ.

*ಹಾಗಾದರೆ ಪಂಡಿತರ ಹತ್ಯೆ, ವಲಸೆಗಳನ್ನು ತಡೆಯಲಾಗದ ಕಾರಣಕ್ಕಾಗಿ ಜಗ್ಮೊಹನ್ ಅವರಿಗೆ ಪದ್ಮವಿಭೂಷಣ ನೀಡಲಾಗಿತ್ತೇ? *

ಹಾಗೆಯೇ, ಆಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದವರು ಕಾಶ್ಮೀರದ ಪ್ರಾದೇಶಿಕ ಪಕ್ಷವಾದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP)ಯ ನೇತಾರ ಮುಫ್ತಿ ಮಹಮ್ಮದ್ ಸಯೀದ್ ರವರು. ಪಂಡಿತರ ಮತ್ತಿತರರ ವಲಸೆಯನ್ನು ತಡೆಯಲು ಅಥವಾ ಅವರುಗಳಿಗೆ ಭಯೋತ್ಪಾದಕರಿಂದ ರಕ್ಷಣೆ ನೀಡಲು ಮುಫ್ತಿ ಯವರು ಯಾವುದೇ ಪರಿಣಾಮಕಾರಿಯಾದ ಕ್ರಮ ಕೈಗೊಂಡಿರಲಿಲ್ಲ. ಕೈಗೊಂಡಿದ್ದರೆ ಹತ್ಯೆ ಯಾ ವಲಸೆಗಳು ನಡೆಯುತ್ತಿರಲಿಲ್ಲ. ಪ್ರಸ್ತುತ ಅವರ ಮಗಳಾದ ಮೆಹಬೂಬಾ ಮುಫ್ತಿ ಅವರು ಅದೇ ಪಿಡಿಪಿ ಪಕ್ಷದ ನೇತೃತ್ವ ವಹಿಸಿದ್ದಾರೆ. ಅವರ ಜೊತೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತೀರಾ ಇತ್ತೀಚೆಗಿನ ತನಕವೂ ಅಂದರೆ 04 ಏಪ್ರಿಲ್ 2016 ರಿಂದ 19 ಜೂನ್ 2018 ರವರೆಗೆ ಜಮ್ಮು ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿತ್ತು.
ಆದರೆ ಫೆಬ್ರವರಿ 2018 ರಲ್ಲಿ ಕಾಶ್ಮೀರದ ಕಥುವಾ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಅಲೆಮಾರಿ ಜನಾಂಗಕ್ಕೆ ಸೇರಿದ ಎಂಟು ವರ್ಷದ ಎಳೆಯ ಬಾಲಕಿಯನ್ನು ಸತತ ಎಂಟು ದಿನಗಳ ತನಕ ಅತ್ಯಾಚಾರ ನಡೆಸಿ ಕೊಲೆಗೈದು ಎಸೆದ ಪ್ರಕರಣದಲ್ಲಿ ದೇವಸ್ಥಾನದ ಪೂಜಾರಿಯೂ ಸೇರಿ ಹಲವರನ್ನು ಬಂಧಿಸಿದಾಗ ಬಿಜೆಪಿಯ ಇಬ್ಬರು ಮಂತ್ರಿಗಳು, ಅದೇ ಅತ್ಯಾಚಾರಿಗಳ ಮತ್ತು ಕೊಲೆಗಡುಕ ದುಷ್ಕರ್ಮಿಗಳ ಪರ ರಾಷ್ಟ್ರಧ್ವಜ ಹಿಡಿದು ಸಾರ್ವಜನಿಕ ಬೆಂಬಲ ವ್ಯಕ್ತಪಡಿಸಿದಾಗ ಬಿಜೆಪಿ- ಪಿಡಿಪಿ ಮೈತ್ರಿಯಲ್ಲಿ ಬಿರುಕು ಉಂಟಾಗಿತ್ತು. ಅದರ ಮುಂದುವರಿದ ಭಾಗವಾಗಿ 19 ಜೂನ್ 2018 ರಂದು ಮೆಹಬೂಬಾ ಮುಫ್ತಿ ಯವರು ಕಾಶ್ಮೀರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪಂಡಿತರ ಮತ್ತಿತರರ ಹತ್ಯೆ, ವಲಸೆ ಘಟನೆಗಳು ನಡೆಯುತ್ತಿದ್ದಂತೆಯೇ ಅದನ್ನು ವಿರೋಧಿಸಿ ಕಾಶ್ಮೀರಿ ಪಂಡಿತರ ಕುಟುಂಬ ಮೂಲದ (ಕಾಶ್ಮೀರದಲ್ಲಿ ಪಿತ್ರಾರ್ಜಿತ ಆಸ್ತಿ ಹೊಂದಿರುವ ಪಂಡಿತ್ ಮೋತಿಲಾಲ್ ನೆಹರೂ ಕುಟುಂಬಿಕರು ಹಲವರು ಇನ್ನೂ ಅಲ್ಲಿಯೇ ನೆಲೆಸಿದ್ದಾರೆ) ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಅಂದೇ ಸಂಸತ್ತಿನಲ್ಲಿ ಪ್ರತಿಭಟಿಸಿದ್ದರು. ಸರ್ಕಾರದ ಪ್ರಮುಖರನ್ನು ಗೇರಾವ್ ಮಾಡಿದ್ದರು. ಸಂತ್ರಸ್ತರಿಗೆ ಸಹಾಯ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಬಗೆಬಗೆಯಾಗಿ ವಿನಂತಿಸಿದ್ದರು. ಆದರೆ ಇದೇ ಬಿಜೆಪಿಯ ಅಂದಿನ ನಾಯಕರುಗಳು ರಾಜೀವ್ ಎತ್ತಿದ ವಿಚಾರದ ಕುರಿತು ಬೆಂಬಲ ವ್ಯಕ್ತಪಡಿಸಿರಲಿಲ್ಲ ಬದಲಿಗೆ ಅಸಡ್ಡೆ ತೋರಿಸಿದ್ದರು. ಇದಾದ ಸ್ವಲ್ಪವೇ ಸಮಯದಲ್ಲಿ ಅಂದರೆ 21 ಮೇ 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಎಲ್ಟಿಟಿಈ ಉಗ್ರರಿಂದ ನಡೆದ ಬಾಂಬ್ ದಾಳಿಯಲ್ಲಿ ರಾಜೀವ್ ಗಾಂಧಿಯವರ ಹತ್ಯೆಯಾಗುತ್ತದೆ‌.

ಆದರೆ 2008ರ ವೇಳೆಗೆ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜಧರ್ಮ ಪರಿಪಾಲನೆಯ ಭಾಗವಾಗಿ ಲಕ್ಷಾಂತರ ಸಂಖ್ಯೆಯ ಪಂಡಿತರಿಗೆ ಹಾಗೂ ಇನ್ನಿತರ ನಿರಾಶ್ರಿತರಿಗೆ ಉದ್ಯೋಗಾವಕಾಶ ಒದಗಿಸಿದ್ದು ಮಾತ್ರವಲ್ಲದೇ, ನಿವೇಶನ/ ಮನೆಗಳನ್ನು ನಿರ್ಮಿಸಿ ಹಂಚಿತ್ತು. ಇಷ್ಟಾಗಿಯೂ ಆ ದರ್ಘಟನೆಯ ನಂತರದಲ್ಲಿ ಬರೋಬ್ಬರಿ 15ವರ್ಷಗಳ ಕಾಲ ಸ್ವತಂತ್ರ ಮತ್ತು ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದ ಬಿಜೆಪಿ ಆ ಸಂತ್ರಸ್ತರ ಪುನರ್ವಸತಿಗೆ ಯಾವುದೇ ಯೋಜನೆ ರೂಪಿಸದೆ ಇದೀಗ ದೇಶದ ಕೋಮು ಸಾಮರಸ್ಯ ಕೆಡಿಸುವ ಸಿನೇಮಾ ನಿರ್ಮಿಸಿ, ಗಳಗಳನೆ ಅತ್ತು ಅದಕ್ಕೆ ತೆರಿಗೆ ವಿನಾಯಿತಿ ಘೋಷಿಸಿ, ಟಿಕೇಟುಗಳನ್ನು ಉಚಿತವಾಗಿ ಹಂಚುತ್ತಿರುವ ಹಿಂದಿನ ಅಸಲಿಯತ್ತಾದರೂ ಏನು? ಈ ಪ್ರಶ್ನೆಗೆ ಬಿಜೆಪಿ ಸಮರ್ಥಕರು ಉತ್ತರಿಸುವರೇ?
Advertisement
Advertisement
Recent Posts
Advertisement