ಬಹುಮತ ಇಲ್ಲದಿದ್ದರೂ ಆಪರೇಷನ್ ಕಮಲದ ಮೂಲಕ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಯಾವ ಲೆಕ್ಕಾಚಾರ ಇಟ್ಟುಕೊಂಡು ಯಡಿಯೂರಪ್ಪ ನವರ ನಾಯಕತ್ವವನ್ನು ಬದಲಾವಣೆ ಮಾಡಿತೋ ಗೊತ್ತಿಲ್ಲ. ಬಹುಶಃ ಯಡಿಯೂರಪ್ಪನವರ ಆಸರೆ ಇಲ್ಲದೇ ಹಿಂದುತ್ವದ ಭಾವಾವೇಶದ ಅಲೆಯನ್ನು ಎಬ್ಬಿಸಿ ಬಹುಮತ ಗಳಿಸಲು ಅಗತ್ಯವಿರುವ 250 ಸ್ಥಾನಗಳನ್ನು ಗೆಲ್ಲಲು ಅದು ರಣ ನೀತಿಯನ್ನು ರೂಪಿಸಿತ್ತು. ಅದೇ ಉದ್ದೇಶದಿಂದಲೇ ಹಿಜಾಬ್ ನಂಥ ಸ್ಥಳೀಯ ಸಮಸ್ಯೆಗಳನ್ನು ದೊಡ್ಡದು ಮಾಡಿತು.
ನಂತರ ಜಾತ್ರೆ ,ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್, ಜಟ್ಕಾ ಮಾಂಸದ ವಿವಾದ ಹೀಗೆ ಕೋಮು ಧ್ರುವೀಕರಣದ ಸುತ್ತ ಚರ್ಚೆ ನಡೆಯುವಂತೆ ಮಾಡಲು ಯತ್ನಿಸುತ್ತ ಬಂತು. ಪ್ರಚೋದನಕಾರಿಯಾಗಿ ಮಾತಾಡಲು ಸಿ.ಟಿ.ರವಿ, ಪ್ರತಾಪ ಸಿಂಹ ಮುಂತಾದ ಕೆಲವರನ್ನು ಬಳಸಿಕೊಂಡಿತು. ಹೊರಗಿನಿಂದ ಮುತಾಲಿಕ, ಚೈತ್ರಾ ಅಂಥವರ ನೆರವನ್ನು ಪಡೆಯಲು ಮುಂದಾಯಿತು. ಈಗಲೂ ಅದೇ ಲೆಕ್ಕಾಚಾರ ನಡೆಸಿದೆ. ಆದರೆ, ಬರೀ ಹಿಂದುತ್ವದ ಧ್ರುವೀಕರಣದ ನೆರವಿನಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಖಾತ್ರಿಯಾಗಿದೆ.
ಕಾರಣ ಸರ್ಕಾರದಲ್ಲಿ ಅಂದರೆ ಸಚಿವ ಸಂಪುಟದಲ್ಲಿ ಮತ್ತು ಪಕ್ಷದಲ್ಲಿ ಪರಿಣಾಮಕಾರಿ ಸರ್ಜರಿ (ಶಸ್ತ್ರ ಚಿಕಿತ್ಸೆ) ಮಾಡಲು ಪಕ್ಷದ ರಾಷ್ಟ್ರೀಯ ನಾಯಕತ್ವ ತೀರ್ಮಾನಿಸಿದಂತೆ ಕಾಣುತ್ತದೆ. ಪಕ್ಷದ ಒಳ ವಲಯಗಳಲ್ಲಿ ಈ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ.
ಆದರೆ ದಿಲ್ಲಿಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಬಡವರ ಮನೆಗಳು ಮತ್ತು ಗುಡಿಸಲುಗಳ ಮೇಲೆ ಬುಲ್ಡೋಜರ್ ಬಿಟ್ಟ ನಂತರ ಏನಾಯಿತು ಎಂಬುದು ಜಗತ್ತಿಗೆ ಗೊತ್ತಿದ್ದರೂ ಇವರು ಮಾತಾಡಲು ವಿಷಯಗಳಿಲ್ಲದೇ ಇಂಥ ಪ್ರಚೋದನಾಕಾರಿ ಮಾತುಗಳನ್ನು ಆಡುತ್ತಿದ್ದಾರೆ.
ಅಂತಲೇ ಬಿಜೆಪಿಯ ರಾಷ್ಟ್ರೀಯ ನಾಯಕತ್ವ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಬಿಜೆಪಿ ಪಕ್ಷ ಮತ್ತು ಸರ್ಕಾರದಲ್ಲಿ ಕಳಂಕಿತ ಮುಖಗಳನ್ನು ಹೊರದಬ್ಬಿ ಹೊಸ ಕಳಂಕ ರಹಿತರ ತಂಡ ಕಟ್ಟಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಅದು ಅಷ್ಟು ಸುಲಭವಲ್ಲ. ಕಟ್ಟಾ ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದವರ ಮೇಲೂ ಲಂಚದ ಆರೋಪಗಳು ಇರುವುದರಿಂದ ಈ ಬಿಕ್ಕಟಿನಿಂದ ಹೊರಗೆ ಬರುವುದು ಅಷ್ಟು ಸುಲಭದ ಮಾತಲ್ಲ.
ಮುಖ್ಯ ಪ್ರತಿಪಕ್ಷ ವಾಗಿ ಕಾಂಗ್ರೆಸ್ ಇತ್ತೀಚೆಗೆ ನಡೆಸಿದ ಪ್ರತಿಭಟನೆ ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಜನಪ್ರಿಯತೆಯಲ್ಲಿ ಸಿದ್ದರಾಮಯ್ಯ ನವರನ್ನು ಸರಿಗಟ್ಟುವ ನಾಯಕರು ಬಿಜೆಪಿ ಯಲ್ಲಿ ಯಾರೂ ಇಲ್ಲ.ಇದ್ದೊಬ್ಬ ಯಡಿಯೂರಪ್ಪ ನವರನ್ನು ಪಕ್ಷವೇ ಕಡೆಗಣಿಸಿದ ಪರಿಣಾಮವಾಗಿ ರಾಜ್ಯದ ಆಡಳಿತ ಪಕ್ಷ ಇಕ್ಕಟ್ಟಿಗೆ ಸಿಲುಕಿದೆ. ಬಸವರಾಜ ಬೊಮ್ಮಾಯಿಯವರ ಮುಖ್ಯಮಂತ್ರಿಯಾದರೂ ಸಂಪುಟದ ಮೇಲೆ ಇಲ್ಲವೇ ಪಕ್ಷದ ಮೇಲೆ ಅವರ ಸಂಪೂರ್ಣ ನಿಯಂತ್ರಣ ಇದ್ದಂತಿಲ್ಲ. ಇನ್ನು ಭಾರೀ ನಿರೀಕ್ಷೆ ಇಟ್ಟುಕೊಂಡು ಅರವಿಂದ ಕೆಜ್ರಿವಾಲರ ಆಮ್ ಆದ್ಮಿ ಪಕ್ಷ ಕೂಡ ಕರ್ನಾಟಕದಲ್ಲಿ ಕ್ರಿಯಾಶೀಲ ವಾಗಿರುವುದರಿಂದ ಬಿಜೆಪಿಯನ್ನೇ ಆಶ್ರಯಿಸಬೇಕೆಂಬ ಅನಿವಾರ್ಯತೆ ಕರ್ನಾಟಕದ ಮತದಾರರಿಗಿಲ್ಲ.
ಈಗ ಹೇಗಾದರೂ ಮಾಡಿ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ಆ ಮೂಲಕ ದಕ್ಷಿಣ ಭಾರತದ ಒಂದಾದರೂ ರಾಜ್ಯವನ್ನು ಗೆಲ್ಲುವ ಗುರಿ ಅವರು ಹೊಂದಿದ್ದಾರೆ. ಅದಕ್ಕಾಗಿ ಅಮಿತ್ ಶಾ ಮತ್ತೆ ಬೇರೆ ಪಕ್ಷಗಳ ಪ್ರಭಾವೀ ನಾಯಕರನ್ನು ಬುಟ್ಟಿಗೆ ಹಾಕಿಕೊಳ್ಳಲು ಕಾರ್ಯತಂತ್ರ ರೂಪಿಸಿದ್ದಾರಂತೆ. ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ನ ತಲಾ ನಾಲ್ವರು ಶಾಸಕರು ಬಿಜೆಪಿ ಯನ್ನು ಸೇರುತ್ತಾರೆಂಬ ವದಂತಿ ಹರಡಿದೆ. ಆದರೆ, ಉಗ್ರ ಹಿಂದುತ್ವದ ಅಸ್ತ್ರ ಪ್ರಯೋಗಿಸಲು ಬುಲ್ಡೋಜರ್ ಸಂಸ್ಕೃತಿ ತಂದು ಅಲ್ಪಸಂಖ್ಯಾತ ಮತ್ತು ಇತರ ಸಮುದಾಯಗಳನ್ನು ಬೆದರಿಸುವ ತಂತ್ರ ರೂಪಿಸಬೇಕೆಂದು ಬಿಜೆಪಿ ಯೊಳಗಿನ ಇನ್ನೊಂದು ಗುಂಪು ಒತ್ತಡ ಹೇರುತ್ತಿದೆ ಎನ್ನಲಾಗುತ್ತದೆ.
ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಖರೀದಿ ಮಾಡಿ ಮುಂಬಯಿಗೆ ಕರೆದುಕೊಂಡು ಹೋಗಿ ಬಚ್ಚಿಟ್ಟು ಸರ್ಕಾರ ರಚಿಸಿ ಅವರನ್ನು ಮಂತ್ರಿ ಮಾಡಿರುವಾಗ ಅಂಥವರನ್ನು ಹೊರಗೆ ಹಾಕಲು ಹೇಗೆ ಸಾಧ್ಯ? ಅಂಥವರ ನೆರವಿನಿಂದ ಸರ್ಕಾರ ರಚನೆ ಮಾಡಿದ್ದು ತಪ್ಪೆಂದು ಬಿಜೆಪಿ ರಾಷ್ಟ್ರೀಯ ವರಿಷ್ಠ ನಾಯಕರಿಗೆ ಅನಿಸಲಿಲ್ಲವೇ?
ಒಟ್ಟಾರೆ ಬರಲಿರುವ ವಿಧಾನಸಭಾ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ. ಭ್ರಷ್ಟಾಚಾರದ ಹಗರಣಗಳನ್ನು ಹಿಂದುತ್ವದ ಮುಸುಕಿನಲ್ಲಿ ಬಚ್ಚಿಟ್ಟು ಕೋಮು ಧ್ರುವೀಕರಣ ದ ಮೂಲಕ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವದೇ? ಅಸಮಾಧಾನ ಗೊಂಡ ಯಡಿಯೂರಪ್ಪ ನವರನ್ನು ಅವರ ಹಳೆಯ ಪ್ರಕರಣಗಳನ್ನು ತೆಗೆದು ಬಾಯಿ ಮುಚ್ಚಿಸಲಾಗುವುದೇ? ಕಾಂಗ್ರೆಸ್ ಯಾರನ್ನು ಮುಂದಿನ ಮುಖ್ಯಮಂತ್ರಿ ಎಂದು ಚುನಾವಣೆಗೆ ಮುಂಚೆ ಘೋಷಿಸುತ್ತದೆ? ಇವೆಲ್ಲ ಅಂಶಗಳು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು.
ಬರಹ: ಸನತ್ ಕುಮಾರ ಬೆಳಗಲಿ (ಲೇಖಕರು ಹಿರಿಯ ಅಂಕಣಕಾರರು ಹಾಗೂ ಜನಪರ ಚಿಂತಕರು)
ಕೃಪೆ: ಪ್ರಚಲಿತ ಅಂಕಣ/ ವಾರ್ತಾಭಾರತಿ. ಚಿತ್ರ: ಗೂಗಲ್