Advertisement

ನಿರುದ್ಯೋಗದಿಂದ ನೊಂದು ಎಂಬಿಎ ವಿಧ್ಯಾರ್ಥಿನಿ ಆತ್ಮಹತ್ಯೆ- ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಕೊಡವೂರು ಆರೋಪ!

Advertisement
ಮೂಡುಬೆಳ್ಳೆಯ ಶಿರ್ವದ ಬಡ ಕುಟುಂಬದ ಎಂಬಿಎ ಪಧವೀದರೆ ಸಹನಾ ಕುಂದರ್ (ದೇವಾಡಿಗ) ಉದ್ಯೋಗಕ್ಕಾಗಿ ಅಲೆದಲೆದು ಸೋತು ನಿರಾಸೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ. ಇದು ಪ್ರಜಾತಂತ್ರ ವ್ಯವಸ್ಥೆಯ ನಾಗರೀಕ ಸಮಾಜ ತಲೆತಗ್ಗಿಸ ಬೇಕಾದ ವಿಚಾರ. ಈ ಆತ್ಮಹತ್ಯೆಯ ಪ್ರಕರಣಕ್ಕೆ ಸರಕಾರವೇ ನೇರ ಹೊಣೆ. ಆಕೆ ತನ್ನ ಡೆತ್ ನೋಟಿನಲ್ಲಿ ನನ್ನ ಸಾವಿಗೆ ನಿರುದ್ಯೋಗವೇ ಮುಖ್ಯ ಕಾರಣವೆಂದು ಹೇಳಿದ್ದಾಳೆ. ಸರಕಾರದ ಯುವ ಸಬಲೀಕರಣದ ಹುಸಿ ಭರವಸೆಗಳು ವಿಧ್ಯಾವಂತ ಯುವ ಜನಾಂಗವನ್ನು ಅತ್ಮಹತ್ಯೆಯ ಪಥದತ್ತ ತಳ್ಳುತ್ತಿರುವುದು ಹೊಸತೇನಲ್ಲ. ಬಿಜೆಪಿ ಸರಕಾರದ ಆಡಳಿತದಲ್ಲಿ ಇದು ಮಾಮೂಲಿ. ಇದು ಈ ಸರಕಾರದ ವೈಪಲ್ಯಕ್ಕೆ ಸಾಕ್ಷಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ 2 ಕೋಟಿ ಉದ್ಯೋಗ ಸೃಷ್ಟಿ ನನ್ನ ಗುರಿ ಎಂದಿದ್ದರು. ಆದರೆ ಆ ಭರವಸೆ ಇಂದು ಹುಸಿಯಾಗಿದೆ. ದೇಶದಲ್ಲಿ ಕಳೆದ 5 ವರ್ಷಗಳಲ್ಲಿ 40,000 ಯುವಕ, ಯುವತಿಯರು ಆತ್ಮಹತ್ಯೆ ಯ ದಾರಿ ಹಿಡಿದಿದ್ದಾರೆ. ಪ್ರಸಕ್ತ ಮೋದಿ ಆಡಳಿತದಲ್ಲಿ ಪ್ರತೀ 1ಗಂಟೆಗೆ 1ವಿದ್ಯಾವಂತ ಯುವಕ, ಯುವತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಇವರಲ್ಲಿ ಸಹನಾ ದೇವಾಡಿಗ ಒಬ್ಬಳಾಗಿದ್ದಾಳೆ. ಇದು ಈ ಸರಕಾರದ ಆಡಳಿತ ವೈಪಲ್ಯಕ್ಕೆ ಸಾಕ್ಷಿಯಾಗಿದೆ.


ದೇಶದಲ್ಲಿ 60 ಕೋಟಿ 25ವರ್ಷ ಕೆಳಗಿನ ಮತ್ತು 18ವರ್ಷ ಮೇಲಿನ ವಿದ್ಯಾವಂತ ಯುವ ಜನಾಂಗವಿದ್ದು ಪ್ರಸಕ್ತ ಪರಿಸ್ಥಿತಿಯಲ್ಲಿ 20 ಶೇಕಡಾ ಪದವೀದರರು ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ. 80 ಶೇಕಡಾ ಮಂದಿ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮೋದಿ ಸರಕಾರದ ಅವೈಜ್ಞಾನಿಕ ಆರ್ಥಿಕ ಮತ್ತು ಆಡಳಿತ ನೀತಿ. ಕಾಂಗ್ರೆಸ್ ಸರಕಾರ ತನ್ನ 70ವರ್ಷಗಳ ಆಡಳಿತಾವದಿಯಲ್ಲಿ ಯುವ ಜನಾಂಗದ ಉಧ್ಯೋಗ ಸೃಷ್ಟಿ ಮತ್ತು ದೇಶದ ಆರ್ಥಿಕ ಅಭಿವೃದ್ಧಿಯ ಗುರಿಯೊಂದಿಗೆ ನಿರ್ಮಿಸಿದ ಉದ್ದಿಮೆಗಳ ಮಾರಾಟದಿಂದುಂಟಾದ ಖಾಸಗೀಕರಣದ ಪರಿಣಾಮ ಉದ್ಯೋಗ ಸೃಷ್ಟಿ ಪ್ರತಿಶತ 28ಕ್ಕೆ ಇಳಿದಿದೆ. ಇದರೊಂದಿಗೆ ದಿವಾಳಿಯ ಹೆಸರಲ್ಲಿ ಮುಖ್ಯವಾಗಿ ಉದಾ: ಕಿಂಗ್ ಪಿಶರ್, ಜೆಟ್ ಏರ್ವೇಸ್ ಸೇರಿ ಹತ್ತು ಹಲವು ಕಂಪೆನಿಗಳ ಮುಚ್ಚುವಿಕೆಯಿಂದಾದ ಉದ್ಯೋಗ ನಷ್ಟ ನಿರುದ್ಯೋಗವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ 7ವರ್ಷಗಳಿಂದ ದೇಶದಲ್ಲಿ ಹೊಸ ಬೃಹತ್ ಉದ್ದಿಮೆಗಳ ಸೃಷ್ಟಿಯಾಗಿಲ್ಲ. ಇದಕ್ಕೆ ಈ ಸರಕಾರದ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಭ್ರಷ್ಟಾಚಾರದ ಕೂಪವಾಗಿರುವ ಈ ಸರಕಾರಕ್ಕೆ ದೇಶದ ಅಭಿವೃದ್ಧಿಯ ಕಡೆಗೆ ಗಮನಕೊಡಲು ಸಮಯವಿಲ್ಲ. ಇದ್ದ ಸರಕಾರಿ ಉದ್ಯೋಗಾವಕಾಶಗಳು ಲಂಚಭಾಕತನದ ಕಬಂಧ ಬಾಹುವಿನಲ್ಲಿ ಸಿಕ್ಕಿ ನಲುಗುತ್ತಿದ್ದು ಅವು ಹಣಕೊಟ್ಟವರ ಪಾಲಾಗುತ್ತಿವೆ. ರಾಜ್ಯದಲ್ಲಿ ಈಗಾಗಲೇ ಬೆಳಕಿಗೆ ಬಂದಿರುವ 40 ಪರ್ಸಂಟ್ ಕಮಿಷನ್ ಹಗರಣ, ಸಹಪ್ರಾದ್ಯಾಪಕರ ನೇಮಕಾತಿ ಹಗರಣ, ಪಿಎಸ್ಐ ನೇಮಕಾತಿ ಹಗರಣ ಇವೆಲ್ಲ ಪರೋಕ್ಷ ಉದ್ಯೋಗ ನಷ್ಟಕ್ಕೆ ಕಾರಣಗಳೇ ಆಗಿವೆ. ಕೆಪಿಎಸ್ಸಿ‌, ಯುಪಿಎಸ್ಸಿ ನೀಟ್, ಸಿಇಟಿ ಮುಂತಾದ ರಾಷ್ಟ್ರೀಯ ನೇಮಕಾತಿ ಪ್ರಕಾರಗಳು ಆಳುವ ಸರಕಾರದ ಭ್ರಷ್ಟ ಕಪಿಮುಷ್ಟಿಯಲ್ಲಿದ್ದು ನಿಜವಾದ ಪ್ರತಿಭೆಗಳು ಮರೆಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಹನಾಳಂತ ಬಡ ಕುಟುಂಬದ ಹೆಣ್ಣು ಮಗಳು ಉದ್ಯೋಗ ಪಡೆಯುವುದು ಕಷ್ಟ ಸಾಧ್ಯವಾಗಿತ್ತು. ಆ ನೆಲೆಯಲಿ ನಿರಾಶೆಯಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಹನಾ ಸಾವಿಗೆ ಆಳುವ ಸರಕಾರ ನೇರ ಹೊಣೆಯಾಗಿದೆ. ಸಹನಾ ಉದ್ಯೋಗ ಸಿಗದೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕಾದುದು ಸರಕಾರದ ಕರ್ತವ್ಯ. ಆ ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅವಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತದೆ ಎಂದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
Advertisement
Recent Posts
Advertisement