Advertisement

ಕೊಡವ ಅರಸನ ವಿರುದ್ದ ಟಿಪ್ಪು ದಾಳಿನಡೆಸಲು ಕಾರಣ‌ " ಅರಸ ಬಂಟ್ವಾಳದ ವೆಂಕಟರಮಣ ದೇವಸ್ಥಾನ ದರೋಡೆ ಮಾಡಿ, ಬ್ರಾಹ್ಮಣ ಹೆಂಗಸರನ್ನು ಸೆರೆಹಿಡಿದದ್ದೇ ಆಗಿತ್ತು" : ಇತಿಹಾಸ ಓದಿಕೊಳ್ಳಿ

Advertisement
ಬರಹ: ನವಿನ್ ಸೂರಿಂಜೆ (ಲೇಖಕರು ಖ್ಯಾತ ಪತ್ರಕರ್ತರು, ಸಾಮಾಜಿಕ ಚಿಂತಕರು)

ಟಿಪ್ಪು "ನರಭಕ್ಷಕ"ನಾಗಿದ್ದು ಬ್ರಾಹ್ಮಣರ ರಕ್ಷಣೆಗಾಗಿ?
"ಟಿಪ್ಪು ಒಬ್ಬ ನರಭಕ್ಷಕ. ಆತನ ದೌರ್ಜನ್ಯದ ಕತೆಗಳನ್ನು ಕೇಳಬೇಕಾದರೆ ಕೊಡವರನ್ನು ವಿಚಾರಿಸಿ" ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ. ಟಿಪ್ಪು ಕೊಡವರ ಪಾಲಿಗೆ ಯಾಕೆ ನರಭಕ್ಷಕನಾಗಿದ್ದ ? ಕೊಡವರ ರಾಜ ಆಗ ಇಂಗ್ಲೀಷರ ಪರ ಇದ್ದ ಎನ್ನುವ ಕಾರಣಕ್ಕಾಗಿ ಟಿಪ್ಪು ಕೊಡಗಿಗೆ ದಾಳಿ ಮಾಡಿ ಹಿಂಸಾಚಾರ ಮಾಡಿದ ಎಂದು ಕೆಲ ಇತಿಹಾಸಕಾರರು ಹೇಳುತ್ತಾರೆ. ಆದರೆ ಇದು ಅರ್ಧಸತ್ಯ.

ಕೊಡಗಿಗೆ ದಾಳಿ ಮಾಡಿದ್ದು ಟಿಪ್ಪುವಿನ ಸೇನಾಧಿಕಾರಿ ಗುಲಾಂ ಅಲೀಖಾನ್. ಕೊಡಗಿಗೆ ದಾಳಿ ಮಾಡಲು ಟಿಪ್ಪುವು ಗುಲಾಂ ಅಲಿ ಖಾನ್ ಗೆ ಅದೇಶ ಕೊಟ್ಟಿರುವುದೇ ಬೇರೆ ಉದ್ದೇಶಕ್ಕೆ. ಗುಲಾಂ ಅಲಿ ಖಾನ್ ಅದನ್ನು ದುರುಪಯೋಗಪಡಿಸಿಕೊಂಡು ಟಿಪ್ಪುವಿನ ಹೆಸರಿಗೆ ಮಸಿ ಬಳಿದ. ಇಂಗ್ಲೀಷರು ಶ್ರೀರಂಗಪಟ್ಟಣಕ್ಕೆ ದಾಳಿ ಮಾಡಿದಾಗ ವಾಟರ್ ಗೇಟ್ ತೆಗೆದು ಟಿಪ್ಪುವಿಗೆ ದ್ರೋಹ ಬಗೆದಿದ್ದು ಇದೇ ಗುಲಾಂ ಅಲಿಖಾನ್.

ಅದಿರಲಿ, ಕೊಡಗಿಗೆ ದಾಳಿ ಮಾಡುವಂತೆ ತನ್ನ ಸೈನ್ಯಾಧಿಕಾರಿ ಗುಲಾಂ ಅಲಿ ಖಾನ್ ಗೆ ಟಿಪ್ಪು ಆದೇಶಿಸಿದ್ದು ಯಾಕೆ ?

ಖ್ಯಾತ ಇತಿಹಾಸಕಾರ ಗಣಪತಿ ರಾವ್ ಐಗಳ್ ರವರು 1923 ರಲ್ಲಿ ಬರೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಪುಸ್ತಕದ 'ಕೊಡವರು' ಎಂಬ ಅಧ್ಯಾಯದಲ್ಲಿ ಹೀಗೆ ಬರೆಯುತ್ತಾರೆ "1799ರಲ್ಲಿ ಮೈಸೂರು ಕಡೇ ಯುದ್ಧವು ಶುರುವಾದ ಕೂಡಲೇ ಕೊಡಗಿನ ಅರಸನಾದ ವೀರ ರಾಜೇಂದ್ರ ಒಡೆಯನು ಕನ್ನಡ ಜಿಲ್ಲೆಯನ್ನು ಸುಲಿಗೆ ಮಾಡುವುದಕ್ಕೆ ಕೊಡವರ ಗುಂಪುಗಳನ್ನು ಕಳುಹಿಸಿದನು. ಅವರು ಜಮಾಲಾಬಾದ್ ಪಟ್ಟಣದಲ್ಲಿರುವ ಬ್ರಾಹ್ಮಣರ ಕುಟುಂಬಗಳನ್ನೆ ಸೆರೆಹಿಡಿದು, ಅಳದಂಗಡಿ, ಜೈಲಂಗಡಿ, ಬಂಗಾಡಿ ಮುಂತಾದ ಊರುಗಳನ್ನು ಸುಲಿಗೆ ಮಾಡಿ, ಬಂಟ್ವಾಳಕ್ಕೆ ಬಂದು ಪೇಟೆಯನ್ನು ಸುಲಿಗೆ ಮಾಡಿ ಬಂಟ್ವಾಳ ಶ್ರೀ ವೆಂಕಟ್ರಮಣ ದೇವರ ಪ್ರತಿಮೆಯನ್ನೂ ಅನೇಕ ಮಂದಿ ಗೌಡ ಸಾರಸ್ವತ ಬ್ರಾಹ್ಮಣರನ್ನು ಸೆರೆ ಹಿಡಿದು ಕೊಡಗಿಗೆ ಕರೆದುಕೊಂಡು ಹೋದನು. ಮುಖ್ಯವಾಗಿ ಗೌಡ ಸಾರಸ್ವತ ಬ್ರಾಹ್ಮಣರ ಹೆಂಗಸರನ್ನು ಸೆರೆ ಹಿಡಿದು ಕೊಡಗಿಗೆ ಕರೆದೊಯ್ದರು" ಎಂದು ಸ್ಪಷ್ಟವಾಗಿ ಬರೆಯುತ್ತಾರೆ.

ತನ್ನ ರಾಜ್ಯದ ಭಾಗವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವೆಂಕಟರಮಣ ದೇವಸ್ಥಾನಕ್ಕೆ ನುಗ್ಗಿ ದೇವರ ಬಂಗಾರದ ವಿಗ್ರಹವನ್ನು ದರೋಡೆ ಮಾಡಿದ್ದಲ್ಲದೇ, ಬ್ರಾಹ್ಮಣ ಹೆಂಗಸರನ್ನು ಸೆರೆಹಿಡಿದು ಕರೆದುಕೊಂಡು ಹೋಗಿದ್ದು ಕೊಡವ ರಾಜನ ವಿರುದ್ದ ಟಿಪ್ಪು ಆಕ್ರೋಶಗೊಳ್ಳಲು ಕಾರಣ‌. ಹಾಗಾಗಿ ಟಿಪ್ಪು ಕೊಡಗಿಗೆ ದಾಳಿ ಮಾಡಲು ತನ್ನ ಸೇನಾಧಿಕಾರಿ ಗುಲಾಂ ಅಲಿ ಖಾನ್ ಗೆ ಆದೇಶಿಸಿದ.

ಈಗ ಅದೇ ಬ್ರಾಹ್ಮಣರ ಪರವಾಗಿರುವ ಪಕ್ಷದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ರವರು ಟಿಪ್ಪು ಸುಲ್ತಾನ್ ರನ್ನು 'ನರಭಕ್ಷಕ' ಎನ್ನುತ್ತಾರೆ. ಇತಿಹಾಸದ ಅರಿವಿಲ್ಲದ ಬ್ರಾಹ್ಮಣ ಹುಡುಗರು ಟಿಪ್ಪು ವಿರುದ್ದ ಅಭಿಯಾನ ನಡೆಸುತ್ತಿದ್ದಾರೆ.
•ನವೀನ್ ಸೂರಿಂಜೆ
Advertisement
Advertisement
Recent Posts
Advertisement