Advertisement

ವಾರಣಾಸಿ ಮಸೀದಿಯ ಕೊಳದ ಕಾರಂಜಿಯ ಸ್ಥಂಭದ ಅವಶೇಷವನ್ನು ಶಿವಲಿಂಗ ಎಂದು ಬಿಂಬಿಸುವುದರ ಹಿಂದೆ ಅಡಗಿದೆಯೇ ಮನುವಾದಿ ಗುಪ್ತಕಾರ್ಯಸೂಚಿ?

Advertisement
ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

ಸಂಘಪರಿವಾರದ ದಾಳಿಯಿಂದ ಗ್ಯಾನ್ ವ್ಯಾಪಿ ಮಸೀದಿಯನ್ನು Places Of Worship Act-1991 ರಕ್ಷಿಸಬಹುದೇ?

ಫ್ಯಾಸಿಸಂ ಆವರಿಸಿಕೊಳ್ಳುತ್ತಿರುವಾಗ ಸಂಸತ್ತು, ಕೋರ್ಟುಗಳು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬಲ್ಲವೇ?

ಆತ್ಮೀಯರೇ ,

ವಾರಣಾಸಿಯ ಗ್ಯಾನ್ ವ್ಯಾಪಿ ಮಸೀದಿಯ ದೇವಸ್ಥಾನದ ಅವಶೇಷಗಳಿಗೆ ಸರ್ಕಾರೀ ವಿಡಿಯೋ ಸಂಶೋಧನೆಗೆ ಅವಕಾಶ ಕೊಟ್ಟಾಗಲೇ ಯೋಗಿ ಆದಿತ್ಯನಾಥ್ ಸರ್ಕಾರ ಅಲ್ಲೊಂದು  ಶಿವಲಿಂಗ ವನ್ನು " ಕಂಡುಹಿಡಿಯುವುದು" ಖಾತರಿಯಿತ್ತು. ಈಗ ವಿಡಿಯೋ ಸಂಶೋಧನೆಯ ಕೊನೆಯ ದಿನ ಕೊಳದ ಕಾರಂಜಿಯ ಸ್ಥಂಭದ ಅವಶೇಷವನ್ನು ಶಿವಲಿಂಗ ಎಂದು " ಕಂಡುಹಿಡಿದಿದ್ದಾರೆ "..ಕೂಡಲೇ ಉಪ್ರ ಸರ್ಕಾರ  ಆ ಸ್ಥಳವನ್ನು ವಶಕ್ಕೆ ತೆಗೆದುಕೊಂಡಿದೆ. ಪೂರ್ವತಯಾರಿಯಂತೆ ಸಂಘಪರಿವಾರದ ಅಷ್ಟೂ ಪಟಾಲಂ ಗ್ಯಾನ್ವ್ಯಾಪಿ ಮಸೀದಿಯು ದೇವಸ್ಥಾನ ಎಂಬುದು ಸಾಬೀತಾಗಿದೆ ಎಂದು ಹುಯಿಲೆಬ್ಬಿಸಿದ್ದಾರೆ.

 

ಈ ಪೂರ್ವನಿಯೋಜಿತ ನಾಟಕದ ಬಗ್ಗೆ ಇಂದು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಇದೆ. ವಾಸ್ತವದಲ್ಲಿ ಈ ರೀತಿ ವಿಡಿಯೋ ಸಂಶೋಧನೆಗೆ ಅನುಮತಿ ಕೊಟ್ಟಿದ್ದೆ     Places Of Worship Act-1991 ಗೆ ವಿರುದ್ಧವಾದದ್ದು. ಏಕೆಂದರೆ ೧೯೯೧ರಲ್ಲಿ ಪಾಸಾದ ಈ ಕಾಯಿದೆಯ ಪ್ರಕಾರ ಅಯೋಧ್ಯೆ ಪ್ರಕರಣವೊಂದನ್ನು ಹೊರತು ಪಡಿಸಿ ಈ ದೇಶದ ಎಲ್ಲಾ ಉಪಾಸನಾ ಸ್ಥಳಗಳನ್ನು ೧೯೪೭ರ ಆಗಸ್ಟ್ ೧೫ ರಂದು ಹೇಗಿತ್ತೋ ಹಾಗೆ ಉಳಿಸಿಕೊಳ್ಳತಕ್ಕದ್ದು. ಅದರ ಧಾರ್ಮಿಕ ಸ್ವರೂಪಕ್ಕೆ ಬದಲಾವಣೆ ತರುವ ಯಾವುದೇ ಕೃತ್ಯಗಳು ಅಪರಾಧ ಮತ್ತು ಶಿಕ್ಷಾರ್ಹ.

ಹೀಗಾಗಿ ಈ ಕಾಯಿದೆಯಡಿಯಲ್ಲಿ ಈ ಪುರಾತನ ಮಸೀದಿಯಲ್ಲಿ ಶಿವಲಿಂಗ ಇತ್ತೇ ಎಂದು ಹುಡುಕುವುದೇ ದುರುದ್ದೇಶದ ಮತ್ತು ಕಾನೂನು ಬಾಹಿರ ಕ್ರಮ. ಆದರೆ ಒಂದು ಸಂವಿಧಾನ ವಿರೋಧಿ ಸರ್ಕಾರವೇ ಅಧಿಕಾರದಲ್ಲಿದ್ದಾಗ ಕಾನೂನು ವಿರೋಧಿ ಕ್ರಮಗಳು ಸರ್ವೇ ಸಾಮಾನ್ಯ. 

ಆದರೆ ಕೋರ್ಟುಗಳಿಗೇನಾಗಿದೆ? 

೧೯೯೧ರ ಕಾಯಿದೆಯ ಉದ್ದೇಶವೇ ೧೯೪೭ರ ಪೂರ್ವದಲ್ಲಿ ಈ ದೇಶದ ಇತಿಹಾಸದಲ್ಲಿ ನಡೆದುಹೋದ ಸಂಗತಿಗಳು ಪುನರಾವರ್ತನೆಯಾಗಬಾರದು ಎಂಬುದು .

ಹಾಗೂ ೧೯೪೭ರ ನಂತರ  ಭಾರತೀಯರು ಸಾಂವಿಧಾನಿಕವಾಗಿ ಮಾಡಿಕೊಂಡಿರುವ ಕೂಡಿಬಾಳುವ - ಸಹಬಾಳ್ವೆಯ ಕಾಂಟ್ರಾಕ್ಟನ್ನು ೪೭ರ ಪೂರ್ವದ ಭೂತಗಳು ಹಾಳುಮಾಡಬಾರದೆಂಬುದು.

ಏಕೆಂದರೆ ೪೭ರ ಹಿಂದಿನ ಇತಿಹಾಸದಲ್ಲಿ ಸಂಘಪರಿವಾರವೇ ಒಪ್ಪಿಕೊಳ್ಳುವಂತೆ ವೈದಿಕ ಬ್ರಾಹ್ಮಣರ  ನೇತೃತ್ವದಲ್ಲಿ ಬುದ್ಧ ವಿಹಾರಗಳು, ಜೈನ ಬಸದಿಗಳು  ಸರ್ವಾನಾಶವಾಗಿ ಶೈವ-ವೈಷ್ಣವ  ದೇವಸ್ಥಾನಗಳಾಗಿ ಪರಿವರ್ತನೆಗೊಂಡಿವೇ.

ತಿರುಪತಿ , ಧರ್ಮಸ್ಥಳ ಇವೆಲ್ಲಾ ಅಂಥ ಮತಾಂತರದ ತಾಣಗಳೇ.

ಹಾಗೆಯೇ ಶೈವ-ವೈಷ್ಣವ ಸಂಘರ್ಷದಲ್ಲಿ ಪರಸ್ಪರರ ದೇವಸ್ಥಾನಗಳು ನಾಶಗಳಾಗಿವೆ.

ಪ್ರಕೃತಿ ಆರಾಧನೆಯ ಈ ದೇಶದ ಮೂಲನಿವಾಸಿಗಳ ಗುಡಿಗಳು, ದೈವಗಳು, ಶಕ್ತಿ ಮಾರಮ್ಮಗಳು ವೈದಿಕ ದಾಳಿಗೆ ತುತ್ತಾಗಿ ಬ್ರಾಹ್ಮಣ ದೇವರುಗಳ ಒಕ್ಕಲಾಗಿವೆ..

ಹೀಗಾಗಿ ಉತ್ಖನನ ನಡೆಸುವುದೇ ಆದರೆ ಮಸೀದಿಗಳಲ್ಲಿ ಮಾತ್ರವಲ್ಲ. ಎಲ್ಲಾ ವೈದಿಕ ಬ್ರಾಹ್ಮಣರ ದೇವಸ್ಥಾನಗಳನ್ನು ಅಗೆದು ತೆಗೆಯಬೇಕಾಗುತ್ತದೆ..

ಆದ್ದರಿಂದ ಇತಿಹಾಸದ ಸಮಾಧಿಯನ್ನು ತೋಡುತ್ತಾ  ಹೊಡೆದಾಡಿಕೊಳ್ಳುವುದರ ಬದಲು ಜೊತೆಗೂಡಿ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕೆಂಬ ಉದ್ದೇಶದಿಂದ Places Of Worship Act-1991 ಅನ್ನು ಜಾರಿ ಮಾಡಲಾಗಿತ್ತು. 

ಆದರೆ ೨೦೧೯ರಲ್ಲಿ ಮೋದಿ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದಮೇಲೆ ಕೋರ್ಟುಗಳಿಗೂ ಕರಸೇವೆಯಾದಂತಿದೆ!

ತಮ್ಮ ಮುಂದಿನ ಎಲ್ಲಾ ಮಸೀದಿ ನಾಶ ಯೋಜನೆಗಳಿಗೂ Places Of Worship Act-1991 ತಡೆಯೊಡ್ಡಬಹುದು ಎಂದು ಪರಿವಾರದ ಕೆಲವರು ಈ ಕಾಯಿದೆಯನ್ನೇ ರದ್ದು ಮಾಡಲು ಸುಪ್ರೀಂ ಕೋರ್ಟಿನ ಮುಂದೆ  ದುರುದ್ದೇಶದ ಅಹವಾಲನ್ನು ಸಲ್ಲಿಸಿದ್ದಾರೆ.

ಈ ಅಹವಾಲಿನ ದೂರಗಾಮಿ ಪರಿಣಾಮವು ಮತ್ತದರ ದುರುದ್ದೇಶವು ಸ್ಪಷ್ಟವಾಗಿದ್ದರೂ ಆಗಿನ ಮುಖ್ಯ ನ್ಯಾಯಾಧೀಶ ಬೋಬಡೆ ಯವರ ಪೀಠ ಆ ಅಹವಾಲನ್ನು ವಿಚಾರಣೆಗೆ ಅಂಗೀಕರಿಸಿದೆ! 

ಇಂದು ಗ್ಯಾನ್ವ್ಯಾಪಿ ಮಸೀದಿಯ ಬಗ್ಗೆ ನಡೆಯುವ ವಿಚಾರಣೆಯು ಸಹ ಕೋರ್ಟು Places Of Worship Act-1991 ಬಗ್ಗೆ ಯಾವ ನಿಲುವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನೇ ಆಧರಿಸಿದೆ. 

ಈ ಹಿನ್ನೆಲೆಯಲ್ಲಿ Places Of Worship Act-1991 ಮತ್ತು ಅದರ ವಿರುದ್ಧದ ಅಹವಾಲಿನ ಕುರಿತು ಈ ಹಿಂದೆ ಬರೆದ ಲೇಖನವನ್ನು ಮತ್ತೊಮ್ಮೆ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ : 

Places Of Worship Act –1991-ಸುಪ್ರೀಂ ಪರಿಶೀಲನೆ!

ಮತ್ತಷ್ಟು ಮಸೀದಿಗಳನ್ನು ಕೆಡವಲು ಸುಪ್ರೀಂ ಪರವಾನಗಿಯೇ?

ಬಾಬ್ರಿ ಮಸೀದಿಯನ್ನು ನಾಶ ಮಾಡಿ ರಾಮಮಂದಿರವನ್ನು ಕಟ್ಟಲು ಹೊರಟಿರುವ ಸಂಘಿಗಳು ಹಾಗು ಅವರ ಬಿಜೆಪಿ ಸರ್ಕಾರಗಳು ಇದೀಗ ದೇಶದಲ್ಲಿರುವ ಎಲ್ಲಾ ಚಾರಿತ್ರಿಕ ಮಸೀದಿಗಳ ನಾಶಕ್ಕೂ ಸಂಘಟಿತ ಸಂಚನ್ನು ನಡೆಸತೊಡಗಿವೆ. ಮತ್ತು ಇದೇ ಮಾರ್ಚ್ ತಿಂಗಳಲ್ಲಿ ಸುಪ್ರಿಂ ಕೋರ್ಟು ಕೂಡಾ ಅಂತಹ ಸಂಚಿಗೆ ಸಾಂವಿಧಾನಿಕ ಮನ್ನಣೆ ಕೊಡುವ ಪ್ರಮಾದವನ್ನು ಎಸಗಿದೆ.

ಭಾರತದಲ್ಲಿ ಮತ್ತೊಂದು ಬಾಬ್ರಿ ಮಸೀದಿ ನಾಶದಂತಹ ಕೋಮುವಾದಿ ರಕ್ತರಾಜಕಾರಣಕ್ಕೆ ಅವಕಾಶ ಮಾಡಿಕೊಡಬಾರದೆಂಬ ಉದ್ದೇಶದಿಂದ  Places Of Worship Act (Special Provisions)- 1991-   ಕಾಯಿದೆಯನ್ನು   ೧೯೯೧ರಲ್ಲಿ ಭಾರತದ ಸಂಸತ್ತು ಜಾರಿ ಮಾಡಿದ್ದ ಹಾಗೂ ಸುಪ್ರಿಂ ಕೋರ್ಟುಗಳು ಎತ್ತಿ ಹಿಡಿದಿದ್ದ - ಕಾಯಿದೆಯನ್ನು ಮರುಪರಿಶೀಲಿಸಬೇಕೆಂಬ ಅರ್ಜಿಗೆ 2021ರ ಮಾರ್ಚ್ -೧೨ರಂದು ಸುಪ್ರೀಂ ಕೋರ್ಟು ಮನ್ನಣೆ ನೀಡಿದೆ. ಹಾಗೂ ಅದರ ಬಗ್ಗೆ ಉತ್ತರ ನೀಡಲು ಬಾಬ್ರಿ ಮಸೀದಿ ನಾಶದಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿಜೆಪಿ ಸರ್ಕಾರಕ್ಕೆ ನೊಟೀಸನ್ನೂ ಜಾರಿ ಮಾಡಿದೆ.

ಸುಪ್ರೀಮ್ ಕೋರ್ಟಿನ ಈ ನಡೆ ಅತ್ಯಂತ ದುರದೃಷ್ಟಕರ ಮಾತ್ರವಲ್ಲ. ಬರಲಿರುವ ದಿನಗಳಲ್ಲಿ ಭಾರತದ ರಾಜಕಾರಣ ಇನ್ನಷ್ಟು ರಕ್ತಸಿಕ್ತವಾಗಲಿರುವ ಮುನ್ಸೂಚನೆಯೂ ಅಗಿದೆ.

Places Of Worship Act -  ಸೆಕ್ಯುಲಾರ್ ಕತ್ತಿ-ಗುರಾಣಿ

೧೯೯೦ರಲ್ಲಿ ಸಂಘಿ-ಬಿಜೆಪಿ ಕೂಟವು ರಾಮಜನ್ಮಭೂಮಿ ಹೆಸರಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧೆಯನ್ನು ದುರ್ಬಳಕೆ  ಮಾಡಿಕೊಂಡು ಬಾಬ್ರಿ ಮಸೀದಿ ನಾಶಕ್ಕೆ ತಯಾರಿ ನಡೆಸುತ್ತಿದ್ದಾಗ ಭಾರತದ ಸಂಸತ್ತು - Places Of Worship Act (Special Provisions)- 1991- ಕಾಯಿದೆಯನ್ನು ಜಾರಿ ಮಾಡಿತು. ಬಿಜೆಪಿಯನ್ನು ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳು ಒಕ್ಕೊರಲಿಂದ ಅದನ್ನು ಕಾಯಿದೆಯಾಗಿ ಅನುಮೋದಿಸಿದ್ದವು.

ಈ ಕಾಯಿದೆಯ ಸೆಕ್ಷನ್ ೪ ರ ಪ್ರಕಾರ:  

1) It is hereby declared that the religious character of a place of worship existing on the 15th day of August, 1947 shall continue to be the same as it existed on that day.

(ಎಲ್ಲಾ ಧಾರ್ಮಿಕ-ಉಪಾಸನಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ೧೯೪೭ರ ಆಗಸ್ಟ್ ೧೫ ರಂದು ಯಾವ ಸ್ವರೂಪದಲ್ಲಿತ್ತೋ ಅದೇ ಸ್ವರೂಪದಲ್ಲಿ ಉಳಿಸಿಕೊಳ್ಳಬೇಕು.)

ಇದೇ ಕಾಯಿದೆಯ ಸೆಕ್ಷನ್ ೪ ರ ಪ್ರಕಾರ

  1. Bar of conversion of places of worship.

 No person shall convert any place of worship of any religious denomination or any section thereof into a place of worship of a different section of the same religious denomination or of a different religious denomination or any section thereof

(ಧಾರ್ಮಿಕ ಶ್ರದ್ಧಾ ಕೇಂದ್ರಗಳ ಧಾರ್ಮಿಕ ಸ್ವರೂಪದ ಬದಲಾವಣೆಯ ನಿಷೇಧ: ಯಾವುದೇ ವ್ಯಕ್ತಿಯು ಯಾವುದೇ ಧಾರ್ಮಿಕ ಶ್ರದ್ಧ ಕೇಂದ್ರಗಳ ಧಾರ್ಮಿಕ ಸ್ವರೂಪವನ್ನು ಮತ್ತೊಂದು ಧಾರ್ಮಿಕ ಲಕ್ಷಣವುಳ್ಳ ಅಥವಾ ಅದೇ ಧರ್ಮದ ಮತ್ತೊಂದು ಭಿನ್ನ ಸ್ವರೂಪದ  ಶ್ರದ್ಧಾ ಕೇಂದ್ರವನ್ನಾಗಿ ಪರಿವರ್ತಿಸುವಂತಿಲ್ಲ)

ಸೆಕ್ಷನ್ ೬ ಅಂಥಾ ಧಾರ್ಮಿಕ ಸ್ಥಳಗಳ ಸ್ವರೂಪ ಪರಿವರ್ತನೆಗೆ ಶಿಕ್ಷೆಯನ್ನು ನಿಗದಿ ಮಾಡುತ್ತದೆ.

(1) Punishment for contravention of section 3. Whoever contravenes the provisions of section 3 shall be punishable with imprisonment for a term which may extend to three years and shall also be liable to fine.

(ಈ ಕಾಯಿದೆಯಲ್ಲಿ ಸ್ಪಷ್ಟೀಕರಿಸಲಾದ ಸೆಕ್ಷನ್ ೩ರ ಉಲ್ಲಂಘನೆಗೆ ಮೂರು ವರ್ಷಗಳಷ್ಟು ಜೈಲು ಶಿಕ್ಷೆ ಮತ್ತು ದಂಡವನ್ನು  ವಿಧಿಸಬಹುದಾಗಿದೆ.)

ಅಲ್ಲದೆ ಸೆಕ್ಷನ್ ೪ (೨)ರ ಪ್ರಕಾರ ಈ ಕಾಯಿದೆಯು ಜಾರಿಗೆ ಬಂದ ನಂತರ ಯಾವುದೇ ಕೋರ್ಟುಗಳಲ್ಲಿ ಇಂತಹ  ಧಾರ್ಮಿಕ ಸ್ವರೂಪ ಪರಿವರ್ತನೆಯ ವಿವಾದಗಳನ್ನು ಕೈಗೆತ್ತುಕೊಳ್ಳುವಂತಿಲ್ಲವೆಂತಲೂ, ಈಗಾಗಲೇ ಕೋರ್ಟುಗಳಲ್ಲಿ ಅಂತಹ ವಿವಾದವಿದ್ದಲ್ಲಿ ಅವು ಈ ಕಾಯಿದೆಯ ಆಶಯಗಳಿಗೆ ತಕ್ಕಂತೆ ನಿರ್ವಹಿಸತಕ್ಕದ್ದೆಂದು ಆದೇಶಿಸುತ್ತದೆ.

ಹಾಗೂ ಅಂದು ಇದ್ದ ಕೋಮುವಾದಿ-ಉನ್ಮತ್ತ ಸಂದರ್ಭವು ಹೊರಿಸಿದ್ದ ಒತ್ತಡಕ್ಕೆ ಮಣಿದು ಸಂಸತ್ತು ಈ ಕಾಯಿದೆಯು ರಾಮಜನ್ಮಭೂಮಿ- ಬಾಬ್ರಿ ಮಸೀದಿ- ವಿವಾದಕ್ಕೆ ಮಾತ್ರ ಅನ್ವಯವಾಗುವುದಿಲ್ಲವೆಂಬ ಸೆಕ್ಷನ್ ೫ ನ್ನು ಸೇರಿಸಿತ್ತು.

ಕಾಯಿದೆಯ ಪೂರ್ಣ ಪಾಠವನ್ನು ಈ ವೆಬ್ ಲಿಂಕಿನಲ್ಲಿ ಓದಬಹುದು : 

►►https://www.mha.gov.in/sites/default/files/PlaceWorshipAct1991_0.pdf

ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ  Places Of Worship Act (Special Provisions)- 1991" ಕಾಯಿದೆಯು ಹಿಂದುತ್ವವಾದಿಗಳು ಎಲ್ಲಾ ಹಿಂದುಯೇತರ ಪೂಜಾ ಸ್ಥಳಗಳನ್ನು "ವಿಮೋಚನೆ" ಮಾಡುವ ಹೆಸರಿನಲ್ಲಿ ಸಮಾಜವನ್ನು ಕೋಮುವಾದೀಕರಿಸುತ್ತಿರುವಾಗ  ಹಿಂದುತ್ವವಾದಿಗಳ ಆಕ್ರಮಣಕ್ಕೆ ಸ್ವಲ್ಪ ಮಟ್ಟದ ತಡೆಯನ್ನಾದರೂ ಒಡ್ಡುವ ಅವಕಾಶವನ್ನು ಹೊಂದಿತ್ತು.

ಕರ್ನಾಟಕದಲ್ಲಿ  ಬಾಬಾಬುಡನ್  ದರ್ಗಾದ ಕಾನೂನು ಹೋರಾಟವು ಸಹ ಪ್ರಧಾನವಾಗಿ ಈ ಕಾಯಿದೆಯನ್ನೇ ಆಧರಿಸಿದೆ. ಬನಾರಸ್ ನ ಗ್ಯಾನ್ ವ್ಯಾಪಿ ಮಸೀದಿಯಿಂದ ಹಿಡಿದು ನೂರಾರು ಹಿಂದುಯೇತರ ಪೂಜಾ ಕೇಂದ್ರಗಳ ಧಾರ್ಮಿಕ ಅಸ್ತಿತ್ವವು ಈ ಕಾನೂನನ್ನೇ ಆಧರಿಸಿಯೇ ರಕ್ಷಣೆಯನ್ನು ಪಡೆದುಕೊಂಡಿವೆ.

೧೯೯೧ರ ಕಾಯಿದೆ ಸಿಂಧು ಹಾಗೂ ಮಹತ್ವದ್ದು- ಸುಪ್ರೀಂ ಸಾಂವಿಧಾನಿಕ ಪೀಠ*

ವಾಸ್ತವವಾಗಿ ೨೦೧೯ರಲ್ಲಿ ಸುಪ್ರೀಂ ಕೋರ್ಟಿನ ಐದು ಜನ ನ್ಯಾಯಾಧೀಶರ ಪೀಠ ಯಾವುದೇ ಸಾಕ್ಷಿ -ಪುರಾವೆಗಳಿಲ್ಲದಿದ್ದರೂ ಬಾಬ್ರಿ ಮಸೀದಿ ಇದ್ದ ಸ್ಥಳವನ್ನು ರಾಮಮಂದಿರ ಕಟ್ಟಲು ಮಸೀದಿ ನಾಶ ಮಾಡಿದವರಿಗೇ ಕೊಟ್ಟು ಸಾಂವಿಧಾನಿಕ ಅಪಚಾರ ಹಾಗೂ ಚಾರಿತ್ರಿಕ ಅನ್ಯಾಯವನ್ನು  ಎಸಗಿತು.

ಆದರೂ ಅದು ತನ್ನ ತೀರ್ಪಿನಲ್ಲಿ Places Of Worship Act (Special Provisions)- 1991"  ಕಾಯಿದೆಯನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ. ಹಾಗೂ ಅದನ್ನು ಆಧರಿಸಿಯೇ ಬಾಬ್ರಿ ಮಸೀದಿಯ ನಾಶವನ್ನು ಹೀನಾಯ ಅಪರಾಧವೆಂದು ತನ್ನ ತೀರ್ಪಿನಲ್ಲಿ ಖಂಡಿಸಿದೆ.  

ಅಷ್ಟು ಮಾತ್ರವಲ್ಲ: ಐದು ನ್ಯಾಯಧೀಶರ ಆ ಸಾಂವಿಧಾನಿಕ ಪೀಠವು ಈ ಕಾಯಿದೆಯ ಸಿಂಧುತ್ವ ಹಾಗೂ ಮಹತ್ವವನ್ನು ಎತ್ತಿಹಿಡಿಯುತ್ತಾ :

 ಚಾರಿತ್ರಿಕ ಪ್ರಮಾದಗಳನ್ನು ಕಾನೂನನ್ನು ಕೈಗೆತ್ತಿಕೊಳ್ಳುವುದರಿಂದ ಪರಿಹರಿಸಲಾಗುವುದಿಲ್ಲ. ಸಾರ್ವಜನಿಕ ಪೂಜಾ ಸ್ಥಳಗಳ ಸ್ವರೂಪವನ್ನು ರಕ್ಷಿಸುವ ಈ ಕಾಯಿದೆಯನ್ನು  ಜಾರಿ ಮಾಡುವ ಮೂಲಕ ಇತಿಹಾಸ ಮತ್ತದರ ಪ್ರಮಾದಗಳನ್ನು ವರ್ತಮಾನ ಹಾಗೂ ಭವಿಷ್ಯವನ್ನು ದಮನಿಸುವ ಸಾಧನಗಳನ್ನಾಗಿ ಬಳಸಿಕೊಳ್ಳುವಂತಿಲ್ಲವೆಂದು ಸಂಸತ್ತು ಸ್ಪಷ್ಟಪಡಿಸಿದೆ

ಎಂದು ತೀರ್ಪಿನ ಪ್ಯಾರಾ ೮೩ರಲ್ಲಿ ಹೇಳಿದೆ.

೧೯೯೧ರ ಕಾಯಿದೆ- ಸಾಂವಿಧಾನಿಕ ಬದ್ಧತೆಯ ದ್ಯೋತಕ- ಸುಪ್ರೀಂ

ಅದೇ ತೀರ್ಪಿನ ಪ್ಯಾರಾ  ೮೨ರಲ್ಲಿ:

 Places Of Worship Act (Special Provisions)- 1991-ಕಾಯಿದೆಯು ಭಾರತದ ಸಂವಿಧಾನದ ಮೂಲಭೂತ ಮೌಲ್ಯಗಳನ್ನು ರಕ್ಷಿಸುತ್ತದೆ ಮತ್ತು ಎತ್ತಿಹಿಡಿಯುತ್ತದೆ

ಎಂದು ಸಾಂವಿಧಾನಿಕ ಪೀಠ ಸ್ಪಷ್ಟವಾಗಿ ಅಭಿಪ್ರಾಯ ಪಟ್ಟಿದೆ.

ಹಾಗೂ ತೀರ್ಪಿನ ಪುಟ ೧೨೪ರಲ್ಲಿ:

Places Of Worship Act (Special Provisions)- 1991 ಕಾಯಿದೆಯು ಒಂದು ಧರ್ಮನಿರಪೇಕ್ಷ ಪ್ರಭುತ್ವದ ಹೊಣೆಗಾರಿಕೆಯೊಂದಿಗೆ ಬೆಸೆದುಕೊಂಡಿದೆ. ಅದು ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ಭಾರತದ ಬದ್ಧತೆಯನ್ನು ಪ್ರತಿಫಲಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ಕಾಯಿದೆಯು, ಎಲ್ಲಾ ಧಾರ್ಮಿಕ ಶ್ರದ್ಧೆಗಳನ್ನು ಸಮಾನವಾಗಿ ಕಾಣುವುದನ್ನು ಒಂದು ಅತ್ಯಗತ್ಯ ಸಾಂವಿಧಾನಿಕ ಮೌಲ್ಯವಾಗಿ ರಕ್ಷಿಸಬೇಕೆಂಬ ಘನಗಂಭೀರ ಕರ್ತವ್ಯದ ಪಾಲನೆಯೂ ಆಗಿದೆ. ಈ ಮೌಲ್ಯವು ಭಾರತದ ಸಂವಿಧಾನದ ಮೂಲ ರಚನೆಯ ಭಾಗವೂ ಆಗಿದೆ. 

ಎಂದು ಅತ್ಯಂತ ಸ್ಪಷ್ಟವಾದ ಮಾತುಗಳಲ್ಲಿ Places Of Worship Act (Special Provisions)- 1991"  ಕಾಯಿದೆಯನ್ನು ಎತ್ತಿಹಿಡಿಯುತ್ತದೆ.

ಆಸಕ್ತರು ತೀರ್ಪನ್ನು  ಈ ವೆಬ್ ವಿಳಾಸದಲ್ಲಿ ಓದಬಹುದು :

►►https://main.sci.gov.in/supremecourt/2010/36350/36350_2010_1_1502_18205_Judgement_09-Nov-2019.pdf

ಈ ರೀತಿ  Places Of Worship Act (Special Provisions)- 1991 ಕಾಯಿದೆಯನ್ನು ಎತ್ತಿಹಿಡಿದ ಮತ್ತದರ ಸಾಂವಿಧಾನಿಕ ಮಹತ್ವವನ್ನು ಮನಗಾಣಿಸಿದ ಸರ್ವಸಮ್ಮತ ತೀರ್ಪನ್ನು ನೀಡಿದ ಸುಪ್ರೀಂ ಕೋರ್ಟಿನ ಐದು ಜನರ ಪೀಠದಲ್ಲಿ ಹಾಲಿ ಮುಖ್ಯ ನ್ಯಾಯಾಧೀಶರಾಗಿರುವ ಬೋಬ್ಡೆಯವರೂ ಇದ್ದರೆಂಬುದು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿರುವ ಸಂಗತಿ.

ಎಲುಬಿಲ್ಲ ಸಂಘೀ ನಾಲಗೆಗೆ- ಬೆನ್ನುಮೂಳೆಯಿಲ್ಲ ಸುಪ್ರೀಂ ಕೋರ್ಟಿಗೆ!

ರಾಮಮಂದಿರವೆಂಬುದು ಈ ದೇಶದ ರಾಷ್ಟ್ರ ನಿರ್ಮಾಣ ಹಾಗೂ ಬಹುಸಂಖ್ಯಾತರ ಶ್ರದ್ಧೆಗೆ ಸಂಬಂಧಿಸಿದ ವಿಷಯವೆಂದೂ, ಇದನ್ನು ಮುಸ್ಲಿಮರು ಅರ್ಥಮಾಡಿಕೊಂಡು ಸಹಕರಿಸಿದರೆ ಮುಂದೆ ಬೇರೆ ಯಾವ ಧಾರ್ಮಿಕ ಕೇಂದ್ರಗಳ ಬಗ್ಗೆಯೂ ವಿವಾದವಿರುವುದಿಲ್ಲವೆಂದು ಬಾಬ್ರಿ ಮಸೀದಿಯ ನಾಶದ ನಂತರ ಅರೆಸ್ಸೆಸ್‌ನ ಸರಸಂಘಚಾಲಕ ಭಾಗ್ವತ್ ಹಾಗೂ ಬಿಜೆಪಿ ಮುಖ್ಯಸ್ಥರು ಪ್ರಾರಂಭದ ದಿನಗಳಲ್ಲಿ ಭರವಸೆ ಕೊಟ್ಟಿದ್ದರು. ಆದರೆ ರಾಮಮಂದಿರದ ಭೂಮಿಪೂಜೆ ಮಾಡುವ ದಿನವೇ ಆರೆಸ್ಸೆಸ್ ಭಾಗವತರು ತಮ್ಮ ವರಸೆ ಬದಲಿಸಿದರು. ದೇಶದ ಜನರ ಅಭಿಲಾಶೆ ಹೇಗಿರುತ್ತದೋ ಅದೇ ರೀತಿ ಸಂಘದ ನಿಲುವೂ ಇರುತ್ತದೆಂದು ಸ್ಪಷ್ಟವಾಗಿ ಘೋಷಿಸಿದರು. ಆ ಮೂಲಕ ಭಾರತದ ಅಲ್ಪಸಂಖ್ಯಾತರಿಗೆ ಬರಲಿರುವ ದಿನಗಳ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಿದ್ದರು.

ಅದಾದ ಕೆಲವೇ ದಿನಗಳ ಮುಂಚೆ  "ವಿಶ್ವ ಭದ್ರ ಪೂಜಾರಿ ಪುರೋಹಿತ್ ಮಹಾಸಂಘ್ " ಎಂಬ ಸಂಸ್ಥೆಯು   Places Of Worship Act (Special Provisions)- 1991 ಕಾಯಿದೆಯನ್ನು ರದ್ದುಗೊಳಿಸಬೇಕೆಂದು ಕೋರಿ ಸುಪ್ರೀಂ ಕೋರ್ಟಿನಲ್ಲಿ  ಒಂದು ರಿಟ್ ಪೆಟಿಶನ್  (WP (Civil) 559/2020) ದಾಖಲಿಸಿತು.

ತನ್ನ ಅಹವಾಲಿನಲ್ಲಿ ಅದು ಸದರಿ ಕಾಯಿದೆಯು ಹಿಂದುಗಳ ಮೇಲೆ ಆಗಿರುವ ಚಾರಿತ್ರಿಕ ಅನ್ಯಾಯವನ್ನು ಮುಂದುವರೆಯುವಂತೆ ಮಾಡುತ್ತದೆಂದೂ, ಹಿಂದುಗಳ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಇನ್ನಿತರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಸಂವಿಧಾನದ ಆರ್ಟಿಕಲ್ ೩೨ ರಡಿ ಸುಪ್ರೀಂಕೋರ್ಟ ತನ್ನ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಸದರಿ ಕಾಯಿದೆಯನ್ನು ರದ್ದು ಮಾಡಬೇಕೆಂದು ಕೋರಿತ್ತು.  

ಆ ದಾವೆಯನ್ನು ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟು ಅದರ ಬಗ್ಗೆ ಇನ್ನೂ ಯಾವ ಕ್ರಮಗಳನ್ನೂ ತೆಗೆದುಕೊಂಡಿರಲಿಲ್ಲ.

ಆದರೆ ಮಾರ್ಚ್ ೧೨ ನೇ ತಾರೀಕು ಬಿಜೆಪಿಯ ಅಶ್ವಿನ್ ಕುಮಾರ್ ಉಪಾಧ್ಯ ಎಂಬುವರು Places Of Worship Act (Special Provisions)- 1991  ಕಾಯಿದೆಯ ಸೆಕ್ಷನ್ ೨,೩,೪, ಭಾರತೀಯ ಹಿಂದೂಗಳ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯಗಳಿಗೆ ಧಕ್ಕೆ ಉಂಟುಮಾಡುತ್ತದಾದ್ದರಿಂದ ಅದನ್ನು ರದ್ದುಗೊಳಿಸಬೇಕೆಂದು ಹಾಕಿದ್ದ ದಾವೆಯನ್ನು ಸುಪ್ರೀಮ್ ಕೋರ್ಟು ವಿಚಾರಣೆಗೆ ಕೈಗೆತ್ತಿಕೊಂಡಿದೆ!

ಮತ್ತು ಈ ದಾವೆಗೆ ಉತ್ತರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ನೊಟೀಸನ್ನು ಜಾರಿ ಮಾಡಿದೆ.

ಅಶ್ವಿನ್ ಕುಮಾರ್ ಉಪಾಧ್ಯ ಅವರು ತಮ್ಮ ದಾವೆಯಲ್ಲಿ:

ಭಾರತದ ಮೇಲೆ ಕ್ರಿ.ಶ. ೧೧೯೨-೧೯೪೭ರ ವರೆಗೆ ದಾಳಿ ಮಾಡಿದ ವಿದೇಶೀಯರು ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದ  ಪೂಜಾ ಹಾಗೂ ಯಾತ್ರ ಸ್ಥಳಗಳನ್ನು ಹಾನಿಗೊಳಿಸಿ, ನಾಶಮಾಡಿ,  ಅಪವತ್ರೀಕರಿಸಿದ್ದು ಮಾತ್ರವಲ್ಲದೆ ಅವನ್ನು ತಮ್ಮ ಸೈನಿಕ ಶಕ್ತಿಯ ಮೂಲಕ ಅಕ್ರಮಿಸಿದ್ದರು. ಹೀಗಾಗಿ   Places Of Worship Act (Special Provisions)- 1991  ಕಾಯಿದೆಯ ಕಲಂ ಗಳು ಭಾರತದ ಸಾಂಸ್ಕೃತಿಕ  ಹಾಗೂ ಧಾರ್ಮಿಕ ಪರಂಪರೆಗೆ ಧಕ್ಕೆಯುಂಟು ಮಾಡುತ್ತವೆ…

ಈ ಕಾಯಿದೆಯು ಅಯೋಧ್ಯೆಯ ರಾಮಮಂದಿರ ವಿವಾದವನ್ನು ವ್ಯಾಪ್ತಿಯಿಂದ ಹೊರಗಿಡುತ್ತದೆ. ಆದರೆ ರಾಮನಂತೆ ವಿಷ್ಣುವಿನ ಅವತಾರವೇ ಆಗಿರುವ ಕೃಷ್ಣನ ಜನ್ಮಸ್ಥಾನದ ವಿಮೋಚನೆಗೂ ಹಿಂದೂಗಳು ಹೋರಾಡುತ್ತಿದ್ದಾರೆ. ಅದನ್ನೇಕೆ ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಟ್ಟಿಲ್ಲ?…

ಅಲ್ಲದೆ, ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರ ಹಲವಾರು ಪವಿತ್ರಸ್ಥಳಗಳು ೧೯೪೭ಕ್ಕೆ ಮುಂಚೆ ಪರಕೀಯರ ವಶವಾಗಿವೆ. ..ಆದ್ದರಿಂದ ಅವುಗಳೆಲ್ಲದರ ಹಕ್ಕುದಾರಿಕೆಯನ್ನು ಕೇಳುವುದು ಹಿಂದು, ಜೈನ್, ಬೌದ್ಧ ಹಾಗೂ ಸಿಕ್ಕರ ಮೂಲಭೂತ ಹಕ್ಕಾಗಿದ್ದು, Places Of Worship Act (Special Provisions)- 1991  ಕಾಯಿದೆಯು ಆ ಹಕ್ಕನ್ನು ಮೊಟಕುಗೊಳಿಸುತ್ತದೆ. ಆದ್ದರಿಂದ ಸದರಿ ಕಾಯಿದೆಯನ್ನು ರದ್ದುಗೊಳಿಸಬೇಕು ಎಂದು ವಾದಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ: 

►►https://images.assettype.com/barandbench/2021-03/7a5fcc9f-51fd-40a9-a59e-fe227b57591c/Places_of_Worship_Act_Petition.pdf

ಅಂದರೆ, ಸುಪ್ರೀಂ ಕೋರ್ಟು ಯಾವ ದೀರ್ಘಕಾಲೀನ ಶಾಂತಿಯ ನೆಪ ಹೇಳಿ ಬಾಬ್ರಿ ಮಸೀದಿ ನಾಶಕ್ಕೆ ಶಿಕ್ಷೆ ಕೊಡದೆ ಖಾಜಿ ನ್ಯಾಯ ಮಾಡಿ ರಾಮಮಂದಿರ ನಿರ್ಮಾಣಕ್ಕೆ ಅನ್ಯಾಯಯುತವಾಗಿ ಅವಕಾಶ ಕೊಟ್ಟಿತೋ, ಅದನ್ನೇ ಇಂದು ಸಂಘಿಗಳು ತಮ್ಮ ಮುಂದಿನ ಕೋಮುಧ್ರುವೀಕರಣ ರಾಜಕಾರಣಕ್ಕೆ ಸಾಧನವ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಅರೆಸ್ಸೆಸ್ಸು ತನ್ನ ಈ ಹೋರಾಟ ರಾಮಮಂದಿರಕ್ಕೆ ಮಾತ್ರ ಸೀಮಿತ ಎಂಬ ತನ್ನ ಹುಸಿ ಭರವಸೆಯನ್ನು ರಾಜಾರೋಷವಾಗಿ ಬದಲಿಸಿಕೊಳ್ಳುತ್ತಿದ್ದಂತೆ ಅದರ ಅಂಗಸಂಸ್ಥೆಗಳು ಕೋರ್ಟುಗಳನ್ನೇ ತಮ್ಮ ಮುಂದಿನ ರಕ್ತರಾಜಕಾರಣದ ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಿವೆ.

ಆದರೆ ಅತ್ಯಂತ ಆಘಾತಕಾರಿ ವಿಷಯವೆಂದರೆ ಆರೆಸ್ಸೆಸ್ ತನ್ನ ಬಹಿರಂಗ ನಿಲುವನ್ನು ಬದಲಿಸಿಕೊಳ್ಳುತ್ತಿದ್ದಂತೆ ಸುಪ್ರೀಂ ಕೋರ್ಟೂ ಕೂಡಾ ತನ್ನ ನಿಲುವನ್ನು ಸಡಿಲಗೊಳಿಸಿಕೊಳ್ಳುತ್ತಿರುವುದು!

ಏಕೆಂದರೆ, ಅಯೋಧ್ಯೆ ತೀರ್ಪಿನಲ್ಲಿ ಸುಪ್ರೀಂಕೋರ್ಟಿನ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠವು     Places Of Worship Act (Special Provisions)- 1991    ಕಾಯಿದೆಯ ಮಹತ್ವ, ಸಿಂಧುತ್ವ ಹಾಗೂ ಹೇಗೆ ಅದು ಭಾರತದ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಿಕೊಳ್ಳಲು ಅತ್ಯಗತ್ಯ ಎಂದು ಸ್ಪಷ್ಟವಾಗಿ ಆದೇಶಿಸಿರುವುದನ್ನು ಮೇಲೆ ಗಮನಿಸಿದ್ದೇವೆ.

ಆ ಅದೇಶ ಕೊಟ್ಟ ಐವರು ನ್ಯಾಯಾಧೀಶರಲ್ಲಿ ಹಾಲಿ ಮುಖ್ಯ ನ್ಯಾಯಾಧೀಶ ಬೋಬ್ಡೆಯವರೂ ಒಬ್ಬರು.

ಆದರೆ, ಅಶ್ವಿನ್ ಕುಮಾರ್ ಅವರು ತಮ್ಮ ಅಹವಾಲಿನಲ್ಲಿ ಸಾಂವಿಧಾನಿಕ ಪೀಠದ ಎಲ್ಲಾ ಆದೇಶಗಳನ್ನೂ ಅವಗಣನೆ ಮಾಡಿದ್ದಾರೆ. ಆದರೂ ಸುಪ್ರೀಮ್ ಕೋರ್ಟಿನ ದ್ವಿಸದಸ್ಯ ಪೀಠ ಆ ಅಹವಾಲನ್ನು ವಿಚಾರಣೆಗೆ ಸಮ್ಮತಿಸಿ ಉತ್ತರಿಸಲು ಇದೇ ಸರ್ಕಾರಕ್ಕೆ ನೊಟೀಸ್ ನೀಡುತ್ತದೆ.

ವಿಪರ್ಯಾಸದ ಸಂಗತಿಯೆಂದರೆ, ಈ ಆಘಾತಕಾರಿ ಕ್ರಮವನ್ನು ಕೈಗೊಂಡಿರುವ ದ್ವಿಸದಸ್ಯ ಪೀಠದಲ್ಲಿ ಬೋಬ್ಡೆಯವರೇ ಲೀಡಿಂಗ್ ನ್ಯಾಯಾಧೀಶರು!!

ಫ್ಯಾಸಿಸಂ ಆವರಿಸಿಕೊಳ್ಳುತ್ತಿರುವಾಗ ಚುನಾವಣೆಗಳು, ಸಂಸತ್ತು, ಕೋರ್ಟುಗಳು ಸಂವಿಧಾನವನ್ನು ಹಾಗೂ ಪ್ರಜಾತಂತ್ರವನ್ನು ರಕ್ಷಿಸಲಾರವು ಎಂಬುದಕ್ಕೆ ಇನ್ನೂ ಎಷ್ಟು ಪುರಾವೆ ಬೇಕು?

(ಶಿವಸುಂದರ್)

ಕೃಪೆ: ವಾರ್ತಾಭಾರತಿ

Advertisement
Advertisement
Recent Posts
Advertisement