ವಿಶ್ವಕಂಡ ಅಪ್ರತಿಮ ಆರ್ಥಿಕ ತಜ್ಞ ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ನೆನಪಿಗೆ ಅರ್ಥಪೂರ್ಣವಾದ ಸ್ಮಾರಕರೂಪದಲ್ಲಿ ಯೋಜನೆಯೊಂದನ್ನು ರೂಪಿಸಬೇಕೆಂಬ ಸಿದ್ದರಾಮಯ್ಯ ಸರ್ಕಾರದ ಕನಸು ನನಸಾಗಿ ರೂಪುಗೊಂಡದ್ದು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್.
ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್ ಸ್ಥಾಪನೆಗೆ 2017ರಲ್ಲಿಯೇ 43.45 ಎಕರೆ ಜಮೀನು ಮತ್ತು ಹೊಸ ಕಟ್ಟಡ ಸಹಿತ ಮೂಲಸೌಕರ್ಯ ನಿರ್ಮಾಣಕ್ಕೆ 350 ಕೋಟಿ ರೂಪಾಯಿ ಮಂಜೂರು ಮಾಡಿದ್ದ ಸಿದ್ದರಾಮಯ್ಯ ಸರ್ಕಾರ ಅತ್ಯಂತ ಬದ್ಧತೆಯಿಂದ ಈ ಯೋಜನೆಯನ್ನು ಸಾಕಾರಗೊಳಿಸಿತ್ತು.
ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ಈ ಕಟ್ಟಡವನ್ನು ಕೇವಲ ಆರು ತಿಂಗಳಲ್ಲಿ ಸಂಪೂರ್ಣಗೊಳಿಸಿದ್ದು ಸಿದ್ದರಾಮಯ್ಯ ಸರ್ಕಾರದ ಹೆಮ್ಮೆಯ ಸಾಧನೆಯಾಗಿದೆ. ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಇದ್ದ ಕಟ್ಟಡದಲ್ಲಿಯೇ 2017ರ ಜೂನ್ ನಲ್ಲಿ B.Sc(Honours) Economics ತರಗತಿಗಳು ಕೂಡ ಪ್ರಾರಂಭವಾಗಿತ್ತು.
ಇದೀಗ ಪ್ರಧಾನಿ ನರೇಂದ್ರ ಮೋದಿವರು ಇಂದು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್ (BASE)ನ ನೂತನ ಆವರಣವನ್ನು ಮತ್ತೊಮ್ಮೆ ಉದ್ಘಾಟಿಸುತ್ತಿದ್ದಾರೆ.
ಈ ಸಂಧರ್ಭದಲ್ಲಿ BASE ನ ವೆಬ್ಸೈಟ್ನಲ್ಲಿ ಈ ಹಿಂದೆ ಅಪ್ಲೋಡ್ ಮಾಡಲಾಗಿದ್ದ ಮನಮೋಹನ್ ಸಿಂಗ್ ರವರು ಉದ್ಘಾಟಿಸಿದ್ದ ಚಿತ್ರ ಮತ್ತು ವಿವರಗಳನ್ನು ಅಳಿಸಿ ಹಾಕಲಾಗಿದೆ. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಆದರೆ, ಈ ಹಿಂದೆ ಒಮ್ಮೆ ಉದ್ಘಾಟನೆ ಆಗಿರುವ ಫೋಟೋ ಸಮೇತ ವಿವರಗಳನ್ನು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ.