Advertisement

ರಾಜ್ಯದ ಲಂಚ- ಮಂಚದ ದ ಸರ್ಕಾರ ಕಾಮುಕ, ಭ್ರಷ್ಟ ಸಚಿವರ ರಾಜೀನಾಮೆ ಪಡೆದು ಜನರ ಬಳಿ ಕ್ಷಮೆ ಕೇಳಲು ಸಿದ್ದವಿದೆಯೇ: ಪ್ರಿಯಾಂಕ್ ಖರ್ಗೆ ಪ್ರಶ್ನೆ

Advertisement

"ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ಹಗರಣಗಳು ದಿನಂಪ್ರತಿ ಬೆಳಕಿಗೆ ಬರುತ್ತಲೇ ಇವೆ. ಇದು ಈ ಸರ್ಕಾರದ ಭ್ರಷ್ಟಾಚಾರದ ವಿರಾಟ್ ರೂಪ ಹಾಗೂ ಲಂಚಕೋರ ಆಡಳಿತಕ್ಕೆ ಹಿಡಿದ ಕೈಗನ್ನಡಿ. ವಿಶೇಷವಾಗಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ರಾಜ್ಯದ ಸಾವಿರಾರು ಯುವಕರ ಕಣ್ಣಲ್ಲಿ ನೀರು ತರಿಸುತ್ತಿದೆ" ಎಂದು ಕೆಪಿಸಿಸಿ ಐ.ಟಿ ಸೆಲ್ ಅಧ್ಯಕ್ಷ, ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

"ಇತ್ತೀಚಿಗೆ ನಡೆದ KPTCL ಪರೀಕ್ಷೆಯಲ್ಲಿ ಆಗಿರುವ ಅಕ್ರಮಕ್ಕೆ ಯಾವುದೇ ಶಿಕ್ಷೆ ನೀಡಿದರೂ ಕಮ್ಮಿಯೇ. ಸರ್ಕಾರಿ ಕೆಲಸ ಒಂದಿಡೀ ಕುಟುಂಬವನ್ನೇ ಬಡತನದಿಂದ ಮೇಲೆತ್ತುವ, ಸುಭದ್ರ ಭವಿಷ್ಯ ಕಟ್ಟಿಕೊಡುವ ಅವಕಾಶ. ಲಂಚ ಪಡೆದು ಪರೀಕ್ಷೆಯಲ್ಲಿ ಅಕ್ರಮವಾಗಿ ಉತ್ತೀರ್ಣರಾಗುವ ಮೂಲಕ ವ್ಯವಸ್ಥಿತವಾಗಿ ಬಡವರ್ಗದ ಹಾಗೂ ಯೋಗ್ಯ ಯುವ ಜನರ ಕೈಯಿಂದ ಆ ಅವಕಾಶವನ್ನು ಕಿತ್ತುಕೊಳ್ಳುವುದನ್ನು ಈ ಭ್ರಷ್ಟ ಬಿಜೆಪಿ ಸರ್ಕಾರ ಸಕ್ರಮಗೊಳಿಸಿಬಿಟ್ಟಿದೆ. ಇದನ್ನು ವಿರೋಧಿಸಿ ನಾನು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಈ ಸರ್ಕಾರವನ್ನು ಲಂಚ-ಮಂಚದ ಸರ್ಕಾರವೆಂದು ಕರೆದಿದ್ದೆ. ತನ್ನ ಅಕ್ರಮಗಳನ್ನು ಮುಚ್ಚಿಕೊಳ್ಳಲು, ತನ್ನ ಭ್ರಷ್ಟ ರೂಪವನ್ನು ರಕ್ಷಿಸಿಕೊಳ್ಳಲು, ಹಾಗೂ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳಲು ನನ್ನ ಹೇಳಿಕೆಯನ್ನು ಅವರ ಅನುಕೂಲಕ್ಕೆ ತಕ್ಕಂತೆ ತಿರುಚಿ KPTCL ಅಕ್ರಮವನ್ನು ಈ ಮೂಲಕ ಮುಚ್ಚಿ ಹಾಕಲು ಬಿಜೆಪಿ ಹೊರಟು ನಿಂತಿದೆ" ಎಂದವರು ಹೇಳಿದರು.

- ಕೆಲಸಕ್ಕಾಗಿ ಬಂದ ಯುವತಿಯನ್ನು ಈ ಸರ್ಕಾರದ ಮಂತ್ರಿ ಮೋಸ ಮಾಡಿ, ಸಿಕ್ಕಿ ಬಿದ್ದು ರಾಜೀನಾಮೆ ನೀಡಬೇಕಾಯಿತು. ಆದರೆ ಅವರು ರಾಜ್ಯದ ಜನರ ಕ್ಷಮೆ ಕೋರುವಂತೆ ಬಿಜೆಪಿಯ ಯಾರೊಬ್ಬರೂ ಆಗ್ರಹಿಸಲಿಲ್ಲ!

- ಕೇಂದ್ರ ಮಂತ್ರಿಯೊಬ್ಬರು ಅಶ್ಲೀಲವಾಗಿ ಪರಸ್ತ್ರೀಯೊಬ್ಬರೊಂದಿಗೆ ನಡೆಸಿದ್ದ ವಿಡಿಯೋ ವೈರಲ್ ಆದಾಗ ಹೆಣ್ಣನ್ನು ತೃಣವಾಗಿ ಕಂಡಿದ್ದ ಅವರ ಬಳಿ ಬಿಜೆಪಿಯ ಯಾರೊಬ್ಬರೂ ಕ್ಷಮೆಗೆ ಆಗ್ರಹಿಸಲಿಲ್ಲ.

- ಸದನದಲ್ಲಿ ಕೂತು ಪಾರ್ನ್ ವೀಕ್ಷಿಸಿ ಇಡೀ ರಾಜ್ಯದ ಹೆಣ್ಣು ಕುಲಕ್ಕೆ ಅಪಮಾನ ಮಾಡಿದವರ ಬಳಿ ಕ್ಷಮೆಗೆ ಆಗ್ರಹಿಸಲಿಲ್ಲ, ಬದಲಾಗಿ ಮತ್ತೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದರು, ಸೋತವರನ್ನ MLC ಮಾಡಿ DCM ಮಾಡಿದ್ದು ಇದೇ BJP ಪಕ್ಷ.

- “ಈ ರಾಜ್ಯದ ಯಾವ ಶಾಸಕ ಏಕ ಪತ್ನಿವೃತಸ್ಥ?" ಎಂಬ ಇದೇ ಸರ್ಕಾರದ ಸಚಿವರೊಬ್ಬರ ಪ್ರಶ್ನೆ, ಬಿಜೆಪಿಗೆ ಈ ನಾಡಿನ ಹೆಣ್ಣು ಮಕ್ಕಳಿಗಾದ ಅವಮಾನದಂತೆ ಕಂಡುಬರಲಿಲ್ಲ

- ಈ ನಾಡಿನ ಹೆಣ್ಣು ಮಕ್ಕಳು ಕೆಲಸಕ್ಕಾಗಿ ಹೋದಾಗ ಅಶ್ಲೀಲವಾಗಿ ವರ್ತಿಸಿದ ಬಿಜೆಪಿಯ ಇಬ್ಬರು ಸಂಸದರು “ಮೀ- ಟೂ” ಪ್ರಕರಣದಲ್ಲಿ ಸಿಕ್ಕಿ ಬಿದ್ದಾಗ, ಮತದಾರರ ಬಳಿ ಅವರು ಕ್ಷಮೆಕೋರುವಂತೆ ಬಿಜೆಪಿ ಆಗ್ರಹಿಸಲಿಲ್ಲ.

- ಈ ರಾಜ್ಯದ ಸಚಿವ ಸಂಪುಟದ ಸಚಿವರ “ಮಂಚದ ವಿಚಾರ”ಕ್ಕೆ ಹೆದರಿ ಹೈಕೋರ್ಟ್ ನಿಂದ "ತಡೆಯಾಜ್ಞೆ" ತಂದಾಗ ಬಿಜೆಪಿ ಇವರ‌್ಯಾರ ಬಳಿಯೂ ಕ್ಷಮೆ ಕೋರುವಂತೆ ಆಗ್ರಹಿಸಲಿಲ್ಲ.

- ಈ ಸರ್ಕಾರದ ಅನಿಷ್ಟ ಆಡಳಿತಕ್ಕೆ ಇವರ ಕಾರ್ಯಕರ್ತರೇ 'ಜನಾಕ್ರೋಶ' ರೂಪಿಸಿ ಇವರ 'ಜನೋತ್ಸವ'ಕ್ಕೆ ಬ್ರೇಕ್ ಹಾಕಿದ್ದಾರೆ. ಇನ್ನು ಈಗಷ್ಟೆ ಬಿಜೆಪಿ ಸರ್ಕಾರದ ಮಂತ್ರಿಯೊಬ್ಬರು “ಬಿಜೆಪಿ ಸರ್ಕಾರ ಆಡಳಿತ ಮಾಡುತ್ತಿಲ್ಲ, ಬದಲಿಗೆ ಮ್ಯಾನೇಜ್ಮೆಂಟ್ ನಡೆಸುತ್ತಿದ್ದೇವೆ” ಎಂದು ಮಾತನಾಡಿರುವ ಆಡಿಯೋ ವೈರೆಲ್ ಆಗುತ್ತಿದೆ.

- ಈ ಸರ್ಕಾರದಲ್ಲಿ ಅವಧಿಯಲ್ಲಿ ಆಗಿರುವ ಹಾಗೂ ಈಗಲೂ ಘಟಿಸುತ್ತಿರುವ ''ಮಂಚ- ಲಂಚ''ದ ಪ್ರಕರಣಗಳಿಗೆ ಕನ್ನಡಿಯಾಗಿ ಮಾತನಾಡುವುದು ವಿರೋಧ ಪಕ್ಷವಾಗಿ ನಮ್ಮ ಆದ್ಯ ಕರ್ತವ್ಯ. ಆ ಕೆಲಸವನ್ನು ಇಂದು ನಾವು ಸರಿಯಾಗಿ ನಿರ್ವಹಿಸುತ್ತಿರುವದರಿಂದಲೇ ಬಿಜೆಪಿ ನಾಯಕರು ಇಂದು ವಿಚಲಿತರಾಗಿ ಹೇಳಿಕೆ ನೀಡುತ್ತಿದ್ದಾರೆ.

- ನಮ್ಮ ಇಡೀ ಜೀವನ ಬಾಬಾಸಾಹೇಬರ ಆದರ್ಶಗಳ ಹಾದಿಯಲ್ಲಿ ಸಾಗಿದ್ದೇವೆ. ನಾಡಿನ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಲ್ಲಿ ಅವಮಾನವಾಗುವ ರೀತಿಯಲ್ಲಿ ಅರ್ಥೈಸಿ ನಾನು ಎಲ್ಲಿಯೂ ಮಾತನಾಡಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ, ನಾನು ಕ್ಷಮೆ ಕೇಳಲು ಸದಾ ಸಿದ್ದನಿದ್ದೇನೆ. ಆದರೆ ಬಿಜೆಪಿ, ಹೆಣ್ಣುಮಕ್ಕಳಿಗೆ ನಿಜವಾಗಿ ಅನ್ಯಾಯ ಮಾಡಿರುವ ತನ್ನೆಲ್ಲಾ ನಾಯಕರ ಬಳಿ ರಾಜೀನಾಮೆ ಪಡೆದು ರಾಜ್ಯದ ಮಹಿಳಾ ಸಮುದಾಯಕ್ಕೆ ಎಸಗಿದ ಅಪಮಾನ, ಅವಮಾನಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಕೆಲಸ ಮಾಡಲಿದೆಯಾ? ಇದಕ್ಕೆ ಸಕಾರಾತ್ಮಕ ರೀತಿಯಲ್ಲಿ ಬಿಜೆಪಿಯಿಂದ ಉತ್ತರವನ್ನು ನಿರೀಕ್ಷಿಸಬಹುದೇ? ಎಂದವರು ಪ್ರಶ್ನಿಸಿದ್ದಾರೆ.

Advertisement
Advertisement
Recent Posts
Advertisement