Advertisement

ಈ ನೆಲದ ಮೂಲನಿವಾಸಿ, ದ್ರಾವಿಡ ಕುಲದ ಶ್ರೀಕೃಷ್ಣನು ಮಹಾಭಾರತ ಯುದ್ಧವನ್ನು ಹೆಣೆದು "ವಲಸಿಗ ಆರ್ಯರ ಪ್ರಭುತ್ವ"ವನ್ನು ಕ್ಷೀಣಗೊಳಿಸಿ "ದ್ರಾವಿಡರ ಪ್ರಭುತ್ವ"ಕ್ಕೆ ಮರುಹುಟ್ಟು ನೀಡಿದನೇ?

Advertisement

|ನಿಜ, ಈ ಲೇಖನ ಓದಿದಾಗ ಈ ನೆಲದ ಮೂಲನಿವಾಸಿಗಳಾದ ದ್ರಾವಿಡ ಕುಲದಲ್ಲಿ ಜನಿಸಿದ ಶ್ರೀಕೃಷ್ಣನು ಬಹುಉಪಾಯದಿಂದ ಮಹಾಭಾರತ ಯುದ್ಧವನ್ನು ಹೆಣೆದು ವಲಸಿಗ "ಆರ್ಯರ ಪ್ರಭುತ್ವ"ವನ್ನು ಕ್ಷೀಣಗೊಳಿಸಿ "ದ್ರಾವಿಡರ ಪ್ರಭುತ್ವ"ಕ್ಕೆ ಮರುಹುಟ್ಟು ನೀಡಿದನೇ? ಎಂದೆನಿಸದೇ ಇರದು.

|ಇದೀಗ ಈ ದೇಶದಲ್ಲಿ ಮತ್ತೆ "ಆರ್ಯ ಪ್ರಭುತ್ವ" ನೆಲೆಗೊಳ್ಳುವ ನಿಟ್ಟಿನಲ್ಲಿ ಅದು ಮೇಲುಗೈ ಸಾಧಿಸಿದೆ. ಈ ಹೊತ್ತಿನಲ್ಲಿ ದೇಶದ ಪ್ರಜ್ಞಾವಂತ ಮೂಲನಿವಾಸಿಗಳಾದ ದ್ರಾವಿಡರಿಂದ "ವಲಸಿಗ ಆರ್ಯರೇ ದೇಶ ಬಿಟ್ಟು ತೊಲಗಿ" ಎಂಬಂತಹ ಸಣ್ಣದೊಂದು ಕೂಗು ಕೂಡ ಆರಂಭಗೊಂಡಿದೆ. ಈ ಸಮಯದಲ್ಲಿ ಈ ಮೇಲಿನ ಲೇಖನ ಪ್ರಸ್ತುತ ಅನ್ನಿಸುತ್ತದೆ.

|ಮುಂಗಾರು ಪತ್ರಿಕೆಯ ಸಂಪಾದಕ, ಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿ ಯವರು ಬರೆದಿರುವ ಕೃಷ್ಣನ ಕುರಿತಾದ ಮಾಹಿತಿಪೂರ್ಣವಾದ, ವಿಭಿನ್ನ ಬಗೆಯಲ್ಲಿ ಕೃಷ್ಣನನ್ನು ವಿಶ್ಲೇಷಿಸುವ ಈ ಲೇಖನ ಕೃಷ್ಣ ಜನ್ಮಾಷ್ಟಮಿಯ ಸಂಧರ್ಭದಲ್ಲಿ ನಮ್ಮ ಓದುಗರ ಮರು ಓದಿಗಾಗಿ ಇಲ್ಲಿ ಪ್ರಕಟಿಸಲಾಗಿದೆ. ವಡ್ಡರ್ಸೆಯವರ ಸಂಪಾದಕೀಯ ಮತ್ತಿತರ ಬರಹಗಳ ಸಂಕಲನ "ಬೇರೆಯೆ ಮಾತು" ಪುಸ್ತಕದಿಂದ ಈ ಲೇಖನವನ್ನು ಆಯ್ದುಕೊಳ್ಳಲಾಗಿದೆ. ವಡ್ಡರ್ಸೆಯವರ ಲೇಖನಗಳನ್ನು ಆ ತಲೆಮಾರಿನಿಂದ ಈ ತಲೆಮಾರಿನವರೆಗೂ ಜತನವಾಗಿ ಕಾಯ್ದಿಟ್ಟು, ಮುದ್ರಣಕ್ಕೆ ಸಜ್ಜುಗೊಳಿಸಿದವರು ವಡ್ಟರ್ಸೆಯವರ ಶಿಷ್ಯ ಈ ಕಾಲದ ಖ್ಯಾತ ಪತ್ರಕರ್ತ, ಮನುವಾದಿಗಳ ಪಾಲಿಗೆ ಸಿಂಹಸ್ವಪ್ನರಾಗಿರುವ ದಿನೇಶ್ ಅಮಿನ್ ಮಟ್ಟು ರವರು.

|ಪುಸ್ತಕ ಪ್ರಕಟಣೆ: ಅಹರ್ನಿಶಿ ಪ್ರಕಾಶನ. "ಬೇರೆಯೆ ಮಾತು" ಪುಸ್ತಕಗಳಿಗಾಗಿ ಮೊಬೈಲ್ ನಂಬ್ರ: 9449174662 ಇವರನ್ನು ಸಂಪರ್ಕಿಸಬಹುದಾಗಿದೆ.

ಅಗತ್ಯವಾಗಿ ಇಡೀ ಲೇಖನ ಓದಿ.

•ವರ್ಣಸಂಕರದ ಹರಿಕಾರ "ಕೃಷ್ಣ"•

ಭಾರತೀಯ ಪುರಾಣದ ಪ್ರಸಿದ್ಧ ಪುರುಷರಲ್ಲೊಬ್ಬನಾದ ಕೃಷ್ಣನ ಹುಟ್ಟುಹಬ್ಬ ಇಂದು. ದೇವಾದಿ ದೇವನೆಂದು ವೈಭವೀಕರಿಸಲ್ಪಟ್ಟ ಈ ಗೊಲ್ಲರ ಕೃಷ್ಣ ನಾನು ಬಹುವಾಗಿ ಮೆಚ್ಚಿದ ಒಂದು `ವ್ಯಕ್ತಿಚಿತ್ರ'.
ಕೃಷ್ಣನನ್ನು ನಾನು ಒಂದು `ವ್ಯಕ್ತಿಚಿತ್ರ'ವೆಂದು ಗುರುತಿಸಲು ಕಾರಣವೆಂದರೆ ಪುರಾಣದಲ್ಲಿ ಕಾಣುವ ಈ ವರ್ಣಮಯ ವ್ಯಕ್ತಿಯ ಜೀವನ-ಸಾಧನೆಗಳ ಬಗ್ಗೆ ನಮ್ಮ ಮುಂದೆ ಯಾವದೇ ಐತಿಹಾಸಿಕ ದಾಖಲೆಗಳಿಲ್ಲ. ಮಹಾಭಾರತ ಕಾವ್ಯದಲ್ಲಿ ನಮಗೆ ಕೃಷ್ಣನ ಪರಿಚಯವಾಗುತ್ತದೆ. ಕೃಷ್ಣನು ಯುದ್ಧಭೂಮಿಯಲ್ಲಿ ಅರ್ಜುನನಿಗೆ ಉಪದೇಶಿಸಿದನೆನ್ನಲಾದ ಗೀತೆಯಲ್ಲಿ ಕೃಷ್ಣನದೆನ್ನುವ ವ್ಯಕ್ತಿಚಿತ್ರ ಸಿಗುತ್ತದೆ. ಆತನ ಸುತ್ತಮುತ್ತ ಹೆಣೆದ ದಂತಕತೆಗಳ ಸುರುಳಿ ಸಹಸ್ರ ಸಹಸ್ರ ವರ್ಷಗಳಿಂದ ಉರುಳಿ ಬಂದಿದೆ.

ಕೃಷ್ಣನು ಕೇವಲ ಕಾವ್ಯ ವಸ್ತುವಾಗಿ ಚಿತ್ರಿತನಾದ ಪುರಾಣ ಪುರುಷನೇ? ಅಥವಾ ಇತಿಹಾಸದ ಗತಿಯನ್ನು ಬದಲಿಸಿದ ಇತಿಹಾಸ ಪುರುಷನೇ? -ಎಂಬುದು ನನಗೀಗ ಅಪ್ರಸ್ತುತ. ಆದರೂ ಈ ಜಗತ್ತಿನ ಎಲ್ಲ ಮಾನವ ಜನಾಂಗಗಳೂ ತಮ್ಮ ಬದುಕಿಗೆ ಬೆಳಕು ಬೀರಿದ ಉತ್ತಮರನ್ನು ಆರಾಧಿಸಿಕೊಂಡು ಬಂದಿವೆ. ಕೃಷ್ಣನೂ ಕೂಡಾ ಈ ಭಾರತ ದೇಶದಲ್ಲಿ ಅಂತಹ ಆರಾಧ್ಯ ವ್ಯಕ್ತಿಯಾಗಿ ಬದುಕಿರಬಹುದು. ಅದಕ್ಕಾಗಿಯೇ ಭಾರತೀಯರು ಆತನನ್ನು ದೈವತ್ವಕ್ಕೆ ಏರಿಸಿ ಆರಾಧಿಸುತ್ತಿರಬೇಕೆಂದು ಭಾವಿಸಬೇಕಾಗುತ್ತದೆ. ಇದೇ ಕಾರಣಕ್ಕಾಗಿ ಕೃಷ್ಣನು ಹುಟ್ಟಿದನೆನ್ನಲಾದ ಅಷ್ಟಮಿಯ ದಿನ ಪವಿತ್ರ ದಿನವಾಗಿ ಆಚರಿಸಲ್ಪಡುತ್ತಿರಬೇಕು.

ಕೃಷ್ಣನ ವ್ಯಕ್ತಿತ್ವಕ್ಕೆ ಪುರಾಣಗಳಲ್ಲಿ ಲೇಪಿಸಿರುವ ದೈವತ್ವವನ್ನು ಗುರುತಿಸುವುದಾಗಲೀ ಚರ್ಚಿಸುವುದಾಗಲೀ ನನ್ನ ಉದ್ದೇಶವಲ್ಲ. ಈ ಜಗತ್ತಿನ ಮಹಾಕಾವ್ಯಗಳ ಸಾಲಿನಲ್ಲಿ ನಿಸ್ಸಂದೇಹವಾಗಿ ಒಂದು ಅದ್ಭುತ ಕಥನ ಎನ್ನಬಹುದಾದ `ಮಹಾ ಭಾರತ'ದ ಸೂತ್ರಧಾರಿ ಕೃಷ್ಣ ಎಂಬುದು ನನ್ನ ಮನಸ್ಸಿಗೆ ಅಂಟಿದ ಮೊದಲ ವಿಚಾರ. ಈ ಮಹಾಕಾವ್ಯದಲ್ಲಿ ಬರುವ ಕೃಷ್ಣನ ಪಾತ್ರವನ್ನು ನಾನು ಬಹಳವಾಗಿ ಮೆಚ್ಚಿದವನು. ನಾನು ಚಿಕ್ಕವನಿದ್ದಾಗ ಮಳೆಗಾಲದ ಶ್ರಾವಣ ಮಾಸದಲ್ಲಿ ನಡೆವ ಮಹಾಭಾರತ ಕಾವ್ಯವಾಚನ ಮತ್ತದರ ಅರ್ಥವಿವರಣೆಯನ್ನು ಕೇಳುತ್ತಿದ್ದೆ. ನನ್ನ ತಂದೆಯ ಬಂಧುವರ್ಗಕ್ಕೆ ಸೇರಿದವರಾದ ಪಟೇಲ್ ನಾರಾಯಣ ಶೆಟ್ಟಿ ಎಂಬುವರು `ಕೃಷ್ಣ ಸಂಧಾನ'ದ ಕಥನ ಮಾಡುವಾಗ ನಾನು ಮೈ ಮರೆಯುತ್ತಿದ್ದೆ.

ಆ ಮೇಲೆ ನಾನು ಮಹಾಭಾರತವನ್ನು ಓದಿ ಅರ್ಥೈಸಿಕೊಳ್ಳುವ ಪ್ರಯತ್ನಪಟ್ಟಾಗಲೂ ನನಗೆ ಕೃಷ್ಣನ ಪಾತ್ರ ಅತಿ ಆಕರ್ಷಣೀಯವಾಗಿ ಕಂಡಿತು. ಹತ್ತು-ಹಲವು ಕಥನಗಳ ಹೆಣಿಗೆಯಾದ ಮಹಾಭಾರತದ ಉದ್ದಕ್ಕೂ ಕೃಷ್ಣ ಸೂತ್ರದ ಹೆಣಿಗೆಯನ್ನು ಕಾಣಬಹುದು. ಕೃಷ್ಣ ಸೂಕ್ತಿಯ ಮೆರುಗನ್ನು ಗುರುತಿಸಬಹುದು.

ಸುಮಾರು ಮೂರು ಸಹಸ್ರ ವರ್ಷಗಳ ಹಿಂದಿನದಂದು ಊಹಿಸಲಾಗಿರುವ ಮಹಾಭಾರತದ ಕಥನ ಕಾಲದಲ್ಲಿ ಈ ಭಾರತ ಭೂಮಿಯಲ್ಲಿ ಆರ್ಯರು ಮತ್ತು ಅನಾರ್ಯರ ಸಾಂಸ್ಕೃತಿಕ ಸೆಣಸಾಟ ಪರಸ್ಪರ ಸಹನೀಯ ಘಟ್ಟ ಮುಟ್ಟಿತ್ತೆನ್ನಬಹುದು. ಈ ದೇಶದಲ್ಲಿ ಆರ್ಯರ ರಾಜಕೀಯ ಮತ್ತು ಸಾಂಸ್ಕೃತಿಕ ಸ್ವಾಮ್ಯ ಸ್ಥಾಪನೆಯ ಮೊದಲ ಕಥನವೆಂದು ಬಗೆಯಲಾಗಿರುವ ರಾಮಾಯಣದ ಕಾಲ ನಾಲ್ಕು ಸಾವಿರ ವರ್ಷಗಳ ಹಿಂದಿನದೆಂದು ಊಹಿಸಲಾಗಿದೆ. ಆರ್ಯರ ಸ್ವಾಮ್ಯ ಸಮರದ ಮೊದಲ ಕಥನವಾದ ರಾಮಾಯಣದಲ್ಲಿ ರಕ್ಕಸಕುಲ ಜನರನ್ನು ಭೀಕರವಾಗಿ ಚಿತ್ರಿಸಲಾಗಿದೆ.
ಈ ಪುರಾಣ ಕಥೆಗಳಲ್ಲಿ ಚಿತ್ರಿತರಾಗಿರುವ ರಕ್ಕಸರೆಂದರೆ ಈ ನೆಲದ ಆದಿವಾಸಿಗಳು ಅಥವಾ ದ್ರಾವಿಡರು. ಮಧ್ಯ ಏಶ್ಯಾದಿಂದ ವಲಸೆ ಬಂದ ಹೊಂಬಣ್ಣದ ಆರ್ಯರಿಗೆ ಈ ನೆಲದ ಕರಿಯ ದ್ರಾವಿಡರು ಕಳಪೆಯಾಗಿಯೂ ಅನಾರ್ಯರಾಗಿಯೂ ಕಂಡರು. ಅವರನ್ನು ರಕ್ಕಸರಾಗಿಯೂ ಚಿತ್ರಿಸಿದರು. ಪುರಾಣ ಕಾಲದಲ್ಲಿ ದ್ರಾವಿಡರ ಗಂಡು ನೆಲೆಯೆಂದು ಪ್ರಸಿದ್ಧವಾದ ಕಿಷ್ಕಿಂದೆಯಲ್ಲಿರುವವರಿಗೆಲ್ಲಾ ಬಾಲ ಬಿಡಿಸಲಾಯಿತು. ಬೇರೆಡೆ ಇರುವ ದ್ರಾವಿಡರು ಕೋರೆದಂತದ ಮಹಾರಕ್ಕಸರಾದರು.

ಕಾಲಕಳೆದಂತೆ ರಾಮಾಯಣದಲ್ಲಿ ಚಿತ್ರಿತರಾದ ರಕ್ಕಸ ಕುಲಜರ ಕ್ರೌರ್ಯದ ವರ್ಣನೆ ಮಹಾಭಾರತದಲ್ಲಿ ತನ್ನ ತೀವ್ರತೆಯನ್ನು ಕಳೆದುಕೊಂಡಿತು. ಕಂಸನೆಂಬ ಮಹಾ ರಕ್ಕಸನ ತಂಗಿಯ ಮಗ ಕೃಷ್ಣ ರಕ್ಕಸನಾಗಲಿಲ್ಲ. ವೃತ್ತಿ ಮೂಲವಾದ ಜಾತಿ ನಿರ್ಮಾಣದ ಯುಗ ಮಹಾಭಾರತದ ಕಾಲದಲ್ಲಿ ಆರಂಭವಾಗಿತ್ತು. ಕೃಷ್ಣನನ್ನು ಗೊಲ್ಲನೆಂದು ಗುರುತಿಸಲಾಗಿತ್ತು.
ಅಂದರೆ ಮಹಾಭಾರತ ಕಾಲದಲ್ಲಿ ಆರ್ಯರ ಪ್ರಭುತ್ವ ಸ್ಥಾಪನೆ ಬಹುಮಟ್ಟಿಗೆ ನೆರವೇರಿತ್ತು. ವಲಸೆ ಬಂದ ಆರ್ಯರ ವಿರುದ್ಧ ದ್ರಾವಿಡರ ಆಕ್ರೋಶ ಕಡಿಮೆಯಾಗಿತ್ತು. ಅಷ್ಟರಲ್ಲಿ ಆರ್ಯರು ಇಲ್ಲಿನ ಅನಾರ್ಯ ಸಮೂಹವನ್ನು ಆಳಬಲ್ಲ ಕ್ಷತ್ರಿಯ ವರ್ಗವನ್ನು ರೂಪಿಸಿತ್ತು. ಆರ್ಯರ ಆಕ್ರಮಣಕ್ಕೆ ದ್ರಾವಿಡರ ಪ್ರತಿರೋಧ ಕಡಿಮೆಯಾಗಿ ಅವರು ಆರ್ಯರು ನಿರೂಪಿಸಿದ ವರ್ಣದ ಚೌಕಟ್ಟಿನಲ್ಲಿ ಬದುಕಲಾರಂಭಿಸಿದ್ದರು. ಇದರಿಂದಾಗಿ ನಮಗೆ ಮಹಾಭಾರತದಲ್ಲಿ ಮಹಾ `ಕ್ರೂರಿಗಳಾದ' ರಕ್ಕಸರ ಚಿತ್ರ ಅಷ್ಟಾಗಿ ಕಾಣುವುದಿಲ್ಲ. ಬದಲಾಗಿ ವೃತ್ತಿಮೂಲವಾದ ಜಾತಿವಾರು ವಿಂಗಡಣೆ ಕಾಣಸಿಗುತ್ತದೆ.
ಇಂತಹ ವಿಂಗಡಣೆಯಲ್ಲಿ ಗೊಲ್ಲರ ಕುಲದಲ್ಲಿ ಹುಟ್ಟಿದ ಕೃಷ್ಣ ಮೂಲತಃ ಒಬ್ಬ ದ್ರಾವಿಡ. ಪುರಾಣದಲ್ಲಿ ಚಿತ್ರಿಸಿರುವಂತೆ ಅವನದು ನೀಲವರ್ಣ- ಅಂದರೆ ಅವನೊಬ್ಬ ಕರಿಯ. ಆಗಿನ ಕಾಲದ ಆರ್ಯರಂತೆ ಅಜಾನುಬಾಹುವಲ್ಲ. ಅವನೊಬ್ಬ ಕುಳ್ಳ.
ಗೊಲ್ಲರ ಕುಲದಲ್ಲಿ ಹುಟ್ಟಿದ ಈ ಕರಿಯ ಕುಳ್ಳ ಕೃಷ್ಣ ಆಗಿನ ಆರ್ಯ ಪ್ರಭುತ್ವವನ್ನು ಅಲುಗಿಸಿದನೆಂಬುದು ನನ್ನ ಮೆಚ್ಚಿಕೆಗೆ ಕಾರಣ. ಆರ್ಯಮೂಲವಾದ ಕುರುಕುಲದಲ್ಲಿ ಕೃಷ್ಣನು ಹುಟ್ಟಿಸಿದ ದಾಯಾದಿ ಸಮರ ಎಲ್ಲ ಕಾಲಕ್ಕೂ ಪ್ರಸ್ತುತವೆನ್ನಿಸುವ ಒಂದು ರಾಜಕೀಯ ತಂತ್ರವೆನ್ನಬಹುದು.

ಕೌರವರು ಮತ್ತು ಪಾಂಡವರ ನಡುವೆ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡ ಕೃಷ್ಣ ಈ ಆರ್ಯಪುತ್ರರೊಳಗೆ ದಾಯಾದಿ ಮತ್ಸರವನ್ನು ಹುಟ್ಟಿಸಿ ಅದು ಕ್ರಮೇಣ ವೈಷಮ್ಯ ದ್ವೇಷವಾಗಿ ಬೆಳೆಯುವಂತೆ ಮಾಡಿದ. ಅದಾಗಲೇ ಭಾರತದ ಸಾಮ್ರಾಟರಾಗಿರುವ ಈ ಕುರುಕುಲಜರೊಳಗಿನ ಸಮರದಲ್ಲಿ ಎಲ್ಲ ಆಶ್ರಿತ ರಾಜರುಗಳೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕೃಷ್ಣ ಮಾಡಿದ.
ಆರ್ಯ ಮೂಲದ ಈ ಕ್ಷತ್ರಿಯರ ನಡುವೆ ನಡೆವ ಮಹಾ ಸಮರದಲ್ಲಿ ಆರ್ಯ ಪ್ರಭುತ್ವವೇ ನಶಿಸಿಹೋಗುವುದೆಂಬ ಲೆಕ್ಕಾಚಾರ ಕೃಷ್ಣನಿಗಿದ್ದಿರಬೇಕು. ಹೀಗೆ ಆಗುವ ಆರ್ಯ ಕುಲಜರ ಅವನತಿ ದ್ರಾವಿಡ ಪ್ರಭುತ್ವಕ್ಕೆ ದಾರಿ ಮಾಡುವುದೆಂಬ ನಿರೀಕ್ಷೆ ಕೃಷ್ಣನದಾಗಿತ್ತು.

ಕೌರವರು ಮತ್ತು ಪಾಂಡವರೊಳಗಿನ ದೀರ್ಘಾವಧಿಯ ಆಂತರಿಕ ಕಲಹದ ಅವಧಿಯಲ್ಲಿ ಕೃಷ್ಣನು ದ್ರಾವಿಡ ಶಕ್ತಿಯ ಪ್ರಭಾವ ವಲಯವೊಂದರ ಸೃಷ್ಟಿ ಮಾಡಿದ್ದನು. ಅನಾರ್ಯರಿಗೆ ಕ್ಷತ್ರಿಯ ಅಂತಸ್ತು ನಿರಾಕರಿಸಲ್ಪಟ್ಟಿರುವ ಕಾಲವದು. ಅಂತಹ ಕಾಲದಲ್ಲಿಯೂ ಕೌರವ-ಪಾಂಡವರ ಕಲಹದಿಂದಾಗಿ ಭಾರತದ ಎಲ್ಲೆಡೆ ಅನೇಕ ಮಂದಿ ದ್ರಾವಿಡರು ಕ್ಷತ್ರಿಯ ಪಟ್ಟಕ್ಕೇರಿದರು. ಮಹಾಭಾರತದಲ್ಲಿ ನಮಗೆ ಇಂತಹ ಅನೇಕ ನಿದರ್ಶನಗಳು ಸಿಗುತ್ತವೆ. ಆರ್ಯ ಕ್ಷತ್ರಿಯರು ಮತ್ತು ದ್ರಾವಿಡ ರಾಜವಂಶಗಳ ನಡುವೆ ವೈವಾಹಿಕ ಸಂಬಂಧಗಳಿಗೆ ಕೃಷ್ಣ ಚಾಲನೆ ಕೊಟ್ಟಿದ್ದ. ಆಗಿನ ಕಾಲದ ದ್ರಾವಿಡ ಪ್ರತಿಭೆಯ ಸಾರ ರೂಪಿಯಾದ ಕೃಷ್ಣನು ಆರ್ಯ ಪ್ರಭುತ್ವವನ್ನು ತನ್ನ ತಾಳಕ್ಕೆ ಕುಣಿಸಿದ ರೀತಿಯೂ ಅದ್ಭುತವಾದುದು. ಅವರ್ಣನೀಯವಾದುದು.

ಭಾರತ ಭೂಮಿಯ ಉದ್ದಗಲಕ್ಕೂ ತಮ್ಮ ಪ್ರಭುತ್ವ ಸ್ಥಾಪಿಸಿರುವ ಆರ್ಯ ಕ್ಷತ್ರಿಯರು ಕುರುಕ್ಷೇತ್ರದಲ್ಲಿ ಸೇರಿ ಪರಸ್ಪರರ ಕತ್ತು ಕತ್ತರಿಸಿದ ಕಥೆಯೇ ಮಹಾಭಾರತ. ಮಾನವ ಕುಲದ ಇತಿಹಾಸದಲ್ಲಿ ಇದುವರೆಗೆ ನಡೆದ ಮಹಾಸಮರಗಳ ಸಾಲಿನಲ್ಲಿ ಅತ್ಯಂತ ಭೀಕರವಾದುದು. ಮಿಲಿಯಗಟ್ಟಳೆ ಕ್ಷತ್ರಿಯ ಯೋಧರು ಮಣ್ಣು ಮುಕ್ಕಿದ ಮಹಾಸಮರವದು. ಈ ಮಹಾಭಾರತ ಯುದ್ಧ ಪುರಾಣ ಕಾಲದಲ್ಲಿ ಆರ್ಯರು ಉತ್ಕರ್ಷಕ್ಕೆ ಏರಿಸಿದ್ದ ಮಂತ್ರ ವಿದ್ಯೆಯ ಅವನತಿಗೂ ಕಾರಣವಾಯಿತು. ಮಹಾಭಾರತ ಯುದ್ಧದ ನಂತರದ ಯಾವ ಕಥನದಲ್ಲಿಯೂ ನಾವು ಮಂತ್ರವಿದ್ಯೆಯ ವೈಭವವನ್ನು ಕಾಣುವುದಿಲ್ಲ. ಮಂತ್ರಮೂಲವಾದ ಶಸ್ತ್ರ ವಿದ್ಯೆ ಆಗಿನ ಕಾಲದಲ್ಲಿ ಕೆಲವೇ ಮಂದಿ ವೈದಿಕ ಗುರುಗಳು ಮತ್ತು ಆರ್ಯ ಮೂಲದ ಕ್ಷತ್ರಿಯರಿಗೆ ಸೀಮಿತವಾಗಿದ್ದುದರಿಂದ ಮಹಾಭಾರತ ಯುದ್ಧದೊಂದಿಗೆ ಈ ಆರ್ಯ ವಿದ್ಯೆಯ ಅವಸಾನವೂ ಆಯಿತು.
ಮಹಾಭಾರತ ಯುದ್ಧದಲ್ಲಿ ದ್ರಾವಿಡ ರಾಜರ ಸಹಭಾಗಿತ್ವವಾಗದಂತೆಯೂ ಕೃಷ್ಣನು ನೋಡಿಕೊಂಡಿದ್ದನು. ಯಾದವ ಅಥವಾ ಗೋಪಾಲಕರ ರಾಜನಾದ ತನ್ನ ಅಣ್ಣ ಬಲರಾಮ ಯಾದವ ಸೇನೆಯನ್ನು ಕುರುಕ್ಷೇತ್ರಕ್ಕೆ ಕರೆದುಕೊಂಡು ಬಾರದಂತೆ ಕೃಷ್ಣ ಹೂಡಿದ ತಂತ್ರದ ಪ್ರಸ್ತಾಪ ಮಹಾಭಾರತ ಕಾವ್ಯದಲ್ಲಿದೆ.

ಕೌರವರು-ಪಾಂಡವರ ನಡುವಿನ ಈ ಪ್ರತಿಷ್ಠೆಯ ಮಹಾ ಸಮರದಲ್ಲಿ ತಟಸ್ಥರಾಗಿ ಉಳಿದವರೆಲ್ಲಾ ದ್ರಾವಿಡ ರಾಜರು. ಹೀಗೆ ಮಹಾಭಾರತವನ್ನು ಆರ್ಯ ಕ್ಷತ್ರಿಯರ ರುದ್ರಭೂಮಿಯಾಗಿ ಮಾಡಿದ ಕೃಷ್ಣನ ದ್ರಾವಿಡ ಪ್ರಜ್ಞೆ ಅಸಾಧಾರಣವಾದುದು.
ಕುರುಕ್ಷೇತ್ರದಲ್ಲಿ ಕೃಷ್ಣನು ಅರ್ಜುನನಿಗೆ ಬೋಧಿಸಿದನೆನ್ನಲಾದ ಗೀತೆಯಲ್ಲಿ ನಾವು ಕೃಷ್ಣನ ಆತ್ಮವಿದ್ಯೆಯ ಬಲವನ್ನು ಕಾಣಬಹುದು. ದಾಯಾದಿಗಳ ಸಮರದಲ್ಲಿ ಸಮಗ್ರ ಕ್ಷತ್ರಿಯ ಕುಲದ ಸಂಹಾರವಾಗುತ್ತಿರುವುದನ್ನು ಮನವರಿಕೆ ಮಾಡಿಕೊಂಡ ಅರ್ಜುನನಲ್ಲಿ ಆರ್ಯ ಪ್ರಜ್ಞೆ ಉಮ್ಮಳಿಸುತ್ತದೆ. ಹೀಗೆ ಆರ್ಯ ಪುರುಷರ ಸಾಮೂಹಿಕ ಹರಣದಿಂದ ಆರ್ಯ ಕನ್ಯೆಯರು ಅನಾಥರಾಗಿ ಅವರು ದ್ರಾವಿಡ ಪುರುಷರ ಪಾಲಾಗುವರೆಂದು ಅರ್ಜುನ ಪರಿತಪಿಸುತ್ತಾನೆ. ಇದರಿಂದ ವರ್ಣ ಸಂಕರವಾಗಿ ಕ್ಷತ್ರಿಯರ ಆರ್ಯತ್ವ ಅಳಿದುಹೋಗುವುದೆಂದು ಮರುಗುತ್ತಾನೆ. ತನ್ನ ಗಾಂಡೀವವನ್ನು ಬದಿಗೆಸೆದು ಮಂಡಿಯೂರಿ ಕೂರುತ್ತಾನೆ. ಹೀಗೆ ಧೃತಿಗೆಟ್ಟು ಕೂತ ಅರ್ಜುನನನ್ನು ಕೃಷ್ಣನು ತನ್ನ ಆತ್ಮ ವಿದ್ಯೆಯ ಬಲದಿಂದ ಹುರಿದುಂಬಿಸುತ್ತಾನೆ. ಕುರುಕ್ಷೇತ್ರದಲ್ಲಿ ಕ್ಷತ್ರಿಯರ ಸಂಹಾರ ಮಾಡುತ್ತಿರುವವನು ನೀನಲ್ಲ. ನೀನಿಲ್ಲಿ ನೆಪ ಮಾತ್ರ. ಇದೆಲ್ಲವೂ ಪರಮಾತ್ಮನಾದ ತನ್ನ ಆಟವೆಂದು ಕೃಷ್ಣ ಹೇಳುತ್ತಾನೆ.
ತಾನೊಬ್ಬ ಪರಮಾತ್ಮನೆಂದು ಹೇಳುವ ಆತ್ಮಬಲ ಕೃಷ್ಣನಿಗಿತ್ತೆಂಬುದು ಇಲ್ಲಿ ಗಮನಾರ್ಹ. ಕೃಷ್ಣನು ಆ ಕಾಲದಲ್ಲಿ ಸಂಸ್ಕೃತ ವಿದ್ಯಾಭ್ಯಾಸ ಮಾಡಿದವನಲ್ಲ. ಅಂತಹ ಅವಕಾಶವೂ ಅವನಿಗಿರಲಿಲ್ಲ. ತನ್ನ ಬಾಲ್ಯವನ್ನೆಲ್ಲಾ ಗೋಪಾಲಕನಾಗಿ ಕಳೆದವನು. ಪಶುಪಾಲನೆ ತನ್ನ ಯಾದವ ಕುಲದ ಉತ್ಕರ್ಷಕ್ಕೆ ದಾರಿಯಾಗುವಂತೆ ಮಾಡಿದವನು. ಇವನೊಬ್ಬ ವಿದ್ಯೆ ಇಲ್ಲದ ಮೇಧಾವಿ. ಅಪ್ರತಿಮವಾದ ತನ್ನ ಬುದ್ಧಿಬಲದಿಂದ ಆತ್ಮವಿದ್ಯೆ ಪಡೆದವನು. ಈ ಆತ್ಮವಿದ್ಯೆಯೇ ಕೃಷ್ಣನನ್ನು ಮಹಾಭಾರತದ ಸೂತ್ರಧಾರಿಯಾಗಿ ಮಾಡಿತು.
ಆ ಕಾಲದಲ್ಲಿ ಆರ್ಯ ಪ್ರಭುತ್ವವು ಸೃಷ್ಟಿಸಿದ ವರ್ಣಾಶ್ರಮ ಧರ್ಮವನ್ನು ಶಿಥಿಲಗೊಳಿಸಿ ವರ್ಣಸಂಕರಕ್ಕೆ ದಾರಿ ಮಾಡುವುದು ಕೃಷ್ಣನ ಪರಮೋದ್ದೇಶವಾಗಿತ್ತೆನ್ನಬಹುದು. ಇವನ ತಂತ್ರಗಾರಿಕೆಯಲ್ಲಿ ನಡೆದ ಮಹಾಭಾರತ ಯುದ್ಧ ಇಂತಹ ವರ್ಣಸಂಕರಕ್ಕೆ ಹೊಸ ಚಾಲನೆ ಕೊಟ್ಟಿತೆನ್ನಬಹುದು. ಈ ದೃಷ್ಟಿಯಿಂದ ಕೃಷ್ಣನು ಒಬ್ಬ ಕ್ರಾಂತಿಕಾರಿ ಸಮಾಜ ಸುಧಾರಕನಾಗಿ ನನಗೆ ಕಾಣುತ್ತಾನೆ.

ದ್ರಾವಿಡ ಜನಸಮೂಹದಲ್ಲಿ ಉತ್ತಮ ಬದುಕಿನ ಆಸೆಯನ್ನು ಚಿಗುರಿಸಿ ಅವರಿಗೆ ರಾಜಕೀಯ ಸ್ಥಾನ-ಮಾನವನ್ನು ಗಳಿಸಿಕೊಟ್ಟವನು ಕೃಷ್ಣ. ಮಹಾಭೋಗಿಯೂ ಅಪ್ರತಿಮ ತ್ಯಾಗಿಯೂ ಆಗಿ ಬದುಕಿದ ಕೃಷ್ಣನ ಜೀವನ ಕಥನ ಎಲ್ಲ ಕಾಲಕ್ಕೂ ಸಲ್ಲುವ ಜೀವನ ತತ್ವಗಳನ್ನೊಳಗೊಂಡಿದೆ. ಸೊತ್ತು ಸಂಪತ್ತು ಯಾರದೇ ಒಡೆತನಕ್ಕೆ ಸೇರಿದ್ದಲ್ಲವೆಂಬ ಸರಳ ಸಾಮಾಜಿಕ ತತ್ವವನ್ನು ಪ್ರಚುರಪಡಿಸಿದವನು ಕೃಷ್ಣ. ಕೃಷ್ಣನು ತನ್ನ ಬಾಲ್ಯದಲ್ಲಿ ಯಾವುದೇ ಭೇದಭಾವವಿಲ್ಲದೆ ಎಲ್ಲರ ಮನೆಯ ಬೆಣ್ಣೆ ಭುಂಜಿಸುತ್ತಿದ್ದನೆಂಬ ಕಥಾವರ್ಣನೆಯಲ್ಲಿ ನಮಗೆ ಕೃಷ್ಣನು ಆಚರಿಸಿದ ಜೀವನ ತತ್ವದ ಸಂದೇಶ ಸಿಗುತ್ತದೆ.

ಈ ಜಗತ್ತಿನಲ್ಲಿ ಎಲ್ಲ ಸಾಮಾಜಿಕ ಕ್ರಾಂತಿಕಾರರನ್ನು ದೈವತ್ವಕ್ಕೆ ಏರಿಸಿ ಅವರ ಸುತ್ತ ಪವಾಡಗಳನ್ನು ಹೆಣೆದಂತೆ ಕೃಷ್ಣನೂ ಭಾರತದಲ್ಲಿ `ದೇವರ ದೇವ' ಎನ್ನಿಸಿಕೊಂಡ.

• ವಡ್ಡರ್ಸೆ ರಘುರಾಮ ಶೆಟ್ಟಿ/ ಸಂಪಾದಕರು ಮುಂಗಾರು /‌ವ್ಯಕ್ತಿಚಿತ್ರ ಅಂಕಣ - 07/09/1985

Advertisement
Advertisement
Recent Posts
Advertisement