Advertisement

ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ಐದು ವರ್ಷ| "ಗೌರಿ- ಬೆಂದು ಬೆಳಗಿದ ದಾರಿ"

Advertisement

ಬರಹ: ಶಿವಸುಂದರ್ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

ಇಂದು ಸೆಪ್ಟೆಂಬರ್ ೫. ಇಂದಿಗೆ ಐದು ವರ್ಷದ ಕೆಳಗೆ, ೨೦೧೭ರ ಸೆಪ್ಟೆಂಬರ್ ೫ರ ರಾತ್ರಿ ೮.೩೦ ರ ಸುಮಾರಿಗೆ, ಗೌರಿ ಎಂದರೆ ಯಾರೆಂದರೆ ಗೊತ್ತಿರದ ಆದರೆ ಸನಾತನ ಸಂಸ್ಥೆಯು ಬಿತ್ತಿದ ದ್ವೇಷವನ್ನು ತಲೆಗೇರಿಸಿಕೊಂಡಿದ್ದ ಶೂದ್ರ ಬಡ ಕುಟುಂಬದ ಪರುಶ್‌ರಾಮ್ ವಾಘ್ಮೋರೆ ಗೌರಿಯನ್ನು ಗುಂಡು ಹಾರಿಸಿ ಕೊಂದುಬಿಟ್ಟ.

ಇದು ಕ್ಷಾತ್ರ ಧರ್ಮ ಸಾಧನದ ಭಾಗವಾಗಿ ಸನಾತನ ಸಂಸ್ಥೆ ಮಾಡಿದ ಸರಣಿ ಕೊಲೆಯಲ್ಲಿ ನಾಲ್ಕನೆಯದು. ಆದರೆ ಗೌರಿ ಹತ್ಯೆಯ ತನಿಖೆಯು ಗೌರಿಯ ಜೊತೆಗೆ ಈ ಸಂಘಟಿತ ಕೊಲೆಗಡುಕ ಗುಂಪೇ ಕಲ್ಬುರ್ಗಿ, ಧಾಬೋಲ್ಕರ್ , ಪನ್ಸಾರೆ ಅವರ ಹತ್ಯೆಗಳನ್ನು ಮಾಡಿದೆ ಎಂದು ಪತ್ತೆ ಹಚ್ಚಿದೆ. ಹಾಗೂ ಸನಾತನ ಸಂಸ್ಥೆಯ ಕೊಲೆಗಡುಕ ತಂಡದ ಬಹುಪಾಲು ಸದಸ್ಯರನ್ನು ಹಿಡಿದು ಜೈಲಿಗೆ ದೂಡಿದೆ. ಹೀಗಾಗಿ ಜನಪರ ಕಾರ್ಯಕರ್ತರಿಗೆ ಸನಾತನ ಸಂಸ್ಥೆಯಿಂದ ಇದ್ದ ಅಪಾಯ ಸದ್ಯಕ್ಕೆ ದೂರವಾಗಿದೆ.

ಆದರೆ ಗೌರಿಯ ಹತ್ಯೆಯಾದ ನಂತರದ ಕಳೆದ ಐದು ವರ್ಷಗಳಲ್ಲಿ ಭಾರತವು ಗೌರಿಯಂತ ಜನ ಪರ ಪತ್ರಕರ್ತರಿಗೆ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರಿಗೆ 2017ಕ್ಕಿಂತಾ ಅಪಾಯಕಾರಿಯಾಗಿರುವುದನ್ನು ಹಲವಾರು ವರದಿಗಳು ಸ್ಪಷ್ಟಪಡಿಸುತ್ತಿವೆ.

ಏಕೆಂದರೆ ಹಿಂದುತ್ವ ಎಂಬುದು ಸಾವಿರ ಹೆಡೆಗಳ ಕಾಳಸರ್ಪ. 2019 ರಲ್ಲಿ ಹಿಂದುತ್ವ ಫ್ಯಾಸಿಸ್ಟರು ಮತ್ತಷ್ಟು ಜನ ಮನ್ನಣೆಯೊಂದಿಗೆ ಅಧಿಕಾರಕ್ಕೆ ಬಂದ ಮೇಲೆ ಅದರ ಹಲವಾರು ಬಾಹುಗಳು ಇನ್ನೂ ಉಗ್ರವಾಗಿ, ಹಲವು ರೂಪಗಳಲ್ಲಿ ದಾಳಿ ಮಾಡುತ್ತಿವುದನ್ನು ಹಲವಾರು ವರದಿಗಳು ಸ್ಪಷ್ಟ ಪಡಿಸುತ್ತಿವೆ.

ಅದರಲ್ಲಿ ಒಂದು India Press Freedom Report -2022 ಒಂದು . ಅದರ ಪ್ರಕಾರ 2021 ರಲ್ಲಿ ಭಾರತದಾದ್ಯಂತ ಪೊಲೀಸರಿಂದ ಹಾಗೂ ಆಳುವ ಪಕ್ಷದ ಹತ್ಯಾ ಪಡೆಗಳಿಂದ:

6 ಪತ್ರಕರ್ತರು ಹತ್ಯೆಗೀಡಾಗಿದ್ದಾರೆ. 108 ಜನರ ಮೇಲೆ ಮಾರಣಾಂತಿಕ ದಾಳಿ ಮಾಡಲಾಗಿದೆ. 13 ಮೀಡಿಯಾ ಸಂಸ್ಥೆಗಳ ಮೇಲೂ ದಾಳಿ ಮಾಡಲಾಗಿದೆ.

ಇದರಲ್ಲಿ ಬಹುಪಾಲು ಎಲ್ಲವೂ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲೇ ನಡೆದಿದೆ. ಇವರಲ್ಲಿ ಹತ್ಯೆ ಮತ್ತು ದಾಳಿ ಮಾಡಿದವರು ಪೊಲೀಸರಾಗಿದ್ದರೇ ಪದಕಗಳನ್ನು ಪಡೆದಿದ್ದಾರೆ. ಪೊಲೀಸರಲ್ಲದವರು ಇನ್ನೂ ರಾಜಾರೋಷವಾಗಿ ಪೋಲಿಸ್ ರಕ್ಷಣೆಯೊಂದಿಗೆ ಬೀದಿಗಳಲ್ಲಿ ಓಡಾಡಿಕೊಂಡಿದ್ದಾರೆ. ಅಥವಾ ಬಿಜೆಪಿ ಸರ್ಕಾರದಲ್ಲಿ ಶಾಸಕ-ಮಂತ್ರಿಗಳಾಗಿದ್ದಾರೆ.

ಇದರಲ್ಲಿ ಮೊದಲ ಸ್ಥಾನ ತ್ರಿಪುರ, ಎರಡನೆಯದು ಕಾಶ್ಮೀರ, ಮೂರನೆಯದು ಉತ್ತರ ಪ್ರದೇಶ , ನಾಲ್ಕನೆಯದು ಮಧ್ಯಪ್ರದೇಶ.

ಅದರ ವರದಿ ಯನ್ನು ಈ ವೆಬ್ ವಿಳಾಸದಲ್ಲಿ ಪಡೆದುಕೊಳ್ಳಬಹುದು :

http://www.rightsrisks.org/wp-content/uploads/2022/01/IndiaPressFreedomReport2022.pdf

ಮತ್ತೊಂದು ಅಂತರರಾಷ್ಟ್ರೀಯ ಮಾಧ್ಯಮ ಹಕ್ಕು ರಕ್ಷಣಾ ಸಂಸ್ಥೆಯಾದ CPJ (Committee For Protection Of Jouranalists ) ವರದಿ ಪ್ರಕಾರ ...:

ಗೌರಿ ಹತ್ಯೆಯಾದ ಮರು ತಿಂಗಳಲ್ಲೇ ಕೊಲೆಯಾದ ಝಾರ್ಖಂಡ್ ನ ಯುವ ಪತ್ರಕರ್ತ ಶಂತನು ಭೌಮಿಕ್ ಇಂದ ಮೊದಲುಗೊಂಡು 2022 ರ ಮೇ 20 ರಂದು ಕೊಲೆಯಾದ ಸುಭಾಷ್ ಕುಮಾರ್ ಮಹತೋ ವರೆಗೆ 2017-22ರ ನಡುವಿನ ಈ ಐದು ವರ್ಷಗಳಲ್ಲೇ 23 ಪತ್ರಕರ್ತ ರು ಹತ್ಯೆಯಾಗಿದ್ದಾರೆ.

ಅದರ ಸಂಪೂರ್ಣ ವರದಿಯನ್ನು ಈ ವೆಬ್ ವಿಳಾಸದಲ್ಲಿ ಪಡೆಯಬಹುದು :

https://cpj.org/data/killed/asia/india/

ಇನ್ನು ಮಾನವ ಹಕ್ಕುಗಳ ಕಾರ್ಯಕರ್ತರ , ಹೋರಾಟಗಾರದ ಸಾವುಗಳನ್ನು ದಾಖಲಿಸುತ್ತಿದ್ದವರೂ ಕೂಡ UAPA ಕೆಳಗೆ ಜೈಲಿನಲ್ಲಿದ್ದಾರೆ . ಅಥವಾ ಕೊಲೆಗೀಡಾಗಿದ್ದಾರೆ . ಆಳುವ ಸರ್ಕಾರದ ವಿರುದ್ಧ ಧ್ವನಿಯೆತ್ತುವವರರ ಈ ಹಕ್ಕುಹರಣಕ್ಕೆ ದೇಶದ ಅತ್ಯುನ್ನತ ನ್ಯಾಯಾಲಯವೇ ಸಕ್ರಿಯ ಸಹಕಾರ ನೀಡುತ್ತಿದೆ.

ಭೀಮಾ ಕೋರೆಗಾಂವ್ ಬಂಧನಗಳಿಂದ ಪ್ರಾರಂಭವಾದ ಈ ಸರ್ಕಾರ-ಹಾಗೂ ನ್ಯಾಯಾಂಗದ ಜಂಟಿ ದಾಳಿಗಳು:

CAA-NRC ವಿರೋಧಿ ಹೋರಾಟಗಾರರ ಮೇಲಿನ ದಾಳಿ , ಸಿದ್ದಿಕಿ ಕಪ್ಪನ್, ದೆಹಲಿ ಗಲಭೆಗಳಲ್ಲಿ ಸಂತ್ರಸ್ಥರನ್ನೇ ತಳ್ಳುವುದು , ರೈತ ಹೋರಾಟದ ಮೇಲೆ ಬಗೆಬಗೆಯ ಕುತಂತ್ರಗಳು, ಕೊಲೆ, ಹಾಗೂ ಇತ್ತೀಚಿನ ಜುಬೇರ್, ತೀಸ್ತಾ, ಬಂಧನದ ವರೆಗೆ ..ನಡೆಯುತ್ತಲೇ ಇದೆ. ತೀಸ್ತ ಮತ್ತು ಜುಬೇರ್ ಅವರಿಗೆ ಜಾಮೀನು ಸಿಕ್ಕಿದ್ದರೂ ತಲೆಯ ಮೇಲಿನ ಕತ್ತಿ ನಿವಾರಣೆಯಾಗಿಲ್ಲ.

ಕಾಶ್ಮೀರದ ವಿಭಜನೆ ಹಾಗೂ ವರ್ಷಗಳ ಕಾಲ ಇಡೀ ಕಾಶ್ಮೀರಿ ಜನತೆಯ ಗೃಹಬಂಧನ , ಬಾಬ್ರಿ ಮಸೀದಿ ಕೆಡವಿದವರಿಗೆ ಮಾಫಿ- ರಾಮಮಂದಿರ ನಿರ್ಮಾಣ ಕ್ಕ ನ್ಯಾಯಾಂಗ ಸಮ್ಮತಿ, ಆದಿವಾಸಿಗಳ ಏನ್ ಕೌಂಟರ್ ಪ್ರಶ್ನಿಸಿದ ಹಿಮಾಂಶುಕುಮಾರ್ ಗೆ ದಂಡ , ಕೊನೆಗೆ ಪೆಗಾಸಸ್ ಬೇಹುಗಾರಿಕೆ ಪ್ರಕರಣದಲ್ಲಿ ತನ್ನನ್ನೇ ಧಿಕ್ಕರಿಸುವ ಸರ್ಕಾರವನ್ನು ಮೌನವಾಗಿ ಒಪ್ಪಿಕೊಳ್ಳುವಷ್ಟು ಮಟ್ಟಿಗೆ ಕಳೆದ ಐದು ವರ್ಷಗಳಲ್ಲಿ ಸುಪ್ರೀಂ ಕೋರ್ಟ ಮೋದಿ ಸರ್ಕಾರದ ಗೃಹ ಕಚೇರಿಯಂತೆ ಕೆಲಸ ಮಾಡುತ್ತಾ ಸಂವಿಧಾನಕ್ಕೆ ಮತ್ತು ಜನರಿಗೆ ದ್ರೋಹ ಬಗೆಗಿದಿದೆ.

ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರ ಸಂವಿಧಾನ ಮೇಲೆ ಮಾಡಿದ ದಾಳಿಗಳಾದ ಕಾಶ್ಮೀರ ವಿಭಜನೆ, UAPA ತಿದ್ದುಪಡಿ, CAA ಯಂಥ ಹಿಂದುತ್ವವಾದಿ , ಪ್ರಜಾತಂತ್ರ ವಿರೋಧಿ ನೀತಿಗಳನ್ನು ಸಂಸತ್ತಿನಲ್ಲಿ ಕಾಯಿದೆಯನ್ನಾಗಿ ರೂಪಿಸಲು ಸಾಧ್ಯವಾಗಿದ್ದು ಕೇವಲ NDA ಪಕ್ಷಗಳ ಬೆಂಬಲದಿಂದಲ್ಲ. ಬದಲಿಗೆ ಸೆಕ್ಯುಲಾರ್ ಪಕ್ಷವೆಂದು ಹೇಳಿಕೊಳ್ಳುವ AAP, BSP, TDP. TRS , BJD, JDU ಗಳ ಬೆಂಬಲದೊಂದಿಗೆ.

UAPA ಯನ್ನು ಕರಾಳ ಗೊಳಿಸಿದ್ದು ಹಾಗೂ CAA-NRC ಗೆ ಭೂಮಿಕೆಯನ್ನು ಸಿದ್ಧಪಡಿಸಿದ್ದು ಕಾಂಗ್ರಸ್ ನೇತೃತ್ವದ UPA ಸರ್ಕಾರವೇ..

ದೇಶದ ಮಟ್ಟದಲ್ಲಿ UAPA ರದ್ದಾಗಬೇಕೆಂದು ಒತ್ತಾಯಿಸುತ್ತಿದ್ದರೂ ಕೇರಳದಲ್ಲಿ ಅಧಿಕಾರದಲ್ಲಿರುವ CPM ನೇತೃತ್ವದ ಎಡರಂಗ ಸರ್ಕಾರ ಕೇರಳದಲ್ಲಿ ಮಾತ್ರ ಅದರ ಎಲ್ಲಾ ಕರಾಳತೆಯೊಂದಿಗೆ ಮುಂದುವರೆಸಲು ಬಯಸುತ್ತದೆ.

ಈ ಅಂಶಗಳನ್ನು ಮರೆತರೆ ಕಳೆದ ಐದು ವರ್ಷದ ಬೆಳವಣಿಗೆಗಳ ಸಾರಾಂಶ ಮತ್ತು ತಾತ್ಪರ್ಯ ಅರ್ಥವಾಗುವುದಿಲ್ಲ.

ಸಾರಾಂಶವಿಷ್ಟೇ :

- ಗೌರಿಯ ಹತ್ಯೆಯಾದ ನಂತರದ ಈ ಐದು ವರ್ಷಗಳು ಇನ್ನಷ್ಟು ಗಂಭೀರವಾಗಿದೆ,.ಕಳೆದ ಐದು ವರ್ಷಗಳಲ್ಲಿ ಭಾರತದ ಸಮಾಜ ಮತ್ತು ಸರ್ಕಾರ ಮತ್ತಷ್ಟು ಫ್ಯಾಸಿಕರಣಗೊಂಡಿರುವುದನ್ನು ಪ್ರತಿದಿನದ ವಿದ್ಯಮಾನಗಳು ಸಾಬೀತು ಪಡಿಸುತ್ತಿವೆ.

-ಫ್ಯಾಸಿಸ್ಟ್ ಶಕ್ತಿಗಳು ಬೆಂಬಲಗಳೊಂದಿಗೆ ಯುದ್ಧವಿಲ್ಲದೆ ಸಂಸತ್ತನ್ನು ವಶಪಡಿಸಿಕೊಂಡಿದ್ದಾರೆ .

- ನ್ಯಾಯಾಂಗವಂತೂ ಸರ್ಕಾರದ ಗೃಹ ಕಚೇರಿಯಂತಾಗಿದೆ.

-ಮಾಧ್ಯಮಗಳು ವಿರೋಧಿಗಳ ಮೇಲೆ ದಾಳಿ ಮಾಡಲು ಸರ್ಕಾರ ಸಾಕಿರುವ ಬೇಟೆನಾಯಿಗಳಾಗಿವೆ.

- ಕಳೆದ ಐದು ವರ್ಷಗಳಲ್ಲಿ ಈ ಫ್ಯಾಸ್ಸಿಸ್ಟರ ಕೆಲವು ಕಾರ್ಪೊರೇಟ್ ಪರ ಮತ್ತು ಹಿಂದೂರಾಷ್ಟ್ರ ಪರ ನೀತಿಗಳ ವಿರುದ್ಧ ಅಭೂತಪೂರ್ವ ಪ್ರತಿರೋಧವನ್ನು ಭಾರತದ ಜನತೆ ತೋರಿದ್ದಾರೆ. ವಿಶೇಷವಾಗಿ ಕೇಂದ್ರ ಸರ್ಕಾರ ಜಾರಿಗೆ ತಂಡ CAA-NRC ನೀತಿಗಳ ವಿರುದ್ಧ ಹಾಗೂ ಮೂರು ಕೃಷಿ ನೀತಿಗಳ ವಿರುದ್ಧ ಒಂದು ವರ್ಷಕ್ಕೂ ಮೇಲ್ಪಟ್ಟು ನಡೆದ ರೈತ ಚಳವಳಿಗಳು.

ಮೂರು ಕೃಷಿ ನೀತಿಗಳನ್ನು ಸರ್ಕಾರ ವಾಪಸ್ ತೆಗೆದುಕೊಂಡಿದೆ . ಆದರೆ ಅದರ ಸಾರವನ್ನು ರಾಜ್ಯಗಳ ಮಟ್ಟದಲ್ಲಿ ಜಾರಿ ಮಾಡುವ ಯತ್ನ ನಡೆದಿಡೇ. ಇದಲ್ಲದೆ ರೈತರಿಗೆ ಕೊಟ್ಟ ಇತರ ಭರವಸೆಗಳಾದ MSP ಖಾತರಿ ಮತ್ತು ವಿದ್ಯುತ್ ತಿದ್ದುಪಡಿ ಮಸ್ಸೊಡೆಯನ್ನು ಜಾರಿಗೆ ತರದ ಭರವಸೆಗಳಿಗೆ ಮೋದಿ ಸರ್ಕಾರ ದ್ರೋಹ ಬಗೆದಿದೆ. ಮತ್ತೊಮ್ಮೆ ಅದರ ವಿರುದ್ಧ ಬೃಹತ್ ಹೋರಾಟ ಕಟ್ಟುವ ಪ್ರಯತ್ನಗಳಿಗೆ ಮೊದಲಿನ ಪ್ರತಿಕ್ರಿಯೆ ಸಿಗುತ್ತಿಲ್ಲ. ಪಂಜಾಬ್ ಮತ್ತು ಉತ್ತರ ಪ್ರದೇಶ ಚುನಾವಣೆ ರೈತ ಸಂಘಟನೆಗಳಲ್ಲಿ ರಾಜಕೀಯಬಿರುಕನ್ನೂ ಹುಟ್ಟುಹಾಕಿತ್ತು.

CAA ಜಾರಿಗೆ ತಂದಿದ್ದರೂ ಈವರೆಗೆ ನಿಯಮಾವಳಿ ರೂಪಿಸಲಾಗಿಲ್ಲ.. ಕೋವಿಡ್ ಇತ್ಯಾದಿ ಕಾರಣಗಳಿಂದ ಸೆನ್ಸಸ್ ಪ್ರಾರಂಭವಾಗಿಲ್ಲವಾದ್ದರಿಂದ NPR-NRC ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಆದರೆ ಅದಕ್ಕೇ ಬೇಕಾದ ಆಡಳಿತಾತ್ಮಕ ಸಿದ್ಧತೆಗಳು ಗುಟ್ಟಾಗಿ ನಡೆದಿವೆ.

- ಜನತೆ ತೋರಿದ ಈ ಪ್ರತಿರೋಧಗಳು ಫ್ಯಾಸ್ಸಿಸ್ಟರ ಮುನ್ನಡೆಗೆ ಅಡ್ಡಿಯನ್ನುಂಟು ಮಾಡಿದ್ದು ನಿಜ. ಆದರೆ ಕ್ರಮೇಣ ಫ್ಯಾಸಿಸ್ಟ್ ಶಕ್ತಿಗಳು ತಮ್ಮ ಪಾರಂಪರಿಕ ಸಾಮ, ದಾನ, ಬೇಧ ಮತ್ತು ದಂಡ ನೀತಿಗಳ ಮೂಲಕ ಅಡ್ಡಿಯನ್ನು ನಿವಾರಿಸಿಕೊಂಡು ತಮ್ಮ ಬಲವರ್ಧನೆ ಮಾಡಿಕೊಳ್ಳುತ್ತಿವೆ.

-ಉತ್ತರಪ್ರದೇಶ ಚುನಾವಣಾ ಫಲಿತಾಂಶ ತೋರಿಸಿದಂತೆ ಜನರ ಸಮಸ್ಯೆಗಳು ಮತ್ತದರ ವಿರುದ್ಧ ನಡೆದ ಧೀರೋದ್ಧಾತ ಹೋರಾಟಗಳು ಫ್ಯಾಸಿಸ್ಟರ ಮುನ್ನಡೆಗ ತಾತ್ಕಾಲಿಕ ಸ್ಪೀಡ್ ಬ್ರೇಕರ್ ಗಳಾಗಿದ್ದವೇ ವಿನಾ ದ್ವೇಷದ ಆಧಾರದಲ್ಲಿ ಗೆದ್ದುಕೊಳ್ಳುವ ಫ್ಯಾಸಿಸ್ಟರ ತಂತ್ರಗಳಿಗೆ ದೊಡ್ಡ ತಡೆಯನ್ನೇನೂ ಒಡ್ಡಲಾಗಿಲ್ಲ.

-ಆದರೆ ಆ ಹೋರಾಟಗಳು ಫ್ಯಾಸಿಸ್ಟರು ಅಜೇಯರಲ್ಲ ಎಂಬ ವಿಶ್ವಾಸವನ್ನಂತೂ ಮೂಡಿಸಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಕಾಲಾವಧಿಯಲ್ಲಿ ಫ್ಯಾಸಿಸ್ಟರ ಹಿಂದುತ್ವವಾದಿ ಕಾರ್ಪೊರೇಟ್ ಪರ ದಾಳಿಗಳನ್ನು ತಾತ್ಕಾಲಿಕವಾಗಿಯಾದರೂ ಹಿಮ್ಮೆಟ್ಟಿಸಲು ಸಾಧ್ಯವಾಗಿದ್ದು ಸಂಸತ್ತಿನಿಂದಲೂ ಅಲ್ಲ. ನ್ಯಾಯಾಂಗದಿಂದಲೂ ಅಲ್ಲ. ಅವು ಇನ್ನೂ ಹೆಚ್ಚೆಚ್ಚು ಫ್ಯಾಸಿಸ್ಟ್ ಸಾಧನಗಳಾಗುತ್ತಿವೆ.

ಬದಲಿಗೆ ಜನರು ಅತ್ಯಪೂರ್ವ ಒಗ್ಗಟ್ಟು, ಸಮರಶೀಲತೆ ಮತ್ತು ಬದ್ಧತೆಗಳಿಂದ ಬೀದಿ ಸಮರ ನಡೆಸಿದಾಗ ತಾತ್ಕಾಲಿಕವಾಗಿಯಾದರೂ ಅಡ್ಡಿಯಾಗಲು ಕಳೆದ ಐದು ವರ್ಷಗಳಲ್ಲಿ ಸಾಧ್ಯವಾಗಿದೆ.

ಹೀಗಾಗಿ ಗೌರಿ ಹತ್ಯೆಯಾದ ಈ ಐದನೇ ವರ್ಷದಂದು ನಾವೆಲರೂ ನಾವು ಗಳಿಸಿರುವ ತಾತ್ಕಾಲಿಕ ಜಯಗಳಿಂದ ಸ್ಫೂರ್ತಿಗಳನ್ನು ಪಡೆದುಕೊಂಡೆ ಕಡುಕಷ್ಟದ ದೀರ್ಘ ಹೋರಾಟಕ್ಕೆ ಸಿದ್ಧವಾಗಬೇಕಿದೆ. ಬಹುಸಂಖ್ಯಾತರ ಜನಮಾನಸದಲ್ಲಿ ದ್ವೇಷದ ಬದಲು ಪ್ರೀತಿಯನ್ನು , ಸ್ವಾರ್ಥದ ಬದಲು ಕಾಳಜಿಯನ್ನು ಬಿತ್ತುವ ಹಾಗೂ ಫ್ಯಾಸಿಸ್ಟ್ ಪ್ರಭುತ್ವವನ್ನು ಮಣಿಸಲು ದೀರ್ಘವಾದ , ಸಮರಶೀಲವಾದ , ಹಾಗೂ ಭ್ರಾಂತಿರಹಿತವಾದ , ಜನಸಮರವನ್ನು ಕಟ್ಟಬೇಕಿದೆ.

ಬಿಕ್ಕಟ್ಟಿನ ಬೆಂಕಿಯಲ್ಲಿ ಬೇಯದೆ ಹೊಸಬೆಳಕು ಸಿಗುವುದೇ?

ಇದು ಭಾರತದ ನಾಗರಿಕತೆ ಎದುರಿಸುತ್ತಿರುವ ಮತ್ತೊಂದು ಬಿಕ್ಕಟ್ಟಿನ ಸಂದರ್ಭ .. ಹಳೆಯ ಮಾರ್ಗ ನಿರರ್ಥಕವಾಗಿ , ಹೊಸ ಮಾರ್ಗ ಸ್ಪಷ್ಟವಾಗದ ಸಕ್ರಮಣ ಕಾಲ ..

ಹೊರಗಿನ ಬೆಂಕಿ ಒಳಗನ್ನು ಬೇಯಿಸಿದಾಗ ಹುಟ್ಟುವ ಬೆಳಕು ಮಾತ್ರ ಈ ಕತ್ತಲಲ್ಲಿ ಬೆಳಕು ತೋರಿಸಬಹುದು.

ಇಂಥಾ ಬಿಕ್ಕಟ್ಟಿನ ಸಂದರ್ಭಗಳಲ್ಲೇ ಮನುಷ್ಯರ ಮತ್ತು ಚಳವಳಿಗಳ ನಿಜವಾದ ವ್ಯಕ್ತಿತ್ವ ಹೊರಬರುತ್ತದೆ..

ತಾವು ನಂಬಿಕೊಂಡ ಸತ್ಯಗಳು, ಇಟ್ಟುಕೊಂಡ ಭರವಸೆಗಳು , ನಡೆದ ದಾರಿಗಳು ಪರಿಹಾರದ ದಾರಿ ತೋರದಾಗ ಜನರ ಬಗ್ಗೆ ಪ್ರೀತಿ ಇರುವವರು, ಬದಲಾವಣೆಯನ್ನು ನಿಜವಾಗಿ ಬಯಸುವವರು ತಮ್ಮನ್ನು ಕಟುವಾದ ಆತ್ಮ ವಿಮರ್ಶೆಗೆ ಒಡ್ಡಿಕೊಳ್ಳುತ್ತಾರೆ. ಎಷ್ಟೇ ಕಷ್ಟವಾದರೂ ಪೋರ್ತಾ ಕಳಚಿಕೊಂಡು ಯಾರೂ ನಡೆಯದ, ಅನಿಶ್ಚಿತವಾದ , ಕಲ್ಲುಮುಳ್ಳಿನ ಆದರೆ ಪರಿಹಾರದ ಹಾದಿಯಲ್ಲಿ ಹೊಸ ಪ್ರಯಾಣ ಪ್ರಾರಂಭಿಸುತ್ತಾರೆ.

ಪರಿಹಾರದ ಮಾರ್ಗ ಬೇಡುವ ಬದಲಾವಣೆಗೆ ತಮ್ಮನ್ನು ತಾವು ಒಡ್ಡಿಕೊಳ್ಳದವರು, ತಾವು ಕಟ್ಟಿಕೊಂಡ ಕೋಟೆಗಳು ಹಾಗೂ Comfort Zone ಗಳಿಂದ ಹೊರಬರಲು ಸಿದ್ಧರಿರದ ವ್ಯಕ್ತಿಗಳು ಮತ್ತು ಚಳವಳಿಗಳು ಇಂಥಾ ಸಂದರ್ಭಗಳಲ್ಲಿ ರಾಜಿ, ಅವಕಾಶವಾದಕ್ಕೆ ಬಲಿಯಾಗುತ್ತಾರೆ . ಅಥವಾ ಹತಾಶೆ , ಅಸಹಾಯಕತೆಯಿಂದ ಹಾವನ್ನು ಹಗ್ಗವೆಂದು ಭ್ರಮಿಸುವ ವಿಭ್ರಾಂತಿ ಗಳಿಗೂ ಗುರಿಯಾಗುತ್ತಾರೆ.

ಆದರೆ ಬದ್ಧತೆ, ಪ್ರಾಮಾಣಿಕತೆ ಮತ್ತು ಜನರ ಬಗ್ಗೆ ಅಸೀಮ ಪ್ರೀತಿ ಕಾಳಜಿಯನ್ನೇ ಬದುಕಾಗಿಸಿಕೊಂಡವರು ಇಂಥಾ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲವನ್ನೂ ತೊರೆದು ತಾವು ನಂಬಿದ್ದನ್ನು ಉಳಿಸಿಕೊಳ್ಳಲು ಅಪಾಯಕ್ಕೆ ಮುಖಾಮುಖಿಯಾಗುತ್ತಾರೆ.

ಆ ಮೂಲಕ ಕತ್ತಲಲ್ಲಿ ಹೊಸ ದಾರಿಯನ್ನು ತೋರುತ್ತಾರೆ.

ಇತಿಹಾಸದಲ್ಲಿ, ಸಂಕ್ರಮಣ ಸಂದರ್ಭದಲ್ಲಿ ಹೊಸ ದಾರಿ ತೋರಿದ ಚಳವಳಿಗಳು, ವ್ಯಕ್ತಿಗಳೂ ಬದುಕಿದ್ದು, ಸಾಧಿಸಿದ್ದು ಈ ಮೌಲ್ಯಗಳನ್ನು ಅಳವಡಿಸಿಕೊಂಡೆ .. .

ಗೌರಿ : ಕತ್ತಲನ್ನು ಕರಗಿಸುವ ನೈತಿಕ ಧೈರ್ಯದ ಬೆಳಕು

ನಮ್ಮ ಗೌರಿ ಕೂಡಾ ಅಂಥಾ ಬದುಕನ್ನೇ ಬದುಕಿದವರು. ಮಡಿದವರು.

ಬದುಕಿನ ಪಯಣದಲ್ಲಿ ವೈಯಕ್ತಿಕ, ಕೌಟುಂಬಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಬಿಕ್ಕಟ್ಟುಗಳ ಬೆಂಕಿಯಲ್ಲಿ ಬಿದ್ದಾಗಲೆಲ್ಲಾ ಆಕೆ ಅಪ್ಪಟ ಚಿನ್ನವಾಗಿ ಹೊರಬಂದಿದ್ದಾಳೆ. ತಾನು ನಂಬಿದ ಮೌಲ್ಯಗಳಿಗಾಗಿ ತನ್ನ ಸ್ವಂತ ಸುಖ, ನೆಮ್ಮದಿಗಳಿಗೆ ಎರವಾಗಿದ್ದಾಳೆ. ಆ ಸಮಯದಲ್ಲಿ ಆಕೆಯ ಮುಂದೆ ಮುಂದಿನ ದಾರಿಯೇನೂ ಸ್ಪಷ್ಟವಾಗಿರಲಿಲ್ಲ. ಆದರೆ ರಾಜಿ-ಅವಕಾಶವಾದಗಳ ಹಂಗಿನ ಅರಮನೆಗಿಂತ ಅನಿಶ್ಚಿತವಾದ ಆದರೆ ನ್ಯಾಯಯುತವಾದ , ತ್ಯಾಗ ಬಲಿದಾನ ಮತ್ತು ನಿತ್ಯ ಯಾತನೆಗಳಿಂದ ಕೂಡಿದ ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದಾಳೆ . ಬೆಟ್ಟವೇರಿ ಕೂರದೆ ಅತ್ಯಂತ ಸಲೀಸಾಗಿ ತನ್ನನ್ನು ತಾನು ಆತ್ಮವಿಮರ್ಶೆಯ ನಿಕಷಕ್ಕೆ ಒಡ್ಡಿಕೊಂಡು ಜಗವೇ ಬೆರಗಾಗುವಂತೆ ಬದಲಾಗಿದ್ದಾಳೆ. ಆ ಕಾರಣಕ್ಕಾಗಿ ಚಳವಳಿಗಳಿಗೂ , ನಾಯಕರಿಗೂ ಸಹ ಗುರುವಾಗಿದ್ದಾಳೆ.

ತಾನು ಕಟ್ಟಿಕೊಂಡಿರುವ comfort zone ಒಳಗೆ ಕೂತುಕೊಂಡು ಸತ್ಯ ಮತ್ತು ನ್ಯಾಯದ ದಾರಿಯಲ್ಲಿ ನಡೆಯಲಾಗದು ಎಂದು ಗೊತ್ತಾದಾಗ ಅತ್ಯಂತ ಸಲೀಸಾಗಿ ಅದರಿಂದ ಹೊರಬಂದು ಕಷ್ಟದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ.

ಎಷ್ಟು ಜನರು ತಮ್ಮ ಬದುಕಿನಲ್ಲಿ ಇಂಥಾ ಆಯ್ಕೆ ಮಾಡಿಕೊಳ್ಳಬಲ್ಲರು .?

ಆದರೆ ಅಂಥಾ ಆಯ್ಕೆಗಳಿಗೆ ಸಿದ್ಧವಿರುವ ವ್ಯಕ್ತಿ ಮತ್ತು ಚಳವಳಿಗಳಿಂದ ಮಾತ್ರ ಫ್ಯಾಸಿಸಂ ಅನ್ನು ಸೋಲಿಸಲು ಸಾಧ್ಯ ..

ಪ್ರಾಯಶಃ ಗೌರಿಯನ್ನು ನೆನೆಯುವುದೆಂದರೆ , ಗೌರಿ ನಡೆದು ತೋರಿದಂತೆ

-ನಮ್ಮ ನಮ್ಮ Comfort Zone ಗಳಿಂದ ಹೊರಬಂದು,

-ನಮ್ಮ ನಮ್ಮ ಸಿದ್ಧತೆಗಳಿಗೆ ತಕ್ಕಂತೆ ಸಿದ್ದಂತಗಳನ್ನು ರೂಪಿಸದೆ , ನಮ್ಮ ಮುಂದಿರುವ ಗಂಭೀರ ಸವಾಲನ್ನು ಅದಕ್ಕೆ ತಕ್ಕಂತೆ ವ್ಯಾಖ್ಯಾನಿಸದೆ

- ಮುಂದಿರುವ ಶತ್ರು ವಿನ ಸಮಗ್ರ ಸ್ವರೂಪವನ್ನು ಹೇಗಿದೆಯೋ ಹಾಗೆ ಅರ್ಥ ಮಾಡಿಕೊಳ್ಳುವುದು , ಹಾಗೂ ಅದರ ವಿರುದ್ಧದ ಸಂಘರ್ಷ ಏನು ಕೇಳುತ್ತದೋ ಅದಕ್ಕೆ ತಕ್ಕಹಾಗೆ ಸಿದ್ಧವಾಗುವುದೇ ಆಗಿದೆ..

ಇದು ಕೇವಲ ಸಾಮಾಜಿಕ ನೆಲೆಯಲ್ಲಿ ಬಗೆಹರಿಸಿಕೊಳ್ಳಬೇಕಾದ ಸಮಸ್ಯೆಯಲ್ಲ.

ಸಮಾಜದ ಬಡತನದ ಬೆಂಕಿ, ಜಾತಿ ಅಪಮಾನದ ಬೆಂಕಿ, ಲಿಂಗ ತಾರತಮ್ಯದ ಬೆಂಕಿ , ಧಾರ್ಮಿಕ ಅಪಮಾನದ ಬೆಂಕಿ , ಅಸಮಾನತೆ-ಅಭದ್ರತೆಯ ಬೆಂಕಿ ಗೌರಿಯ ಅಂತರಂಗವನ್ನು ಬೇಯಿಸಿತ್ತು. ಆ ಬೆಂಕಿಗೆ ತನ್ನನ್ನು ತಾನು ಒಡ್ಡಿಕೊಂಡೆ ಗೌರಿ ಗೌರಿಯಾದಳು ..

ಆ ಮೂಲಕ ಅಂತರಂಗ -ಬಹಿರಂಗ ವೆಂಬ ಭಿನ್ನವಿಲ್ಲದೆ ಬದುಕಿದ್ದಳು ..

ನೊಂದವರ ನೋವಿನ ಬಗ್ಗೆ ದೂರದಿಂದ ಕರುಣೆ ತೋರದೆ ತಾನೇ ಅನುಭವಿಸಿದಳು.

ಹೀಗಾಗಿ ನೋವಿನ ಕಾರಣಗಳನ್ನು ರಾಜಿ ಇಲ್ಲದೆ ದ್ವೇಷಿಸಿದಳು ..

ಆದ್ದರಿಂದಲೇ ಅಂಥಾ ಬಿಕ್ಕಟ್ಟುಗಳು ಎದುರಾದರೂ ...

ಸುಡುಸತ್ಯಗಳಿಗೆ ಸಂಯಮದ ನೀರೆರಚಲಿಲ್ಲ..ಬೆತ್ತಲೆಯ ಜಗತ್ತಿಗೆ ವಿದ್ವತ್ತಿನ ಬಟ್ಟೆ ತೊಡಿಸಲಿಲ್ಲ..ಸತ್ಯೋತ್ತರ ಮಿಥ್ಯೆಗಳಿಗೆ ಮಾಹಿತಿಯೆಂಬ ಮುದ್ರೆಯೊತ್ತಲಿಲ್ಲ...ಕಂಡದ್ದನ್ನು ಕಂಡಹಾಗೆಯಲ್ಲದೆ ಮತ್ತೇನನ್ನೂ ಬರೆಯಲಿಲ್ಲ..

ತಾನು ನಂಬಿಕೊಂಡ ಮೌಲ್ಯಗಳಿಗಾಗಿ ತನ್ನ Comfort Zone ಇಂದ ಹೊರಬಂದು

ಕರಗಿದಳು, ಕೊರಗಿದಳು , ಕಣ್ಣೀರಾದಳು ..ಕನಲಿದಳು ಕದನಕ್ಕಿಳಿದಳು

ಅಮ್ಮನಾದಳು , ಗುರುವಾದಳು , ಪದವಾದಳು , ಅರ್ಥವಾದಳು ..ಅನ್ವರ್ಥವಾದಳು

ಕಪ್ಪಾದಳು , ಕೆಂಪಾದಳು , ನೀಲಿಯಾದಳು , ಹಸಿರಾದಳು , ಬಿಳಿಯಾದೆಳು .ಕಾಮನಬಿಲ್ಲಾದಳು

ಭರವಸೆಯಾದಳು , ಸಾಧ್ಯತೆಯಾದಳು , ಅಮರಳಾದಳು

ಸಾವಿರದ ಗೌರಿಯಾದಳು .. ಸಾವಿರಾರು ಗೌರಿಯಾದಳು ..

ಕತ್ತಲು ಕಾರ್ಗತ್ತಲಾಗುತ್ತಿರುವ ಈ ಸಂದರ್ಭದಲ್ಲಿ , ಭರವಸೆಗಳು ಭ್ರಮನಿರಸನಗಳಾಗುತ್ತಿರುವ ಈ ಸಂದರ್ಭದಲ್ಲಿ ಹೊಸ ಭರವಸೆಗಳು ಬರಬೇಕಿರುವುದು ಹೊರಗಿನಿಂದಲ್ಲ. ನಮ್ಮೊಳಗಿನಿಂದಲೇ..

ಅದು ಸಾಧ್ಯವಾಗುವುದು ಚಳವಳಿಗಳು ಮತ್ತು ನಾಯಕರು ಗೌರಿ ಬದುಕಿದಂತೆ ಬದುಕಿದಾಗ ..

ಅಲ್ಲವೇ?

Advertisement
Advertisement
Recent Posts
Advertisement