ಕಾಂಗ್ರೆಸ್ ನೇತೃತ್ವದ ಧರಂಸಿಂಗ್ ಸರ್ಕಾರ ಪಿಎಫ್ಐ ಗೆ ಅನುಮತಿಯನ್ನು ನಿರಾಕರಿಸಿತ್ತು. ಆದರೆ ಆ ನಂತರ ಅನುಮತಿ ನೀಡಿದ್ದು ಧರ್ಮಸಿಂಗ್ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಜೆಡಿಎಸ್- ಬಿಜೆಪಿ (20-20) ಸಮ್ಮಿಶ್ರ ಸರ್ಕಾರವಾಗಿದೆ ಹಾಗೂ ಎಸ್ಡಿಪಿಐಗೆ ಬಿಜೆಪಿ ಆರ್ಥಿಕ ನೆರವು ನೀಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿರುವ ಕುರಿತು ವರದಿಯಾಗಿದೆ.
ವರದಿಯ ಪ್ರಕಾರ, ಅಲ್ಪಸಂಖ್ಯಾತ ಮತಗಳು ಬಿಜೆಪಿ ಬಿಟ್ಟು ಚದುರದಂತೆ ನೋಡಿಕೊಳ್ಳಲು ಎಸ್ಡಿಪಿಐಗೆ ಬಿಜೆಪಿ ಆರ್ಥಿಕ ನೆರವು ನೀಡುತ್ತಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ (ಅಕ್ಟೋಬರ್08) ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಡಿಪಿಐ ಬಿಜೆಪಿಯ ಬೆಂಬಲಕ್ಕೆ ನಿಂತಿದೆ. ಆದ್ದರಿಂದಲೇ ಬಿಜೆಪಿ ಮತ್ತು ಆರ್ಎಸ್ಎಸ್ ಹಣಕಾಸಿನ ನೆರವು ನೀಡುತ್ತಿದೆ. ಒಂದು ವೇಳೆ ಇಲ್ಲ ಎಂದಾದರೆ ಪಿಎಫ್ಐ ನಿಷೇಧಿಸಿದಂತೆ ಎಸ್ಡಿಪಿಐಯನ್ನೂ ಕೂಡ ನಿಷೇಧಿಸಲಿ ನೋಡೋಣ ಎಂದವರು ಸವಾಲು ಹಾಕಿದರು.
ಪಿಎಫ್ಐ ಗೆ ಅನುಮತಿ ನೀಡಿದ್ದ ಜೆಡಿಎಸ್ ಬಿಜೆಪಿ 20-20 ಸರ್ಕಾರದಲ್ಲಿ ಆರ್.ಅಶೋಕ್ ರವರು 'ರಹಮತುಲ್ಲಾ ಅಸ್ರತ್' ಆಗಿದ್ದರು.
ಧರ್ಮಸಿಂಗ್ ಅವರು ಮುಖ್ಯಮಂತ್ರಿ ಆಗಿದ್ದಾಗ ಪಿಎಫ್ಐಗೆ ಅನುಮತಿ ನಿರಾಕರಿಸಿದ್ದರು. ಆದರೆ, ಆ ನಂತರದಲ್ಲಿ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರವು ಅನುಮತಿ ನೀಡಿತ್ತು. ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 'ರಹಮತುಲ್ಲಾ ಅಸ್ರತ್' ಆಗಿದ್ದ ಆರ್. ಅಶೋಕ್ ಈಗ ಪಿಎಫ್ಐ ಭಾಗ್ಯ ಸಿದ್ದರಾಮಯ್ಯ ಅಂತ ಹೇಳುತ್ತಿರುವುದು ನಾಚಿಕೆಗೇಡು ಎಂದು ಅವರು ವಿವರಿಸಿದರು.
ಮುಸ್ಲಿಮರ ಹೆಸರಲ್ಲಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಬಿಜೆಪಿ ಮಾಡುತ್ತಿದೆ.
ಪಿಎಫ್ಐ ಪರವಾಗಿ ಸುಪ್ರೀಂಕೋರ್ಟಿನಲ್ಲಿ ವಾದಿಸುತ್ತಿರುವ ವಕೀಲರು ಬಿಜೆಪಿಗೆ ಸೇರಿದವರು. ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಮುಸ್ಲಿಮರು ಬೆಂಬಲ ನೀಡುತ್ತಾರೆ ಎಂಬ ಕಾರಣಕ್ಕಾಗಿ ಬಿಜೆಪಿ, ಎಸ್ಡಿಪಿಐ ಗೆ ಈ ರೀತಿಯಲ್ಲಿ ಬೆಂಬಲ ನೀಡುತ್ತಿದೆ. ಜನರೆದುರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವಂತೆ ಮಾಡಿ, ಹಿಂದಿನಿಂದ ಮುಸ್ಲಿಮರನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿರುವುದಾಗಿ ಅವರು ವಿವರಿಸಿದ್ದಾರೆ.