Advertisement

ಈ ಬಿಜೆಪಿಯವರು ಎಂತಹ ಭಂಡರು, ಲಜ್ಜೆಗೆಟ್ಟವರು ಇರಬಹುದು?: ಸಿದ್ದರಾಮಯ್ಯ

Advertisement

•ಸಿದ್ದರಾಮಯ್ಯ (ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಪಕ್ಷ ನಾಯಕರು)

ಬಸವರಾಜ ಅಮರಗೋಳ ಎಂಬ ವ್ಯಕ್ತಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ, ಮೂಡಿಗೆರೆ ಹಾಗೂ ಕಡೂರು ಮುಂತಾದ ಕಡೆಗಳಿಗೆ ಕೊರೊನಾ ಅಲೆಯಲ್ಲಿ ಉಪಕರಣಗಳನ್ನು ಸರಬರಾಜು ಮಾಡಿದ್ದರು. ಅದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದ ಮೇಲೆ ಸರಬರಾಜು ಮಾಡಿದ್ದು. ಈಗ ಎರಡು ವರ್ಷ ಆಗಿದೆ, ಅದರಲ್ಲಿ ಕೇವಲ 20% ಬಿಲ್‌ ಹಣವನ್ನು ಮಾತ್ರ ನೀಡಿದ್ದಾರೆ. ಬಾಕಿ ಹಣಕ್ಕಾಗಿ ಆತ ಮುಖ್ಯಮಂತ್ರಿಗಳನ್ನು ಎರಡು ಬಾರಿ ಭೇಟಿ ಮಾಡಿದ್ದಾರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದಾರೆ. ಇದರಿಂದ ಯಾವ ಉಪಯೋಗ ಆಗದಿದ್ದಕ್ಕೆ ಕೊನೆಗೆ ರಾಷ್ಟ್ರಪತಿಗಳಿಗೆ 20-10-2022ರಲ್ಲಿ ಪತ್ರ ಬರೆದು ತನ್ನ ಬಳಿ 35-40% ಕಮಿಷನ್‌ ಕೇಳುತ್ತಿದ್ದಾರೆ, ಇಷ್ಟು ಹಣ ನನ್ನಿಂದ ಕೊಡೋಕಾಗುತ್ತಿಲ್ಲ, ನನ್ನ ಬಾಕಿ ಬಿಲ್‌ ಹಣವನ್ನು ನೀವೇ ಕೊಡಿಸಿ ಇಲ್ಲದಿದ್ದರೆ ನನಗೆ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಕೇಳಿದ್ದಾರೆ. ಇದರರ್ಥ ಈ ಸರ್ಕಾರ 40% ಕಮಿಷನ್‌ ಸರ್ಕಾರ ಎಂಬುದಕ್ಕೆ ಪ್ರಬಲ ಸಾಕ್ಷಿ.

ಹೃದಯಾಘಾತದಿಂದ ನಿಧನರಾದ ಪೊಲೀಸ್‌ ಇನ್ಸ್‌ಪೆಕ್ಟರ್‌ ನಂದೀಶ್‌ ಅವರ ಅಂತಿಮ ದರ್ಶನ ಪಡೆಯಲು ಹೋಗಿದ್ದ ಎಂಟಿಬಿ ನಾಗರಾಜ್‌ ಅವರು ಪೊಲೀಸ್‌ ಸಿಬ್ಬಂದಿ ಜೊತೆ ಮಾತನಾಡುವಾಗ “70-80 ಲಕ್ಷ ಕೊಟ್ಟು ವರ್ಗಾವಣೆ ಮಾಡಿಸಿಕೊಂಡರೆ ಹೃದಯಾಘಾತ ಆಗದೆ ಇರುತ್ತದಾ?” ಎಂದು ಹೇಳಿದ್ದಾರೆ. ಇದನ್ನು ಯಾರೋ ದಾರಿಯಲ್ಲಿ ಹೋಗುವವರು ಹೇಳಿದ್ದಲ್ಲ, ಸರ್ಕಾರದಲ್ಲಿ ಸಚಿವ ಸ್ಥಾನದಲ್ಲಿ ಇರುವವರು ಹೇಳಿದ್ದು. ನಂದೀಶ್‌ ಅವರು ಸಾಲ ಮಾಡಿ 70-80 ಲಕ್ಷ ಲಂಚ ನೀಡಿದ್ದಾರೆ, ಆಮೇಲೆ ಯಾವುದೋ ಕಾರಣಕ್ಕೆ ಅವರನ್ನು ಅಮಾನತು ಮಾಡಿದ್ದಾರೆ, ಇದರಿಂದ ಒತ್ತಡಕ್ಕೆ ಒಳಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ? ರಾಜ್ಯ ಸರ್ಕಾರ ಹೊಣೆ ಅಲ್ವಾ? ಈ ಲಂಚದ ಹಣವನ್ನು ಗೃಹ ಸಚಿವರು ಅಥವಾ ಮುಖ್ಯಮಂತ್ರಿಗಳು ಪಡೆದಿರಬೇಕು? ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯುವ ಯಾವ ನೈತಿಕತೆ ಇದೆ?

ಬಿಜೆಪಿ ಸರ್ಕಾರ ಎರಡು ವರ್ಷ ಮೂರು ತಿಂಗಳು ಸುಮ್ಮನಿದ್ದಿದ್ದು ಏಕೆ? ವಾಲ್ಮೀಕಿ ಶ್ರೀಗಳು 257 ದಿನಗಳ ಕಾಲ ಧರಣಿ ಕೂರುವಂತೆ ಮಾಡಿದ್ದು ಯಾಕೆ? ನಮ್ಮ ಪಕ್ಷದ ಎಸ್‌,ಸಿ ಹಾಗೂ ಎಸ್‌,ಟಿ ಶಾಸಕರು ಪ್ರತೀ ಬಾರಿ ಸದನ ಕರೆದಾಗ ಮೀಸಲಾತಿ ಹೆಚ್ಚಳದ ಪ್ರಸ್ತಾಪ ಮಾಡಿದ್ದಾರೆ, ಧರಣಿ ಕೂತಿದ್ದಾರೆ. ಇದಕ್ಕೆ ಬಿಜೆಪಿಯ ಒಬ್ಬ ಶಾಸಕ ಬೆಂಬಲ ನೀಡಿದ್ರಾ? ಈ ಶ್ರೀರಾಮುಲು ಅವರು ಚುನಾವಣೆಗೆ ಮೊದಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ನಾಗಮೋಹನ್‌ ದಾಸ್‌ ಅವರ ವರದಿ ಜಾರಿಗೆ ಕೊಡುತ್ತೇವೆ, ಇದನ್ನು ರಕ್ತದಲ್ಲಿ ಬರೆದುಕೊಡ್ತೀನಿ ಎಂದಿದ್ದರು. ಈಗ 24 ನಂತರ ಜಾರಿ ಮಾಡಿರುವುದಾ? ಇದರರ್ಥ ನಮ್ಮಿಂದ ಒತ್ತಡ ಜಾಸ್ತಿಯಾದ ಮೇಲೆ ಮತ್ತು ವಾಲ್ಮೀಕಿ ಶ್ರೀಗಳು ಧರಣಿ ಕೂತಮೇಲೆ ಬೇರೆ ದಾರಿಯಿಲ್ಲದೆ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

ನಾನು ಹೇಳಿದ್ದು ಒಂದು ಕಾಯ್ದೆ ಮಾಡಬೇಕು ಎಂದು. ಎರಡು ದಿನಗಳ ವಿಶೇಷ ಅಧಿವೇಶನ ಕರೆದು, ಒಂದು ಕಾಯ್ದೆ ಮಾಡಿ, ನಂತರ ಹೇಗೂ ಕೇಂದ್ರದಲ್ಲಿಯೂ ಬಿಜೆಪಿಯದೇ ಸರ್ಕಾರ ಇರುವುದರಿಂದ ದೆಹಲಿಗೆ ಹೋಗಿ ಕೆಲವು ದಿನಗಳ ಕಾಲ ಕೂತು ಅದನ್ನು ಸಂವಿಧಾನದ 9 ಶೆಡ್ಯೂಲ್‌ ಗೆ ಸೇರಿಸಬೇಕಿದೆ. ಇವರು 9ನೇ ಶೆಡ್ಯೂಲ್‌ ಬಗ್ಗೆ ಮಾತನಾಡುತ್ತಿದ್ದಾರ? ಇದಕ್ಕೆ ಸೇರಿಸದೇ ಹೋದರೆ ಸಂವಿಧಾನಾತ್ಮಕ ರಕ್ಷಣೆ ಸಿಗುವುದಿಲ್ಲ.

1992ರ ಇಂದಿರಾ ಸಹಾನಿ ಪ್ರಕರಣದಲ್ಲಿ 9 ನ್ಯಾಯಮೂರ್ತಿಗಳ ಪೀಠವು ಮೀಸಲಾತಿ ಪ್ರಮಾಣ 50% ಗಿಂತ ಮೀರಬಾರದು ಎಂದು ತೀರ್ಪು ನೀಡಿದ್ದಾರೆ. ಈಗ ಈ ಮಿತಿಯನ್ನು ಸಡಿಲ ಮಾಡಿ 6% ಹೆಚ್ಚಳ ಮಾಡಿದ್ದಾರೆ. ಇದರ ಜೊತೆ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ 10% ಮೀಸಲಾತಿ ನೀಡಲಾಗಿದೆ. ಇದರಿಂದ ಒಟ್ಟು ಮೀಸಲಾತಿ 66% ಆಯಿತು. ಹೀಗಾಗಿ ಇದಕ್ಕೆ ರಕ್ಷಣೆ ಸಿಗಬೇಕಾದರೆ ಸಂವಿಧಾನದ 9ನೇ ಶೆಡ್ಯೂಲ್‌ ಗೆ ಸೇರಬೇಕು. ಹೇಗಿದ್ದರೂ ಕೇಂದ್ರದಲ್ಲಿ ಬಿಜೆಪಿಯದೇ ಸರ್ಕಾರ ಇದೆ. ಇದನ್ನು 9ನೇಶೆಡ್ಯೂಲ್‌ ಗೆ ಸೇರಿಸಬೇಕಾದ್ರೆ ಸಂಸತ್ತಿನಲ್ಲಿ ವಿಧೇಯಕ ಮಂಡನೆ ಆಗಿ ಪಾಸ್‌ ಆಗಬೇಕು. ಈ ಕೆಲಸವನ್ನು ಮಾಡಿಸಲಿ. ಬರೀ ಕ್ರಾಂತಿಕಾರಕ ನಿರ್ಧಾರ ಎಂದು ಬುರುಡೆ ಬಿಟ್ಟರೆ ಆಗಲ್ಲ.

ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ಮಾಡಿ ರಾಜೀವ್‌ ಗಾಂಧಿ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರಿಗೆ ಮತ್ತು ಮಹಿಳೆಯರಿಗೆ ಮೀಸಲಾತಿ ನೀಡಿದ್ರು. ಇದನ್ನು ಜಾರಿ ಮಾಡಿದ್ದು ನರಸಿಂಹರಾವ್‌ ಅವರ ಸರ್ಕಾರ. ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಾಗ ಸಂಪುಟ ಉಪಸಮಿತಿ ಮಾಡಿ ಹಿಂದುಳಿದವರಿಗೆ 33%, ಮಹಿಳೆಯರಿಗೆ 50% ಮೀಸಲಾತಿ ನೀಡಿದ್ದು. ಇದನ್ನು ಸಂವಿಧಾನ ಬಾಹಿರ ಎಂದು ಸುಪ್ರೀಂಕೋರ್ಟ್‌ ಗೆ ಹೋಗಿದ್ದು ಬಿಜೆಪಿಯ ರಾಜ್ಯಸಭಾ ಸದಸ್ಯ ಮತ್ತು ಪಕ್ಷದ ಉಪಾಧ್ಯಕ್ಷರಾಗಿದ್ದ ರಾಮಾ ಜೋಯಿಸ್‌ ಅವರು. ಆಗ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಈಶ್ವರಪ್ಪ ಏನು ಮಾಡುತ್ತಿದ್ರು? ಇದನ್ನು ತಪ್ಪಿಸಬೇಕಿತ್ತಲ್ವಾ? ಹಿಂದುಳಿದವರಿಗೆ ಮತ್ತು ಮಹಿಳೆಯರಿಗೆ ಸಾಮಾಜಿಕ ನ್ಯಾಯದಡಿ ಮೀಸಲಾತಿ ನೀಡಿದ್ದಾರೆ, ಇದನ್ನು ಪ್ರಶ್ನೆ ಮಾಡಬೇಡಿ ಎಂದು ಅವರಿಗೆ ಹೇಳಿ, ಸುಪ್ರೀಂ ಕೋರ್ಟ್‌ ನಲ್ಲಿ ಮನವಿ ಮಾಡದಂತೆ ತಡೆಯಬಹುದಿತ್ತಲ್ವಾ?

ಬಸವರಾಜ ಬೊಮ್ಮಾಯಿ ಯಾವಾಗ ಬಿಜೆಪಿ ಸೇರಿದ್ದು ಗೊತ್ತಾ? 2008ರಲ್ಲಿ. ಅಲ್ಲಿವರೆಗೆ ಜೆಡಿಯು ಪಕ್ಷದಲ್ಲಿ ಇದ್ದರು. ಇವರಿಗೆ ಮೀಸಲಾತಿ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ? ರಾಮಾ ಜೋಯಿಸ್‌ ಅವರು ಸ್ವತಃ ಸುಪ್ರೀಂ ಕೋರ್ಟ್‌ ನಲ್ಲಿ ಹಿಂದುಳಿದವರಿಗೆ ಮತ್ತು ಮಹಿಳೆಯರಿಗೆ ಮೀಸಲಾತಿ ನೀಡಿರುವುದು ತಪ್ಪು ಎಂದು ವಾದ ಮಾಡಿದ್ದರು. ಅದೃಷ್ಟವಶಾತ್‌ ಅವರ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕಾರ ಮಾಡಿತು. ಒಂದು ವೇಳೆ ಈ ಮನವಿ ಪುರಸ್ಕಾರ ಆಗಿದ್ರೆ ಹಿಂದುಳಿದವರಿಗೆ ಮತ್ತು ಮಹಿಳೆಯರಿಗೆ ಅನ್ಯಾಯವಾಗುತ್ತಿರಲಿಲ್ವಾ? ಇದಕ್ಕೆ ಬಿಜೆಪಿ ಕಾರಣವಾಗುತ್ತಿರಲಿಲ್ವಾ?

ಪತ್ರಕರ್ತರಿಗೆ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಲಕ್ಷ ಲಕ್ಷ ಹಣದ ಉಡುಗೊರೆ ನೀಡಿದ್ದಾರೆ. ತಮ್ಮ ಕಚೇರಿಯ ಯಾರೋ ಒಬ್ಬರು ಇದನ್ನು ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಬೊಮ್ಮಾಯಿ ಅವರ ಗಮನಕ್ಕೆ ಬರದೆ ಈ ರೀತಿ ಯಾರೋ ಒಬ್ಬರು ಹಣ ಕೊಡೋಕೆ ಆಗುತ್ತಾ? ಇದನ್ನು ಪತ್ರಕರ್ತರು ವಾಪಾಸು ಕೊಟ್ಟಿದ್ದಾರೆ. ಈ ರೀತಿ ಹಣ ಕೊಡುವ ಹಿಂದಿನ ಉದ್ದೇಶ ಏನು? ಸರ್ಕಾರದ ಮೇಲೆ ಯಾವುದೇ ಆರೋಪ ಮಾಡಬಾರದು, ಸರ್ಕಾರದ ವಿರುದ್ಧ ಏನು ಬರೆಯಬಾರದು, ಅವರ ಬಾಯಿ ಮುಚ್ಚಿಸಬೇಕು ಎಂದು ಕೊಟ್ಟಿರುವುದು. ಈ ಹಣ ಯಾವುದು? ಎಲ್ಲಿಂದ ಬಂತು ಗೊತ್ತಾ? ಇದು 40% ಕಮಿಷನ್‌ ಲಂಚ ಹೊಡೆದ ದುಡ್ಡು.
ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು.

ಕೆಲವರೆಲ್ಲ ಉಡುಗೊರೆ ಹಣವನ್ನು ವಾಪಾಸು ಕೊಟ್ಟಿದ್ದಾರೆ, ಆದರೆ ಅವು ಬಾಯಿ ಬಿಟ್ಟು ಹೇಳುವ ಹಾಗೆ ಇಲ್ಲ. ಈ ಬಗ್ಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿ ಇದೆ. ಈ ಬಿಜೆಪಿಯವರು ಎಂಥಾ ಲಜ್ಜೆಗೆಟ್ಟವರು ಇರಬಹುದು? ಒಂದು ಲಕ್ಷ ಹಣ ಕೊಟ್ಟು ಅದನ್ನು ಸಮರ್ಥನೆ ಮಾಡುತ್ತಾರಲ್ಲ ಎಂಥಾ ಭಂಡರು. ಬಿಜೆಪಿಯವರದ್ದು ಸುಳ್ಳಿನ ಕಾರ್ಖಾನೆಯೇ ಇದೆ. ಆರ್‌,ಎಸ್‌,ಎಸ್‌ ಒಂದು ಸುಳ್ಳಿನ ಕಾರ್ಖಾನೆ. ಸುಳ್ಳು ಸೃಷ್ಟಿಯೇ ಅವರ ಕೆಲಸ.

Advertisement
Advertisement
Recent Posts
Advertisement