Advertisement

3% ಮೇಲ್ಜಾತಿಗಳು ಮನುಸ್ಮೃತಿಯಲ್ಲಿ ಪಡೆದುಕೊಂಡಿದ್ದ ವಿಶೇಷ ಸ್ಥಾನಮಾನಗಳ ಮುಂದುವರಿಕೆಯೇ EWS ಮೀಸಲಾತಿ!

Advertisement

"EWS ಮೀಸಲಾತಿ ಮತ್ತು ಖಾಸಗೀಕರಣ"
ಬ್ರಾಹ್ಮಣಶಾಹಿ ಫ಼್ಯಾಶಿಸಂನ ಎರಡು ಅಸ್ತ್ರಗಳು!

ಬರಹ: ಶಿವಸುಂದರ್

ಮೋದಿ ಸರ್ಕಾರವು (ಸಂಸತ್ತಿನ ಬಹುಪಾಲು ವಿರೋಧ ಪಕ್ಷಗಳ ಅನುಮೋದನೆ ಮೂಲಕ) 103ನೇ ಸಂವಿಧಾನ ತಿದ್ದುಪಡಿಯ ಮೂಲಕ ಜಾರಿ ಮಾಡಿದ EWS ಮೀಸಲಾತಿ ಅರ್ಥಾತ್ ಮೇಲ್ಜಾತಿ ಬಡವರಿಗೆ (ಮತ್ತು ಮಧ್ಯಮ ವರ್ಗಗಳಿಗೆ ಕೂಡ!) ಮಾತ್ರ ಒದಗಿಸಲಾಗುವ ಆರ್ಥಿಕ ಆಧಾರದ ಮೀಸಲಾತಿಯನ್ನು ಸಿಂಧುತ್ವವನ್ನು ಸುಪ್ರೀಮ್ ಕೋರ್ಟು ಎತ್ತಿಹಿಡಿಯುವ ಮೂಲಕ, ಖಾಸಗೀಕರಣ, ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡದಿರುವುದರ ಮೂಲಕ ಮೋದಿ ಸರ್ಕಾರ ದಲಿತ- ದಮನಿತರ ಮೇಲೆ ನಡೆಸುತ್ತಿದ್ದ ಬ್ರಾಹ್ಮಣಶಾಹಿ ದಾಳಿ ಮತ್ತೊಂದು ಮಜಲನ್ನು ಮುಟ್ಟಿದೆ.

ಹಾಗೆ ನೋಡಿದರೆ ಈ ಬಗ್ಗೆ ಅಂಬೇಡ್ಕರ್ ಬಹಳ ಹಿಂದೆಯೇ ಎಚ್ಚರಿಕೆ ನೀಡಿದ್ದರು. 1938ರಲ್ಲೇ ನಾಸಿಕ್ ನಲ್ಲಿ ಮಾಡಿದ ಭಾಷಣವೊಂದರಲ್ಲಿ, ಈ ದೇಶದ ಎಲ್ಲಾ ಖಾಯಿಲೆಗಳಿಗೆ ಬ್ರಾಹ್ಮಣಶಾಹಿ ಮತ್ತು ಬಂಡವಾಳ ಶಾಹಿಗಳೇ ಕಾರಣವೆಂದೂ ಸ್ಪಷ್ಟವಾಗಿ ಗುರುತಿಸಿದ್ದರು. ಹಾಗೂ ಈ ದೇಶ ನಿಜವಾದ ಸ್ವಾತಂತ್ರ್ಯ ಪಡೆಯಬೇಕೆಂದರೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ನ್ಯಾಯಗಳೆರಡನ್ನು ಜನರು ಪಡೆಯಬೇಕಾದದ್ದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದರು ಮತ್ತು ಆಳುವ ಸರ್ಕಾರಗಳು ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ನ್ಯಾಯಗಳನ್ನು ದೊರಕಿಸುವಂಥಾ ನೀತಿಗಳನ್ನು ರೂಪಿಸಬೇಕೆಂದು ನಮ್ಮ ಸಂವಿಧಾನದಲ್ಲಿ ತಾಕೀತು ಮಾಡಲಾಗಿತ್ತು.

ಅದರೆ ಸ್ವಾತಂತ್ರ್ಯಾನಂತರದ 75 ವರ್ಷಗಳಲ್ಲಿ ಯಾವ ಸರ್ಕಾರಗಳಿಗೂ ಬ್ರಾಹ್ಮಣಶಾಹಿಯನ್ನಗಲೀ, ಬಂಡವಾಳಶಾಹಿಯನ್ನಾಗಲೀ ನಿರ್ಮೂಲನೆ ಮಾಡುವ ಉದ್ದೆಶಗಳು ಇರಲಿಲ್ಲ. ಯೋಜನೆಗಳೂ ಇರಲಿಲ್ಲ. ಆದರೂ ಸ್ವಾತಂತ್ರ್ಯ ಹೋರಾಟದ ಕಾವಿನ ಕಾರಣಕ್ಕಾಗಿ ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿಯನ್ನು ನಿಯಂತ್ರಿಸುವ ಕಾರ್ಯಕ್ರಮಗಳು ಪ್ರಾರಂಭದ ಕೆಲವು ದಶಕಗಳ ಕಾಲ ಅರೆಮನಸ್ಸಿನಿಂದ ಚಾಲ್ತಿಯಲ್ಲಿದ್ದವು. ಅದಕ್ಕೆ ಮತ್ತೊಂದು ಕಾರಣ ದಲಿತ-ದಮನಿತ ಜನರ ಹೋರಾಟಗಳೂ ಕೂಡ. ಆದರೆ 90ರ ದಶಕದಲ್ಲಿ "ಮಂಡಲ್ ವಿರುದ್ಧ ಕಮಂಡಲದ ಚಳವಳಿ" ಹಾಗೂ "ಆರ್ಥಿಕ ಉದಾರೀಕರಣ"ಗಳು ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿಯ ಮೇಲಿದ್ದ ನಿಯಂತ್ರಣಗಳನ್ನು ಸಡಿಲಗೊಳಿಸಿದವು.

ಮೋದಿ ಸರ್ಕಾರದಲ್ಲಿ ಬಲಿಷ್ಟಗೊಂಡ ಬ್ರಾಹ್ಮಣಶಾಹಿ

2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲಂತೂ "ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿ"ಯು ಈ ದೇಶದ ಜನರ ಮೇಲೆ ಅಕ್ರಮಣಕಾರಿ ದಾಳಿಯನ್ನೇ ಸಾರಿವೆ.

EWS ಮೀಸಲಾತಿ ಅರ್ಥಾತ್ ಮೇಲ್ಜಾತಿ ಬಡ- ಮಧ್ಯಮವರ್ಗದವರಿಗೆ ಮಾತ್ರ ಆರ್ಥಿಕ ಆಧಾರಿತ ಮೀಸಲಾತಿಯನ್ನು ಒದಗಿಸಿ ಬ್ರಾಹ್ಮಣಶಾಹಿಯನ್ನು ಅಲ್ಪಸ್ವಲ್ಪ ನಿಯಂತ್ರಿಸುತ್ತಿದ್ದ ಜಾತಿ ಆಧಾರಿತ ಮೀಸಲಾತಿಯ ಬುನಾದಿಯನ್ನೆ ಅಲುಗಾಡಿಸುವ ಸಾಮಾಜಿಕ ನ್ಯಾಯದ ಮೇಲಿನ ಬ್ರಾಹ್ಮಣಶಾಹಿ ದಾಳಿಯನ್ನು ಹಿಂದೂತ್ವ ಫ಼್ಯಾಶಿಸಂ ತೀವ್ರಗೊಳಿಸಿದೆ.

ಮತ್ತೊಂದು ಕಡೆ , ಸಂಪನ್ಮೂಲಗಳ ಅರೆಬರೆ ರಾಷ್ಟ್ರೀಕರಣ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಮೂಲಕ ಬಂಡವಾಳಶಾಹಿಯನ್ನು ಅಲ್ಪಸ್ವಲ್ಪ ನಿಯಂತ್ರಿಸುತ್ತಾ ದಮನಿತ ಜಾತಿಗಳ ಒಂದು ಸ್ತರಕ್ಕೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದ್ದ ಉದ್ಯಮಗಳ ಖಾಸಗೀಕರಣದ ಮೂಲಕ ಖಾಸಗಿ ಬಂಡವಾಳಶಾಹಿಯನ್ನು ಅರ್ಥಾತ್ ಬ್ರಾಹ್ಮಣೀಯ ಬಂಡವಾಳಶಾಹಿಯನ್ನು ಗಟ್ಟಿಗೊಳಿಸುತ್ತಿದೆ.
ಆ ಮೂಲಕ ಈ ದೇಶ ದಲಿತ-ದಮನಿತರಿಗೆ ಮತ್ತು ಬಡವರಿಗೆ ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ ಎರಡನ್ನೂ ವಂಚಿಸುವ ದಾಳಿಯನ್ನು ಮೋದಿ ನೇತೃತ್ವದ ಹಿಂದೂತ್ವ ಫ಼್ಯಾಸಿಸಂ ನಡೆಸುತ್ತಿದೆ.
ವಿಪರ್ಯಾಸವೆಂದರೆ ಈ ಎರಡೂ ಬಗೆಯ ವಂಚಿತರು ಸಮಾನ ಶತ್ರುವಿನ ವಿರುದ್ಧ ಹೋರಾಡದಂತೆ ಆರ್ಥಿಕ ನ್ಯಾಯ ಮತ್ತು ಸಾಮಾಜಿಕ ನ್ಯಾಯಗಳನ್ನು ಪರಸ್ಪರ ಎದುರಾಳಿಗಳನ್ನಾಗಿ ನಿಲ್ಲಿಸುವ ಬ್ರಾಹ್ಮಣಿಯ ಕುತಂತ್ರದಲ್ಲಿ ಮೋದಿ ಸರ್ಕಾರ ಯಶಸ್ಸನ್ನು ಸಾಧಿಸಿದೆ.

ಆರ್ಥಿಕ ಅನ್ಯಾಯ ಮತ್ತು ಸಾಮಾಜಿಕ ಅನ್ಯಾಯಗಳು ಎರಡೂ ಪರಸ್ಪರ ಸಂಬಂಧವಿರುವ ಕ್ರೌರ್ಯಗಳೇ. ಆದರ ನಿವಾರಣೆಗೆ ಬೇರೆಬೇರೆ ಬಗೆಯ ಪರಿಹಾರಗಳ ಅಗತ್ಯಗಳಿವೆ.

"ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ನ್ಯಾಯ"

ಏಕೆಂದರೆ ಈ ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ಲಾಭಕೋರ ಬಂಡವಾಳಶಾಹಿ ವ್ಯವಸ್ಥೆ ಇನ್ನಷ್ಟು ತೀವ್ರಗೊಳಿಸುತ್ತಿದೆ. ಹಾಗೂ ಈ ಬಡತನವು ಜಾತಿ ಸಮುದಾಯಗಳನ್ನು ಮೀರಿ ಎಲ್ಲೆಡೆ ಇದೆ. ಮೇಲ್ಜಾತಿಗಳಲ್ಲೂ ಬಡವರಿದ್ದರೂ ಶತಮಾನಗಳಿಂದ ತುಳಿತಕ್ಕೊಳಗಾದ ಜಾತಿ ಮತ್ತು ಸಮುದಾಯಗಳಲ್ಲೇ ಬಡತನದ ಪ್ರಮಾಣವೂ ಹೆಚ್ಚು. ಸಿನ್ಹೋ ಸಮಿತಿಯ ವರದಿಯ ಪ್ರಕಾರ ಬಡತನ ರೇಖೆಯಿಂದ ಕೆಳಗಡೆ ಇರುವ ಶೇ. 82 ರಷ್ಟು ಜನ ದಲಿತ , ಆದಿವಾಸಿ ಹಾಗೂ ಒಬಿಸಿ ಸಮುದಾಯಗಳಿಗೆ ಸೇರಿದವರು. ಅಷ್ಟು ಮಾತ್ರವಲ್ಲ. ವಂಚಿತ ಸಮುದಾಯಗಳಲ್ಲಿನ ಬಡತನದ ಬರ್ಬರತೆ ಮೇಲ್ಜಾತಿಗಳ ಬಡತನಕ್ಕಿಂತ ಇನ್ನೂ ಕ್ರೂರವಾದದ್ದು.

ಅದೇನೇ ಇದ್ದರೂ ಈ ಬಡತನಕ್ಕೆ ಸಂಪತ್ತೆಲ್ಲಾ ಕೆಲವರಲ್ಲಿ ಮಾತ್ರ ಸೇರುವಂತೆ ಮಾಡುವ ಬಂಡವಾಳಶಾಹಿ ವ್ಯವಸ್ಥೆಯೇ ಕಾರಣ. ಈ ದೇಶದ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆ ಕಾರಣದಿಂದ ಬಡತನದ ಪರಿಣಾಮಗಳಲ್ಲಿ ಏರುಪೇರುಗಳಿದ್ದರೂ ಬಂಡವಾಳಶಾಹಿಗೆ ಎಲ್ಲಾ ಬಡವರೂ ಬಲಿಯಾಗುತ್ತಿದ್ದಾರೆ. ಬಡತನವನ್ನು ಹೋಗಲಾಡಿಸಲು ಮತ್ತು ಆರ್ಥಿಕ ನ್ಯಾಯವನ್ನು ಸಾಧಿಸಲು ಪ್ರಾಥಮಿಕವಾಗಿ ಬಂಡವಾಳಶಾಹಿ ವ್ಯವಸ್ಥೆ ನಾಶವಾಗಿ ಸಂಪತ್ತು ಮತ್ತು ಅವಕಾಶಗಳು ಸಮಾನವಾಗಿ ಹಂಚಿಕೆಯಾಗಲ್ಪಡುವ ಸಮಾನತೆ ಆಧಾರಿತ ಆರ್ಥಿಕ ವ್ಯವಸ್ಥೆ ಜಾರಿಯಾಗಬೇಕು. ಅಲ್ಲಿಯವರೆಗೂ ಬಡತನದಿಂದ ಮೇಲೆತ್ತುವ ಹಾಗೂ ಘನತೆಯಿಂದ ಬದುಕುವಷ್ಟು ಅವಕಾಶಗಳನ್ನು ಮತ್ತು ಆದಾಯಗಳನ್ನು ಸರ್ಕಾರಗಳು ಖಾತರಿಗೊಳಿಸಬೇಕು. ಇವು ಆರ್ಥಿಕ ನ್ಯಾಯವನ್ನು ಒದಗಿಸುವ ಕ್ರಮಗಳು.

ಹಾಗೆಯೇ ಈ ದೇಶದಲ್ಲಿ ಆರ್ಥಿಕ ಅನ್ಯಾಯಗಳ ಜೊತೆಜೊತೆಗೆ ಸಾಮಾಜಿಕ ಮೂಲದ ಅನ್ಯಾಯಗಳು ಬೆಸೆದುಕೊಂಡಿವೆ. ಹುಟ್ಟಿನ ಕಾರಣಕ್ಕಾಗಿಯೇ ಒಂದು ಸಮುದಾಯ ಮತ್ತು ಜಾತಿಯನ್ನು ಅಧಿಕಾರ, ಜ್ಞಾನ ಮತ್ತು ಸಂಪತ್ತಿನಿಂದ ವಂಚಿಸಿರುವ ಸಾಮಾಜಿಕ ಅನ್ಯಾಯವನ್ನು ಸಾಂಸ್ಥೀಕರಿಸಿರುವ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆ ಇದೆ. ಈ ಸಾಮಾಜಿಕ ತಾರತಮ್ಯದ ಕಾರಣಕ್ಕಾಗಿಯೇ ಇಡೀ ಜಾತಿ ಮತು ಸಮುದಾಯಗಳು ಹಿಂದುಳಿಸಲ್ಪಟ್ಟಿವೆ. ಆದ್ದರಿಂದ ವ್ಯಕ್ತಿಯ ಅರ್ಹತೆ ಮತ್ತು ಪ್ರತಿಭೆಯನ್ನು ಜಾತಿಯ ಕಾರಣಕ್ಕಾಗಿಯೇ ಗುರುತಿಸದೆ ನಿರಾಕರಿಸುವ ಈ ದೇಶದ ಆನಾಗರಿಕ ಜಾತಿ ವ್ಯವಸ್ಥೆಯಿಂದ ಉದ್ಭವಿಸಿರುವ ಸಾಮಾಜಿಕ ಅನ್ಯಾಯವನ್ನು ಹೋಗಲಾಡಿಸಬೇಕೆಂದರೆ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು. ಅಲ್ಲಿಯವರೆಗೆ ಪರಂಪರಾನುಗತವಾಗಿ ಜಾತಿ ವ್ಯವಸ್ಥೆಯ ಅನ್ಯಾಯಗಳಿಗೆ ಮತ್ತು ಅದರಿಂದಾಗಿ ತಾರತಮ್ಯ ಮತ್ತು ಹಿಂದಿಳಿದಿರುವಿಕೆ, ಬಡತನಗಳಿಗೆ ಬಲಿಯಾಗಿರುವ ಜಾತಿಗಳಿಗೆ ಮತ್ತು ಸಮುದಾಯಗಳಿಗೆ ಆಡಳಿತದಲ್ಲಿ, ಉದ್ಯೋಗ ಮತ್ತು ಶಿಕ್ಷಣಗಳಲ್ಲಿ ಜಾತಿ ಆಧಾರಿತವಾಗಿ ಆದ್ಯತೆಯ ಮೇಲೆ ಅವಕಾಶಗಳನ್ನು ಮೀಸಲಿರಿಸಬೇಕು. ಈ ವಂಚಿತ ಜಾತಿಗಳಿಗೆ ಆದ್ಯತೆಯ ಮೀಸಲು ಒದಗಿಸುವುದೇ ಸಾಮಾಜಿಕ ನ್ಯಾಯದ ಕಾರ್ಯಕ್ರಮ.

ಹೀಗೆ ಆರ್ಥಿಕ ಅನ್ಯಾಯವನ್ನು ಕೊನೆಗಣಿಸಲು ಬಂಡವಾಳಶಾಹಿಯನ್ನು ಕೊನೆಗಾಣಿಸಬೇಕು ಮತ್ತು ಸಾಮಾಜಿಕ ಅನ್ಯಾಯವನ್ನು ಕೊನೆಗಾಣಿಸಲು ಬ್ರಾಹ್ಮಣಶಾಹಿ ಮತ್ತದರ ಜಾತಿ ವ್ಯವಸ್ಥೆಯನ್ನು ಕೊನೆಗಾಣಿಸಬೇಕು. ಅಲ್ಲಿಯವರೆಗೆ ಜಾತಿ ಆಧಾರಿತ ಮೀಸಲಾತಿ ಮತ್ತು ಹಲವಾರು ಬಡತನ ನಿರ್ಮೂಲನ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆನ್ನುವುದು ನಮ್ಮ ಸಂವಿಧಾನದ ಮಾರ್ಗದರ್ಶನವೂ ಆಗಿದೆ.
ಜೊತೆಗೆ ಜಾತಿ ಆಧಾರಿತ ಮೀಸಲಾತಿ ಈ ದೇಶದ ಆಡಳಿತ ಮತ್ತು ಅಧಿಕಾರದ ಪ್ರಜಾತಂತ್ರೀಕರಣದ ಭಾಗವೂ ಆಗಿದೆ. ಏಕೆಂದರೆ ಮೀಸಲಾತಿಯ ಮೂಲ ಉದ್ದೆಶವೇ ಉದ್ಯೋಗ, ರಾಜಕೀಯ ಅಧಿಕಾರ ಮತ್ತು ಶಿಕ್ಷಣದಲ್ಲಿ ವಂಚಿತ ಸಮುದಾಯ ಮತ್ತು ಜಾತಿಗಳಿಗೆ ತಕ್ಕಷ್ಟು ಪ್ರಾತಿನಿಧ್ಯವನ್ನು ಒದಗಿಸುವುದಾಗಿದೆ. ಅದರಿಂದಾಗಿ ಪರೋಕ್ಷವಾಗಿ ಆ ಸಮುದಾಯಗಳಲ್ಲಿ ಒಂದು ಸ್ತರದವರ ಬಡತನವೂ ನಿರ್ಮೂಲನೆಯಾಗಬಹುದಾದರೂ ಅದರ ನೈಜ ಪ್ರಜಾತಾಂತ್ರಿಕ ಉದ್ದೇಶ ಪ್ರಾತಿನಿಧ್ಯದ ಮೂಲಕ ಪ್ರಭುತ್ವದ ಪ್ರಜಾತಂತ್ರೀಕರಣವೇ ಆಗಿದೆ. ಹೀಗಾಗಿ ಮೀಸಲಾತಿಯನ್ನು ಪ್ರಧಾನವಾಗಿ ಒಂದು "ಸಾಮಾಜಿಕ ನ್ಯಾಯದ ಅಸ್ತ್ರ"ವನ್ನಾಗಿ ಪರಿಗಣಿಸಬೇಕೇ ವಿನಾ "ಆರ್ಥಿಕ ನ್ಯಾಯದ ಅಥವಾ ಬಡತನ ನಿವಾರಣೆ"ಯ ಕಾರ್ಯಕ್ರಮವನ್ನಾಗಿ ಅಲ್ಲ.

ಆದ್ದರಿಂದಲೇ ಮೀಸಲಾತಿಗೆ ಯಾವತ್ತಿಗೂ ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯೇ ಪ್ರಧಾನ ಮಾನದಂಡವಾಗಿಡಲಾಗಿತ್ತೇ ವಿನಾ ಕೇವಲ ಆರ್ಥಿಕ ಮಾನದಂಡದ ಆಧಾರದಲ್ಲಿ ಮೀಸಲಾತಿಯನ್ನು ಕೊಡಲಾಗದು ಎಂಬುದೇ ಇಂದಿರಾ ಸಾಹನಿ ಪ್ರಕರಣದಲ್ಲಿ ತೀರ್ಪನ್ನಿತ್ತ ಸುಪ್ರಿಂ ಕೋರ್ಟಿನ ಒಂಭತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠವನ್ನೂ ಒಳಗೊಂಡಂತೆ ಬಹುಪಾಲು ನ್ಯಾಯಾದೇಶಗಳ ತಾತ್ಪರ್ಯವಾಗಿತ್ತು. (2015ರಲ್ಲಿ ಸುಪ್ರಿಂ ಕೋರ್ಟಿನ ದ್ವಿಸದಸ್ಯ ಪೀಠವೊಂದು ಮಾತ್ರ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಮಾತ್ರ ಮೀಸಲಾತಿ ಮಾನದಂಡನ್ನಾಗಿ ಬಳಸುವುದರ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿತ್ತು).

ಪ್ರಭುತ್ವವು ಎಲ್ಲರನ್ನು ಸಮಾನವಾಗಿ ಕಾಣಬೇಕೆಂಬ ಆರ್ಟಿಕಲ್ 15ಕ್ಕೆ, ದುರ್ಬಲ ಜಾತಿಗಳ ಪರವಾಗಿ ಸಕಾರಾತ್ಮಕ ತಾರತಮ್ಯ ಮಾಡುವ ಮೀಸಲಾತಿ ನೀತಿ ಒಂದು ಅಪವಾದ ಎನ್ನುವ ಧೋರಣೆಯನ್ನು ಮೊದಲು ಸುಪ್ರೀಂ ಕೋರ್ಟು ಹೊಂದಿತ್ತು. ಆದರೆ ದಮನಿತ ಸಮುದಾಯಗಳ ರಾಜಕೀಯ ಶಕ್ತಿ ಹೆಚ್ಚುತ್ತಿದ್ದಂತೆ ಜಾತಿ ಆಧಾರಿತ ಮೀಸಲಾತಿಯು ಸಮಾನತೆಗೆ ಅಪವಾದವಲ್ಲ, ಬದಲಿಗೆ ಅದೇ ಸಾಮಾಜಿಕ ಸಮಾನತೆಯ ದಾರಿ ಎಂಬ ಧೋರಣೆ ಬೇರೂರುತ್ತಿತ್ತು.

"EWS ಮೀಸಲಾತಿ- ಜಾತಿ ತಾರತಮ್ಯದ ನಿರಾಕರಣೆಯತ್ತ ಮೊದಲ ಹೆಜ್ಜೆ"

ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಈ ಧೋರಣೆಗಳು ಬದಲಾಗಿ ಹೋದವು. 2019ರಲ್ಲಿ ಸಂವಿಧಾನ ತಿದ್ದುಪಡಿಯ ಮೂಲಕ ಮೇಲ್ಜಾತಿ ಮೀಸಲಾತಿಯನ್ನು ಜಾರಿ ಮಾಡಿದ ಮೋದಿ ಸರ್ಕಾರ ಇಂದಿರಾ ಸಾಹನಿ ಕೇಸಿನಲ್ಲಿ ಎದುರಾದ ನ್ಯಾಯಾಂಗ ವಿರೋಧವನ್ನು ಮೂಲೆಗುಂಪು ಮಾಡಿತು. ಈ ನೀತಿಯ ಮೂಲಕ ಜಾತಿ ಆಧಾರಿತ ಸಾಮಾಜಿಕ ಅನ್ಯಾಯಕ್ಕೆ ಪ್ರಾತಿನಿಧ್ಯದ ಮುಲಾಮು ಹಚ್ಚಿದ್ದ ಸಂವಿಧಾನಕ್ಕೆ ಆಳವಾದ ಗಾಯ ಮಾಡಿತು. ಮೀಸಲಾತಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಕೈಬಿಟ್ಟು ಅರ್ಥಿಕ ಹಿಂದುಳಿದಿರುವಿಕೆಯನ್ನು ಏಕ ಮಾತ್ರ ಮಾನದಂಡವನ್ನಾಗಿ ಮಾಡುವ ಬ್ರಾಹ್ಮಣಶಾಹಿಯ ದಶಕಗಳ ಕುತಂತ್ರವನ್ನು ಮೋದಿ ಸರ್ಕಾರ ಈಡೇರಿಸಿತು.

ಆ ಮೂಲಕ ಸಾಮಾಜಿಕ ಅಸಮಾನತೆಯ ಐತಿಹಾಸಿಕ ಸತ್ಯವನ್ನು ವರ್ತಮಾನದಲ್ಲಿ ಅಸಂಗತ ಮಾಡುವ ಅದರ ಹೊಸ ಯೋಜನೆ ಫ಼ಲಿಸಿದೆ. ಜಾತಿ ಶೋಷಣೆ ಎಂಬುದು ಆಗಿ ಹೋದ ಕಥೆ, ಜಾತಿ ಎಂಬುದು ಶೋಷಕವಲ್ಲ, ಅದು ಈ ದೇಶದ ಅಸ್ಮಿತೆ ಎಂದೆಲ್ಲಾ ಪ್ರತಿಪಾದಿಸುತ್ತಾ ಅದು ಬರೆಯುತ್ತಿರುವ ಹೊಸ ಕಥನಕ್ಕೆ ಈ EWS ಮೀಸಲಾತಿಯ ತರ್ಕ ಮತ್ತಷ್ಟು ಪುಷ್ಟಿ ಕೊಡುತ್ತದೆ. ಬ್ರಾಹ್ಮಣಶಾಹಿಯನ್ನು ಬಲಿಷ್ಟಗೊಳಿಸುತ್ತದೆ.
ಮತ್ತೊಂದೆಡೆ ಈ ಬಡವರಲ್ಲಿ ದಲಿತ- ಒಬಿಸಿ ಬಡವರನ್ನು ಹೊರಗಿಡುವ ಮೂಲಕ ಮತ್ತು ಮೇಲ್ಜಾತಿ ಬಡತನಕ್ಕೆ ವಾರ್ಷಿಕ 8 ಲಕ್ಷ ಆದಾಯದ ಮೇಲ್ಮಿತಿಯನ್ನು ನಿಗದಿ ಮಾಡುವ ಮೂಲಕ ಸಾಂವಿಧಾನಿಕವಾಗಿಯೇ ಮೇಲ್ಜಾತಿಗಳಿಗೆ ಇತತರಿಗೆ ಇಲ್ಲದ ವಿಶೇಷ ಸ್ಥಾನವನ್ನು ಒದಗಿಸಿದೆ.

ಹಾಗೂ ಶೇ.50ರ ಮೀಸಲಾತಿ ಮೇಲ್ಮಿತಿಯನ್ನು ಮೀರಿ ಸಾಮಾನ್ಯ ವರ್ಗದಲ್ಲಿದ್ದ ಶೇ. 50 ಮೀಸಲಾತಿಯಲ್ಲಿ ಶೇ. 10 ಅನ್ನು ಕತ್ತರಿಸಿ ಮೇಲ್ಜಾತಿಗಳಿಗೆ ಮಾತ್ರ ಮೀಸಲಿರಿಸಿದೆ. ಇದರಿಂದಾಗಿ ಸಾಮಾನ್ಯ ವರ್ಗದ ಕಟ್ ಆಫ್ ಕೋಟಾಕೆ ಬೇಕಾದ ಅಂಕಗಳನ್ನು ಪಡೆದು ಸಾಮಾನ್ಯ ವರ್ಗದ ಕೋಟಾದಲ್ಲಿ ಕೂಡಾ ಸ್ಥಾನ ಪಡೆಯುತ್ತಿದ್ದ ದಲಿತ -ಒಬಿಸಿ ಅಭ್ಯರ್ಥಿಗಳಿಗೆ ಶೇ. 10 ರಷ್ಟು ಅವಕಾಶ ಕಡಿತವಾಗಿದೆ. ಇದನ್ನು ಸುಪ್ರಿಂ ಕೋರ್ಟಿನ ಬಹುಮತದ ತೀರ್ಪು ಒಂದು ಅನ್ಯಾಯವೆಂದೇ ಪರಿಗಣಿಸಲಾಗದು ಎಂದು ಹೇಳಿದೆ. ಹಾಗೂ ಬಹುಮತದ ತೀರ್ಪು ನೀಡಿರುವ ನ್ಯಾಯಾಧೀಶರುಗಳು ಆದಷ್ಟು ಬೇಗ ಜಾತಿ ಆಧಾರಿತ ಮೀಸಲಾತಿಯನ್ನು ರದ್ದು ಮಾಡುವ ಮೂಲಕವೇ ಜಾತಿ ರಹಿತ ಸಮಾಜ ಸೃಷ್ಟಿಯಾಗುತ್ತದೆ ಎಂಬ ಬೇಕಾಬಿಟ್ಟಿ ಅಭಿಪ್ರಾಯವನ್ನು ಸಾಂವಿಧಾನಿಕ ಪೀಠದಲ್ಲಿ ಕೂತು ಸೂಚಿಸಿದ್ದಾರೆ. ಇದು ಬರಲಿರುವ ಬ್ರಾಹ್ಮಣಶಾಹಿ ದಾಳಿಗಳ ಮುನ್ಸೂಚನೆಯೂ ಆಗಿರಬಹುದು.

ಹೀಗಾಗಿ..

EWS ಮೀಸಲಾತಿ ಎಂಬುದು ಸಂವಿಧಾನ ಒದಗಿಸಿದ ಸಾಮಾಜಿಕ ನ್ಯಾಯದ ಬುನಾದಿಯ ಮೇಲೆ ಮೋದಿ ನೇತೃತ್ವ ಹಿಂದೂತ್ವ ಫ಼್ಯಾಶಿಸಂ ನಡೆಸಿರುವ ಬ್ರಾಹ್ಮಣಶಾಹಿ ದಾಳಿಯೇ ಆಗಿದೆ. ಏಕೆಂದರೆ ಇದು

1. ಜಾತಿ ಆಧಾರಿತ ತಾರತಮ್ಯದ ಇತಿಹಾಸವನ್ನು ಮತ್ತು ವರ್ತಮಾನವನ್ನು ನಗಣ್ಯಗೊಳಿಸುತ್ತದೆ.

2. ಮೇಲ್ಜಾತಿ ಬಡ-ಮಧ್ಯಮ ವರ್ಗಗಳನ್ನು ಇತರ ಬಡ -ಮಧ್ಯಮ ವರ್ಗಗಳಿಗಿಂತ ವಿಶೇಷ ಸ್ಥಾನದಲ್ಲಿ ಇರಿಸುತ್ತದೆ. ಇದು ಮೇಲ್ಜಾತಿಗಳು ಮನುವಾದಿ ಜಾತಿ ವ್ಯವಸ್ಥೆಯಲ್ಲಿ ಪಡೆದುಕೊಂಡಿದ್ದ ವಿಶೇಷ ಸ್ಥಾನಮಾನಗಳ ಮುಂದುವರಿಕೆಯಂತಿದೆ.

3. ಹಾಗೂ, ದಲಿತ-ದಮನಿತ ಸಮುದಾಯಗಳಿಗೆ ಸಿಗುತ್ತಿದ್ದ ಅವಕಾಶಗಳನ್ನು ಕಿತ್ತು ಮೇಲ್ಜಾತಿಗಳಿಗೆ ಒದಗಿಸುತ್ತದೆ.

ಈ ಮೂರೂ ತಾತ್ವಿಕ ಹಾಗೂ ಪ್ರಾಯೋಗಿಕ ಅಂಶಗಳು ಒಟ್ಟು ಸೇರಿ ಬ್ರಾಹ್ಮಣಶಾಹಿಯನ್ನು ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ಗಟ್ಟಿಗೊಳಿಸುತ್ತಿದೆ.

ಹಾಗೆ ನೋಡಿದರೆ ಸಾರ್ವಜನಿಕ ಉದ್ಯಮಗಳ, ಆಡಳಿತದ ಖಾಸಗೀಕರಣವೂ ಸಹ ದಲಿತ-ದಮನಿತ ಸಮುದಾಯಗಳ ಅವಕಾಶಗಳನ್ನು ತಾತ್ವಿಕವಾಗಿ ಹಾಗೂ ಪ್ರಾಯೋಗಿಕವಾಗಿ ಕತ್ತರಿಸಿ ಹಾಕುವ ಬ್ರಾಹ್ಮಣಶಾಹಿ ಯೋಜನೆಯ ಇನ್ನೂ ಪರಿಣಾಮಕಾರಿ ಅಸ್ತ್ರವನ್ನಾಗಿ ಮೋದಿ ಸರ್ಕಾರದ ನೇತೃತ್ವದಲ್ಲಿ ಹಿಂದುತ್ವ ಫ಼್ಯಾಶಿಸಂ ಬಳಸುತ್ತಾ ಬಂದಿದೆ.

"ಖಾಸಗಿಕಾರಣ- ಕಾರ್ಪೊರೇಟ್ ಬ್ರಾಹ್ಮಣ್ಯ"

1991ರ ನಂತರದಲ್ಲಿ ಖಾಸಗೀಕರಣ, ಜಾಗತೀಕರಣ ನೀತಿಗಳು ಮೋದಿ ಕಾಲದಲ್ಲಿ ಅದರ ಉತ್ತುಂಗವನ್ನು ಮುಟ್ಟಿವೆ. ಕಲ್ಯಾಣ ರಾಜ್ಯದ ಬದಲಿಗೆ ಕಾರ್ಪೊರೇಟ್ ರಾಜ್ಯ, ಸಾಮಾಜಿಕ ನ್ಯಾಯದ ಬದಲಿಗೆ ಸಮರ್ಥ ಆಡಳಿತ, ಉತ್ತರದಾಯಿತ್ವದ ಬದಲಿಗೆ ಖಾಸಗಿ ಸ್ವಾಯತ್ತತೆಗಳು ಮೌಲ್ಯಗಳಾದವು. ಕನಿಷ್ಟ ಸರ್ಕಾರ, ಗರಿಷ್ಟ ಆಡಳಿತ ಇವೆಲ್ಲಾ ಆಡಳಿತದ ಪ್ರಾತಿನಿಧ್ಯದಲ್ಲಿ ಸಾಮಾಜಿಕ ನ್ಯಾಯವನ್ನು ನಿರಾಕರಿಸುವ ಸಾಧನವಾದರೆ, ಶಿಕ್ಷಣ ಮತ್ತು ಉದ್ಯಮಗಳಲ್ಲಿ ಖಾಸಗೀಕರಣ ನೀತಿಗಳು ಸಾಂವಿಧಾನಾತ್ಮಕವಾಗಿ ದಲಿತ ಹಿಂದುಳಿದ ಸಮುದಾಯಗಳಿಗೆ ಅವಕಾಶಗಳನ್ನು ಮತ್ತು ಪ್ರಾತಿನಿಧ್ಯವನ್ನು ನಿರಾಕರಿಸಿ ಮರು ಬ್ರಾಹ್ಮಣಶಾಹೀಕರಿಸುವ ಸಾಧನವಾಗಿ ಜಾರಿಯಾಗಿವೆ.

ಇಂದು ಮೋದಿ ಸರ್ಕಾರದ ಅವಧಿಯಲ್ಲಿ ದೇಶದ ಆಡಳಿತ ಮತ್ತು ಆರ್ಥಿಕತೆಯ ಕಾರ್ಪೊರೇಟೀಕರಣ ಮತ್ತು ಬ್ರಾಹ್ಮಣೀಕರಣಗಳು ಉತ್ತುಂಗವನ್ನು ಮುಟ್ಟಿರುವ ಹೊತ್ತಿನಲ್ಲಿ ಮೀಸಲಾತಿಯ ಮೇಲೆ ಖಾಸಗೀಕರಣದ ಪರಿಣಾಮವನ್ನೂ ಅರ್ಥಮಾಡಿಕೊಳ್ಳದ ಸಾಮಾಜಿಕ ನ್ಯಾಯದ ಹೋರಾಟ ಆಳುವವರ ವಿಧಿಸಿರುವ ಚೌಕಟ್ಟಿನಲ್ಲೇ ಅಳುತ್ತಾ ಕೂರಬೇಕಾದ ಅಪಾಯವನ್ನು ಒಡ್ಡಿದೆ.

"ಖಾಸಗಿಯಲ್ಲಿ ಮೀಸಲಾತಿ: ಹಾವಿನ ಹಂಗು, ಬಾಲದ ಜೊತೆ ಚೌಕಾಸಿ?"

ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಸಿಗುವುದು ಸರ್ಕಾರಿ ವಲಯದಲ್ಲೇ ವಿನಾ ಖಾಸಗಿ ವಲಯದಲ್ಲಲ್ಲ. ಖಾಸಗಿ ವಲಯಕ್ಕೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದರೆ ಸರ್ಕಾರ ಕೆಲವು ಉತ್ತೇಜನಗಳನ್ನು ಘೋಷಿಸಬಹುದೇ ವಿನಾ ಮೀಸಲಾತಿ ಕೊಡದಿದ್ದರೆ ಶಿಕ್ಷಿಸುವ ಅವಕಾಶ ನಮ್ಮ ಸಂವಿಧಾನದಲ್ಲಿಲ್ಲ. ಅಷ್ಟು ಮಾತ್ರವಲ್ಲ. ದೇಶದ ಉದ್ಧಾರವಾಗಾಗುವುದೇ ಖಾಸಗಿ ದೇಶೀ ಮತ್ತು ವಿದೇಶೀ ಬಂಡವಾಳಗಳ ಹೂಡಿಕೆಯಿಂದ ಮಾತ್ರ ಎಂಬ ಸಂವಿಧಾನ ವಿರೋಧಿ ತತ್ವವು ಎಡದಿಂದ- ಬಲದವರೆಗಿನ ಎಲ್ಲಾ ರಾಜಕೀಯ ಪಕ್ಷಗಳ ಒಪ್ಪಿಗೆ ಪಡೆದಿರುವುದರಿಂದ ಖಾಸಗಿಯನ್ನು ಸಾಮಾಜಿಕ ನ್ಯಾಯಕ್ಕೆ ಬಗ್ಗಿಸುವ ರಾಜಕೀಯ ಇಚ್ಚಾಶಕ್ತಿ ಯಾವ ಚುನಾವಣಾ ರಾಜಕೀಯ ಪಕ್ಷಗಳಿಗೂ ಇಲ್ಲ. ಹೀಗಾಗಿ 1991ರಿಂದ ಸರ್ವ ಸಮ್ಮತವಾಗಿ ಈ ದೇಶದ ಮೀಸಲಾತಿಯ ಮೇಲೆ ಮತ್ತು ಸಾಮಾಜಿಕ ನ್ಯಾಯದ ಮೇಲೆ ರಾಜಕೀಯ- ಆರ್ಥಿಕ- ಸಾಂಸ್ಕೃತಿಕ ದಾಳಿ ನಡೆಯುತ್ತಾ ಬಂದಿದೆ.

ಜೊತೆಗೆ ಈ ದೇಶದ ಒಟ್ಟಾರೆ ಉದ್ಯೋಗ ಸೃಷ್ಟಿಯಲ್ಲಿ ಶೇ. 92 ಭಾಗ ಸೃಷ್ಟಿಯಾಗುವುದು ಅಸಂಘಟಿತ ವಲಯದಲ್ಲಿ. ಕೃಷಿ, ಬೀದಿ ವ್ಯಾಪಾರ, ಸಣ್ಣ, ಅತಿಸಣ್ಣ ಉದ್ದಿಮೆ..ಇತ್ಯಾದಿಗಳಲ್ಲಿ. ಇನ್ನು ಶೇ. 8 ಭಾಗ ಮಾತ್ರ ಸಂಘಟಿತ ಎಂದರೆ ನಿಗದಿತ ಸಂಬಳ, ಸೌಲಭ್ಯ, ಪೆನ್ಷನ್, ಕಾರ್ಮಿಕ ಹಕ್ಕುಗಳು ಇರುವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ.

"ಹೆಚ್ಚು ಉದ್ಯೋಗ-ಮೀಸಲಾತಿ ಕೊಡುತ್ತಿರುವುದು ಸರ್ಕಾರಿ ವಲಯವೇ"

ನವದೆಹಲಿಯ ಇನ್ಸ್ಟಿಟ್ಯೂಟ್ ಫಾರ್ ಸ್ಟಡೀಸ್ ಆಫ್ ಇಂಡಸ್ಟಿಯಲ್ ಡೆವಲಪ್ಮೆಂಟ್ (ಐಎಸ್‌ಐಡಿ) ಸಂಸ್ಥೆಯು ಮಾಡಿರುವ ಅಧ್ಯಯನದ ಪ್ರಕಾರ ಈ ಸಂಘಟಿತ ವಲಯದೊಳಗೆ 1981 ರಲ್ಲಿ 1.65 ಕೋಟಿ ಜನರು ಸಾರ್ವಜನಿಕ ವಲಯದಲ್ಲಿ ಕೆಲಸಮಾಡುತ್ತಿದ್ದರು. ಇದರಲ್ಲಿ ಶೇ.40ಭಾಗದಷ್ಟು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆಡಳಿತ ಯಂತ್ರಾಂಗ ಸೃಷ್ಟಿಸಿದ್ದರೆ, ಉಳಿದದ್ದು ಸಾರ್ವಜನಿಕ ವಲಯದ ಉದ್ಯಮಗಳು ಸೃಷ್ಟಿಸಿದ್ದವು.

ಅದರ ಅರ್ಥ 1.65 ಕೋಟಿ ಉದ್ಯೋಗಗಳಲ್ಲಿ ಆಗ ಶೇ. 22.3 ರಷ್ಟು ಉದ್ಯೋಗಗಳು ಅಂದರೆ 35 ಲಕ್ಷದಷ್ಟು ಉದ್ಯೋಗಾವಕಾಶಗಳು ಮೀಸಲಾಗಿರುತ್ತಿತ್ತು. ಅದರಲ್ಲಿ ಅರ್ಧದಷ್ಟು ಬ್ಯಾಕ್ ಲಾಗ್ ಆಗಿ ಬಾಕಿ ಉಳಿಯುತ್ತಿದೆ ಎನ್ನುವುದು ಬೇರೆ ಮಾತು.

ಇದು 1997ರಲ್ಲಿ 1.95 ಕೋಟಿಗೆ ತಲುಪಿತು. 1989ರಲ್ಲಿ ಮಂಡಲ್ ವರದಿ ಜಾರಿಯಾಗಿದ್ದರಿಂದ ಇದರಲ್ಲಿ ಅಂದಾಜು 1 ಕೋಟಿ ಉದ್ಯೋಗಗಳು ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ದಕ್ಕಿತು. ಆಗಲೂ ಅದರ ಪೂರ್ತಿ ಲಾಭವನ್ನು ಪಡೆದುಕೊಳ್ಳುವಷ್ಟು ಸಾಧ್ಯತೆಗಳು ಈ ಸಮುದಾಯಗಳಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಯಿತು ಎಂಬುವುದು ಮತ್ತೊಂದು ವಿಷಯ. ಆದರೆ ಸಾರ್ವಜನಿಕ ಕ್ಷೇತ್ರವು ಹೆಚಾಗುತ್ತಿದ್ದರಿಂದ ಅಷ್ಟು ಅವಕಾಶವಂತೂ ದಲಿತ-ಹಿಂದುಳಿದ ಸಮುದಾಯಕ್ಕೆ ದಕ್ಕುತ್ತಿತ್ತು.

ಆದರೆ, ಅಲ್ಲಿಂದಾಚೆಗೆ 1997-2012ರ ಅವಧಿಯಲ್ಲಿ ಖಾಸಗೀಕರಣ, ಉದಾರೀಕರಣ ನೀತಿಗಳು ವೇಗವಾಗಿ ಜಾರಿಯಾಗತೊಡಗುತ್ತಾ ಸಾರ್ವಜನಿಕ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು 1.75 ಕೋಟಿಗೆ ಕುಸಿದಿತ್ತು.
ಅಂದರೆ ಈ ಅವಧಿಯಲ್ಲಿ ಖಾಸಗೀಕರಣದ ಜಾರಿಯಿಂದಾಗಿ ದಲಿತ -ಹಿಂದುಳಿದ ಸಮುದಾಯಗಳಿಗೆ ಕೇವಲ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಉದ್ದಿಮೆಗಳಲ್ಲಿ ದೊರೆಯಬೇಕಾಗಿದ್ದ 10 ಲಕ್ಷ ಉದ್ಯೋಗಾವಕಾಶಗಳು ಕಣ್ಮರೆಯಾದವು.

ಇದು 2014- 2022ರ ಮೋದಿ ಅವಧಿಯಲ್ಲಿ ಇನ್ನೂ ಶೀಘ್ರಗತಿಯಲ್ಲಿ ಕುಸಿದಿದೆ.
ಆದರೆ, 1981ರಲ್ಲಿ 65 ಲಕ್ಷ ಜನರಿಗೆ ಉದ್ಯೋಗ ಕೊಡುತ್ತಿದ್ದ ಖಾಸಗಿ ಸಂಘಟಿತ ಕ್ಷೇತ್ರ 40 ವರ್ಷಗಳ ನಂತರ 2019 ರ ವೇಳೆಗೆ ಸರ್ಕಾರಗಳಿಂದ ಸಕಲ ಸೌಲಭ್ಯಗಳನ್ನು ಪಡೆದುಕೊಂಡೂ ಸಹ ಉದ್ಯೋಗ ಸೃಷ್ಟಿಸಿದ್ದು ಕೇವಲ 98 ಲಕ್ಷಗಳನ್ನು ಮಾತ್ರ. ಅಂದರೆ ಕೇವಲ 30 ಲಕ್ಷ ಹೆಚ್ಚುವರಿ ಉದ್ಯೋಗಗಳನ್ನು ಮಾತ್ರ.
ಆದರೆ ಅವ್ಯಾವುವೂ ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಉದ್ಯೋಗಾವಕಾಶಗಳನ್ನು ನಿಯಮಬದ್ಧವಾಗಿ ಕಲ್ಪಿಸಲಿಲ್ಲ.

(http://111.93.232.162/pdf/ICSSR_TSP_PPS.pdf)

2020 ರ ನಂತರ ಆತ್ಮ ನಿರ್ಭರ ಭಾರತದ ಹೆಸರಿನಲ್ಲಿ ಮೋದಿ ಸರ್ಕಾರ ಖಾಸಗಿ ವಲಯವು ಉತ್ಪಾದನೆ ಹೆಚ್ಚಿಸಿ 60 ಲಕ್ಷ ಹೊಸ ಉದ್ಯೋಗಗಳನ್ನು ಕೊಡುತ್ತವೆ ಎಂಬ ನೆಪ ಒಡ್ಡಿ ಖಾಸಗಿ ಉದ್ಯಮಿಗಳಿಗೆ 2 ಲಕ್ಷ ಕೋಟಿಗೂ ಹೆಚ್ಚು ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ನೀಡಿತ್ತು. ಆದರೆ ಅವು ಕಳೆದ ಐದುವರ್ಷದಲ್ಲಿ ಸೃಷ್ಟಿಸಿರುವ ಉದ್ಯೋಗಗಳು 60 ಲಕ್ಷಗಳಲ್ಲ . ಬದಲಿಗೆ ಕೇವಲ 1,97,210 ಮಾತ್ರ. ಅದರಲ್ಲಿ ದಲಿತ- ದಮನಿತ ಸಮುದಾಯಗಳ ಪ್ರಾತಿನಿಧ್ಯ ಒಂದಂಕಿಯನ್ನು ದಾಟಿಲ್ಲ.

ಮತ್ತೊಂದು ಅಧ್ಯಯನದ ಪ್ರಕಾರ ಖಾಸಗೀಕರಣದ ನಂತರದ 25 ವರ್ಷಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಸೃಷ್ಟಿಯಾದ ಹೊಸ 6.1 ಕೋಟಿ ಉದ್ಯೋಗಗಳಲ್ಲಿ. ಶೇ. 92 ರಷ್ಟು ಉದ್ಯೋಗಗಳು ಅನೌಪಚಾರಿಕ ಅಂದರೆ ಯಾವುದೇ ಸಾಮಾಜಿಕ ನ್ಯಾಯ ಮಾತ್ರವಲ್ಲ ಕಾರ್ಮಿಕ ಹಕ್ಕು ಹಾಗೂ ಸೌಲಭ್ಯಗಳೂ ಇಲ್ಲದ ವಲಯದಲ್ಲಿ ಸೃಷ್ಟಿಯಾಗಿದ್ದವು.

(https://scroll.in/article/922863/data-check-90-of-jobs-created-in-india-after-liberalisation-were-in-the-informal-sector)

ಸಾರ್ವಜನಿಕ ವಲಯದ ಖಾಸಗೀಕರಣ ಎಂಬ ಈ ಮಹಾ ವಂಚನೆಯನ್ನು ಮಹಾ ಸಾಧನೆಯೆಂಬಂತೆ ಮೋದಿ ಸರ್ಕಾರ ಜನರ ಮುಂದಿಡುತ್ತಿದೆ. ಅದಕ್ಕೆ ಅವರ ಆಸ್ಥಾನ ಪಂಡಿತರು ಕೊಡುವ ಕಾರಣ ಸಾರ್ವಜನಿಕ ಉದ್ಯಮಗಳು ಸಾರ್ವಜನಿಕ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿವೆ ಎಂಬುದೇ ಆಗಿದೆ. ಆದರೆ ಇದು ನಿಜವೇ? ನೋಡೋಣ:

"ಲಾಭ ಗಳಿಸಿದರೂ ನಷ್ಟವೆನ್ನುವ ವಂಚಕ ಮೋದಿ ಸರ್ಕಾರ"

ಮೋದಿ ಸರ್ಕಾರವು ಕೇಂದ್ರ ಸರ್ಕಾರದ ಸುಫರ್ದಿನಲ್ಲಿರುವ ಸಾರ್ವಜನಿಕ ಕಂಪನಿಗಳ ಕಾಲಾವಧಿ ಸರ್ವೆಯನ್ನು 2019 ರಲ್ಲಿ ಬಿಡುಗಡೆ ಮಾಡಿದೆ. ಅದರ ಪೂರ್ಣ ಪಾಠ ಈ ಕೆಳಗಿನ ವೆಬ್ ವಿಳಾಸದಲ್ಲಿ ದೊರೆಯುತ್ತದೆ. :

https://dpe.gov.in/sites/default/files/PE_seurvey_ENG_VOL_1.pdf

ಮೇಲಿನ ವರದಿಯ ಪ್ರಕಾರ 2019 ರ ಡಿಸೆಂಬರ್ ವೇಳೆಗೆ ಭಾರತದಲ್ಲಿ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಸೇರಿದ 330 ಸಾರ್ವಜನಿಕ ಸಂಸ್ಥೆಗಳಿದ್ದವು. ಅವುಗಳಲ್ಲಿ ಒಟ್ಟಾರೆಯಾಗಿ ಈವರೆಗೆ 26 ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳವನ್ನು ತೊಡಗಿಸಲಾಗಿದೆ.

2018-19ರ ಸಾಲಿನಲ್ಲಿ ಆ 330 ಕಂಪನಿಗಳಲ್ಲಿ 178 ಕಂಪನಿಗಳು ಲಾಭ ಮಾಡುತ್ತಿದ್ದರೆ, 70 ಕಂಪನಿಗಳು ಮಾತ್ರ ನಷ್ಟಕ್ಕೆ ಗುರಿಯಾಗಿದ್ದವು. ಆದರೂ ಅದೇ ಸಾಲಿನಲ್ಲಿ ಲಾಭ ಮಾಡುತ್ತಿದ್ದ ಕಂಪನಿಗಳು 1,74,587 ಕೋಟಿ ರೂ.ಗಳಷ್ಟು ಲಾಭ ಮಾಡಿದ್ದರೆ, ನಷ್ಟ ಮಾಡುತ್ತಿದ್ದ ಕಂಪನಿಗಳು ಕೇವಲ 30,000 ಕೋಟಿ ಮಾತ್ರ ನಷ್ಟ ಮಾಡಿದ್ದವು. ಅಂದರೆ ಒಟ್ಟಾರೆಯಾಗಿ ಭಾರತದ ಆರ್ಥಿಕತೆಗೆ ಸಾರ್ವಜನಿಕ ಉದ್ಯಮಗಳಿಂದ 1.5 ಲಕ್ಷ ಕೋಟಿ ಯಷ್ಟು ಲಾಭವೇ ಆಗಿತ್ತು.

ಅಷ್ಟು ಮಾತ್ರವಲ್ಲ. ಈ ಎಲ್ಲಾ ಕಂಪನಿಗಳು 2019ರ ಸಾಲಿನಲ್ಲಿ ಡಿವಿಡೆಂಡ್, ಜಿಎಸ್‌ಟಿ, ಕಾರ್ಪೊರೇಟ್ ಟ್ಯಾಕ್ಸ್ ಗಳ ರೂಪದಲ್ಲಿ ಸರ್ಕಾರಕ್ಕೆ 3,68,803 ಕೋಟಿ ರೂಗಳನ್ನು ಪಾವತಿ ಮಾಡಿದ್ದವು.

ಎಲ್ಲಕ್ಕಿಂತ ಹೆಚ್ಚಾಗಿ ಇವು 11 ಲಕ್ಷದಷ್ಟು ಉದ್ಯೋಗಗಳನ್ನು ನೀಡಿದ್ದವು. ಅದರಲ್ಲಿ 5 ಲಕ್ಷದಷ್ಟು ಉದ್ಯೋಗಗಳಾದರೂ ದಲಿತ ಮತ್ತು ಹಿಂದುಳಿದ ಸಮುದಾಯಕ್ಕೆ ದಕ್ಕಿತ್ತು. ಈ ಕಾರ್ಮಿಕರಿಗೆ 2019 ರ ಸಾಲಿನಲ್ಲಿ 1,52,684 ಕೋಟಿ ರೂಪಾಯಿಗಳನ್ನು ಸಂಬಳ ಸಾರಿಗೆಯ ರೂಪದಲ್ಲಿ ನೀಡಲಾಗಿತ್ತು. ಸಹಜವಾಗಿಯೇ ಆ ಮೊತ್ತವು ಆರ್ಥಿಕತೆಯಲ್ಲಿ ಅಷ್ಟರ ಮಟ್ಟಿಗಿನ ಬೇಡಿಕೆಯನ್ನು ಸೃಷ್ಟಿಸುತ್ತದಷ್ಟೆ? ಇವತ್ತು ಈ ದೇಶದ ಆರ್ಥಿಕತೆ ಕಂಗೆಟ್ಟಿರುವುದೇ ಜನರ ಕೊಳ್ಳುವ ಶಕ್ತಿಯ ಕುಸಿತದಿಂದ, ಅದಕ್ಕೆ ಕಾರಣವಾಗಿರುವ ನಿರುದ್ಯೋಗದಿಂದ ಎನ್ನುವುದರ ಹಿನ್ನೆಲೆಯಲ್ಲಿ ಈ ಉದ್ಯೋಗಗಳ ಮಹತ್ವ ಅರ್ಥವಾಗುತ್ತದೆ. ಮತ್ತು ಸರ್ಕಾರಿ ಕಂಪನಿಗಳನ್ನು ನಷ್ಟದಾಯಕ ಎಂದು ವರ್ಗೀಕರಿಸುವುದರ ಅಸಂಬದ್ಧತೆಯನ್ನು ತೋರಿಸುತ್ತದೆ.

ಇಷ್ಟಾದರೂ ಮೋದಿ ಸರ್ಕಾರವು 2021-22 ರ ಬಜೆಟ್ಟಿನಲ್ಲಿ ಎಲ್ಲಾ ಲಾಭದಾಯಕ ಕಂಪನಿಗಳನ್ನೂ ಖಾಸಗೀಕರಿಸುವುದಾಗಿ ಘೋಷಿಸಿತ್ತು ಮತ್ತು 2022-23 ರ ಬಜೆಟ್ಟಿನಲ್ಲಿ ದೇಶದ ವ್ಯೂಹಾತ್ಮಕ ಮತ್ತು ಸೇನಾತ್ಮಕ ಕೈಗಾರಿಕೆಗಳನ್ನು ಖಾಸಗೀಕರಿಸುವುದಾಗಿ ಮತ್ತು ಸರ್ಕಾರದ ಸುಪ್ಫರ್ದಿಯಲ್ಲಿರುವ ಭೂಮಿ, ಇನ್ನಿತರ ಸಂಪನ್ಮೂಲಗಳನ್ನು ಖಾಸಗಿಯವರಿಗೆ ಮಾರಿಬಿಡುವುದಾಗಿ ಘೋಷಿಸಿದೆ ಮತ್ತು ಈ ಮಹಾ ಮಾರಾಟವನ್ನು ಮಾಡಲು ಮಾಡಲು ದಿನಕ್ಕೆ ಹದಿನೆಂಟು ಗಂಟೆಗಳಂತೆ ಕೆಲಸ ಮಾಡುತ್ತಿದೆ.

ಇದಲ್ಲದೆ, ಉದ್ಯೋಗಾವಕಾಶಗಳು ಒದಗಿಸುವ ಮತ್ತೊಂದು ಅತಿದೊಡ್ಡ ಕ್ಷೇತ್ರ ಸರ್ಕಾರದ ಆಡಳಿತ ಯಂತ್ರಾಂಗ. ಇದರಲ್ಲಿ ಅಂದಾಜು 41 ಲಕ್ಷ ಉದ್ಯೋಗಾವಕಾಶಗಳು ಲಭ್ಯವಾಗುತ್ತಿತ್ತು. ಆದರೆ ಇದರಲ್ಲಿ ಈವರೆಗೆ ಸೆಕ್ರೆಟರಿ ಮಟ್ಟದ ಹುದ್ದೆಗಳಿಗೆ ಮೀಸಲಾತಿಯನ್ನು ಜಾತಿ ಪೂರ್ವಾಗ್ರಹಗಳಿಂದ ಒದಗಿಸುತ್ತಿಲ್ಲ. ಉಳಿದಂತೆ 1989ರಿಂದ ಇದರಲ್ಲಿನ ಕನಿಷ್ಟ 20 ಲಕ್ಷ ಉದ್ಯೋಗಾವಕಾಶಗಳಲ್ಲಿ ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಅವಕಾಶಗಳು ಸಿಗಬೇಕಿತ್ತು. ಆದರೆ ಆಡಳಿತ ವೆಚ್ಚವನ್ನು ಕಡಿಮೆ ಮಾಡಬೇಕೆಂಬ ವಿಶ್ವಬ್ಯಾಂಕಿನ ನಿಬಂಧನೆಗೆ ಒಳಪಟ್ಟು 2013 ರಿಂದ ಆಡಳಿತ ಯಂತ್ರದ ಗಾತ್ರವನ್ನು ಕಡಿಮೆ ಮಾಡಲಾಗುತ್ತಿದೆ. ಅಂದರೆ ಅಷ್ಟು ಮಟ್ಟಿಗೆ ಮೀಸಲಾತಿಯನ್ನು ನಿರಾಕರಿಸಲಾಗುತ್ತಿದೆ. ಇದನ್ನೇ "ಕನಿಷ್ಟ ಸರ್ಕಾರ- ಗರಿಷ್ಟ ಆಡಳಿತ" ಎಂದೂ, ಆಡಳಿತ ಸುಧಾರಣೆ ಯೆಂದೂ ಹೇಳಲಾಗುತ್ತದೆ. ಸರ್ಕಾರವು ತನ್ನ ನೀತಿಯಲ್ಲಿ ಘೋಷಿಸಿಕೊಂಡಿರುವಂತೆ ನಿವೃತ್ತಿ ಇಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ, ಖಾಲಿಯಾಗಿಯೇ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ, ಕೆಳಹಂತದ ಸೇವೆಗಳನ್ನು ದಿನಗೂಲಿ-ಗುತ್ತಿಗೆಯ ಮೂಲಕ ಪೂರೈಸಿಕೊಳ್ಳುವ ಮೂಲಕ ಆಡಳಿತ ಯಂತ್ರಾಂಗದ ಗಾತ್ರ ಮತ್ತು ವೆಚ್ಚವನ್ನು ಕಡಿಮೆ ಮಾಡಿಕೊಳ್ಳುತ್ತಾ ಬಂದಿದೆ. ಮೋದಿ ಸರ್ಕಾರ ಬರಲಿರುವ ವರ್ಷಗಳಲ್ಲಿ ಶೇ. 40 ರಷ್ಟು ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದಾಗಿ ವಿಶ್ವ ಬ್ಯಾಂಕಿಗೆ ಭರವಸೆ ನೀಡಿದೆ. ಹೀಗೆ ಆಡಳಿತ ಯಂತ್ರಾಂಗದ ಅನೌಪಚಾರೀಕರಣ ಮತ್ತು ಖಾಸಗೀಕರಣದ ಮೂಲಕ ಕೇವಲ ಕೇಂದ್ರ ಆಡಳಿತ ಯತ್ರಾಂಗವೊಂದರಲ್ಲೇ 10 ಲಕ್ಷಕ್ಕೂ ಹೆಚ್ಚು ದಲಿತ ಮತ್ತು ಹಿಂದುಳಿದ ಸಮುದಾಯಗಳು ಉದ್ಯೋಗಾವಕಾಶಗಳಿಂದ ವಂಚಿತವಾಗಲಿವೆ.

ಆದರೆ ಅದೇ ಸಮಯದಲ್ಲಿ ಜಾಯಿಂಟ ಸೆಕ್ರೆಟರಿ ಮಟ್ಟದ ಹುದ್ದೆಗಳಿಗೆ ನೇರವಾಗಿ ಭರ್ತಿ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಇದರಿಂದ ಬಡ್ತಿಯ ಮೂಲಕ ಆ ಹುದೆಗಳನ್ನು ಪಡೆದುಕೊಳ್ಳಬೇಕಿದ್ದ ದಲಿತ-ಹಿಂದುಳಿದ ಅಭ್ಯರ್ಥಿಗಳಿಗೆ ಪ್ರಾತಿನಿಧ್ಯವನ್ನೂ ಮತ್ತು ಅವಕಾಶವನ್ನೂ ನಿರಾಕರಿಸಿದೆ.
ಖಾಸಗೀಕರಣ ಮತ್ತು ಇWS ಮೀಸಲಾತಿ- ಬ್ರಾಹ್ಮಣಶಾಹಿ ಕತ್ತಿಯ ಎರಡು ಅಲಗುಗಳು
ಹೀಗೆ ಮೇಲಿನ ಅಂಕಿಅಂಶಗಳು ಹಾಗೂ ಸರ್ಕಾರಿ ನೀತಿಗಳು ಕೆಲವು ವಿಷಯಗಳನ್ನೂ ಸಾಬೀತು ಮಾಡುತ್ತವೆ.

ಮೊದಲನೆಯದು ಖಾಸಗೀಕರಣವು ದಲಿತ ಮತ್ತು ಹಿಂದುಳಿದ ಸಮುದಾಯಗಳ ಉದ್ಯೋಗದ ಹಕ್ಕನ್ನು ಕಸಿಯುತ್ತವೆ. ಎರಡನೆಯದಾಗಿ ಸರ್ಕಾರಿ ವಲಯದ ಖಾಸಗೀಕರಣ ತೀವ್ರವಾಗಿ ನಡೆಯುತ್ತಿರುವ ಹೊತ್ತಿನಲ್ಲೂ ಸರ್ಕಾರಿ ವಲಯದಲ್ಲೇ ಖಾಸಗೀ ವಲಯಕ್ಕಿಂತ ಹೆಚ್ಚಿನ ಔಪಚಾರಿಕ ಉದ್ಯೋಗಗಳು ಲಭ್ಯವಿವೆ. ಮೂರನೆಯದಾಗಿ ಸರ್ಕಾರೀವಲಯದ ಶಾಶ್ವತ ಉದ್ಯೋಗಗಳೂ ದಿನಗೂಲಿ, ಗುತ್ತಿಗೆ ಪದ್ಧತಿಯಿಂದ ನಾಶವಾಗುತ್ತಿವೆ. ಸಾರ್ವಜನಿಕ ಉದ್ದಿಮೆಗಳು ನಷ್ಟ ಮಾಡುತ್ತಿಲ್ಲ. ಸರ್ಕಾರ ಖಾಸಗೀಕರಿಸುತ್ತಿರುವುದು ಉದ್ಯೋಗ ಸೃಷ್ಟಿಸಿರುವ ಲಾಭ ಮಾಡುತ್ತಿರುವ ಸರ್ಕಾರಿ ಕಂಪನಿಗಳನ್ನೇ ಹೊರತು ನಷ್ಟದಲ್ಲಿರುವ ಉದ್ಯಮಗಳನ್ನಲ್ಲ. ಮೋದಿ ಸರ್ಕಾರದ ಕನಿಷ್ಟ ಸರ್ಕಾರ - ಗರಿಷ್ಟ ಆಡಳಿತವೆಮ್ಬ ನೀತಿ ಹಾಗೂ ನೇರ ಭರ್ತಿ ನೀತಿಗಳು ಕಾರ್ಪೊರೇಟ್-ಬ್ರಾಹ್ಮಣಶಾಹಿ ನೀತಿಗಳಾಗಿವೆ.

ಹಾಗೂ ಅಳಿದುಳಿದ ಉದ್ಯೋಗಾವಕಾಶಗಳಲ್ಲಿ ದಲಿತ- ಒಬಿಸಿ- ಆದಿವಾಸಿ ಸಮುದಾಯಗಳಿಗೆ ಸಿಗುತ್ತಿದ್ದ ಅವಕಾಶಗಳಲ್ಲೂ ಶೇ. 10 ರಷ್ಟು ಅವಕಾಶಗಳನ್ನು EWS ಮೀಸಲಾತಿ ಹೆಚ್ಚುವರಿಯಾಗಿ ನುಂಗಿಹಾಕುತ್ತಿದೆ.
ಇದು ಹಿಂದೂತ್ವದ ಬ್ರಾಹ್ಮಣಶಾಹಿ ಕತ್ತಿಯ ಎರಡು ಅಲಗುಗಳಾಗಿವೆ.

ಹೀಗಾಗಿ ಹಿಂದೂತ್ವ ಫ಼್ಯಾಶಿಸಂ ಎಂದರೆ ಕೇವಲ ಮುಸ್ಲಿಂವಿರೋಧವಲ್ಲ.

ಹಿಂದೂತ್ವ ಫ಼್ಯಾಶಿಸಂ ಎಂದರೆ ದಲಿತ- ಆದಿವಾಸಿ- ಹಿಂದುಳಿದ ಸಮುದಾಯಗಳ ಮೇಲೆ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಯ ಕ್ರೂರ, ನಗ್ನ , ಭಯೋತ್ಪಾದಕ ಸರ್ವಾಧಿಕಾರವೇ ಆಗಿದೆ.

ಹೀಗಾಗಿ ಸಾಮಾಜಿಕ ನ್ಯಾಯದ ಹೋರಾಟವು ಹಿಂದೂತ್ವ ಫ಼್ಯಾಶಿಸಂ ವಿರೋಧಿ ಹೋರಾಟವಾಗುವ ತುರ್ತು ಇದ್ದೇ ಇದೆ... ಅಲ್ಲವೇ?

(ಲೇಖಕರು ಹಿರಿಯ ಪತ್ರಕರ್ತರು, ಸಾಮಾಜಿಕ ಚಿಂತಕರು ಮತ್ತು ಜನಪರ ಹೋರಾಟಗಾರರು)

Advertisement
Advertisement
Recent Posts
Advertisement