Advertisement

ಬಿಜೆಪಿಗರಿಗೆ "ಜಾತ್ಯಾತೀತ ಮತ್ತು ಸಮಾಜವಾದ" ಎಂಬೆರಡು ಪದಗಳ ಮೇಲೆ ಅಸಹನೆ ಏಕೆ?

Advertisement

ಸೆಕ್ಯುಲಾರ್-ಸೋಶಿಯಲಿಸ್ಟ್ ಕೇವಲ ಪದಗಳೋ ಅಥವಾ ಈಡೇರದ ಸಂವಿಧಾನದೊಳಗಿನ ಅಂತರ್ಧಾರೆಯೋ?

ಬರಹ- ಶಿವಸುಂದರ್ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

ಸಂಸತ್ ನಡಾವಳಿಯ ಕಾರ್ಯಸೂಚಿಯನ್ನು ವಿರೋಧ ಪಕ್ಷಗಳಿಂದಲೂ ರಹಸ್ಯವಾಗಿಟ್ಟು ಮೋದಿ ಸರ್ಕಾರ ಹೊಸ ಸಂಸತ್ತಿನ ಭವನದೊಳಗೆ ನಡಿಸಿದ ಪ್ರಥಮ ವಿಶೇಷ ಅಧಿವೇಶನ ಮುಗಿದಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು 'ಪೋಸ್ಟ್ -ಡೇಟೆಡ್ ಚೆಕ್' ರೀತಿ, ಕನ್ನಡಿಯೊಳಗಿನ ಗಂಟಿನ ರೀತಿ ಮಂಡಿಸಿ, ಅದರಿಂದ ಪುಗಸಟ್ಟೆ ಪ್ರಚಾರ ಪಡೆದುಕೊಂಡಿದ್ದನ್ನು ಬಿಟ್ಟರೆ ಈ ಅಧಿವೇಶನವನ್ನು ಏಕೆ ಕರೆಯಲಾಗಿತ್ತು ಎಂಬುದು ವಿರೋಧ ಪಕ್ಷಗಳಿಗಿರಲಿ. ಮೋದಿ-ಶಾ ಗಳ ಕ್ಯಾಬಿನೆಟ್ ಸಹೋದ್ಯೋಗಿಗಳಿಗೂ ಸ್ಪಷ್ಟವಾಗಿರಲಿಕ್ಕಿಲ್ಲ.

ಹೊಸ ಭವನದಲ್ಲಿ ಮೊದಲನೇ ಅಧಿವೇಶನ ನಡೆಯುವಾಗಲೂ ರಾಷ್ಟ್ರಾಧ್ಯಕ್ಷೆಯಾದ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸುವ ಶಿಷ್ಟಾಚಾರವನ್ನು ಮೋದಿ ಸರ್ಕಾರ ಪಾಲಿಸಲಿಲ್ಲ. ಅದಕ್ಕೆ ಪ್ರಮುಖ ಕಾರಣ ಆಂತರ್ಯದಲ್ಲಿ ಮನುಧರ್ಮವನ್ನೆ ತುಂಬಿಕೊಂಡ ಮೋದಿ ಸರ್ಕಾರಕ್ಕೆ ಇಂದಿನ ರಾಷ್ಟ್ರಾಧ್ಯಕ್ಷೆ 'ಮಹಿಳೆ'ಯೂ, 'ಆದಿವಾಸಿ'ಯೂ ಹಾಗೂ 'ವಿಧವೆ'ಯೂ ಆಗಿರುವುದು ಅಮಂಗಳವೆನಿಸಿರಬಹುದು ಎಂದು ಇಡೀ ದೇಶವೇ ಆಕ್ಷೇಪಿಸುತ್ತಿದೆ.

ಇದರಿಂದಾಗಿ ಹೊಸ ಸಂಸತ್ ಭವನದಲ್ಲಿ ಮೋದಿ ಸರ್ಕಾರ ಅಂಬೇಡ್ಕರ್ ವಿರಚಿತ ಸಂವಿಧಾನಕ್ಕೆ ಬದಲಾಗಿ ಮನುಸ್ಮೃತಿಯನ್ನೇ ಬುನಾದಿಯಾಗುಳ್ಳ ಹೊಸ ಸಂವಿಧಾನವನ್ನಾಗಿ ಜಾರಿ ಮಾಡಲಿದೆಯೇ? ಎಂಬ ಅನುಮಾನವೂ ದಟ್ಟವಾಗುತ್ತಿದೆ.

ಈ ಅನುಮಾನಕ್ಕೆ ಮತ್ತೊಂದು ಬಲವಾದ ಕಾರಣವೂ ಇದೆ. ಹೊಸ ಸಂಸತ್ ಭವನದಲ್ಲಿ ನಡೆದ ಮೊದಲ ಅಧಿವೇಶನದ ಮೊದಲ ದಿನ ಮೋದಿ ಸರ್ಕಾರ ಎಲ್ಲಾ ಸಂಸದರಿಗೂ ಸಂವಿಧಾನದ ಪ್ರತಿಯನ್ನು ಹಂಚಿತ್ತು. ಆದರೆ ಆ ಸಂವಿಧಾನದ ಪ್ರತಿಯ ಮುನ್ನುಡಿಯಲಿ ಸಂವಿಧಾನ ರಚನಾ ಸಮಯದಿಂದಲೂ ಬಿಜೆಪಿ- ಸಂಘಪರಿವಾರ ವಿರೋಧಿಸಿಕೊಂಡು ಮತ್ತು ದ್ವೇಷಿಸಿಕೊಂಡು ಬಂದಿರುವ ಸೆಕ್ಯುಲಾರ್ (ಧರ್ಮ ನಿರಪೇಕ್ಷ), ಮತ್ತು ಸೋಶಿಯಲಿಸ್ಟ್ (ಸಮಾಜವಾದಿ) ಪದಗಳನ್ನು ಕೈಬಿಟ್ಟಿತ್ತು. ಇದರ ಬಗ್ಗೆ ಸಂಸತ್ತಿನಲ್ಲಿ ವಿರೋಧ ವ್ಯಕ್ತವಾದಾಗ ಬಿಜೆಪಿ ತಾನು ಹಂಚಿದ್ದು ಮೂಲ ಸಂವಿಧಾನವೆಂದೂ, ಮೂಲ ಸಂವಿಧಾನದ ಮುನ್ನುಡಿಯಲ್ಲಿ "ಸೆಕ್ಯುಲಾರ್-ಸೊಷಿಯಲಿಸ್ಟ್" ಪದಗಳಿರಲಿಲ್ಲವೆಂದೂ , ಅದನ್ನು ಎಮರ್ಜೆನ್ಸಿ ಸಮಯದಲ್ಲಿ ಇಂದಿರಾ ಸರ್ಕಾರ ಸೇರಿಸಿದ್ದು ಎಂಬ ಅರ್ಧ ಸತ್ಯದ ಸಮಜಾಯಿಷಿಯ ಪ್ರಚಾರವನ್ನು ಅಬ್ಬರದಿಂದ ಮಾಡುತ್ತಿದೆ.

ಇದು ಹಾಲಿ ಸಂವಿಧಾನವನ್ನು ಸಾವಿರ ಇರಿತಗಳ ಮೂಲಕ ಗಾಯಗೊಳಿಸಿ ಸಾಯಿಸುವ ಬಿಜೆಪಿ- ಸಂಘಪರಿವಾರದ ಯೋಜಿತ ಶಡ್ಯಂತ್ರದ ಭಾಗವಾಗಿದೆ. ಆದ್ದರಿಂದಲೇ ಈ ಬಗ್ಗೆ ಮೋದಿ ಸರ್ಕಾರ ಮತ್ತದರ ಪಟಾಲಂ ನಡೆಸುತ್ತಿರುವ ಸುಳ್ಳುಗಳ ಪ್ರಚಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಮತ್ತು ಹಿಮ್ಮೆಟ್ಟಿಸುವ ಅಗತ್ಯವಿದೆ.

ಮೋದಿ ಸರ್ಕಾರವು 'ಸೆಕ್ಯುಲರಿಸಂ' ಮತ್ತು 'ಸೋಶಿಯಲಿಸಂ' ಬಗ್ಗೆ ಮತ್ತು ಸಂವಿಧಾನದ ಬಗ್ಗೆ ಮಾಡುತ್ತಿರುವ ಅಪಪ್ರಚಾರವನ್ನು ಅರ್ಥಮಾಡಿಕೊಳ್ಳಬೇಕೆಂದರೆ ನಮ್ಮ ಸಂವಿಧಾನದ ನೈಜ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕು. ಅದರ ಭಾಗವಾಗಿರುವ ಸೆಕ್ಯುಲರಿಸಂ ಮತ್ತು ಸೋಶಿಯಲಿಸಂ ಎಂಬ ಪರಿಕಲ್ಪನೆಗಳನ್ನು, ಹಾಗೂ ಹೇಗೆ ಆ ಪರಿಕಲ್ಪನೆಗಳು ಕೇವಲ ಸಂವಿಧಾನದ ಮುನ್ನುಡಿಯಲ್ಲಿ ಪದಗಳಾಗಿ ಮಾತ್ರವಲ್ಲದೆ ಇಡೀ ಸಂವಿಧಾನದ ಉದ್ದಕ್ಕೂ ಅಂತರ್ಗತ ಆಶಯವಾಗಿ, ಅಂತರ್ಧಾರೆಯಾಗಿ ಹರಿದಿದೆ ಎಂಬುದನ್ನು ಗ್ರಹಿಸಿಕೊಳ್ಳುವ ಅಗತ್ಯವಿದೆ.

ಅದಕ್ಕೂ ಮೊದಲು ಸಂವಿಧಾನದ ಮುನ್ನುಡಿಯಲ್ಲಿ ಸೆಕ್ಯುಲಾರ್- ಸೋಷಿಯಲಿಸ್ಟ್ ಪದ ಸೇರ್ಪಡೆಯಾದ ಬಗ್ಗೆ ಮೋದಿ ಸರ್ಕಾರ ಹೇಳುತ್ತಿರುವ ಅರ್ಧ ಸತ್ಯದ ಸಾರವನ್ನು ಪರಿಶೀಲಿಸೋಣ.

"42ನೇ ತಿದ್ದುಪಡಿ- ಅನ್ವರ್ಥ ಪದಗಳ ಸೇರ್ಪಡೆ, ಅನರ್ಥ ಪ್ರಕ್ರಿಯೆ"

ಮೋದಿ ಸರ್ಕಾರ ಹೇಳುತ್ತಿರುವುದರಲ್ಲಿ ಅರ್ಧ ಸತ್ಯವಿದೆ. 1950 ರ ಜನವರಿ 26 ರಂದು "ಭಾರತದ ಜನರು ತಮಗೇ ತಾವೇ ಅರ್ಪಿಸಿಕೊಂಡ" ಸಂವಿಧಾನದ ಮುನ್ನಡಿಯಲ್ಲಿ "ಸೆಕ್ಯುಲಾರ್ ಮತ್ತು ಸೋಷಿಯಲಿಸ್ಟ್" ಪದಗಳಿರಲಿಲ್ಲ. ಅದನ್ನು ದೇಶದ ಮೇಲೆ ತುರ್ತುಸ್ಥಿತಿ ಹೇರಿದ ಸಂದರ್ಭದಲ್ಲಿ ಇಂದಿರಾಗಾಂಧಿ ಸರ್ಕಾರ ಜಾರಿ ಮಾಡಿದ 42 ನೇ ಸಂವಿಧಾನ ತಿದ್ದುಪಡಿಯ ಮೂಲಕ ಸೇರಿಸಲಾಗಿತ್ತು. ಆ ತಿದ್ದುಪಡಿಯು ಮಾಡಿದ ಹಲವಾರು ಮಾರ್ಪಾಡುಗಳಲ್ಲಿ ಸಂವಿಧಾನದ ಮುನ್ನುಡಿಗೆ 'ಸೆಕ್ಯುಲಾರ್ ಮತ್ತು ಸೋಷಿಯಲಿಸ್ಟ್' ಪದಗಳ ಸೇರ್ಪಡೆಯೂ ಒಂದಾಗಿತ್ತು.

ಇಂದಿರಾ ಅವರು ಜಾರಿ ಮಾಡಿದ ತುರ್ತುಸ್ಥಿತಿ ಈ ದೇಶದ ಪ್ರಜಾತಂತ್ರದ ಮೇಲೆ ನಡೆಸಿದ ಘೋರ ಹಲ್ಲೆ. ಹೀಗಾಗಿ ಸಂವಿಧಾನದ ಮುನ್ನುಡಿಗೆ ಇಂಥಾ ಮಹತ್ತರ ಆಶಯಗಳ ಸೇರ್ಪಡೆಯನ್ನು ತುರ್ತುಸ್ಥಿತಿಯಂಥ ಸರ್ವಾಧಿಕಾರದ ಸಂದರ್ಭದಲ್ಲಿ ಸೇರಿಸಿದ್ದು ಖೇದಕರ. ಇದು ಇಂದಿರಾ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೂ ಈ ಆಶಯಗಳ ಮಹತ್ವದ ಬಗ್ಗೆ ಎಷ್ಟು ಬದ್ಧತೆ ಇತ್ತು ಎಂಬ ಪ್ರಶ್ನೆಯನ್ನು ಮೂಡಿಸಲೇ ಬೇಕು.

ಆದರೆ ಆಗಲೂ ಆ ತಿದ್ದುಪಡಿಗಳನ್ನು ಇಂದಿರಾ ಸರ್ಕಾರ ಸಂವಿಧಾನ ತಿದ್ದುಪಡಿಯೆಂಬ ಪ್ರಕ್ರಿಯೆಯ ಮೂಲಕ ಸೇರಿಸಿತು. ವಿರೋಧ ಪಕ್ಷದ ನಾಯಕರುಗಳನ್ನೆಲ್ಲ ಜೈಲಿಗಟ್ಟಿ ಸಂಸತ್ತಿನಲ್ಲಿ ಮಾತ್ರ ಚರ್ಚೆ ಎಂಬ ಪ್ರಹಸನವನ್ನು ನಡೆಸಿ ಇಂದಿರಾ ಸರ್ಕಾರ ಈ ತಿದ್ದುಪಡಿ ಮಾಡಿತ್ತು. ಅಷ್ಟರ ಮಟ್ಟಿಗೆ ಆ ಪ್ರಕ್ರಿಯೆ ಕೂಡ ಹಾಸ್ಯಾಸ್ಪದವಾಗಿತ್ತು.

ಆದರೆ ಈಗ ಬಿಜೆಪಿ ಸರ್ಕಾರ ಅದಕ್ಕಿಂತ ಹಾಸ್ಯಾಸ್ಪದವಾದ ಹಾಗೂ ಅತಂಕಕಾರಿಯಾದ ರೀತಿಯಲ್ಲಿ ವಿರೋಧ ಪಕ್ಷಗಳನ್ನು ಮತ್ತು ಸಂಸತ್ತನ್ನು ಗಣನೆಗೇ ತೆಗೆದುಕೊಳ್ಳದಂತೆ ತನಗಿಷ್ಟಬಂದಂತೆ ತಿದ್ದುಪಡಿ ಮಾಡಿದ ಸಂವಿಧಾನವನ್ನು ಹಂಚಿದೆ. ಅದೂ ಅಧಿವೇಶನ ನಡೆಯುವ ಬಾಗಿಲಿನಲ್ಲಿ!

ಇದು ತುರ್ತುಸ್ಥಿತಿಯಲ್ಲಿ ಇಂದಿರಾ ಸರ್ಕಾರ ಸಂವಿಧಾನಕ್ಕೆ ಮಾಡಿದ ಅಪಮಾನಕ್ಕಿಂತ ಘನಘೋರವಾದ ಅಪಮಾನವಾಗಿದೆ.

"ಸಂವಿಧಾನದ ಮುನ್ನುಡಿ- ಸಂವಿಧಾನದ ಅಂತರ್ಗತ ಭಾಗ"

ಏಕೆಂದರೆ ಪ್ರಾರಂಭದಲ್ಲಿ ದೇಶದ ಸಂವಿಧಾನದಲ್ಲಿ ಮುನ್ನುಡಿಯ ಸ್ಥಾನವೇನು ಎಂಬ ಬಗ್ಗೆ ಸಾಕಷ್ಟು ಗೊಂದಲವಿತ್ತು. ಆದರೆ,

-1973 ರ ಕೇಶವಾನಂದ ಭಾರತಿ ಪ್ರಕರಣದಲ್ಲಿ ಭಾರತದ ಸುಪ್ರೀಂ ಕೋರ್ಟಿನ 13 ಸದಸ್ಯರ ಪೀಠ ಸಂವಿಧಾನದ ಮುನ್ನುಡಿಯು ಸಂವಿಧಾನದ ಅಂತರ್ಗತವಾದ ಭಾಗವಾಗಿದ್ದು ಅದು ಸಂವಿಧಾನದ ಮೂಲ ರಚನೆಗೆ ಸಂಬಂಧಿಸಿದ ವಿಷಯಗಳನ್ನೊಳಗೊಂಡಿದೆ ಎಂದು ಸ್ಪಷ್ಟವಾಗಿ ಅಭಿಪ್ರಾಯಿಸಿತು. ಮುಂದುವರೆದು ಸಂಸತ್ತಿಗೆ ಸಂವಿಧಾನದ ಮೂಲ ರಚನೆಯನ್ನು (Basic Structure Of The Constitution) ಬದಲಿಸುವ ಅಧಿಕಾರವಿಲ್ಲ ಎಂದು ಅತ್ಯಂತ ಸ್ಪಷ್ಟವಾಗಿ ಘೋಷಿಸಿತು.

-1995 ರಲ್ಲಿ ಜೀವವಿಮಾ ನಿಗಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಮತ್ತೊಮ್ಮೆ ಭಾರತದ ಸಂವಿಧಾನದ ಮುನ್ನುಡಿಯು ಸಂವಿಧಾನದ ಅಂತರ್ಗತ ಭಾಗವಾಗಿದ್ದು, ಅದು ಸಂವಿಧಾನದ ಮೂಲ ರಚನೆಯಾಗಿದೆ ಎಂದು ಸ್ಪಷ್ಟಪಡಿಸಿತು. ಹಾಗೂ 1973 ರಿಂದಲೂ ಸುಪ್ರೀಂ ಕೋರ್ಟು ಹತ್ತಾರು ಪ್ರಕರಣಗಳಲ್ಲಿ ಸಂವಿಧಾನದ ಮೂಲ ರಚನೆಗೆ ಸಂಸತ್ತು ತಿದ್ದುಪಡಿ ಮಾಡುವಂತಿಲ್ಲವೆಂದು ಪದೇಪದೇ ಆದೇಶಿಸುತ್ತಲೇ ಬಂದಿದೆ.

ಅಂದರೆ, ಸಾರದಲ್ಲಿ ಮುನ್ನುಡಿಯಲ್ಲಿರುವ ಅಂಶಗಳು ಸಂವಿಧಾನದ ಮೂಲ ರಚನೆಯ ಭಾಗವಾಗಿವೆ. ಆದರೂ ಮೋದಿ ಸರ್ಕಾರ ಸಂವಿಧಾನದ ಮುನ್ನುಡಿಗೇ ಅರ್ಥಾತ್ ಸಂವಿಧಾನದ ಮೂಲ ರಚನೆಗೆ ಯಾವುದೇ ಸಾಂವಿಧಾನಿಕ ಪ್ರಕ್ರಿಯೆ ಇಲ್ಲದೆ ಬೇಕಾಬಿಟ್ಟಿ ತಿದ್ದುಪಡಿ ಮಾಡುವ ದಾಷ್ಟ್ಯ ತೋರುತ್ತಿದೆ.

ಮೂಲ ಸಂವಿಧಾನದ ಹೆಸರಲ್ಲಿ ಈವರೆಗೆ ಆಗಿರುವ 128 ತಿದ್ದುಪಡಿಗಳ ನಿರಾಕರಣೆ?

ಮೋದಿ ಪಾಳಯದ ಮತ್ತೊಂದು ಹುಸಿ ವಾದ. ತಾವು ಹಂಚಿದ್ದು ಮೂಲ ಸಂವಿಧಾನ. ಅದರಲ್ಲಿ ಈ ಸೇರ್ಪಡೆಗಳು ಇರಲಿಲ್ಲ ಎಂಬುದು. ಆದರೆ ಪ್ರಶ್ನೆಯೇನೆಂದರೆ ಮೊನ್ನೆ ಮಹಿಳಾ ಮೀಸಲಾತಿಯ ತಿದ್ದುಪಡಿಯನ್ನು ಸೇರಿಸಿ ಮೂಲ ಸಂವಿಧಾನಕ್ಕೆ ಈವರೆಗೆ 128 ತಿದ್ದುಪಡಿಗಳನ್ನು ಮಾಡಲಾಗಿದೆ.

ಬಿಜೆಪಿ ಮೇಲ್ಜಾತಿ ಮಧ್ಯಮ ವರ್ಗಗಳಿಗೆಂದೇ ಜಾರಿ ಮಾಡಿರುವ ಮೀಸಲಾತಿ ತಿದ್ದುಪಡಿಯಾದ 103 ನೇ ಸಂವಿಧಾನ ತಿದ್ದುಪಡಿಯೂ ಈ 128 ತಿದ್ದುಪಡಿಗಳಲ್ಲಿ ಒಂದು. ಈ ತಿದ್ದುಪಡಿಗಳಲ್ಲಿ 103 ನೇ ತಿದ್ದುಪಡಿಯಂಥ ಕೆಲವು ತಿದ್ದುಪಡಿಗಳನ್ನು ಹೊರತುಪಡಿಸಿದರೆ ಬಹುಪಾಲು ತಿದ್ದುಪಡಿಗಳು ಸಂವಿಧಾನದ ಮೂಲ ಆಶಯಗಳಾದ ಸಾಮಾಜಿಕ ನ್ಯಾಯದ ಆಶಯಗಳ ಮುಂದುವರಿಕೆಯಾಗಿದೆ.

ಮೂಲ ಸಂವಿಧಾನವೆಂದರೆ ಈ ತಿದ್ದುಪಡಿಗಳಿಲ್ಲದ ಸಂವಿಧಾನ ಎಂದಾಗುವುದಿಲ್ಲವೇ?

ಅಂದರೆ ಸಂವಿಧಾನದ ತಿದ್ದುಪಡಿಗಳ ಮೂಲಕ ಸಂವಿಧಾನವು ವಿಕಸನಗೊಂಡಿರುವುದರ ನಿರಾಕರಣೆ ಎಂದಾಗುವುದಿಲ್ಲವೇ? ಹಾಗೂ ಭಾರತದ ಜನ ಕಳೆದ 75 ವರ್ಷಗಳಲ್ಲಿ ಸಾಧಿಸಿರುವ ಸಾಂವಿಧಾನಿಕ ಮುನ್ನಡೆಗಳನ್ನು ತಿರಸ್ಕರಿಸುವುದು ಎಂದಾಗುವುದಿಲ್ಲವೇ?

ಹೀಗಾಗಿ ಬಿಜೆಪಿಯ ಮೂಲ ಸಂವಿಧಾನಕ್ಕೆ ಮರಳುವ ಉದ್ದೇಶ ಅದನ್ನು ಇನ್ನಷ್ಟು ಹಿಂದಕ್ಕೆ ಎಳೆಯುವ ಹುನ್ನಾರದ ಭಾಗವೇ ಆಗಿದೆ ಎಬುದರಲ್ಲಿ ಸಂದೇಹವಿಲ್ಲ.

ಇದರ ಜೊತೆಗೆ ಸಂವಿಧಾನದ ವಿರುಧ್ಧ ನಡೆಸುತ್ತಿರುವ ಈ ಧಾಳಿಗೆ ಅವರು ಸ್ವಯಂ ಅಂಬೇಡ್ಕರ್ ಅವರನ್ನೇ ತಪ್ಪಾಗಿ ಉಲ್ಲೇಖಿಸುತ್ತಾ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ..

ಸೆಕ್ಯುಲಾರ್- ಸಮಾಜವಾದಿ ಸೇರ್ಪಡೆಯನ್ನು ಅಂಬೇಡ್ಕರ್ ವಿರೋಧಿಸಿದ್ದರೇ?

ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನದ ಮುನ್ನುಡಿಯ ಬಗೆಗಿನ ಚರ್ಚೆಯನ್ನು ಅತ್ಯಂತ ಕೊನೆಗೆ ಕೈಗೆತ್ತಿಕೊಳ್ಳಲಾಗಿತ್ತು. ಈ ಬಗ್ಗೆ ಹಲವಾರು ಚರ್ಚೆಗಳು ನಡೆದು 17-10-1949 ರಂದು ಸಂವಿಧಾನದ ಮುನ್ನುಡಿಯನ್ನು ಅಂಗೀಕರಿಸಲಾಗಿತ್ತು.

ಚರ್ಚೆಯ ಭಾಗವಾಗಿ ಸಂವಿಧಾನದ ಮುನ್ನುಡಿಯಲ್ಲಿ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಪದಗಳನ್ನು ಸೇರಿಸಲು ಕೆಲವು ಸದಸ್ಯರು ಆಗ್ರಹಪಡಿಸಿದ್ದರು. ಅದಕ್ಕೆ ಅಂಬೇಡ್ಕರ್ ಅವರು ಅ ಎರಡೂ ಆಶಯಗಳು ನಮ್ಮ ಸಂವಿಧಾನದಲ್ಲಿ ಅಂತರ್ಧಾರೆಯಾಗಿ ಹರಿದಿರುವುದರಿಂದ ಅದನ್ನು ವಿಶೇಷವಾಗಿ ಉಲ್ಲೇಖಿಸುವ ಅಗತ್ಯವಿಲ್ಲ ಎಂದು ಉತ್ತರಿಸಿದ್ದರೇ ವಿನಾ ಆ ಪ್ರಸ್ತಾಪಗಳನ್ನು ವಿರೋಧಿಸಿರಲಿಲ್ಲ.

ಉದಾಹರಣೆಗೆ ಕೆ.ಟಿ. ಶಾ ಎಂಬ ಸಂವಿಧಾನ ಸಭೆಯ ಮಾನ್ಯ ಸದಸ್ಯರು ಮುನ್ನುಡಿಯಲ್ಲಿ ಸಮಾಜವಾದ ಎಂಬ ಪದವನ್ನು ಸ್ಪಷ್ಟವಾಗಿ ಸೇರಿಸಬೇಕೆಂಬ ತಿದ್ದುಪಡಿಯನ್ನು ಸೂಚಿಸಿದಾಗ ಅಂಬೇಡ್ಕರ್ ಕೊಟ್ಟ ಉತ್ತರ ಇದನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ.

ಈ ಬಗ್ಗೆ 15-11-1948 ರಂದು ಕೆಟಿ ಶಾ ಅವರ ಪ್ರಸ್ತಾಪನೆಗೆ ದೀರ್ಘವಾಗಿ ಉತ್ತರಿಸುತ್ತಾ ಅಂಬೇಡ್ಕರ್ ಅವರು:

"ಇಂದು ಶೋಷಕ ಬಂಡವಾಳಶಾಹಿ ಸಮಾಜಕ್ಕಿಂತ ಸಮಾಜವಾದಿ ಸಮಾಜ ಉತ್ತಮವೆಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಮುಂದಿನ ಪೀಳಿಗೆ ಬಂಡವಾಳಶಾಹಿ ಸಮಾಜಕ್ಕೆ ವಿರುದ್ಧವಾಗಿ ಸಮಾಜವಾದಕ್ಕಿಂತ ಉತ್ತಮವಾದ ಮತ್ತೊಂದು ವ್ಯವಸ್ಥೆಯನ್ನು ಹುಡುಕಬಹುದು"

ಮುಂದುವರೆದು

"..ಅಷ್ಟು ಮಾತ್ರವಲ್ಲ. ಸಂವಿಧಾನದಲ್ಲಿ ಈಗ ಅಡಕಗೊಳಿಸಲಾಗಿರುವ ಪರಿಚ್ಚೇದ 4 ರ ಪ್ರಭುತ್ವ ನಿರ್ದೇಶನಾ ತತ್ವಗಳೆಲ್ಲಾ ಸಮಾಜವಾದಿ ಆಶಯಗಳನ್ನು ಪಾಲಿಸುವಂತೆ ಪ್ರಭುತ್ವಕ್ಕೆ ಮಾರ್ಗದರ್ಶನ ಮಾಡುತ್ತಿದೆ" ಎಂದು ಹೇಳುತ್ತಾರೆ.

ಹೀಗಾಗಿ ಅಂಬೇಡ್ಕರ್ ಅವರು ಸಂವಿಧಾನವು ಮತ್ತು ಅದರ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಪ್ರಭುತ್ವವು ಪಕ್ಕಾ ಸೆಕ್ಯುಲಾರ್ ಹಾಗೂ ಸಮಾಜವಾದಿಯಾಗಿಯೇ ಇರಬೇಕೆಂದು ನಿರೀಕ್ಷಿಸಿದ್ದರು. ಸಂವಿಧಾನದ ಮುನ್ನುಡಿಯಲ್ಲಿ ಅ ಪದಗಳಿರಬೇಕೆ ಬೇಡವೇ ಎಂಬ ಬಗ್ಗೆ ಅವರ ಅಭಿಪ್ರಾಯ ತಾಂತ್ರಿಕ ಸ್ವರೂಪದ್ದೇ ವಿನಾ ತಾತ್ವಿಕ ರೂಪದ್ದಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ.

(https://eparlib.nic.in/bitstream/123456789/763023/1/cad_15-11-1948.pdf))

ವಾಸ್ತವವಾಗಿ ಸಂವಿಧಾನವನ್ನು ಗಮನವಿಟ್ಟು ಓದಿದರೆ 'ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಮ್' ಆಶಯಗಳು ಮತ್ತು ಅದಕ್ಕೆ ಸಂಬಂಧಪಟ್ಟ ಕಲಂಗಳು ಮೂಲ ಸಂವಿಧಾನದ ಮುನ್ನುಡಿಯಲ್ಲೂ ಮತ್ತು ನಂತರದ ಭಾಗಗಳಲ್ಲೂ ಸ್ಪಷ್ಟವಾಗಿ ಉಲ್ಲೇಕಗೊಂಡಿರುವುದು ಕುರುಡರಿಗೂ ಕಂಡೀತು..

’ಮೂಲ ಸಂವಿಧಾನ’ ಮತ್ತು 'ಸೆಕ್ಯುಲರಿಸಂ'

ಸೆಕ್ಯುಲಾರಿಸಂ ಎಂಬುದಕ್ಕೆ ಜಗತ್ತಿನಲ್ಲಿ ಹಲವಾರು ರೀತಿಯ ಕ್ರಾಂತಿಕಾರಿ ಮತ್ತು ಮಧ್ಯಮಮಾರ್ಗಿ ವ್ಯಾಖ್ಯಾನಗಳಿವೆ. ಅವೆಲ್ಲವೂ ಸಂವಿಧಾನ ರಚನಾ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಗಿವೆ. ಅಷ್ಟೆಲ್ಲಾ ಚರ್ಚೆ ಮತ್ತು ವಾದ ಮತ್ತು ಪ್ರತಿವಾದಗಳ ನಂತರ ಭಾರತದ ಸಂವಿಧಾನ ಸಭೆ ಒಪ್ಪಿಕೊಂಡ ಸೆಕ್ಯುಲಾರಿಸಂ ನ ವ್ಯಾಖ್ಯಾನದ ಅಂಶಗಳೆಂದರೆ:

- ಭಾರತದ ಪ್ರಭುತ್ವ ಯಾವ ಒಂದು ಮತಧರ್ಮವನ್ನೂ ಪಾಲಿಸುವುದಿಲ್ಲ.

- ಭಾರತದ ಪ್ರಭುತ್ವ ದೇಶದಲ್ಲಿ ಎಲ್ಲಾ ಮತಧರ್ಮಗಳಿಂದಲೂ ಸಮಾನ ಸಾಮೀಪ್ಯವನ್ನು ಕಾಪಾಡಿಕೊಳ್ಳುತ್ತದೆ.

- ಭಾರತದ ಪ್ರಭುತ್ವ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ತಾನೂ ಒಪ್ಪುವ ಮತಧರ್ಮವನ್ನು ಅನುಸರಿಸುವ ಅಥವಾ ಅನುಸರಿಸದಿರುವ ಸ್ವಾತಂತ್ರ್ಯವನ್ನು ನೀಡುತ್ತದೆ.

- ಭಾರತದ ಪ್ರಭುತ್ವ ವ್ಯಕ್ತಿಯ ಮತಧರ್ಮವನ್ನು ಆಧರಿಸಿ ಯಾವುದೇ ತಾರತಮ್ಯವನ್ನು ಮಾಡುವುದಿಲ್ಲ.

ಇದನ್ನೇ ಭಾರತದ ಸಂವಿಧಾನದ ಆರ್ಟಿಕಲ್ 14, 15, 25, 26 , ಮತ್ತು 27 ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಸ್ಪಷ್ಟ ಪಡಿಸುತ್ತದೆ. ಉದಾಹರಣೆಗೆ ಆರ್ಟಿಕಲ್ 25 ಹೀಗೆ ಹೇಳುತ್ತದೆ :

25. Freedom of conscience and free profession, practice and propagation of religion

(1) Subject to public order, morality and health and to the other provisions of this Part, all persons are equally entitled to freedom of conscience and the right freely to profess, practise and propagate religion

(ಅಂದರೆ , ಭಾರತದ ಪ್ರಭುತ್ವವು ಪ್ರತಿಯೊಬ್ಬ ವ್ಯಕ್ತಿಯ ಆತ್ಮ ಸಾಕ್ಷಿಯ ಸ್ವಾತಂತ್ರ್ಯ ಹಾಗೂ ತಾನು ಒಪ್ಪುವ ಮತಧರ್ಮದ ಪ್ರತಿಪಾದನೆ , ಆಚರಣೆ ಮತ್ತು ಪ್ರಚಾರದ ಸ್ವಾತಂತ್ರ್ಯವನ್ನು ಖಾತರಿ ಮಾಡುತ್ತದೆ)

ಇದನ್ನೇ ಅತ್ಯಂತ ಸ್ಪಷ್ಟವಾಗಿ ಮೂಲ ಸಂವಿಧಾನದ ಮುನ್ನುಡಿ ಯಲ್ಲಿ ಹೀಗೆ ಹೇಳಲಾಗಿದೆ:

"... ಭಾರತದ ಎಲ್ಲಾ ಪ್ರಜೆಗಳಿಗೆ ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ದೊರಕಿಸುವುದಕ್ಕಾಗಿ ಸಂವಿಧಾನವನ್ನು ರೂಪಿಸಲಾಗಿದೆ" ಎಂದು ಸಂವಿಧಾನದ ಮುನ್ನುಡಿ ಯಾವುದೇ ಅನುಮಾನಕ್ಕೆ ಅವಕಾಶವಿಲ್ಲದಂತೆ ಘೋಷಿಸುತ್ತದೆ.

ಈ ಮೇಲಿನ ವಿವರಗಳನ್ನೇ ಸೆಕ್ಯೂಲರಿಸಂ ಎಂದು ಒಂದೇ ಪದದಲ್ಲಿ ಹೇಳಲಾಗುತ್ತದೆ..

ಹಾಗಿದ್ದಲ್ಲಿ ಮೂಲ ಸಂವಿಧಾನದಲ್ಲಾಗಲೀ, ಮುನ್ನುಡಿಯಲ್ಲಾಗಲೀ ಸೆಕ್ಯುಲಾರಿಸಂ ಇರಲಿಲ್ಲ ಎಂದು ಹೇಗೆ ಹೇಳಲು ಸಾಧ್ಯ?
ವಿವರಗಳನ್ನು ಉಳಿಸಿಕೊಂಡು ಅದರ ಶೀರ್ಷಿಕೆಯನ್ನು ಕಿತ್ತುಹಾಕುವುದರ ಹಿಂದಿನ ಹುನ್ನಾರವೇನಿರಬಹುದು?

ಸೆಕ್ಯುಲಾರಿಸಂ- ಸಂವಿಧಾನದ Basic Structure

ಅಷ್ಟು ಮಾತ್ರವಲ್ಲ. ಸಂವಿಧಾನದ ಮುನ್ನುಡಿಯು ಸಂವಿಧಾನದ ಮೂಲ ರಚನೆಯಿದ್ದಂತೆ ಮತ್ತದನ್ನು ಬದಲಾಯಿಸುವ ಅಧಿಕಾರ ಸಂಸತ್ತಿಗಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂಕೋರ್ಟಿನ 13 ನ್ಯಾಯಾಧೀಶರ ನ್ಯಾಯಪೀಠವು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸೆಕ್ಯುಲಾರಿಸಂ ಅನ್ನು ಭಾರತದ ಸಂವಿಧಾನದ ಮೂಲ ರಚನೆ ಎಂದು ಘೋಷಿಸಿತ್ತು.

ಇದಾದ ಎರಡು ವರ್ಷಗಳ ನಂತರವೇ ಸೆಕ್ಯುಲಾರಿಸಂ ಅನ್ನು ಇಂದಿರಾ ಸರ್ಕಾರ ಮುನ್ನುಡಿಗೆ ಸೇರಿಸಿತು.

ಹೀಗಾಗಿ ಸೆಕ್ಯುಲರಿಸಂ ಸಂವಿಧಾನದ ಮೂಲ ರಚನೆಯ ಭಾಗ ಎಂದು ಹೇಳಿದ ಭಾರತದ ಸುಪ್ರೀಂಕೋರ್ಟೇ 42 ನೇ ತಿದ್ದುಪಡಿಗಿಂತ ಮುಂಚಿತವೇ ಮುನ್ನುಡಿಯ ಸ್ಥಾನಮಾನ ನೀಡಿತು ಎಂದು ಹೇಳಬಹುದು .

ಅದೇ ರೀತಿ ಎಸ್. ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ಒಂಭತ್ತು ನ್ಯಾಯಾಧೀಶರ ಪೀಠ 1994 ರಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಹೇಳಿದೆ:

"42ನೇ ತಿದ್ದುಪಡಿಯ ಮೂಲಕ ಮುನ್ನುಡಿಗೆ ಸೇರಿಸಲ್ಪಟ್ಟಿರುವ ಸೆಕ್ಯುಲಾರಿಸಂ ಭಾರತದ ಸಂವಿಧಾನದ ಮೂಲ ರಚನೆಯಾಗಿದೆ"

ಹೀಗೆ ಭಾರತದ ಮೂಲ ಸಂವಿಧಾನ , ಹಾಗೂ ಅದನ್ನು ವ್ಯಾಖ್ಯಾನ ಮಾಡುವ ಸುಪ್ರೀಂ ಕೋರ್ಟಿನ ಪೀಠಗಳು ನಿರಂತರವಾಗಿ ಸೆಕ್ಯುಲರಿಸಂ ಎಂಬುದು ಭಾರತದ ಸಂವಿಧಾನದ ಮೂಲ ರಚನೆಯ ಭಾಗ ಎಂದು ಸ್ಪಷ್ಟಪಡಿಸಿದ್ದರೂ ಮೋದಿ ಸರ್ಕಾರ ಅದನ್ನು ಮುನ್ನುಡಿಯಿಂದ ಕಿತ್ತುಹಾಕಲು ಹೊರಟಿರುವುದೇಕೆ?

"ಮೂಲ ಸಂವಿಧಾನ ಮತ್ತು ಸೋಷಿಯಲಿಸಂ"

ಮೂಲ ಸಂವಿಧಾನದ ಮುನ್ನುಡಿಯಲ್ಲಿ ಸೋಷಿಯಲಿಸಂ ಎನ್ನುವ ಪದವಿರಲಿಲ್ಲ ಎನ್ನುವುದು ಮತ್ತು ಅದನ್ನು ಮುನ್ನುಡಿಯಲ್ಲಿ 42 ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು ಎನ್ನುವುದೂ ಕೂಡ ಅರ್ಧ ಸತ್ಯವೇ.

ಅಸಲು ಸಮಾಜವಾದ ಎಂದರೇನು?

ಜಗತ್ತಿನಲ್ಲಿ ಸಮಾಜವಾದದ ಬಗ್ಗೆ ಹಲವು ಬಗೆಯ ವ್ಯಾಖ್ಯಾನಗಳಿವೆ.

ಅವುಗಳೆಲ್ಲದರ ಸಾರ "ಸರ್ವರಿಗೂ ಸಮಪಾಲು- ಸಮಬಾಳು" ಎಂಬುದಷ್ಟೇ ಆಗಿದೆ.

-ಸಮಾಜದ ಆರ್ಥಿಕ ಸಂಪನ್ಮೂಲಗಳ ವಿತರಣೆಯನ್ನು ಸರ್ವಜನರ ಒಳಿತಿಗೆ ಆಯೋಜಿಸುವುದು

-ಸಂಪತ್ತು ಒಂದು ಕಡೆ ಕೇಂದ್ರೀಕರಣವಾಗದಂತೆ ನೋಡಿಕೊಳ್ಳುವುದು, ಅದರ ಮೇಲೆ ಸರ್ವಜನರ ಒಡೆತನವನ್ನು ಸಾಧಿಸುವುದು.

- ಬಡವ, ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡುತ್ತಾ ಆರ್ಥಿಕ ನ್ಯಾಯವನ್ನು ಖಾತರಿಗೊಳಿಸುವುದು.

- ಎಲ್ಲರಿಗೂ ಘನತೆಯಿಂದ ಬದುಕುವಷ್ಟು ಅವಕಾಶಗಳನ್ನು ಕಲ್ಪಿಸಿಕೊಡುವುದು..

ಮೇಲಿನ ಎಲ್ಲಾ ಆಶಯಗಳನ್ನು ಸಾರದಲ್ಲಿ ಒಂದೇ ಪದದಲ್ಲಿ 'ಸಮಾಜವಾದ' ಎಂದು ಕರೆಯುತ್ತಾರೆ.

ಈಗ ಈ ಆಶಯಗಳು ನಮ್ಮ ಸಂವಿಧಾನದಲ್ಲಿ ಇರಲಿಲ್ಲವೇ?

ಸಂವಿಧಾನದ ಮುನ್ನುಡಿಯನ್ನು ನೋಡೊಣ. ಅದು ಹೀಗೆ ಹೇಳುತ್ತದೆ:

"ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಒದಗಿಸಲು...ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರಕಿಸಲು".. ಈ ಸಂವಿಧಾನವನ್ನು ರೂಪಿಸಿರುವುದಾಗಿ ಮುನ್ನುಡಿ ಹೇಳುತ್ತದೆ.

ಹಾಗೆಯೇ ನಮ್ಮ ಸಂವಿಧಾನದ 4 ನೇ ಪರಿಚ್ಚೇಧದ " ಪ್ರಭುತ್ವ ನಿರ್ದೇಶನಾ ತತ್ವಗಳಲ್ಲಿ" :

ಅರ್ಟಿಕಲ್ 38 (1)- ಭಾರತದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಈ ದೇಶದ ಎಲ್ಲಾ ಜನರಿಗೆ ಆರ್ಥಿಕ ನ್ಯಾಯವನ್ನು ಒದಗಿಸುವಂತೆ ಅದೇಶಿಸಲಾಗುವುದು.

ಅರ್ಟಿಕಲ್ 38 (2)- ಪ್ರಭುತ್ವವು ಆದಾಯಗಳಲ್ಲಿನ ಅಸಮಾನತೆಯನ್ನು ಮತ್ತು ಸ್ಥಾನಮಾನ, ಸೌಲಭ್ಯ ಮತ್ತು ಅವಕಾಶಗಳಲ್ಲಿನ ಅಸಮಾನತೆಯನ್ನು ನಿವಾರಿಸಲು ಶ್ರಮಿಸುವುದು.

ಅರ್ಟಿಕಲ್ 39 (ಎ)- ದೇಶದ ಎಲ್ಲಾ ವ್ಯಕ್ತಿಗಳಿಗೂ ಅತ್ಯಗತ್ಯ ಜೀವನೋಪಾಯಗಳನ್ನು ಸಮಾನವಾಗಿ ಪಡೆದುಕೊಳ್ಳುವ ಹಕ್ಕನ್ನು ಖಾತರಿ ಪಡಿಸಲಾಗುವುದು.

ಅರ್ಟಿಕಲ್ 39 (ಬಿ)- ಸಮುದಾಯದ ಸಂಪತ್ತಿನ ಮೇಲೆ ಒಡೆತನವನ್ನು ಸಮುದಾಯವಾದ ಸಾರ್ವತ್ರಿಕ ಒಳಿತಿಗಾಗಿ ಬಳಸುವಂತೆ ನಿಯೋಜಿಸಲಾಗುವುದು.

ಅರ್ಟಿಕಲ್ 39 (ಸಿ)- ಆರ್ಥಿಕ ನೀತಿಗಳು ಸಂಪತ್ತು ಒಂದು ಕಡೆ ಕೇಂದ್ರೀಕರಣವಾಗದಂತೆ ರೂಪಿಸಲಾಗುವುದು.

ಅರ್ಟಿಕಲ್ 39 (ಡಿ-) - ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಸಮಾನ ಕೆಲಸಕ್ಕೆ ಸಮಾನ ವೇತನ.

ಅರ್ಟಿಕಲ್ 41 - ಎಲ್ಲರಿಗೂ ಉದ್ಯೋಗ ಮತ್ತು ಶಿಕ್ಷಣದ ಹಕ್ಕನ್ನು ಒದಗಿಸುತ್ತದೆ.

ಇವೆಲ್ಲವೂ ನಮ್ಮ ಮೂಲ ಸಂವಿಧಾನದಲ್ಲೇ ಇದೆ. ಈ ಎಲ್ಲಾ ನೀತಿಗಳನ್ನೇ ಒಂದೇ ಪದದಲ್ಲಿ :ಸಮಾಜವಾದ' ಎಂದು ಕರೆಯುತ್ತಾರೆ.

ಅದನ್ನೇ ಒಂದು ಪದವಾಗಿ ಮುನ್ನುಡಿಯಲ್ಲಿ ಸೇರಿಸಲಾಗಿದೆ.

ಹಾಗಿದ್ದಲ್ಲಿ ಮೋದಿ ಸರ್ಕಾರ ಸಮಾಜವಾದದ ಪದದ ಜೊತೆಗೆ ಮೇಲಿನ ಎಲ್ಲಾ ಕಲಂಗಳನ್ನು ರದ್ದು ಮಡುವುದೇ?

ಹಾಗೇ ನೋಡಿದರೆ 1977 ರಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರವನ್ನು ಮಣಿಸಿ ಇವತ್ತಿನ ಬಿಜೆಪಿಯ ಅಂದಿನ ಅವತಾರವಾಗಿದ್ದ ಭಾರತೀಯ ಜನ ಸಂಘ ಹಾಗೂ ಇನ್ನಿತರ ಪಕ್ಷಗಳು ಒಟ್ಟುಗೂಡಿ ರಚಿಸಿಕೊಂಡ ಜನತಾ ಪಕ್ಷ ಅಧಿಕಾರಕ್ಕೆ ಬಂತು.

ಆ ಸರ್ಕಾರ ಸಂವಿಧಾನಕ್ಕೆ 44 ನೇ ತಿದ್ದುಪಡಿಯನ್ನು ತಂದು ಇಂದಿರಾ ಗಾಂಧಿ 42 ನೇ ತಿದ್ದುಪಡಿಯ ಮೂಲಕ ಜಾರಿ ಮಾಡಿದ್ದ ಇತರ ತಿದ್ದುಪಡಿಗಳನ್ನು ರದ್ದುಗೊಳಿಸಿತೇ ವಿನಾ ಅದೇ 42 ನೇ ತಿದ್ದುಪಡಿಯ ಪ್ರಮುಖ ಅಂಶವಾದ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಸೇರ್ಪಡಗಳನ್ನಲ್ಲ!

ಆ ನಂತರ ಈವರೆಗೆ ಸಂವಿಧಾನಕ್ಕೆ 80 ಕ್ಕೂ ಹೆಚ್ಚು ತಿದ್ದುಪಡಿಗಳಾಗಿದ್ದರೂ ಬಿಜೆಪಿಯನ್ನು ಒಳಗೊಂಡಂತೆ ಹಲವು ಪಕ್ಷಗಳ ಸರ್ಕಾರಗಳು ಅಧಿಕಾರಕ್ಕೆ ಬಂದಿದ್ದರೂ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಗೆ ತಿದ್ದುಪಡಿ ಮಾಡಿರಲಿಲ್ಲ.

ದುರಂತವೆಂದರೆ ಸೊಷಿಯಲಿಸಂ ಆಶಯಗಳು ನಿರ್ದೇಶನಾ ತತ್ವಗಳಲ್ಲಿ ಇದ್ದರೂ ಅದು ಮೂಲಭೂತ ಹಕ್ಕುಗಳಲ್ಲ. ಅದನ್ನು ಸರ್ಕಾರ ಜಾರಿ ಮಾಡದಿದ್ದರೂ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ.

ಹೀಗಾಗಿಯೇ ಕಾಂಗ್ರೆಸ್ಸನ್ನೂ ಒಳಗೊಂಡಂತೆ ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳು ಸಂವಿಧಾನಕ್ಕೆ ತಿದ್ದುಪಡಿಯನ್ನು ಮಾಡದೆಯೇ ಸೆಕ್ಯುಲಾರಿಸಂ ವಿರೋಧಿ, ಸೊಷಿಯಲಿಸಂ ವಿರೋಧಿ ನೀತಿಗಳನ್ನೇ ಅನುಸರಿಸುತ್ತಾ ಬಂದಿದ್ದವು.

1991 ರ ನಂತರ ಈ ಅನಧಿಕೃತ ಸಂವಿಧಾನ ಉಲ್ಲಂಘನೆ ಇನ್ನೂ ವೇಗ ಪಡೆಯಿತು. ಅದರಿಂದ ಪುಷ್ಟಿ ಪಡೆದುಕೊಂಡ ಸಂಘಪರಿವಾರದ ಹಿಂದೂತ್ವವಾದಿಗಳು ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಮೇಲೆ ಈಗ ಬಹಿರಂಗವಾಗಿ ಹಾಗೂ ಅಧಿಕೃತವಾಗಿಯೇ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಮೇಲೆ ಸಮರ ಸಾರಿವೆ.

ಹೀಗಾಗಿ ಇದು ಸೆಕ್ಯುಲಾರಿಸಂ ಮತ್ತು ಸೊಷಿಯಲಿಸಂ ಎಂಬ ಎರಡು ಪದಗಳ ಮೇಲಿನ ದಾಳಿಯೂ ಅಲ್ಲ. ಸಾಂವಿಧಾನಿಕ ತಂತ್ರಿಕತೆಯ ವಿಷಯಗಳೂ ಅಲ್ಲ.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಹಿರಂಗವಾಗಿ ಮತ್ತು ಅಧಿಕಾರಯುತವಾಗಿಯೇ ಮೂಲ ಸಂವಿಧಾನವನ್ನು ಅಮಾನ್ಯಗೊಳಿಸುವ ಯೋಜನೆಯನ್ನು ಜಾರಿ ಮಾಡುತ್ತಿದೆ.

"ಒಂದು ದೇಶ- ಒಂದು ಚುನಾವಣೆ"

"ಭಾರತೀಕರಣದ ಹೆಸರಲ್ಲಿ ಬ್ರಾಹ್ಮಣೀಕರಣ"

"ಅನೌಪಚಾರಿಕವಾಗಿ ಹಾಗೂ ಅಸಂವಿಧಾನಿಕವಾಗಿ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಪದಗಳನ್ನು ತೆಗೆದುಹಾಕುವುದು"

ಇವೆಲ್ಲವೂ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಘೋಷಿಸದೆಯೇ ಬದಲಾವಣೆ ಮಾಡುವ ಯೋಜನೆಗಳಾಗಿವೆ.

ಹಾಲಿ ಸಂವಿಧಾನವನ್ನು ಅಮಾನ್ಯಗೊಳಿಸಿ ತಮ್ಮ ಹಿಂದೂತ್ವವಾದಿ- ಕಾರ್ಪೊರೇಟ್ ಬಂಡವಾಳಶಾಹಿ- ಬ್ರಾಹ್ಮಣಶಾಹಿ ಸಂವಿಧಾನಕ್ಕೆ ಮಾನ್ಯತೆಗಳಿಸಿಕೊಳ್ಳುವ ಯೋಜನೆಯಾಗಿದೆ.

ನಿಜವಾದ ದೇಶಭಕ್ತರು ಈ ಹುನ್ನಾರವನ್ನು ಸೋಲಿಸಲೇ ಬೇಕು.

Advertisement
Advertisement
Recent Posts
Advertisement