Advertisement

ಜಾತಿ, ಸಮುದಾಯಗಳ ನಡುವೆ ವಿಷ ಬಿತ್ತುವ ದ್ವೇಷಾಸುರರಿಗೆ ಶಿರಾದಲ್ಲೇನು ಕೆಲಸ?

Advertisement

ಬರಹ: ನಟರಾಜಪ್ಪ (ರೈತರು, ಯರಗುಂಟೆ, ಶಿರಾ ತಾಲ್ಲೂಕು.) ಶಿರಾ ತಾಲ್ಲೂಕಿನ ಗೌರವಾನ್ವಿತ ಹಿರಿಯರೆ, ಯುವಕ ಯುವತಿಯರೆ ಹಾಗೂ ಎಲ್ಲಾ ಗೆಳೆಯರೆ, ಹುಷಾರು! ಶಿರಾ ತಾಲ್ಲೂಕಿಗೆ ಹಗಲುಗಳ್ಳರು ಬಂದವ್ರೆ. ಇವರು ನಿಮ್ಮ ಮುಂದೆ ಬಣ್ಣ ಬಣ್ಣದ ಮಾತುಗಳನ್ನಾಡಿ ನಿಮ್ಮ ಓಟುಗಳನ್ನು ಕಿತ್ತುಕೊಂಡು ಓಡಿ ಹೋಗುವವರು. ತಿಳಿಯಿರಿ! ಇದು ದೇಶದ ಚುನಾವಣೆ ಅಲ್ಲ. ರಾಜ್ಯದಲ್ಲಿ ಸರ್ಕಾರ ರಚಿಸುವಂತಹದ್ದೂ ಅಲ್ಲ.ಇದು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ. ಶಿರಾ ತಾಲ್ಲೂಕಿನ ಜನರಿಗೆ ಸಂಬಂಧಿಸಿದ ಚುನಾವಣೆ. ರೈತರ ಜೀವ -ಜೀವನ ಮಳೆಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದರೂ ತಲೆಕೆಡಿಸಿಕೊಳ್ಳದೆ, ಸರ್ಕಾರದ ಮಂತ್ರಿಗಳು, ಆಡಳಿತ ಪಕ್ಷದ ಲೀಡರುಗಳು ಶಿರಾಕ್ಕೆ ಬಂದಿರುವರು. ಇವರು ಯಾವತ್ತೂ ನಮ್ಮ ತಾಲ್ಲೂಕಿನ ಕಷ್ಟಕಾರ್ಪಣ್ಯಗಳಿಗೆ ಆದವರಲ್ಲ. ಅಷ್ಟೇ ಅಲ್ಲ. ನಮ್ಮ ನೆಲ, ಜಲಗಳ ಬಗ್ಗೆ ತಿರಸ್ಕಾರ ಮಾಡಿದವರು. ರೈತರನ್ನು ಬೀದಿಗೆ ತಳ್ಳಲು ತಂತ್ರಗಳನ್ನು ಹಣೆಯುತ್ತಿರುವ ಇಂತಹವರಿಗೆ ಓಟು ಕೊಡುವುದೂ ‘ಹಗ್ಗ ಕೊಟ್ಟು ಕೈಕಾಲು ಕಟ್ಟಿಸಿಕೊಳ್ಳವುದೂ’ ಒಂದೇ ಅಲ್ಲವೆ? ನಮ್ಮ ತಾಲ್ಲೂಕಿನಲ್ಲಿ ಏನು ಸೌಲಭ್ಯಗಳಿವೆ, ಏನು ಇಲ್ಲ, ಏನೇನು ಸೌಲಭ್ಯಗಳು ಆಗಬೇಕು ಎಂದು ತೀರ್ಮಾನಿಸುವವರು ನಾವೇ ಅಲ್ಲವೇ? ನಮ್ಮ ನೆಲ ಜಲಗಳನ್ನು ರಕ್ಷಿಸುವ ಅನುಭವಸ್ಥರು, ಸಮರ್ಥರು, ಧೈರ್ಯಶಾಲಿಗಳು ನಮ್ಮಲ್ಲಿ ಯಾರಿದ್ದಾರೆ ಎಂದು ತಿರ್ಮಾನಿಸುವವರು ನಾವೇ ಅಲ್ಲವೆ? ನಿಮಗೆ ಗೊತ್ತಿದೆ: ಶ್ರೀ ಟಿ.ಬಿ.ಜಯಚಂದ್ರ ಅವರು ಪಣ ತೊಟ್ಟು ನಿಂತು ಶಿರಾ ತಾಲ್ಲೂಕಿಗೆ ಹೇಮಾವತಿ ಹರಿಸಿದರು. ನಮ್ಮದು ಶಾಶ್ವತ ಬರಗಾಲ ಪ್ರದೇಶ. ತೀರಾ ಇತ್ತೀಚಿನವರೆಗೆ ನಮ್ಮ ಜನರಿಗೆ, ದನಕರುಗಳಿಗೆ ಕುಡಿಯುವ ನೀರಿಗೂ ಪರದಾಡಬೇಕಾಗಿತ್ತು, ಅನೇಕ ರೈತರು ಇದ್ದ ಬದ್ದ ಜಮೀನುಗಳನ್ನು ಮಾರಿಕೊಂಡರು. ಹೇಮಾವತಿ ನೀರೆ ಏನಾದ್ರೂ ಬರದಿದ್ದರೆ ಬಹಳಷ್ಟು ಜನ ಊರನ್ನು ಬಿಡಬೆಕಾಗ್ತಿತ್ತು. ಶ್ರೀಯುತರು ಎಲ್ಲಾ ಎಡರು ತೊಡರುಗಳನ್ನು ಮೆಟ್ಟಿ ನಿಂತು, ಎಲ್ಲಾ ವಿರೋಧಗಳನ್ನು ಎದುರಿಸಿ ಹಂತ ಹಂತವಾಗಿ ಮೊದಲು ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ನೀರು ಹರಿಸಿದರು. ನಂತರ ಶಿರಾ ಕೆರೆಯನ್ನು ತುಂಬಿಸಿದರು. ಇದರಿಂದ ಶಿರಾ ನಗರದ ಲಕ್ಷಾಂತರ ನಾಗರಿಕರ ನೀರಿನ ದಾಹ ತಣಿಯಿತು. ಒಣಗಿ ಹೋಗಿದ್ದ ನೂರಾರು ಹಳ್ಳಿಗಳ ಪಂಚಾಯಿತಿ ಬೋರುಗಳೂ, ರೈತರ ನೀರಾವರಿ ಬೋರುಗಳು ನಮಗೆಲ್ಲಾ ನೀರನ್ನು ಕರುಣಿಸಿದವು. ಶ್ರೀ ಟಿ.ಬಿ. ಜಯಚಂದ್ರರವರು ರಾಜಕೀಯಕ್ಕೆ ಮಾತ್ರ ಬೆಲೆ ಕೊಡದೇ ರೈತರ ಬದುಕಿಗೂ ಬೆಲೆ ಕೊಡುವವರು ಎಂಬುದನ್ನು ನಾವು ನೋಡಿದ್ದೇವೆ. ಮದಲೂರು ಕೆರೆಗೆ ನೀರು ಹರಿಸಲು ಅವರು ಮಾಡಿದ ಶಪಥವೇ ನಮ್ಮ ಕಣ್ಣ ಮುಂದಿದೆ. ರೈತರ ಋಣವನ್ನು ತೀರಿಸುವ ಬಹಳ ದೊಡ್ಡ ಯೋಜನೆಯನ್ನು ಅವರು ಕಾರ್ಯಗತಗೊಳಿಸಿದರು. ರೈತ ದ್ರೋಹಿಗಳು ಅನೇಕ ಸಬೂಬುಗಳನ್ನು ಹೇಳಿಕೊಂಡು ಮದಲೂರು ಕೆರೆಗೆ ನೀರು ಬರದಂತೆ ತಡೆದಿರುವುದು ಗೊತ್ತಿದೆ. ಹೇಮಾವತಿ ಕಾವೇರಿಗೆ ಸೇರಿದ ನದಿ, ನಿಮ್ಮದು ಕೃಷ್ಣ ಕೊಳ್ಳದ ಪ್ರದೇಶ, ನಿಮಗೆ ಹೇಗೆ ನೀರು ಬಿಡುವುದು ಎಂದು ವಿರೋಧಿಸಿದ ಜನತಾದಳ, ಬಿಜೆಪಿಯವರು ಇವತ್ತು ತಮ್ಮ ದುಷ್ಕೃತ್ಯಗಳನ್ನು ಮುಚ್ಚಿಟ್ಟು, ಸುಳ್ಳುಗಳನ್ನು ಹೇಳಿಕೊಂಡು ಶಿರಾದಲ್ಲಿ ಬೀಡುಬಿಟ್ಟಿದ್ದಾರೆ. ಪ್ರತಿವರ್ಷ ನೀರು ಬಿಡುವಾಗಲೂ ಶಿರಾಕ್ಕೆ ನೀರು ಬಿಡದಂತೆ ಧರಣಿ ಮಾಡಿದವರು, ನಾಲೆ ಒಡೆದವರು, ನೀರು ಪೋಲಾಗುತ್ತೆ ಅಂತ ರಾಜಕೀಯ ಮಾಡಿದವರು ಶಿರಾ ಜನತೆಗೆ ದ್ರೋಹ ಮಾಡಿದವರಲ್ಲವೆ? ಇವರನ್ನು ಶಿರಾದ ಜನ ನಂಬುವುದಿಲ್ಲ. •ಮೊಮ್ಮಗನನ್ನು ಮಂಡ್ಯದಲ್ಲಿ ಗೆಲ್ಲಿಸಿಕೊಳ್ಳಲು ಮಂಡ್ಯದ ಸ್ವಾಭಿಮಾನಿ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದೂ ಅಲ್ಲದೆ, ಇನ್ನಿಲ್ಲದ ಕಿರುಕುಳ ನೀಡಿದ ಹಾಸನದ ಗೌಡರು ಶಿರಾದಲ್ಲಿ ಮಹಿಳೆಗೆ ಕರುಣೆ ತೋರಿಸುವುದು ನಾಟಕವಲ್ಲದೆ ಮತ್ತೇನು? •ಜನರಿಗೆ ಅನ್ನ ನೀರು ಕಾಣಿಸದ ಆಡಳಿತ ಪಕ್ಷ ಸುಮಾರು ಒಂದು ವರ್ಷದಿಂದ ಅಶಕ್ತರಿಗೆ ಪೆನ್ಷನ್ ಕೂಡ ನೀಡದೆ, ರಾಜ್ಯದಲ್ಲಿ ಜಾರಿಯಲ್ಲಿದ್ದ ಜನ ಕಲ್ಯಾಣ ಯೋಜನೆಗಳನ್ನು ಕಸದ ಬುಟ್ಟಿಗೆ ಹಾಕಿರುವುದು ಜನದ್ರೋಹವಲ್ಲದೆ ಮತ್ತೇನು? •ಸರ್ಕಾರದಲ್ಲಿ, ಕೈಗಾರಿಕೆಗಳಲ್ಲಿ, ದೂರವಾಣಿಇಲಾಖೆಯಲ್ಲಿ, ರೈಲ್ವೆಯಲ್ಲಿನ ಕೋಟ್ಯಾಂತರ ಉದ್ಯೋಗಗಳನ್ನು ಮಾರಿಕೊಂಡ ಆಡಳಿತ ಪಕ್ಷದವರು ಶಿರಾದಲ್ಲಿ ಏನನ್ನು ಮಾರುವರೋ? •ಜಾತಿ ಜಾತಿಗಳ ನಡುವೆ,ಸಮುದಾಯಗಳ ನಡುವೆ ದ್ವೇಷ ಬಿತ್ತಿ ಅಧಿಕಾರ ಬೆಳೆಯುವ ದ್ವೇಷಾಸುರರಿಗೆ ಸರ್ವಜನಾಂಗದ ಶಾಂತಿಯ ತೋಟ ಶಿರಾದಲ್ಲಿ ಏನು ಕೆಲಸ? •ಈಗ ಹೇಳಿ: ತಾಲ್ಲೂಕಿನ ಪ್ರತಿಯೊಬ್ಬ ಪ್ರಜೆಗೂ ಬೇಕಾದ ನೀರು, ಉದ್ಯೋಗ, ಗೌರವಗಳನ್ನು ತಂದುಕೊಡುವ ಜನ ನಾಯಕ ಯಾರು? ಶಿರಾದ ಜನರಿಗೆ ದ್ರೋಹ ಬಗೆದು,ಚುನಾವಣೆ ಸಮಯದಲ್ಲಿ ಬಣ್ಣದ ಮಾತುಗಳನ್ನಾಡಿ ಓಟು ಕಿತ್ತುಕೊಂಡು ಓಡಿಹೋಗುವವರು ಯಾರು? ನಮ್ಮ ತಾಲ್ಲೂಕಿನ ಜವಾಬ್ದಾರಿ ನಮ್ಮದೇ. ಆ ಕಾರಣಕ್ಕಾಗಿ ಯೋಚಿಸಿ ಮತದಾನ ಮಾಡಿ. ________________________________ ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement