Advertisement

ಅಂಬೇಡ್ಕರ್ ಅವರು ಸಂಸ್ಕೃತವನ್ನು ಅಧಿಕೃತ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕೆಂದು ಆಗ್ರಹಿಸಿದ್ದು ನಿಜವೇ?

Advertisement

ಲೇಖನ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ನಾಗಪುರದಿಂದ ಮತ್ತು 'ನಾಗಪುರದ ವಕೀಲಿಕೆ' ಮಾಡುತ್ತಲೇ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದ ಹಾಲಿ ಮುಖ್ಯ ನ್ಯಾಯಾಧೀಶರಾದ ಬೋಬ್ಡೆ ಯವರು , ನಿವೃತ್ತಿಯಾದ ನಂತರವೂ ನಾಗಪುರದ ವಕೀಲಿಕೆ ಮುಂದುವರೆಸುವ ಸೂಚನೆಯನ್ನು ನಿನ್ನೆ ನಾಗಪುರದ ಭಾಷಣವೊಂದರಲ್ಲಿ ನೀಡಿದ್ದಾರೆ! ಅಂಬೇಡ್ಕರ್ ಅವರ ೧೩೦ನೇ ಜನ್ಮದಿನದಂದು ನಾಗಪುರದ ಲಾ ಸ್ಕೂಲ್ ಸಂಘಟಿಸಿದ್ದ ಸಭೆಯೊಂದರಲ್ಲಿ ಮಾತನಾಡುತ್ತಾ ಶ್ರೀಯುತರು: ಅಂಬೇಡ್ಕರ್ ಅವರು ಸಂಸ್ಕೃತವನ್ನು ನ್ಯಾಷನಲ್ ಭಾಷೆಯನ್ನಾಗಿ ಮಾಡಬೇಕೆಂದು ಆಗ್ರಹಿಸಿದ್ದರು. ಆ ನಿಟ್ಟಿನಲ್ಲಿ ಅವರು ಇತರರ ಜೊತೆಗೂಡಿ ಒಂದುಮನವಿಯನ್ನು ಮಂಡಿಸಿದ್ದರು. ಅದನ್ನು ಮಂಡಿಸಲಾಯಿತೋ ಇಲ್ಲವೋ ಗೊತ್ತಿಲ್ಲ ..ಆದರೆ ಅದಕ್ಕೆ ಪಂಡಿತರು, ಮೌಲ್ವಿಗಳು ಮತ್ತು ಪಾದ್ರಿಗಳು ಸಹಿ ಮಾಡಿದ್ದರು. ಎಂದು ಹೇಳಿದ್ದಾರೆ. ಒಬ್ಬ ಮುಖ್ಯ ನ್ಯಾಯಾಧೀಶರು ಒಂದು ಗಂಭೀರವಾದ ಸಭೆಯಲ್ಲಿ ಮಾತನಾಡುತ್ತಾ ಒಂದು ಐತಿಹಾಸಿಕ ಸಂಗತಿಯ ಬಗ್ಗೆ ಇಷ್ಟು ಬೇಜವಾಬ್ದಾರಿಯಾಗಿ ಮಾತನಾಡಿದ ಮತ್ತೊಂದು ಉದಾಹರಣೆ ಸಿಗಲಾರದು! ಏಕೆಂದರೆ ನ್ಯಾಯಾಧೀಶರು ಅದರಲ್ಲೂ ಮುಖ್ಯ ನ್ಯಾಯಾಧೀಶ ಹುದ್ದೆಯಲ್ಲಿ ರುವಷ್ಟು ಹಿರಿಯರು ನಮ್ಮ ಸಂವಿಧಾನದ ಸಭೆಯಲ್ಲಿ ನಡೆದ ಪ್ರಮುಖ ಚರ್ಚೆಗಳ ಬಗ್ಗೆ ಅವಹಾಗಾಹನೆ ಇಟ್ಟುಕೊಳ್ಳಬೇಕಾದದ್ದು ಪ್ರಾಥಮಿಕ ಅವಶ್ಯಕತೆ. ಅದರಲ್ಲೂ ಒಂದು ವಿವಾದಾಸ್ಪದ ಸಂಗತಿಯ ಬಗ್ಗೆ ಪ್ರಸ್ತಾಪಿಸುವಾಗ ಅದರ ಪೂರ್ವಾಪರ ಇತಿಹಾಸಗಳನ್ನು ಅಧ್ಯಯನ ಮಾಡದೆ "ಮಂಡಿಸಿದರೋ ಇಲ್ಲವೋ ಗೊತ್ತಿಲ್ಲ" ಎಂಬ ಅಜ್ಞಾನ ಹಾಗು ಬೇಜವಾಬ್ದಾರಿ ಪ್ರದರ್ಶಿಸುವುದು ಅವರ ಕುಳಿತಿರುವ ಸ್ಥಾನಕ್ಕೆ ಗೌರವ ತರುವಂತದ್ದಲ್ಲ. ಇರಲಿ. ಅಂಬೇಡ್ಕರ್ ಅವರು ಸಂಸ್ಕೃತವನ್ನು ದೇಶದ ಅಧಿಕೃತ ಭಾಶೆ ಮಾಡಲು ಆಗ್ರಹಿಸಿದ್ದರು ಎಂಬ ಹೇಳಿಕೆಗಳು ಹೊಸತೇನಲ್ಲ. ೧೯೯೦ರ ನಂತರ ಅಂಬೇಡ್ಕರ್ ಅವರನ್ನು ಕೋ-ಆಪ್ಟ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಸಂಘಪರಿವಾರ, ಅಂಬೇಡ್ಕರ್ ಅವರನ್ನು ಹಿಂದುವೀಕರಿಸಲು ಹಲವಾರು ಅಪದ್ಧ ಐತಿಹ್ಯಗಳನ್ನು ಹೆಣೆಯುತ್ತಾ ಬಂದಿದೆ. ಅದರಲ್ಲಿ ಕೆಲವು ಹೀಗಿವೆ : ೧) "ಅಂಬೇಡ್ಕರ್ ಅವರು ಆರೆಸ್ಸೆಸ್ ಶಾಖೆಗೆ ಭೇಟಿ ಕೊಟ್ಟು ಅಲ್ಲಿ ಜಾತಿ ಬೇಧವಿರದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದರು ೨) ಅಂಬೇಡ್ಕರ್ ಅವರು ತ್ರಿವರ್ಣ ಧ್ವಜಕ್ಕಿಂತ ಭಾಗವಾಧ್ವಜವನ್ನು ರಾಷ್ಟ್ರ ಧ್ವಜ ಮಾಡುವ ಬಗ್ಗೆ ಒಲವು ಹೊಂದಿದ್ದರು ೩) ಅಂಬೇಡ್ಕರ್ ಅವರು ಗಾಂಧಿ ಹತ್ಯೆಯಲ್ಲಿ ಆರೋಪಿಯಾಗಿ ಬಂಧಿತರಾಗಿದ್ದ ಸಾವರ್ಕರ್ ಅವರ ಬಗ್ಗೆ ಅಭಿಮಾನ ಹೊಂದಿದ್ದರು ಮತ್ತು ಅವರ ಬಿಡುಗಡೆಗೆ ತಮ್ಮೆಲ್ಲ ಪ್ರಯತ್ನಗಳನ್ನು ಮಾಡಿದ್ದರು... ಹಾಗೂ... ೪) ಅಂಬೇಡ್ಕರ್ ಅವರು ಸಂಸ್ಕೃತವನ್ನು ರಾಷ್ಟ್ರಭಾಷೆಯಾಗಿ ಮಾಡಲು ಆಗ್ರಹಿಸಿದ್ದರು ... ಎಂಬಿತ್ಯಾದಿ..ತಳಬುಡವಿಲ್ಲದ, ತರ್ಕ-ಪುರಾವೆಗಳಿಲ್ಲದ ಸುಳ್ಳುಗಳನ್ನು ಪ್ರಚಾರ ಮಾಡುತ್ತಾ ಬಂದಿದ್ದಾರೆ. ಒಂದು ಸುಳ್ಳನ್ನು ಸಾವಿರ ಸರಿ ಹೇಳಿದರೆ ಸತ್ಯವಾಗಿ ಬಿಡುತ್ತದೆ ಎಂಬ ಗೋಬೆಲ್ಸ್ ತತ್ವದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿರುವ ಸಂಘ ಪರಿವಾರದವರು ಕಾಲಕಾಲಕ್ಕೆ ಈ ಸುಳ್ಳುಗಳಿಗೆ ಹೊಸ ಜೀವ ತುಂಬಿ ಹರಿಬಿಡುತ್ತಿರುತ್ತಾರೆ. ಅದರ ಭಾಗವಾಗಿ ೨೦೧೬ರಲ್ಲಿ ಮುರಳಿ ಮನೋಹರ್ ಜೋಶಿಯವರು ದೊಡ್ಡ ಮಟ್ಟದಲ್ಲಿ ಅಂಬೇಡ್ಕರ್ ಮತ್ತು ಸಂಸ್ಕೃತ ಪ್ರೇಮದ ಬಗ್ಗೆ ಪ್ರಚಾರ ಶುರುವಿಟ್ಟುಕೊಂಡಿದ್ದರು. ಈಗ ಅವರ ಮಾತುಗಳನ್ನೇ ಮುಖ್ಯ ನ್ಯಾಯಾಧೀಶ ಹುದ್ದೆಯಿಂದ ಬೋಡ್ಬೆಯವರು ಪುನುರುಚ್ಚರಿಸಿದ್ದಾರೆ. ದೇಶದ ಅಫಿಷಿಯಲ್- ಆಡಳಿತ ಭಾಷೆ ಯಾವುದಿರಬೇಕೆಂಬ ಬಗ್ಗೆ ಬಗ್ಗೆ ಅಂಬೇಡ್ಕರ್ ಅವರ ಅಭಿಪ್ರಾಯ ಏನಿತ್ತು? ಮತ್ತು ಸಂವಿಧಾನ ರಚನಾ ಸಭೆಯಲ್ಲಿ ಭಾಷಾ ನೀತಿಯ ಬಗ್ಗೆ ನಡೆದ ಚರ್ಚೆಯ ಹಿನ್ನೆಲೆಯಲ್ಲಿ ಮಾತ್ರ "ಅಂಬೇಡ್ಕರ್ ಮತ್ತು ಸಂಸ್ಕೃತದ" ಸಂಘಪರಿವಾರದ ಈ ಸುಳ್ಳುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಆದರೆ ಚರ್ಚೆಗೆ ಹೋಗುವ ಮುನ್ನ ಕೆಲವು ಪ್ರಾಥಮಿಕ ವಾಸ್ತವಗಳನ್ನು ತಿಳಿಯೋಣ: -ಸಂಸ್ಕೃತವನ್ನು ಭಾರತದ ಅಫಿಷಿಯಲ್ ಮತ್ತು ನ್ಯಾಷನಲ್ ಭಾಷೆಯಾಗಿ ಮುಂದಿಡಬೇಕೆಂಬ ತಿದ್ದುಪಡಿಯನ್ನು ಸಂವಿಧಾನ ರಚನಾ ಸಭೆಯ ಮುಂದಿಟ್ಟಿದ್ದು ಅಂಬೇಡ್ಕರ್ ಅಲ್ಲ ಬದಲಿಗೆ ಬಂಗಾಳದಿಂದ ಆಯ್ಕೆಯಾಗಿದ್ದ ಸದಸ್ಯ ಲಕ್ಷ್ಮಿ ಕಾಂತ ಮೈತ್ರಾ ಅವರು.. ಅವರ ತಿದ್ದುಪಡಿಗೆ ೨೭ ಸಹ ಸದಸ್ಯರ ಅನುಮೋದನೆಯಿದ್ದದ್ದು ನಿಜ. ಅದರಲ್ಲಿ ಪ್ರಧಾನವಾದವರು ಅಂಬೇಡ್ಕರ್, ಟಿಟಿ ಕೃಷ್ಣಮಾಚಾರಿ , ಕೊಡಗಿನ ಪೂಣಚ್ಚ, ಮದ್ರಾಸ್ ಪ್ರಾಂತ್ಯದ ದುರ್ಗಾಭಾಯಿ ಮತ್ತಿತರರು -ಆ ಮನವಿಗೆ ಸಹಿ ಮಾಡಿದ್ದವರಲ್ಲಿ ಮೈತ್ರಾ ಅವರನ್ನು ಹೊರತುಪಡಿಸಿ ಮಿಕ್ಕ ಯಾವೊಬ್ಬ ಸದಸ್ಯರು ಎಂದು ಸಂಸ್ಕೃತವನ್ನು ಒಂದು ಅಧಿಕೃತ ಭಾಷೆಯಾಗಬಹುದು ಎಂದು ಯಾವತ್ತೂ ಒಪ್ಪಿದವರಲ್ಲ. ಅವರಲ್ಲಿ ಕೆಲವರಿಗೆ ಇಂಗ್ಲೀಷೇ ಆಡಳಿತ ಭಾಷೆಯಾಗಿ ಮುಂದುವರೆಯಬೇಕು ಎಂದು ಅಭಿಪ್ರಾಯವಿದ್ದರೇ, ಅಂಬೇಡ್ಕರ್ ಅವರಿಗೆ ಹಿಂದಿಯೇ ಕೇಂದ್ರದ ಮತ್ತು ರಾಜ್ಯಗಳ ಆಡಳಿತ ಭಾಷೆಯಾಗಬೇಕು ಎನ್ನುವ ಅಭಿಪ್ರಾಯವಿತ್ತು. ಸಂವಿಧಾನ ಸಭೆಯಲ್ಲಿ ದೇಶದ ಅಫಿಷಿಯಲ್/ ನ್ಯಾಶನಲ್ ಭಾಷೆ ಯಾವುದಿರಬೇಕು ಎಂಬ ಬಗ್ಗೆ ಮುಂದಿಡಲಾದ ಹಲವಾರು ತಿದ್ದುಪಡಿಗಳು 1949ರ ಸೆಪ್ಟೆಂಬರ್ 12, 13, ಮತ್ತು 14 ರಂದು ಸುದೀರ್ಘ ಚರ್ಚೆಗೊಳಪಟ್ಟಿತು ಅದರ ಭಾಗವಾಗಿ ಸೆಪ್ಟೆಂಬರ್ 12 ರಂದು ಲಕ್ಷ್ಮಿ ಕಾಂತ್ ಮೈತ್ರಾ ಸಹ ತಮ್ಮ ತಿದ್ದುಪಡಿಯನ್ನು ಪ್ರಸ್ತಾಪಿಸಿದರು ಹೀಗಾಗಿ ಸನ್ಮಾನ್ಯ ನ್ಯಾಯಮೂರ್ತಿ ಬೊಬ್ಡೆಯವರೇ ಆ "ತಿದ್ದುಪಡಿಯನ್ನು ಮಂಡಿಸಲಾಯಿತೋ ಇಲ್ಲವೋ ಗೊತ್ತಿಲ್ಲ" ಎಂದು ಹೇಳುವುದು ಬೇಜವಾಬ್ದಾರಿಯಾಗುತ್ತದಲ್ಲವೇ? ಇನ್ನು ಆ ತಿದ್ದುಪಡಿಯ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳೇನು? ತಿದ್ದುಪಡಿಗೆ ಸಹಿ ಹಾಕಿದ್ದ ಅಂಬೇಡ್ಕರ್ ಮತ್ತು ಇತರ ಸದಸ್ಯರು ಯಾವ ವಾದಗಳನ್ನು ಮಂಡಿಸಿದರು? ಸೆವ್ಟೆಂಬರ್ 12 ರಂದು ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಯ ಸಂಪೂರ್ಣ ವಿವರಗಳು : http://164.100.47.194/loksabha/writereaddata/cadebatefiles/C12091949.html ಸೆಪ್ಟೆಂಬರ್ 13 ರಂದು ನಡೆದ ಚರ್ಚೆಗಳು : http://164.100.47.194/loksabha/writereaddata/cadebatefiles/C13091949.html ಸೆಪ್ಟೆಂಬರ್ 14ರಂದು ನಡೆದ ಚರ್ಚೆಗಳು : http://164.100.47.194/loksabha/writereaddata/cadebatefiles/C14091949.html ವೆಬ್ ವಿಳಾಸದಲ್ಲಿ ಲಭ್ಯ. ಪರ - ವಿರೋಧಿ ವಾದಗಳಲ್ಲಿ ಆಸಕ್ತಿಯಿರುವ ಎಲ್ಲರೂ ಗಮನಿಸಬಹುದು. ಈ ತಿದ್ದುಪಡಿಯ ಬಗ್ಗೆ ಚರ್ಚೆ ಪ್ರಾರಂಭವಾದಾಗ ತಮ್ಮ ತಿದ್ದುಪಡಿಯನ್ನು ಮಂಡಿಸಲು ಮೈತ್ರಾ ಅವರು ಹಾಜರಿರಲಿಲ್ಲ! ನಂತರ ಹಾಜರಾಗಿ ತಮ್ಮ ವಾದವನ್ನು ಮಂಡಿಸುತ್ತಾರೆ. ಅದರ ವಿವರಗಳು ಮೇಲಿನ ವೆಬ್ ವಿಳಾಸದಲ್ಲಿದೆ. ಆದರೆ ಇಡೀ ಮೂರೂ ದಿನಗಳ ವಾದ-ವಿವಾದಗಳಲ್ಲಿ ಅಂಬೇಡ್ಕರ್ ಅವರನ್ನು ಒಳಗೊಂಡಂತೆ ಮೈತ್ರ ಅವರ ತಿದ್ದುಪಡಿಯನ್ನು ಬೆಂಬಲಿಸಿದ್ದ ಯಾವ ಸದಸ್ಯರು ಸಂಸ್ಕೃತವನ್ನು ರಾಷ್ಟ್ರಭಾಷೆ ಮಾಡಬೇಕೆಂದು ಆಗ್ರಹಿಸವುದಿಲ್ಲ. ಮಾತನಾಡಿದ ದುರ್ಗಾಬಾಯಿಯಂಥವರು ಹಿಂದಿಗಿಂತ ಪರ್ಷಿಯನ್ ಮಿಶ್ರಿತ ಹಿಂದೂಸ್ಥಾನಿ ಹಾಗು ರೋಮನ್ ಅಂಕಿಗಳು ದೇಶಭಾಷೆಯಾಗಬೇಕೆಂದು ಅಭಿಪ್ರಾಯ ಪಡುತ್ತಾರೆ. ಅವರ ಪ್ರಸ್ತಾಪಕ್ಕೆ ನೈತಿಕ ಬೆಂಬಲ ನೀಡುವುದು ಭಾರತೀಯ ಜನತಾ ಪಕ್ಷದ ಹಿಂದಿನ ಅವತಾರವಾಗಿದ್ದ ಭಾರತೀಯ ಜನಸಂಘದ ಸಂಸ್ಥಾಪಕ ಶಾಮ ಪ್ರಸಾದ್ ಮುಖರ್ಜಿಯವರು ಮಾತ್ರ . ಆದರೆ ಅವರು ಕೂಡಾ ದೇಶದ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಯಾವ ಭಾಷೆಯನ್ನೂ "ನ್ಯಾಷನಲ್'ಅಫಿಷಿಯಲ್ ಭಾಷೆಯಾಗಿ ಬಲವಂತವಾಗಿ ಹೇರಲು ಬರುವುದಿಲ್ಲವೆಂದು ಸ್ಪಷ್ಟಪಡಿಸುತ್ತಾರೆ. ಹಿಂದುತ್ವದ ಪರಮಪತ್ರಿಪಾದಕರಾಗಿದ್ದ ಪುರುಷೋತ್ತಮ್ ದಾಸ್ ಟಂಡನ್ ಅವರು ಕೂಡಾ *ಸಂಸ್ಕೃತವು ನ್ಯಾಷನಲ್/ಅಫಿಷಿಯಲ್ ಭಾಷೆಯಾಗುವುದು ಪ್ರಾಕ್ಟಿಕಲ್ ಅಲ್ಲ* ಎಂದೇ ಅಭಿಪ್ರಾಯ ಪಡುತ್ತಾರೆ. ಹೀಗಾಗಿ ಸಂಸ್ಕೃತ ಭೂಯಿಷ್ಠ ಹಿಂದಿ ಭಾಷೆ ಆಡಳಿತ ಭಾಷೆಯಾಗಬೇಕೆಂಬುದು ಸಂವಿಧಾನ ರಚನಾ ಸಭೆಯಲ್ಲಿದ್ದ ಹಿಂದುತ್ವವಾದಿ ಒಲವಿದ್ದ ಎಲ್ಲರ ಅಭಿಪ್ರಾಯವಾಗಿತ್ತೇ ವಿನಾ ಸಂಸ್ಕೃತವೇ ದೇಶಭಾಷೆಯಾಗಬೇಕೆಂಬುದಲ್ಲ. (ವಿವರಗಳಿಗೆ ಮೇಲಿನ ವೆಬ್ ವಿಳಾಸದಲ್ಲಿರುವ ಚರ್ಚೆಯನ್ನು ಓದಬಹುದು ) ಇಡೀ ಮೂರೂ ದಿನಗಳ ಚರ್ಚೆಯಲ್ಲಿ ಅಂಬೇಡ್ಕರ್ ಅವರು ಮಧ್ಯಪ್ರವೇಶ ಮಾಡುವುದು ಕೊನೆಯ ದಿನ- ಸೆಪ್ಟೆಂಬರ್ 14ರಂದು ಮಾತ್ರ.! ಅದು ಕೂಡಾ ಚರ್ಚೆಯ ವಸ್ತುವಿನ ಬಗ್ಗೆ ಅಲ್ಲ. ಬದಲಿಗೆ ಚರ್ಚೆ ದೀರ್ಘವಾಗುತ್ತಿರುವುದರಿಂದ ಮುಗಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ನಿಯಮಾವಳಿಗಳನ್ನು ಸ್ಪಷ್ಟಪಡಿಸಲು.! ಅದರಂತೆ ಮೂರು ದಿನಗಳ ಸತತ ಚರ್ಚೆಯ ನಂತರ ಸದನದಲ್ಲಿ ಒಂದು ಒಮ್ಮತ ಮೂಡಿರುವುದರಿಂದ ಚರ್ಚೆಯನ್ನು ಅಂತಿಮಗೊಳಿಸಿಕೊಳ್ಳಲು ಯಾರ್ಯಾರು ತಮ್ಮ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲು ಇಷ್ಟಪಡುತ್ತಾರೋ ಅವರು ಮೊದಲು ಹಿಂಪಡಿಯಲು ಅವಕಾಶ ನೀಡಲಾಯಿತು. ತಿದ್ದುಪಡಿಗಳನ್ನು ಹಿಂತೆಗೆದುಕೊಂಡವರಲ್ಲಿ ಮೊದಲಿಗರು ಸಂಸ್ಕೃತವನ್ನು ದೇಶಭಾಷೆ ಮಾಡಬೇಕೆಂದು ಪ್ರಸ್ತಾಪ ಮಂಡಿಸಿದ್ದ ಲಕ್ಷ್ಮಿ ಕಾಂತ್ ಮೈತ್ರಾ ಅವರೇ ಆಗಿದ್ದರು!!!! ಹೀಗೆ , ಸಂಸ್ಕೃತವನ್ನು ಅಫಿಷಿಯಲ್ ಭಾಷೆ ಮಾಡಬೇಕೆಂಬ ಪ್ರಸ್ತಾಪದ ಬಗ್ಗೆ ಅದನ್ನು ಮುಂದಿಟ್ಟ ಮೈತ್ರಾ ಅವರನ್ನು ಒಳಗೊಂಡಂತೆ ಅಂಬೇಡ್ಕರ್ ತನಕ ಯಾರು ಉತ್ಸಾಹಿಗಳಾಗಿರಲಿಲ್ಲ. ಆದ್ದರಿಂದ ಅಂಬೇಡ್ಕರ್ ಅವರು ಸಂಸ್ಕೃತವನ್ನು ಅಫಿಷಿಯಲ್ ನ್ಯಾಷನಲ್ ಭಾಷೆಯನ್ನಾಗಿ ಮಾಡುವ ಅಭಿಪ್ರಾಯ ಹೊಂದಿದ್ದರು ಎಂಬ ಬೋಬಡೆಯವರ ಅಭಿಪ್ರಾಯ ಬೇಜವಾಬ್ದಾರಿಯಿಂದ ಕೂಡಿದೆ ಮತ್ತು ಅಂಬೇಡ್ಕರ್ ಅವರ ಸುತ್ತಾ ಸುಳ್ಳು ಐತಿಹ್ಯವನ್ನು ಕಟ್ಟಿ ಹಿಂದುವೇಕರಿಸುವ ಪ್ರಯತ್ನ ಪಡುತ್ತಿರುವ ಸಂಘಪರಿವಾರದ ಯೋಜನೆಗೆ ಪರೋಕ್ಷವಾಗಿ ಸಹಕಾರಿಯಾಗಿದೆ... ಹಾಗಿದ್ದಲ್ಲಿ ಅಂಬೇಡ್ಕರ್ ಅವರು ಮೈತ್ರ ಅವರ ತಿದ್ದುಪಡಿಗೆ ಸಹಿ ಹಾಕಿದ್ದಾದರೂ ಏಕೆ? ಅಂಬೇಡ್ಕರ್ ಅವರ ಭಾಷಾ ನೀತಿ ಮತ್ತು ಸಂವಿಧಾನ ಸಭೆಯ ಭಿನ್ನಮತ: ಅಂಬೇಡ್ಕರ್ ಅವರು ದಲಿತರ ಮತ್ತು ಶೋಷಿತರ ಹಿತರಕ್ಷಣೆಯು ಬಲವಾದ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯ ಎಂಬ ಅಭಿಪ್ರಾಯ ಹೊಂದಿದ್ದರು. ಭಾಷಾವಾರು ಪ್ರಾಂತ್ಯ ರಚನೆಗಳು ಕೂಡಾ ಆಯಾ ಪ್ರಾಂತ್ಯಗಳ ಊಳಿಗಮಾನ್ಯ ಶಕ್ತಿಗಳ ಬಲವನ್ನು ಹೆಚ್ಚಿಸಿ ದಲಿತ ಹಾಗು ದಮನಿತ ಜನತೆಯ ಒಗ್ಗಟ್ಟನ್ನು ದುರ್ಬಲಗೊಳಿಸುತ್ತದೆ ಎನ್ನುವುದು ಅವರ ನಿಲುವಾಗಿತ್ತು. ಆದ್ದರಿಂದಲೇ ಈ ದೇಶವು ಒಕ್ಕೂಟದ ಸ್ವರೂಪದ ಹೆಸರಿನಲ್ಲಿ ಮತ್ತೊಮ್ಮೆ ಊಳಿಗಮಾನ್ಯ ಶಕ್ತಿಗಳಿಗೆ ಬಲಿಯಾಗಬಾರದೆಂಬ ಕಾರಣದಿಂದ ದೇಶದ ಐಕ್ಯತೆಗೆ ದೇಶಾದ್ಯಂತ ಹಿಂದಿಯನ್ನೇ ಆಡಳಿತ ಭಾಶೆಯನ್ನಾಗಿಸಬೇಕೆಬ ಅಭಿಪ್ರಾಯವನ್ನು ಒಮ್ಮೆ ವ್ಯಕ್ತಪಡಿಸಿದ್ದರು. ಆದರೆ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಮತ್ತು ಪ್ರಾವೀಣ್ಯತೆಯನ್ನು ಪಡೆದಿದ್ದ ಅಂಬೇಡ್ಕರ್ ಅವರು ಸಂಸ್ಕೃತಕ್ಕೆ ರಾಜ್ಯಾಧಿಕಾರ ಸಿಗುವುದೆಂದರೆ ಮತ್ತೊಮ್ಮೆ ಈ ದೇಶದ ಬಹುಸಂಖ್ಯಾತ ದಲಿತ-ದಮನಿತರ ಭಾಷಿಕ ದಾಸ್ಯವೆಂದು ಖಚಿತ ನಿಲುವನ್ನು ಹೊಂದಿದ್ದರು... ಹೀಗಾಗಿ ಸಂವಿಧಾನ ರಚನಾ ಸಭೆಯ ಒಳಗೆ ಮತ್ತು ಹೊರಗೆ ಉದ್ದಕ್ಕೂ ಈ ದೇಶದ ಬ್ರಾಹ್ಮಣ್ಯ, ಸಂಸ್ಕೃತ ಯಾಜಮಾನ್ಯ ವಂಚನೆ, ಇತ್ಯಾದಿಗಳ ವಿರುದ್ಧ ನಿರಂತರ ಹೋರಾಟವನ್ನೇ ಮಾಡಿಕೊಂಡು ಬಂದಿದ್ದರು. ಆದ್ದರಿಂದ ಅಂಬೇಡ್ಕರ್ ಅವರು ಸಂಸ್ಕೃತವನ್ನು ದೇಶಾಡಳಿತ ಭಾಷೆಯಾಗಿ ಪ್ರಸ್ತಾಪಿಸುವ ಸಾಧ್ಯತೆಯೇ ಇರಲಿಲ್ಲ. ಆದರೂ ಅವರು ಮೈತ್ರಾ ಅವರ ಬಿನ್ನಹಕೆ ಯಾಕೆ ಸಹಿ ಹಾಕಿದರು? ಅಂಬೇಡ್ಕರ್ ಅವರು ಕೂಡಾ ನಂತರ ದಾಖಲಿಸಿರುವಂತೆ ಇಡೀ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಅತ್ಯಂತ ತಲೆನೋವಾಗಿ ಪರಿಣಮಿಸಿದ್ದು ಭಾಷಾ ನೀತಿಯ ವಿಷಯವೇ ಆಗಿತ್ತು. ಮಿಕ್ಕೆಲ್ಲಾ ವಿಷಯದಲ್ಲಿ ಎಷ್ಟೇ ಐಕ್ಯತೆ ಪ್ರದರ್ಶನಗೊಂಡಿದ್ದರು ದೇಶದ ಅಧಿಕೃತ ಆಡಳಿತ ಭಾಷೆ ಯಾವುದಾಗಬೇಕು ಎನ್ನುವ ಚರ್ಚೆ ಸಂವಿಧಾನ ಸಭೆಯನ್ನು ಅಡ್ಡಡ್ಡ -ಉದ್ದುದ್ದ ಸೀಳಿತ್ತು. ಅದು ಸಹಜವೂ ಆಗಿತ್ತು. ಭಾರತವು ಬಹುಸಂಖ್ಯಾತ ಹಾಗು ಬಹುಧರ್ಮೀಯ ದೇಶವಾಗಿದ್ದರಿಂದ ದೇಶಕ್ಕೊಂದೇ ಆಡಳಿತ ಭಾಷೆಯೆಂಬ ವಿಷಯವನ್ನು ಸೂಕ್ಷ್ಮವಾಗಿ ಹಾಗು ಪ್ರಜಾತಾಂತ್ರಿಕವಾಗಿ ಬಗೆಹರಿಸುವ ಅಗತ್ಯವಿತ್ತು. ಆದರೆ ಅಂಥ ಒಂದು ಸಾಧ್ಯತೆಯೂ ಸೀಮಿತವಾಗಿದ್ದರಿಂದ ಈ ವಿಷಯದಲ್ಲಿ ಉತ್ತರ- ದಕ್ಷಿಣ, ಹಿಂದಿ- ಹಿಂದಿಯೇತರ, ಹಿಂದಿ-ಹಿಂದುಸ್ಥಾನಿ, ಸಂಸ್ಕೃತ ಪ್ರಭಾವಿ ಹಿಂದಿ- ಪರಿಶಿಯನ್ ಪ್ರಭಾವಿ ಹಿಂದಿ ... ಇನ್ನಿತ್ಯಾದಿ ವೈರುಧ್ಯಗಳು ಮುಗಿಯದ ಚರ್ಚೆಯನ್ನು ಹುಟ್ಟುಹಾಕಿದ್ದವು. ಇದು ಹಲವು ಬಗೆಯ ಹತಾಶೆಗೂ ಕಾರಣವಾಗಿತ್ತು.. ಇಂಥಾ ಹತಾಶೆಯೇ ಕೆಲವರಲ್ಲಿ ಸಂಸ್ಕೃತವೇ ಅಧಿಕೃತ ಭಾಷೆಯಾಗಿ ಬಿಡಲಿ ಎಂಬ ಹತಾಶ -ಸಿನಿಕ ಪ್ರತಿಪಾದನೆಗೂ ಕಾರಣವಾಗಿತ್ತು, ಅಂಬೇಡ್ಕರ್ ಅವರ ಲೆಕ್ಕಾಚಾರದ ಸಹಿಗೂ ಅದೇ ಕಾರಣವಾಗಿತ್ತು.. ಉದಾಹರಣೆಗೆ ಈ ಮುಗಿಯದ ಚರ್ಚೆಯನ್ನು ಕಂಡು ನಜಿರುದ್ದೀನ್ ಅಹ್ಮದ್ ಎಂಬ ಸದಸ್ಯರು ಸಂಸ್ಕೃತವೇ ರಾಷ್ಟ್ರಭಾಷೆಯಾಗಲೇ ಎಂಬ ಸಲಹೆ ಮುಂದಿಟ್ಟರು . ಅದಕ್ಕೆ ಅವರು ಕೊಟ್ಟ ಕಾರಣ : "ಹಿಂದಿ ರಾಷ್ಟ್ರಭಾಷೆಯಾದರೆ ಉಳಿದವರಿಗಿಂತ ಹಿಂದಿ ಭಾಷಿಕರಿಗೆ ಹೆಚ್ಚಿನ ಅನುಕೂಲತೆ . ಇತರ ಭಾಷೆ ಅಧಿಕೃತ ಭಾಷೆಯಾದರೆ ಆ ಭಾಷಿಕರಿಗೆ ಅನುಕೂಲತೆ. ಮಿಕ್ಕವರಿಗೆ ಅನಾನುಕೂಲತೆ. ಆದರೆ ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಮಾಡಿದರೆ ಅದು ಎಲ್ಲರಿಂದಲೂ ಸಮಾನ ದೂರ ಮತ್ತು ಎಲ್ಲರಿಗು ಸಮಾನವಾಗಿ ಅನಾನುಕೂಲ. ಇಂಧ ಅನಾನುಕೂಲಕರ ಸಮಾನತೆಗಾಗಿ ಸಂಸ್ಕೃತ ರಾಷ್ಟ್ರಭಾಷೆಯಾಗಲಿ" ಎಂಬುದು ಅವರ ಹತಾಶ ವಾದವಾಗಿತ್ತು. ಈ ಸಂದರ್ಭವೇ, ಅಂಬೇಡ್ಕರ್ ಹಾಗು ಇನ್ನಿತರರನ್ನು ಮೈತ್ರ ಅವರ ತಿದ್ದುಪಡಿಗೆ ಸಮರ್ಥನೆ ನೀಡುವ ಹತಾಷೆಗೆ ದೂಡಿತ್ತು ಎಂದು ಸಂವಿಧಾನ ರಚನಾ ಸಭೆಯ ಹಾಗು ಭಾರತದ ಪ್ರಜಾತಂತ್ರದ ಪ್ರಮುಖ ಚರಿತ್ರಕಾರರಾದ Granville Austin ಅವರು ದಾಖಲಿಸಿದ್ದಾರೆ. ಅವರ The Indian Constitution- Corner stone of a Nation" ಎಂಬ ಪುಸ್ತಕದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಈ ವಿಷಯದ ಬಗ್ಗೆ ಹಾಗು ಅದರ ಹಿಂದೆ-ಮುಂದೆ ನಡೆದ ವಿದ್ಯಮಾನಗಳ ಚರಿತ್ರೆ ದಾಖಲಿಸಿರುವ ಆಸ್ಟಿನ್ ಅವರು ಅಂಬೇಡ್ಕರ್, ಮೈತ್ರಾ ಅವರ ಮನವಿಗೆ ಏಕೆ ಸಹಿ ಹಾಕಿದರು ಎಂಬ ಬಗ್ಗೆ ಈ ಉತ್ತರವನ್ನು ನೀಡುತ್ತಾರೆ: The disgust and dismay with which many Assembly members by this time looked on the controversy was shown by the amendments that would have made Sanskrit the official language. Heading the list oftwentyeight members who submitted such amendments were the names of Ambedkar and T. T. Krishnamachari. Neither could have believed that their amendment would be accepted, but they would have agreed with L. K. Maitra, who told the Assembly that choosing Sanskrit would put all the regional languages on an equal footing and put an end to the ‘jealousies’ aroused by the choice of Hindi. (p. 301, "The Indian Constitution- Corner stone of a Nation" ) (ಈ ವಿಷಯದ ಬಗ್ಗೆ ನಡೆಯುತ್ತಿದ್ದ ಚರ್ಚೆಗಳು ಹಲವಾರು ಸದಸ್ಯರಲ್ಲಿ ಎಂಥ ಹತಾಶೆ ಹಾಗು ಅಸಮಾಧಾನಗಳನ್ನು ಹುಟ್ಟಿಹಾಕಿತ್ತು ಎಂಬುದು ಸಂಸ್ಕೃತವನ್ನು ಅಧಿಕೃತ ಭಾಷೆ ಮಾಡಬೇಕೆಂಬ ತಿದ್ದುಪಡಿಯಲ್ಲಿ ವ್ಯಕ್ತವಾಗಿತ್ತು. ಆ ತಿದ್ದುಪಡಿಗೆ ಸಹಿಹಾಕಿದ 28 ಸದಸ್ಯರಲ್ಲಿ ಮೇಲ್ಪಂಕ್ತಿಯಲ್ಲಿ ಇದ್ದ ಎರಡು ಹೆಸರುಗಳು ಅಂಬೇಡ್ಕರ್ ಮತ್ತು ಟಿಟಿ ಕೃಷ್ಣಮಾಚಾರಿ. ಈ ತಿದ್ದುಪಡಿಯನ್ನು ಸಭೆಯು ಅನುಮೋದಿಸುತ್ತದೆ ಎಂದು ಇವರಿಬ್ಬರು ನಂಬಿರಲಿಲ್ಲ. ಆದರೂ ಅವರು ಏಕೆ ಸಹಿ ಹಾಕಿದರೆಂದರೆ : ಮೈತ್ರ ಅವರು ಸಂವಿಧಾನ ಸಭೆಗೆ ತಿಳಿಸಿದಂತೆ ಸಂಸ್ಕೃತವನ್ನು ಆಯ್ದುಕೊಂಡರೆ ಅದು ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಸಮಾನ ನೆಲೆಗಟ್ಟಿನಲ್ಲಿ ನಿಲ್ಲಿಸುತ್ತದೆ ಹಾಗು ಹಿಂದಿಯ ಆಯ್ಕೆ ಹುಟ್ಟುಹಾಕಿರುವ ಈರ್ಷೆಗೆ ಕೊನೆಹಾಡುತ್ತದೆ" ) ಈ ಸಮಾನ ಅನಾನುಕೂಲತೆ ಹಾಗು ಬಗೆಹರಿಯದ ಚರ್ಚೆಗಳು ಹುಟ್ಟುಹಾಕಿದ ಹತಾಶೆಗಳಿಂದಾಗಿ ಅಂಬೇಡ್ಕರ್ ಮತ್ತಿತತರು ಮೈತ್ರ ಅವರು ಮುಂದಿಟ್ಟ ಸಂಸ್ಕೃತ ರಾಷ್ಟ್ರಭಾಷೆ ಪ್ರಸ್ತಾಪಕ್ಕೆ ಸಹಿಹಾಕಿದರೆ ವಿನಾ ಸಂಘಪರಿವಾರ ಪ್ರಚಾರ ಮಾಡುತ್ತಿರುವಂತೆ ಭರತವರ್ಶದ ಸಂಸ್ಕೃತಿ ಅಥವಾ ಆರ್ಯ ಭಾಷೆಯೇ ದೇಶದ ಇತಿಹಾಸದ ಅಭಿವ್ಯಕ್ತಿ ಎಂಬ ಕಾರಣಕ್ಕಾಗಿ ಅಲ್ಲ. ಅಂಬೇಡ್ಕರ್ ಆದಿಯಾಗಿ ಯಾರು ಕೂಡಾ ಈ ತಿದ್ದುಪಡಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿಯೇ ಅವರುಗಳು ಯಾರು ಸಂಸ್ಕೃತ ದೇಶಭಾಷೆಯಾಗಬೇಕೇಕೆಬ ಚರ್ಚೆಯಲ್ಲೂ ಪಾಲ್ಗೊಳ್ಳಲಿಲ್ಲ. ಅಷ್ಟು ಮಾತ್ರವಲ್ಲ... ಇದನ್ನು ಪ್ರಸ್ತಾಪಿಸಿದ ಮೈತ್ರ ಅವರೇ ಇದರಬಗ್ಗೆ ಗಂಭೀರವಾಗಿರಲಿಲ್ಲ. ಆದ್ದರಿಂದಲೇ ಅವಕಾಶ ಸಿಕ್ಕೊಡನೆ ಅವರು ತಮ್ಮ ತಿದ್ದುಪಡಿಯನ್ನು ವಾಪಸ್ ಪಡೆದುಕೊಂಡರು. ಹೀಗಾಗಿ, ಈಗಲಾದರೂ ಸಂಘಪರಿವಾರದವರು ಅಂಬೇಡ್ಕರ್ ಬಗ್ಗೆ ಸುಳ್ಳು ಪ್ರಚಾರವನ್ನು ಕೈಬಿಡಬೇಕು. ಬೋಬಡೆಯವರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಅವರು ನಾಗಪುರಕ್ಕೆ ಮರಳಿ ಎರಡು ವರ್ಷಗಳ ಮೇಲಾಯಿತು!! __________________________________ (ಕೃಪೆ: ವಾರ್ತಾಭಾರತಿ) ವ್ಯಂಗ್ಯಚಿತ್ರ: ಗೂಗಲ್ (ಆ ಕಾಲದ ವಸ್ತುಸ್ಥಿತಿ ಬಿಂಬಿಸುವ ಕೆಲವು ಆಯ್ದ ವ್ಯಂಗ್ಯಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ) __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement