Advertisement

ನ್ಯಾಯಾಲಯಗಳು ಪ್ರಶ್ನಾತೀತವೇ?ನ್ಯಾಯಾಧೀಶರು ವಿಮರ್ಶಾತೀತರೇ? ನಟ ಚೇತನ್ ಬಂಧನದ ಹಿಂದಿನ‌ ಅಸಲಿಯತ್ತೇನು?

Advertisement

ಕಂಡದ್ದನ್ನು ಕಂಡಹಾಗೆ ಹೇಳಿದ ತಪ್ಪಿಗೆ ಚಿತ್ರನಟ ಅದಕ್ಕಿಂತ ಮಿಗಿಲಾಗಿ ಒಬ್ಬ ಪೆರಿಯಾರ್‌ವಾದಿ, ಅಂಬೇಡ್ಕರ್‌ವಾದಿ ಆಕ್ಟಿವಿಸ್ಟ್ ಆಗಿರುವ  ಚೇತನ್ ಅವರು ಒಂದು ವಾರದ ಜೈಲುವಾಸ ಮುಗಿಸಿ ನಿನ್ನೆ ಬಿಡುಗಡೆಯಾಗಿದ್ದಾರೆ. ಚೇತನ್ ಅವರು ಮಾಡಿರುವ ಟ್ವೀಟ್, ಅದರ ನೆಪದಲ್ಲಿ ಅವರು  ಬಂಧನವಾದ ರೀತಿ, ಅವರು ಜಾಮೀನು ಅರ್ಜಿಯನ್ನು ನ್ಯಾಯಾಲಯಗಳು ನಿರ್ವಹಿಸಿದ ರೀತಿಗಳನ್ನು ಗಮನಿಸಿದರೆ ಇದರ ಹಿಂದೆ ನಾಗರಿಕರು ನ್ಯಾಯಾಲಯಗಳನ್ನು ಸಕಾರಣವಾಗಿಯೂ ವಿಮರ್ಶೆ ಮಾಡದಂತೆ ಎಚ್ಚರಿಸುವ ಸಂದೇಶವೂ ಇದ್ದಂತಿದೆ.   ಚೇತನ್ ಅವರ ಮೇಲೆ ಹೊರಿಸಿರುವ ಆರೋಪಗಳು ನೇರವಾಗಿ ನ್ಯಾಯಾಂಗ ನಿಂದನೆಯ ಆರೋಪಗಳಲ್ಲ. ಆದರೂ ಅವರನ್ನು ಬಂಧಿಸಿದ್ದು ಮಾತ್ರ  ವಾರದ ಹಿಂದೆ ನ್ಯಾಯಾಧೀಶರ ಧೋರಣೆಯ ಬಗ್ಗೆ ಮಾಡಿದ ಟ್ವೀಟಿನ ಕಾರಣಕ್ಕೆ. ದೂರುಕೊಟ್ಟವರು ನ್ಯಾಯಾಧೀಶರೂ ಅಲ್ಲ. ವಾಸ್ತವದಲ್ಲಿ ದೂರುದಾರರು ಯಾರು ಎಂಬುದೇ ಬಂಧಿಸಿದ ಹಲವಾರು ಗಂಟೆಗಳ ಕಾಲ ನಿಗೂಢವಾಗಿತ್ತು. ರಾತ್ರಿಯವರೆಗೂ ದೂರುದಾರ ಯಾರಾಗಬೇಕೆಂಬ ಬಗ್ಗೆ ಪೊಲೀಸರಲ್ಲೇ ಇದ್ದ ಗೊಂದಲ ಹಾಗೂ ಅಂತಿಮವಾಗಿ ಸ್ವಪ್ರೇರಣೆ ಯಿಂದ ಆದ ದೂರು ದಾಖಲು- ಇವೆಲ್ಲವನ್ನು ನೋಡಿದರೆ ಸಾಮಾನ್ಯ ಜ್ನಾನ ಇರುವ ಯಾರು ಬೇಕಾದರೂ ಚೇತನ್ ಬಂಧನದ ಹಿಂದೆ ಕರಿಕೋಟುಗಳ ಕೆಂಪು ಕಟ್ಟಡವು ಎದುರುಗಿರುವ ವಿಧಾನ ಸೌಧದ ಮೇಲೆ ಹಾಕಿರಬಹುದಾದ ಒತ್ತಡದ ಅಂದಾಜನ್ನು ಮಾಡಬಹುದು. ಅಷ್ಟು ಮಾತ್ರವಲ್ಲ ಪೊಲೀಸರು ಸ್ವಪ್ರೇರಣೆಯಿಂದ ದಾಖಲಿಸಿಕೊಂಡಿರುವ ಎಫ಼್.ಐ.ಆರ್ ನಲ್ಲೂ ಚೇತನ್ ಅವರು ನ್ಯಾಯಾಲಯದ ಬಗ್ಗೆ ಮುಸ್ಲಿಮರಲ್ಲಿ ಅನುಮಾನ ಮೂಡಿಸುವ ಹಾಗೂ ನ್ಯಾಯಾಧೀಶರು ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸದಂತೆ ಮಾಡಿದ ಆರೋಪಗಳಿವೆ. ಹೀಗಾಗಿ ಚೇತನ್ ಅವರ ಬಂಧನ ಮತ್ತು ಬಿಡುಗಡೆಯ ವಿದ್ಯಮಾನಗಳು ಕೆಲವು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತವೆ. ನ್ಯಾಯಾಲಯಗಳ ಆದೇಶಗಳನ್ನೂ, ನ್ಯಾಯಾಧೀಶರ ಆಕ್ಷೇಪಾರ್ಹ ಧೋರಣೆಗಳನ್ನು ನಾಗರೀಕರು ವಿಮರ್ಷಿಸಬಾರದೆ? ವಿಮರ್ಶೆಗಳನ್ನು ಮತ್ತು ಸಕಾರಣ ಟೀಕೆಗಳನ್ನು ನ್ಯಾಯಾಂಗವು ನಿಂದನೆಯೆಂದು ಭಾವಿಸಬಹುದೇ?  ನ್ಯಾಯಾಲಯಗಳು ಪ್ರಶ್ನಾತೀತವೇ? ನ್ಯಾಯಾಧೀಶರು ವಿಮರ್ಶಾತೀತರೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮುನ್ನ ಈ ಎಲ್ಲಾ ಪ್ರಕರಣಗಳಿಗೆ ಕಾರಣವಾದ ಚೇತನ್ ಅವರ ಟ್ವೀಟ್ ಮತ್ತು ಅದು ಎತ್ತಿದ ಪ್ರಶ್ನೆಗಳನ್ನು ಗಮನಿಸೋಣ. ನ್ಯಾಯಾಧೀಶರ ಟಿಪ್ಪಣಿ ಖಂಡಿಸಿ ಬಹಿರಂಗ ಪತ್ರಗಳು ಮತ್ತು ಚೇತನ್ ಅವರ ಟ್ವೀಟ್ ೨೦೨೦ರ ಜೂನ್ ೨೨ ರಂದು ಕರ್ನಾಟಕದ ಹೈಕೋರ್ಟಿನಲ್ಲಿ ನ್ಯಾಯಮೂರ್ತಿ ಕೃಷ್ಣ ಶ್ರೀಪಾದ ದೀಕ್ಷಿತ್ ಅವರು, ಮಹಿಳೆಯೊಬ್ಬಳನ್ನು ಮದುವೆಯಾಗುವ ಆಸೆ ತೋರಿಸಿ ಬಲಾತ್ಕಾರ ಮಾಡಿದ ಆರೋಪ ಹೊತ್ತಿದ್ದ ರಾಕೇಶ್ ಎಂಬ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು. ಆಷ್ಟೇ ಆಗಿದ್ದರೆ ಅದು ವಿವಾದವಾಗುತ್ತಿರಲಿಲ್ಲ.  ದೂರುದಾರ ಮಹಿಳೆಯು ಬಲಾತ್ಕಾರಕ್ಕೆ ಗುರಿಯಾದ ನಂತರವೂ ಆರೋಪಿಯ ಜೊತೆ ಬೆಳಗಾಗುವವರೆಗೆ ಉಳಿದುಕೊಂಡಿದ್ದು ಭಾರತೀಯ ನಾರಿಯ ನಡವಳಿಕೆಗೆ ತಕ್ಕುದಾಗಿರಲಿಲ್ಲ ಎಂಬ ಟಿಪ್ಪಣಿಯನ್ನು ನ್ಯಾಯಾಧೀಶ ದೀಕ್ಷಿತ್ ಅವರು ಮಾಡಿದ್ದಲ್ಲದೆ ಮೇಲ್ನೋಟಕ್ಕೆ ಅಪರಾಧವು ಸಂಭವಿಸಿರಲಾರದು ಎಂಬ ತೀರ್ಮಾನಕ್ಕೆ ಬರಲು ಅದನ್ನೂ ಒಂದು ಕಾರಣವಾಗಿ ಬಳಸಿಕೊಂಡಿದ್ದರು. ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುವಂತೆ ನ್ಯಾಯಾದೇಶದಲ್ಲಿ ವ್ಯಕ್ತವಾಗಿದ್ದ  ಭಾರತೀಯ ನಾರಿಗೆ ತಕ್ಕುದಾದ ನಡವಳಿಕೆ ಎಂಬ ಗ್ರಹಿಕೆ ನ್ಯಾಯಾಧೀಶರಾದ ದೀಕ್ಷಿತರ ವ್ಯಕ್ತಿಗತ ತಿಳುವಳಿಕೆಯೇ ವಿನಾ ನಮ್ಮ ಸಂವಿಧಾನದಲ್ಲಿರುವ ತಿಳುವಳಿಕೆಯಾಗಿರಲಿಲ್ಲ. ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ವಿ. ಆರ್ ಕೃಷ್ಣ ಅಯ್ಯರ್ ಅವರು ಸ್ಪಷ್ಟವಾಗಿ ಹೇಳಿರುವಂತೆ ಸ್ವತಂತ್ರ ನ್ಯಾಯಾಂಗವೆಂದರೆ ಕೇವಲ ಸರ್ಕಾರಗಳಿಂದ ಸ್ವತಂತ್ರವಾಗಿರುವುದು ಮಾತ್ರವಲ್ಲ. ನ್ಯಾಯಾಧೀಶರು ತಮ್ಮ ವೈಯಕ್ತಿಕ ಅಭಿಪ್ರಾಯ ಹಾಗೂ ಧೋರಣೆಗಳಿಂದಲೂ ಸ್ವತಂತ್ರವಾಗಿರಬೇಕು. ತಮ್ಮ ನ್ಯಾಯನಿರ್ವಹಣೆಯ ಪ್ರಕ್ರಿಯೆಯಲ್ಲಿ ತಮ್ಮ ವೈಯಕ್ತಿಕ ಪೂರ್ವಗ್ರಹಗಳು ಮಧ್ಯಪ್ರವೇಶಿಸದಂತೆ ನೋಡಿಕೊಳ್ಳುವುದೂ ಕೂಡ ಸ್ವತಂತ್ರ ನ್ಯಾಯಾಂಗದ ಹಾಗೂ ನ್ಯಾಯಾಧೀಶರ ಸಾಂವಿಧಾನಿಕ ಕರ್ತವ್ಯ ಮತ್ತು ಜವಾಬ್ದಾರಿ. ಅದರಲ್ಲೂ ಈ ಪ್ರಕರಣದಲ್ಲಿ ನ್ಯಾಯಾಧೀಶ ದೀಕ್ಷಿತ್ ಅವರ ಅಭಿಪ್ರಾಯ ಈ ದೇಶದಲ್ಲಿ ಹೆಣ್ಣು ಹೇಗೆ ಬದುಕಬೇಕು, ಹೇಗೆ ನಡೆದುಕೊಳ್ಳಬೇಕು, ತನಗೆ ಅನ್ಯಾಯವಾದಾಗಲೂ ಹೇಗೆ ನಿರ್ದಿಷ್ಟವಾಗಿ ವರ್ತಿಸಲೇ ಬೇಕೆಂಬ ಬಗ್ಗೆ ಸಾಂವಿಧಾನಾತ್ಮಕ ಮೌಲ್ಯಗಳಿಗೆ ತದ್ವಿರುದ್ಧವಾದ ಪುರುಷಾಧಿಪತ್ಯದ ಪೂರ್ವಗ್ರಹಗಳನ್ನೇ ವ್ಯಕ್ತಪಡಿಸುತ್ತಿತ್ತು. ಮತ್ತು ಅದಕ್ಕೆ ನ್ಯಾಯಾಂಗದ ಮಾನ್ಯತೆಯನ್ನು ಒದಗಿಸುತ್ತಿತ್ತು. ಆದ್ದರಿಂದ ೨೦೨೦ರ ಜೂನ್ ನಲ್ಲೇ ಈ ರಾಜ್ಯದ ಹಾಗೂ ದೇಶದ ಸುಮಾರು ೧೭ ಮಹಿಳಾ ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಮತ್ತು ೨೨ ಗಣ್ಯ ನಾಗರೀಕರು ನ್ಯಾಯಮೂರ್ತಿ ದೀಕ್ಷಿತರ ಈ ಪುರುಷಾಧಿಪತ್ಯ ಗ್ರಹಿಕೆಯನ್ನೂ, ಬಲಾತ್ಕಾರ ಪ್ರಕರಣಗಳಲ್ಲಿ ಬಲಿಯಾದವರನ್ನೇ ಬೇಟೆಯಾಡುವ ಧೋರಣೆಗಳನ್ನು ತೀವ್ರವಾಗಿ ಖಂಡಿಸಿ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಒಂದು ಬಹಿರಂಗ ಪತ್ರವನ್ನು ಬರೆದಿದ್ದರು. ಆ ಪತ್ರದ ಪೂರ್ಣ ಪಾಠವನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಓದಬಹುದು : ►►https://www.livelaw.in/pdf_upload/pdf_upload-377073.pdf ಅದೇ ಸಂದರ್ಭದಲ್ಲೇ ಚೇತನ್ ಕೂಡಾ ಟ್ವೀಟ್ ಮಾಡಿ ಆ ಬಹಿರಂಗ ಪತ್ರದಲ್ಲಿ ಮಾಡಿರುವಂಥ ವಿಮರ್ಶೆಯನ್ನೇ ಮಾಡಿದ್ದರು. ಆ ನಂತರ ಸುಪ್ರೀಂ ಕೋರ್ಟಿನ ಹಿರಿಯ ವಕೀಲೆ ಅಪರ್ಣಾ ಭಟ್ ಅವರು ದೀಕ್ಷಿತ್ ಅವರ ಈ ಟ್ವೀಟಿನ ಬಗ್ಗೆ ಸುಪ್ರೀಂ ಕೋರ್ಟಿನ ಆಗಿನ ಮುಖ್ಯ ನ್ಯಾಯಾಧೀಶ ಬೋಬ್ಡೆ ಮತ್ತು ಇತರ ಮಹಿಳಾ ನ್ಯಾಯಾಧೀಶರನ್ನುದ್ದೇಶಿಸಿ ಒಂದು ಬಹಿರಂಗ ಪತ್ರವನ್ನು ಬರೆದಿದ್ದರು. ಈ ಎಲ್ಲಾ ಬೆಳವಣಿಗೆಗಳ ನಂತರ ಕರ್ನಾಟಕ ಸರ್ಕಾರವೇ ದೀಕ್ಷಿತ್ ಅವರ ಪೀಠದ ಮುಂದೆ ಅರ್ಜಿಯನ್ನು ಹಾಕಿ ವಿವಾದಕ್ಕೆ ಒಳಗಾಗಿರುವ ವಾಕ್ಯಗಳನ್ನು ತೆಗೆದುಹಾಕಲು ಕೋರಿತು.  ಆ ನಂತರ ೨೦೨೦ರ ಜುಲೈ ೪ ರಂದು ಹೈಕೋರ್ಟು ಈ ವಾಕ್ಯಗಳನ್ನು ಆದೇಶದಿಂದ ತೆಗೆದುಹಾಕಿತು. ►►https://www.livelaw.in/top-stories/karnataka-hc-expunges-controversial-remarks-about-womans-conduct-from-bail-order-in-rape-case-159341 ಹೀಗೆ ಚೇತನ್ ಅವರು ನ್ಯಾಯಮೂರ್ತಿ ದೀಕ್ಷಿತ್ ಅವರ ಧೋರಣೆಯ ಬಗ್ಗೆ ಮಾಡಿದ್ದ ಟ್ವೀಟಿನಲ್ಲಿದ್ದ ವಿಮರ್ಶೆಯನ್ನು ಹೈಕೋರ್ಟೇ ಪರೋಕ್ಷವಾಗಿ ಒಪ್ಪಿಕೊಂಡ ಮೇಲೆ ಅವರನ್ನು ಟ್ವೀಟಿನ ನೆಪದಲ್ಲಿ ಬಂಧಿಸುವ ಜರೂರತ್ತೇನಿತ್ತು? ಪ್ರಾಯಶಃ ಆ ಕಾರಣಕ್ಕಾಗಿಯೇ ಅವರ ಮೇಲೆ ನ್ಯಾಯಾಂಗ ನಿಂದನೆಯ ಪ್ರಕರಣಕ್ಕೆ ಬದಲಾಗಿ ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಆರೋಪವನ್ನು (ಐಪಿಸಿ ೫೦೫, ೫೦೫ (೨)) ಹೊರಿಸಲಾಗಿದೆಯೇ? ಟೀಕೆಗಳು-ವಿಮರ್ಶೆಗಳು ನ್ಯಾಯಾಂಗ ನಿಂದನೆಯೇ? ನ್ಯಾಯಾಂಗ ನಿಂದನೆಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಂಗ ನಿಂದನೆಯೆಂಬ ಎರಡು ರೀತಿಗಳಿವೆ. ಒಂದು ನ್ಯಾಯಾಂಗ ಕೊಟ್ಟ ಆದೇಶವನ್ನು ಸರ್ಕಾರಗಳು ಪಾಲಿಸದಿದ್ದಾಗ ಅದು ಸಿವಿಲ್ ನ್ಯಾಯಾಂಗ ನಿಂದನೆಯಾಗುತ್ತದೆ. ನ್ಯಾಯಾಧೀಶರು ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಣೆ ಮಾಡಲು ಉದ್ದೆಶಪೂರ್ವಕವಾಗಿ ತೊಡಕುಂಟುಮಾಡುವುದನ್ನು ಪ್ರಜಾತಂತ್ರ ದೇಶಗಳು ಸಾಮಾನ್ಯವಾಗಿ ಕ್ರಿಮಿನಲ್ ನ್ಯಾಯಾಂಗ ನಿಂದನೆಯೆಂದು ಭಾವಿಸುತ್ತವೆ. ಆದರೆ ಅವುಗಳಲ್ಲಿ ನ್ಯಾಯಾದೇಶದ ಟೀಕೆ, ವಿಮರ್ಶೆಗಳು ಸೇರುವುದಿಲ್ಲ. ಅದು  ಹೆಚ್ಚೆಂದರೆ ನ್ಯಾಯಾಧೀಶರ ವ್ಯಕ್ತಿಗತ ತೇಜೋವಧೆಗಳನ್ನು ಮಾತ್ರ ಒಳಗೊಳ್ಳುತ್ತದೆ. ಸುಮಾರು ಪ್ರಬುದ್ಧ ಪ್ರಜಾತಾಂತ್ರಿಕ ದೇಶಗಳು ತಮ್ಮ ಸಂವಿಧಾನಗಳಲ್ಲಿ ಕ್ರಿಮಿನಲ್ ನ್ಯಾಯಾಂಗ ನಿಂದನೆಯ ಅವಕಾಶಗಳನ್ನೇ ಕಲ್ಪಿಸಿಲ್ಲ. ಇನ್ನು ಕೆಲವು ಪ್ರಜಾತಂತ್ರಗಳು ನ್ಯಾಯಾಧೀಶರ ವ್ಯಕ್ತಿ ನಿಂದನೆಯನ್ನು, ನ್ಯಾಯಾದೇಶದ ಟೀಕಗಳನ್ನು  ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಪರಿಗಣಿಸುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು  ಮುಠಾಳ ಮುದುಕ ನ್ಯಾಯಾಧೀಶರು ನ್ಯಾಯಾಂಗವು ತಮ್ಮ ಮೇಲಿನ ಟೀಕೆಗಳನ್ನು ಹೇಗೆ ಪರಿಗಣಿಸಬೇಕು ಎನ್ನುವುದನ್ನು  ೧೯೮೭ರಲ್ಲಿ ಬ್ರಿಟನ್ ನಲ್ಲಿ ನಡೆದ Spycathcher  ಪ್ರಕರಣವನ್ನು ಅಲ್ಲಿನ ಸಾಂವಿಧಾನಿಕ ಕೋರ್ಟಿನ ನ್ಯಾಯಾಧೀಶರು ನಿರ್ವಹಿಸಿದ ರೀತಿಯಿಂದ ಕಲಿಯುವುದು ಬಹಳಷ್ಟಿದೆ. ೧೯೮೭ರಲ್ಲಿ ಬ್ರಿಟನ್ನಿನ ಗೂಢಚರ್ಯೆ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬ ತನ್ನ ಅನುಭವಗಳನ್ನು  Spycathcher   ಎಂಬ ಪುಸ್ತಕ ಬರೆದು ಪ್ರಕಟಿಸಲು ಮುಂದಾದ. ಅದರಲ್ಲಿ ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯಗಳಿರುವುದರಿಂದ ಅದರ ಪ್ರಕಟಣೆಗೆ ನಿಷೇಧ ಹೇರಬೇಕೆಂದು ಕೋರಿ ಸಾಂವಿಧಾನಿಕ ಕೋರ್ಟಿನ ಮುಂದೆ ಸರ್ಕಾರವು ಅಹವಾಲು ಮಂಡಿಸಿತು. ಐದು ನ್ಯಾಯಾಧೀಶರ ಪೀಠದಲ್ಲಿ ಮೂವರು ನ್ಯಾಯಧೀಶರು ಸರ್ಕಾರದ ಮನವಿಯ ಪರವಾಗಿ ತೀರ್ಪುಕೊಟ್ಟರು. ಮರುದಿನ ಬ್ರಿಟನ್ನಿನ ’ಡೈಲಿ ಮಿರರ್ ಎಂಬ ಪತ್ರಿಕೆ ತನ್ನ ಮುಖಪುಟದಲ್ಲಿ ಆ ಮೂವರು ನ್ಯಾಯಧೀಶರ ಚಿತ್ರಗಳನ್ನು ತಲೆಕೆಳಗಾಗಿ ಪ್ರಕಟಿಸಿದ್ದು ಮಾತ್ರವಲ್ಲದೆ  you old fools - ಮುಠಾಳ ಮುದುಕರು- ಎಂಬ ಶೀರ್ಷಿಕೆಯಿಟ್ಟು ವಿಮರ್ಶಾ ಬರಹವನ್ನು ಪ್ರಕಟಿಸಿತ್ತು. ಇದನ್ನು ನ್ಯಾಯಾಂಗ ನಿಂದನೆಯೆಂದು ಪರಿಗಣಿಸಬೇಕೆಂದು ಆ ಮೂವರು ನ್ಯಾಯಾಧೀಶರಲ್ಲಿ ಹಿರಿಯರಾದ ಟೆಂಪಲಟನ್ ಅವರನ್ನು ಕೋರಿದಾಗ ಅವರು:  ನಾವು ಮುದುಕರೆಂಬುದು ಸತ್ಯ ಸಂಗತಿಯೇ ಹೊರತು ನಿಂದನೆಯಲ್ಲ. ಹಾಗೆಯೇ ನಾವು ಮುಠಾಳರೆಂಬುದು ಅವರ ಅಭಿಪ್ರಾಯ. ಅವರ ಅಭಿಪ್ರಾಯ ನನ್ನ ನ್ಯಾಯ ನಿರ್ವಹಣೆಗೆ ಅಡ್ಡಿ ಬಂದಿಲ್ಲವಾದ್ದರಿಂದ ಅದೂ ನ್ಯಾಯಾಂಗ ನಿಂದನೆಯಲ್ಲ ಎಂದು ಹೇಳಿಬಿಟ್ಟರು. ನಂತರ ೨೦೧೬ರಲ್ಲಿ ಬ್ರಿಟನ್ನು ಐರೋಪ್ಯ ಒಕ್ಕೂಟದಿಂದ ಹೊರಬರಲು ನಡೆಸಬೇಕೆಂದಿದ್ದ ಬ್ರೆಕ್ಶಿಟ್ ಮತಗಣನೆಗೆ ಸಂಸತ್ತಿನ ಅನುಮೋದನೆ ಬೇಕೆಂದು ಸಾಂವಿಧಾನಿಕ ಕೋರ್ಟು ತೀರ್ಪು ಕೊಟ್ಟಾಗಲೂ ಡೈಲಿ ಮೇಲ್ ಎಂಬ ಪತ್ರಿಕೆ ಆ ನ್ಯಾಯಾಧೀಶರುಗಳನ್ನು  enemies of the people - ಜನತೆಯ ಶತ್ರುಗಳು- ಎಂದು ಟೀಕಿಸಿತು. ಆಗಲೂ ಬ್ರಿಟನ್ನಿನ ನ್ಯಾಯಾಲಯಗಳು ಅದನ್ನು ನಿಂದನೆ ಎಂದು ಪರಿಗಣಿಸದೆ ಅಭಿವ್ಯಕ್ತಿ ಸ್ವಾತಂತ್ಯ್ರ ಎಂದು  ಪರಿಗಣಿಸಿತು. ಭಾರತದ ನ್ಯಾಯಾಲಯಗಳು- ಕೆಲವು ನಿಂದನಗೆ ಬೆಣ್ಣೆ, ಹಲವು ಟೀಕೆಗೆ ಸುಣ್ಣ ಭಾರತದ ಸಾಂವಿಧಾನಿಕ ನ್ಯಾಯಾಲಯಗಳು ತಮ್ಮ ಮೇಲಿನ  ವಿಮರ್ಶೆಗಳ ಬಗ್ಗೆ ಒಟ್ಟಾರೆಯಾಗಿ ಸಂವೇದನೆಯನ್ನೇ ವ್ಯಕ್ತಪಡಿಸಿದ್ದರೂ ಕಳೆದ ಕೆಲವು ವರ್ಷಗಳಿಂದ ಕೆಲವು ನಿರ್ದಿಷ್ಟ ಧೋರಣೆಯ ಅಭಿಪ್ರಾಯಗಳ ಬಗ್ಗೆ ತಿರಸ್ಕಾರವನ್ನು, ಇನ್ನು ಕೆಲವು ಧೋರಣೆಯ ವಿಮರ್ಶೆಗಳ ಬಗ್ಗೆ ಒಲುಮೆಯನ್ನು ರೂಢಿಸಿಕೊಂಡಂತೆ ಕಾಣುತ್ತದೆ. ಉದಾಹರಣೆಗೆ ೨೦೧೨ರಲ್ಲಿ ಆಗ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಬಿಜೆಪಿಯ ಅರುಣ್ ಜೈಟ್ಲಿಯವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಬಗ್ಗೆ ಟೀಕೆ ಮಾಡುತ್ತಾ: "ಭಾರತದ  ನ್ಯಾಯಾಧೀಶರುಗಳು ನಿವೃತ್ತಿಪೂರ್ವದಲ್ಲಿ ನೀಡುವ ಆದೇಶಗಳ ಮೇಲೆ ನಿವೃತ್ತಿಯ ನಂತರದ ಗಳಿಕೆಯ ಅವಕಾಶಗಳ ಲಾಲಸೆಯ ಪ್ರಭಾವವಿರುತ್ತದೆ" ಎಂದು ನೇರವಾಗಿ ಭ್ರಷ್ಟಾಚಾರದ ಆರೋಪ ಮಾಡಿದ್ದರು.   ಅಷ್ಟು ಮಾತ್ರವಲ್ಲ: "ಭಾರತದ ನ್ಯಾಯಾಧೀಶರುಗಳಲ್ಲಿ ಎರಡು ಬಗೆ. ಕೆಲವರಿಗೆ ಕಾನೂನು ಗೊತ್ತು. ಕೆಲವರಿಗೆ ಕಾನೂನು ಮಂತ್ರಿಗಳು ಗೊತ್ತು" ಎಂದು ಅತ್ಯಂತ ನೇರವಾಗಿ ವಶೀಲಿಬಾಜಿಯ ಆರೋಪ ಹೊರಿಸಿದ್ದರು. ಅವರ ಮೇಲೆ ಯಾವ ನಿಂದನೆಯ ಮೊಕದ್ದಮೆಯೂ ದಾಖಲಾಗಲಿಲ್ಲ. ಹಾಗೆಯೇ ದೆಹಲಿ ಹೈಕೋರ್ಟಿನ ನ್ಯಾಯ ನಿಷ್ಠೂರ ನ್ಯಾಯಮೂರ್ತಿ ಮುರಳೀಧರ್ ನೆನಪಿರಬೇಕಲ್ಲವೇ? ದೆಹಲಿ ಚುನಾವಣೆಯ ಸಂದರ್ಭದಲ್ಲಿ ಸಂಘಪರಿವಾರವು ದೆಹಲಿ ಪೊಲೀಸರ ಸಂಪೂರ್ಣ ಸಹಕಾರ ಮತ್ತು ಸಹಯೋಗಗಳೊಂದಿಗೆ ಮುಸ್ಲಿಮರ ಮೇಲೆ  ಭೀಕರ ಹಿಂಸಾಚಾರಗಳನ್ನು ನಡೆಸಿತ್ತು. ಅದಕ್ಕೆ ಕಾರಣವಾದ ಬಿಜೆಪಿಯ ನಾಯಕರ ಮೇಲೆ ಎಫ಼್‌ಐಆರ್ ಹಾಕಲು ಕೂಡ ದೆಹಲಿ ಪೋಲೀಸರು ನಿರಾಕರಿಸಿದ್ದರು. ಆಗ ದೆಹಲಿ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಕೂಡಲೇ ಅವರ ಮೇಲೆ ಎಫ಼್‌ಐಆರ್ ದಾಖಲಿಸಬೇಕೆಂದು ಆದೇಶಿಸಿದ್ದು  ನ್ಯಾಯಮೂರ್ತಿ ಮುರಳೀಧರ್ ಅವರು.ಆ ಅಪರಾಧಕ್ಕಾಗಿ ಮೋದಿ ಸರ್ಕಾರದ "ಸಲಹೆ ಮೇರೆಗೆ"  ಅವರನ್ನು ರಾತ್ರೋರಾತ್ರಿ ಪಂಜಾಬ್-ಹರ್ಯಾಣ ಹೈಕೋರ್ಟಿಗೆ ವರ್ಗಾವಣೆ ಮಾಡಲಾಯಿತು. ಹಾಗಂತ,  ಅವರು ಕಾಂಗ್ರೆಸ್ ಒಲವಿದ್ದವರೇನಲ್ಲ.ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಗೆ ಕಠಿಣ ಶಿಕ್ಷೆಯನ್ನು ವಿಧಿಸಿದ್ದು ಕೂಡ ಇದೇ ನ್ಯಾಯಮೂರ್ತಿ ಗಳೇ... ತೃತೀಯ ಲಿಂಗಿಗಳ ಹಕ್ಕುಗಳನ್ನು ಎತ್ತಿಹಿಡಿದವರು ಹಾಗು ಮುಖ್ಯ ನ್ಯಾಯಮೂರ್ತಿಗಳ ಕಚೇರಿಯು RTI ಅಡಿ ತರಬೇಕೆಂದು ಆದೇಶಿಸಿದವರು, ಪಂಜಾಬ್ ಹೈಕೋರ್ಟಿನಲ್ಲಿ ವಕೀಲರು ತಮ್ಮನ್ನು "ಮೈ ಲಾರ್ಡ್ " ಎಂದು ಸಂಬೋಧಿಸಬಾರದೆಂದು ವಿನಂತಿ ಮಾಡಿ ನ್ಯಾಯಾಂಗದಲ್ಲಿ ಮುಂದುವರೆದಿದ್ದ ವಸಾಹತುಶಾಹಿ ಪರಂಪರೆಯನ್ನು ನಿಲ್ಲಿಸಿದವರು....ಇದೇ ನ್ಯಾಯಮೂರ್ತಿಗಳೇ.   ಇಂಥಾ ನ್ಯಾಯನಿಷ್ಠುರ ನ್ಯಾಯಮೂರ್ತಿಯ ಮೇಲೆ- ಸಂಘಪರಿವಾರದ ಥಿಂಕ್ ಟ್ಯಾಂಕ್ ನ ಸದಸ್ಯ ಹಾಗು "ತುಘಲಕ್ " ಪತ್ರಿಕೆ ಸಂಪಾದಕ ಹಾಗು ಮೋದಿ ಸರ್ಕಾರ  ಬಂದಮೇಲೆ ಖಃI ನ ನಿರ್ದೇಶಕನಾಗಿಯೂ ನೇಮಕವಾಗಿರುವ- ಗುರುಸ್ವಾಮಿಯವರು ನ್ಯಾಯಮೂರ್ತಿ ಮುರಳೀಧರ ಅವರು  "ದೇಶದ್ರೋಹಿ ಶಕ್ತಿಗಳ  ಪರವಾಗಿರುವವರು" ಎಂಬರ್ಥದ ಟ್ವೀಟ್ ಮಾಡಿದ್ದರು. ಅದಕ್ಕೂ ಮುಂಚೆ ಪಿ. ಚಿದಂಬರಂ ಅವರ ಮಗ ಕಾರ್ತಿ ಚಿದಂಬಂರಂ ಅವರ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ್ದಕ್ಕೆ ನ್ಯಾಯಮೂರ್ತಿ ಮುರಳೀಧರ್ ಅವರು ಚಿದಂಬರಂ ಅವರ ಬಳಿ ಜೂನಿಯರ್ ಆಗಿ ಕೆಲಸ ಮಾಡಿದ್ದರೇ ಎಂಬರ್ಥದ ದುರುದ್ದೇಶಪೂರ್ವಕ ಟ್ವೀಟ್ ಮಾಡಿದ್ದರು. ಆದರೆ ಈ ಎರಡೂ ಪ್ರಕರಣಗಳಲ್ಲೂ ಅವರ ಮೇಲೆ ಯಾವುದೇ ದೂರನ್ನು ಯಾರೂ ಸ್ವಪ್ರೇರಣೆಯಿಂದ ದಾಖಲಿಸಿಕೊಳ್ಳಲಿಲ್ಲ. ಬದಲಿಗೆ, ರಾಜಶೇಖರ ರಾವ್ ಎಂಬ ವಕೀಲರು ಹೈಕೋರ್ಟಿನಲ್ಲಿ ಈ ಬಗ್ಗೆ ದೂರು ದಾಖಲಿಸಿದ ನಂತರ ಗುರುಸ್ವಾಮಿಯವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಯಿತು. ಗುರುಸ್ವಾಮಿಯವರು ಆ ನೋಟೀಸನ್ನು ಹಾಗೂ "ನ್ಯಾಯಾಂಗ ನಿಂದನೆ" ಯನ್ನು ಶಿಕ್ಷಿಸುವ ಕ್ರಮವನ್ನು ಕೂಡ ಕೂಡ ಗೇಲಿ ಮಾಡುತ್ತಾ ಮತ್ತೊಂದು ಟ್ವೀಟ್ ಮಾಡಿದರು. ಇಷ್ಟಾದರೂ,  ಒಂದು ವರ್ಷಗಳ ಕಾಲ ದೆಹಲಿ ಹೈಕೋರ್ಟು ಯಾವ ಕ್ರಮವನ್ನು ಕೈಗೊಳ್ಳಲಿಲ್ಲ. ಒಂದು ವರ್ಷದ ನಂತರ ಗುರುಸ್ವಾಮಿಯವರು ತನ್ನ ಟ್ವೀಟಿನ ಬಗ್ಗೆ ಯಾವ ಪಶ್ಚಾತ್ತಾಪವನ್ನು ವ್ಯಕ್ತಪಡಿಸಡಿದ್ದರೂ... ಕೇವಲ   ಟ್ವೀಟನ್ನು  ವಾಪಸ್ ತೆಗೆದುಕೊಳ್ಳಬೇಕೆಂಬ ಏಕೈಕ ಷರತ್ತಿನ ಮೇಲೆ ಅವರ ಮೇಲಿನ ನ್ಯಾಯಾಂಗ ನಿಂದನೆಯ ಕೇಸನ್ನು ಹೈಕೋರ್ಟ್ ರದ್ದುಮಾಡಿತು!!ಇನ್ನು ವಿವೇಕ್ ಅಗ್ನಿಹೋತ್ರಿ ಇನ್ನಿತರರ ಮೇಲೆ ತಾನೇ ಕೊಟ್ಟ ನೋಟೀಸು ಏನಾಯಿತೆಂದು ವಿಚಾರಿಸಲು ಸಹ ನ್ಯಾಯಾಲಯ ಇನ್ನೂ ಮನಸ್ಸು ಮಾಡಿಲ್ಲ. ಮತ್ತೊಂದು ಕಣ್ಣಿಗೆ ಸುಣ್ಣ! ಆದರೆ ಮತ್ತೊಂದೆಡೆ ಇದೇ ಕೋರ್ಟುಗಳು ಜನಹಿತದ ಉದ್ದೇಶದಿಂದ ನ್ಯಾಯಾದೇಶಗಳನ್ನು ಮತ್ತು ಅದರ ಭಾಗವಾಗಿ ನ್ಯಾಯಾಧೀಶರ ಧೋರಣೆಗಳನ್ನು ಸಕಾರಣವಾಗಿ ಮತ್ತು ತಾರ್ಕಿಕವಾಗಿ ವಿಮರ್ಶೆ ಮಾಡಿದ್ದಕ್ಕೆ ಶಿಕ್ಷೆ ಗುರಿಮಾಡುತ್ತಿದ್ದಾರೆ.   -ನರ್ಮದಾ ಡ್ಯಾಂ ಪ್ರಕರಣದಲ್ಲಿ ಸುಪ್ರೀಂ ಕೊರ್ಟಿನ ಆದೇಶ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ ಪರವಾಗಿದೆ ಎಂದು ವಿಮರ್ಶೆ ಮಾಡಿದ್ದಕ್ಕೆ ಲೇಖಕಿ ಆರುಂಧತಿ ರಾಯ್ ಅವರಿಗೆ ಒಂದು ದಿನದ ಜೈಲು ಶಿಕ್ಷೆ ವಿಧಿಸಲಾಯಿತು. - ಆಡಳಿತರೂಢ ಪಕ್ಷದ ಸದಸ್ಯರೊಬ್ಬರಿಂದ ದುಬಾರಿ ಕೊಡುಗೆಯನ್ನು ಸ್ವೀಕರಿಸಿ ಅಂದಿನ ಮುಖ್ಯನ್ಯಾಯಾಧೀಶ ಬೋಬ್ಡೆಯವರು ನ್ಯಾಯಾಂಗ ನಿಷ್ಪಕ್ಷಪಾತತೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಕ್ಕೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂ ಕೋರ್ಟು ಒಂದು ರುಪಾಯಿ ದಂಡ ಅಥವಾ ಮೂರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. -ಇದೀಗ ನ್ಯಾಯಾಧೀಶರ ಪುರುಷಾಧಿಪತ್ಯದ ಪೂರ್ವಗ್ರಹಗಳನ್ನು ಟೀಕಿಸಿದ್ದಕ್ಕೆ  ಚೇತನ್ ಅವರಿಗೆ ಈ ಶಿಕ್ಷೆ ಯುವರ್ ಲಾರ್ಡ್ ಶಿಪ್ ಕೋರ್ಟುಗಳು ನ್ಯಾಯಾಂಗ ನಿಂದನೆ ಹಾಗೂ ಒಟ್ಟಾರೆ ನ್ಯಾಯಾನಿರ್ವಹಣೆಯ ವಿಷಯಗಳಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವಂತೆ ನಡೆದುಕೊಳ್ಳುತ್ತಿವೆಯೇ? ಬೆಣ್ಣೆ ಹಚ್ಚಿಸಿಕೊಂಡಿರುವ ಕಣ್ಣುಗಳ ಬಣ್ಣ ಕೇಸರಿಯಾಗಿಯೂ, ಸುಣ್ಣ ಬಳಿಸಿಕೊಳ್ಳುತ್ತಿರುವ ಕಣ್ಣುಗಳ ಬಣ್ಣ ಕೆಂಪು, ನೀಲಿ, ಹಸಿರಾಗಿರುವುದು ಕೇವಲ ಕಾಕತಾಳೀಯವೇ..? ಜಸ್ಟ್ ಅಸ್ಕಿಂಗ್ ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಕೃಪೆ: ವಾರ್ತಾಭಾರತಿ

Advertisement
Advertisement
Recent Posts
Advertisement