Advertisement

ಬಿಜೆಪಿ ಕಾರ್ಯಕರ್ತನಾಗಿದ್ದ ಗುತ್ತಿಗೆದಾರನ ಸ್ಥಿತಿಯೇ ಹೀಗಾದರೆ ಬೇರೆಯವರ ಗತಿ ಏನು? ಬಿಜೆಪಿ ಸರ್ಕಾರದ ಕರ್ಮಕಾಂಡಕ್ಕೆ ಇನ್ನೆಷ್ಟು ಜೀವ ಬಲಿಯಾಗಬೇಕು? : ಸಿದ್ದರಾಮಯ್ಯ ಕಿಡಿ

Advertisement
ಗುತ್ತಿಗೆದಾರನ ಆತ್ಮಹತ್ಯೆಯ ಆರೋಪಿ ಸಚಿವ ಕೆ.ಎಸ್.ಈಶ್ವರಪ್ಪನವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಸಂಪುಟದಿಂದ ಕಿತ್ತುಹಾಕಿ, ಅವರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಬೇಕು. ಜೊತೆಗೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಪಡಿಸಿದ್ದಾರೆ.

ನಮ್ಮ ಸರ್ಕಾರದ ಕಾಲದಲ್ಲಿ ಯಾರೋ ಪೊಲೀಸ್ ಅಧಿಕಾರಿಯೊಬ್ಬರು ಆರೋಪ ಹೊರಿಸಿದಾಗ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿಲ್ಲವೇ? ಆಗ ಸಚಿವ ಜಾರ್ಜ್ ರಾಜೀನಾಮೆ ನೀಡಬೇಕೆಂದು ಇದೇ ಬಿಜೆಪಿ ನಾಯಕರು ಆಕಾಶ-ಭೂಮಿ ಒಂದು ಮಾಡಿಲ್ಲವೇ? ಆತ್ಮಹತ್ಯೆಗೆ ಮೊದಲು ಮೃತ ಸಂತೋಷ್ ಪಾಟೀಲ್ ಬರೆದಿಟ್ಟ ಪತ್ರದಲ್ಲಿ ತನ್ನ ಸಾವಿಗೆ ಸಚಿವ ಈಶ್ವರಪ್ಪನವರೇ ಕಾರಣ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಣ ಬಿಡುಗಡೆ ಮಾಡದೆ ಇದ್ದರೆ ಆತ್ಮಹತ್ಯೆಯೊಂದೇ ಆಯ್ಕೆಯಾಗುತ್ತದೆ ಎಂದೂ ಹೇಳಿದ್ದರು. ಸಚಿವರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಲು ಇನ್ನು ಯಾವ ಸಾಕ್ಷಿ ಬೇಕು ಎಂದವರು ಪ್ರಶ್ನಿಸಿದ್ದಾರೆ.
ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಸಚಿವ ಈಶ್ವರಪ್ಪನವರು ಹೇಳಿದ್ದರು. ಬಡ್ಡಿಗೆ ಸಾಲ ತಂದು 4 ಕೋಟಿ ರೂಪಾಯಿ ಅಂದಾಜಿನ 108 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೆವು. ಆದರೆ ಹಣ ಬಿಡುಗಡೆ ಮಾಡಲು ಈಶ್ವರಪ್ಪನವರ ಅಸೋಸಿಯೇಟ್ ಗಳು ಕಮಿಷನ್ ಕೇಳುತ್ತಿದ್ದಾರೆ ಎಂದು ಮೃತ ಸಂತೋಷ್ ಪಾಟೀಲ್ ಪತ್ರ ಬರೆದಿದ್ದರು. ಇದು ಆತ್ಮಹತ್ಯೆ ಅಲ್ಲ, ಕೊಲೆ. ಕಮಿಷನ್ ಕಿರುಕುಳದ ಬಗ್ಗೆ ಮೃತ ಸಂತೋಷ್ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ ಯವರಿಂದ ಹಿಡಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವರೆಗೆ ಎಲ್ಲರಿಗೂ ಪತ್ರ ಬರೆದಿದ್ದರು.. ಹೀಗಿದ್ದರೂ ಅವರಿಗೆ ನ್ಯಾಯ ಸಿಗಲಿಲ್ಲ. ಆದ್ದರಿಂದ ಇವರೆಲ್ಲರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಬೇಕು ಎಂದವರು ಒತ್ತಾಯಿಸಿದ್ದಾರೆ.
ಮೃತ ಗುತ್ತಿಗೆದಾರ, ಸಚಿವ ಈಶ್ವರಪ್ಪನವರಿಗೆ ಅಪರಿಚಿತ ವ್ಯಕ್ತಿ ಅಲ್ಲ, ಅವರು ಸಚಿವರಿಗೆ ಆತ್ಮೀಯರಾಗಿದ್ದ ಬಿಜೆಪಿ ಕಾರ್ಯಕರ್ತ ರಾಗಿದ್ದರು. ಬಿಜೆಪಿ ಕಾರ್ಯಕರ್ತನಾಗಿದ್ದ ಗುತ್ತಿಗೆದಾರನ ಸ್ಥಿತಿಯೇ ಹೀಗಾದರೆ ಬೇರೆಯವರ ಗತಿ ಏನು? ಬಿಜೆಪಿ ಸರ್ಕಾರದ ಕರ್ಮಕಾಂಡಕ್ಕೆ ಇನ್ನೆಷ್ಟು ಜೀವ ಬಲಿಯಾಗಬೇಕು? ಗುತ್ತಿಗೆದಾರ ಅವಸರ-ಆವೇಶದಲ್ಲಿ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿಲ್ಲ. ಮೊದಲು ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರಿಗೂ ಪತ್ರ ಬರೆದು ಸಚಿವರ ಕಮಿಷನ್ ಕಿರುಕುಳವನ್ನು ತಿಳಿಸಿದ್ದಾರೆ. ಇನ್ನೆಷ್ಟು ಪುರಾವೆಗಳು ಬೇಕು? ಹೀಗಿರುವಾಗ ಸಚಿವರು ಬೇರೆಯವರನ್ನೂ ದೂರುವ ಹಾಗಿಲ್ಲ, ಅವರೇ ಹೊಣೆ ಎಂದವರು ಹೇಳಿದರು.
ನಾ ಖಾವುಂಗಾ, ನ ಖಾನೇ ದೂಂಗಾ ಎನ್ನುವ ಘೋಷಣೆಯನ್ನೇನಾದರೂ ಪ್ರಧಾನಿ ನರೇಂದ್ರ ಮೋದಿಯವರು ‘'ಮೈ ಖಾವುಂಗಾ, ಆಪ್ ಬೀ ಖಾಯಿಯೆ” ಎಂದೇನಾದರೂ ಬದಲಾವಣೆ ಮಾಡಿಕೊಂಡಿದ್ದಾರೆಯೇ.? ಚೌಕಿದಾರ್ ಗಳು ಕಾಯುತ್ತಿರುವುದು ಜನತೆಯ ತೆರಿಗೆ ಹಣವನ್ನೇ? ಇಲ್ಲವೇ ಭ್ರಷ್ಟರ ಕಪ್ಪು ಹಣವನ್ನೇ?
ಮೊದಲ ಬಾರಿ ಬಿ.ಎಸ್.ಯಡಿಯೂರಪ್ಪ ನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ರಾಜ್ಯ ಭ್ರಷ್ಟಾಚಾರದ ಪ್ರಕರಣಗಳಲ್ಲಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದಿತ್ತು. ಈಗ ಬೊಮ್ಮಾಯಿ ಅವರು ಕರ್ನಾಟಕವನ್ನು ಜಗತ್ತಿನಲ್ಲಿಯೆ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದ ಸಚಿವರು ಕೇಳುತ್ತಿರುವ 40% ಕಮಿಷನ್ ರಗಳೆಯಿಂದ ಗುತ್ತಿಗೆದಾರರು ರೋಸಿಹೋಗಿದ್ದಾರೆ. ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಬಹಿರಂಗವಾಗಿ ಹೇಳಿಕೆ ನೀಡಿ ಸರ್ಕಾರದ ವಿರುದ್ಧ ಲಂಚದ ಆರೋಪ ಮಾಡಿದ್ದಲ್ಲದೆ, ಬಿಜೆಪಿ ವರಿಷ್ಠರಿಗೆ ಪತ್ರ ಬರೆದಿದ್ದಾರೆ. ಈಶ್ವರಪ್ಪನವರನ್ನು ಬಂಧಿಸಲು ಇನ್ನು ಯಾವ ಸಾಕ್ಷಿ-ಪುರಾವೆಗಳು ಬೇಕು? ರಾಜ್ಯ ಸರ್ಕಾರದ ಲಂಚಾವತಾರಗಳಿಂದ ಜನರ ಗಮನ ಬೇರೆ ಕಡೆ ಸೆಳೆಯಲಿಕ್ಕಾಗಿಯೇ ರಾಜ್ಯ ಬಿಜೆಪಿ ಹಿಜಾಬು, ಹಲಾಲ್, ಮುಸ್ಲಿಮ್ ವ್ಯಾಪಾರಿಗಳ ಮೇಲೆ ಹಲ್ಲೆಯಂತಹ ಕೋಮುವಾದಿ ಪ್ರಕರಣಗಳನ್ನು ಎತ್ತಿಕೊಂಡು ವಿವಾದ ಸೃಷ್ಟಿಸುತ್ತಿದೆ ಎಂದವರು ಕಿಡಿ ಕಾರಿದ್ದಾರೆ.
Advertisement
Advertisement
Recent Posts
Advertisement