Advertisement

ಕೋಮುವಾದಿ ಚಟುವಟಿಕೆಗಳಿಗೆ ವಿದ್ಯಾರ್ಥಿಗಳನ್ನು ಪ್ರಚೋದಿಸುವವರ ಕಾಲರ್ ಪಟ್ಟಿ ಹಿಡಿದು "ನಮ್ಮ ಮಕ್ಕಳಿಗೆ ತಪ್ಪು ಹಾದಿಗೆಳೆದರೆ ಹುಷಾರ್" ಎಂಬ ಎಚ್ಚರಿಕೆ ನೀಡಬೇಕಾದ ಕಾಲ ಸನಿಹದಲ್ಲಿದೆ

Advertisement
ಹಿಜಾಬ್ ಮತ್ತು ಕೇಸರಿ ಶಾಲುಗಳು ಶಾಲಾ- ಕಾಲೇಜುಗಳ ಪರೀಕ್ಷೆಯಲ್ಲಿ ವಿಧ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಅಥವಾ ಅನ್ನವನ್ನು ನೀಡಲಾರದು ಎಂಬ ಸತ್ಯದ ಅರಿವು ವಿದ್ಯಾರ್ಥಿಗಳು ಮತ್ತವರ ಪೋಷಕರು ಹೊಂದಬೇಕಾಗಿದೆ.

ಹೌದು! ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವದಲ್ಲಿ ವಿವಾದ ಹಾಗೂ ಸಂಘರ್ಷಕ್ಕೆ ಕಾರಣವಾಗಿದ್ದ ಹಿಜಾಬ್- ಕೇಸರಿ ಶಾಲು ಪ್ರಕರಣ ವಿಧ್ಯಾರ್ಥಿಗಳ ಫಲಿತಾಂಶದ ಮೇಲೆ ದುಷ್ಪರಿಣಾಮವನ್ನು ಬೀರಿದೆ. ಆ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ಪಾಲ್ಗೊಂಡ ವಿಧ್ಯಾರ್ಥಿಗಳ ಮೇಲಲ್ಲದೆ, ಪಾಲ್ಗೊಳ್ಳದ ವಿಧ್ಯಾರ್ಥಿಗಳ ಫಲಿತಾಂಶದ ಮೇಲೂ ಪರಿಣಾಮ ಬೀರಿದೆ ಎನ್ನುತ್ತಾರೆ ಜನಪರ ಕಾಳಜಿ ಹೊಂದಿರುವ ಶಿಕ್ಷಕರುಗಳು ಹಾಗೂ ಶಿಕ್ಷಣ ತಜ್ಞರುಗಳು. ವಿವಾದದಲ್ಲಿ ಪಾಲ್ಗೊಂಡ ವಿಧ್ಯಾರ್ಥಿಗಳು ಆ ವಿಷಯದಲ್ಲೆ ಹೆಚ್ಚೆಚ್ಚು ತಮ್ಮನ್ನು ತಾವು ತೊಡಗಿಸಿಕೊಂಡ ಕಾರಣದಿಂದಾಗಿ ಉತ್ತಮ ಫಲಿತಾಂಶ ದಾಖಲಿಸುವಲ್ಲಿ ಹಿಂದಕ್ಕುಳಿದರೆ, ಆ ಯಾವ ವಿವಾದದಲ್ಲೂ ಪಾಲ್ಗೊಳ್ಳದ ವಿಧ್ಯಾರ್ಥಿಗಳು ಕೂಡ ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಆತಂಕ, ಭಯದಿಂದ ಉತ್ತಮ ಫಲಿತಾಂಶ ಪಡೆಯುವಲ್ಲಿ ಹಿಂದೆ ಉಳಿದರು ಎನ್ನುವುದು ಅವರ ಅಭಿಪ್ರಾಯವಾಗಿದೆ. ಆ ಕಾರಣಕ್ಕಾಗಿ, ಈ ಕುರಿತು ಈ ಯಾವ ವಿವಾದಗಳು ಕೂಡಾ ಉತ್ತಮ ಫಲಿತಾಂಶ ನೀಡಲಾರವು, ಅನ್ನ ಹಾಕಲಾರವು ಎಂದು ಕನಿಷ್ಠ ಪಕ್ಷ ತಮ್ಮ ತಮ್ಮ ಮಕ್ಕಳಿಗೆ ಪೋಷಕರು ತಿಳಿ ಹೇಳಬೇಕಾದ ಮತ್ತು ಅವರ ಭವಿಷ್ಯದ ಕುರಿತು ಎಚ್ಚೆತ್ತುಕೊಳ್ಳಬೇಕಾದ ಕಾಲ ಇದಾಗಿದೆ.

ಹೌದು, ಕೆಲ ದಿನಗಳ ಹಿಂದೆ ಪ್ರಕಟವಾದ ಫಲಿತಾಂಶದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ವಿಧ್ಯಾರ್ಥಿಗಳು ಕಳಪೆ ಪ್ರದರ್ಶನ ದಾಖಲಿಸಿದ್ದಾರೆ. ಈ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಹಲವು ದಶಕಗಳಿಂದ ‌ಉತ್ತಮ ಫಲಿತಾಂಶದ ಮೂಲಕ ರಾಜ್ಯಕ್ಕೆ ಪ್ರಥಮ, ದ್ವೀತಿಯ ಸ್ಥಾನಗಳನ್ನು ಪಡೆದು ರಾಜ್ಯದ ಇತರ ಜಿಲ್ಲೆಗಳ ಜನರ ಮನದಲ್ಲಿ "ಬುದ್ದಿವಂತರ ಜಿಲ್ಲೆ" ಎಂಬ ಭಾವನೆ ಮೂಡಿಸಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿಧ್ಯಾರ್ಥಿಗಳು ಇದೀಗ ಈ ಬಾರಿಯ ಫಲಿತಾಂಶದಿಂದ ಜಿಲ್ಲೆಗೆ ಮೊದಲಿದ್ದ ಹೆಸರು ಕೆಡಿಸುವುದರ ಜೊತೆಗೆ ತಮ್ಮ ಬದುಕನ್ನು ನಾಶಗೊಳಿಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಪ್ರತಿಯೊಬ್ಬ ಹೆತ್ತವರೂ ಕೂಡ ತಮ್ಮ ತಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಉತ್ತಮ ಉದ್ಯೋಗ ಪಡೆದು ಸಮಾಜದಲ್ಲಿ ಗಣ್ಯರಾಗಬೇಕು ಎಂದು ಬಯಸುತ್ತಾರೆ. ಆ ಪ್ರಕಾರವಾಗಿ ಹೆತ್ತವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಗಲು ರಾತ್ರಿ ದುಡಿಯುತ್ತಾರೆ. ಉತ್ತಮ ವಿದ್ಯಾಸಂಸ್ಥೆಗಳನ್ನೆ ಹುಡುಕಿ ಸಾಲ- ಸೋಲ ಮಾಡಿಯಾದರೂ ಹಣವನ್ನು ಹೊಂದಿಸಿ ಶಾಲಾ, ಕಾಲೇಜುಗಳ ಫೀಸನ್ನು ಕಟ್ಟುತ್ತಾರೆ. ದುಬಾರಿ ಶಿಕ್ಷಕರನ್ನೆ ಹುಡುಕಿ ಟ್ಯೂಷನ್ ಕೊಡಿಸುತ್ತಾರೆ. ಇದು ಸಹಜ ಕೂಡ! ಹಾಗೆಯೇ ಆ ಪೋಷಕರು ತಮ್ಮ ತಮ್ಮ ಮಕ್ಕಳ ಭವಿಷ್ಯದ ಕುರಿತು ಕಾಣುವ ಈ ಚಿಕ್ಕಚಿಕ್ಕ ಕನಸುಗಳು ಈ ನಮ್ಮ ಭವ್ಯ ಭಾರತದ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ ಎಂಬ ವಿಚಾರದಲ್ಲಿ ಎರಡು ಮಾತಿಲ್ಲ. ತಮ್ಮ ತಮ್ಮ ಭವಿಷ್ಯಕ್ಕಾಗಿ ಮಾಡುವ ಈ ಸಣ್ಣಸಣ್ಣ ಕೆಲಸಗಳೇ 2012ರ ಹೊತ್ತಿಗೆ ಈ ದೇಶವನ್ನು ವಿಶ್ವದ ಮೂರನೆಯ ಆರ್ಥಿಕ ಶಕ್ತಿಯಾಗಿ ರೂಪಿಸಿತ್ತು ಎಂಬುವುದನ್ನು ಕೂಡ ಮರೆಯಲಾಗದು.

ಆದರೆ ಇತ್ತೀಚೆಗಿನ ದಿನಗಳಲ್ಲಿ ಶಾಲಾ- ಕಾಲೇಜುಗಳೊಳಗೆ ಅಡಗಿ ಕುಳಿತಿರುವ ಕೆಲವು ಸ್ಥಾಪಿತ ಹಿತಾಸಕ್ತ ದುಷ್ಟಶಕ್ತಿಗಳು ನಮ್ಮ ಮಕ್ಕಳ ತಲೆಯಲ್ಲಿ ಕೋಮುವಾದದ ವಿಷಬೀಜ ಬಿತ್ತತೊಡಗಿದ್ದಾರೆ. ಹಿಜಾಬ್, ಬುರ್ಕಾ ಹಾಕುವುದೇ ದೇಶದ್ರೋಹ, ಆ ಕಾರಣಕ್ಕಾಗಿ ಹಿಂದೂ ಧರ್ಮ ಅಪಾಯದಲ್ಲಿದೆ. ಅಂತಹವರ ಮೇಲೆ, ಕೇಸರಿ ಶಾಲು ಹೊದ್ದು ಹಲ್ಲೆ ನಡೆಸುವುದೇ ಧರ್ಮಪ್ರೇಮ ಮತ್ತು ದೇಶಪ್ರೇಮ ಎಂಬಂತೆ ವಿದ್ಯಾರ್ಥಿಗಳ ತಲೆಗಳಲ್ಲಿ ತುಂಬತೊಡಗಿದ್ದಾರೆ.

ಆದರೆ ನಿಜಕ್ಕೂ ಅಪಾಯದಲ್ಲಿರುವುದು ಯಾವುದೇ ಧರ್ಮ ಅಲ್ಲ. ಬದಲಾಗಿ ಅಪಾಯದಲ್ಲಿರುವುದು ಧರ್ಮದ ಹೆಸರೇಳಿಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಿರುವ ಅದೇ ಮೂಲಭೂತವಾದಿಗಳು ಮತ್ತವರ ಮಕ್ಕಳು ಆಗಿದ್ದಾರೆ. ಈ ದೇಶದ ಇತಿಹಾಸದಲ್ಲಿ 800 ವರ್ಷಗಳ ಕಾಲ ಮೊಘಲರ ಆಳ್ವಿಕೆ, 300ವರ್ಷಗಳ ಕಾಲ ಆಂಗ್ಲರ ಆಳ್ವಿಕೆ ಇದ್ದಾಗಲೂ ಕೂಡ ಹಿಂದೂ ಧರ್ಮ ಉಳಿದು ಬಂದಿದೆ. ಅಂತಹ ಕಾಲದಲ್ಲಿ ಅದೇ ಮೊಘಲ್ ದೊರೆಗಳ, ಬ್ರಿಟಿಷ್ ದೊರೆಗಳ ಬೂಟು ನೆಕ್ಕುತ್ತಿದ್ದವರು, ಅವರುಗಳಿಗೆ ಅಂದು ಹೆಣ್ಣು- ಹೆಂಡ ಸಪ್ಲೈ ಮಾಡುತ್ತಿದ್ದವರು, "ಹಿಂದೂ ಧರ್ಮ ಅಪಾಯದಲ್ಲಿದೆ" ಎಂದು ಇಂದು ಗುಲ್ಲೆಬ್ಬಿಸುತ್ತಿದ್ದವರ ಪೂರ್ವಜರೇ ಆಗಿದ್ದಾರೆ ಎಂಬುದು ಇತಿಹಾಸ ಓದಿದವರಿಗೆ ತಿಳಿದು ಬರುವ ಕಟುಸತ್ಯ!
ಹಾಗೆಯೇ ಮೋಘಲರ ಮತ್ತು ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಒಂದಷ್ಟು ಹಿಂದೂ ಸಹೋದರ, ಸಹೋದರಿಯರು ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವುದು ನಿಜವೇ ಆದರೂ ಅದಕ್ಕೆ ಕಾರಣ ಹಿಂದೂ ಧರ್ಮದೊಳಗೆ ಅದೇ ಮೂಲಭೂತವಾದಿಗಳು ಸೃಷ್ಟಿಸಿ, ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದ "ಅಸಮಾನತೆ" ಮತ್ತು "ಮೂಲಭೂತ ಹಕ್ಕುಗಳ ನಿರಾಕರಣೆ" ಗಳೇ ಕಾರಣವಾಗಿವೆ. ಸತತ ಶೋಷಣೆಗೊಳಗಾಗಿದ್ದ ಒಂದಷ್ಟು ಪ್ರಗತಿಪರ ಚಿಂತನೆ ಹೊತ್ತಿದ್ದ ಹಿಂದೂಗಳು ತಮ್ಮ ಮಕ್ಕಳ ಉತ್ತಮ ಭವಿಷ್ಯದ ಕನಸು ಹೊತ್ತು ಮತ್ತು ಅವರುಗಳನ್ನು ಈ ಮೂಲಭೂತವಾದಿಗಳ ಶೋಷಣೆಯಿಂದ ಹೊರತರುವ ಸದುದ್ದೇಶದಿಂದ ಮತಾಂತರಗೊಂಡಿದ್ದಾರೆ ಮತ್ತದರಲ್ಲಿ ಯಶಸ್ಸು ಗಳಿಸಿದ್ದಾರೆ ಎಂಬುದು ಕೂಡ ಸೂರ್ಯ, ಚಂದ್ರರು ಇರುವಷ್ಟೆ ಸತ್ಯ!


ಹಾಗೆಯೇ, ವಿಧ್ಯಾರ್ಥಿಗಳಲ್ಲಿ ಧರ್ಮದ ಅಮಲು ತುಂಬುವ ಇತ್ತೀಚೆಗಿನ ಇಂತಹ ಬೆಳವಣಿಗೆಗಳಿಂದ ತಮ್ಮ ಮನೆಯ ಮಕ್ಕಳ ಭವಿಷ್ಯಕ್ಕೆ ಅಪಾಯವಿದೆ ಎಂಬ ಸತ್ಯವನ್ನು ಅರಿಯುವಲ್ಲಿ ಪೋಷಕರು ವಿಫಲರಾಗುತ್ತಿದ್ದಾರೆ. ಈ ಪರಿಪಾಠ ಮುಂದುವರಿಯುತ್ತಾ ಹೋದರೆ ವೈಧ್ಯಕೀಯ, ಇಂಜಿನಿಯರಿಂಗ್, ಐಟಿ, ಬಿಟಿಗೆ ಹೋಗಿ, ಗೌರವಯುತ ಬದುಕು ಬದುಕಬೇಕಾಗಿದ್ದ ನಮ್ಮ ಮಕ್ಕಳು ಮುಂದೊಂದು ದಿನ ಬೀದಿಗಳಲ್ಲಿ ಪುಡಿರೌಡಿಗಳಾಗಿ ಪರಿವರ್ತನೆ ಹೊಂದುವ ಅಪಾಯವಿದೆ ಎಂಬ ಸತ್ಯವನ್ನು ಮರೆಯುತ್ತಿದ್ದಾರೆ.

ಶಾಲಾ ಕಾಲೇಜುಗಳೊಳಗೆ ಮತ್ತು ಹೊರಗೆ ಅಂತಹ ಕೃತ್ಯಗಳನ್ನು ಪ್ರಚೋದಿಸುವ ದುಷ್ಕರ್ಮಿಗಳು ಕೇಸರಿ ಶಾಲುಗಳನ್ನು ವಿತರಿಸುವ ವೇಳೆ ದೇಶದ ಕುರಿತು ಭಕ್ತಿ, ಧರ್ಮದ ಕುರಿತು ಕಪಟ ಪ್ರೇಮಗಳನ್ನು ಬೋಧಿಸಿರುತ್ತಾರೆ. ಆದರೆ ಆ ವಿದ್ಯಾರ್ಥಿಗಳಿಗೆ ತಾವು ಕೇಸರಿ ಶಾಲು ಹೊದ್ದರೆ ಭಾರತದ ಭವಿಷ್ಯ ಉಜ್ವಲಗೊಳ್ಳದು, ಅದು ಕೆಲವು ಸ್ಥಾಪಿತ ಹಿತಾಸಕ್ತ ಗುಂಪುಗಳು ರಾಜಕೀಯ ಗುರಿಯನ್ನು ತಲುಪಲು ಮಾರ್ಗ ಅಷ್ಟೇ. ನಿಜಕ್ಕೂ ಭಾರತವನ್ನು ಪ್ರೀತಿಸುವುದಾದರೆ, ಧರ್ಮವನ್ನು ಗೌರವಿಸುವುದಾದರೆ ತಾವು ಉತ್ತಮವಾಗಿ ಓದಿ, ಗೌರವಾನ್ವಿತ ಹುದ್ದೆಗೇರಬೇಕು ಎಂಬ ಅರಿವು ಮೂಡಿಸುವಲ್ಲಿ ಅವರ ಹೆತ್ತವರು ವಿಫಲಗೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಆ ಹೆತ್ತವರು ಹಾಗೆ ವಿಫಲರಾಗಲು ಮೇಲೆ ವಿವರಿಸಿದ ಈ ಸತ್ಯದ ಆಳದ ಅರಿವು ಸ್ವತಃ ಹೆಚ್ಚಿನ ಆ ಪೋಷಕರಲ್ಲಿ ಇಲ್ಲದಿರುವುದು ಕೂಡ ಕಾರಣವಾಗಿದೆ ಅಥವಾ ಸ್ವತಃ ಅವರುಗಳೇ ಕೋಮುವ್ಯಾದಿ ಪೀಡಿತರಾಗಿರುವುದು ಈ ಬೆಳವಣಿಗೆಗಳಿಗೆ ಮೂಲ ಕಾರಣವಾಗಿದೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.

ಈ ನಡುವೆ ಇಂತಹ ದುಷ್ಟ ಶಕ್ತಿಗಳ ಬಲೆಗೆ ತಮ್ಮ ಮಕ್ಕಳು ಬೀಳದಂತೆ ಮುನ್ನೆಚ್ಚರಿಕೆ ವಹಿಸಿದ ಒಂದಷ್ಟು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಉತ್ತಮ ಉದ್ಯೋಗಾವಕಾಶ ಒದಗಿಸುವಲ್ಲಿ ಯಶಸ್ಸು ಗಳಿಸಿರುತ್ತಾರೆ. ಅದು ನಿಜಕ್ಕೂ ದೇಶಕ್ಕೆ ನೀಡುವ ಬಹುದೊಡ್ಡ ಕೊಡುಗೆಯಾಗಿದೆ.

ಇನ್ನಾದರೂ, ವಿದ್ಯಾರ್ಥಿಗಳ ಹೆತ್ತವರು ಕನಿಷ್ಟ ಪಕ್ಷ, ತಮ್ಮ ಮಕ್ಕಳು ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚೆತ್ತುಕೊಂಡು, ಇಂತಹ ಕೋಮುವಾದಿ ಚಟುವಟಿಕೆಗಳಿಗೆ ತಮ್ಮ ಮಕ್ಕಳನ್ನು ಪ್ರಚೋದಿಸುವವರ ಕಾಲರ್ ಪಟ್ಟಿ ಹಿಡಿದು "ನಮ್ಮ ಮಕ್ಕಳಿಗೆ ತಪ್ಪು ಹಾದಿಗೆಳೆದರೆ ಹುಷಾರ್" ಎಂಬ ಎಚ್ಚರಿಕೆ ನೀಡಬೇಕಾಗಿದೆ. ಆ ಮೂಲಕವಷ್ಟೆ ನಮ್ಮ ಮನೆಯ ಮಕ್ಕಳು ಉನ್ನತ ವ್ಯಾಸಂಗ ಮಾಡಲು, ಸಧೃಡ ಭಾರತದ ನಿರ್ಮಾಣದಲ್ಲಿ ಭಾಗಿಗಳಾಗಲು ಸಾಧ್ಯವಾಗುತ್ತದೆಯೇ ಹೊರತೂ ಕೇಸರಿ ಶಾಲು ಹೊದ್ದು ಜೈ ಶ್ರೀರಾಮ್ ಹೇಳುತ್ತಾ, ಹಿಜಾಬ್ ಧರಿಸಿದ ಇತರ ಧರ್ಮದ ಅದರಲ್ಲೂ ತಮ್ಮ ಜೊತೆ ಎಲ್‌ ಕೆಜಿ ಯಿಂದಲೂ ಪಾಠ ಕಲಿತ ಹೆಣ್ಣು ಮಕ್ಕಳನ್ನು ಬೆನ್ನಟ್ಟುವುದರಿಂದ ಅಲ್ಲ ಎಂಬ ಸತ್ಯವನ್ನು ಅರಿಯಬೇಕಾಗಿದೆ.

ನಿಜ, ಮೂಲಭೂತವಾದಿಗಳ ಆಡಳಿತದಲ್ಲಿ ಈ ದೇಶದ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಂವಿಧಾನ ಮತ್ತು ಶಿಕ್ಷಣ ಕ್ಷೇತ್ರ ಅಪಾಯದಲ್ಲಿದೆ‌.

•ಚಂದ್ರಶೇಖರ ಶೆಟ್ಟಿ., ಪ್ರಧಾನ ಸಂಪಾದಕರು

Advertisement
Advertisement
Recent Posts
Advertisement