Advertisement

ರಾಜ್ಯಸಭೆಯಲ್ಲಿ ಚಾಚಾ ನೆಹರೂ ಕುರಿತು ವಾಜಪೇಯಿ ಮಾಡಿದ ಬಾಷಣದ ಕನ್ನಡ ಅನುವಾದ: ಬಿಜೆಪಿಗರು ತಿಳಿದುಕೊಳ್ಳಲೇಬೇಕಾದ ಮಾಹಿತಿಗಳು!

Advertisement

ಬಿಜೆಪಿ ನಾಯಕರಿಗೆ ದೇಶದ ಇತಿಹಾಸವೂ ಗೊತ್ತಿಲ್ಲ, ತಮ್ಮವರ ಇತಿಹಾಸವೂ ಗೊತ್ತಿಲ್ಲ. ಇವರಿಗೆ ಪಂಡಿತ ಜವಾಹರಲಾಲ್ ನೆಹರೂ ಅವರ ಬಗ್ಗೆ ಮಾತನಾಡುವ ಯೋಗ್ಯತೆಯೂ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಕಾರಣಕ್ಕೆ ಒಟ್ಟು 9 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದ ಜವಾಹರಲಾಲ್ ನೆಹರೂ ಅವರ ಹೆಸರನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ಹೊರಗಿಟ್ಟು ಬಿಜೆಪಿ ಸರ್ಕಾರ ಇಡೀ ದೇಶಕ್ಕೆ ಅಪಮಾನವೆಸಗಿದೆ. ಐಕ್ಯತೆ ಮತ್ತು ಸಂಭ್ರಮದಿಂದ ಆಚರಿಸಬೇಕಾದ ಸ್ವಾತಂತ್ರ್ಯ ದಿನಾಚರಣೆಯನ್ನು ರಾಜಕೀಯ ದ್ವೇಷಕ್ಕೆ ಬಳಸಿಕೊಂಡ ಕುಖ್ಯಾತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ. ಇತಿಹಾಸಕಾರರ ಮಾತುಗಳನ್ನು ಕೇಳುವ ಸಹನೆ- ಸಂಯಮ- ವಿಶಾಲ ಮನೋಭಾವ ಖಂಡಿತ ಬಿಜೆಪಿ ನಾಯಕರಿಗೆ ಇಲ್ಲ. ಕನಿಷ್ಠ ಅವರದ್ದೆ ಪಕ್ಷದ ನಾಯಕರ ಮಾತುಗಳನ್ನಾದರೂ ಆಲಿಸಬೇಕೆಂಬುದು ನಮ್ಮ ಮನವಿ.

(75ನೇ ವರ್ಷದ ಸ್ವಾಂತ್ರ್ಯೋತ್ಸದ ಅಂಗವಾಗಿ ಕರ್ನಾಟಕದ ಬಸವರಾಜ ಬೊಮ್ಮಾಯಿ ಸರ್ಕಾರ ಪ್ರಕಟಿಸಿದ ಜಾಹೀರಾತಿನಲ್ಲಿ ಚಾಚಾ ನೆಹರೂರರವರ ಭಾವಚಿತ್ರವನ್ನು ಕೈಬಿಟ್ಟ ಘಟನೆಯ ಕುರಿತು ದೇಶದ ಖ್ಯಾತ ವ್ಯಂಗ್ಯಚಿತ್ರಕಲಾವಿದ ಸತೀಶ್ ಆಚಾರ್ಯರವರು ರಚಿಸಿದ ಒಂದು ಅಪರೂಪದ ಚಿತ್ರ)

27 ಮೇ 1964ರಲ್ಲಿ ನೆಹರೂ ನಮ್ಮನ್ನು ಅಗಲಿದಾಗ, ರಾಜ್ಯಸಭಾ ಸದಸ್ಯರಾಗಿದ್ದ ಅಂದಿನ ಭಾರತೀಯ ಜನಸಂಘದ ಅಟಲ್ ಬಿಹಾರಿ ವಾಜಪೇಯಿಯವರು ರಾಜ್ಯಸಭೆಯಲ್ಲಿ ನೆಹರೂ ಅವರ ಬಗ್ಗೆ ಭಾವುಕರಾಗಿ, ಅಷ್ಟೇ ಅಭಿಮಾನ-ಗೌರವದಿಂದ ಮಾತನಾಡಿದ್ದರು.
ಹಿಂದಿಯಲ್ಲಿರುವ ಈ ಭಾಷಣವನ್ನು ಯುವಪತ್ರಕರ್ತ ಗಿರೀಶ್ ತಾಳಿಕಟ್ಟೆ ಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಜ್ಯದ ಬಿಜೆಪಿ ನಾಯಕರೆಲ್ಲರೂ ಈ ಕೆಳಗಿನ ಬಾಷಣದ ಅನುವಾದವನ್ನು ಓದಿ ತಮ್ಮೊಳಗಿರುವ ಕುರುಡುದ್ವೇಷವನ್ನು ತೊರೆದು ತೆರೆದ ಕಣ್ಣು ಮತ್ತು ಹೃದಯಗಳಿಂದ ಪಂಡಿತ ಜವಾಹರಲಾಲ ನೆಹರೂ ಅವರು ಬದುಕು ಮತ್ತು ಸಾಧನೆಗಳನ್ನು ಓದಿ ಅರ್ಥಮಾಡಿಕೊಳ್ಳಬೇಕೆಂದು ವಿನಂತಿ.

ಹಿಂದಿಯಿಂದ ಕನ್ನಡಕ್ಕೆ ಅನುವಾದ: ಗಿರೀಶ್ ತಾಳಿಕಟ್ಟೆ

ಶ್ರೀಯುತರೇ,
ಇವತ್ತು ಕನಸೊಂದು ಛಿದ್ರವಾಗಿದೆ; ಗಾನವೊಂದು ಮೌನವಾಗಿದೆ; ಜ್ಯೋತಿಯೊಂದು ಅನಂತದೊಳಗೆ ಲೀನವಾಗಿದೆ. ಹಸಿವುಮುಕ್ತ ಮತ್ತು ಭಯರಹಿತ ಜಗತ್ತನ್ನು ಸೃಷ್ಟಿಸಬೇಕೆಂಬ ಕನಸಾಗಿತ್ತು ಅದು. ಗೀತೆಯ ಸಾರವನ್ನು ಧ್ವನಿಸುತ್ತಿದ್ದ, ಗುಲಾಬಿಯ ಸುಗಂಧವನ್ನು ಪಸರಿಸುತ್ತಿದ್ದ ಗಾನವಾಗಿತ್ತು ಅದು. ರಾತ್ರಿಯಿಡೀ ನಿರಂತರವಾಗಿ ಜ್ವಲಿಸುತ್ತಾ, ಪ್ರತಿ ಅಂಧಕಾರದೊಂದಿಗೆ ಹೋರಾಡಿ ನಮಗೆ ದಾರಿತೋರಿ, ಬೆಳಗಿನ ಜಾವ ನಿರ್ವಾಣಹೊಂದಿದ ಜ್ಯೋತಿ ಅದು.

ಹೌದು, ಸಾವು ನಿಶ್ಚಿತ; ದೇಹ ನಶ್ವರ. ಶ್ರೀಗಂಧದ ಚಿತೆಯ ಜ್ವಾಲೆಗೆ ನಿನ್ನೆ ನಾವು ಅರ್ಪಿಸಿದ ಆ ಸ್ವರ್ಣ ದೇಹ ಕೂಡಾ ಕೊನೆ ಉಳ್ಳಂತದ್ದೆ. ಆದರೆ ಸಾವು ಇಷ್ಟೊಂದು ಕದೀಮನಾಗಬಹುದೇ? ನಾವು ಸ್ನೇಹಿತರೆಲ್ಲ ನಿದ್ರಿಸುತ್ತಿದ್ದಾಗ, ಅಂಗರಕ್ಷಕರೆಲ್ಲ ಮೈಮರೆತಿದ್ದಾಗ, ಸಟ್ಟನೆ ದಾಳಿ ಮಾಡಿ ನಮ್ಮ ಜೀವನದಲ್ಲಿ ನಮಗೆ ಸಿಕ್ಕಿದ್ದ ಒಂದು ಬೆಲೆಕಟ್ಟಲಾಗದ ಉಡುಗೊರೆಯನ್ನು ಕದ್ದೊಯ್ದಿದೆಯಲ್ಲ.

ಇವತ್ತು ಭಾರತಮಾತೆ ಅತೀವ ದುಃಖಿತಳಾಗಿದ್ದಾಳೆ - ಆಕೆ ತನ್ನ ಮುದ್ದಿನ ಕುವರನನ್ನು ಕಳೆದುಕೊಂಡಿದ್ದಾಳೆ. ಇವತ್ತು ಮಾನವೀಯತೆ ಸಂಕಟದಲಿ ಮಿಂದಿದೆ - ಅದು ತನ್ನ ಆರಾಧಕನನ್ನು ಕಳೆದುಕೊಂಡಿದೆ. ಇವತ್ತು ಶಾಂತಿ ನಿತ್ರಾಣಗೊಂಡಿದೆ - ಅದರ ರಕ್ಷಕ ಇನ್ನಿಲ್ಲ. ದಮನಿತರು ತಮ್ಮ ಆಸರೆಯನ್ನು ಕಳೆದುಕೊಂಡಿದ್ದಾರೆ. ಸಾಮಾನ್ಯ ಭಾರತೀಯ ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ. ಎಲ್ಲದಕ್ಕೂ ತೆರೆ ಬಿದ್ದಿದೆ. ನಾಟಕದ ಕಥಾನಾಯಕ ತನ್ನ ಪಾಲಿನ ಕೊನೇ ಅಂಕವನ್ನು ಮುಗಿಸಿ, ಜಗತ್ತಿನ ಮುಂದೆ ಶಿರಬಾಗಿ ನಿರ್ಗಮಿಸಿದ್ದಾನೆ.

ಶ್ರೀರಾಮನ ಬದುಕಿನ ಕುರಿತ ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿಯು ತಾನು ಅಸಾಧ್ಯವಾದದ್ದನ್ನೆಲ್ಲ ಒಂದುಗೂಡಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಪಂಡಿತ್‌ಜಿ (ನೆಹರೂ) ಅವರ ಬದುಕಿನಲ್ಲೂ ನಾವು ಆ ಮಹಾಕವಿಯ ಉಲ್ಲೇಖದ ಮಿನುಗುಗಳನ್ನು ಕಾಣಬಹುದು. ಅವರು ಶಾಂತಿಯ ಆರಾಧಕರಾಗಿದ್ದರು; ಆದಾಗ್ಯೂ ಕ್ರಾಂತಿಯ ಮುಂಗಾಮಿಯಾಗಿದ್ದರು. ಅವರು ಅಹಿಂಸೆಯ ರೂವಾರಿಯಾಗಿದ್ದರು; ಆದಾಗ್ಯೂ, ಸ್ವಾತಂತ್ರ್ಯ ಮತ್ತು ದೇಶದ ಆತ್ಮಗೌರವದ ರಕ್ಷಣೆಗಾಗಿ ಯಾವುದೇ ಅಸ್ತ್ರವನ್ನು ಬಳಸುವುದಕ್ಕು ಸಿದ್ದವಿದ್ದರು.

ಅವರು ಪ್ರತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದರು; ಆದಾಗ್ಯೂ, ಆರ್ಥಿಕ ಸಮಾನತೆಯ ಕನಸಿಗೆ ಬದ್ಧರಾಗಿದ್ದರು. ಪ್ರಗತಿಗಾಗಿ ಅವರು ಯಾರ ಜೊತೆ ಬೇಕಾದರೂ ರಾಜಿಗೆ ಸಿದ್ದವಿದ್ದರು, ಆದರೆ ಯಾರಿಗೋ ಅಂಜಿ ಅವರು ರಾಜಿಗೆ ಮುಂದಾದವರಲ್ಲ. ಪಾಕಿಸ್ತಾನ ಮತ್ತು ಚೀನಾ ದೇಶಗಳ ಕುರಿತಂತೆ ಅವರ ನೀತಿಗಳು ಈ ಗುಣಮಿಶ್ರಣದ ಪ್ರತೀಕವಾಗಿದ್ದವು. ಅದು ಅವರ ಉದಾರತೆಯೂ ಹೌದು, ಬದ್ಧತೆಯೂ ಹೌದು. ಆದರೆ ಕೆಲವರು ಅವರ ಉದಾರತೆಯನ್ನು ಬಲಹೀನತೆಯೆಂತಲೂ, ಅದರ ಬದ್ಧತೆಯನ್ನು ಹಠಮಾರಿತನವೆಂತಲೂ ತಪ್ಪಾಗಿ ಅರ್ಥೈಸಿಕೊಂಡಿದ್ದು ವಿಪರ್ಯಾಸವೇ ಸರಿ.

ಅವರು ಕೋಪಿಷ್ಟರಾಗಿದ್ದನ್ನು ನಾನೊಮ್ಮೆ ಕಂಡಿದ್ದು, ಇನ್ನೂ ಚೆನ್ನಾಗಿ ನೆನಪಿದೆ. ಚೀನಾದೊಟ್ಟಿಗೆ ನಮ್ಮ ಸಂಘರ್ಷ ಉತ್ತುಂಗಕ್ಕೇರಿದ್ದ ದಿನಗಳು ಅವು. ಸಂದರ್ಭದ ಲಾಭ ಪಡೆದ ನಮ್ಮ ಪಾಶ್ಚಾತ್ಯ ಮಿತ್ರರಾಷ್ಟ್ರಗಳು ಕಾಶ್ಮೀರ ವಿಚಾರದಲ್ಲಿ ಒಂದಷ್ಟು ರಾಜಿ ಮಾಡಿಕೊಳ್ಳುವಂತೆ ನಮ್ಮ ಮೇಲೆ ಒತ್ತಡ ತರುತ್ತಿದ್ದರು. ನಾವೀಗ ಒಂದಷ್ಟು ರಾಜಿಗೆ ಸಿದ್ದವಾಗದಿದ್ದರೆ ಏಕಕಾಲಕ್ಕೆ ಎರಡು ಶತ್ರುರಾಷ್ಟ್ರಗಳೊಂದಿಗೆ ಯುದ್ಧ ಮಾಡಬೇಕಾಗಿ ಬಂದೀತು ಎಂಬ ಸಲಹೆ ಬಂದಾಗ, ಅವರು ಕೆಂಡಾಮಂಡಲವಾಗಿ "ಅಗತ್ಯಬಿದ್ದರೆ ನಾವು ಏಕಕಾಲಕ್ಕೆ ಎರಡೂ ಕಡೆ ಯುದ್ಧಕ್ಕೆ ಸಿದ್ಧ" ಎಂದು ಪ್ರತಿಕ್ರಿಯಿಸಿದ್ದರು. ಒತ್ತಡ ತಂದು ಅವರನ್ನು ಮಣಿಸಲು ಸಾಧ್ಯವಿರಲಿಲ್ಲ.

ಶ್ರೀಯುತರೇ, ಅವರ ನೇತೃತ್ವ ಮತ್ತು ಸಂರಕ್ಷಣೆಯಲ್ಲಿ ಪ್ರತಿಷ್ಟಾಪನೆಯಾಗಿದ್ದ ಸ್ವಾತಂತ್ರ್ಯ ಇವತ್ತು ಅಪಾಯಕ್ಕೆ ತುತ್ತಾಗಿದೆ. ನಮ್ಮೆಲ್ಲ ಬಲವನ್ನು ಒಗ್ಗೂಡಿಸಿ ಅದನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಅವರು ಆಳವಾಗಿ ಪ್ರತಿಪಾದಿಸಿದ ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆಗಳು ಸಹಾ ಅಪಾಯಕ್ಕೆ ಸಿಲುಕಿವೆ. ಯಾವುದೇ ಬೆಲೆ ತೆತ್ತಾದರೂ ಸರಿ, ಅವುಗಳನ್ನು ನಾವು ಸಂರಕ್ಷಿಸಬೇಕಿದೆ. ಅವರು ಅನುಷ್ಠಾನಗೊಳಿಸಿದ ಭಾರತೀಯ ಪ್ರಜಾಪ್ರಭುತ್ವ, ಮತ್ತು ಅದರ ಮೂಲಕ ಅವರು ಸಾಧಿಸಿದ ಯಶಸ್ಸುಗಳು ಸಹಾ ಮಂಕಾದ ಭವಿಷ್ಯವನ್ನು ಎದುರಿಸುತ್ತಿವೆ. ಒಗ್ಗಟ್ಟು, ಶಿಸ್ತು ಮತ್ತು ಆತ್ಮವಿಶ್ವಾದಿಂದ ನಾವು ಈ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಬೇಕಿದೆ.

ನಾಯಕ ನಿರ್ಗಮಿಸಿರಬಹುದು, ಅನುಯಾಯಿಗಳು ಇನ್ನೂ ಇದ್ದಾರೆ. ಸೂರ್ಯ ಅಸ್ತಮಿಸಿರಬಹುದು, ಆಗಸದಲ್ಲಿ ಮೂಡುವ ತಾರೆಗಳ ಬೆಳಕಿನಲ್ಲೇ ನಾವೀಗ ಮುಂದಿನ ದಾರಿ ಹುಡುಕಿಕೊಳ್ಳಬೇಕಿದೆ. ಇದು ನಮ್ಮ ಪರೀಕ್ಷೆಯ ಉತ್ತುಂಗದ ಕಾಲ. ಜಗತ್ತಿನ ಶಾಂತಿಗಾಗಿ ಗೌರವಯುತವಾದ ಕಾಣಿಕೆ ನೀಡಬಹುದಾದ ಮಾದರಿಯುತ ಸದೃಢ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲು ನಾವು ಪರಸ್ಪರ ಒಗ್ಗೂಡಿ ದುಡಿಯುವುದು ಮಾತ್ರವೇ ಆ ನಾಯಕನಿಗೆ ಸಲ್ಲಿಸುವ ನಿಜವಾದ ಗೌರವ.

ಅವರ ಅಗಲಿಕೆ ಸಂಸತ್ತಿಗೆ ತುಂಬಲಾರದ ನಷ್ಟ. ಆ ಸ್ಪಂದನಶೀಲ ವ್ಯಕ್ತಿತ್ವ, ವಿರೋಧಪಕ್ಷಗಳನ್ನೂ ಜೊತೆಗೆ ಕೊಂಡೊಯ್ಯುವ ಆ ಧೋರಣೆ, ಆ ಸೂಕ್ಷ್ಮ ಸಜ್ಜನಿಕೆ, ಆ ಉದಾತ್ತತೆಗಳನ್ನು ಸದ್ಯೋಭವಿಷ್ಯದಲ್ಲಿ ಮತ್ತೆ ನಾವು ಕಾಣಲು ಸಾಧ್ಯವಿಲ್ಲ. ನಮ್ಮ ನಡುವೆ ವಿಚಾರ ಭೇದಗಳು ಇದ್ದಾಗ್ಯೂ ಕೂಡಾ, ಅವರ ಮಹಾನ್ ಚಿಂತನೆಗಳು, ಅವರ ಸಮಗ್ರತೆ, ಈ ದೇಶದೆಡೆಗೆ ಅವರಿಗಿದ್ದ ಅದ್ವಿತೀಯ ಪ್ರೀತಿ ಮತ್ತು ಅವರ ಆ ಅದಮ್ಯ ಧೈರ್ಯದ ಪ್ರತಿಯಾಗಿ ಅವರ ಬಗ್ಗೆ ನಮ್ಮಲ್ಲಿ ಗೌರವವಲ್ಲದೆ ಮತ್ತೇನೂ ಇರಲು ಸಾಧ್ಯವಿಲ್ಲ.

ಈ ನನ್ನ ನುಡಿಗಳ ಮೂಲಕ, ಆ ಮಹಾನ್ ಚೇತನಕ್ಕೆ ನನ್ನ ನಮ್ರ ಗೌರವವನ್ನು ಅರ್ಪಿಸುತ್ತೇನೆ.

- ಅಟಲ್ ಬಿಹಾರಿ ವಾಜಪೇಯಿ
(ರಾಜ್ಯಸಭಾ ಸದಸ್ಯರು-೧೯೬೪)

(ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಬರಹದ ಯಥಾವತ್ ನಕಲು)

Advertisement
Advertisement
Recent Posts
Advertisement