Advertisement

ಸಂವಿಧಾನದ ಆಶಯಗಳನ್ನು ತಿಳಿಸದ ಮತ್ತು ತಿಳಿದುಕೊಳ್ಳದ ಮಾಧ್ಯಮಗಳು ಇದ್ದರೆಷ್ಟು ಹೋದರೆಷ್ಟು? :ಡಾ. ಎಚ್.ಸಿ ಮಹಾದೇವಪ್ಪ

Advertisement
"ತೈಲ ಬೆಲೆ ಏರಿಕೆ ಆದಾಗ ಜನರಿಗೆ ತೊಂದರೆ ಆಗುತ್ತಿದೆ, ಅದರ ಬಗ್ಗೆ ಗಮನ ಹರಿಸಿ ಅದನ್ನು ಬಿಟ್ಟು ಕಾಶ್ಮೀರ ಫೈಲ್ಸು, ಆ ಫೈಲ್ಸು ಈ ಫೈಲ್ಸು ಅಂತೀರಲ್ಲ ಅಂತ ಒಂದು ಗಟ್ಟಿಯಾದ ನಿಲುವು ತೆಗೆದುಕೊಳ್ಳೊವುದಿರಲಿ, ಕನಿಷ್ಠ ಪಕ್ಷ ಆ ಬಗ್ಗೆ ಒಂದು ಪ್ರಶ್ನೆಯನ್ನೂ ಕೇಳದ ಸ್ಥಿತಿಗೆ ಕೆಲವು ಮಾಧ್ಯಮಗಳು ಬಂದು ಬಿಟ್ಟಿವೆ" ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಕಿಡಿ ಕಾರಿದ್ದಾರೆ.

"ಇಷ್ಟು ವರ್ಷ ಇಲದ ಹಿಜಾಬ್ ಸಮಸ್ಯೆಯನ್ನು ಈಗೇಕೆ ಉಲ್ಬಣಗೊಳಿಸುತ್ತಿದ್ದೀರಿ, ಇದರಿಂದ ಮಕ್ಕಳ ಶಿಕ್ಷಣ ಹಾಳಾಗುತ್ತದೆ, ಶಿಕ್ಷಣ ಪಡೆಯುವ ಸ್ಥಳದ ವಾತಾವರಣ ಕೆಡುತ್ತದೆ ಎಂಬ ತಿಳುವಳಿಕೆಯ ಪರ ಒಬ್ಬರಾದರೂ ನಿಂತರೇ? ದಿನಕ್ಕಿಷ್ಟು ಎಂಬಂತೆ ದಲಿತರ ಮೇಲೆ, ಹಲ್ಲೆ ದಲಿತ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ದಲಿತರ ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು, ಗೊತ್ತಾದ ಪ್ರಕರಣಗಳಲ್ಲಿಯೂ ಅವರಿಗೆ ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಆಗಿದೆ ಎಂದು NCRB ಯ (ರಾಷ್ಟ್ರೀಯ ಅಪರಾಧ ವರದಿ ಸಂಸ್ಥೆ) ವರದಿ ಹೇಳುತ್ತಿದೆ. ಈ ಬಗ್ಗೆ ಒಬ್ಬರಾದರೂ ಸಹ ಆ ಸತ್ತವರಿಗೆ ಇಲ್ಲವೇ ಹಲ್ಲೆಗೆ ಒಳಗಾದ ದಲಿತರಿಗೆ ನ್ಯಾಯ ಸಿಗುವ ತನಕ ತಮ್ಮ ವೇದಿಕೆಯನ್ನು ಬಳಸಿಕೊಂಡು ಹೋರಾಟ ನಡೆಸಿದ ಉದಾಹರಣೆ ಇದೆಯೇ?" ಎಂದವರು ಪ್ರಶ್ನಿಸಿದ್ದಾರೆ.

ಇನ್ನು ಹೊನ್ನಾಳಿಯ ಶಾಸಕ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನೇ ಪಡೆದರೂ ಅದು ಅಸಂವಿಧಾನಿಕ ಎಂದು ಗಟ್ಟಿಯಾಗಿ ಹೇಳುವ ಧೈರ್ಯವನ್ನು ತೋರಲಿಲ್ಲ. ಮೊನ್ನೆ ವಿಧಾನ ಸಭಾ ಸ್ಪೀಕರ್ ಅದ ಕಾಗೇರಿ ಅವರು ತಾವು ಎಂತಹ ಸ್ಥಾನದಲ್ಲಿ ಕೂತಿದ್ದೇವೆ ಎಂಬುದನ್ನು ಮರೆತು ಸದನದ ಸದಸ್ಯರನ್ನು ಎಚ್ಚರಿಸಬೇಕಾದ ಜವಾಬ್ದಾರಿತನ್ನೇ ಮರೆತು "ನಾವು RSS ನವರು" ಎಂದು ಬಾಲಿಶವಾಗಿ ಮಾತನಾಡುತ್ತಿದ್ದಾಗ ಅದು ಅಸಂವಿಧಾನಿಕ ನಡೆ, ಓರ್ವ ಸ್ಪೀಕರ್ ಹಾಗೆ ವರ್ತಿಸಬಾರದು ಎಂದು ಒಬ್ಬರಾದರೂ ತಮ್ಮ ಪ್ರತಿರೋಧವು ರಿಜಿಸ್ಟರ್ ಆಗುವಂತೆ ಹೇಳಿದರೇ? ಪುಲ್ವಾಮ ಘಟನೆ ನಡೆದು ಎಷ್ಟು ದಿನವಾಯಿತು? ಮಡಿದ ಸೈನಿಕರ ಸಾವಿಗೆ ಕಾರಣ ಹುಡುಕಿ ಎಂದು ಒಬ್ಬರಾದರೂ ಪಟ್ಟು ಹಿಡಿಯುವ ಧೈರ್ಯ ತೋರಿದರೇ? ಇನ್ನು ಸಮಾಜವಾದಿ ನಾಡಿನ ಸಮಾಜ ವ್ಯಾಧಿ ಎನ್ನಬಹುದಾದ ಶಾಸನಬದ್ಧ ಜನ ಪ್ರತಿನಿಧಿ ಈಶ್ವರಪ್ಪ ಎಂಬಾತ ರಾಷ್ಟ್ರಧ್ವಜದ ಬಗ್ಗೆ ಅಗೌರವ ತೋರಿದಾಗ, ಅದು ಅಸಂವಿಧಾನಿಕ ನಡೆ ಎಂದು ತಾವೇ ಒಂದು ಹೆಜ್ಜೆ ಮುಂದೆ ಹೋಗಿ ಆತನಿಗೆ ತಿಳಿ ಹೇಳಬೇಕಿದ್ದ ಮಾಧ್ಯಮಗಳು " ಸದನದಲ್ಲಿ ರಾಷ್ಟ್ರಧ್ವಜ ಗದ್ದಲ, ಕಾಂಗ್ರೆಸ್ ನಿಂದ ಈಶ್ವರಪ್ಪ ರಾಜೀನಾಮೆಗೆ ಆಗ್ರಹ" ಎಂಬ ಮಾಹಿತಿಯನ್ನಷ್ಟೇ ಪ್ರಸಾರ ಮಾಡುತ್ತಿರುವಾಗ ಇವರಿಗೆ ಸಂವಿಧಾನದ ಕುರಿತು ತಿಳುವಳಿಕೆ ಮತ್ತು ಗೌರವ ಇಲ್ಲ ಎಂದುಕೊಳ್ಳಬೇಕೋ ಅಥವಾ ಇದೆ ಎಂದುಕೊಳ್ಳಬೇಕೋ? ಎಂದವರು ಕೇಳಿದ್ದಾರೆ.

ಕೆಲವೊಂದು ಧಾರ್ಮಿಕ ಸಂಘಟನೆಗಳ ವಿಷ ಜಂತುಗಳು ಬೀದಿಯಲ್ಲಿ ನಿಂತು ಬೇರೆ ಧರ್ಮದವರ ಅಂಗಡಿಗಳನ್ನು ತೆರವುಗೊಳಿಸುತ್ತೇವೆ, ಶಸ್ತ್ರ ಹಿಡಿಯಬೇಕು ಎಂದೆಲ್ಲಾ ಮಾತನಾಡುವಾಗ ಅವರು
"ಅನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದು, ಸಮಾಜದ ಸಾಮರಸ್ಯ ಕೆಡಿಸುತ್ತಿದ್ದಾರೆ, ಸರ್ಕಾರ ಕೂಡಲೇ ಅಂತವರನ್ನ ಬಂಧಿಸಬೇಕು" ಎಂಬ ಅರಿವನ್ನು ಮೂಡಿಸಲು ಇವರಿಗೆ ಆಗದೇ ಇದ್ದ ಮೇಲೆ ಸಮಾಜಕ್ಕೆ ಇವರ ಅವಶ್ಯಕತೆ ಏನು? ಧರ್ಮ ಯಾವುದು, ಬದುಕಿನ ಕ್ರಮ ಯಾವುದು, ಸಂವಿಧಾನ ಏನು ಹೇಳುತ್ತದೆ? ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದಕ್ಕೆ ಪೂರಕವಾಗಿ ನಾವೇನು ಮಾಡಬೇಕು ಎಂದು ತಿಳಿಸಬೇಕಾದ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತು ಇನ್ಯಾವುದೋ ಸಂಗತಿಯಲ್ಲಿ ಮುಳುಗಿರುವುದು ಕಡು ಬೇಸರದ ಸಂಗತಿ. ಸರ್ಕಾರವು 40% ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸ್ವತಃ ಗುತ್ತಿಗೆದಾರರೇ ಹೇಳುತ್ತಿದ್ದರೂ ಆ ಬಗ್ಗೆ ಸೊಲ್ಲೆತ್ತದ ಇವರು ಮುಖ್ಯಮಂತ್ರಿಗಳನ್ನು ಕೇಳಬೇಕಾದ ಬಹಳಷ್ಟು ಪ್ರಶ್ನೆಗಳನ್ನು ವಿಪಕ್ಷೀಯ ನಾಯಕರಿಗೆ ಕೇಳುತ್ತಿದ್ದರೆ ಇವರಿಗೆ ಏನು ಹೇಳೋಣ? ಎಂದು ಹೇಳಿದ್ದಾರೆ.

ಸಾಲದು ಎಂಬಂತೆ ಹರ್ಷ ಎಂಬಂತಹ ನಿರುದ್ಯೋಗಿ ಹುಡುಗನ ತಲೆ ಕೆಡಿಸಿ ಅವನನ್ನು 'ರೌಡಿ ಶೀಟರ್' ಆಗಿಸಿ ಕೊನೆಗೆ ಹಿಂಸಾ ಮಾರ್ಗದಲ್ಲೇ ಬಲಿಯಾಗುವಂತೆ ಮಾಡಿದ ಮಾರ್ಗವು ತಪ್ಪು, ಅದು ಧರ್ಮವಲ್ಲ ಮೂರ್ಖತನ ಎಂದು ಹೇಳಿದ ಒಂದೇ ಒಂದು ಮುಖ್ಯ ವಾಹಿನಿಯ ಮಾಧ್ಯಮಗಳನ್ನು ನಾನು ಕಾಣಲಿಲ್ಲ ಎಂಬುದು ಸತ್ಯ. ನಾನು ಗಮನಿಸಿದಂತೆ ಮಾಧ್ಯಮ ವಲಯದಲ್ಲಿ ಸಂವಿಧಾನದ ಕುರಿತ ತಿಳುವಳಿಕೆ ತೀರಾ ಕಡಿಮೆ ಮಟ್ಟದಲ್ಲಿ ಇದೆ. ಹೀಗಾಗಿಯೇ ಅವರಿಗೆ ಸಮಾಜ, ಸರ್ಕಾರ ಮತ್ತು ರಾಜಕೀಯದಲ್ಲಿ ಯಾವುದು ಸಂವಿಧಾನ ಬಾಹಿರ ನಡೆ ಎಂದು ಗುರುತಿಸಲು ಮತ್ತು ಆ ಬಗ್ಗೆ ಧೈರ್ಯದಿಂದ ದನಿ ಎತ್ತಲು ವಿಶ್ವಾಸವು ಸಾಲುತ್ತಿಲ್ಲ ಎಂದು ಅನಿಸುತ್ತಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಇನ್ನು ಮುಂದೆ, ನಾವೆಲ್ಲರೂ ಪ್ರಜಾಪ್ರಭುತ್ವದ ಕಾವಲುಗಾರಿಕೆ ಮಾಡುತ್ತಾರೆ ಎಂದು ನಂಬಿರುವ ಮಾಧ್ಯಮಗಳು ತಮ್ಮ ಕಚೇರಿಯಲ್ಲಿ ತಮ್ಮ ಸಿಬ್ಬಂದಿಗಳಿಗೆ ಸಂವಿಧಾನವನ್ನು ತಪ್ಪದೇ ಬೋಧಿಸಲಿ ಎಂದು ವಿನಂತಿಸಿಕೊಳ್ಳುತ್ತೇನೆ.
ಸಂವಿಧಾನದ ತಿಳುವಳಿಕೆ ಇಲ್ಲದೇ, ಪ್ರಜಾಪ್ರಭುತ್ವದಲ್ಲಿ ಅನಾರೋಗ್ಯ ಹೆಚ್ಚಾಗುತ್ತಿದ್ದರೂ ಆ ಕುರಿತು ದನಿ ಮಾಡದ, ಸಂವಿಧಾನಾತ್ಮಕವಾದ ವಾತಾವರಣವನ್ನು ಕಾಪಾಡದ ಮಾಧ್ಯಮಗಳು ಇದ್ದರೆಷ್ಟು ಹೋದರೆಷ್ಟು.! ಇನ್ನು ಕೇವಲ ಮಾಧ್ಯಮ ಅಷ್ಟೇ ಅಲ್ಲದೇ, ಶಾಲೆ ಕಾಲೇಜು, ಧಾರ್ಮಿಕ ಸಂಘಟನೆಗಳು, ಸೇವಾ ಸಂಸ್ಥೆಗಳು, ಕಲಾವಿದರ ಸಂಸ್ಥೆಗಳು, ಉದ್ಯಮಿಗಳು ಮತ್ತು ವ್ಯಾಪಾರಸ್ಥರ ಆದಿಯಾಗಿ ಎಲ್ಲರೂ ಕೂಡಾ ಸಂವಿಧಾನದ ಕುರಿತು ಸಮರ್ಪಕವಾದ ತಿಳುವಳಿಯನ್ನು ಹೊಂದಬೇಕು, ಆಗಷ್ಟೇ ತಪ್ಪು ಮಾಹಿತಿಯನ್ನು ಹರಡುತ್ತಾ ಸಮಾಜದ ಹಿತ ಕೆಡಿಸುತ್ತಿರುವ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂಬುದು ನನ್ನ ಬಲವಾದ ನಂಬಿಕೆ. ಸಂವಿಧಾನದ ತಿಳುವಳಿಕೆ ಇಲ್ಲದ, ಸಂವಿಧಾನದ ಆಶಯಗಳ ಸಾಕಾರಕ್ಕಾಗಿ ತುಡಿಯದ, ಮಾನವೀಯ ಮೌಲ್ಯಗಳಿಗೆ ದೂರವಾಗಿರುವ ನಮ್ಮ ದೇಶ ಪ್ರೇಮವು ಸಮಾಜಕ್ಕೆ ಕೆಟ್ಟದ್ದನ್ನು ಉಂಟು ಮಾಡುವ ದ್ವೇಷ ಪ್ರೇಮವಷ್ಟೇ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
Recent Posts
Advertisement