Advertisement

"ಆಮ್ ಆದ್ಮಿ ಪಕ್ಷ" ಹಾವಿನಂತಿರುವ ಕೋಲೋ? ಕೋಲಿನಂತಿರುವ ಹಾವೋ? ಇವರು ಅಧಿಕಾರದ ಪರವೇ ಹೊರತೂ ಜನಪರವಲ್ಲ!

Advertisement
ಈ ದೇಶ ಒಂದು ನಿಜವಾದ ರಾಜಕೀಯ ಪರ್ಯಾಯಕ್ಕಾಗಿ ತಹತಹಿಸುತ್ತಿರುವ ಸಂದರ್ಭದಲ್ಲಿ ದೇಶದ ರಾಜಕಾರಣದಲ್ಲಿ ಅಚ್ಚರಿಗೊಳಿಸುವ ಫಲಿತಾಂಶಗಳೊಂದಿಗೆ ಆಮ್ ಆದ್ಮಿ ಪಕ್ಷ ಪ್ರವೇಶ ಮಾಡಿತು. 2014ರಲ್ಲಿ ಮೋದಿಯವರನ್ನು ನೇರಾನೇರಾ ಚುನಾವಣೆಯಲ್ಲಿ ಎದುರಿಸುವ ಧೈರ್ಯವನ್ನು ತೋರಿದ ಆಮ್ ಆದ್ಮಿ ಪಕ್ಷ 2015ರಲ್ಲಿ ಮತ್ತು 2020ರಲ್ಲಿ ಎರಡು ಬಾರಿ ದೆಹಲಿ ಶಾಸನಾ ಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿತು.

ಅಷ್ಟು ಮಾತ್ರವಲ್ಲ, ಇತ್ತೀಚೆಗೆ ಪಂಜಾಬಿನಲ್ಲೂ ಕೂಡಾ ಅಭೂತಪೂರ್ವ ಚುನಾವಣಾ ಸಾಧನೆಯನ್ನು ಮಾಡಿ ಸರ್ಕಾರವನ್ನು ರಚಿಸುವ ಮೂಲಕ ಕಾಂಗ್ರೆಸ್, ಬಿಜೆಪಿ ಮತ್ತು ಕಮ್ಯುನಿಸ್ಟರನ್ನು ಬಿಟ್ಟರೆ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಸರ್ಕಾರ ರಚಿಸಿದ ಪಕ್ಷವೆಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ. ತಾನು ಆಡಳಿತ ನಡೆಸುತ್ತಿರುವ ದೆಹಲಿಯಲ್ಲಿ ಉಚಿತ ವಿದ್ಯುತ್ ಮತ್ತು ನೀರಿನ ಜೊತೆಗೆ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಹಾಗೂ ಮೊಹಲ್ಲಾ ಕ್ಲಿನಿಕ್ ಗಳನ್ನು ತೆರೆಯುವ ಮೂಲಕ ಒಂದು ಮಾದರಿ ಸರ್ಕಾರವೆಂಬ ಪ್ರಚಾರಕ್ಕೂ ಭಾಜನವಾಗಿದೆ. ಇದರಲ್ಲಿ ಸಹಜವಾಗಿ ಒಂದಷ್ಟು ಸರ್ಕಾರಿ ಪ್ರಚಾರಗಳ ಉತ್ಪ್ರೇಕ್ಷೆ ಇದ್ದರೂ, ಆಡಳಿತಾತ್ಮಕ ಭ್ರಷ್ಟಾಚಾರವನ್ನು ತಹಬದಿಗೆ ತಂದರೂ ಜನರಿಗೆ ಅತ್ಯಗತ್ಯವಾದ  ಸೇವೆ ಮತ್ತು ಸರಕುಗಳನ್ನು ಒದಗಿಸಲು ಬೇಕಾದ ಸಂಪನ್ಮೂಲಗಳನ್ನು ಒದಗಿಸಲು ಸಾಧ್ಯ ಎಂಬುದನ್ನು ಒಂದಷ್ಟು ಮಟ್ಟಿಗಾದರೂ ಆಮ್ ಆದ್ಮಿ ಪಕ್ಷ ರುಜುವಾತು ಮಾಡಿದೆ.
ಈ ಎಲ್ಲಾ ಕಾರಣದಿಂದಾಗಿ ಹಾಗೂ ವಿಶೇಷವಾಗಿ ಪಂಜಾಬಿನಲ್ಲಿ ಅದರ ಬೆರಗುಗೊಳಿಸುವ ಸಾಧನೆಯನ್ನು  ಗಮನಿಸಿ ಒಂದು ಜನವರ್ಗ ಆಪ್ ಪಕ್ಷದತ್ತ ಆಸೆಗಣ್ಣುಗಳಿಂದ ನೋಡುತ್ತಿದೆ. ಬಂಗಾಳದಲ್ಲಿ ಟಿಎಂಸಿ ಹಾಗೂ ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲ್ಲಿ ಕಮ್ಯುನಿಸ್ಟ್ ಪಕ್ಷಗಳನ್ನೂ ಹೊರತುಪಡಿಸಿದರೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ಸನ್ನೂ ಒಳಗೊಂಡಂತೆ ಈ ಯಾವ ಪಕ್ಷಗಳೂ ಬಿಜೆಪಿಗೆ ಪರಿಣಾಮಕಾರಿ ಚುನಾವಣಾ ವಿರೋಧವನ್ನೂ ನೀಡಲಾಗದಂಥ ಪರಿಸ್ಥಿತಿ ಇರುವಾಗ ಆಪ್ ಪಕ್ಷ ಒಂದು ನಿಜವಾದ ಪರ್ಯಾಯಾವಾಗಬಹುದು, ಪರ್ಯಾಯಾವಾಗಬೇಕು ಎಂದು ನಿರೀಕ್ಷಿಸುತ್ತಿದ್ದಾರೆ.
ಹೀಗಾಗಿ ಪಂಜಾಬ್ ಚುನಾವಣೆಯ ನಂತರ ಆಪ್ ಪಕ್ಷಕ್ಕೆ ಕರ್ನಾಟಕವನ್ನೂ ಒಳಗೊಂಡಂತೆ  ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಹೊಸಬರು, ಹಳೆಯ ಪಕ್ಷಗಳಲ್ಲಿ ಚಲಾವಣೆ ಕಳೆದುಕೊಳ್ಳುತ್ತಿರುವ ಹಳಬರು, ಅವಕಾಶವಾದಿಗಳು, ಕೋಮುವಾದಿಗಳು, ಗುಪ್ತ ಭ್ರಷ್ಟಾಚಾರಿಗಳು ಮತ್ತು ಗುಪ್ತ ಹಿಂದೂತ್ವವಾದಿಗಳೆಲ್ಲರೂ ಹೊಸ ಬಟ್ಟೆ ಧರಿಸಿ ಆಪ್ ಸೇರುತ್ತಿದ್ದಾರೆ. ಆಪ್ ಅವರೆಲ್ಲರನ್ನು ಯಾವುದೇ ತಕರಾರಿಲ್ಲದೆ ಸೇರಿಸಿಕೊಳ್ಳುತ್ತಿದೆ.

ಈ ಕಾರಣದಿಂದಲೇ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ನಂತ ರಾಜ್ಯಗಳಲ್ಲಿ ಪರಮ ಹಿಂದೂತ್ವವಾದಿ ಬಿಜೆಪಿಯ ನಾಯಕರು ಆಪ್ ಪಕ್ಷಕ್ಕೂ, ಆಪ್ ಪಕ್ಷದಿಂದ ಬಿಜೆಪಿಗೂ ಕೂಡ ಸರಾಗವಾಗಿ ಪಕ್ಷಾಂತರಗೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ ಇಂದು ದೆಹಲಿಯ ಬಿಜೆಪಿ ನಾಯಕರಾಗಿರುವ, ಅತ್ಯಂತ ಕಡು ಹಿಂದೂತ್ವವಾದಿ ಹಾಗೂ ಮುಸ್ಲಿಂ ದ್ವೇಷಿ, ಮತ್ತು ದೆಹಲಿಯಲ್ಲಿ 2020ರಲ್ಲಿ ನಡೆದ ಮುಸ್ಲಿಂ ಹತ್ಯಾಕಾಂಡದ ಸೂತ್ರಧಾರಿಗಳಲ್ಲಿ ಒಬ್ಬರಾದ -ಗೋಲಿ ಮಾರೋ ಸಾಲೊಂಕೋ- ’ಕ್ಯಾತಿಯ’ ಕಪಿಲ್ ಮಿಶ್ರಾ ಕೂಡಾ 2019ರ ತನಕ ಆಪ್ ಪಕ್ಷದ ನಾಯಕರಾಗಿದ್ದವರೇ..
ಹೊಸ ಪಕ್ಷಗಳು ಹಳೆಯದರ ನಕಲಾಗುವ ಇತಿಹಾಸ
ಅದೇನೇ ಇರಲಿ. ಈ ದೇಶದ ಇತಿಹಾಸದಲ್ಲಿ ಹಳೆಯದರ ಬಗ್ಗೆ ಅದರಲೂ ವಿಶೇಷವಾಗಿ ಕಾಂಗ್ರೆಸ್ ಬಗ್ಗೆ ಸಕಾರಣವಾದ ಅಸಹನೆ ಮತ್ತು ಅಸಮಾಧಾನಗಳನ್ನು ಆಧರಿಸಿ 1960, 70 ಹಾಗೂ 80ರ ದಶಕಗಳಲ್ಲಿ ಹುಟ್ಟಿಕೊಂಡ ಹಲವಾರು ಪ್ರಾದೇಶಿಕ ಪಕ್ಷಗಳು, ರೈತ ಪಕ್ಷಗಳು, ವಿಕೇಂದ್ರೀಕರಣ ಪ್ರತಿಪಾದಕ ಪಕ್ಷಗಳೆಲ್ಲಾ (ಅಕಾಲಿ ದಳ, ಡಿಎಂಕೆ, ಆರ್‌ಎಲ್‌ಡಿ, ಎಐಡಿಎಂಕೆ, ಎಜಿಪಿ, ಜನತಾ ಪರಿವಾರ, ಟಿಡಿಪಿ, ಟಿಆರ್‌ಎಸ್, ನಮ್ಮಲ್ಲಿ ಜೆಡಿಎಸ್..ಇತ್ಯಾದಿಗಳು) ಒಂದು ರಾಷ್ಟ್ರೀಯ ಮಟ್ಟದ ಸುಸ್ಥಿರ ಚುನಾವಣಾ ಪರ್ಯಾಯಗಳನ್ನೂ ಒದಗಿಸಲಿಲ್ಲ. ಅಥವಾ ಒಂದು ರಾಜಕೀಯ ಹಾಗೂ ಸೈದ್ಧಾಂತಿಕ ಪರ್ಯಾಯವನ್ನೂ ಒದಗಿಸಲಿಲ್ಲ.
ಅದಕ್ಕೆ ತದ್ವಿರುದ್ಧವಾಗಿ ಮೋದಿಯವರ ನೇತೃತ್ವದಲ್ಲಿ ಹಿಂದೂತ್ವವಾದಿ ಅಜೆಂಡಾಗಳ ಆಧಾರದಲ್ಲಿ ಸಂಘಪರಿವಾರವು ಒಂದು ಸುಸ್ಥಿರ ಹಿಂದೂ ಓಟ್ ಬ್ಯಾಂಕ್ ಸೃಷ್ಟಿಸುವುದರಲ್ಲಿ ಯಶಸ್ವಿಯಾಗುತ್ತಿದೆ.
ಪರಿಣಾಮವಾಗಿ ಕಾಂಗ್ರೆಸ್ಸನ್ನೊ ಒಳಗೊಂಡಂತೆ ಈ ಎಲ್ಲಾ ಪಕ್ಷಗಳು ಕೂಡಾ ಹಿಂದೂ ಅಜೆಂಡಾವನ್ನು ಪಾಲಿಸುತ್ತಿವೆ ಅಥವಾ ಒಮ್ಮೊಮ್ಮೆ ಬಿಜೆಪಿಗೆ ಪೈಪೋಟಿ ಕೊಡುವ ರೀತಿಯಲ್ಲಿ ಅವರಿಗಿಂತ ಆಕ್ರಮಣಕಾರಿಯಾಗಿ ಸಂಘೀ ಫ್ಯಾಸಿಸ್ಟ್ ಕಥನಗಳನ್ನೂ ಹಾಗೂ ಅಜೆಂಡಾಗಳನ್ನು ಜಾರಿಗೊಳಿಸುತ್ತಿವೆ. ಹೀಗಾಗಿ ಇಂದು ಸಂಘೀ ಫ಼್ಯಾಸಿಸಂ ಗೆ ತಾತ್ವಿಕ ರಾಜಕಾರಣದಲ್ಲಿರಲಿ, ಚುನಾವಣಾ ರಾಜಕೀಯದಲ್ಲೂ ಎದುರಿಲ್ಲವಾಗಿದೆ.

ಕೆಲವೊಮ್ಮೆ ಬಿಜೆಪಿ ಚುನಾವಣೆಯಲ್ಲಿ ಸೋತರೂ ಗೆದ್ದ ಇತರ ಪಕ್ಷಗಳೂ ಸಹ ಸಂಘೀ ಅಜೆಂಡಾಗಳನ್ನೇ ಪಾಲಿಸುತ್ತಾ ಹಿಂದೂ ದೇಶ ಹಾಗೂ ಹಿಂದೂ ರಾಷ್ಟ್ರ ಕಟ್ಟಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸುತ್ತಿವೆ.

ಫ್ಯಾಸಿಸಂನ ಸವಾಲು ಮತ್ತು ಆಮ್ ಆದ್ಮಿ ಪಕ್ಷ
ಹೀಗಾಗಿ ಇಂದು ಭಾರತದ ರಾಜಕಾರಣದಲ್ಲಿ ಸಂಘೀ ಫ಼್ಯಾಸಿಸಂಗೆ ವಿರೋಧ ಪಕ್ಷವೇ ಇಲ್ಲದಂತಾಗಿದೆ. ನಿಜವಾದ ಜನಪರ್ಯಾಯವೇ ಇಲ್ಲವಾಗಿದೆ. ಏಕೆಂದರೆ ಸಂಘೀ ಪ್ಯಾಸಿಸಂ ಈ ದೇಶಕ್ಕೆ ಒಡ್ಡಿರುವುದು ಕೇವಲ ಚುನಾವಣಾ ಸವಾಲಲ್ಲ. ಕೇವಲ ರಾಜಕೀಯ ಸವಾಲಲ್ಲ. ಅದು ನಮ್ಮ ದೇಶದ ಸಂವಿಧಾನಕ್ಕೆ ಹಾಗೂ ಸಹಸ್ರಾರು ವರ್ಷದ ಕೂಡುಬಾಳ್ವೆಯ ನಾಗರೀಕತೆಗೆ ಒಡ್ಡಿರುವ ಸವಾಲಾಗಿದೆ.
ಹೀಗಾಗಿ ಅದನ್ನು ಎದುರಿಸಲು ಅಷ್ಟೇ ಬಲವಾದ ಹಾಗೂ ಪ್ರತಿಯಾದ ಸೈದ್ಧಾಂತಿಕ, ತಾತ್ವಿಕ, ರಾಜಕೀಯ ಗಟ್ಟಿತನ ಪ್ರತಿರೋಧಕ್ಕೆ ಇರಬೇಕಾಗುತ್ತದೆ. ಅದಿಲ್ಲದಿರುವುದರಿಂದಲೇ ಎಲ್ಲಾ ವಿರೋಧ ಪಕ್ಷಗಳು ಸಂಘೀ ಅಜೆಂಡಾಗಳನ್ನು ಪರೋಕ್ಷವಾಗಿ ಜಾರಿ ಮಾಡುವ 'ಬಿ ಟೀಂ'ಗಳಾಗಿ ಬಿಡುತ್ತಿವೆ.

ಇಂಥ ಸನ್ನಿವೇಶದಲ್ಲಿ ಆಪ್ ಪಕ್ಷ ತನ್ನ ಚುನಾವಣಾ ಗೆಲುವಿನ ಮೂಲಕ ಒಂದು ಪರ್ಯಾಯದ ಭರವಸೆಯನ್ನು ಹುಟ್ಟಿಸಿರುವ ಆಪ್ ಪಕ್ಷ ನಿಜಕ್ಕೂ ಸಂಘೀ ಸವಾಲಿಂದ ಈ ದೇಶವನ್ನು ಉಳಿಸಬಹುದಾದ ಪರ್ಯಾಯವೇ? ಅಥವಾ ಇತರ ವಿರೋಧ ಪಕ್ಷಗಳಂತೆ ಕೇವಲ ಚುನಾವಣಾ ಪರ್ಯಾಯವನ್ನು ಒದಗಿಸಿ ಸಾರಾಂಶದಲ್ಲಿ ಸಂಘೀ ಅಜೆಂಡಾಗಳನ್ನೇ ಪಾಲಿಸುವ ಮತ್ತೊಂದು ವಿರೋಧ ಪಕ್ಷವೇ? ಅಥವಾ ಆಳದಲ್ಲಿ ಅದೂ ಕೂಡ ಬಿಜೆಪಿಯಂತೆ ಮತ್ತೊಂದು ಸಂಘೀ ಪಕ್ಷವೇ? ಎಂಬುದನ್ನು ಈ ದೇಶ ಮತ್ತೊಮ್ಮೆ ಮೋಸಹೋಗಬಾರದು ಎಂದು ಬಯಸುವ ಎಲ್ಲರೂ ವಿಶ್ಲೇಷಿಸಬೇಕಿದೆ.

ಇತ್ತೀಚೆಗೆ ದೆಹಲಿಯ ಜಹಾಂಗೀರ್ ಪುರಿಯಲ್ಲಿ ನಡೆದ ಗಲಭೆಯಲ್ಲಿ ಆಪ್ ತೆಗೆದುಕೊಂಡ ನಿಲುವು ಹಾಗೂ ಕಳೆದ ಕೆಲವು ವರ್ಷಗಳಿಂದ ದೆಹಲಿಯ ಆಪ್ ಸರ್ಕಾರದ ಮತ್ತು ಆಪ್ ಪಕ್ಷದ ಕಾರ್ಯಕ್ರಮಗಳು, ಅದರ ಮೌನಗಳು ಮತ್ತು  ಅದರ ಮಾತುಗಳು, ನಡೆ ಮತ್ತು ನುಡಿಗಳು..
.. ಈ ದೇಶದ ಸೆಕ್ಯುಲಾರ್ ಮತ್ತು ಪ್ರಜಾಸತ್ತಾತ್ಮಕ ರಚನೆಯನ್ನೇ ಬದಲಿಸುವಂಥಾ ಕಾಯಿದೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಾಗ ಆಪ್ ತೆಗೆದುಕೊಂಡ ನಿಲುವುಗಳು, ಕಾರ್ಪೊರೇಟ್ ಭ್ರಷ್ಟಾಚಾರದ ಬಗ್ಗೆ ಅದರ ನಿಗೂಢ ಮೌನಗಳು..ಇವೇ ಇತ್ಯಾದಿಗಳು ಇಂಥಾ ವಿಶ್ಲೇಷಣೆಯ ಅಗತ್ಯಗಳನ್ನು ಜರೂರು ಮಾಡಿವೆ.

ಎಡ-ಬಲವಿಲ್ಲದ, ಕೆಲಸವೇ ಸಿದ್ಧಾಂತವೆನ್ನುವ ಮೋಹಕ ಅವಕಾಶವಾದ
ಆಪ್ ಪಕ್ಷದ ಸೋಷಿಯಲ್ ಮೀಡಿಯಾ ಮುಕ್ಯಸ್ಥರಾದ ಅಂಕಿತ್ ಲಾಲ್ ಅವರು ಇತ್ತೀಚಿನ ಸಂದರ್ಶನದಲ್ಲಿ ಆಪ್ ನ ತಾತ್ವಿಕ(?) ಗ್ರಹಿಕೆಯನ್ನು ಮುಂದಿಟ್ಟಿದ್ದಾರೆ.
ಅದರ ಪ್ರಕಾರ  ಆಪ್ ಪಕ್ಷ ಯಾವುದೇ ಸಿದ್ಧಾಂತಕ್ಕೆ ಬದ್ಧವಲ್ಲ. ಜನರಿಗೆ ಬೇಕಾಗುವ ಪರಿಹಾರಗಳು ಎಡದಲ್ಲಿದ್ದರೆ ಎಡದ ಕಡೆ , ಬಲದಲ್ಲಿದ್ದರೆ ಬಲದ ಕಡೆ ವಾಲುತ್ತೇವೆ ಎಂದು ಆಪ್ ಸ್ಪಷ್ಟವಾಗಿ ಹೇಳುತ್ತದೆ. ಪಕ್ಷದ ಮುಖ್ಯಸ್ಥ ಕೇಜ್ರಿವಾಲರ ಪ್ರಕಾರ ಕೆಲಸವೇ ಅವರ ಸಿದ್ಧಾಂತ. ಸಾಮಾನ್ಯ ಜನರ ಪರವಾಗಿ ಕೆಲಸ ಮಾಡಲು ಅವರು ಏನು ಬೇಕಾದರೂ ಮಾಡಬಲ್ಲರು.
ಹಾಗಿದ್ದರೆ ಈ ಜನಸಾಮಾನ್ಯರು ಯಾರು? ಆಪ್ ಪಕ್ಷದ ಕರ್ನಾಟಕದ ಅಧ್ಯಕ್ಷ ಪ್ರಿಥ್ವಿ  ರೆಡ್ಡಿಯವರ ಆಮ್ ಆದ್ಮಿ- ಜನಸಾಮಾನ್ಯ- ಎಂದರೆ ಬಡವ ಎಂದಲ್ಲ. ಹೆಚ್ಚೆಂದರೆ ಆಮ್ ಆದ್ಮಿ ಎಂದರೆ ಸರ್ಕಾರದಲ್ಲಿ ಇರದಿರುವರು ಎಂಬರ್ಥ. ಹೀಗಾಗಿ ಆಪ್ ಪಕ್ಷ  ತಮ್ಮಲ್ಲಿ ಬಡವರು, ಶ್ರೀಮಂತರು, ದಲಿತರು, ಬ್ರಾಹ್ಮಣರು, ಹಿಂದೂ-ಮುಸ್ಲಿಮರು, ಗಂಡು-ಹೆಣ್ಣು ಎಲ್ಲರೂ ಇದ್ದಾರೆ ಎಂದು ಆಪ್ ಸಮರ್ಥಿಸಿಕೊಳ್ಳುತ್ತದೆ.
►►https://thewire.in/politics/aap-ideology-caa-shaheen-bagh-ankit-lal

ಆದರೆ ಭಾರತದ ಆಮ್ ಆದ್ಮಿಯ  - ಜನ ಸಾಮಾನ್ಯರ- ಸಾಮಾಜಿಕ ಆರ್ಥಿಕ ಬದುಕು ಸರ್ಕಾರದಿಂದ ಮಾತ್ರವಲ್ಲದೆ. ಸರ್ಕಾರದಿಂದ ಬೆಂಬಲಿತವಾದ ಇತರ ಆರ್ಥಿಕ-ಸಾಮಾಜಿಕ ಸಂಸ್ಥೆಗಳಿಂದ ಶೋಷಣೆಗೆ ಒಳಗಾಗುತ್ತವೆ.

 ಸಾಮಾಜಿಕ ಸಂಸ್ಥೆಯಾಗಿರುವ ಜಾತಿ ಸಾಮಾಜಿಕ ಅಧಿಕಾರವನ್ನು ದಲಿತ-ಬ್ರಾಹ್ಮಣರ ನಡುವೆ ಅಸಮಾನವಾಗಿ ಹಂಚುತ್ತದೆ. ಆದ್ದರಿಂದಲೇ ಸಾಮಾಜಿಕ ಪ್ರಜಾತಂತ್ರ ಬೇಕೆಂದರೆ ಜಾತಿ ವ್ಯವಸ್ಥೆ ನಾಶವಾಗಬೇಕು ಎಂಬ ಸಿದ್ಧಾಂತವನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದರು.

 
ಹಾಗೆಯೇ ಕುಟುಂಬ ಮತ್ತು ಸಮಾಜದೊಳಗೆ ಗಂಡು-ಹೆಣ್ಣಿನ ನಡುವೆ ಅಸಮಾನತೆ ಇದೆ. ಅದರ ಹುಟ್ಟು ಇರುವುದು ಪುರುಷಾಧಿಪತ್ಯದಲ್ಲಿ ಹೀಗಾಗಿ ಆಮ್ ಔರತ್ (ಹೆಂಗಸು) ಆಮ್ ಆದ್ಮಿ (ಪುರುಷ)ಯಿಂದಲೇ ಶೋಷಣೆಗೊಳಗಾಗುವಾಗ ಪುರುಷಾಧಿಪತ್ಯವನ್ನು ನಾಶ ಮಾಡುವ ಸಿದ್ಧಾಂತವನ್ನು ಹೊಂದಿದ್ದರೆ ಮಾತ್ರ ಅದು ನಿಜವಾದ ಪರ್ಯಾಯ.

 
 ಆರ್ಥಿಕ ವ್ಯವಸ್ಥೆಯಲ್ಲಿ ಆಸ್ತಿ ಮತ್ತು ಸಂಪತ್ತು ಒಂದು ಕಡೆ ಕೇಂದ್ರೀಕರಣಗೊಳ್ಳದ ಸಿದ್ಧಾಂತವಿದ್ದರೆ ಮಾತ್ರ ಆಮ್ ಆದ್ಮಿಗಳ ನಡುವೆ ಆರ್ಥಿಕ ಅಂತರ ಕಡಿಮೆಯಾಗಬಲ್ಲದು. ಸ್ವಾತಂತ್ರ್ಯಾನಂತರದಲ್ಲಿ ಕೇಂದ್ರ ದ ಸರ್ವಾಧಿಕಾರ ರಾಜ್ಯಗಳ ಮೇಲೆ ಹೆಚ್ಚುತ್ತಿದ್ದು, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದಿ ಹೇರಿಕೆ ಇತ್ಯಾದಿಗಳು ಇನ್ನೂ ಹೆಚ್ಚುತ್ತಿವೆ. ಇದು ನಿಲ್ಲಬೇಕೆಂದರೂ ಭಾರತದ ಒಕ್ಕೂಟತತ್ವದ ಬಗ್ಗೆ ಗಟ್ಟಿಯಾದ ಸೈದ್ಧಾಂತಿಕ ನಿಲುವು ಬೇಕಿರುತ್ತದೆ.

ಹೀಗೆಯೇ ಆಮ್ ಆದ್ಮಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಾನುಯಾಯಿಯೂ ಆಗಿರುತ್ತಾರೆ. ಅಲ್ಲಿ ಧಾರ್ಮಿಕ ತಾರತಮ್ಯಕ್ಕೆ ಅವಕಾಶಕೊಡದಂಥ ಬಲವಾದ ಸೆಕ್ಯುಲಾರ್ ಸಿದ್ಧಾಂತವಿಲ್ಲದೆ ಪರ್ಯಾಯ ಸಾಧ್ಯವೇ ಇಲ್ಲ.  

ಭಾರತೀಯ ಸಮಾಜದೊಳಗಿನ ಈ ಮೂಲಭೂತ ವೈರುಧ್ಯಗಳನ್ನು  ಒಂದೆರಡು ಒಳ್ಳೆಯ ಸರ್ಕಾರೀ ಶಾಲೆಗಳು ಮತ್ತು ಒಂದೆರಡು ಒಳ್ಳೆಯ ಸರ್ಕಾರಿ ಆಸ್ಪತ್ರೆಗಳನ್ನು ಕಟ್ಟುವುದರಿಂದ ಬಗೆಹರಿಸಲು ಸಾಧ್ಯವಿಲ್ಲ. ಸಮಾಜದೊಳಗೆ ಇರುವ ಈ ವೈರುಧ್ಯಗಳನ್ನು ಬಗೆಹರಿಸಲು ಬಲವಾದ ಮತ್ತು ಅತ್ಯಂತ ಪ್ರಾಮಾಣಿಕವಾದ ತಾತ್ವಿಕ ನೆಲಗಟ್ಟು ಇರಬೇಕಾಗುತ್ತದೆ.

 
ಹಾಗೆ ನೋಡಿದರೆ ಭಾರತೀಯ ಸಮಾಜದಲ್ಲಿರುವ ಈ  ಆರ್ಥಿಕ-ಸಾಮಾಜಿಕ  ವೈರುಧ್ಯಗಳನ್ನು ಬಗೆಹರಿಸಲು  ಸಂವಿಧಾನದ ಮುನ್ನುಡಿ, ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನಾ ತತ್ವಗಳಲ್ಲಿ ಸಮಾಜವಾದಿ ಮತ್ತು ಪ್ರಜಾತಾಂತ್ರಿಕ ಸಿದ್ಧಾಂತದ ಹಿನ್ನೆಲಯ ಪರಿಹಾರಗಳನ್ನೂ ಒದಗಿಸಲಾಗಿದೆ. ಹಾಗೂ ಧಾರ್ಮಿಕ ತಾರತಮ್ಯಗಳನ್ನು ನಿವಾರಿಸಲು ಸೆಕ್ಯುಲಾರ್ ಸಿದ್ಧಾಂತದ ಪರಿಹಾರಗಳನ್ನು ಒದಗಿಸಲಾಗಿದೆ. 

ಅವನ್ನು ರಾಜಕೀಯ ಪರಿಭಾಷೆಯಲ್ಲಿ ಎಡವಾದಿ ಪರಿಹಾರಗಳೆಂದೇ ಕರೆಯುತ್ತಾರೆ. ಅಂಥ ಪರಿಹಾರಗಳು ಬಲಪಂಥೀಯತೆಯಲ್ಲಿ ಇರುವುದಿಲ್ಲ. ಆದ್ದರಿಂದಲೇ ಅದನ್ನು ಬಲಪಂಥ ಎಂದು ಕರೆಯುತ್ತಾರೆ.  

ಆದರೆ 1991ರ ನಂತರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು,  ಅದರಲ್ಲೂ 2014ರ ನಂತರದಲ್ಲಿ ಮೋದಿ ನೇತೃತ್ವದ ಸರ್ಕಾರ ಸಂವಿಧಾನ ಸಿದ್ಧಾಂತಕ್ಕೆ  ವಿರುದ್ಧವಾಗಿ ಬಲವಾದಿ ಮತ್ತು  ಹಿಂದೂತ್ವವಾದಿ ಸಿದ್ಧಾಂತವನ್ನು ಅನುಷ್ಠಾನಗೊಳಿಸುತ್ತಿದೆ.

 
ಹೀಗಿರುವಾಗ ಒಂದು ರಾಜಕೀಯ ಪಕ್ಷ ತನ್ನದು ಕೇವಲ ಕೆಲಸದ ಸಿದ್ಧಾಂತ ಎಂದು ಹೇಳುವುದು ಕೇವಲ ರಮ್ಯ ಅವಕಾಶವಾದ.

ಅಷ್ಟು ಮಾತ್ರವಲ, ಬಲದಲ್ಲಿ ಪರಿಹಾರವಿದ್ದರೆ ಅಲ್ಲಿಂದಲೂ ತೆಗೆದುಕೊಳ್ಳಲು ಸಿದ್ಧ ಎಂದು ಘೋಷಿಸುವುದು ಸಂವಿಧಾನ ವಿರೋಧಿ. ಏಕೆಂದರೆ ಬಲವೆಂದರೆ ಪ್ರಬಲರ ಪರವಾಗಿರುವುದು ಎಂದರ್ಥ. ಪ್ರಬಲ ಧರ್ಮೀಯರ ಪರ, ಪ್ರಬಲ ವರ್ಗದ ಪರ, ಪ್ರಬಲ ಜಾತಿಯ ಪರ, ಪುರುಷಾಧಿಪತ್ಯದ ಪರವಾಗಿರುವುದೇ ಎಂದರ್ಥ.
ವಾಸ್ತವದಲ್ಲಿ ಆಪ್ ಪಕ್ಷದ ನಿಲುವುಗಳು ಮತ್ತು ಕಾರ್ಯಕ್ರಮಗಳನ್ನು ನೋಡಿದರೆ ಆಮ್ ಆದ್ಮಿಯ ಹೆಸರಿನಲ್ಲಿ ಹೀಗೆ ಸಮಾಜದಲ್ಲಿರುವ ಪ್ರಬಲ ಧರ್ಮೀಯರ, ಪ್ರಬಲ ವರ್ಗದವರ ಹಾಗೂ ಪ್ರಬಲ ಜಾತಿಗಳ ಅಧಿಕಾರವನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಗಟ್ಟಿಗೊಳಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.
 

ಬಿಜೆಪಿಯನ್ನು ವಿರೋಧಿಸುತ್ತಲೇ ಹಿಂದೂತ್ವ ಅಜೆಂಡಾವನ್ನು ಸಮರ್ಥಿಸುವ ಆಪ್ ನಿಲುವುಗಳು

ಉದಾಹರಣೆಗೆ ಇತ್ತೀಚಿನ ಜಹಾಂಗೀರ್ ಪುರಿಯ ಗಲಭೆಯನ್ನೇ ಗಮನಿಸೋಣ.
ಈ ವರ್ಷದ ಶ್ರೀರಾಮನವಮಿ ಮತ್ತು ಹನುಮ ಜಯಂತಿಯಂದು ಸಂಘೀ ಪಡೆಗಳು ದೆಹಲಿಯನ್ನು ಒಳಗೊಂಡಂತೆ ದೇಶದ ಹಲವಾರು ರಾಜ್ಯಗಳಲ್ಲಿ ರಾಮ ಹಾಗೂ ಹನುಮಂತನ ಹೆಸರಿನಲ್ಲಿ ತಲ್ವಾರ್, ಬಂದೂಕುಗಳನ್ನು ಪ್ರದರ್ಶಿಸುತ್ತಾ ಮಸೀದಿಯ ಮುಂದೆ ಮೆರವಣಿಗೆ ಮಾಡುತ್ತಾ, ಮೈಕ್ ನಲ್ಲಿ ಜೋರುಧ್ವನಿಯಲ್ಲಿ ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ಹೀಯಳಿಸುತ್ತಾ ಮುಸ್ಲಿಮರನ್ನು ಪ್ರಚೋದಿಸಿದರು, ಅವಮಾನಿಸಿದರು. ಹಲವು ಮಸೀದಿಗಳ ಮೇಲೆ ಭಗವಾಧ್ವಜವನ್ನು ಹಾರಿಸಿದರು.

 
ಆದರೂ ಬಹುಪಾಲು ಕಡೆ ಮುಸ್ಲಿಮರು ಪ್ರಚೋದನೆಗೆ ಬಲಿಯಾಗಲಿಲ್ಲ. ಕೆಲವು ಕಡೆ ಈ ಅವಮಾನವನ್ನು ಸಹಿಸದೆ ಮುಸ್ಲಿಮರು ಪ್ರಚೋದನೆಯೆಂಬ ಕ್ರಿಯೆಗೆ  ಪ್ರತಿಕ್ರಿಯೆ ಯಾಗಿ ಪ್ರತಿಭಟಿಸಿದರು. ಕಲ್ಲುತೂರಾಟಗಳು ನಡೆದವು.
ಹಾಗೆಯೇ ಜಹಾಂಗೀರ್ ಪುರದಲ್ಲೂ ಸಂಘೀಗಳು ಮೂರು ಬಾರಿ ಮಸೀದಿಯ ಮುಂದೆ ತಲ್ವಾರ್ಗಳನ್ನು ಪ್ರದರ್ಶಿಸುತ್ತಾ ಮೆರವಣಿಗೆಮಾಡಿ ಮಸೀದಿಯ ಮೇಲೆ ಭಗವಾಧ್ವಜ ಹಾರಿಸಿದರು. ಆದರೆ ಮೂರನೇ ಮೆರವಣಿಗೆಯ ವೇಳೆಗೆ ಸಹನೆ ಕಳೆದುಕೊಂಡ ಮುಸ್ಲಿಮರು ಮಸೀದಿಯ ಮೇಲೆ ಭಗವಾಧ್ವಜವನ್ನು ಹಾರಿಸುವುದನ್ನು ಪ್ರತಿಭಟಿಸಿದರು.

ಸಂಘೀಗಳು ಮಾಡುವ ದೌರ್ಜನ್ಯದ ವಿರುದ್ಧ ಮುಸ್ಲಿಮರು ಪ್ರತಿಭಟನೆಯನ್ನು ಕೂಡಾ ಮಾಡದಂತೆ ಪಾಠ ಕಲಿಸುವ ಉದ್ಡೆಶದಿಂದ ಬಿಜೆಪಿಯ ಆಡಳಿತವಿರುವ ಉತ್ತರ ದೆಹಲಿ ನಗರ ಪಾಲಿಕೆಯು ಜಹಾಂಗೀರ್ ಪುರಕ್ಕೆ ಬುಲ್ಡೋಜರನ್ನು ಕಳಿಸಿ ಮುಸ್ಲಿಮರ ಅಂಗಡಿಗಳನ್ನು ಧ್ವಂಸ ಮಾಡಿತು. ಮಸೀದಿಯ ಗೇಟನ್ನೂ ಒಡೆದುಹಾಕಿತು.

 
ಈ ಅನ್ಯಾಯದ ವಿರುದ್ಧ ಕಪಿಲ್ ಸಿಬಲ್ ರಂಥ ಕಾಂಗ್ರೆಸ್ ವಕೀಲರು ಕೂಡಲೇ ಸುಪ್ರೀಂ ಕೋರ್ಟಿನ ಮೊರೆ ಹೋಗಿ ತಡೆಯಾಜ್ಞೆ ತಂದರು. ಕೋರ್ಟ್ ಆದೇಶವಿದ್ದರೂ ಧ್ವಂಸ ಕಾರ್ಯ ಮುಂದುವರೆದಿದ್ದಾಗ ಬೃಂದಾ ಕಾರಟ್ ರಂಥ ಸಿಪಿಎಂ ನಾಯಕಿ ಕೂಡಲೇ ಸ್ಥಳಕ್ಕೆ ತೆರಳಿ ಬುಲ್ಡೊಝರ್ ಎದುರು ನಿಂತು ಕೋರ್ಟ್ ಆದೇಶ ತೋರಿಸಿ ಅನ್ಯಾಯವನ್ನು ನಿಲ್ಲಿಸಿದರು.

 
ಆದರೆ ಇದೇ ಜನರಿಂದ ಓಟು ಪಡೆದುಕೊಂಡು ಸರ್ಕಾರ ಮಾಡಿರುವ ಆಪ್ ಸರ್ಕಾರ ಮತ್ತು ಆಪ್ ಪಕ್ಷ  ಮಾಡಿದ್ದೇನು?

 
ಮೊದಲನೆಯದಾಗಿ ತನ್ನ ಬಳಿ ಪೊಲೀಸ್ ಅಧಿಕಾರವಿಲ್ಲದಿರುವುದರಿಂದ ಏನೂ ಮಾಡಲು ಆಗುವುದಿಲ್ಲ ಎಂದು ತಮ್ಮ ಮೌನವನ್ನು ಸಮರ್ಥನೆ ಮಾಡಿಕೊಂಡರು.

 
ಆ ನಂತರ ನಾವು ಅಲ್ಲಿಗೆ ಹೋಗಿದ್ದರೆ ತಾನೇ ಏನಾಗುತ್ತಿತ್ತು? ತಮ್ಮನ್ನು ಮುಸ್ಲಿಮ್ ಪರ ಎಂದು ಪ್ರಚಾರ ಮಾಡಲು ಬಿಜೆಪಿಗೆ ಮತ್ತೊಂದು ಅವಕಾಶವನ್ನು ಕೊಟ್ಟಂತೆ ಆಗುತ್ತಿತ್ತು. ಅದರಿಂದ ಬಿಜೆಪಿಗೇ ಅನುಕೂಲ. ಆದ್ದರಿಂದ ಹಿಂದೂ ಬಹುಸಂಖ್ಯಾತ ಸಮುದಾಯ ನಮ್ಮಿಂದ ದೂರವಾಗುವಂಥ ಯಾವುದೇ ಕೆಲಸವನ್ನು ನಾವು ಮಾಡಬಾರದೆನ್ನುವುದೇ ನಮ್ಮ ನೀತಿಯೆಂದು ಆಮ್ ಆದ್ಮಿಯ ವಕ್ತಾರರು ಘೋಷಿಸಿದರು.
ಮುಸ್ಲಿಮರೂ ಕೂಡಾ ಇಂಥ ವಿಷಯಗಳಲ್ಲಿ ಪ್ರತಿಭಟನೆ ಇತ್ಯಾದಿಗಳನ್ನು ಮಾಡದೆ ಶಿಕ್ಷಣ, ವ್ಯಾಪಾರ, ಬದುಕು ಮತ್ತು ಉದ್ಯೋಗಗಳತ್ತ ಗಮನಹರಿಸುವುದು ವಾಸಿ ಎಂದು ಪುಕ್ಕಟೆ ವಿಧಿವಾದಿ ಸಲಹೆ ನೀಡಿದರು.

►►https://www.telegraphindia.com/india/2020-to-2022-aap-government-plays-riot-bystander/cid/1861399

ಇದು ಈಗ ಮಾತ್ರವಲ್ಲ. 2020ರಲ್ಲಿ ದೆಹಲಿಯಲ್ಲಿ ಬಿಜೆಪಿ ಪಕ್ಷ ಸಿಎಎ ವಿರೋಧಿ ಹೋರಾಟಗಾರರ ಮೇಲೆ ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಮೇಲೆ ಹತ್ಯಕಾಂಡ ನಡೆಸಿದಾಗಲೂ ಆಪ್ ಪಕ್ಷ ಇದೇ ಅವಕಾಶವಾದೀ  ನಿಲುವನ್ನು ತೆಗೆದುಕೊಂಡು ಮುಸ್ಲಿಮರನ್ನು ಕೈಬಿಟ್ಟಿತ್ತು.

ಇಷ್ಟೇ ಆಗಿದ್ದರೂ ಅರ್ಥ ಮಾಡಿಕೊಳ್ಳಬಹುದಿತ್ತು. ಆದರೆ  ಇತ್ತೀಚಿನ ದಿನಗಳಲ್ಲಿ ಆಪ್ ಪಕ್ಷದ ಇಂಥಾ ರಾಜಕೀಯ ಅವಕಾಶವಾದೀ ನಿಲುವುಗಳು ನಿಧಾನವಾಗಿ ಸಕ್ರಿಯ ಹಿಂದೂತ್ವವಾದಿ ಸಮರ್ಥನೆಗಳಾಗಿ ಪರಿವರ್ತನೆಯಾಗುತ್ತಿವೆ. ಆ ಮೂಲಕ  ಬಿಜೆಪಿಯ ನೆರೇಟೆವಿಗಳನ್ನು ಸಮರ್ಥಿಸುತ್ತಾ ಸಂಘೀ ಅಜೆಂಡಾಗಳನ್ನು ಸಮಾಜದಲ್ಲಿ ಗಟ್ಟಿಗೊಳಿಸುತ್ತಾ ಬಿಜೆಪಿಯ ಬಿ ಟೀಮ್ ಎಂಬ ಆಪಾದನೆಗೆ ಪುರಾವೆಗಳನ್ನು ಒದಗಿಸುತ್ತಿದೆ.

 
ಹಿಂದೂತ್ವ ಅಜೆಂಡಾಗಳ ಮೌನ ಸಮರ್ಥನೆಯಿಂದ ಸಕ್ರಿಯ ಪ್ರತಿಪಾದನೆಯತ್ತ!

ಇತ್ತೀಚಿನ ಜಹಾಂಗೀರ್ ಪುರ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ ಕೇಜ್ರಿವಾಲರು ಗಲಭೆಗೆ ಮುಸ್ಲಿಮರು ನಡೆಸಿದ ಕಲ್ಲು ತೂರಾಟವನ್ನು ಹೊಣೆ ಮಾಡಿದರೇ ವಿನಾ ಹಿಂದೂತ್ವವಾದಿಗಳ ತಲ್ವಾರ್ ಮೆರವಣಿಗೆಯನ್ನಲ್ಲ.
ಅಷ್ಟು ಮಾತ್ರವಲ್ಲ. ಬಿಜೆಪಿ ಮತ್ತು ಸಂಘ ಪರಿವಾರ ತಾವು ಮಾಡಿದ ಅನಾಚಾರವನ್ನು ಸಮರ್ಥಿಸಿಕೊಳ್ಳಲು ಜಹಾಂಗೀರ್ ಪುರದಲ್ಲಿ ಇರುವುದು ಬರ್ಮಾದ ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶೀ ಮುಸ್ಲಿಮರು. ಅವರಿಂದಲೇ ಗಲಭೆಯಾಗುತ್ತಿದೆ ಮತ್ತು ಅವರು ಅಲ್ಲಿರಲು ಅವಕಾಶ ಮಾಡಿಕೊಟ್ಟಿರುವುದು ಆಪ್ ಪಕ್ಷ ಎಂಬ ಸುಳ್ಳು ಕಥನವನ್ನು ಹರಿಬಿಟ್ಟರು.
 

ಇದಕ್ಕೆ ಪ್ರತಿಯಾಗಿ ಆಪ್ ನ ಮುಖಂಡರಾದ ಆತಿಶ್ ಮತ್ತು ಸಿಸೋಡಿಯಾ ಅವರುಗಳು ಕೂಡಾ ಗಲಭೆಯನ್ನು ಮಾಡಲೆಂದೇ ಬಿಜೆಪಿ ಪಕ್ಷ ಬಾಂಗ್ಲಾ ಮಾತು ರೋಹಿಂಗ್ಯಾ ಮುಸ್ಲಿಮರನ್ನು ಅಲ್ಲಿ ನೆಲೆಗೊಳಿಸಿದೆ ಎಂದು ಹೇಳಿಕೆಯಿತ್ತು ಪ್ರತಿಪ್ರಚಾರಕ್ಕಿಳಿದರು. 

ಸಾರಾಂಶದಲ್ಲಿ ಜಹಾಂಗೀರು ಪುರದಲ್ಲಿ ಗಲಭೆಗೆ  ಕಾರಣರಾದವರು ಹಿಂದೂಗಳಲ್ಲ ಮುಸ್ಲಿಮರು ಮತ್ತು ಅವರು ರೋಹಿಂಗ್ಯಾ ಹಾಗೂ ಬಾಂಗ್ಲಾ ಮುಸ್ಲಿಮರೆಂಬ ಸಂಘೀಗಳ  ಸುಳ್ಳು ಕಥನವನ್ನು ಆಪ್ ಕೂಡಾ ಧ್ರುಢೀಕರಿಸಿತು.
ಮತ್ತು ಅಸಲೀ ದಂಗೆಕೋರರಾದ ಸಂಘೀಗಳನ್ನು ರಕ್ಷಿಸಿತು.

►►https://twitter.com/AtishiAAP/status/1516689497018093569

ಇದಕ್ಕೆ ಸ್ವಲ್ಪ ಮುಂಚೆ ವೃತ್ತಿ ವೈಷಮ್ಯವೊಂದರಲ್ಲಿ ಹತನಾದ ರಿಂಕುಶರ್ಮಾ ಎಂಬ ಸಂಘಿ ಯ ಹತ್ಯೆಯನ್ನು ಮಾಡಿದ್ದು ಮುಸ್ಲಿಂ ಹಂತಕರೆಂದೂ ಸುಳ್ಳು ಪ್ರಚಾರವನ್ನು ಮಾಡಿ, ಆದ್ದರಿಂದ ಹಿಂದುಗಳನ್ನು ಆಪ್ ಪಕ್ಷ ಮಾತ್ರ ರಕ್ಷಿಸಬಲ್ಲದು ಎಂದು ಪ್ರಚಾರ ಮಾಡಿತ್ತು.

►►https://scroll.in/latest/986932/mangolpuri-killing-vhp-calls-for-hanging-of-arrested-aap-links-incident-to-jai-shri-ram-chant

ಎರಡು ವರ್ಷಗಳ ಮುಂದೆ ಸಿಎಎ ವಿರುದ್ಧ ದೆಹಲಿಯ ಶಹೀನ್‌ಭಗ್ ನಲ್ಲಿ ಮುಸ್ಲಿಂ ಮಹಿಳೆಯರು ಧೀರೋದ್ಧಾತ ಹೋರಾಟ ನಡೆಸುತ್ತಿದ್ದಾಗ ಆಪ್ ಪಕ್ಷದವರು ಅಲ್ಲಿಗೆ ಒಮ್ಮೆಯೂ ಭೇಟಿ ನೀಡಲಿಲ್ಲ. ಬದಲಿಗೆ ಶಹೀನ್‌ಭಾಗ್ ಹೋರಾಟ ಮುಸ್ಲಿಂ ಉಗ್ರಗಾಮಿಗಳ ಬೆಂಬಲದೊಂದಿಗೆ ನಡೆಯುತ್ತಿರುವ ಹೋರಾಟ ಎಂದು ಬಿಜೆಪಿ ಪ್ರಚಾರ ಮಾಡಲು ಶುರು ಮಾಡಿದಾಗ ಆಪ್ ಅದನ್ನು ಖಂಡಿಸುವುದಿರಲಿ, ತಮ್ಮ ಬಳಿ ಪೊಲೀಸ್ ಅಧಿಕಾರವಿದ್ದಿದ್ದರೆ ಎರಡೇ ಗಂಟೆಯಲ್ಲಿ ಶಹೀನ್‌ಭಾಗ್ ಅನ್ನು ತೆರೆವುಗೊಳಿಸುತ್ತಿದ್ದೆವು ಎಂದು ಹೇಳಿದ್ದರು.

 ಅರ್ಥಾತ್ ಶಹೀನ್ ಭಾಗ್ ಹೋರಾಟ ಮುಸ್ಲಿಂ ಉಗ್ರಗಾಮಿಗಳ ಬೆಂಬಲದ ಹೋರಾಟ ಎಂಬ ಬಿಜೆಪಿ ಕಥನವನ್ನು ಆಪ್ ಪಕ್ಷವೂ ಗಟ್ಟಿಗೊಳಿಸಿತು.

►►https://www.news18.com/news/politics/aap-alleges-whole-shaheen-bagh-protest-was-scripted-by-the-bjp-for-electoral-gains-party-hits-back-2795563.html

ಇವೆಲ್ಲವೂ ಒಂದು ಕಡೆಯಾದರೆ ಕಾಶ್ಮೀರದ ರಾಜ್ಯಸ್ಥಾನಮಾನವನ್ನು ಕಸಿದುಕೊಂಡು, ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಬಿಜೆಪಿ ಸರ್ಕಾರದ ಅತ್ಯಂತ ಸರ್ವಾಧಿಕಾರಿ ಮತ್ತು ಹಿಂದೂತ್ವವಾದಿ ಮಸೂದೆಗೆ ರಾಜ್ಯಸಭೆಯಲ್ಲಿ ಬೆಂಬಲ ನೀಡಿ ಹಿಂದೂತ್ವವಾದಿ ಅಜೆಂಡಾ ಒಂದು ಈ ದೇಶದಲ್ಲಿ ಜಾರಿಯಾಗುವಂತೆ ಮಾಡಿದ್ದೇ ಆಪ್ ಪಕ್ಷವಾಗಿತ್ತು.

ಬಿಜೆಪಿಗಿಂತಲೂ ಹಿಂದು ಪಕ್ಷವಾಗಲು ಪೈಪೋಟಿ

ಇವೆಲ್ಲದರ ಜೊತೆಗೆ ಸೆಕ್ಯುಲಾರ್ ತತ್ವವನ್ನು  ಕೈಬಿಟ್ಟು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹಿಂದೂ ಹಬ್ಬಗಳನ್ನು ಮಾತ್ರ ಸರ್ಕಾರೀ ಹಬ್ಬಗಳನ್ನಾಗಿ ಮಾಡುವಂಥ ಹಲವಾರು ಯೋಜನೆಗಳನ್ನು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮಾಡುತ್ತಿದೆ. ಒಂದು ಸಾಂವಿಧಾನವಾದಿ ಪರ್ಯಾಯ ಪಕ್ಷ ಅದನ್ನು ವಿರೋಧಿಸಿ ಸರ್ಕಾರವು ಸೆಕ್ಯುಲಾರ್ ಧರ್ಮವನ್ನು ಕಾಪಾಡಿಕೊಳ್ಳಲು ಒತ್ತಾಯಿಸಬೇಕು. 

ಆದರೆ ಆಪ್ ಪಕ್ಷ ಬಿಜೆಪಿಗಿಂತ ತಾನೇ ಹಿಂದೂತ್ವವಾದಿ ಎಂದು ಮನವರಿಕೆ ಮಾಡಿಕೊಡಲು ಪೈಪೋಟಿ ನಡೆಸಿದೆ.

 
ಉದಾಹರಣೆಗೆ ಜಹಾಂಗೀರ್‌ಪುರದಲ್ಲಿ ಬುಲ್ಡೋಜರುಗಳು ಮಸೀದಿಯನ್ನು ಕೆಡವಿದಾಗಲೂ ಕನಿಷ್ಟ ಭೇಟಿ ಕೊಡದ ಆಪ್ ಮುಖಂಡರು ಮರುದಿನ ದೆಹಲಿಯ ಮತ್ತೊಂದು ಭಾಗದಲ್ಲಿ ಪುರಾತನ ನೀಲಕಂಠ ದೇವಸ್ಥಾನ ಕೆಡವಲು ಕೇಂದ್ರ ಸರ್ಕಾರ ನೋಟೀಸು ನೀಡಿದೆ ಎಂದು ಸ್ಥಳೀಯರನ್ನು ಮುಂದಿಟ್ಟುಕೊಂಡು ದೇವಸ್ಥಾನ ಉಳಿಸಲು ಮುಂದಾಗಿತ್ತು.

 
ಕಳೆದ ಡಿಸೆಂಬರ್ ನಲ್ಲಿ ಉತ್ತರ ಪ್ರದೇಶದ ಚುನಾವಣೆ ಪ್ರಚಾರವನ್ನು ಆಪ್ ಪಕ್ಷ ಪ್ರಾರಂಭಿಸಿದ್ದೇ ಕೇಂಜ್ರಿವಾಲರು ಅಯೋಧ್ಯೆಯಲ್ಲಿ ಬಾಬ್ರಿಮಸೀದಿಯ ಅವಶೇಷಗಳ ಮೇಲೆ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಭೇಟಿ ಕೊಟ್ಟ ನಂತರ. ರಾಮಲಲ್ಲಾನ ದರ್ಶನವನ್ನು ಮಾಡಿದ ನಂತರ ಕೇಜ್ರಿವಾಲರು ಇನ್ನುಮುಂದೆ ದೆಹಲಿಯ ವೃದ್ಧರು ಸರ್ಕಾರದರ ಖರ್ಚಿನಲ್ಲಿ ಅಯೋಧ್ಯೆ ಪ್ರವಾಸ ಮಾಡುವ ತೀರ್ಥಯಾತ್ರೆಯ ಕಾರ್ಯಕ್ರಮ ಪ್ರಾರಂಭಿಸುವುದಾಗಿ ಹೇಳಿದರು.
 

ದೆಹಲಿಯಲ್ಲಿ ಕೇಜ್ರಿವಾಲರ ಸರ್ಕಾರ ಪ್ರತಿ ಮಂಗಳವಾರ ಎಲ್ಲಾ ದೇವಸ್ಥಾನಗಳಲ್ಲಿ ಸುಂದರ ಕಂಡ ಪಠಣ  ಕಾರ್ಯಕ್ರಮವನ್ನು ಆಯೋಜಿಸಿರುವುದಲ್ಲದೇ ಹನುಮಾನ್ ಚಾಲೀಸ್ ಪಠಣವನ್ನು ಆಯೋಜಿಸಿದೆ.

 ಹಾಗೆಯೇ ದೀಪಾವಳಿಯ ದಿನದಂದು 6 ಕೋಟಿ ರೂಪಾಯಿಗಳ ಸರ್ಕಾರೀ ವೆಚ್ಚದಲ್ಲಿ ಆಪ್ ಸರ್ಕಾರವೇ ಲಕ್ಶ್ಮಿ ಪೂಜೆಯನ್ನು ಮಾಡಿಸುತ್ತದೆ. 

ಜೊತೆಗೆ ಆಪ್ ಸರ್ಕಾರವೇ ಸರ್ಕಾರೀ ವೆಚ್ಚದಲ್ಲಿ ಅಯೋಧ್ಯೆಯ ರಾಮಮಂದಿರ ದ ರೀತಿಯಲ್ಲೇ ಸೆಟ್ ಹಾಕಿಸಿ ರಾಮ್ ಲೀಲಾ ವನ್ನು ನಡೆಸುತ್ತದೆ.

ಆದರೆ ಇದೆ ರೀತಿ  ಈದ್, ಬಕ್ರೀದ್, ರಂಜಾನ್, ಕ್ರಿಸ್ಮಸ್ ನಂಥ ಹಿಂದುಯೇತರ ಹಬ್ಬಗಳಲ್ಲಿ ಸರ್ಕಾರೀ ಆಚರಣೆಗಳೇನೂ ಇರುವುದಿಲ್ಲ. 

ಅರ್ಥಾತ್ ಭಾರತದ ಅಧಿಕೃತ ಧರ್ಮವೆಂದರೆ ಹಿಂದೂ ಧರ್ಮ ಎಂದು ಪ್ರತಿಪಾದಿಸುವ ಸಂಘಪರಿವಾರದ ಅಜೆಂಡಾವನ್ನು ಆಪ್ ನ ಕೇಜ್ರಿವಾಲರ ಸರ್ಕಾರ ಬಿಜೆಪಿಯ ಯೋಗಿ ಆದಿತ್ಯನಾಥರಷ್ಟೆ ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿದ್ದಾರೆ!

ಇದಲ್ಲದೆ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಆಡಳಿತಾತ್ಮಕ ಭ್ರಷ್ಟಾಚಾರದ ಮೇಲೆ ಹಿಡಿತವಿಟ್ಟುಕೊಂಡಿದ್ದರೂ ಕಾರ್ಪೊರೇಟ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದನ್ನೇ ಕೈಬಿಟಿದ್ದಾರೆ.

 
ಹೀಗಾಗಿಯೇ ಹಿಂದೂ ಸಮಾಜಕ್ಕೂ, ಸಂಘೀ ಮನಸ್ಸತ್ವಕ್ಕೂ,  ಕಾರ್ಪೊರೇಟ್ ವರ್ಗಕ್ಕೂ ’ಆಪ್ಯಾ’ಯಮಾನವಾಗಿದ್ದಾರೆ!


ಇದು ಹೇಗೆ ಪರ್ಯಾಯವಾದೀತು?

 
ಈ ದೇಶ ಮತ್ತೊಮ್ಮೆ ಮೋಸ ಹೋಗದಿರಲಿ..

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಕೃಪೆ: ವಾರ್ತಾಭಾರತಿ.

Advertisement
Advertisement
Recent Posts
Advertisement