Advertisement

ಸುರತ್ಕಲ್ ಟೋಲ್ ಗೇಟ್ ಹೋರಾಟಗಾರರ ಮೇಲೆ ಪೋಲೀಸ್ ದೌರ್ಜನ್ಯ - ಸಿಪಿಐಎಂ ಖಂಡನೆ.

Advertisement

ಮಂಗಳೂರು ಪ್ರದೇಶದ ಸುರತ್ಕಲ್ ಟೋಲ್ ಗೇಟ್ ಮೂಲಕ ಕಳೆದ ಆರು ವರ್ಷಗಳಿಂದ ಅಕ್ರಮವಾಗಿ ಟೋಲ್ ಸಂಗ್ರಹಿಸುತ್ತಿರುವ ಅಕ್ರಮ ಟೋಲ್ ಗೇಟ್ ತೆರವು ಗೊಳಿಸುವಂತೆ ಮತ್ತು ತಕ್ಷಣದಿಂದಲೇ ಟೋಲ್ ಸಂಗ್ರಹ ನಿಲ್ಲಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಗಾರರ ಮೇಲೆ ಪೋಲೀಸ್ ದಬ್ಬಾಳಿಕೆ ನಡೆಸುತ್ತಿರುವ ರಾಜ್ಯ ಸರಕಾರದ ದುರ್ನಡೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ದ ಉಡುಪಿ ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ. ಈ ಕೂಡಲೇ ಬಂಧಿಸಿರುವ ಎಲ್ಲ ನಾಗರೀಕರನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತದೆ.

ಒಪ್ಪಂದವನ್ನು ಉಲ್ಲಂಘಿಸಿ ಸಾರ್ವಜನಿಕರಿಂದ ದಬ್ಬಾಳಿಕೆಯ ಮೂಲಕ ಟೋಲ್ ವಸೂಲಿ ಮಾಡುತ್ತಿರುವ ಲೂಟಿಯನ್ನು ತಡೆಯುವ ಬದಲು, ಲೂಟಿಯನ್ನು ತಡೆಯಲು ಯತ್ನಿಸಿದ ಸಾರ್ವಜನಿಕರ ಮೇಲೆ ಪೋಲೀಸ್ ದಬ್ಬಾಳಿಕೆಗೆ ಕ್ರಮವಹಿಸಿರುವ ಸರಕಾರದ ನಡೆಯು ನಾಚಿಕೆಗೇಡಿನದಾಗಿದ್ದು, ಅಕ್ಷಮ್ಯವಾಗಿದೆ ಮತ್ತು ಇದು ಸ್ಪಷ್ಟವಾಗಿ ಲೂಟಿಕೋರ ಕಂಪನಿಯ ಜೊತೆಗಿನ ಸರಕಾರದ ಶಾಮೀಲಾತಿಯನ್ನು ಎತ್ತಿ ತೋರಿಸುತ್ತಿದೆಯೆಂದು ಸಿಪಿಐಎಂ ಕುಟುಕಿದೆ.

ಹೆಜಮಾಡಿ ಟೋಲ್ ಗೇಟ್ ಮೂಲಕ ಸಂಗ್ರಹ ಆರಂಭಗೊಂಡ ಕೂಡಲೇ ಸುರತ್ಕಲ್ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕೆಂಬ ಒಪ್ಪಂದವಿದ್ದರೂ, 2016 ರಿಂದ ಇಲ್ಲಿಯವರೆಗೆ ಅಕ್ರಮವಾಗಿ ಸಾರ್ವಜನಿಕರಿಂದ ಸಾವಿರಾರು ಕೋಟಿ ಸಂಗ್ರಹಿಸಲು ಬಿಟ್ಟಿರುವುದೇ ಸರಕಾರದ ದೊಡ್ಡ ಅಪರಾದವಾಗಿದೆ. ಸದರಿ ಖಾಸಗಿ ಕಂಪನಿಯಿಂದ ಅಕ್ರಮವಾಗಿ ಸಂಗ್ರಹಿಸಲಾದ ಒಟ್ಟು ಮೊತ್ತವನ್ನು ರಾಜ್ಯ ಸರಕಾರ ಈ ಕೂಡಲೇ ವಶಪಡಿಸಿಕೊಳ್ಳಲು ಮತ್ತು ತಕ್ಷಣ ದಿಂದಲೇ ಸುರತ್ಕಲ್ ಗೇಟ್ ನಲ್ಲಿನ ಟೋಲ್ ಸಂಗ್ರಹವನ್ನು ನಿಲ್ಲಿಸಲು ಸಿಪಿಐಎಂ ಬಲವಾಗಿ ಒತ್ತಾಯಿಸುತ್ತದೆ.

ಇಷ್ಟೊಂದು ದೊಡ್ಡ ಪ್ರಮಾಣದ ಸಾರ್ವಜನಿಕ ದರೋಡೆ ನಡೆಯುತ್ತಿದ್ದರೂ, ಸದಾ ಭಾವಾನಾತ್ಮಕ ವಿಷಯಗಳನ್ನಿಟ್ಟುಕೊಂಡು ಜನತೆಯನ್ನು ಒಡೆದಾಳುವ ಸಂಕುಚಿತ ರಾಜಕಾರಣ ಮಾಡುವ ಬಿಜೆಪಿ ನಾಯಕರು, ಈ ವಿಚಾರದಲ್ಲಿ ತಮ್ಮ ಸರಕಾರಕ್ಕೆ ಛೀಮಾರಿ ಹಾಕಿ, ಅಕ್ರಮ ಸಂಗ್ರಹವನ್ನು ತಡೆಯುವ ಬದಲು ಮೌನ ವಹಿಸಿರುವುದು ಅವರ ಜನ ವಿರೋಧಿ ನೀತಿಯನ್ನು ಮತ್ತೊಮ್ಮೆ ಬಯಲುಗೊಳಿಸುತ್ತಿದೆ ಎಂದು ಸಿಪಿಐಎಂ ವಿವರಿಸಿದೆ. ಅಕ್ರಮವನ್ನು ತಡೆಯಲು ಹೋರಾಟದಲ್ಲಿ ತೊಡಗಿದ ನಾಗರೀಕರು ಮತ್ತು ಪ್ರಗತಿಪರ ಸಂಘ ಸಂಸ್ಥೆಗಳನ್ನು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಅಭಿನಂದಿಸುತ್ತದೆ ಎಂದು ಜಿಲ್ಲಾ ಸಿಪಿಐಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Recent Posts
Advertisement