Advertisement

ಎಮರ್ಜೆನ್ಸಿ ಘನಘೋರವಾದರೆ ಅದನ್ನು ಸಂಘಪರಿವಾರ ಬೆಂಬಲಿಸಿತ್ತೇಕೆ?!

Advertisement
  • ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

ಇದೇ ಜೂನ್ 25 ಕ್ಕೆ ಇಂದಿರಾಗಾಂಧಿ ದೇಶದ ಮೇಲೆ ತುರ್ತುಸ್ಥಿತಿ ಘೋಷಿಸಿ 48 ವರ್ಶಗಳಾಗುತ್ತವೆ. ಮೋದಿ ಅಧಿಕಾರಕ್ಕೆ ಬರುವ ಮುಂಚೆ ಸ್ವಾತಂತ್ರ್ಯಾನಂತರದ ಭಾರತದ ಅತ್ಯಂತ ಕರಾಳ ಘಟ್ಟವಾಗಿದ್ದದ್ದು ಇಂದಿರಾಗಾಂಧಿಯವರು ಭಾರತದ ಮೇಲೆ ಹೇರಿದ ತುರ್ತುಸ್ಥಿತಿಯ ಆ 20 ತಿಂಗಳುಗಳು.

ಆದರೆ ಅದನ್ನು ಮರೆಸುವಂತೆ ಮತ್ತು ಮೀರಿಸುವಂತೆ ಮೋದಿ ನೇತೃತ್ವದ ಕಳೆದ ಒಂಭತ್ತು ವರ್ಷಗಳ ಅಘೋಷಿತ ಮತ್ತು ಸರ್ವವ್ಯಾಪಿ ತುರ್ತುಸ್ಥಿತಿ ಇಂಡು ದೇಶದಲ್ಲಿ ಜಾರಿಯಲ್ಲಿದೆ. ಇಂದಿರಾ ಎಮರ್ಜೆನ್ಸಿ ರಾಜಕೀಯ ವಲಯಕ್ಕೆ ಸೀಮಿತವಾಗಿದ್ದರೆ ಮೋದಿ ಎಮರ್ಜೆನ್ಸಿ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಮಾತ್ರವಲ್ಲದೆ ಜನರ ದೈನಂದಿನ ಬದುಕಿನ ಎಲ್ಲಾ ಆಯಾಮಗಳನ್ನು ಅತಂತ್ರಗೊಳಿಸಿದೆ.

ಇಂದಿರಾ ಎಮರ್ಜೆನ್ಸಿ ಕೇವಲ 20 ತಿಂಗಳುಗಳು ಇದ್ದರೆ ಮೋದಿ ಸರ್ವಾಧಿಕಾರ ಹತ್ತನೇ ವರ್ಷದೆಡೆ ಧಾವಿಸುತ್ತಿದೆ. ಇಪ್ಪತ್ತು ತಿಂಗಳ ಇಂದಿರಾ ಎಮರ್ಜೆನ್ಸಿಯ ವಿರುದ್ಧ ದೇಶದ ರಾಜಕೀಯದಲ್ಲಿ ಹಾಗೂ ಸಮಾಜದಲ್ಲೂ ಬಹುಮತದ ಆಕ್ರೋಶ ಹುಟ್ಟಿದ್ದರೆ ಮೋದಿಯ ಫ಼್ಯಾಸಿಸಂ ಗೆ ಆ ರೀತಿಯ ಪ್ರತಿರೋಧ ಇನ್ನೂ ಕಾಣುತ್ತಿಲ್ಲ. ಬದಲಿಗೆ ಇತ್ತಿಚಿನ ಸರ್ವೇಯೊಂದು ಹೇಳುವಂತೆ ಕಳೆದ ಒಂದು ವರ್ಷದಲ್ಲಿ ರಾಹುಲ್ ಗಾಂಧಿಯ ವರ್ಚಸ್ಸು ಏರಿದ್ದರೂ ಮೋದಿಯ ಜನಪ್ರಿಯತೆ ಕುಗ್ಗಿಲ್ಲ. ಇದಕ್ಕೆ ಪ್ರಧಾನ ಕಾರಣ ಬಿಜೆಪಿ ಮತ್ತು ಸಂಘಪರಿವಾರ ಬಹಳ ವ್ಯವಸ್ಥಿತವಾಗಿ ರೂಪಿಸಿಕೊಂಡಿರುವ ಪ್ರಭಾ ವಲಯ. ಸಂಘಪರಿವಾರದ ಸಂಘಟನಾ ಬಲ. ಮತ್ತು ಜನರ ಅಭಿಪ್ರಾಯಗಳನ್ನು ತಮ್ಮ ನೆರೆಟಿವ್ ಗೆ ತಕ್ಕಂತೆ ರೂಪಿಸಲು ಹಾಕಿಕೊಳ್ಳುವ ಕಾರ್ಯಕ್ರಮಗಳು ಮತ್ತು ಅದನ್ನು ಕಿಂಚಿತ್ತೂ ವಿಮರ್ಶಿಸದೆ ಪ್ರಚಾರ ಮಾಡುವ ಮಾಧ್ಯಮಗಳ ಬೇಷರತ್ ಗುಲಾಮಗಿರಿ.

ಇದರ ಭಾಗವಾಗಿಯೇ ಪ್ರತಿವರ್ಷ ಎಮರ್ಜೆನ್ಸಿ ಘೋಷಿಸಿದ ದಿನವಾದ ಜೂನ್ 25 ರಂದು ಮೋದಿ ಸರ್ಕಾರ ಒಂದು ಸಂಪ್ರದಾಯದಂತೆ ಎಮರ್ಜೆನ್ಸಿಯ ಕರಾಳತೆಯನ್ನು ದೇಶಕೆ ನೆನಪಿಸುವ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದೆ. ಈ ಸಂದರ್ಭವನ್ನು ಹೇಗೆ ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿಯೆಂದು ಮಾತ್ರವಲ್ಲದೆ ತಮ್ಮ ಪಕ್ಷ ಮಾತ್ರ ಎಮರ್ಜೆನ್ಸಿಯಲ್ಲಿ ಸರ್ವಾಧಿಕಾರಿ ವಿರೋಧಿಯಾಗಿತ್ತೆಂಬ ಸುಳ್ಳನ್ನು ವ್ಯವಸ್ಥಿತವಾಗಿ ಹಂಚಲು ಬಳಸಿಕೊಳ್ಳುತ್ತದೆ.

ಅದರಲ್ಲೂ ಕಳೆದ ಒಂಭತ್ತು ವರ್ಷಗಳಲ್ಲಿ ಭಾರತದ ಮಾಧ್ಯಮ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ , ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿರೋಧ ಸ್ವಾತಂತ್ರ್ಯ ಗಳು ಇಂದಿರಾ ಎಮರ್ಜೆನ್ಸಿ ಕಾಲಕ್ಕಿಂತಲೂ ಭೀಕರವಾಗಿ ಹರಣವಾಗುತ್ತಿರುವುದು ಜಗತ್ತಿನೆದುರು ಬೆತ್ತಲಾಗಿದೆ. ಎಲ್ಲಾ ಸ್ವಾತಂತ್ರ್ಯ ಸೂಚ್ಯಂಕಗಳಲ್ಲೂ ಭಾರತ ಜಗತ್ತಿನ ಸರ್ವಾಧಿಕಾರಿ ದೇಶಗಳಿಗಿಂತ ಕೆಳಗಿಳಿಯುತ್ತಿದೆ. ಅಥವಾ ಅದರ ಜೊತೆಗಿದೆ. ಮೋದಿ ಸರ್ಕಾರದ ಕಾಲದಲ್ಲಿ ಭಾರತವು ಒಂದು ಪ್ರಜಾತಂತ್ರವಾಗಿ ಉಳಿದಿಲ್ಲವೆಂದು, ಬದಲಿಗೆ ಭಾರತವು ಒಂದು ಚುನಾವಣಾ ಸರ್ವಾಧಿಕಾರ ವಾಗಿದೆಯೆಂದು ಜಗತ್ತಿನ ಪ್ರಜಾತಂತ್ರಗಳ ಆರೋಗ್ಯದ ಬಗ್ಗೆ ಗಂಭೀರ ಅಧ್ಯಯನ ನಡೆಸುತ್ತಿರುವ ಸ್ವೀಡನ್ನಿನ ವಿ-ಡೆಮ್ ನಂಥ ಪ್ರತಿಷ್ಠಿತ ಜಾಗತಿಕ ಸಂಸ್ಥೆಗಳು ಘೋಷಿಸುತ್ತಿವೆ.

ಹೀಗಾಗಿ ಜಗತ್ತಿನೆದುರು ಮತ್ತು ಭಾರತದಲ್ಲೂ ತಮ್ಮ ಸರ್ಕಾರ ಪ್ರಜಾಪ್ರಭುತ್ವವಾದಿ ಎಂದು ತೋರಿಸಿಕೊಳ್ಳುವ ತುರ್ತಿನಲ್ಲಿರುವ ಮೋದಿ ಸರ್ಕಾರ ಈ ವರ್ಷವೂ ಜೂನ್ 25 ರಂದು ಇಂದಿರಾ ಎಮರ್ಜೆನ್ಸಿಯ ನೆನಪು ಮಾಡುತ್ತಾ ಮೋದಿ ಫ಼್ಯಾಶಿಸಂ ಅನ್ನು ಮರೆಸುವ ಮಹಾ ಯೋಜನೆಯನ್ನು ಹಮ್ಮಿಕೊಂಡಿದೆ.

ಮಣಿಪುರ ಇತ್ಯಾದಿ ಕಡೆಗಳಲ್ಲಿ ಕೇಂದ್ರದ ಮೌನ ಬೆಂಬಲ-ಸಹಕಾರದೊಂದಿಗೆ ನಡೆಯುತ್ತಿರುವ ಅಂತರ್ಯುದ್ಧ ಮತ್ತು ನರಮೇಧಗಳ ಬಗ್ಗೆ ತುಟಿ ಬಿಚ್ಚದ ಬೇಜವಾಬ್ದಾರಿ ಪ್ರಧಾನಿ ಅಮೆರಿಕ ಪ್ರವಾಸಕ್ಕೆ ಹೊರಟು ನಿಂತ ಕ್ಷಣದಲ್ಲೂ ಮಾಡಿದ "ಮನ್ ಕಿ ಬಾತ್ " ಭಾಷಣದಲ್ಲಿ ತುರ್ತುಸ್ಥಿತಿಯ ಕರಾಳತೆಯನ್ನು ದೇಶಕ್ಕೆ ನೆನಪು ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಮಣಿಪುರದಲ್ಲಿ ಕುಕಿಗಳ ಪ್ರಭುತ್ವ ಬೆಂಬಲಿತ ನರಮೇಧ ಮತ್ತು ಅಂತರ್ಯುದ್ಧಗಳು ಪ್ರಾರಂಭವಾಗಿ 50 ದಿನಗಳಾದರೂ ಕ್ರಮತೆಗೆದುಕೊಳ್ಳದ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವದ ಸರ್ವಶಕ್ತ ಪ್ರಧಾನಿ ಮೋದಿ "ಮನ್ ಕಿ ಬಾತ್" ನಲ್ಲಾದರೂ ಅದರ ಬಗ್ಗೆ ಮಾತನಾಡಬಹುದೆಂದು ನಿರೀಕ್ಷಿಸಿದ್ದ ಮಣಿಪುರ ಹಾಗೂ ಈಶಾನ್ಯ ಭಾರತದ ಜನತೆ ಆಕ್ರೋಶದಿಂದ "ಮನ್ ಕಿ ಬಾತ್" ಬಿತ್ತರಿಸುತ್ತಿದ್ದ ರೇಡಿಯೋಗಳನ್ನು ಒಡೆದುಹಾಕಿದ್ದಾರೆ.

ಅದೇನೇ ಇರಲಿ. ನೈಜ ಪ್ರಜಾತಂತ್ರವಾದಿಗಳು ಎಮರ್ಜೆನ್ಸಿಯ ಪ್ರಮಾದಗಳನ್ನು ಹಾಗೂ ಅದನ್ನು ಸಾಧ್ಯಗೊಳಿಸಿದ ರಾಜಕೀಯ-ಆರ್ಥಿಕ ಸಂದರ್ಭವನ್ನೂ ಹಾಗೂ ಅದಕ್ಕೆ ಅವಕಾಶ ಮಾಡಿಕೊಟ್ಟ ಸಾಂವಿಧಾನಿಕ ಸಾಧ್ಯತೆಗಳನ್ನೂ ಮರೆಯುವಂತಿಲ್ಲ.

ಆದರೆ ತುರ್ತುಸ್ಥಿತಿಯ ವಿರುದ್ಧ ನಡೆದ ಪ್ರಜಾತಾಂತ್ರಿಕ ಸಮರ ಜನಸಂಘ-ಬಿಜೆಪಿ ಮತ್ತು ಸಂಘಪರಿವಾರದಂಥ ಪ್ರಜಾತಂತ್ರ ವಿರೋಧಿ ಮನುವಾದಿ ಫ಼್ಯಾಶಿಸ್ಟ್ ಶಕ್ತಿಗಳಿಗೆ ಹೊಸಜೀವ ಕೊಟ್ಟಿದ್ದು ಮತ್ತು ಅವರನ್ನು ಮಾನ್ಯಗೊಳಿಸಿ ಅಧಿಕಾರಕ್ಕೆ ತಂದದ್ದು ಮಾತ್ರ ಒಂದು ಐತಿಹಾಸಿಕ ವಿಪರ್ಯಾಸ.

ಇದು ಎಮರ್ಜೆನ್ಸಿ ಗಿಂತ ದೊಡ್ಡ ಪ್ರಜಾತಾಂತ್ರಿಕ ವೈಫ಼ಲ್ಯ!

ದೊಡ್ದ ಶತ್ರುವಿನ ವಿರುದ್ಧ ಸಣ್ಣ ಶತ್ರುವಿನ ಜೊತೆ ಬೇಷರತ್ ಐಕ್ಯತೆ ಮತ್ತು ಅವಲಂಬನೆಗಳೇ ಇಂಥಾ ದುರಂತಕ್ಕೆ ಕಾರಣವಾಯಿತು.

ಇಂದು ಫ಼ಾಶಿಸ್ಟ್ ಶಕ್ತಿಗಳ ವಿರುದ್ಧ ನಡೆದಿರುವ ಸಂಘರ್ಷದಲ್ಲಿ ಮತ್ತೆ ಅದೇ ತಪ್ಪು ಮಾಡುತ್ತಿದೇವೆ ಎಂಬುದು ಮತ್ತೊಂದು ಐತಿಹಾಸಿಕ ವಿಪರ್ಯಾಸ.

ಅದೇನೇ ಇರಲಿ ಇತಿಹಾಸವನ್ನು ನೋಡಿದರೆ , ಸಂಘಪರಿವಾರ ಮತ್ತು ಅಂದಿನ ಜನಸಂಘ ತುರ್ತುಸ್ಥಿತಿಯ ವಿರುದ್ಧ ಇತರ ಜನತಾಂತ್ರಿಕ ಶಕ್ತಿಗಳಷ್ಟು ಕಟಿಬದ್ಧತೆಯಿಂದ ಮತ್ತು ತ್ಯಾಗಶೀಲತೆಯಿಂದ ತುರ್ತುಸ್ಥಿತಿಯ ವಿರುದ್ಧ ಹೋರಾಡದೆ, ಇಂದಿರಾಗಾಂಧಿಯವರೊಂದಿಗೆ ರಾಜಿ-ಕಾಬೂಲಿಯಲ್ಲಿ ತೊಡಗಿದ್ದರೆಂಬ ಸಂಗತಿಯನ್ನು ಮುಚ್ಚಿಟ್ಟಿರುವುದು ಸ್ಪಷ್ಟವಾಗುತ್ತದೆ. ಅಷ್ಟು ಮಾತ್ರವಲ್ಲ ಅವರ ಪಿತಾಮಹ ಸಾವರ್ಕರ್ ರೀತಿಯಲ್ಲಿ ಅವರ ನಾಯಕರು ಜೈಲಿನಿಂದಲೇ ತುರ್ತುಸ್ಥಿತಿಯನ್ನು ಬೆಂಬಲಿಸುತ್ತಾ ಶರಣಾಗತಿ ಪತ್ರಗಳನ್ನು ಬರೆದಿದ್ದರು.

ತುರ್ತುಸ್ಥಿತಿಯನ್ನು ಘೋಷಿಸಲು ಕಾರಣವಾದ ರಾಜಕೀಯ ಹೋರಾಟಗಳಲ್ಲಿ ಆರೆಸ್ಸೆಸ್ ಮತ್ತು ಅದರ ಜನಸಂಘ ಹಾಗೂ ಇತರ ಅಂಗಸಂಸ್ಥೆಗಳ ಪಾತ್ರ ಒಂದಿಷ್ಟಿದ್ದದ್ದು ನಿಜ. ಆದರೆ, ತುರ್ತುಸ್ಥಿತಿಯನ್ನು ಘೋಷಿಸಿದ ನಂತರ ಆರೆಸ್ಸೆಸ್ ಮತ್ತು ಭಾರತೀಯ ಜನಸಂಘದ ನಾಯಕರು ತಾವು ಸರ್ವಾಧಿಕಾರಿ ಎಂದು ಕರೆಯುತ್ತಿದ್ದ ಇಂದಿರಾಗಾಂಧಿಯವರ ಜೊತೆ ಗುಪ್ತ ಒಪ್ಪಂದವನ್ನು ಮಾಡಿಕೊಂಡು ಎಮರ್ಜೆನ್ಸಿಯನ್ನು ಬೆಂಬಲಿಸಿದ್ದೂ ಕೂಡಾ ಅಷ್ಟೇ ನಿಜ.

ಇತಿಹಾಸದ ಈ ಅತ್ಯಂತ ಅಪಮಾನಕಾರಿ ಪುಟಗಳನ್ನು ಹಾಗೂ ತಮ್ಮ ಈ ಅವಕಾಶವಾದಿ ಜನದ್ರೋಹಿ ಧೋರಣೆಗಳನ್ನು ಬಿಜೆಪಿ-ಸಂಘಪರಿವಾರ ಮುಚ್ಚಿಹಾಕಲು ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಆದರೆ ಆ ಕಾಲದ ಅವರ ಬರಹಗಳು ಮತ್ತು ಅವರ ನಾಯಕರುಗಳೆ ದಾಖಲಿಸಿರುವ ಇತಿಹಾಸಗಳು ಹೇಗೆ ಸಂಘಪರಿವಾರದ ನಾಯಕರು ಎಮರ್ಜೆನ್ಸಿಯನ್ನು ಗುಪ್ತವಾಗಿ ಬೆಂಬಲಿಸಿದ್ದರು ಎಂಬ ಬಗ್ಗೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತವೆ.

ಅಟಲ ಬಿಹಾರಿಯವರು ಅರೆಕ್ಷಣವೂ ಜೈಲಿನಲ್ಲಿರಲಿಲ್ಲ!

ಪ್ರತಿವರ್ಷ ಜೂನ್ 25 ರಂದು ಬಿಜೆಪಿ ಮತ್ತು ಆರೆಸ್ಸೆಸ್ ನವರು ಯಥಾಪ್ರಕಾರ ತಾವು ಹೇಗೆ ಭಾರತವನ್ನು ತುರ್ತುಸ್ಥಿತಿಯಿಂದ ಕಾಪಾಡಿದೆವು ಎಂದು ಕೊಚ್ಚಿಕೊಳ್ಳುತ್ತಾ ವಾಜಪೇಯಿ, ಮೊರಾರ್ಜಿ ಹಾಗೂ ಇನ್ನಿತರ ನಾಯಕರ ಬಂಧನದ ಬಗ್ಗೆ ವರದಿ ಮಾಡಿದ್ದ 1977ರ ಜೂನ್ 26 ರ ಪತ್ರಿಕೆಗಳ ಮುಖಪುಟವನ್ನು ಪೇಸ್ಬುಕ್ನಲ್ಲಿ ಹಾಕಿಕೊಳ್ಳುತ್ತಾರೆ.

ಆದರೆ ಬಿಜೆಪಿ ನಾಯಕರುಗಳಿಗಿಂತ ಹೆಚ್ಚಿನ ಸಾವು ನೋವುಗಳನ್ನು ಎಮರ್ಜೆನ್ಸಿಯಲ್ಲಿ ಅನುಭವಿಸಿದವರು ಸಮಾಜವಾದಿಗಳು, ಲೋಹಿಯಾವಾದಿಗಳು, ಸಿಪಿಎಂ ಮತ್ತು ನಕ್ಸಲೈಟ್ ಪಕ್ಷಗಳ ಸಾವಿರಾರು ನಾಯಕರು ಮತ್ತು ಕಾರ್ಯಕರ್ತರು. ಅದು ಅಂದಿನ ಗೃಹ ಇಲಾಖೆಯ ಕಡತಗಳನ್ನು ಹಾಗೂ ಗುಪ್ತ ವರದಿಗಳನ್ನೂ ಗಮನಿಸಿದರೆ ಗೊತ್ತಾಗುತ್ತದೆ.

ಅದಿರಲಿ. ಮುಖಪುಟದಲ್ಲಿ ಹೆಸರು ಹಾಕಿಸಿಕೊಂಡ ಅಟಲ್ ಬಿಹಾರಿ ವಾಜಪೇಯಿಯವರು ನಿಜಕ್ಕೂ ತುರ್ತುಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ್ದರೇ?

ಖಂಡಿತಾ ಇಲ್ಲ.

ತುರ್ತುಸ್ಥಿತಿಯ 20 ತಿಂಗಳುಗಳಲ್ಲಿ ಅತಿ ಹೆಚ್ಚು ಭಾಗ ಅಟಲ್ ಬಿಹಾರಿ ವಾಜಪೇಯಿಯವರು ಪೆರೋಲ್ ಮೇಲೆ ಮನೆಯಲ್ಲಿ ಕಳೆದಿದ್ದರು.

ಹಾಗೂ ಪೆರೋಲ್ ಪಡೆದುಕೊಳ್ಳಲು 'ತುರ್ತುಸ್ಥಿತಿಯನ್ನು ತಾವು ವಿರೋಧಿಸುವುದಿಲ್ಲ' ಎಂದು ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದರು!

ಇದನ್ನು ದಾಖಲೆ ಸಮೇತ ಜನರ ಗಮನಕ್ಕೆ ತಂದಿದ್ದು ಕಮ್ಯುನಿಷ್ಟರೂ ಅಲ್ಲ, ಸಮಾಜವಾದಿಗಳೂ ಅಲ್ಲ. ಬದಲಿಗೆ ಬಿಜೆಪಿ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರಾದ ಸುಬ್ರಹ್ಮಣ್ಯ ಸ್ವಾಮಿಯವರು!

2000 ನೇ ಇಸವಿಯ ಜೂನ್ 13 ರಂದು The Hindu ಪತ್ರಿಕೆಗೆ ಬರೆದ “The Unlearnt Lessons Of Emergency” ಎಂಬ ಸುದೀರ್ಘ ಲೇಖನದಲ್ಲಿ ಸುಬ್ರಹ್ಮಣ್ಯ ಸ್ವಾಮಿಯವರು ಹೇಗೆ ಆರೆಸ್ಸೆಸ್ ಮತ್ತು ಜನಸಂಘದ ಹಲವಾರು ನಾಯಕರು ಇಂದಿರಾಗಾಂಧಿಯವರ ಜೊತೆಗೆ ಗುಪ್ತ ಮಾತುಕತೆಗಳಲ್ಲಿ ತೊಡಗಿದ್ದರು ಎಂಬುದನ್ನು ಬಯಲಿಗೆಳೆಯುತ್ತಾರೆ.

ಅದರಲ್ಲೂ ಅಟಲ್ ಬಿಹಾರಿ ವಾಜಪೇಯಿಯವರು ಬಂಧನಕ್ಕೊಳಗಾದ ಕೆಲವೇ ದಿನಗಳಲ್ಲಿ ಇಂದಿರಾಗಾಂಧಿಯವರ ಜೊತೆ ಒಂದು ಒಪ್ಪಂದಕ್ಕೆ ಬರುತ್ತಾರೆ. ತಮಗೆ ಪೆರೋಲ್ ನೀಡಿ ಹೊರಬರಲು ಅವಕಾಶ ನೀಡಿದರೆ ತಾವು ಸರ್ಕಾರಿ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟು ಹೊರಬರುತ್ತಾರೆ. ಹಾಗೆಯೇ ಹೊರಗಿದ್ದ ಅಷ್ಟೂ ಅವಧಿಯಲ್ಲಿ ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಅವರು ದಾಖಲಿಸಿದ್ದಾರೆ.

ಇದು ಆಶ್ಚರ್ಯವೂ ಅಲ್ಲ. ಹೊಸತೂ ಅಲ್ಲ. ಏಕೆಂದರೆ, ವಾಜಪೇಯಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಸಹ ಹೀಗೆ ಮಾಡಿದ್ದರು. 1942 ರ ಕ್ವಿಟ್ ಇಂಡಿಯಾ ಚಳವಳಿಯ ಪ್ರದರ್ಶನವೊಂದನ್ನು ನೋಡುತ್ತಿದ್ದಾಗ ಬ್ರಿಟಿಷ್ ಸರ್ಕಾರದಿಂದ ಬಂಧಿಸಲ್ಪಟ್ಟ ವಾಜಪೇಯಿಯವರು, ಆಗಲೂ ಬಂಧನದಿಂದ ಹೊರಬಂದದ್ದು ತಮ್ಮ ಪರಿಚಿತ ಚಳವಳಿಗಾರರ ಹೆಸರನ್ನು ಬಿಟ್ಟುಕೊಟ್ಟು ಮತ್ತು ಇನ್ನೆಂದಿಗೂ ಬ್ರಿಟಿಷ್ ಸರ್ಕಾರದ ವಿರೋಧಿ ಚಳವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಬರೆದುಕೊಟ್ಟೇ ಅಲ್ಲವೇ?

ಇಂದಿರಾ ಗಾಂಧಿಗೆ ಶರಣಾದ ಆರೆಸ್ಸೆಸ್ಸಿನ Surrender Document!

ಅದೇ ಲೇಖನದಲ್ಲಿ ಸುಬ್ರಹ್ಮಣ್ಯ ಸ್ವಾಮಿಯವರು ಹೇಗೆ ಆರೆಸ್ಸೆಸ್ಸಿನ ನಾಯಕರು 1976 ರ ಡಿಸೆಂಬರ್ ಹೊತ್ತಿಗೆ ಇಂದಿರಾಗಾಂಧಿಯವರ ಎಮರ್ಜೆನ್ಸಿಗೆ ಸಂಪೂರ್ಣ ಹಾಗೂ ಬಹಿರಂಗ ಬೆಂಬಲ ಘೋಷಿಸುವ ಸರೆಂಡರ್ ಡಾಕ್ಯುಮೆಂಟ್ ಗೆ ಸಹಿಹಾಕಲು ತೀರ್ಮಾನ ತೆಗೆದುಕೊಂಡಿದ್ದರೂ ಎಂಬುದನ್ನು ವಿವರಿಸುತ್ತಾರೆ.

ವಾಸ್ತವವಾಗಿ ತುರ್ತುಸ್ಥಿತಿಯ ಘೋಷಣೆಯಾದ ನಂತರ ಸರ್ಕಾರಕ್ಕೆ ವಿರೋಧ ಮಾಡದಂತೆ ಸಂಘಟನಾತ್ಮಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಆರೆಸ್ಸೆಸ್ಸಿನ ಹಿರಿಯ ನಾಯಕರಾದ ಮಧುಕರ್ ಮೂಳೆಯವರಿಗೆ ವಹಿಸಲಾಗಿತ್ತು. ಸರ್ಕಾರದೊಡನೆ ಸಂಧಾನ ಮಾತುಕತೆಯ ಜವಾಬ್ದಾರಿಯನ್ನು ರಾನಡೆಯವರಿಗೆ ವಹಿಸಲಾಗಿತ್ತು. ಸುಬ್ರಹ್ಮಣ್ಯಸ್ವಾಮಿಯವರಿಗೆ ಅಮೆರಿಕವನ್ನೂ ಒಳಗೊಂಡಂತೆ ವಿದೇಶಗಳಲ್ಲಿ ಎಮರ್ಜೆನ್ಸಿ ವಿರೋಧಿ ಹೋರಾಟದ ಬಗ್ಗೆ ಸರ್ಕಾರಗಳ ಬೆಂಬಲ ಪಡೆದುಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿತ್ತು.

ಆದರೆ 1976 ರ ನವಂಬರ್‌ನಲ್ಲಿ ಮಧುಕರ್ ಮೂಳೆಯವರು ಸುಬ್ರಹ್ಮಣ್ಯ ಸ್ವಾಮಿಯವರಿಗೆ ತಮ್ಮ ಪ್ರಯತ್ನಗಳನ್ನು ನಿಲ್ಲಿಸಲು ಅತ್ಯಂತ ವಿಷಾದದಿಂದ ಸಲಹೆ ಮಾಡುತ್ತಾರೆ. ಏಕೆಂದರೆ:
“the RSS had finalised the document of surrender to be signed at the end of January 1977”

-ಆರೆಸ್ಸೆಸ್ಸು 1977 ರ ಜನವರಿಯ ಕೊನೆಯ ವೇಳೆಗೆ ಶರಣಾಗತಿ ಒಪ್ಪಂದಕ್ಕೆ ಸಹಿ ಹಾಕಲು ತೀರ್ಮಾನಿಸಿದೆ- ಎಂದು ಮಧುಕರ್ ಮೂಳೆಯವರು ವಿಷಾದದಿಂದ ನನಗೆ ತಿಳಿಸಿದರು ಎಂದು ಸುಬ್ರಹ್ಮಣ್ಯಸ್ವಾಮಿಯವರು ಆ ಲೇಖನದಲ್ಲಿ ದಾಖಲಿಸುತ್ತಾರೆ.

ಹೆಚ್ಚಿನ ವಿವರಗಳಿಗೆ ಆಸಕ್ತರು ಸುಬ್ರಹ್ಮಣ್ಯಸ್ವಾಮಿಯವರ ಲೇಖನವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು.
https://www.thehindu.com/todays-paper/tp-miscellaneous/tp-others/unlearnt-lessons-of-the-emergency/article28026968.ece

ಆರೆಸ್ಸೆಸ್ ನಾಯಕರ ಈ ಸರೆಂಡರ್ ತೀರ್ಮಾನದ ಬಗ್ಗೆ ಆ ದಿನಗಳಲ್ಲಿ ಐಬಿಯ ಮುಖ್ಯಸ್ಥರಾಗಿದ್ದ ಟಿ.ವಿ. ರಾಜೇಶ್ವರ್ ಅವರು ತಮ್ಮ “India- Crucial Years” ಪುಸ್ತಕದಲ್ಲೂ ದಾಖಲಿಸಿದ್ದಾರೆ. ಹಾಗೆಯೇ ಈ ವಿದ್ಯಮಾನವನ್ನು ಆ ದಿನಗಳಲ್ಲಿ ಇಂದಿರಾಗಾಂಧಿಯವರ ವಾರ್ತಾಧಿಕಾರಿಯಾಗಿದ್ದ ಹಿರಿಯ ಪತ್ರಕರ್ತ ಎಚ್.ವೈ. ಶಾರದಾಪ್ರಸಾದರ್ ಅವರೂ ದಾಖಲಿಸಿರುವುದನ್ನು ಅವರ ಮಗ ರವಿ ವಿಶ್ವೇಶ್ವರ ಶಾರದಾ ಪ್ರಸಾದ್ ಅವರು ದಿ ಪ್ರಿಂಟ್ ವೆಬ್ ಪತ್ರಿಕೆಗೆ ಬರೆದ ಲೇಖದಲ್ಲಿ ನೆನಪಿಸಿದ್ದಾರೆ. (https://theprint.in/opinion/rss-leaders-deserted-jayaprakash-resistance-during-indira-emergency/448294/)

ಸರಸಂಘಚಾಲಕರ ಸರೆಂಡರ್ ಪತ್ರಗಳು!

ಇವೆಲ್ಲಕ್ಕಿಂತ ಮುಖ್ಯವಾಗಿ ತುರ್ತುಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದ ಆರೆಸ್ಸೆಸ್‌ನ ಪರಮೋಚ್ಚ ನಾಯಕರಾದ ಸರಸಂಘಚಾಲಕ ಮಧುಕರ್ ದೇವರಸ್ ಅಲಿಯಾಸ್ ಬಾಳಾಸಾಹೆಭ್ ದೇವರಸ್ ಅವರು ಯರವಾಡ ಜೈಲಿನಿಂದ ಇಂದಿರಾಗಾಂಧಿಯವರಿಗೆ ಬರೆದ ಸರೆಂಡರ್ ಪತ್ರಗಳು ಹಾಗೂ ಅದನ್ನು ಪರಿಗಣಿಸಲು ಇಂದಿರಾ ಅವರ ಮೇಲೆ ಪ್ರಭಾವ ಬೀರಬೇಕೆಂದು ವಿನೋಭಾ ಭಾವೆಯವರಿಗೆ ಬರೆದ ಗೋಗೆರೆವ ಪತ್ರಗಳು ತುರ್ತುಸ್ಥಿತಿಯಲ್ಲಿ ಆರೆಸ್ಸೆಸ್ ಮತ್ತು ಜನಸಂಘದ ನಿಜವಾದ ಪಾತ್ರವೇನಿತ್ತು ಎಂದು ತಿಳಿಯಲೂ ಹಾಗು ಅವರ ಸೋಗಲಾಡಿತನವನ್ನೂ ಅರಿಯಲು ಸಹಾಯ ಮಾಡುತ್ತವೆ.

ಬಾಳಾಸಾಹೇಬ್ ದೇವರಸ್ ಅವರು ಹಿಂದಿಯಲ್ಲಿ ಬರೆದ "ಹಿಂದೂ ಸಂಘಟನ್ ಔರ್ ಸತ್ತಾವದಿ ರಾಜನೀತಿ" ಎಂಬ ಪುಸ್ತಕದ ಕೊನೆಯಲ್ಲಿ ಅಪೆಂಡಿಕ್ಸ್ ನ ರೂಪದಲ್ಲಿ ಈ ಎಲ್ಲಾ ಪತ್ರಗಳನ್ನೂ ಸೇರಿಸಲಾಗಿದೆ. ವಿದ್ವಾಂಸ ಹಾಗೂ ರಾಜಕೀಯ ಕಾರ್ಯಕರ್ತರೂ ಆದ ಯೋಗೇಂದ್ರ ಯಾದವ್ ಅವರು ಹಿಂದಿಯಲ್ಲಿರುವ ಆ ಇಡೀ ಪುಸ್ತಕವನ್ನು ತಮ್ಮ ಟ್ವಿಟರಿನಲ್ಲಿಯೂ ಪ್ರಕಟಿಸಿದ್ದಾರೆ. ಆಸಕ್ತರು ಅದನ್ನು ನೇರವಾಗಿ ಈ ವೆಬ್ ವಿಳಾಸದಲ್ಲಿ ಓದಬಹುದು:
https://images.app.goo.gl/MXPKDDSwtniZFp1n9

ಈ ಎಲ್ಲಾ ಪತ್ರಗಳ ಇಂಗ್ಲೀಷ್ ಆವೃತ್ತಿಯನ್ನು ಆಗ ಭಾರತೀಯ ಲೋಕದಳದ ನಾಯಕರಾಗಿದ್ದ ಬ್ರಹ್ಮದತ್ ಅವರು ಬರೆದಿರುವ " Five headed monster: A factual narrative of the genesis of Janata Party” ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಅದೇ ರೀತಿ ಕಳೆದ ಮೂರು ನಾಲ್ಕು ದಶಕಗಳಿಂದ ಭಾರತದ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗಳ ಬಗ್ಗೆ ತಳಮಟ್ಟದ ಅಧ್ಯಯನ ಮಾಡಿ ಹಲವಾರು ಮೌಲಿಕ ಗ್ರಂಥಗಳನ್ನು ಬರೆದಿರುವ ಕ್ರಿಸ್ಟೋಫೋ ಜಾಫರ್ಲೆ ಯವರು ಮತ್ತೊಬ ವಿದ್ವಾಂಸ ಪ್ರತಿನಾವ್ ಅನಿಲ್ ಅವರ ಜೊತೆಗೂಡಿ ತುರ್ತುಪರಿಸ್ಥಿತಿಯ ಬಗ್ಗೆ ನಡೆಸಿದ ಹಲವಾರು ವರ್ಷಗಳ ಸಂಶೋಧನೆಯ ನಂತರ 2021 ರಲ್ಲಿ ಪ್ರಕಟಿಸಿರುವ “ Indias First Dictatorship- The Emergency-1975-77” ಎಂಬ ಪುಸ್ತಕದಲ್ಲೂ ಈ ಪತ್ರಗಳ ಇಂಗ್ಲಿಶ್ ಅನುವಾದವಿದೆ. ಆಸಕ್ತರು ಪುಸ್ತಕದ ಆ ಭಾಗವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:
https://www.rediff.com/news/special/christophe-jaffrelot-pratinav-anil-emergency-was-a-windfall-for-the-rss/20210625.htms

ಮೊದಲ ಸರೆಂಡರ್ ಪತ್ರ- 22 ಆಗಸ್ತ್ 1975

1975 ರ ಜೂನ್ 25 ರಂದು ತುರ್ತುಸ್ಥಿತಿಯನ್ನು ಘೋಷಿಸಿದ ನಂತರ 1975 ರ ಆಗಸ್ಟ್ 15 ರಂದು ಇಂದಿರಾಗಂಧಿಯವರು ಕೆಂಪುಕೋಟೆಯಿಂದ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡಿದರು. ಅದರಲ್ಲಿ ತಾವು ಕೈಗೊಂಡ ತುರ್ತುಸ್ಥಿತಿ ನಿರ್ಣಯ ಹೇಗೆ ದೇಶದ ಭದ್ರತೆಗೆ ಅತ್ಯಗತ್ಯವಾಗಿದೆಯೆಂದೂ, ಅದನ್ನು ವಿರೋಧಿಸುವವರೂ ದೇಶದ್ರೋಹಿಗಳೆಂದೂ ಭಾಷಣ ಮಾಡಿದರು. ದೇಶಾದ್ಯಂತ ಸಕಲ ಪ್ರಜಾತಂತ್ರವಾದಿಗಳೂ ಈ ಭಾಷಣವನ್ನೂ ಹಾಗೂ ಇಂದಿರಾಗಂಧಿಯವರ ಧೋರಣೆಯನ್ನು ಖಂಡಿಸಿದರು.

ಆದರೆ ಆರೆಸ್ಸೆಸ್‌ನ ಸರಸಂಘ ಚಾಲಕರಾದ ದೇವರಸ್ ಅವರು ಮಾತ್ರ ಇಂದಿರಾಗಾಂಧಿಯವರಿಗೆ ಬರೆದ 1975 ರ ಆಗಸ್ಟ್ 22 ರಂದು ಬರೆದ ಪ್ರಥಮ ಪತ್ರದಲ್ಲಿ ಆ ಭಾಷಣವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ!!

ಅಷ್ಟು ಮಾತ್ರವಲ್ಲ ಅವರ ಭಾಷಣವು ಸಮಯೋಚಿತವೂ ಆಗಿತ್ತು ಹಾಗೂ ಸಮತೋಲದಿಂದಲೂ ಕೂಡಿತ್ತು ಎಂದು ಕೊಂಡಾಡುತ್ತಾರೆ. ಆ ನಂತರ ಇಂದಿರಾ ಸರ್ಕಾರಕ್ಕೆ ಆರೆಸ್ಸೆಸ್ ಬಗ್ಗೆ ಇರುವ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಲು ಈ ಪತ್ರ ಬರೆಯುತ್ತಿದ್ದೇನೆಂದು ಹೇಳುತ್ತಾ ಹೇಗೆ ಆರೆಸ್ಸೆಸ್ ಹಿಂದೂಗಳ ಸಂಘಟನೆಯನ್ನು ಮಾಡುತ್ತಿದ್ದರೂ ಯಾವತ್ತಿಗೂ ಇಂದಿರಾ ಸರ್ಕಾರದ ವಿರೋಧಿಯಾಗಿರಲಿಲ್ಲವೆಂಬ ಭರವಸೆಯನ್ನು ಕೊಡುತ್ತಾರೆ. ಹಾಗೂ ಅಂತಿಮವಾಗಿ :

"ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಆರೆಸ್ಸೆಸ್ಸಿನ ಮೇಲಿನ ನಿಷೇಧವನ್ನು ತೆಗೆಯಬೇಕೆಂದು ಪ್ರಾರ್ಥಿಸುತ್ತೇನೆ. ನಿಮಗೆ ಸೂಕ್ತವೆಂದು ಕಂಡುಬಂದಲ್ಲಿ ತಮ್ಮನ್ನು ಖುದ್ದು ಭೇಟಿಯಾಗುವುದು ನನಗೆ ಅತ್ಯಂತ ಸಂತೋಷದ ವಿಷಯವಾಗಿರುತ್ತದೆ..

ಹೀಗೆ ಮೊದಲನೆ ಪತ್ರದಲ್ಲಿ ತುರ್ತುಸ್ಥಿತಿಯ ಬಗ್ಗೆ ಸಮ್ಮತಿಯನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಅಂತಿಮವಾಗಿ ಅವರು ವಿನಂತಿಸಿದ್ದು ಆರೆಸ್ಸೆಸ್ಸಿನ ಮೇಲಿನ ನಿಷೇಧವನ್ನು ಕಿತ್ತುಹಾಕಬೇಕೆಂದೇ ವಿನಾ ತುರ್ತುಸ್ಥಿತಿಯನ್ನು ತೆಗೆಯಬೇಕೆಂದಲ್ಲ! ಇದು ಆರೆಸ್ಸೆಸ್ಸ್!

ಎರಡನೇ ಸರೆಂಡರ್ ಪತ್ರ- 1975 ರ ನವಂಬರ್ 10

ಆರೆಸ್ಸೆಸ್ಸಿನ ಸರಸಂಘಚಾಲಕರ ಪತ್ರಕ್ಕೆ ಇಂದಿರಾಗಾಂಧಿ ಯವರು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ಈ ಮಧ್ಯೆ ತುರ್ತುಸ್ಥಿತಿಯಲ್ಲಿ ಇಂದಿರಾಗಾಂಧಿಯವರು ಬಗ್ಗಿರಿ ಎಂದರೆ ತೆವಳಲೂ ಸಿದ್ಧವಾಗಿದ್ದ ಮಾಧ್ಯಮಗಳು ಹಾಗೂ ಸುಪ್ರೀಂಕೋರ್ಟುಗಳು ಇಂದಿರಾಗಾಂಧಿ ಹೇಳಿದಂತೆ ಕೇಳುತ್ತಿದ್ದವು. ಆದ್ದರಿಂದಲೇ ಇಂದಿರಾಗಾಂಧಿಯವರ ಚುನಾವಣಾ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಅಲಹಾಬಾದಿನ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟಿನ ಐದು ನ್ಯಾಯಾಧೀಶರ ಪೀಠ ಅನೂರ್ಜಿತಗೊಳಿಸಿ ಇಂದಿರಾಗಾಂಧಿಯವರ ಆಯ್ಕೆಯನ್ನು ಎತ್ತಿಹಿಡಿಯಿತು. ಸ್ವತಂತ್ರ ನ್ಯಾಯಾಂಗದ ಈ ದುಸ್ಥಿತಿಯು ಸರ್ವಾಧಿಕಾರದ ಮುಂದುವರಿಕೆಯೆಂದು ಜೈಲಿನಲ್ಲಿ ಹಾಗೂ ಬಯಲಿನಲ್ಲಿ ಇದ್ದ ಎಲ್ಲಾ ಪ್ರಜಾತಂತ್ರವಾದಿಗಳು ಒಕ್ಕೊರಲಿನಿಂದ ಖಂಡಿಸಿದರು.

ಆದರೆ ಸರಸಂಘಚಾಲಕರು ಮಾಡಿದ್ದೇನು?

1975 ರ ನವಂಬರ್ 10 ರಂದು ಇಂದಿರಾಗಾಂಧಿಯವರನ್ನುದ್ದೇಶಿಸಿ ಎರಡನೇ ಪತ್ರವನ್ನು ಬರೆಯುವ ದೇವರಸ್ ಅವರು ಪತ್ರವನ್ನು ಪ್ರಾರಂಭಿಸುವುದೇ ಸುಪ್ರೀಂಕೋರ್ಟು ಅವರ ಪರವಾಗಿ ಕೊಟ್ಟ ಆದೇಶಕ್ಕೆ ಅಭಿನಂದನೆ ಸಲ್ಲಿಸುವ ಮೂಲಕ!

"Let me congratulate you as five judges of the Supreme Court have declared the validity of your election.”

(ನಿಮ್ಮ ಚುನಾವಣೆಯನ್ನು ಸಿಂಧು ಎಂದು ಘೋಷಿಸಿದ ಸುಪ್ರೀಂಕೋರ್ಟಿನ ಐದು ಸದಸ್ಯರ ಪೀಠದ ಆದೇಶಕ್ಕೆ ಮೊದಲಿಗೆ ಅಭಿನಂದನೆಗಳು)

ಆ ನಂತರ ಮತ್ತೊಮ್ಮೆ ಆ ಪತ್ರದುದ್ದಕ್ಕೂ ಹೇಗೆ ಆರೆಸ್ಸೆಸ್ ಸರ್ಕಾರದ ಹಾಗೂ ತುರ್ತುಸ್ಥಿತಿಯ ವಿರೋಧಿಯಲ್ಲ ಎಂದು ಮನವರಿಕೆ ಮಾಡಿಕೊಡಲು ಯತ್ನಿಸುವ ದೇವರಸ್ ಅವರು ಕೊನೆಗೆ ಹೇಳುವುದೇನೆಂದರೆ:

ಆರೆಸ್ಸೆಸ್ಸಿನ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಲ್ಲಿ:
"ಲಕ್ಷಾಂತರ ಆರೆಸ್ಸೆಸ್ ಸ್ವಯಂಸೇವಕರ ನಿಸ್ವಾರ್ಥ ಕಾರ್ಯಶಕ್ತಿಯನ್ನು ಸರ್ಕಾರದ ದೇಶಾಭಿವೃದ್ಧಿ ಕೆಲಸಕ್ಕೆ ಬಳಸಬಹುದು"

ಆರ್ಥಾತ್ ಆರೆಸ್ಸೆಸ್ಸಿನ ಮೇಲೆ ನಿಷೇಧವನ್ನು ತೆಗೆದುಹಾಕಿದರೆ ಆರೆಸ್ಸೆಸ್ಸಿನ ಕಾರ್ಯಕರ್ತರು ಇಂದಿರಾಗಾಂಧಿಯವರ ಸರ್ಕಾರದ ಜೊತೆಗೂಡಿ ಕೆಲಸ ಮಾಡುವುದಾಗಿ ಖುಲ್ಲಂಖುಲ್ಲಾ ಆಶ್ವಾಸನೆಯನ್ನು ಸರಸಂಘಚಾಲಕರು ನೀಡುತ್ತಾರೆ.

ಮೂರನೇ ಸರೆಂಡರ್ ಪತ್ರ- 1976 ರ ಫೆಬ್ರವರಿ 24

ಆದರೆ ಇಂದಿರಾ ಸರ್ಕಾರ ಅದನ್ನೂ ಪರಿಗಣಿಸುವುದಿಲ್ಲ. ಆಗ ಇಂದಿರಾಗಾಂಧಿಯವರ ಮೇಲೆ ಪ್ರಭಾವವಿದ್ದ ಹಾಗೂ ಆರೆಸ್ಸೆಸ್ಸಿನ ಸೈದ್ಧಾಂತಿಕ ಮಿತ್ರರೂ ಆಗಿದ್ದ ವಿನೋಭಾ ಭಾವೆಯವರ ಮಧ್ಯಸ್ಥಿಕೆಯನ್ನು ಗೋಗೆರೆಯುತ್ತಾ ಸರಸಂಘಚಾಲಕರು ಮತ್ತೊಂದು ಪತ್ರ ಬರೆಯುತ್ತಾರೆ. ಏಕೆಂದರೆ ಫೆಬ್ರವರಿಯ ಕೊನೆಯ ವೇಳೆಗೆ ಇಂದಿರಾಗಾಂಧಿಯವರು ಭಾವೆಯವರ ಆಶ್ರಮಕ್ಕೆ ಭೇಟಿ ನೀಡುವ ಕಾರ್ಯಕ್ರಮವಿರುತ್ತದೆ. ಹೀಗಾಗಿ ದೇವರಸ್ ಅವರು ಆ ಭೇಟಿಯಲ್ಲಿ ಆರೆಸ್ಸೆಸ್ ನ ಪರವಾಗಿ ಆರೆಸ್ಸೆಸ್ ಮೇಲಿನ ನಿಷೇಧವನ್ನು ತೆಗೆದುಹಾಕಲು ಪ್ರಭಾವ ಬೆರಬೇಕೆಂದು ಗೋಗೆರೆಯುತ್ತಾರೆ. ಹಾಗೂ ಆರೆಸ್ಸೆಸ್ಸಿನ ಮೇಲಿನ ನಿಷೇಧವನ್ನು ತೆಗೆದುಹಾಕಿದಲ್ಲಿ

a condition will prevail as to enable the volunteers of the Sangh to participate in the planned programme of action relating to country's progress and prosperity under the leadership of the prime minister."

ಅಂದರೆ -ಪ್ರಧಾನಿ ಇಂದಿರಾಗಾಂಧಿ ಅವರ ನೇತೃತ್ವದಲ್ಲಿ ಯೋಜಿತವಾದ ದೇಶದ ಅಭಿವೃದ್ಧಿ ಮತ್ತು ಪ್ರಗತಿಯನ್ನು ಸಾಧಿಸುವ ಕಾರ್ಯಕ್ರಮಗಳಲ್ಲಿ ಸಂಘದ ಕಾರ್ಯಕರ್ತರೂ ಭಾಗವಹಿಸಬಹುದು ಎಂದು ಮುಕ್ತವಾಗಿ ಇಂದಿರಾಗಾಂಧಿಯವರ ಸರ್ಕಾರದ ಜೊತೆ ಕೈಗೂಡಿಸುವ ಇರಾದೆಯನ್ನು ಮತ್ತೊಮ್ಮೆ ಪ್ರಕಟಿಸುತ್ತಾರೆ.

ಇದು ತುರ್ತುಪರಿಸ್ಥಿತಿಯಲ್ಲಿ ಆರೆಸ್ಸೆಸ್‌ನ ನಾಯಕರ ನಿಜವಾದ ರೂಪ. ಇಡೀ ದೇಶದಲ್ಲಿ ಇಂದಿರಾಗಾಂಧಿಯವರು ಯೋಜಿತವಾಗಿ ಹಕ್ಕುಗಳ ದಮನವನ್ನು ನಡೆಸುತ್ತಿದ್ದಾಗ, ಪ್ರಜಾತಂತ್ರದ ಕಗ್ಗೊಲೆ ನಡೆಯುತ್ತಿದ್ದಾಗ ಆರೆಸ್ಸೆಸ್ ಮತ್ತು ಜನಸಂಘ ಹಿಂಬಾಗಿಲ ಮೂಲಕ ಆ ದಮನಕಾಂಡಕ್ಕೆ ಜೊತೆಯಾಗುವ ಆಶ್ವಾಸನೆ ಕೊಟ್ಟು ಹೊರಬರುವ ಯತ್ನದಲ್ಲಿತ್ತು.

ಇದರ ಮುಂದುವರೆಕೆಯಾಗಿಯೇ ಉತ್ತರಪ್ರದೇಶದ ಜನಸಂಘವು ತುರ್ತುಸ್ಥಿತಿಯ ಮೊದಲನೇ ವಾರ್ಷಿಕೋತ್ಸವದ ದಿನವಾದ 1976 ರ ಜೂನ್ 25 ರಂದು ಇಂದಿರಾ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ಮಾತ್ರವಲ್ಲದೆ ಯಾವುದೇ ಸರ್ಕಾರ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೆಂದು ಪ್ರತಿಜ್ಞೆ ತೊಟ್ಟರು. ಅಷ್ಟು ಮಾತ್ರವಲ್ಲ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ 34 ಜನಸಂಘದ ನಾಯಕರು ಇಂದಿರಾಗಾಂಧಿ ಕಾಂಗ್ರೆಸ್ಸನ್ನು ಸೇರಿಕೊಂಡರು.

ಇದೆಲ್ಲದರ ಕ್ಲೈಮಾಕ್ಸೇ 1977 ರ ಜನವರಿ ಕೊನೆಯ ವೇಳೆಗೆ ಇಂದಿರಾ ಸರ್ಕಾರದ ಜೊತೆ ಒಪ್ಪಂದಕ್ಕೆ ಬಂದು ಆರೆಸ್ಸೆಸ್ ಸಹಿ ಹಾಕಲು ಸಿದ್ಧವಾಗಿದ್ದ ಸರೆಂಡರ್ ಡಾಕ್ಯುಮೆಂಟ್.

ಅದಕ್ಕೆ ಮುಂಚೆಯೇ ಇಂದಿರಾಗಾಂಧಿಯವರು ತುರ್ತುಸ್ಥಿತಿಯನ್ನು ಹಿಂತೆಗೆದುಕೊಂಡಿದ್ದರಿಂದ ಆ ಸರೆಂಡರ್ ದಸ್ತಾವೇಜಿಗೆ ಸಹಿಹಾಕುವ ಅಗತ್ಯ ಆರೆಸ್ಸೆಸ್ಸಿಗೆ ಬೀಳಲಿಲ್ಲ.. ಅಷ್ಟೆ!

ಅ ನಂತರವೂ ಬಾಳಾಸಾಹೇಬ್ ದೇವರಸ್ ಅವರಿಗೆ ಇಂದಿರಾಗಾಂಧಿಯವರು ಅಚ್ಚುಮೆಚ್ಚಿನ ನಾಯಕರಾಗಿದ್ದರು.

1980 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾಗಾಂಧಿಯವರು ತಮ್ಮ ಹಿಂದಿನ "ಸಮಾಜವಾದಿ-ಸೆಕ್ಯುಲಾರ್" ನೀತಿಗಳಿಗೆಲ್ಲಾ ತೊರೆದಿದ್ದರು. ಕಾಶ್ಮೀರ ಮತ್ತು ಪಂಜಾಬಿನಲ್ಲಿ "ಹಿಂದು ಅಪಾಯದಲ್ಲಿದ್ದಾನೆ, ಹಿಂದೂ ಅಪಾಯದಲ್ಲಿದ್ದಾನೆ ಎಂದರೆ ದೇಶ ಅಪಾಯದಲ್ಲಿದೆ ಹೀಗಾಗಿ ದೇಶವನ್ನು ರಕ್ಷಿಸಲು ಬಲಿಷ್ಟ ನಾಯಕತ್ವದ ಅಗತ್ಯವಿದೆ" ಎಂಬ ಅಪಾಯಕಾರಿ ಹಿಂದೂತ್ವ ರಾಜಕೀಯವನ್ನು ಪ್ರರಂಭಿಸಿದ ಇಂದಿರಾ ಗಾಂಧಿಯವರನ್ನು ಸರಸಂಘಚಾಲಕ ಬಹಿರಂಗವಾಗಿ ಕೊಂಡಾಡಲು ಪ್ರಾರಂಭಿಸಿದರು.

ಆರೆಸ್ಸೆಸ್ಸಿನ ಅಜೆಂಡಾಗಳನ್ನು ಇಂದಿರಾ ಅವರೇ ಜಾರಿ ಮಾಡುತ್ತಿರುವಾಗ ತಮಗೆ ಬಿಜೆಪಿ ಅನಿವಾರ್ಯವಲ್ಲ ಎಂಬ ಘೋಷಣೆಯನ್ನು ಮಾಡಿದರು. ಇಂದಿರಾ ಗಾಂಧಿಯವರ ಹತ್ಯೆಯಾದ ನಂತರ ನಡೆದ ಸಿಖ್ ಹತ್ಯಾಕಾಂಡದಲ್ಲಿ ತಾನೂ ಭಾಗವಹಿಸಿ ಆರೆಸ್ಸೆಸ್ ಋಣ ಸಂದಾಯ ಮಾಡಿತು.

ಇದು ಆರೆಸ್ಸೆಸ್. ಇದು ಬಿಜೆಪಿ. ಇದು ಇವರ ಪ್ರಜಾತಂತ್ರ ಪ್ರೇಮ!

ಈ ಬಾರಿ ತುರ್ತುಸ್ಥಿತಿಯನ್ನು ನೆನೆಯುವಾಗ ಈ ಐತಿಹಾಸಿಕ ದ್ರೋಹ, ನಯವಂಚನೆ, ಬಿಜೆಪಿ-ಕಾಂಗ್ರೆಸ್ ಕವಲುಗಳ ಸೀಮಿತ ಭಿನ್ನತೆ..ಇತ್ಯಾದಿಗಳನ್ನು ಮರೆಯದೆ ನೆನೆಪಿಸಿಕೊಳ್ಳೋಣ. ಮತ್ತು ಅದರಿಂದ ಪಾಠ ಕಲಿತು ಇಂದಿನ ಮೋದಿ ಎಮರ್ಜೆನ್ಸಿಯ ವಿರುದ್ಧ ನೈಜ ಹೋರಾಟ ಪ್ರಾರಂಭಿಸೋಣ!

Advertisement
Advertisement
Recent Posts
Advertisement