Advertisement

ಕೋಮುವಾದಿಗಳು ಅದೆಷ್ಟೇ ಪ್ರಚೋದಿಸಿದರೂ ಭಾರತವನ್ನು ಹಿಟ್ಲರ್‌ನ ಜರ್ಮನಿಯನ್ನಾಗಿಸಲು ಸಾಧ್ಯವಿಲ್ಲ!

Advertisement

ಹಬ್ಬಗಳು ಅಂತಃಕರಣ ಅರಳಿಸಲಿ, ಕೆರಳಿಸದಿರಲಿ!

ಬರಹ: ಸನತ್ ಕುಮಾರ ಬೆಳಗಲಿ (ಲೇಖಕರು ಹಿರಿಯ ಅಂಕಣಕಾರರು ಹಾಗೂ ಜನಪರ ಚಿಂತಕರು.)

ಶ್ರಾವಣ ಮಾಸದ ಆರಂಭದೊಂದಿಗೆ ಸಾಲು ಸಾಲಾಗಿ ಹಬ್ಬಗಳು ಬರುತ್ತವೆ. ನಾವು ಚಿಕ್ಕವರಿದ್ದಾಗ ಹಬ್ಬಗಳು ಬಂದರೆ ಮನೆಯಲ್ಲಿ, ಊರಿನಲ್ಲಿ ಸಂಭ್ರಮದ ವಾತಾವರಣ ಇರುತ್ತಿತ್ತು. ಈಗಲೂ ಇದೆ. ಆದರೆ, ಗಣೇಶೋತ್ಸವದಂಥ ಕೆಲ ಹಬ್ಬಗಳು ಈಗ ಕೆಲ ಕಡೆ ರಾಜಕಾರಣಕ್ಕೆ ಬಳಕೆ ಆಗುತ್ತಿರುವ ಕಾರಣ ಸಂಭ್ರಮಕ್ಕಿಂತ ಆತಂಕಕ್ಕೆ ಕಾರಣವಾಗುತ್ತಿವೆ.

ಹುಬ್ಬಳ್ಳಿಯಂಥ ನಗರದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಬೇಕಾಗುತ್ತದೆ. ಹಬ್ಬಗಳು ಮನುಷ್ಯರನ್ನು ಜೊತೆಗೂಡಿಸುವ ಕೊಂಡಿಯಾಗಬೇಕೆ ಹೊರತು ಒಡೆಯುವ ಕಿಡಿಯಾಗಬಾರದು. ಮನುಷ್ಯರನ್ನು ಕೋಮು ಹೆಸರಿನಲ್ಲಿ ಒಡೆಯುವ ಚುನಾವಣೆಯ ಓಟಿನ ರಾಜಕಾರಣಕ್ಕೆ ಗಣೇಶೋತ್ಸವ ಅಥವಾ ಯಾವ ಹಬ್ಬವಾಗಲಿ ಬಳಕೆಯಾಗಬಾರದು.

ನಾವೆಲ್ಲ ಚಿಕ್ಕವರಿದ್ದಾಗ ಗಣೇಶೋತ್ಸವ ಅಂದರೆ ಸಾಹಿತ್ಯೋತ್ಸವದಂತೆ ಇರುತಿತ್ತು. ಅನಕೃ, ಬೀಚಿ, ಬಸವರಾಜ ಕಟ್ಟೀಮನಿ, ಪಾಪು, ಬೆಟಗೇರಿ ಕೃಷ್ಣ ಶರ್ಮ, ತರಾಸು, ರಾವ ಬಹಾದ್ದೂರ, ಸಿದ್ದಯ್ಯ ಪುರಾಣಿಕ ಅವರಂಥವರನ್ನು ಕರೆಸಿ ಭಾಷಣ ಮಾಡಿಸುತ್ತಿದ್ದರು. ಈಗ ಗಣೇಶೋತ್ಸವ ಸ್ವರೂಪ ಬದಲಾಗಿದೆ. ಕೂಡಿ ಆಚರಿಸುವ ಹಬ್ಬಕ್ಕೂ ಪೊಲೀಸ್ ಕಾವಲು ಬೇಕಾಗಿದೆ. ಈ ಬಾರಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಬಿಜೆಪಿ ಜನಪ್ರತಿನಿಧಿಗಳೇ ಪಟ್ಟು ಹಿಡಿದಿದ್ದರಿಂದ ಪರಿಸ್ಥಿತಿ ಗಂಭೀರವಾಗಿತ್ತು.

ಹುಬ್ಬಳ್ಳಿಯ ಈದ್ಗಾ ಮೈದಾನ ಮುಂಚಿನಿಂದಲೂ ಸಂಘ ಪರಿವಾರದ ರಾಜಕೀಯ ಲಾಭಗಳಿಕೆಗೆ ಬಳಕೆಯಾಗುತ್ತಿದೆ. ಈ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಸಂಬಂಧ ಗಲಾಟೆಯಾಗಿ ತಿಂಗಳಾನುಗಟ್ಟಲೇ ಕರ್ಫ್ಯೂ ಹೇರಲ್ಪಟ್ಟಾಗ ನಾನು ಹುಬ್ಬಳ್ಳಿಯಲ್ಲಿ ಇದ್ದೆ‌. ಆಗ ದೇಶಪಾಂಡೆ ನಗರದಲ್ಲಿ ಪೊಲೀಸ್ ಗೋಲಿಬಾರ್ ನಡೆದು ಐವರು ಯುವಕರು ಬೀದಿ ಹೆಣವಾಗಿದ್ದರು. ಅವರ ಮನೆಗಳ ದೀಪಗಳು ಆರಿ ಹೋದವು. ಇದರ ಲಾಭವಾಗಿದ್ದು ಬಿಜೆಪಿಗೆ. ನಂತರದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತಲೇ ಬಂತು.

ಹಿಂದೂ–ಮುಸ್ಲಿಂ ವಿಭಜನೆಯಿಂದ ಹಿಂದೂ ಓಟ್ ಬ್ಯಾಂಕ್ ನಿರ್ಮಾಣವಾಯಿತು. ಹುಬ್ಬಳ್ಳಿ ಶಾಸಕ ಸ್ಥಾನ,ಲೋಕಸಭಾ ಸ್ಥಾನ, ಮಹಾನಗರ ಪಾಲಿಕೆ ಹೀಗೆ ಎಲ್ಲೆಡೆ ಬಿಜೆಪಿ ಗೆಲುವು ಸಾಧಿಸಿತು. ಕೊನೆಗೆ ಈ ವಿವಾದ ಶಾಂತಿಯುತ ವಾಗಿ ಬಗೆಹರಿಯಿತು. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡಲಾಗುತ್ತದೆ.

ಈ ವಿವಾದ ತಣ್ಣಗಾಗುವುದರಲ್ಲಿ ಕಳೆದ ವರ್ಷ ಈದ್ಗಾ ಮೈದಾನದಲ್ಲಿ ಗಣೇಶೋತ್ಸವದಂದು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕೋಮುವಾದಿ ಶಕ್ತಿಗಳು ಹಠ ಹಿಡಿದವು. ಆಗ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರವಿತ್ತು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ವಶದಲ್ಲಿತ್ತು . ಹೀಗಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ದೊರಕಿತು. ಆದರೆ, ಈ ಬಾರಿ ಅಂಜುಮನ್ ಸಂಸ್ಥೆಯವರು ನ್ಯಾಯಾಲಯದ ಮೊರೆ ಹೋದರು. ಪಾಲಿಕೆ ಸಮ್ಮತಿಯನ್ನು ನೀಡಿದರೂ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ತಕ್ಷಣಕ್ಕೆ ಒಪ್ಪಿಗೆ ನೀಡಲಿಲ್ಲ. ಕೊನೆಗೆ ಪಾಲಿಕೆ ಆಯುಕ್ತರು ಕೆಲ ಷರತ್ತುಗಳೊಂದಿಗೆ ಪರವಾನಗಿ ನೀಡಿದರು.

ಎಲ್ಲಾ ಸುಗಮವಾಯಿತು ಎನ್ನುವುದು ಕೆಲವರಿಗೆ ಇಷ್ಟವಾಗಲಿಲ್ಲ. ಈದ್ಗಾ ಮೈದಾನದ ಗಣೇಶ ಮೂರ್ತಿ ವಿಸರ್ಜನೆ ದಿನ ಬಿಜಾಪುರದ ಪ್ರಚೋದನಾಕಾರಿ ಭಾಷಣಗಳಿಗೆ ಹೆಸರಾದ ಬಸವರಾಜ ಪಾಟೀಲ (ಯತ್ನಾಳ) ಅವರನ್ನು ಭಾಷಣಕ್ಕೆ ಕರೆಸಿದರು. ಆತ ಪ್ರಚೋದನಾಕಾರಿ ಭಾಷಣ ಮಾಡಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಮೋದ ಮುತಾಲಿಕರು ಮಾತನಾಡಿ, ‘ಮುಂದಿನ ವರ್ಷ ಮಸೀದಿಯಲ್ಲಿ ಗಣಪತಿ ಕೂರಿಸುತ್ತೇವೆ’ ಎಂದು ಹೇಳಿದ್ದರಿಂದ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಾರಿ ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನ ಗಣೇಶ ವಿವಾದಕ್ಕೆ ಇನ್ನೊಂದು ಕಾರಣವಿದೆ. ಈ ಬಾರಿ ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿಯಿಂದ ಹೊರಗೆ ಬಂದುದರಿಂದ ವೀರಶೈವ ಲಿಂಗಾಯತರ ಪ್ರಾಬಲ್ಯದ‌ ಪ್ರದೇಶದಲ್ಲಿ ಸಂಘಪರಿವಾರದ ಪ್ರಭಾವ ಕ್ಷೀಣಿಸುತ್ತಿದೆ. ಸತತವಾಗಿ ಎರಡು ದಶಕಗಳಿಂದ ಲೋಕಸಭೆಗೆ ಚುನಾಯಿತರಾಗಿ ಬರುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಈ ಸಲ ಚುನಾವಣೆಯನ್ನು ಎದುರಿಸಲು ಪ್ರಯಾಸ ಪಡಬೇಕಾಗಿದೆ. ಹೀಗಾಗಿ ಬಿಜೆಪಿ ತನ್ನ ನೆಲೆಯನ್ನು ಉಳಿಸಿಕೊಳ್ಳಲು ಈದ್ಗಾ ವಿವಾದಕ್ಕೆ ತುಪ್ಪ ಸುರಿಯಿತು.

ಈ ವರೆಗೆ ಸಂಘಪರಿವಾರದ ನಿಯಂತ್ರಣ ದಲ್ಲಿ ಇರುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಲ ಈಗ ಜಗದೀಶ ಶೆಟ್ಟರ್ ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ಈದ್ಗಾ ಗಣೇಶೋತ್ಸವವನ್ನು ಬಿಜೆಪಿ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿತು.‌ ಇದು ದೇಹವೇ ದೇಗುಲ ಎಂದು ಸಾರಿದ ಬಸವಣ್ಣನವರ ಕರ್ನಾಟಕದ ಒಂದು ನಗರದ ಇಂದಿನ ಪರಿಸ್ಥಿತಿ. ದೇವರು ಸರ್ವಾಂತರ್ಯಾಮಿ ಎಂದು ಹೇಳುವವರು, ಅಣುರೇಣು ತ್ರಣಕಾಷ್ಟದಲ್ಲಿ ದೇವರನ್ನು ಕಾಣುವವರು ಯಾವುದೇ ಒಂದು ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಹಠ ಹಿಡಿಯುವುದಿಲ್ಲ.

ನಿಜವಾದ ಧಾರ್ಮಿಕರು, ದೈವ ಶ್ರದ್ಧೆ ಇರುವವರಿಗೆ ಮನಶ್ಶಾಂತಿಗೆ ದೇವರು ಬೇಕು. ಆದರೆ ದೇವರನ್ನು ಓಟಿನ ರಾಜಕಾರಣಕ್ಕೆ ಬಳಸಿಕೊಳ್ಳಲು ಹೊರಟವರಿಗೆ, ಧರ್ಮವನ್ನು ಮನಸ್ಸು ಒಡೆಯಲು ಉಪಯೋಗಿಸುವವರಿಗೆ ಸಾಮಾಜಿಕ ಶಾಂತಿಯನ್ನು ಕದಡುವದೇ ಲಾಭದಾಯಕ ದಂಧೆಯಾಗಿದೆ. ಇಂಥವರೇ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ, ಕೋಟಿ ಕೊಳ್ಳೆ ಹೊಡೆದು ಅದನ್ನು ಮುಚ್ಚಿಕೊಳ್ಳಲು ದೇವರನ್ನು, ಧರ್ಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ನಾನು ಕಳೆದ ಎರಡು ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರೂ ಕಲಬುರಗಿ ಮತ್ತು ಹುಬ್ಬಳ್ಳಿಯ ಒಡನಾಟವಿದೆ. ಈ ನಗರಗಳಲ್ಲಿ ಈಗಲೂ ತಿಂಗಳಾನುಗಟ್ಟಲೇ ಕಳೆಯುತ್ತಿರುವೆ. ಒಂದು ಕಾಲದಲ್ಲಿ ಹುಬ್ಬಳ್ಳಿ ಬೆಂಗಳೂರು ನಂತರದ ರಾಜ್ಯದ ದೊಡ್ಡ ನಗರವೆಂದು ಹೆಸರಾಗಿತ್ತು. ಇದನ್ನು 'ಚೋಟಾ ಮುಂಬಯಿ' ಎಂದು ಕರೆಯುತ್ತಿದ್ದರು.

ಕರ್ನಾಟಕದ ಅದರಲ್ಲೂ ಉತ್ತರ ಕರ್ನಾಟಕದ ಆಯಕಟ್ಟಿನ ಜಾಗದಲ್ಲಿ ಇರುವ ಹುಬ್ಬಳ್ಳಿ ಸುತ್ತಮುತ್ತಲಿನ ಕಾರವಾರ, ಶಿರಸಿ, ದಾವಣಗೆರೆ, ಬಾಗಲಕೋಟ, ಬಿಜಾಪುರ, ಗದಗ,ಹಾವೇರಿ, ಬೆಳಗಾವಿ, ಹೊಸಪೇಟೆ, ಹಂಪಿ, ಗೋಕರ್ಣ, ಕೊಪ್ಪಳ ಮುಂತಾದ ಐತಿಹಾಸಿಕ ತಾಣಗಳಿಂದ ನೂರು ಕಿ.ಮಿಯಷ್ಟು ಸಮೀಪದಲ್ಲಿ ಇದೆ. ಹೀಗಾಗಿ ಸುತ್ತಲಿನ ಐದಾರು ಜಿಲ್ಲೆಗಳ ಜನರು ಕಳೆದ 70 ವರ್ಷಗಳಿಂದ ವ್ಯಾಪಾರ ವಹಿವಾಟುಗಳಿಗಾಗಿ ಹುಬ್ಬಳ್ಳಿಗೆ ಬರುತ್ತಾರೆ.

ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳು. ಹುಬ್ಬಳ್ಳಿ ವಾಣಿಜ್ಯ ಕೇಂದ್ರವಾದರೆ ಧಾರವಾಡ ಶೈಕ್ಷಣಿಕ ಕೇಂದ್ರವಾಗಿದೆ. ಆದರೆ, ಇಂಥ ಹುಬ್ಬಳ್ಳಿಯಲ್ಲಿ ರಾಜಕೀಯ ಕಾರಣಗಳಿಗಾಗಿ ಎಪ್ಪತ್ತರ ದಶಕದಿಂದ ಆಗಾಗ ಕೋಮು ಗಲಭೆಗಳು ನಡೆಯುತ್ತ ಬಂದುದರಿಂದ ವ್ಯಾಪಾರ, ವಹಿವಾಟುಗಳಿಗೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಇಲ್ಲಿನ ಬಹುತೇಕ ವ್ಯಾಪಾರ ಪಕ್ಕದ ಗದಗ ಮತ್ತು ಹಾವೇರಿಗಳಿಗೆ ಸ್ಥಳಾಂತರಗೊಂಡಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಯಾವುದೇ ಹೊಸ ಉದ್ದಿಮೆ ಇಲ್ಲಿ ಆರಂಭವಾಗಿಲ್ಲ. ಇಲ್ಲಿ ಉದ್ಯಮ ಸ್ಥಾಪಿಸಲು ಉದ್ಯಮಿಗಳು ಹಿಂಜರಿಯುತ್ತಾರೆ. ಸದಾ ಗಲಾಟೆ, ಕರ್ಫ್ಯೂ ಕಿರಿಕಿರಿಯಿಂದ ಕೈಗಾರಿಕೆಗಳು ಇಲ್ಲಿ ಬರಲಿಲ್ಲ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಇತ್ತೀಚೆಗೆ ಮೆಡಿಕಲ್ ಕಾಲೇಜು ಆರಂಭಿಸಿದ್ದು ಕೂಡ ಧಾರವಾಡದಲ್ಲಿ. ಯಾಕೆಂದರೆ ಧಾರವಾಡ ಇಂದಿಗೂ ಯಾವುದೇ ಕೋಮು ಪ್ರಚೋದನೆಗೆ ಒಳಗಾಗದೆ ಶಾಂತ ನಗರವಾಗಿದೆ.

ಹುಬ್ಬಳ್ಳಿ ಮಾತ್ರವಲ್ಲ ಕೆಲ ನಗರಗಳಲ್ಲಿ ಹಬ್ಬಗಳು ಬಂದವೆಂದರೆ ಆತಂಕ ಉಂಟಾಗುತ್ತದೆ. ಎಲ್ಲಿ, ಯಾರು, ಯಾವಾಗ, ಯಾಕೆ ಗಲಾಟೆ ಆರಂಭಿಸುತ್ತಾರೋ, ಎಲ್ಲೆಲ್ಲಿ ಮೆರವಣಿಗೆಗಳು ಸಾಗಿ, ಯಾವ ಪ್ರಾರ್ಥನಾಲಯಗಳ ಮುಂದೆ ಕರ್ಕಶ ಡಿಜೆ ಹಾಕಿ, ಅದ್ಯಾವುದೋ ದ್ವೇಷದ ಹಾಡು ಹಾಕಿ, ಕೈಯಲ್ಲಿ ಆಯುಧ ಹಿಡಿದುಕೊಂಡು ಗಲಾಟೆ ಮಾಡುತ್ತಾರೋ ಎಂದು ಹೆದರಿಕೆ ಉಂಟಾಗುತ್ತದೆ. ನಾವು ಚಿಕ್ಕವರಿದ್ದಾಗ ಹಬ್ಬಗಳು ಬೇರೆ-ಬೇರೆ ಸಮುದಾಯದ ಜನರನ್ನು ಕೂಡಿಸುವ ಕೆಲಸ ಮಾಡುತ್ತಿದ್ದವು. ಈಗ ಹಬ್ಬಗಳೇ ಕೋಮು ವಿಭಜನೆಯ ಆಯುಧಗಳಾಗಿವೆ. ಅದರಲ್ಲೂ ಈ ಸಾರ್ವಜನಿಕ ಉತ್ಸವಗಳಲ್ಲಿ ಪರಧರ್ಮಗಳನ್ನು ಹೀಯಾಳಿಸುವುದು, ಪರ ಸಮುದಾಯಗಳನ್ನು ಟಾರ್ಗೇಟ್ ಮಾಡುವುದು, ಮತಾಂಧ, ತಲೆಕೆಟ್ಟ,ಅವಿವೇಕಿಗಳನ್ನು ಕರೆಸಿ ದ್ವೇಷ ಭಾಷಣ ಮಾಡಿಸುವುದು ಸಾಮಾನ್ಯವಾಗಿದೆ. ಸರಕಾರ ಕೈಯಲ್ಲಿ ಇದ್ದಾಗಲೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗದವರಿಗೆ, ಹಗರಣಗಳಲ್ಲಿ ಮುಳುಗಿದವರಿಗೆ ಮತ್ತೆ ಚುನಾವಣೆಯನ್ನು ಗೆಲ್ಲಲು ಈ ಹಬ್ಬಗಳು ದುರುಪಯೋಗವಾಗುತ್ತಿವೆ.

ಹಾಗೆ ನೋಡಿದರೆ ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದ ಕಲ್ಯಾಣ ಕರ್ನಾಟಕದ ಕಲಬುರಗಿ ಈಗ ಹುಬ್ಬಳ್ಳಿಗೆ ಸರಿ ಸಾಟಿಯಾಗಿ ಅದನ್ನೂ ಮೀರಿಸಿ ಬೆಳೆಯುತ್ತಿದೆ. ಅಲ್ಲಿ ವಿಮಾನ ನಿಲ್ದಾಣವೂ ಬಂದಿದೆ. ವ್ಯಾಪಾರ ವಹಿವಾಟಗಳಿಗೆ ಮಾತ್ರವಲ್ಲ ಶೈಕ್ಷಣಿಕ ,ಆರೋಗ್ಯ ಸೌಕರ್ಯಗಳಿಗೆ ಈಗ ಹೆಸರಾಗಿದೆ. ಇದಕ್ಕೆ ಕಾರಣ ಅಲ್ಲಿನ ಕೋಮು ಸೌಹಾರ್ದ. ಅಲ್ಲಿ ಮುಸ್ಲಿಮರು, ಲಿಂಗಾಯತರು, ಕೋಳಿ ಸಮಾಜದವರು, ದಲಿತರು, ಕ್ರೈಸ್ತರು, ಜೈನರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕುತ್ತಿದ್ದಾರೆ. ಇದು ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರ ಕರ್ಮಭೂಮಿಯಾದುರಿಂದ ಜನರ ನಡುವೆ ಪ್ರೀತಿ, ವಿಶ್ವಾಸ, ಬಾಂಧವ್ಯಕ್ಕೆ ಕೊರತೆಯಿಲ್ಲ. ಯಾವ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ಇರುತ್ತದೋ ಆ ಪ್ರದೇಶ ಅಭಿವೃದ್ಧಿಯತ್ತ ದಾಪುಗಾಲಿಡುತ್ತದೆ‌. ಇದಕ್ಕೆ ಕಲಬುರಗಿ, ಬೀದರ, ರಾಯಚೂರು ಪ್ರತ್ಯಕ್ಷ ಉದಾಹರಣೆ.

ಇಲ್ಲಿಯೂ ಜನರ ಮನಸ್ಸಿನಲ್ಲಿ ಹುಳಿ ಹಿಂಡಿ ಕೋಮು ಕಲಹ ಬೆಂಕಿ ಹಚ್ಚಲು ಕೋಮುವಾದಿ ಶಕ್ತಿಗಳು ಹಗಲೂ ರಾತ್ರಿ ಮಸಲತ್ತು ಮಾಡುತ್ತಿದ್ದರೂ ಕಲ್ಯಾಣ ಕರ್ನಾಟಕದ ಜನ ಅವರಿಗೆ ಮರುಳಾಗಿಲ್ಲ. ಮಾರ್ಚ್, ಎಪ್ರಿಲ್, ಮೇ, ಜೂನ್ ಸೇರಿ ಬಹುತೇಕ ತಿಂಗಳು ಕೆಂಡದಂಥ ಬಿಸಿಲಿದ್ದರೂ ಜನರ ಮನಸ್ಸು ಮಾತ್ರ ತಣ್ಣಗಿದೆ‌. ಇದಕ್ಕೆ ಕಾರಣ ಇಲ್ಲಿ ಬಸವಣ್ಣನವರ ಮತ್ತು ಸೂಫಿ ಸಂತ ಬಂದೇ ನವಾಜರ ಪ್ರಭಾವ, ಬೌದ್ಧ ಧರ್ಮದ ಜೀವಸೆಲೆ, ದಲಿತ ಮತ್ತು ಎಡಪಂಥೀಯ ಚಳವಳಿಗಳು ಹಾಗೂ ವೀರೇಂದ್ರ ಪಾಟೀಲ‌, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಶ್ರೀನಿವಾಸ ಗುಡಿ, ಗಂಗಾಧರ ನಮೋಶಿ ಅವರಂಥ ನಾಯಕತ್ವದ ಪ್ರಭಾವವೂ ಕಾರಣ ಎಂದರೆ ತಪ್ಪಲ್ಲ.

ಇತ್ತೀಚೆಗೆ ಮುಂಬೈಗೆ ಹೋಗಿದ್ದೆ. ಅಲ್ಲಿಯೂ ಗಣೇಶೋತ್ಸವ ವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ, ಎಲ್ಲಿಯೂ ಕೋಮು ಕಲಹದ ಕಿಡಿ ಕಾಣುವದಿಲ್ಲ. ಪರಸ್ಪರ ಜಗಳವಾಡಲು ಕೂಡ ಸಮಯವಿಲ್ಲದ ಈ ಕಾಸ್ಮೋಪಾಲಿಟಿನ್ ನಗರದಲ್ಲಿ ಗಲಭೆಗಳು ನಡೆದೇ ಇಲ್ಲವೆಂದಲ್ಲೂ ನಡೆದರೂ ಬಹುಬೇಗ ಅದರಿಂದ ಹೊರಗೆ ಬಂದು ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮುಳುಗುತ್ತಾರೆ. ಶಿವಸೇನೆಯ ಬಾಳ ಠಾಕ್ರೆ ಕೂಡ ಭಾಷಣದಲ್ಲಿ ಏನೇ ಮಾತಾಡಿದರೂ ಮುಸ್ಲಿಂ ದ್ವೇಷಿಯಾಗಿರಲಿಲ್ಲ ಎಂದು ಮುಂಬಯಿನ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ನನಗೆ ಹೇಳಿದರು. ಕೋಮುವಾದಿ ಗಳು ಎಷ್ಟೇ ಪ್ರಚೋದನೆ ಮಾಡಿದರೂ ಭಾರತವನ್ನು ಹಿಟ್ಲರ್ ಜರ್ಮನಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದು ಸಾಬೀತಾಗುತ್ತಲೇ ಇದೆ.
ಹುಬ್ಬಳ್ಳಿಯಂಥ ನಗರದಲ್ಲಿ ಶಾಂತಿ ಪಾಲನೆ ಮಾಡಬೇಕಾದ ಶಾಸಕರೇ ಪ್ರಚೋದನಾಕಾರಿ ಚಟುವಟಿಕೆಗಳಲ್ಲಿ ತೊಡಗಿದರೂ ಜನಸಾಮಾನ್ಯರು ಮಾತ್ರ ತಮ್ಮ ಪಾಡಿಗೆ ತಾವಿದ್ದರು.ಉಳಿದಂತೆ ಕರ್ನಾಟಕದ ಬೇರೆ ಊರುಗಳಲ್ಲಿ ಮುಸಲ್ಮಾನ ಸಮಾಜದ ಗಣ್ಯ ವ್ಯಕ್ತಿಗಳೇ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರಾಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಉದಾಹರಣೆಗಳು ಸಾಕಷ್ಟಿವೆ. ವ್ಯಾಪಾರಿಗಳಿಗೂ ತಮ್ಮ ವ್ಯಾಪಾರ, ವಹಿವಾಟು ನಿರಾತಂಕವಾಗಿ ನಡೆಯಬೇಕು. ಉದ್ಯಮಿಗಳಿಗೆ ತಮ್ಮ ಉದ್ಯಮಗಳಿಗೆ ಧಕ್ಕೆ ಆಗಬಾರದು. ಹೀಗಾಗಿ ಕೋಮುವಾದಿ ಶಕ್ತಿಗಳಿಗೆ ನಿರಂತರವಾಗಿ ದ್ವೇಷದ ಬೆಂಕಿಯನ್ನು ಆರದಂತೆ ಇಡಲು ಸಾಧ್ಯವಿಲ್ಲ. ಆದರೆ ಕೆಲ ಕಾಲ ಅವರು ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಾರೆ ಎಂಬುದೂ ನಿಜ.

ಇವರೆಷ್ಟೇ ಪ್ರಚೋದನೆ ಮಾಡಿದರೂ ಹಬ್ಬಗಳ ಸ್ವರೂಪ ಬದಲಾಗುತ್ತಿದೆ. ದೀಪಾವಳಿ ಬರೀ ಹಿಂದುಗಳ ಹಬ್ಬವಾಗಿ ಉಳಿದಿಲ್ಲ. ಮೊಹರಮ್ ಅಂತೂ ಮೊದಲಿನಿಂದಲೂ ಮುಸಲ್ಮಾನರ ಮಾತ್ರವಲ್ಲ ಎಲ್ಲರ ಹಬ್ಬವಾಗಿದೆ.ನಮ್ಮ ಉತ್ತರ ಕರ್ನಾಟಕದಲ್ಲಿ ಲಿಂಗಾಯತರು, ಕುರುಬರು, ನಾಯಕರು, ದಲಿತರು ಸಂಭ್ರಮದಿಂದ ಮೊಹರಮ್ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಕ್ರಿಸ್ಮಸ್ ಕೂಡ ಈಗ ಕ್ರೈಸ್ತ ರ ಹಬ್ಬ ಮಾತ್ರವಲ್ಲ ,ದೀಪಾವಳಿ ಯ ಬೆಳಕು,ಕ್ರಿಸ್ಮಸ್ ನ ಸಾಂತಾಕ್ಲಾಜ್,ರಮಜಾನ್ ನಾನಾ ವಿಧದ ಭಕ್ಷ ಭೋಜನಗಳು ಯಾರಿಗೆ ಬೇಡ? ಯಾವುದೇ ಹಬ್ಬ ಬರಲಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ ಚೆನ್ನಾಗಿ ನಡೆಯಬೇಕು. ಜನರಿಗೂ ಸಂಭ್ರಮ ಬೇಕು.

ಹೀಗಾಗಿ ಹಬ್ಬಗಳನ್ನು ದುರುಪಯೋಗ ಮಾಡಿಕೊಳ್ಳುವ ರಾಜಕೀಯ ದಂಧೆ ಬಹಳ ಕಾಲ ನಡೆಯುವುದಿಲ್ಲ. ಗಣೇಶನ ಹೆಸರಿನಲ್ಲಿ ಗಲಾಟೆ ಮಾಡುವವರಿಗೆ ಗಣೇಶನ ಮೇಲೆ ಭಕ್ತಿಯಾಗಲಿ,ಶ್ರದ್ಧೆಯಾಗಲಿ ಇರುವುದಿಲ್ಲ. ಓಟಿಗಾಗಿ ಇಂಥ ಆಟಗಳನ್ನು ಅವರು ಆಡುತ್ತಾರೆ. ಅದು ಬಹಳ ದಿನ ನಡೆಯುವುದಿಲ್ಲ.

ಕೃಪೆ: ಪ್ರಚಲಿತ ಅಂಕಣ ವಾರ್ತಾಭಾರತಿ 25.09.23

Advertisement
Advertisement
Recent Posts
Advertisement