Advertisement

ಕಾಂಗ್ರೆಸ್ ಮಾಡಿದ್ದ ಕ್ರಾಂತಿಯನ್ನು ಬಿಂಬಿಸುವ 'ಕಾಟೇರ' ಸಿನೆಮಾ!

Advertisement

ರಾಕ್ ಲೈನ್ ವೆಂಕಟೇಶ್ ನಿರ್ಮಿಸಿ, ತರುಣ್ ಸುಧೀರ್ ನಿರ್ದೇಶಿಸಿದ್ದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ಚಿತ್ರ ಸಿನಿಪ್ರಿಯರ ವಲಯದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ ಮತ್ತು ಈ ಚಿತ್ರ ನಿರೀಕ್ಷೆಗೂ ಮೀರಿ ಚಿತ್ರರಸಿಕರ ಮನವನ್ನು ಗೆದ್ದಿದೆ. 29ನೇ ಡಿಸೆಂಬರ್ 2023 ರಂದು ತೆರೆಕಂಡಿರುವ 'ಕಾಟೇರ' ಸಿನೇಮಾದ ತಾರಾಗಣದ ಮುಖ್ಯ ಪಾತ್ರದಲ್ಲಿ ದರ್ಶನ್, ಆರಾಧನಾ, ಜಗಪತಿ ಬಾಬು, ಅವಿನಾಶ್‌, ಶ್ರುತಿ, ಕುಮಾರ್‌ ಗೋವಿಂದ್, ವೈಜನಾಥ ಬಿರಾದಾರ್‌, ಮಾಸ್ಟರ್‌ ರೋಹಿತ್‌ ಮತ್ತಿತರರು ಇದ್ದಾರೆ.

1970-80ರ ದಶಕದಲ್ಲಿದ್ದ ಗೇಣಿದಾರರು ಮತ್ತು ಜಮೀನ್ದಾರರ ನಡುವಿನ ಸಂಘರ್ಷ
ಅಸ್ಪೃಶ್ಯತೆಯ ಕರಾಳ ರೂಪವನ್ನ ನಿರ್ದೇಶಕ ತರುಣ್ ಸಶಕ್ತವಾಗಿ ನಿರೂಪಿಸಿದ್ದಾರೆ. ಆದರದು ನಿಜಕ್ಕೂ ಇಡೀ ದೇಶದ ಶತಶತಮಾನಗಳ ಕಾಲದ ಶೋಷಣೆಯ ಕಥೆಯೇ ಆಗಿದೆ. ಆ ಕಾಲಮಾನದ ಕಥೆ ಹೊತ್ತಿರುವ ‘ಕಾಟೇರ’ ಸಿನಿಮಾದ ಒಟ್ಟು ಸಂದೇಶ ಗಾಂಧಿ, ಅಂಬೇಡ್ಕರ್, ಪೆರಿಯಾರ್, ಕುವೆಂಪು ಮುಂತಾದ ಜನಪರ ಚಿಂತಕರ, ಬರಹಗಾರರ, ಹೋರಾಟಗಾರರ ಆಶಯಗಳಿಗೆ ಹತ್ತಿರವಾಗಿದೆ.

ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ಜಾರಿಗೊಳಿಸಿದ್ದ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ್ದ ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆಯನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ದಬ್ಬಾಳಿಕೆ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ವಿರುದ್ಧ ಹೆಣೆದ ‘ಕಾಟೇರ’ ಚಿತ್ರ ಈ ನೆಲದ ಶತಶತಮಾನಗಳ ಕಾಲದ ಶೋಷಿತರ ಪರ ಧ್ವನಿಯಾಗಿ ಹೊರಹೊಮ್ಮುತ್ತದೆ.

'ಕಾಟೇರ’ ಚಿತ್ರದ ಕಥೆ: ಸಿನಿಮಾದ ಆರಂಭದಲ್ಲಿ 107 ಜನರ ಅಸ್ಥಿ ಪಂಜರಗಳು ಸಿಗುತ್ತದೆ. ಪೊಲೀಸರು ಅದರ ತನಿಖೆಗೆ ಇಳಿದಾಗ ಅದಕ್ಕೂ ಹಿಂದಿನ 15 ವರ್ಷಗಳ ಹಿಂದಿನ ಕರುಣಾಜನಕ ಕಥೆಯೊಂದು ತೆರೆದುಕೊಳ್ಳುತ್ತದೆ. ಆ 107 ಜನರ ಸಾವಿಗೆ ಕಾರಣ ಆದ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಫ್ಲ್ಯಾಶ್​ಬ್ಯಾಕ್​ನಲ್ಲಿ ಉತ್ತರ ಸಿಗುತ್ತದೆ. 'ಶೋಷಕರು' ಮತ್ತು 'ಶೋಷಿತ'ರ ನಡುವಿನ ಸಂಘರ್ಷದ ಕಥೆಯನ್ನು ಈ ಸಿನಿಮಾದಲ್ಲಿ ಬಿಚ್ಚಿಡಲಾಗಿದೆ. ರೈತರಿಗಾಗಿ, ಪ್ರೀತಿಸಿದವಳಿಗಾಗಿ, ಕುಟುಂಬದವರಿಗಾಗಿ, ಊರಿನ ಶೋಷಿತ ಜನರಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟಕ್ಕೆ ನಿಂತ ಕಾಟೇರ ಎಂಬ ವೀರನ ಕಥೆ ಈ ಚಿತ್ರದಲ್ಲಿದೆ.

ಸಂದೇಶ: ಯಾವುದೋ ಕಪೋಲಕಲ್ಪಿತ ಕಥೆಯೊಂದನ್ನು ಹೇಳುವುದಕ್ಕಾಗಿ ಈ ಸಿನಿಮಾ ನಿರ್ಮಾಣಗೊಂಡಿಲ್ಲ. ಶತಶತಮಾನಗಳ ಕಾಲ ರೈತರಿಗೆ ಆಗಿದ್ದ ಅನ್ಯಾಯವನ್ನು ‘ಕಾಟೇರ’ ಕಥೆ ಎತ್ತಿ ತೋರಿಸುತ್ತದೆ. ಮೇಲು-ಕೀಳು ಎಂಬ ಪಿಡುಗನ್ನು ನಿವಾರಿಸಬೇಕು ಎಂಬ ಸಂದೇಶವನ್ನು ಈ ಚಿತ್ರ ನೀಡುತ್ತದೆ. ಕಥಾನಾಯಕನಿಂದ ಸಿನಿಮಾದ ಮುಖ್ಯ ಸನ್ನಿವೇಶಗಳಲ್ಲಿ ಆ ಬಗ್ಗೆ ಬುದ್ಧಿಮಾತು ಹೇಳಿಸಲಾಗಿದೆ. ಆದರೂ ಅದು ಉಪದೇಶ ಎನಿಸದ ರೀತಿಯಲ್ಲಿ ಕಥೆಯ ನಡುವೆಯೇ ಬೆರೆತು ಹೋಗಿರುವುದು ಚೆನ್ನಾಗಿದೆ.

60 ಕೋಟಿ ರೂಪಾಯಿ ಮೀರಿದ ಕಲೆಕ್ಷನ್:
ಹೌದು, 'ಕಾಟೇರ' ಸಿನಿಮಾ 3ನೇ ದಿನ ಎಷ್ಟು ಗಳಿಸಿದೆ ಎಂಬುದರ ಬಗ್ಗೆ ಸಿನಿಮಾ ಟೀಂನ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಆದರೆ ಮೊದಲ 2 ದಿನಕ್ಕಿಂತಲೂ 3ನೇ ದಿನವು ಕಾಟೇರ ಕ್ರೇಜ್ ಹೆಚ್ಚಾಗಿದ್ದ ಕಾರಣ, ಈ ಸಿನೇಮಾ ಕಲೆಕ್ಷನ್ 60 ಕೋಟಿ ರೂಪಾಯಿ ಮೀರಿಸಿದೆ ಎನ್ನಲಾಗಿದೆ.

ಈ ಚಿತ್ರದಲ್ಲಿ ಕಾಟೇರನ ಪಾತ್ರದಲ್ಲಿ ದರ್ಶನ್, ಪ್ರಭಾವತಿ ಪಾತ್ರದಲ್ಲಿ ಆರಾಧನಾ ರಾಮ್, ದೇವರಾಯನಾಗಿ ಜಗಪತಿ ಬಾಬು,
ಮಹದೇವಣ್ಣ ಪಾತ್ರದಲ್ಲಿ ಕುಮಾರ್ ಗೋವಿಂದ್, ಕುಮಾರಿಯಾಗಿ ಹಿರಿಯ ನಟಿ ಶ್ರುತಿ, ಚೋಂಗ್ಲಾ ಪಾತ್ರದಲ್ಲಿ ವೈಜನಾಥ ಬಿರಾದಾರ್, ಪುಟ್ಟರಾಜು ಪಾತ್ರದಲ್ಲಿ ಮಾಸ್ಟರ್ ರೋಹಿತ್, ಶಾನುಬೋಗನಾಗಿ ಹಿರಿಯ ನಟ ಅವಿನಾಶ್ , ಕಾಳೇಗೌಡನಾಗಿ ವಿನೋದ್ ಕುಮಾರ್ ಆಳ್ವ, ಮಾರ ಪಾತ್ರದಲ್ಲಿ ರವಿ ಚೇತನ್, ರೀನಾ ಡಿಸೋಜಾ ಪಾತ್ರದಲ್ಲಿ ಶ್ವೇತಾ ಪ್ರಸಾದ್ ಅಧ್ಬುತ ನಟನೆ ನೀಡಿದ್ದಾರೆ.

ನಟ ದರ್ಶನ್- ನಿರ್ದೇಶಕ ತರುಣ್ ಸುದೀರ್ ಕಾಂಬಿನೇಷನ್ ನ ‘ಕಾಟೇರ’ ಸಿನೇಮಾ ನಿಜಕ್ಕೂ ಒಂದು ಅತ್ಯದ್ಭುತ ಪ್ರಯೋಗ. ಶೋಷಣೆ, ಜಾತಿತಾರತಮ್ಯ, ಮೂಡನಂಬಿಕೆಗಳ ವಿರುದ್ಧದ ಧ್ವನಿ ಈ ಚಿತ್ರದಲ್ಲಿ ಮಾರ್ಧನಿಸುತ್ತದೆ. ಸತ್ಯಕ್ಕೆ ಹತ್ತಿರವಾಗಿರುವ ಕಥೆಯಾಗಿರುವ ಬಹುದೊಡ್ಡ ಕಾರಣಕ್ಕಾಗಿ ಚಿತ್ರ ಮನಮುಟ್ಟುತ್ತದೆ.

‘ಕಾಟೇರ’ ಸಿನೇಮಾದಲ್ಲಿ ವಿಭಿನ್ನ ಪಾತ್ರದಲ್ಲಿ ದರ್ಶನ್‌ ತೆರೆ ಪ್ರವೇಶಿಸುತ್ತಾರೆ. ಪ್ಲಾಶ್‌ಬ್ಯಾಕ್ ತಂತ್ರದಲ್ಲಿ ಸಿನೇಮಾ ಸಾಗುತ್ತದೆ. ನಿರ್ದೇಶಕ ತರುಣ್ ಅವರು ನಟ ದರ್ಶನ್ ರನ್ನ ಎರಡು ಕಾಸ್ಟ್ಯೂಮ್‌ನಲ್ಲಿ ತೋರಿಸಿದ್ದಾರೆ.

ಕುಲುಮೆಯಲ್ಲಿ ಕಬ್ಬಿಣ ತಟ್ಟುವ ಕಟ್ಟುಮಸ್ತಾದ ಯುವ ಕಾಟೇರ ಹಾಗೂ ವಯಸ್ಕ ಎರಡೂ ಕಾಸ್ಟ್ಯೂಮ್‌ಗಳಲ್ಲಿ ನಟ ದರ್ಶನ್ ರದ್ದು ಪ್ರಬುದ್ಧ ಅಭಿನಯ ಎಂದರೆ ತಪ್ಪಾಗದು.

ಹಳೆಮೈಸೂರು ಪ್ರಾಂತ್ಯ ಇಂದಿಗೂ ಒಕ್ಕಲಿಗರ ಬಾಹುಳ್ಯದ್ದು. ದಲಿತರನ್ನ ಭೂಮಿಯಿಂದ ವಂಚಿಸಿ ಅತಿ ಕಡಿಮೆ ಹಣಕ್ಕೆ ಅವರನ್ನು ದುಡಿಸಿಕೊಳ್ಳುತ್ತಿದ್ದ ಒಕ್ಕಲಿಗರ ದರ್ಪ ದೌರ್ಜನ್ಯಗಳನ್ನು ಜಮೀನ್ದಾರರಾದ ದೇವರಾಯ ಹಾಗೂ ಕಾಳೇಗೌಡರ ಮೂಲಕ ನಿರೂಪಿಸಿದ್ದಾರೆ ನಿರ್ದೇಶಕರು.

ಇಡೀ ಚಿತ್ರವನ್ನು ತನ್ನ ಹೆಗಲ ಮೇಲೆ ಹೊತ್ತು ಸಾಗಿರುವುದು ದೈತ್ಯ ಸ್ವರೂಪಿ ದರ್ಶನ್. ಓರ್ವ ದಲಿತನಾಗಿ ಅವರ ನಟನೆ ಅವರ ಸಿನಿ ಜರ್ನಿಯಲ್ಲಿಯೇ ಅಪರೂಪದ್ದು.
ದಲಿತರ ಶತಶತಮಾನಗಳ ಅಸಹನೆ ಆಕ್ರೋಶಗಳು ಒಟ್ಟಿಗೆ ಮೇಳೈಸಿ ಆರಡಿ ದೈತ್ಯ ರೂಪ ತಾಳಿ ದರ್ಶನ್ ರೂಪದಲ್ಲಿ ಹೋರಾಟಕ್ಕಿಳಿದಿದೆ ಎಂದು ನೋಡುಗರಿಗೆ ಭಾಸವಾದರೆ ಅಚ್ಚರಿಯೇನಿಲ್ಲ.

"ದೊಡ್ಡವರನ್ನ ಎದುರು ಹಾಕಿಕೊಂಡ್ರೆ ನಮ್ಮನ್ಮು ಬದುಕಲು ಬಿಡ್ತಾರ" ಎನ್ನುವ ಅಕ್ಕನಿಗೆ "ಈಗೇನು ನಾವು ಬದುಕಿದ್ದೀವಿ ಅಂದ್ಕೊಂಡಿದ್ದೀಯಾ" ಎನ್ನುವ ಉತ್ತರ ವ್ಯವಸ್ಥೆಯ ಲೋಪದಿಂದ ಸತ್ತಂತೆ ಬದುಕಿರುವ ದಲಿತರ ಜೀವನಗಾಥೆಯನ್ನ ಧ್ವನಿಸುತ್ತದೆ.

ಹಾಗೂ ಬ್ರಾಹ್ಮಣ ಶ್ಯಾನುಭೋಗನೊಬ್ಬ "ಅವರು ಜೀವ ಇರುವ ಚಪ್ಪಲಿಗಳು
ನಾವು ಬದುಕಬೇಕು ಅಂದ್ರೆ ಅವರನ್ನ ಮೆಟ್ಟಲೇಬೇಕು" ಎನ್ನುವಾಗ ವ್ಯವಸ್ಥೆ ದಲಿತನನ್ನ ಹೇಗೆ ಸಾಯಿಸಿ ಬದುಕಿಸಿಕೊಂಡಿದೆ ಎನ್ನುವುದನ್ನು ಬಿಂಬಿಸುತ್ತದೆ.

ದರ್ಶನ್ ನಂತಹ ಮಾಸ್ ನಾಯಕನಿಂದ ಅಸ್ಪೃಶ್ಯತೆ ಜಾತೀಯತೆಯ ಕುರಿತು ಮಾತನಾಡಿಸಿ ತರುಣ್ ಗಂಭೀರ ಸಾಮಾಜಿಕ ಸಂದೇಶ ನೀಡಿದ್ದಾರೆ.

ನಮ್ಮಂಥವರು ಜಾತೀಯತೆಯ ಕುರಿತಾಗಿ ಸಾವಿರ ಲೇಖನಗಳನ್ನು‌ ಬರೆಯುವುದೂ ಒಂದೆ.. ಅದ್ಭುತ ಫ್ಯಾನ್ ಫಾಲೋಯಿಂಗ್ ಹೊಂದಿರುವ ದರ್ಶನ್ ನಂಥವರು ತಮ್ಮ ಸಿನಿಮಾಗಳಲ್ಲಿ ಇವುಗಳ ಬಗ್ಗೆ ಮನಮುಟ್ಟುವಂತೆ ಮಾತನಾಡುವುದೂ ಒಂದೆ.

ಇಷ್ಟೇ ಅಲ್ಲ ಕಾಟೇರ ಮರ್ಯಾದಾ ಹತ್ಯೆಗೂ ಸಾಕ್ಷಿಯಾಗಿದೆ. ಬ್ರಾಹ್ಮಣರ ಹೆಣ್ಣುಮಗಳು (ನಾಯಕಿ)ದಲಿತನನ್ನ ಪ್ರೀತಿಸಿದ ಸಲುವಾಗಿ
ತಮ್ಮನಿಂದಲೇ ಹತ್ಯೆಗೀಡಾಗುತ್ತಾಳೆ.
"ನೀನು ನಡತೆಗೆಟ್ಟವಳಾಗಿದ್ದರೂ ಒಪ್ಪಿಕೊಳ್ತಿದ್ದೆ..ಆದರೆ ಜಾತಿಗೆಟ್ಟೆಯಲ್ಲೇ" ಅಂತ ಹೇಳ್ತಾ ತಮ್ಮನೊಬ್ಬ ಸ್ವಂತ ಅಕ್ಕನನ್ನೇ ಇರಿಯುವಾಗ ಈ ದೇಶದ ಶತಶತಮಾನಗಳ ಜಾತಿಯ ಅಮಲನ್ನು ನೆನೆದು ಮೈ ನಡುಗುತ್ತದೆ.

ಜಮೀನ್ದಾರರ ಪಾತ್ರಗಳಲ್ಲಿ ಜಗಪತಿ ಹಾಗೂ ವಿನೋದ್ ಆಳ್ವಾರದ್ದು ಥೇಟ್ ಕ್ರೌರ್ಯದಲ್ಲಿ ಅದ್ದಿ ತೆಗೆದ ಹಾಗೆ ಸಶಕ್ತ ಅಭಿನಯ. ನಟಿ ಮಾಲಾಶ್ರೀ ಪುತ್ರಿ ಆರಾಧನಾ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ.

ಭಾವನಾತ್ಮಕ ಸನ್ನಿವೇಶಗಳಲ್ಲೂ ದರ್ಶನ್ ಅಭಿನಯಕ್ಕೆ ಸಂಫೂರ್ಣ ಅಂಕ. ತನ್ನನ್ನು ಪ್ರೀತಿಸಿದ ಕಾರಣಕ್ಕೆ ಪ್ರಾಣವನ್ನೇ ಕಳೆದುಕೊಂಡ ತನ್ನವಳ ಶವವನ್ನು ಅಪ್ಪಿಕೊಂಡು ಅಳುವಾಗ ಪ್ರೇಕ್ಷಕನೂ ಕಣ್ಣೀರಾಗುತ್ತಾನೆ. ಶ್ರುತಿ, ಕುಮಾರ್ ಗೋವಿಂದ್ ಅಚ್ಯುತ್
ಬೀರದಾರ್ ಎಲ್ಲರದ್ದೂ ಮನಮುಟ್ಟುವ ಅಭಿನಯ.

ಸಾಹಸ ದೃಶ್ಯಗಳಲ್ಲಿ ದರ್ಶನ್ ಮದವೇರಿದ ಮದ್ದಾನೆಯಂತೆ ಭಾಸವಾಗುತ್ತಾರೆ. ಅವರ ಅಭಿಮಾನಿಗಳಿಗಂತೂ ಆಗ ಕಣ್ಣಿಗೆ ಹಬ್ಬ.
ಚಿತ್ರದ ಗೆಲುವಿಗೆ ಮಾಸ್ತಿಯವರ ಹರಿತವಾದ ಸಂಭಾಷಣೆಯದ್ದು ಸಿಂಹಪಾಲು. ಒಟ್ಟಾರೆ ದರ್ಶನ್ ಸಿನಿಪಯಣದಲ್ಲಿ ಈ ಚಿತ್ರ ಒಂದು ಮೈಲಿಗಲ್ಲು. ಹಾಗೂ ಕಾಟೇರ 2023 ರ ಕೊನೆಯ ಯಶಸ್ವೀ ಚಿತ್ರ ಎನ್ನುವಲ್ಲಿ ಅನುಮಾನವೇ ಇಲ್ಲ. ಒಳ್ಳೆಯ ಸಂದೇಶ ಇರುವ ಸಿನೇಮಾ.. ಅಗತ್ಯವಾಗಿ ಸಿನೇಮಾ ನೋಡಿ. ಆ ಮೂಲಕ ಹಣ ಹೂಡಿದ ನಿರ್ಮಾಪಕರನ್ನು ಮತ್ತು ಚಿತ್ರತಂಡವನ್ನು ಪ್ರೋತ್ಸಾಹಿಸಿ!

Advertisement
Advertisement
Recent Posts
Advertisement