Advertisement

ಅಂಬೇಡ್ಕರ್ ‌ರವರು ಕಣ್ಣು, ಕರುಳಿಲ್ಲದ ಸಂಸ್ಕೃತವನ್ನು “ರಾಷ್ಟ್ರಭಾಷೆ” ಮಾಡಬೇಕೆಂದು ಆಗ್ರಹಿಸಿದ್ದು ಎಷ್ಟು ನಿಜ? ಯಾಕೀ ಸುಳ್ಳು ಪ್ರಚಾರ?

Advertisement

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ದಲಿತ-ಶೂದ್ರ ಸಮುದಾಯದ ಸಾಂಸ್ಕ್ರತಿಕ ಸಂಪನ್ಮೂಲಗಳನ್ನು ಶಾಸ್ತ್ರೀಯವಾಗಿ ಅಮಾನ್ಯಗೊಳಿಸಿ ಬ್ರಾಹ್ಮಣ್ಯವನ್ನು ಸ್ಥಾಪಿಸುವ ಸಾಂಸ್ಕೃತಿಕ ರಾಜಕಾರಣವನ್ನೂ , ಬಡವರ ಸಂಪನ್ಮೂಲಗಳನ್ನು ಶಾಸನಾತ್ಮಕವಾಗಿ ಕಿತ್ತು ಕಾರ್ಪೊರೇಟ್ ಗಳಿಗೆ ಒಪ್ಪಿಸುವ ಕಾರ್ಪೊರೇಟ್ ಬಂಡವಾಳಶಾಹಿ ಆರ್ಥಿಕತೆಯನ್ನು ಅನುಸರಿಸುತ್ತಿರುವ ಕಾರ್ಪೊರೇಟ್-ಬ್ರಾಹ್ಮಣಶಾಹಿ ಬಿಜೆಪಿ ಜನಭಾಷೆಗಳನ್ನು ಮೂಲೆಗುಂಪು ಮಾಡಿ ಅದರ ಮೇಲೆ ವೈದಿಕ ಸಂಸ್ಕ್ರತ ವನ್ನು ಹೇರುವ ಬ್ರಾಹ್ಮಣವಾದಿ ಭಾಷಾ ರಾಜಕಾರಣವನ್ನು ಮಾಡುತ್ತಿದೆ. ಸಾವರ್ಕರ್ ಮತ್ತು ಸಂಸ್ಸ್ಕ್ರುತ- ಇವೆರಡು ಈಗ ಜನರ ಆಶಯಗಳನ್ನು ಹಾಗೂ ಅಸ್ಮಿತೆಗಳನ್ನು ನಾಶಮಾಡಲು ಆರೆಸ್ಸೆಸ್-ಬಿಜೆಪಿ ಬಳಸುತ್ತಿರುವ ಎರಡು ಪ್ರದಾನ ಸಾಂಸ್ಕ್ರುತಿಕ ಆಯುಧಗಳಾಗಿವೆ. ಈ ರಾಜಕೀಯ-ಸಾಂಸ್ಕೃತಿಕ ನೀತಿಯ ಭಾಗವಾಗಿಯೇ ಕರ್ನಾಟಕದಲ್ಲೂ ಕನ್ನಡವನ್ನು ಕೊಂದು ಸಂಸ್ಕ್ರುತವನ್ನು ಬೆಳೆಸುವ ಉದ್ದೇಶದಿಂದ ಅಂದಾಜು ೪೦೦ ಕೋಟಿ ವೆಚ್ಚದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ. ಈ ಎಲ್ಲಾ ಬ್ರಾಹ್ಮಣೀಯ ಹರಕತ್ತುಗಳಿಗೆ ಸಾಮಾಜಿಕ ಮಾನ್ಯತೆಯನ್ನು ಗಳಿಸಿಕೊಳ್ಳಲು ಈ ಬ್ರಾಹ್ಮಣವಾದಿಗಳು ಎಗ್ಗು-ಸಿಗ್ಗಿಲ್ಲದೆ ಅಂಬೇಡ್ಕರ್ ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಂಸ್ಕ್ರುತವು ಎಲ್ಲಾ ಭಾಷೆಗಳ ತಾಯಿ, ಸಂವಿಧಾನ ಸಭೆಯಲ್ಲಿ ಅಂಬೇಡ್ಕರ್ ಅವರೂ ಸಹ ಸಂಸ್ಕ್ರುತವನ್ನು “ರಾಷ್ಟ್ರಭಾಷೆ” ಮಾಡಬೇಕೆಂದು “ವಾದಿಸಿದ್ದರು” ಎಂಬ ಸುಳ್ಳುಗಳನ್ನು ಪುಂಗುತ್ತಿದ್ದಾರೆ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ಬೋಬ್ಡೆ ಬಡಾಯಿಗಳು, ಪೊಳ್ಳು ಪ್ರತಾಪಗಳು ಒಂದು ವರ್ಷದ ಹಿಂದೆ ನಾಗಪುರದಿಂದ ಮತ್ತು ನಾಗಪುರದ ವಕೀಲಿಕೆ ಮಾಡುತ್ತಲೇ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದ ಭಾರತದ ಮಾಜಿ ಮುಖ್ಯ ನ್ಯಾಯಾಧೀಶರಾದ ಬೋಬ್ಡೆ ಯವರು , ಅಂಬೇಡ್ಕರ್ ಅವರ 130ನೇ ಜನ್ಮದಿನದಂದು ನಾಗಪುರದ ಲಾ ಸ್ಕೂಲ್ ಸಂಘಟಿಸಿದ್ದ ಸಭೆಯೊಂದರಲ್ಲಿ ಮಾತನಾಡುತ್ತಾ ಅಂಬೇಡ್ಕರ್ ಅವರು ಸಂಸ್ಕೃತವನ್ನು ನ್ಯಾಷನಲ್ ಭಾಷೆಯನ್ನಾಗಿ ಮಾಡಬೇಕೆಂದು ಆಗ್ರಹಿಸಿದ್ದರು. ಆ ನಿಟ್ಟಿನಲ್ಲಿ ಅವರು ಇತರರ ಜೊತೆಗೂಡಿ ಒಂದುಮನವಿಯನ್ನು ಮಂಡಿಸಿದ್ದರು. ಅದನ್ನು ಮಂಡಿಸಲಾಯಿತೋ ಇಲ್ಲವೋ ಗೊತ್ತಿಲ್ಲ ..ಆದರೆ ಅದಕ್ಕೆ ಪಂಡಿತರು, ಮೌಲ್ವಿಗಳು ಮತ್ತು ಪಾದ್ರಿಗಳು ಸಹಿ ಮಾಡಿದ್ದರು ಎಂದು ಹೇಳಿದ್ದರು. ಒಬ್ಬ ಮುಖ್ಯ ನ್ಯಾಯಾಧೀಶರು ಒಂದು ಗಂಭೀರವಾದ ಸಭೆಯಲ್ಲಿ ಮಾತನಾಡುತ್ತಾ ಒಂದು ಐತಿಹಾಸಿಕ ಸಂಗತಿಯ ಬಗ್ಗೆ ಇಷ್ಟು ಬೇಜವಾಬ್ದಾರಿಯಾಗಿ ಮಾತನಾಡಿದ ಮತ್ತೊಂದು ಉದಾಹರಣೆ ಸಿಗಲಾರದು! ಏಕೆಂದರೆ ನ್ಯಾಯಾಧೀಶರು ಅದರಲ್ಲೂ ಮುಖ್ಯ ನ್ಯಾಯಾಧೀಶ ಹುದ್ದೆಯಲ್ಲಿರುವಷ್ಟು ಹಿರಿಯರು ನಮ್ಮ ಸಂವಿಧಾನದ ಸಭೆಯಲ್ಲಿ ನಡೆದ ಪ್ರಮುಖ ಚರ್ಚೆಗಳ ಬಗ್ಗೆ ಅವಾಗಾಹನೆ ಇಟ್ಟುಕೊಳ್ಳಬೇಕಾದದ್ದು ಪ್ರಾಥಮಿಕ ಅವಶ್ಯಕತೆ. ಅದರಲ್ಲೂ ಒಂದು ವಿವಾದಾಸ್ಪದ ಸಂಗತಿಯ ಬಗ್ಗೆ ಪ್ರಸ್ತಾಪಿಸುವಾಗ ಅದರ ಪೂರ್ವಾಪರ ಇತಿಹಾಸಗಳನ್ನು ಅಧ್ಯಯನ ಮಾಡದೆ "ಮಂಡಿಸಿದರೋ ಇಲ್ಲವೋ ಗೊತ್ತಿಲ್ಲ" ಎಂಬ ಅಜ್ಞಾನ ಹಾಗು ಬೇಜವಾಬ್ದಾರಿ ಪ್ರದರ್ಶಿಸುವುದು ಅವರ ಕುಳಿತಿರುವ ಸ್ಥಾನಕ್ಕೆ ಗೌರವ ತರುವಂತದ್ದಲ್ಲ. ಅದರ ಬಗ್ಗೆ ಅವರಿಗೆ ಖಬರೂ ಇದ್ದಂತಿಲ್ಲ ಎನ್ನುವುದು ಬೇರೇ ವಿಷಯ. ಈಗ ಕರ್ನಾಟಕದಲ್ಲಿ ಕನ್ನಡ ಜನರ ತೆರಿಗೆ ಹಣದಲ್ಲಿ ಕನ್ನಡ ಭಾಷಾಭಿವ್ರುದ್ಧಿಗೆ ಸಲ್ಲಬೇಕಾದ ಸಂಪನ್ಮೂಲವನ್ನು ಸಂಸ್ಕ್ರತ ವಿಶ್ವವಿದ್ಯಾಲಯ ಸ್ಥಾಪನೆಗೆ ವೆಚ್ಚ ಮಾಡುತ್ತಿರುವದರ ವಿರುದ್ಧ ಕಂನಾಡಿಗರು ಪ್ರಬಲ ಚಳವಳಿ ಹೂಡುವ ಸೂಚನೆ ಕಾಣಿಸುತ್ತಿದ್ದಂತೆ ಬೆತ್ತಲೆಜಗತ್ತಿಗೆ ಸೇರಿದ ಪ್ರತಾಪ ಸಿಂಹನಂತ ಸಂಸದರು ತಮ್ಮ ಬ್ರಾಹ್ಮಣ-ಸಂಸ್ಕ್ರುತ ಗುಲಾಮೀ ರಾಜಕಾರಣಕ್ಕೆ ಅಂಬೇಡ್ಕರ್ ಅವರನ್ನು ಸಮರ್ಥನೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇವರು -ಬ್ರಾಹ್ಮಣಶಾಹಿ-ಕಾರ್ಪೊರಟ್ ಶಾಹಿಯ ಗೇಟ್ ಕೀಪರ್ ಗಳಲ್ಲ. ಸ್ಟೇಕ್ ಹೋಲ್ಡರ್ಸುಗಳು. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ಅಂಬೇಡ್ಕರ್ ಬಗ್ಗೆ ಸಂಘಪರಿವಾರದ ಅಪದ್ಧಗಳು ಅಂಬೇಡ್ಕರ್ ಅವರು ಸಂಸ್ಕೃತವನ್ನು ದೇಶದ ಅಧಿಕೃತ ಭಾಶೆ ಮಾಡಲು ಆಗ್ರಹಿಸಿದ್ದರು ಎಂಬ ಹೇಳಿಕೆಗಳು ಹೊಸತೇನಲ್ಲ. 1990ರ ನಂತರ ಅಂಬೇಡ್ಕರ್ ಅವರನ್ನು ಕೋ-ಆಪ್ಟ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಸಂಘಪರಿವಾರ, ಅಂಬೇಡ್ಕರ್ ಅವರನ್ನು ಹಿಂದುವೀಕರಿಸಲು ಹಲವಾರು ಅಪದ್ಧ ಐತಿಹ್ಯಗಳನ್ನು ಹೆಣೆಯುತ್ತಾ ಬಂದಿದೆ. ಅದರಲ್ಲಿ ಕೆಲವು ಹೀಗಿವೆ : 1) "ಅಂಬೇಡ್ಕರ್ ಅವರು ಆರೆಸ್ಸೆಸ್ ಶಾಖೆಗೆ ಭೇಟಿ ಕೊಟ್ಟು ಅಲ್ಲಿ ಜಾತಿ ಬೇಧವಿರದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದರು 2) ಅಂಬೇಡ್ಕರ್ ಅವರು ತ್ರಿವರ್ಣ ಧ್ವಜಕ್ಕಿಂತ ಭಾಗವಾಧ್ವಜವನ್ನು ರಾಷ್ಟ್ರ ಧ್ವಜ ಮಾಡುವ ಬಗ್ಗೆ ಒಲವು ಹೊಂದಿದ್ದರು 3) ಅಂಬೇಡ್ಕರ್ ಅವರು ಗಾಂಧಿ ಹತ್ಯೆಯಲ್ಲಿ ಆರೋಪಿಯಾಗಿ ಬಂಧಿತರಾಗಿದ್ದ ಸಾವರ್ಕರ್ ಅವರ ಬಗ್ಗೆ ಅಭಿಮಾನ ಹೊಂದಿದ್ದರು ಮತ್ತು ಅವರ ಬಿಡುಗಡೆಗೆ ತಮ್ಮೆಲ್ಲ ಪ್ರಯತ್ನಗಳನ್ನು ಮಾಡಿದ್ದರು... ಹಾಗೂ... 4) ಅಂಬೇಡ್ಕರ್ ಅವರು ಸಂಸ್ಕೃತವನ್ನು ರಾಷ್ಟ್ರಭಾಷೆಯಾಗಿ ಮಾಡಲು ಆಗ್ರಹಿಸಿದ್ದರು ... ಎಂಬಿತ್ಯಾದಿ..ತಳಬುಡವಿಲ್ಲದ, ತರ್ಕ-ಪುರಾವೆಗಳಿಲ್ಲದ ಸುಳ್ಳುಗಳನ್ನು ಪ್ರಚಾರ ಮಾಡುತ್ತಾ ಬಂದಿದ್ದಾರೆ. ಒಂದು ಸುಳ್ಳನ್ನು ಸಾವಿರ ಸರಿ ಹೇಳಿದರೆ ಸತ್ಯವಾಗಿ ಬಿಡುತ್ತದೆ ಎಂಬ ಗೋಬೆಲ್ಸ್ ತತ್ವದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿರುವ ಸಂಘ ಪರಿವಾರದವರು ಕಾಲಕಾಲಕ್ಕೆ ಈ ಸುಳ್ಳುಗಳಿಗೆ ಹೊಸ ಜೀವ ತುಂಬಿ ಹರಿಬಿಡುತ್ತಿರುತ್ತಾರೆ. ಅದರ ಭಾಗವಾಗಿ 2016ರಲ್ಲಿ ಮುರಳಿ ಮನೋಹರ್ ಜೋಶಿಯವರು ದೊಡ್ಡ ಮಟ್ಟದಲ್ಲಿ ಅಂಬೇಡ್ಕರ್ ಮತ್ತು ಸಂಸ್ಕೃತ ಪ್ರೇಮದ ಬಗ್ಗೆ ಪ್ರಚಾರ ಶುರುವಿಟ್ಟುಕೊಂಡಿದ್ದರು. ಈಗ ಅವರ ಮಾತುಗಳನ್ನೇ ಮುಖ್ಯ ನ್ಯಾಯಾಧೀಶ ಹುದ್ದೆಯಿಂದ ಬೋಡ್ಬೆಯವರು ಪುನುರುಚ್ಚರಿಸಿದ್ದಾರೆ. ಇದೀಗ ಕರ್ನಾಟಕದ ಪರಿವಾರಿಗರೂ ಅದೇ ಪ್ರತಾಪ ತೋರಿಸುತ್ತಿದ್ದಾರೆ. ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ಸಂಸ್ಕ್ರುತ ಮತ್ತು ಸಂವಿಧಾನ ಸಭೆಯ ಚರ್ಚೆಗಳು ದೇಶದ ಅಫಿಷಿಯಲ್- ಆಡಳಿತ ಭಾಷೆ ಯಾವುದಿರಬೇಕೆಂಬ ಬಗ್ಗೆ ಅಂಬೇಡ್ಕರ್ ಅವರ ಅಭಿಪ್ರಾಯ ಏನಿತ್ತು ಎಂಬುದನ್ನು ಸಂವಿಧಾನ ರಚನಾ ಸಭೆಯಲ್ಲಿ ಭಾಷಾ ನೀತಿಯ ಬಗ್ಗೆ ನಡೆದ ಚರ್ಚೆಯ ಹಿನ್ನೆಲೆಯಲ್ಲಿಟ್ಟು ಗ್ರಹಿಸಿದಾಗ ಮಾತ್ರ "ಅಂಬೇಡ್ಕರ್ ಮತ್ತು ಸಂಸ್ಕೃತದ" ಸಂಘಪರಿವಾರದ ಈ ಸುಳ್ಳುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಆದರೆ ಚರ್ಚೆಗೆ ಹೋಗುವ ಮುನ್ನ ಕೆಲವು ಪ್ರಾಥಮಿಕ ವಾಸ್ತವಗಳನ್ನು ತಿಳಿಯೋಣ: - ಸಂಸ್ಕೃತವನ್ನು ಭಾರತದ ಅಫಿಷಿಯಲ್ ಮತ್ತು ರಾಷ್ಟ್ರ ಭಾಷೆಯಾಗಿ ಮುಂದಿಡಬೇಕೆಂಬ ತಿದ್ದುಪಡಿಯನ್ನು ಸಂವಿಧಾನ ರಚನಾ ಸಭೆಯ ಮುಂದಿಟ್ಟಿದ್ದು ಅಂಬೇಡ್ಕರ್ ಅಲ್ಲ. ಬದಲಿಗೆ ಬಂಗಾಳದಿಂದ ಆಯ್ಕೆಯಾಗಿದ್ದ ಸದಸ್ಯ ಲಕ್ಷ್ಮಿ ಕಾಂತ ಮೈತ್ರಾ ಅವರು.. ಅವರ ತಿದ್ದುಪಡಿಗೆ 27 ಸಹ ಸದಸ್ಯರ ಅನುಮೋದನೆಯಿದ್ದದ್ದು ನಿಜ. ಅದರಲ್ಲಿ ಪ್ರಧಾನವಾದವರು ಅಂಬೇಡ್ಕರ್, ಟಿಟಿ ಕೃಷ್ಣಮಾಚಾರಿ , ಕೊಡಗಿನ ಪೂಣಚ್ಚ, ಮದ್ರಾಸ್ ಪ್ರಾಂತ್ಯದ ದುರ್ಗಾಭಾಯಿ ಮತ್ತಿತರರು. - ಆ ಮನವಿಗೆ ಸಹಿ ಮಾಡಿದ್ದವರಲ್ಲಿ ಮೈತ್ರಾ ಅವರನ್ನು ಹೊರತುಪಡಿಸಿ ಮಿಕ್ಕ ಯಾವೊಬ್ಬ ಸದಸ್ಯರು ಎಂದು ಸಂಸ್ಕೃತವನ್ನು ಒಂದು ಅಧಿಕೃತ ಭಾಷೆಯಾಗಬಹುದು ಎಂದು ಯಾವತ್ತೂ ಒಪ್ಪಿದವರಲ್ಲ. - ಅವರಲ್ಲಿ ಕೆಲವರಿಗೆ ಇಂಗ್ಲೀಷೇ ಆಡಳಿತ ಭಾಷೆಯಾಗಿ ಮುಂದುವರೆಯಬೇಕು ಎಂದು ಅಭಿಪ್ರಾಯವಿದ್ದರೇ, ಅಂಬೇಡ್ಕರ್ ಅವರಿಗೆ ಹಿಂದಿಯೇ ಕೇಂದ್ರದ ಮತ್ತು ರಾಜ್ಯಗಳ ಆಡಳಿತ ಭಾಷೆಯಾಗಬೇಕು ಎನ್ನುವ ಅಭಿಪ್ರಾಯವಿತ್ತು. ಸಂವಿಧಾನ ಸಭೆಯಲ್ಲಿ ದೇಶದ ಅಫಿಷಿಯಲ್/ ನ್ಯಾಶನಲ್ ಭಾಷೆ ಯಾವುದಿರಬೇಕು ಎಂಬ ಬಗ್ಗೆ ಮುಂದಿಡಲಾದ ಹಲವಾರು ತಿದ್ದುಪಡಿಗಳು 1949ರ ಸೆಪ್ಟೆಂಬರ್ 12, 13, ಮತ್ತು 14 ರಂದು ಸುದೀರ್ಘ ಚರ್ಚೆಗೊಳಪಟ್ಟಿತು ಅದರ ಭಾಗವಾಗಿ ಸೆಪ್ಟೆಂಬರ್ 12 ರಂದು ಲಕ್ಷ್ಮಿ ಕಾಂತ್ ಮೈತ್ರಾ ಸಹ ತಮ್ಮ ತಿದ್ದುಪಡಿಯನ್ನು ಪ್ರಸ್ತಾಪಿಸಿದರು ಹೀಗಾಗಿ ಸನ್ಮಾನ್ಯ ನ್ಯಾಯಮೂರ್ತಿ ಬೊಬ್ಡೆಯವರೇ ಆ "ತಿದ್ದುಪಡಿಯನ್ನು ಮಂಡಿಸಲಾಯಿತೋ ಇಲ್ಲವೋ ಗೊತ್ತಿಲ್ಲ" ಎಂದು ಹೇಳುವುದು ಬೇಜವಾಬ್ದಾರಿಯಾಗುತ್ತದಲ್ಲವೇ? ಇನ್ನು ಆ ತಿದ್ದುಪಡಿಯ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳೇನು? ತಿದ್ದುಪಡಿಗೆ ಸಹಿ ಹಾಕಿದ್ದ ಅಂಬೇಡ್ಕರ್ ಮತ್ತು ಇತರ ಸದಸ್ಯರು ಯಾವ ವಾದಗಳನ್ನು ಮಂಡಿಸಿದರು? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ಸೆವ್ಟೆಂಬರ್ 12 ರಂದು ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಯ ಸಂಪೂರ್ಣ ವಿವರಗಳು : ►►http://164.100.47.194/loksabha/writereaddata/cadebatefiles/C12091949.html ಸೆಪ್ಟೆಂಬರ್ 13 ರಂದು ನಡೆದ ಚರ್ಚೆಗಳು : ►►http://164.100.47.194/loksabha/writereaddata/cadebatefiles/C13091949.html ಸೆಪ್ಟೆಂಬರ್ 14ರಂದು ನಡೆದ ಚರ್ಚೆಗಳು : ►►http://164.100.47.194/loksabha/writereaddata/cadebatefiles/C14091949.html ವೆಬ್ ವಿಳಾಸದಲ್ಲಿ ಲಭ್ಯ; ಪರ - ವಿರೋಧಿ ವಾದಗಳಲ್ಲಿ ಆಸಕ್ತಿಯಿರುವ ಎಲ್ಲರೂ ಗಮನಿಸಬಹುದು. ಈ ತಿದ್ದುಪಡಿಯ ಬಗ್ಗೆ ಚರ್ಚೆ ಪ್ರಾರಂಭವಾದಾಗ ತಮ್ಮ ತಿದ್ದುಪಡಿಯನ್ನು ಮಂಡಿಸಲು ಮೈತ್ರಾ ಅವರು ಹಾಜರಿರಲಿಲ್ಲ! ನಂತರ ಹಾಜರಾಗಿ ತಮ್ಮ ವಾದವನ್ನು ಮಂಡಿಸುತ್ತಾರೆ. ಅದರ ವಿವರಗಳು ಮೇಲಿನ ವೆಬ್ ವಿಳಾಸದಲ್ಲಿದೆ. ಆದರೆ ಇಡೀ ಮೂರೂ ದಿನಗಳ ವಾದ-ವಿವಾದಗಳಲ್ಲಿ ಅಂಬೇಡ್ಕರ್ ಅವರನ್ನು ಒಳಗೊಂಡಂತೆ ಮೈತ್ರ ಅವರ ತಿದ್ದುಪಡಿಯನ್ನು ಬೆಂಬಲಿಸಿದ್ದ ಯಾವ ಸದಸ್ಯರು ಸಂಸ್ಕೃತವನ್ನು ರಾಷ್ಟ್ರಭಾಷೆ ಮಾಡಬೇಕೆಂದು ಆಗ್ರಹಿಸವುದಿಲ್ಲ. ಮಾತನಾಡಿದ ದುರ್ಗಾಬಾಯಿ ಯಂಥವರು ಹಿಂದಿಗಿಂತ ಪರ್ಷಿಯನ್ ಮಿಶ್ರಿತ ಹಿಂದೂಸ್ಥಾನಿ ಹಾಗು ರೋಮನ್ ಅಂಕಿಗಳು ದೇಶಭಾಷೆಯಾಗಬೇಕೆಂದು ಅಭಿಪ್ರಾಯ ಪಡುತ್ತಾರೆ. ಅವರ ಪ್ರಸ್ತಾಪಕ್ಕೆ ನೈತಿಕ ಬೆಂಬಲ ನೀಡುವುದು ಭಾರತೀಯ ಜನತಾ ಪಕ್ಷದ ಹಿಂದಿನ ಅವತಾರವಾಗಿದ್ದ ಭಾರತೀಯ ಜನಸಂಘದ ಸಂಸ್ಥಾಪಕ ಶಾಮ ಪ್ರಸಾದ್ ಮುಖರ್ಜಿಯವರು ಮಾತ್ರ . ಆದರೆ ಅವರು ಕೂಡಾ ದೇಶದ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಯಾವ ಭಾಷೆಯನ್ನೂ "ನ್ಯಾಷನಲ್'ಅಫಿಷಿಯಲ್ ಭಾಷೆಯಾಗಿ ಬಲವಂತವಾಗಿ ಹೇರಲು ಬರುವುದಿಲ್ಲವೆಂದು ಸ್ಪಷ್ಟಪಡಿಸುತ್ತಾರೆ. ಹಿಂದುತ್ವದ ಪರಮಪತ್ರಿಪಾದಕರಾಗಿದ್ದ ಪುರುಷೋತ್ತಮ್ ದಾಸ್ ಟಂಡನ್ ಅವರು ಕೂಡಾ ಸಂಸ್ಕೃತವು ನ್ಯಾಷನಲ್/ಅಫಿಷಿಯಲ್ ಭಾಷೆಯಾಗುವುದು ಪ್ರಾಕ್ಟಿಕಲ್ ಅಲ್ಲ ಎಂದೇ ಅಭಿಪ್ರಾಯ ಪಡುತ್ತಾರೆ. ಹೀಗಾಗಿ ಸಂಸ್ಕೃತ ಭೂಯಿಷ್ಠ ಹಿಂದಿ ಭಾಷೆ ಆಡಳಿತ ಭಾಷೆಯಾಗಬೇಕೆಂಬುದು ಸಂವಿಧಾನ ರಚನಾ ಸಭೆಯಲ್ಲಿದ್ದ ಹಿಂದುತ್ವವಾದಿ ಒಲವಿದ್ದ ಎಲ್ಲರ ಅಭಿಪ್ರಾಯವಾಗಿತ್ತೇ ವಿನಾ ಸಂಸ್ಕೃತವೇ ದೇಶಭಾಷೆಯಾಗಬೇಕೆಂಬುದಲ್ಲ. (ವಿವರಗಳಿಗೆ ಮೇಲಿನ ವೆಬ್ ವಿಳಾಸದಲ್ಲಿರುವ ಚರ್ಚೆಯನ್ನು ಓದಬಹುದು ) ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ಅಂಬೇಡ್ಕರ್ ಹೇಳಿದ್ದೇನು? ಅದರ ತಾತ್ಪರ್ಯವೇನು? ಇಡೀ ಮೂರೂ ದಿನಗಳ ಚರ್ಚೆಯಲ್ಲಿ ಅಂಬೇಡ್ಕರ್ ಅವರು ಮಧ್ಯಪ್ರವೇಶ ಮಾಡುವುದು ಕೊನೆಯ ದಿನ- ಸೆಪ್ಟೆಂಬರ್ 14ರಂದು ಮಾತ್ರ.! ಅದು ಕೂಡಾ ಚರ್ಚೆಯ ವಸ್ತುವಿನ ಬಗ್ಗೆ ಅಲ್ಲ. ಬದಲಿಗೆ ಚರ್ಚೆ ದೀರ್ಘವಾಗುತ್ತಿರುವುದರಿಂದ ಮುಗಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ನಿಯಮಾವಳಿಗಳನ್ನು ಸ್ಪಷ್ಟಪಡಿಸಲು.! ಅದರಂತೆ ಮೂರು ದಿನಗಳ ಸತತ ಚರ್ಚೆಯ ನಂತರ ಸದನದಲ್ಲಿ ಒಂದು ಒಮ್ಮತ ಮೂಡಿರುವುದರಿಂದ ಚರ್ಚೆಯನ್ನು ಅಂತಿಮಗೊಳಿಸಿಕೊಳ್ಳಲು ಯಾರ್ಯಾರು ತಮ್ಮ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲು ಇಷ್ಟಪಡುತ್ತಾರೋ ಅವರು ಮೊದಲು ಹಿಂಪಡಿಯಲು ಅವಕಾಶ ನೀಡಲಾಯಿತು. ತಿದ್ದುಪಡಿಗಳನ್ನು ಹಿಂತೆಗೆದುಕೊಂಡವರಲ್ಲಿ ಮೊದಲಿಗರು ಸಂಸ್ಕೃತವನ್ನು ದೇಶಭಾಷೆ ಮಾಡಬೇಕೆಂದು ಪ್ರಸ್ತಾಪ ಮಂಡಿಸಿದ್ದ ಲಕ್ಷ್ಮಿ ಕಾಂತ್ ಮೈತ್ರಾ ಅವರೇ ಆಗಿದ್ದರು!!!! ಹೀಗೆ , ಸಂಸ್ಕೃತವನ್ನು ಅಫಿಷಿಯಲ್ ಭಾಷೆ ಮಾಡಬೇಕೆಂಬ ಪ್ರಸ್ತಾಪದ ಬಗ್ಗೆ ಅದನ್ನು ಮುಂದಿಟ್ಟ ಮೈತ್ರಾ ಅವರನ್ನು ಒಳಗೊಂಡಂತೆ ಅಂಬೇಡ್ಕರ್ ತನಕ ಯಾರು ಉತ್ಸಾಹಿಗಳಾಗಿರಲಿಲ್ಲ. ಆದ್ದರಿಂದ ಅಂಬೇಡ್ಕರ್ ಅವರು ಸಂಸ್ಕೃತವನ್ನು ಅಫಿಷಿಯಲ್ ನ್ಯಾಷನಲ್ ಭಾಷೆಯನ್ನಾಗಿ ಮಾಡುವ ಅಭಿಪ್ರಾಯ ಹೊಂದಿದ್ದರು ಎಂಬ ಬೋಬಡೆಯವರ ಅಭಿಪ್ರಾಯ ಬೇಜವಾಬ್ದಾರಿಯಿಂದ ಕೂಡಿದೆ ಮತ್ತು ಅಂಬೇಡ್ಕರ್ ಅವರ ಸುತ್ತಾ ಸುಳ್ಳು ಐತಿಹ್ಯವನ್ನು ಕಟ್ಟಿ ಹಿಂದುವೇಕರಿಸುವ ಪ್ರಯತ್ನ ಪಡುತ್ತಿರುವ ಸಂಘಪರಿವಾರದ ಯೋಜನೆಗೆ ಪರೋಕ್ಷವಾಗಿ ಸಹಕಾರಿಯಾಗಿದೆ... ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ಹಾಗಿದ್ದಲ್ಲಿ ಅಂಬೇಡ್ಕರ್ ಅವರು ಮೈತ್ರ ಅವರ ತಿದ್ದುಪಡಿಗೆ ಸಹಿ ಹಾಕಿದ್ದಾದರೂ ಏಕೆ? ಅಂಬೇಡ್ಕರ್ ಅವರ ಭಾಷಾ ನೀತಿ ಮತ್ತು ಸಂವಿಧಾನ ಸಭೆಯ ಭಿನ್ನಮತ: ಅಂಬೇಡ್ಕರ್ ಅವರು ದಲಿತರ ಮತ್ತು ಶೋಷಿತರ ಹಿತರಕ್ಷಣೆಯು ಬಲವಾದ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯ ಎಂಬ ಅಭಿಪ್ರಾಯ ಹೊಂದಿದ್ದರು. ಭಾಷಾವಾರು ಪ್ರಾಂತ್ಯ ರಚನೆಗಳು ಕೂಡಾ ಆಯಾ ಪ್ರಾಂತ್ಯಗಳ ಊಳಿಗಮಾನ್ಯ ಶಕ್ತಿಗಳ ಬಲವನ್ನು ಹೆಚ್ಚಿಸಿ ದಲಿತ ಹಾಗು ದಮನಿತ ಜನತೆಯ ಒಗ್ಗಟ್ಟನ್ನು ದುರ್ಬಲಗೊಳಿಸುತ್ತದೆ ಎನ್ನುವುದು ಅವರ ನಿಲುವಾಗಿತ್ತು. ಆದ್ದರಿಂದಲೇ ಈ ದೇಶವು ಒಕ್ಕೂಟದ ಸ್ವರೂಪದ ಹೆಸರಿನಲ್ಲಿ ಮತ್ತೊಮ್ಮೆ ಊಳಿಗಮಾನ್ಯ ಶಕ್ತಿಗಳಿಗೆ ಬಲಿಯಾಗಬಾರದೆಂಬ ಕಾರಣದಿಂದ ದೇಶದ ಐಕ್ಯತೆಗೆ ದೇಶಾದ್ಯಂತ ಹಿಂದಿಯನ್ನೇ ಆಡಳಿತ ಭಾಶೆಯನ್ನಾಗಿಸಬೇಕೆಬ ಅಭಿಪ್ರಾಯವನ್ನು ಒಮ್ಮೆ ವ್ಯಕ್ತಪಡಿಸಿದ್ದರು. ಆದರೆ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಮತ್ತು ಪ್ರಾವೀಣ್ಯತೆಯನ್ನು ಪಡೆದಿದ್ದ ಅಂಬೇಡ್ಕರ್ ಅವರು ಸಂಸ್ಕೃತಕ್ಕೆ ರಾಜ್ಯಾಧಿಕಾರ ಸಿಗುವುದೆಂದರೆ ಮತ್ತೊಮ್ಮೆ ಈ ದೇಶದ ಬಹುಸಂಖ್ಯಾತ ದಲಿತ-ದಮನಿತರ ಭಾಷಿಕ ದಾಸ್ಯವೆಂದು ಖಚಿತ ನಿಲುವನ್ನು ಹೊಂದಿದ್ದರು... ಹೀಗಾಗಿ ಸಂವಿಧಾನ ರಚನಾ ಸಭೆಯ ಒಳಗೆ ಮತ್ತು ಹೊರಗೆ ಉದ್ದಕ್ಕೂ ಈ ದೇಶದ ಬ್ರಾಹ್ಮಣ್ಯ, ಸಂಸ್ಕೃತ ಯಾಜಮಾನ್ಯ ವಂಚನೆ, ಇತ್ಯಾದಿಗಳ ವಿರುದ್ಧ ನಿರಂತರ ಹೋರಾಟವನ್ನೇ ಮಾಡಿಕೊಂಡು ಬಂದಿದ್ದರು. ಆದ್ದರಿಂದ ಅಂಬೇಡ್ಕರ್ ಅವರು ಸಂಸ್ಕೃತವನ್ನು ದೇಶಾಡಳಿತ ಭಾಷೆಯಾಗಿ ಪ್ರಸ್ತಾಪಿಸುವ ಸಾಧ್ಯತೆಯೇ ಇರಲಿಲ್ಲ. ಆದರೂ ಅವರು ಮೈತ್ರಾ ಅವರ ಅರೆಮನಸ್ಸಿನ ಬಿನ್ನಹಕೆ ಅಂಬೇಡ್ಕರ್ ಯಾಕೆ ಸಹಿ ಹಾಕಿದರು? ಅಂಬೇಡ್ಕರ್ ಅವರು ಕೂಡಾ ನಂತರ ದಾಖಲಿಸಿರುವಂತೆ ಇಡೀ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಅತ್ಯಂತ ತಲೆನೋವಾಗಿ ಪರಿಣಮಿಸಿದ್ದು ಭಾಷಾ ನೀತಿಯ ವಿಷಯವೇ ಆಗಿತ್ತು. ಮಿಕ್ಕೆಲ್ಲಾ ವಿಷಯದಲ್ಲಿ ಎಷ್ಟೇ ಐಕ್ಯತೆ ಪ್ರದರ್ಶನಗೊಂಡಿದ್ದರು ದೇಶದ ಅಧಿಕೃತ ಆಡಳಿತ ಭಾಷೆ ಯಾವುದಾಗಬೇಕು ಎನ್ನುವ ಚರ್ಚೆ ಸಂವಿಧಾನ ಸಭೆಯನ್ನು ಅಡ್ಡಡ್ಡ -ಉದ್ದುದ್ದ ಸೀಳಿತ್ತು. ಅದು ಸಹಜವೂ ಆಗಿತ್ತು. ಭಾರತವು ಬಹುಸಂಖ್ಯಾತ ಹಾಗು ಬಹುಧರ್ಮೀಯ ದೇಶವಾಗಿದ್ದರಿಂದ ದೇಶಕ್ಕೊಂದೇ ಆಡಳಿತ ಭಾಷೆಯೆಂಬ ವಿಷಯವನ್ನು ಸೂಕ್ಷ್ಮವಾಗಿ ಹಾಗು ಪ್ರಜಾತಾಂತ್ರಿಕವಾಗಿ ಬಗೆಹರಿಸುವ ಅಗತ್ಯವಿತ್ತು. ಆದರೆ ಅಂಥ ಒಂದು ಸಾಧ್ಯತೆಯೂ ಸೀಮಿತವಾಗಿದ್ದರಿಂದ ಈ ವಿಷಯದಲ್ಲಿ ಉತ್ತರ- ದಕ್ಷಿಣ, ಹಿಂದಿ- ಹಿಂದಿಯೇತರ, ಹಿಂದಿ-ಹಿಂದುಸ್ಥಾನಿ, ಸಂಸ್ಕೃತ ಪ್ರಭಾವಿ ಹಿಂದಿ- ಪರಿಶಿಯನ್ ಪ್ರಭಾವಿ ಹಿಂದಿ ... ಇನ್ನಿತ್ಯಾದಿ ವೈರುಧ್ಯಗಳು ಮುಗಿಯದ ಚರ್ಚೆಯನ್ನು ಹುಟ್ಟುಹಾಕಿದ್ದವು. ಇದು ಹಲವು ಬಗೆಯ ಹತಾಶೆಗೂ ಕಾರಣವಾಗಿತ್ತು.. ಇಂಥಾ ಹತಾಶೆಯೇ ಕೆಲವರಲ್ಲಿ ಸಂಸ್ಕೃತವೇ ಅಧಿಕೃತ ಭಾಷೆಯಾಗಿ ಬಿಡಲಿ ಎಂಬ ಹತಾಶ -ಸಿನಿಕ ಪ್ರತಿಪಾದನೆಗೂ ಕಾರಣವಾಗಿತ್ತು, ಅಂಬೇಡ್ಕರ್ ಅವರ ಲೆಕ್ಕಾಚಾರದ ಸಹಿಗೂ ಅದೇ ಕಾರಣವಾಗಿತ್ತು.. ಸಮಾನ ಅನಾನುಕೂಲತೆಯೇ ಸಂಸ್ಕ್ರತದ ಅನುಕೂಲ! ಉದಾಹರಣೆಗೆ ಈ ಮುಗಿಯದ ಚರ್ಚೆಯನ್ನು ಕಂಡು ನಜಿರುದ್ದೀನ್ ಅಹ್ಮದ್ ಎಂಬ ಸದಸ್ಯರು ಸಂಸ್ಕೃತವೇ ರಾಷ್ಟ್ರಭಾಷೆಯಾಗಲೇ ಎಂಬ ಸಲಹೆ ಮುಂದಿಟ್ಟರು . ಅದಕ್ಕೆ ಅವರು ಕೊಟ್ಟ ಕಾರಣ : " ಹಿಂದಿ ರಾಷ್ಟ್ರಭಾಷೆಯಾದರೆ ಉಳಿದವರಿಗಿಂತ ಹಿಂದಿ ಭಾಷಿಕರಿಗೆ ಹೆಚ್ಚಿನ ಅನುಕೂಲತೆ . ಇತರ ಭಾಷೆ ಅಧಿಕೃತ ಭಾಷೆಯಾದರೆ ಆ ಭಾಷಿಕರಿಗೆ ಅನುಕೂಲತೆ. ಮಿಕ್ಕವರಿಗೆ ಅನಾನುಕೂಲತೆ. ಆದರೆ ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಮಾಡಿದರೆ ಅದು ಎಲ್ಲರಿಂದಲೂ ಸಮಾನ ದೂರ ಮತ್ತು ಎಲ್ಲರಿಗು ಸಮಾನವಾಗಿ ಅನಾನುಕೂಲ. ಇಂಥ ಅನಾನುಕೂಲಕರ ಸಮಾನತೆಗಾಗಿ ಸಂಸ್ಕೃತ ರಾಷ್ಟ್ರಭಾಷೆಯಾಗಲಿ" ಎಂಬುದು ಅವರ ಹತಾಶ ವಾದವಾಗಿತ್ತು. ಈ ಸಂದರ್ಭವೇ, ಅಂಬೇಡ್ಕರ್ ಹಾಗು ಇನ್ನಿತರರನ್ನು ಮೈತ್ರ ಅವರ ತಿದ್ದುಪಡಿಗೆ ಸಮರ್ಥನೆ ನೀಡುವ ಹತಾಷೆಗೆ ದೂಡಿತ್ತು ಎಂದು ಸಂವಿಧಾನ ರಚನಾ ಸಭೆಯ ಹಾಗು ಭಾರತದ ಪ್ರಜಾತಂತ್ರದ ಪ್ರಮುಖ ಚರಿತ್ರಕಾರರಾದ Granville Austin ಅವರು ದಾಖಲಿಸಿದ್ದಾರೆ. ಅವರ The Indian Constitution- Corner stone of a Nation" ಎಂಬ ಪುಸ್ತಕದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಈ ವಿಷಯದ ಬಗ್ಗೆ ಹಾಗು ಅದರ ಹಿಂದೆ-ಮುಂದೆ ನಡೆದ ವಿದ್ಯಮಾನಗಳ ಚರಿತ್ರೆ ದಾಖಲಿಸಿರುವ ಆಸ್ಟಿನ್ ಅವರು ಅಂಬೇಡ್ಕರ್, ಮೈತ್ರಾ ಅವರ ಮನವಿಗೆ ಏಕೆ ಸಹಿ ಹಾಕಿದರು ಎಂಬ ಬಗ್ಗೆ ಈ ಉತ್ತರವನ್ನು ನೀಡುತ್ತಾರೆ: The disgust and dismay with which many Assembly members by this time looked on the controversy was shown by the amendments that would have made Sanskrit the official language. Heading the list oftwentyeight members who submitted such amendments were the names of Ambedkar and T. T. Krishnamachari. Neither could have believed that their amendment would be accepted, but they would have agreed with L. K. Maitra, who told the Assembly that choosing Sanskrit would put all the regional languages on an equal footing and put an end to the ‘jealousies’ aroused by the choice of Hindi. (p. 301, "The Indian Constitution- Corner stone of a Nation" ) (ಈ ವಿಷಯದ ಬಗ್ಗೆ ನಡೆಯುತ್ತಿದ್ದ ಚರ್ಚೆಗಳು ಹಲವಾರು ಸದಸ್ಯರಲ್ಲಿ ಎಂಥ ಹತಾಶೆ ಹಾಗು ಅಸಮಾಧಾನಗಳನ್ನು ಹುಟ್ಟಿಹಾಕಿತ್ತು ಎಂಬುದು ಸಂಸ್ಕೃತವನ್ನು ಅಧಿಕೃತ ಭಾಷೆ ಮಾಡಬೇಕೆಂಬ ತಿದ್ದುಪಡಿಯಲ್ಲಿ ವ್ಯಕ್ತವಾಗಿತ್ತು. ಆ ತಿದ್ದುಪಡಿಗೆ ಸಹಿಹಾಕಿದ 28 ಸದಸ್ಯರಲ್ಲಿ ಮೇಲ್ಪಂಕ್ತಿಯಲ್ಲಿ ಇದ್ದ ಎರಡು ಹೆಸರುಗಳು ಅಂಬೇಡ್ಕರ್ ಮತ್ತು ಟಿಟಿ ಕೃಷ್ಣಮಾಚಾರಿ. ಈ ತಿದ್ದುಪಡಿಯನ್ನು ಸಭೆಯು ಅನುಮೋದಿಸುತ್ತದೆ ಎಂದು ಇವರಿಬ್ಬರು ನಂಬಿರಲಿಲ್ಲ. ಆದರೂ ಅವರು ಏಕೆ ಸಹಿ ಹಾಕಿದರೆಂದರೆ : ಮೈತ್ರ ಅವರು ಸಂವಿಧಾನ ಸಭೆಗೆ ತಿಳಿಸಿದಂತೆ ಸಂಸ್ಕೃತವನ್ನು ಆಯ್ದುಕೊಂಡರೆ ಅದು ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಸಮಾನ ನೆಲೆಗಟ್ಟಿನಲ್ಲಿ ನಿಲ್ಲಿಸುತ್ತದೆ ಹಾಗು ಹಿಂದಿಯ ಆಯ್ಕೆ ಹುಟ್ಟುಹಾಕಿರುವ ಈರ್ಷೆಗೆ ಕೊನೆಹಾಡುತ್ತದೆ" ) ಈ ಸಮಾನ ಅನಾನುಕೂಲತೆ ಹಾಗು ಬಗೆಹರಿಯದ ಚರ್ಚೆಗಳು ಹುಟ್ಟುಹಾಕಿದ ಹತಾಶೆಗಳಿಂದಾಗಿ ಅಂಬೇಡ್ಕರ್ ಮತ್ತಿತತರು ಮೈತ್ರ ಅವರು ಮುಂದಿಟ್ಟ ಸಂಸ್ಕೃತ ರಾಷ್ಟ್ರಭಾಷೆ ಪ್ರಸ್ತಾಪಕ್ಕೆ ಸಹಿಹಾಕಿದರೆ ವಿನಾ ಸಂಘಪರಿವಾರ ಪ್ರಚಾರ ಮಾಡುತ್ತಿರುವಂತೆ ಭರತವರ್ಶದ ಸಂಸ್ಕೃತಿ ಅಥವಾ ಆರ್ಯ ಭಾಷೆಯೇ ದೇಶದ ಇತಿಹಾಸದ ಅಭಿವ್ಯಕ್ತಿ ಎಂಬ ಕಾರಣಕ್ಕಾಗಿ ಅಲ್ಲ. ಅಂಬೇಡ್ಕರ್ ಆದಿಯಾಗಿ ಯಾರು ಕೂಡಾ ಈ ತಿದ್ದುಪಡಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿಯೇ ಅವರುಗಳು ಯಾರು ಸಂಸ್ಕೃತ ದೇಶಭಾಷೆಯಾಗಬೇಕೆಂಬ ಚರ್ಚೆಯಲ್ಲೂ ಪಾಲ್ಗೊಳ್ಳಲಿಲ್ಲ. ಅಷ್ಟು ಮಾತ್ರವಲ್ಲ... ಇದನ್ನು ಪ್ರಸ್ತಾಪಿಸಿದ ಮೈತ್ರ ಅವರೇ ಇದರಬಗ್ಗೆ ಗಂಭೀರವಾಗಿರಲಿಲ್ಲ. ಆದ್ದರಿಂದಲೇ ಅವಕಾಶ ಸಿಕ್ಕೊಡನೆ ಅವರು ತಮ್ಮ ತಿದ್ದುಪಡಿಯನ್ನು ವಾಪಸ್ ಪಡೆದುಕೊಂಡರು. ಹೀಗಾಗಿ, ಈಗಲಾದರೂ ಸಂಘಪರಿವಾರದವರು ಅಂಬೇಡ್ಕರ್ ಬಗ್ಗೆ ಸುಳ್ಳು ಪ್ರಚಾರವನ್ನು ಕೈಬಿಡಬೇಕು. ಬೋಬಡೆಯವರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ.ಅವರು ನಾಗಪುರಕ್ಕೆ ಮರಳಿ ಎರಡು ವರ್ಷಗಳ ಮೇಲಾಯಿತು!! ಇನ್ನು ಪ್ರತಾಪ ಸಿಂಹ..ಅವರ ಬೆತ್ತಲನ್ನ ಯಾವ ಅರಿವೂ ಮುಚ್ಚಲಾರದು.. ಕೃಪೆ: ವಾರ್ತಾಭಾರತಿ ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ:

Advertisement
Advertisement
Recent Posts
Advertisement